Home Blog Page 3095

ಗ್ಯಾಸ್‌ ಡೀಲರ್ ಶಿಪ್ ಕೊಡುವುದಾಗಿ ವ್ಯಾಪಾರಿಗೆ 16 ಲಕ್ಷ ರೂ, ವಂಚನೆ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಮುಂಬೈನ ವ್ಯಕ್ತಿಯೊಬ್ಬ ಗಣ್ಯ ವ್ಯಾಪಾರಿಯೊಬ್ಬರಿಗೆ ಗ್ಯಾಸ್ ಡೀಲರ್ ಶಿಪ್ ಕೊಡುವುದಾಗಿ ಹಣ ಪಡೆದು ಮೋಸ‌ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮುಂಡರಗಿಯ ಗಣ್ಯ ವ್ಯಾಪಾರಸ್ಥ ರಾಜಕುಮಾರ ಪರುತಪ್ಪ ಮುಳ್ಳೂರು ಎಂಬುವವರಿಗೆ ಮುಂಬೈನ ಆಶೀಸ್ ಶಿಂಕ್ಲಾ ಎಂಬಾತ 2020 ಆಗಸ್ಟ್ ತಿಂಗಳಿನಲ್ಲಿ ಫೇಸ್‌ಬುಕ್‌ ನಲ್ಲಿ ವಿವಿಧ ಗ್ಯಾಸ್ ಡೀಲರ್ ಶಿಪ್ ಗಾಗಿ ಜಾಹೀರಾತು ನೀಡಿ ಆನ್ಲೈನ್ ಅರ್ಜಿ ಹಾಕಲು ತಿಳಿಸಿದ್ದ.

ಜಾಹೀರಾತು ಗಮನಿಸಿದ ಸ್ಥಳೀಯ ವ್ಯಾಪಾರಸ್ಥ ರಾಜಕುಮಾರ ಎಂಬುವವರು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಿದ್ದರು. ಆದಾದ ನಂತರ ವ್ಯಾಪಾರಿ ರಾಜಕುಮಾರ ಅವರಿಗೆ ಆರೋಪಿ ಆಶೀಸ್, ಫಾರ್ಮ್ ಫೀಸ್, ಪ್ರೊಸೆಸ್ಸಿಂಗ್ ಫೀಸ್, ಜಿಎಸ್ಟಿ, ಎನ್ಒಸಿ ಅಂತ ಹೇಳಿ ಹಂತ -ಹಂತವಾಗಿ ತನ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 16ಲಕ್ಷ , 22 ಸಾವಿರ ರೂ,ಗಳನ್ನು ನೆಫ್ತ್ ಹಾಗೂ ಫೋನ್ ಪೇ ಮೂಲಕ ವರ್ಗಾವಣೆ ಮಾಡಿಸಿಕೊಂಡು ಗ್ಯಾಸ್ ಡೀಲರ್ ಶಿಪ್ ಕೊಡದೇ, ಫೋನ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೇ ಮೋಸ ಮಾಡಿದ್ದಾನೆ.

ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಮಹಾಂತೇಶ್ ಟಿ ಆರೋಪಿ ಆಶೀಸ್ ಬಂಧನಕ್ಕೆ ಜಾಲ ಬೀಸಿದ್ದಾರೆ.

