ತಾಯಿ ಇವರೇ ನಿಮ್ಮ ತಂದೆ ಎಂದರೆ ನಂಬುತ್ತಾರೆ, ಸಾಕ್ಷಿ ಕೇಳಲ್ಲ. ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನರು ಇರುತ್ತಾರೆ. ಸಿದ್ದರಾಮಯ್ಯ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅವರ ದೋಷ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.
ಹನುಮ ಹುಟ್ಟಿದ್ದು ಗೊತ್ತಾ, ಸುಮ್ಮನೆ ತಿನ್ಲಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಕೆಲವರಿಗೆ ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ ಇರುತ್ತೆ. ಸಿದ್ದರಾಮಯ್ಯ ಅವರಿಗೂ ಅಂತಹ ಕಾಯಿಲೆ ಇದ್ರೆ ಅದು ಅವರ ದೋಷ. ನಂಬಿಕೆ ಎಲ್ಲವನ್ನೂ ಮೀರಿದ್ದು. ನಂಬಿಕೆಗಳ ಮೇಲೆ ಜಗತ್ತು ಇರುವುದು ಎಂದು ಅಭಿಪ್ರಾಯ ಪಟ್ಟರು.
ಕೆಲವರಿಗೆ ಭಗವಂತ ಕಾಣಲ್ಲ, ಕೆಲವರಿಗೆ ಎಲ್ಲ ಕಡೆ ಕಾಣುತ್ತಾನೆ. ನೋಡುವ ದೃಷ್ಟಿ ಇರುವವರಿಗೆ ಭಗವಂತನನ್ನು ತೋರಿಸಬಹುದು. ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತ ಕಾಣುವುದಿಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಅವರಿಗೆ ನಂಬಿಕೆ ಹುಟ್ಟಿನಿಂದ ಬಂದಿರುವುದಲ್ಲ, ಸಹವಾಸ ದೋಷದಿಂದ ಬಂದಿರುವದು. ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರುವ ಕಾರಣಕ್ಕೆ ದೇವರ ಹೆಸರಿಟ್ಟರು. ಸಹವಾಸ ದೋಷದಿಂದ ಅವರು ಕೆಟ್ಟಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.
ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ಮತದಾನವು ಗದಗ ಜಿಲ್ಲೆಯ ಮುಂಡರಗಿ, ನರಗುಂದ, ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 850 ಸ್ಥಾನಗಳಿಗೆ ಭಾನುವಾರ ನಡೆದ ಮತದಾನವು ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದಲ್ಲಿ ನಡೆದ ಗಲಾಟೆ ಹೊರತುಪಡಿಸಿ ಜಿಲ್ಲೆಯಲ್ಲಿ ಶಾಂತಿಯುತವಾಗಿತ್ತು. ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿತ್ತು.
ರೋಣ ತಾಲ್ಲೂಕಿನ ಗ್ರಾಮಗಳ ಮತಗಟ್ಟೆಗಳಲ್ಲಿ ಮಹಿಳೆಯರು ಮತ್ತು ಪುರುಷರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಗುಜಮಾಗಡಿ, ಚಿಕ್ಕಮಣ್ಣೂರ, ಬೆಳವಣಿಕೆ, ಕರಮುಡಿ, ಮೆಣಸಗಿ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಪ್ರತ್ಯೇಕ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಹೀಗೆ ಹಲವು ಗ್ರಾಮಗಳ ಮತಗಟ್ಟೆಗಳಲ್ಲಿ ಮತದಾರರು ಮತದಾನ ಮಾಡಲು ಗುರುತಿನ ಚೀಟಿಯೊಂದಿಗೆ ಸರದಿ ಸಾಲಿನಲ್ಲಿ ನಿಂತು ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
ರೋಣ ತಾಲ್ಲೂಕಿನ ಹಲವು ಮತಗಟ್ಟೆಗಳಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳ ಸಹಾಯದೊಂದಿಗೆ ಹಿರಿಯರು ಮತಗಟ್ಟೆಗೆ ಆಗಮಿಸಿ ಮತ ಹಕ್ಕು ಚಲಾಯಿಸಿದ್ದು ಕಂಡುಬಂದಿತು. ಹಲವು ಮತಗಟ್ಟೆಗಳಲ್ಲಿ ಬೆಳಗಿನ ವೇಳೆಯಲ್ಲಿ ಬಿರುಸಿನಿಂದ ಮತದಾನ ನಡೆಯಿತು. ಗ್ರಾಮಗಳ ಪ್ರತಿ ಮತದಾರರು ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದು ಕಂಡುಬಂದಿತು.