ರೈತರಿಗೆ ಗೊಬ್ಬರ, ಬೀಜ ಉಚಿತವಾಗಿ ನೀಡಲು ಆಗ್ರಹ

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಸೋಂಕಿನಿಂದ ಅನೇಕ ವರ್ಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ರೈತಾಪಿ ವರ್ಗದ ಜನರ ಸಂಕಷ್ಟ ಹೇಳತೀರದು. ಹೀಗಾಗಿ ಸರಕಾರ ಮುಂಗಾರು ಬಿತ್ತನೆಗೆ ರೈತ ಸಮುದಾಯಕ್ಕೆ ಬೀಜ ಹಾಗೂ ಗೊಬ್ಬರ‌ ಉಚಿತವಾಗಿ ನೀಡಬೇಕು ಎಂದು ಗದಗ ಜಿಲ್ಲಾ ಕಾಂಗ್ರೆಸ್ ನ ಅಲ್ಪಸಂಖ್ಯಾತರ ಘಟಕದ ಸಂಯೋಜಕ ರಾಜು ಪೆಂಡಾರ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ಅವರು, ಲಾಕ್ ಡೌನ್ ನಿಂದ ರೈತರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೈಯಲ್ಲಿ ಹಣವಿಲ್ದೇ ಪರಿತಪಿಸುವಂತಹ ಸಮಯದಲ್ಲಿ ಸರಕಾರ ಅವರ ಕೈ ಹಿಡಿಯಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಕೃಷಿ ಸಚಿವರು ಕೂಡಲೇ ಈ ಬಗ್ಗೆ ಗಮನ ಹರಿಸಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಪೆಂಡಾರ ಮನವಿ ಮಾಡಿದ್ದಾರೆ.

ಕೊರೊನಾ ವ್ಯಾಕ್ಸಿನ್ ಪಡೆದುಕೊಂಡವರಲ್ಲಿ ಕರೆಂಟ್ ಉತ್ಪತ್ತಿ!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವ್ಯಾಕ್ಸಿನ್ ಪಡೆದುಕೊಂಡವರಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿರುವ ವಿಚಿತ್ರ ಘಟನೆ ನಡೆದಿದೆ.

ವ್ಯಾಕ್ಸಿನ್ ಪಡೆದವರ ದೇಹದಲ್ಲಿ ಈ ರೀತಿಯಾಗುತ್ತಿರುವ ವಿಚಿತ್ರ ಘಟನೆ ನಡೆದಿದೆ. ಈ ಅಚ್ಚರಿಯ ಘಟನೆ ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ. ಕೋವಿಶೀಲ್ಡ್ ಪಡೆದ ಯುವಕ, ಯುವತಿಯ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿದೆ. ಹೀಗೆ ವ್ಯಾಕ್ಸಿನ್ ಪಡೆದುಕೊಂಡವರಿಂದ ಈ ರೀತಿಯ ವಿಚಿತ್ರ ಘಟನೆ ನಡೆಯುತ್ತಿದೆ. ಇವರಿಬ್ಬರ ದೇಹದಿಂದ 9 ವ್ಯಾಟ್ ನ ಬಲ್ಬ್ ಉರಿಯುತ್ತಿವೆ.

ವ್ಯಾಕ್ಸಿನ್ ಹಾಕಿಸಿಕೊಂಡ ಅಣ್ಣ ಮತ್ತು ತಂಗಿಯ ದೇಹದಲ್ಲಿ‌ ಕರೆಂಟ್ ಕಾಣಿಸಿಕೊಂಡಿದೆ. ವ್ಯಾಕ್ಸಿನ್ ಹಾಕಿದ ತೋಳಿಗೆ ಬಲ್ಬ್ ತಾಗಿಸಿದರೆ ಬಲ್ಬ್ ಉರಿಯುತ್ತಿದೆ. ಸುಮಂತ ಹಾಗೂ ಆತನ ತಂಗಿಯ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿದೆ. ವ್ಯಾಕ್ಸಿನ ಹಾಕಿಸಿಕೊಂಡ ಕೆಲವೇ ಗಂಟೆಗಳಲ್ಲಿ  ಚಮತ್ಕಾರ ನಡೆದಿದೆ.

ಇವರ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿರುವುದಕ್ಕೆ ಯವುದೇ ವೈಜ್ಞಾನಿಕ ಕಾರಣ ತಿಳಿದು ಬಂದಿಲ್ಲ. ಇದು ಕಾಕತಾಳಿಯ ಇರಬಹುದು ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ವೈಜ್ಞಾನಿಕವಾಗಿ ಪರಿಶೀಲನೆ ಮಾಡಿದ ನಂತರವೇ ವಿದ್ಯುತ್ ನ ಉತ್ಪತ್ತಿಯ ಕುರಿತು ಸಂಪೂರ್ಣವಾಗಿ ತಿಳಿದು ಬರಲು ಸಾಧ್ಯ.

ಸಿಂಧೂರಿ ಸಿನಿಮಾ ಬಂದರೆ, ಬಡ ರೈತನ ಮಗ ಐಎಎಸ್ ಅಧಿಕಾರಿ ಎಂಬ ಚಿತ್ರ ನಾವು ತೆಗೆಯುತ್ತೇವೆ – ಸಾ.ರಾ. ಮಹೇಶ್

ವಿಜಯಸಾಕ್ಷಿ ಸುದ್ದಿ, ಮೈಸೂರು

ನಾನು ಹತ್ತು ದಾಖಲೆಗಳ ಸಮೇತ ಗಂಭೀರ ಆರೋಪ ಮಾಡುತ್ತ ಬಂದಿದ್ದೇನೆ. ಒಂದೇ ಒಂದು ಗುಂಟೆ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿದರೆ ನಾನೆ ವರ್ಗಾವಣೆ ರದ್ದು ಮಾಡಿ ಎಂದು ಮನವಿ‌ ಮಾಡುತ್ತೇನೆ. ಈಗಲೂ ನಿಮ್ಮ ಬಳಿ ಏನಿದೆ ಸರ್ಕಾರಕ್ಕೆ ವರದಿ ಕೊಡಿ ಎಂದು ಶಾಸಕ ಸಾ.ರಾ. ಮಹೇಶ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ರೋಹಿಣಿ ವರ್ಗಾವಣೆ ಬಗ್ಗೆ ಸಾ.ರಾ.ಮಹೇಶ್ ಕಾರಣ ಎಂಬ‌ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯನ್ನು ಸರಿಯಾಗಿ ಮಾಡದ ಪರಿಣಾಮ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಮೈಸೂರಿನ ಬೆಳವಣಿಗೆಗಳ‌ ಬಗ್ಗೆ ನೀವು ಯಾಕೆ ಧ್ವನಿ‌ ಎತ್ತಲಿಲ್ಲ? ಮೈಸೂರು ಜಿಲ್ಲಾಧಿಕಾರಿಗೆ ಕಳಂಕ ತರಲು ಯತ್ನಿಸಿದ್ದಾರೆ ಎಂದು ಆರೋಪಿಸುತ್ತಿರಲ್ಲ, ರೋಹಿಣಿ ಕೈಗೊಂಡ ಕ್ರಮಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

ನೀವು ಅಷ್ಟೊಂದು ಖಡಕ್‌ ಆಗಿದ್ದರೆ ವರ್ಗಾವಣೆ ಬಳಿಕವೂ ಸರ್ಕಾರಿ ಕಾರಿನಲ್ಲಿ ಹೋಗಿ ಸಿಎಂ ಭೇಟಿಯಾಗಿದ್ದು ಏಕೆ? ಶಿಲ್ಪಾ ನಾಗ್ ವರ್ಗಾವಣೆ ಆದ ಮೇಲೆ ಗೌರವಯುತವಾಗಿ ಅಧಿಕಾರ ಹಸ್ತಾಂತರ ಮಾಡಿದರು. ಆದರೆ, ನೀವು ಅಧಿಕಾರ ಹಸ್ತಾಂತರ ಮಾಡಲಿಲ್ಲ. ಇಲ್ಲೇ ಗೊತ್ತಾಗುತ್ತದೆ ನಿಮ್ಮ ನಡವಳಿಕೆ ಏನು ಎಂದು? ನೀವು ನಕಲಿ ಸೋಷಿಯಲ್ ಮೀಡಿಯಾ ಖಾತೆಗಳನ್ನು ತೆರೆದು ಪ್ರಚಾರ ಪಡೆಯುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.