ಹಲವು ಕಡೆಗಳಲ್ಲಿ ಹೊಸ ಮತದಾರರು ಹುರುಪಿನಿಂದ ಮತ ಚಲಾಯಿಸಿದ್ದು ಕಂಡುಬಂದಿತು. ಹಲವು ಗ್ರಾಮಗಳ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದು ವಿಶೇಷ ಎನಿಸಿತು.
ಎಲ್ಲಾ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಮತದಾರರನ್ನು ತಪಾಸಣೆ ಮಾಡಿ ಮತಗಟ್ಟೆಗೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತು. ಜತೆಗೆ ಸ್ಯಾನಿಟೇಜರ್ ವ್ಯವಸ್ಥೆ ಮಾಡಲಾಗಿತ್ತು, ಹಾಗೆಯೇ 4 ರಿಂದ 5 ಗಂಟೆ ಅವಧಿಯಲ್ಲಿ ಕೋವಿಡ್-19 ಶಂಕಿತರಿಗೆ ಮತಹಕ್ಕು ಚಲಾಯಿಸಲು ಅವಕಾಶ ನೀಡಲಾಗಿತ್ತು.
ಮತದಾನದ ವಿವರ
ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ಸಮಯವಾರು ಒಟ್ಟಾರೆ ಮತದಾನದ ವಿವರ ಇಂತಿದೆ; ಮುಂಜಾನೆ 9 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 8.22 ನರಗುಂದ ಶೇ 8.29, ರೋಣ ಶೇ. 6.62 ಹಾಗೂ ಗಜೇಂದ್ರಗಡ ಶೇ. 7.74 ಒಟ್ಟು ಶೇ. 7.69 ರಷ್ಟು ಮತದಾನವಾಗಿತ್ತು.
ಮುಂಜಾನೆ 11 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 24.23 ನರಗುಂದ ಶೇ 24.59, ರೋಣ ಶೇ. 20.16 ಹಾಗೂ ಗಜೇಂದ್ರಗಡ ಶೇ. 25.46 ಒಟ್ಟು ಶೇ. 23.53 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 44.50 ನರಗುಂದ ಶೇ 46.96, ರೋಣ ಶೇ. 42.02 ಹಾಗೂ ಗಜೇಂದ್ರಗಡ ಶೇ. 44.91 ಒಟ್ಟು ಶೇ. 44.51 ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ 3 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿ ಶೇ. 64.88 ನರಗುಂದ ಶೇ 66.45, ರೋಣ ಶೇ. 60.71 ಹಾಗೂ ಗಜೇಂದ್ರಗಡ ಶೇ. 62.29 ಒಟ್ಟು ಶೇ. 63.48 ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆಯವರೆಗೆ ಅಂತಿಮವಾಗಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 82.13 ನರಗುಂದ ಶೇ 83.64, ರೋಣ ಶೇ. 77.41 ಹಾಗೂ ಗಜೇಂದ್ರಗಡ ಶೇ. 78.51 ಒಟ್ಟು ಶೇ. 80.32 ರಷ್ಟು ಮತದಾನವಾಗಿದೆ.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ ಅವರು ರೋಣ ತಾಲ್ಲೂಕಿನ ಗುಜಮಾಗಡಿ, ಡ.ಸ.ಹಡಗಲಿ, ಸವಡಿ, ನರಗುಂದ ತಾಲ್ಲೂಕಿನ ಹದ್ಲಿ, ಕಲಕೇರಿ ಗ್ರಾಮಗಳ ಮತಗಟ್ಟೆಗಳಿಗೆ ಬೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವಗ್ರಾಮ ವರುಣಾ ಹೋಬಳಿಯ ಸಿದ್ದರಾಮಯ್ಯನಹುಂಡಿ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ 138ರಲ್ಲಿ ಮತ ಚಲಾಯಿಸಿದರು.