ಆ ನಕಲಿ ಖಾತೆಗಳಲ್ಲಿಯೇ ಅಕ್ರಮ ಭೂ ಮಾಫಿಯಾ ದಾಖಲೆ ಬಿಡುಗಡೆ ಮಾಡಿ, ಕ್ಯಾಬಿನೆಟ್ ಸಚಿವರ ನಿವಾಸ ನವೀಕರಣಕ್ಕೆ ರೂ. 2 ಲಕ್ಷ ಮಾತ್ರ ಅನುದಾನ ಬರುತ್ತದೆ. ಆದರೆ, ರೂ. 65 ಲಕ್ಷ ವೆಚ್ಚದಲ್ಲಿ ಸ್ವಿಮ್ಮಿಂಗ್‌ಪೂಲ್, ಜಿಮ್‌ ನಿರ್ಮಾಣ ಮಾಡಲಾಗಿದೆ. ಇಷ್ಟೊಂದು ಹಣ ಖರ್ಚು ಮಾಡಲು ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ ಅವರು, ಸ್ವಿಮ್ಮಿಂಗ್ ಮಾಡಲು ಕುಡಿಯುವ ನೀರನ್ನು ಬಳಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ‌ ಮನೆಗೆ ಮೂರು ವಿದ್ಯುತ್ ಮೀಟರ್‌ ಗಳಿವೆ. ಅವರು ಅತಿ ಹೆಚ್ಚು ವಿದ್ಯುತ್ ಬಳಕೆ ಮಾಡಿಕೊಂಡಿದ್ದಾರೆ. ಮೇ ತಿಂಗಳಲ್ಲಿ ರೂ. 42,371 ಹಾಗೂ ಜೂನ್ ತಿಂಗಳಲ್ಲಿ ರೂ. 36,406 ವಿದ್ಯುತ್ ಬಿಲ್ ಬಂದಿದೆ. ಇದು ದಿ ಗ್ರೇಟ್ ಖಡಕ್ ಸಿಂಗಂ ಆಫೀಸರ್ ಮಾಡುವ ಕೆಲಸನಾ? ಯಾವ ಮಂತ್ರಿ ಮನೆಯಲ್ಲಿಯೂ ರೂ. 50 ಸಾವಿರದಷ್ಟು ವಿದ್ಯುತ್ ಬಿಲ್ ಬಂದಿಲ್ಲ ಎಂದು ಆರೋಪಿಸಿದ್ದಾರೆ.

ಭೂಮಾಫಿಯಾದಿಂದಾಗಿ ನನ್ನ ವರ್ಗಾವಣೆ ಮಾಡಲಾಗಿದೆ ಎಂದು ಸಿಂಧೂರಿ ಆರೋಪಿಸಿದ್ದು, ನಿಮ್ಮ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಸಿಎಂ ಭೇಟಿ ಮಾಡಿ ತನಿಖೆಗೆ ಒತ್ತಾಯಿಸಿ. ಈ ರೀತಿ ಪ್ರಚಾರಪ್ರಿಯೆ ಅವರನ್ನು ನಾನು ಎಲ್ಲಿಯೂ ಕಂಡಿಲ್ಲ. ಹೆಣ್ಣು ಮಕ್ಕಳಿಗೆ ತಾಯಿ ಹೃದಯ ಅಂತಾರೆ. ಆದರೆ, ಇವರಲ್ಲಿ ತಾಯಿ ಹೃದಯ ನೋಡಿಯೇ ಇಲ್ಲ. ಸಿಂಧೂರಿ ಲೋಪ ದೋಷಗಳ ಬಗ್ಗೆ ತನಿಖೆ ನಡೆಸಬೇಕು. ತನಿಖೆ‌ ನಡೆಸದಿದ್ದರೆ, ಇಷ್ಟಕ್ಕೆ ಬಿಡುವುದಿಲ್ಲ. ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅದೇನೋ ಈಗ ಫಿಲಂ ತೆಗೆಯುತ್ತಾರಂತೆ. ಕರ್ನಾಟಕದ ಜನ ಸ್ವಾಭಿಮಾನಿಗಳು. ಪಿಕ್ಚರ್ ರಿಲೀಸ್ ಆಗಲಿ ನಾನು ನೋಡುತ್ತೇನೆ. ಬಡ ರೈತನ ಮಗ ಐಎಎಸ್ ಅಧಿಕಾರಿಯ ಬಗ್ಗೆ ಸಿಬಿಐ ಸಲ್ಲಿಸಿರುವ ರಿಪೋರ್ಟನ್ನು ನಾವು ತೆಗೆಯುತ್ತೇವೆ. ನಾವು ಬಡ ರೈತನ ಮಗ ಐಎಎಸ್ ಅಧಿಕಾರಿ ಜೀವನಗಾಥೆ ನಾವು ಚಿತ್ರ ರೂಪದಲ್ಲ ತೆಗೆಯುತ್ತೇವೆ ಎಂದು ಸಾ.ರಾ. ಗೋವಿಂದ್, ರೋಹಿಣಿ ಸಿಂಧೂರಿಗೆ ವಾರ್ನಿಂಗ್ ಮಾಡಿದ್ದಾರೆ.

ಒಂದೇ ಬಾರಿಗೆ ಹತ್ತು ಮಕ್ಕಳನ್ನು ಹೆತ್ತ ತಾಯಿ!

ವಿಜಯಸಾಕ್ಷಿ ಸುದ್ದಿ, ಸೌತ್ ಆಫ್ರಿಕಾ

ಇಲ್ಲಿಯವರೆಗೆ ನಾಲ್ಕೈದು ಮಕ್ಕಳಿಗೆ ತಾಯಿ ಒಟ್ಟಿಗೆ ಜನ್ಮ ನೀಡಿರುವ ಘಟನೆಯನ್ನು ನಾವು ಕಂಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ, ಇಲ್ಲೊಬ್ಬರು ತಾಯಿ ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿ ದಾಖಲೆ ನಿರ್ಮಿಸಿದ್ದಾರೆ.

ಸೌತ್ ಆಫ್ರಿಕಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಏಕಕಾಲಕ್ಕೆ ಹತ್ತು ಕಂದಮ್ಮಗಳಿಗೆ ಮಹಿಳೆಯೊಬ್ಬರು ಜೀವ ನೀಡಿದ್ದಾರೆ. ಈ ಮೂಲಕ ಹೊಸ ಗಿನ್ನಿಸ್ ದಾಖಲೆಗೆ ಅವರು ಸಾಕ್ಷಿಯಾಗಿದ್ದಾರೆ. ಈ ಹಿಂದೆ ಮಲಿಯಾನ್ ಹಲೀಮಾ ಎಂಬ ಮೊರಕ್ಕೋದ ತಾಯಿ, ಒಂಭತ್ತು ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈಗ ಆ ದಾಖಲೆಯನ್ನು ಈ ಯುವತಿ ಸರಿಗಟ್ಟಿದ್ದಾರೆ. ಇವರು ಹತ್ತು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಹಿಂದಿನ ಜನರು ಒಟ್ಟಾರೆ ಐದಾರು ಮಕ್ಕಳನ್ನು ಪಡೆಯುತ್ತಿದ್ದರು. ಸದ್ಯ ಈಗ ಒಂದಿಬ್ಬರು ಮಕ್ಕಳು ಆಸ್ತಿಯಾಗುತ್ತಿದ್ದಾರೆ. ಅಲ್ಲದೇ, ಅವಳಿ ಮಕ್ಕಳು ಆಗುತ್ತಿರುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ತ್ರಿವಳಿ ಮಕ್ಕಳು ಆಗುವುದೂ ಉಂಟು. ಆದರೆ, ಯಾರೂ ಊಹಿಸದಂತಹ ಘಟನೆಯೊಂದು ಸದ್ಯ ನಡೆದಿದೆ.

ಈ ಸುದ್ದಿ ಕೇಳುತ್ತಿದ್ದಂತೆ ನೆಟ್ಟಿಗರು ಕುತೂಹಲದಿಂದ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೇ, ವಿವಿಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೀವು ಈ ಮಹಿಳೆಯಾಗಿದ್ದರೆ, ಮಕ್ಕಳಿಗೆ ಜನ್ಮ ನೀಡಿದ ನಂತರ ಮೊದಲ ಕೆಲಸ ಏನು ಮಾಡುತ್ತಿದ್ದಿರಿ? ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಅಪಘಾತ – 17 ಜನರ ಸಾವು, 24 ಜನ ಗಂಭೀರ ಗಾಯ!

ವಿಜಯಸಾಕ್ಷಿ ಸುದ್ದಿ, ಕಾನ್ಪುರ

ಬಸ್ ಹಾಗೂ ಜೆಸಿಬಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 17 ಜನರು ದುರಂತ ಸಾವು ಕಂಡ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದಲ್ಲಿ ನಡೆದಿದೆ.
ಈ ಘಟನೆ ಮಂಗಳವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ 24 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಕಾನ್ಪುರ್ ಸಚೇಂದಿ ಬಳಿಯ ಕಿಸಾನ್ ನಗರ ಕಾಲುವೆ ಸಮೀಪ ಜೆಸಿಬಿ, ಶತಾಬ್ದಿ ಎಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ 17 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ಲಾಲಾ ಲಜಪತ್ರಾಯ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ, ಪರಿಹಾರ ಕೂಡ ಘೋಷಣೆ ಮಾಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ರೂ. 2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ ರೂ. 50 ಸಾವಿರ ಘೋಷಣೆ ಮಾಡಿದ್ದಾರೆ.

ಲಾಕ್ ಡೌನ್ ಮಧ್ಯೆ ಹೆಚ್ಚಾಗುತ್ತಿದೆ ಪ್ರಾಣಿಗಳ ಸಂತಾನ!

ವಿಜಯಸಾಕ್ಷಿ ಸುದ್ದಿ, ಮಂಗಳೂರು

ಕೊರೊನಾ ಲಾಕ್‌ ಡೌನ್ ಇರುವ ಹಿನ್ನೆಲೆಯಲ್ಲಿ ಸದ್ಯ ಪ್ರಾಣಿಗಳಿಗೆ ಜನರ ಕಾಟ ಇಲ್ಲದಂತಾಗಿದೆ. ಹೀಗಾಗಿ ಅವುಗಳಿಗೆ ಸಾಕಷ್ಟು ವಿಶ್ರಾಂತಿ ದೊರೆತಿದೆ. ಹೀಗಾಗಿ ಅವುಗಳ ಸಂತಾನಾಭಿವೃದ್ಧಿ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಇಲ್ಲಿಯ ಪಿಲಿಕುಳ ಮೃಗಾಲಯದಲ್ಲಿ ಸಂತಸದ ಬೆಳವಣಿಗೆಯೊಂದು ನಡೆದಿದೆ.

ದೇಶದ 17 ಬೃಹತ್ ವಿವಿಧ ಮೃಗಾಲಯದಲ್ಲಿ ಒಂದಾಗಿರುವ ಇಲ್ಲಿಯ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಣಿ ಎಂಬ ಹುಲಿ, ಕಾಡು ಶ್ವಾನ ದೋಳ್, ರಿಯಾ ಜಾತಿಯ ಪಕ್ಷಿ, ಲಟಿಕ್ಯುಲೇಚಿಡ್ ಜಾತಿಯ ಹೆಬ್ಬಾವು, ಕಾಳಿಂಗ ಸರ್ಪ ತಮ್ಮ ಸಂತಾನ ಹೆಚ್ಚು ಮಾಡಿಕೊಂಡಿದೆ.

ಇದರಲ್ಲಿ 10 ವರ್ಷದ ರಾಣಿ ಹೆಸರಿನ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ದೋಳ್ ಜಾತಿಯ ಕಾಡುಶ್ವಾನ ಏಳು ಮರಿಗಳಿಗೆ ಜನ್ಮ ನೀಡಿದೆ. ಇನ್ನು ಉಷ್ಟ್ರ ಪಕ್ಷಿಯ ವರ್ಗಕ್ಕೆ ಸೇರಿದ ರಿಯಾ ಮೊಟ್ಟೆ ಇಟ್ಟಿದ್ದು, ರೆಟಿಕ್ಯುಲೇಟಿಡ್ ಜಾತಿಯ ಹೆಬ್ಬಾವು 20 ಮೊಟ್ಟೆ ಇಟ್ಟು ಕಾವು ಕೊಡುತ್ತಿದೆ. ಕಾಳಿಂಗ ಸರ್ಪ ಆರು ಮೊಟ್ಟೆ ಇಟ್ಟಿದ್ದು, ಕೃತಕ ಕಾವು ನೀಡಲಾಗುತ್ತಿದೆ.

ಪಿಲಿಕುಳದಲ್ಲಿ ಕೇವಲ ಜೈವಿಕ ಉದ್ಯಾನವನವೇ ಸುಮಾರು 150 ಎಕರೆ ಪ್ರದೇಶ ವ್ಯಾಪಿಸಿದೆ. ವಿವಿಧ ಪ್ರಭೇದದ 1,200ಕ್ಕೂ ಅಧಿಕ ಪ್ರಾಣಿ, ಪಕ್ಷಿ ಉರಗಗಳಿವೆ. ಇಲ್ಲಿ ಪ್ರಾಣಿ, ಪಕ್ಷಿಗಳಿಗೆ ನೈಸರ್ಗಿಕವಾದ ವಾತಾವರಣದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿದೆ. ಇದರ ಪರಿಣಾಮ ಇಲ್ಲಿಗೆ ತಂದ ಹೆಚ್ಚಿನ ಪ್ರಾಣಿ -ಪಕ್ಷಿಗಳು ಸಂತಾನಾಭಿವೃದ್ದಿ ಮಾಡುತ್ತಿವೆ.

ಸದ್ಯ ಈಗಿನ ಸಂತಾನಾಭಿವೃದ್ದಿಯಿಂದ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಕಾಡುಶ್ವಾನಗಳ ಸಂಖ್ಯೆ 32ಕ್ಕೆ ಏರಿದೆ. ಕಾಳಿಂಗ ಸರ್ಪ 19 ಇವೆ. ಲಾಕ್‌ ಡೌನ್ ಮುಗಿದ ಬಳಿಕ ಪ್ರಾಣಿ ವಿನಿಮಯದಲ್ಲಿ ಚೆನ್ನೈಯ ವಂಡಲೂರು ಮೃಗಾಲಯದಿಂದ ಬಿಳಿ ಹುಲಿ ತರಿಸಲು ನಿರ್ಧರಿಸಲಾಗಿದೆ.

ಕಣ್ಣಿನಲ್ಲಿದ್ದ 9 ಸೆ.ಮೀ ಜೀವಂತ ಹುಳು ತೆಗೆದ ವೈದ್ಯರು!

ವಿಜಯಸಾಕ್ಷಿ ಸುದ್ದಿ, ಉಡುಪಿ

ವೃದ್ಧೆಯೊಬ್ಬರ ಕಣ್ಣಿನಲ್ಲಿ ಇದ್ದ 9 ಸೆಂ.ಮೀ ಉದ್ದದ ಜೀವಂತ ಹುಳುವನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೊರ ತೆಗೆದಿರುವ ಘಟನೆ ಇಲ್ಲಿಯ ಪ್ರಸಾದ್ ನೇತ್ರಾಲಯದಲ್ಲಿ ನಡೆದಿದೆ. ಮಲ್ಪೆಯ 70 ವರ್ಷದ ವೃದ್ಧೆ‌ಯೊಬ್ಬರು ಕಣ್ಣು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಈ ವೃದ್ಧೆ ಪ್ರಸಾದ್ ನೇತ್ರಾಲಯಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಣ್ಣಿನ ಅಕ್ಷಿ ಪಟಲದಲ್ಲಿ ಸುತ್ತುತ್ತಿದ್ದ ಹುಳು ಗಮನಿಸಿದ ಡಾಕ್ಟರ್ ಕೃಷ್ಣ ಪ್ರಸಾದ್, ಹುಳವನ್ನು ನಿಷ್ಕ್ರೀಯಗೊಳಿಸುವ ಔಷಧಿ ನೀಡಿ ಕಳುಹಿಸಿದ್ದರು.
ಆದರೆ, ನಿನ್ನೆ ಮತ್ತೆ ವೃದ್ಧೆಯ ಕಣ್ಣಿನಲ್ಲಿ ವಿಪರೀತ ನೋವು ಹಾಗೂ ಉರಿ ಕಾಣಿಸಿಕೊಂಡಿದೆ. ಹೀಗಾಗಿ ಅವರು ಮತ್ತೆ ಆಸ್ಪತ್ರೆಗೆ ಬಂದಿದ್ದರು.

ಆಸ್ಪತ್ರೆಯಲ್ಲಿ ತುರ್ತಾಗಿ ಸ್ಪಂದಿಸಿದ ವೈದ್ಯರು, ಶಸ್ತ್ರ ಚಿಕಿತ್ಸೆ ಮೂಲಕ ಜೀವಂತ ಹುಳವನ್ನು ಹೊರ ತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ನೇತ್ರದ ಒಳ ಪದರದಿಂದ ಇದೇ ಮೊದಲ ಬಾರಿಗೆ ಜೀವಂತ ಹುಳುವುನ್ನು ತೆಗೆಯಲಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹುಳದ ಕುರಿತು ಮತ್ತಷ್ಟು ಅಧ್ಯಯನಕ್ಕೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ರಾಜ್ಯದಲ್ಲಿ ಎರಡು ದಿನ ಭರ್ಜರಿ ಮಳೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಜೂನ್ 11 ಹಾಗೂ 12 ರಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಬಗ್ಗೆ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಅವರು ತಿಳಿಸಿದ್ದಾರೆ.

ಉತ್ತರ ಒಳನಾಡಿನಲ್ಲಿ ಜೂನ್ 8 ರಿಂದ 11 ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಇಂದು ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಜೂನ್ 10 ಮತ್ತು11 ರಂದು ರಾಜ್ಯದ ಹಲವೆಡೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸಿನಿಮಾ ರೂಪದಲ್ಲಿ ಬರಲಿದೆ ರೋಹಿಣಿ ಸಿಂಧೂರಿ ಜೀವನಗಾಥೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಐಎಎಸ್ ಅಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರ ಜೀವನ ಸಾಧನೆ ಸಿನಿಮಾ ರೂಪದಲ್ಲಿ ಮೂಡಿ ಬರಲಿದೆ. ಅವರ ಜೀವನದ ಸಾಧಾನೆಗಳನ್ನೇ ಆಧರಿಸಿದ ಸಿನಿಮಾ ನಿರ್ಮಾಣ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಚಿತ್ರವನ್ನು ಕೃಷ್ಣ ಸ್ವರ್ಣಸಂದ್ರ ಅವರು ನಿರ್ಮಾಣ ಮಾಡಿ ನಿರ್ದೇಶಿಸಲಿದ್ದಾರೆ. ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರು ಸಿಂಧೂರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲಾಕ್ ಡೌನ್ ಮುಗಿದ ನಂತರ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗಿದೆ. ‘ಭಾರತ ಸಿಂಧೂರಿ’ ಎಂಬ ಹೆಸರಿನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ರೋಹಿನಿ ಸಿಂಧೂರಿ ಅವರು ಹುಟ್ಟಿ ಬೆಳೆದ ಆಂಧ್ರಪ್ರದೇಶ ಹಾಗೂ ಕರ್ತವ್ಯ ನಿರ್ವಹಿಸಿದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ರೋಹಿಣಿ ಸಿಂಧೂರಿಯವರು ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಭಾಗದಲ್ಲಿ ಕಾರ್ಯನಿರ್ವಹಿಸಿರುವುದರಿಂದ ಈ ಎಲ್ಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ಅವರು ಅಧಿಕಾರವಧಿಯ ಸಾಧನೆಗಳನ್ನು ಪ್ರಮುಖವಾಗಿಟ್ಟುಕೊಂಡು ಸಿನಿಮಾ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.

ರೋಹಿಣಿ ಸಿಂಧೂರಿ ಅವರು ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ. ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಆಗಿದೆ. ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿಯನ್ನು ಕೃಷ್ಣ ಸ್ವರ್ಣಸಂದ್ರ ಅವರು ಹೊತ್ತಿದ್ದಾರೆ. ಇವರು ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣ ಆಗಲಿದೆ. ಕಳೆದ ವರ್ಷ ಜೂ. 20ರಂದೇ ಈ ಚಿತ್ರದ ಟೈಟಲ್ ರಿಜಿಸ್ಟರ್ ಆಗಿದೆ.

error: Content is protected !!