ಮತದಾನಕ್ಕೂ ಮುನ್ನ ಗ್ರಾಮ ದೇವರಾದ ಸಿದ್ದರಾಮೇಶ್ವರ ದೇವಾಲಯಕ್ಕೆ ಸಿದ್ದರಾಮಯ್ಯ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ಬೆಂಬಲಿಗರು ಸುತ್ತುವರೆದರೆ, ಅಭ್ಯರ್ಥಿಗಳು ಕರಪತ್ರ ನೀಡಿ ಮತ ಹಾಕುವಂತೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಕಟ್ಟಿಲ್ಲ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ, ದೇವೇಗೌಡರು ಪಾಪ ಎಂದು ಮರುಗಿದರು. 1999ರಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದು ಯಾರು? 6 ವರ್ಷಗಳ ಕಾಲ ಜೆಡಿಎಸ್ ಅಧ್ಯಕ್ಷನಾಗಿದ್ದು ನಾನು? ಹಾಗಾದರೆ, ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ? ಎಂದು ದೇವೇಗೌಡರನ್ನು ಪ್ರಶ್ನಿಸಿದರು.
ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತೂ ಅಲ್ಲ. ನನಗೆ ಯಾರೆಂಬುದೂ ಗೊತ್ತಿಲ್ಲ. ಅವರಿಗೆ ಖರ್ಗೆ ಹೆಸರು ತಿರಸ್ಕಾರ ಮಾಡಿದವರ ಹೆಸರು ಗೊತ್ತಿದ್ದರೆ ಹೇಳಲಿ. ಸಿದ್ದರಾಮಯ್ಯ, ವಿಪಕ್ಷ ನಾಯಕ
ಕುರುಬರ ಎಸ್ ಟಿ ಮೀಸಲಾತಿ ಹೋರಾಟದ ಅಗತ್ಯವೇ ಇಲ್ಲ. ಇದು ಕುರುಬರನ್ನ ಇಬ್ಭಾಗ ಮಾಡುವ ಹುನ್ನಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಜ.29 ಕ್ಕೆ ಮೈಸೂರಿನಲ್ಲಿ ನಡೆಯುವ ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಭೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು.
ನಗರದಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗಲೇ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸ್ಸು ಮಾಡಿದ್ದೆ. ಈಶ್ವರಪ್ಪ, ವಿಶ್ವನಾಥ ಇಬ್ಬರು ಬಿಜೆಪಿ ಸರ್ಕಾರದಲ್ಲಿದ್ದಾರೆ. ಅವರು ಕುಲಶಾಸ್ತ್ರ ಅಧ್ಯಯನ ವರದಿ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಿಸಲಿ. ಇದು ಕುರುಬರನ್ನ ಇಬ್ಬಾಗ ಮಾಡುವ ಆರ್ಎಸ್ಎಸ್ ಹುನ್ನಾರ ಎಂದು ಆರೋಪಿಸಿದರು.
ಇಲ್ಲಿನ ದತ್ತಾತ್ರೇಯ ಪೀಠದ ದರ್ಶನ ಪಡೆದು ಕೊರೋನಾ ನಿರ್ಮೂಲನೆಗೆಗಾಗಿ ಸಂಸದೆ ಶೋಭಾ ಕರಂದ್ಲಾಜೆ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಂಸದೆ, ಅಯೋಧ್ಯೆಯ ರಾಮಮಂದಿರದಂತೆ ದತ್ತಪೀಠದಲ್ಲಿ ದತ್ತಮಂದಿರ ನಿರ್ಮಿಸಲಾಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲೇ ದತ್ತಪೀಠಕ್ಕೆ ಮುಕ್ತಿ ಸಿಗುತ್ತದೆ. ಈ ಪೀಠದಲ್ಲಿ ದತ್ತಾತ್ರೇಯ ಮಂದಿರ ನಿರ್ಮಾಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದತ್ತಪೀಠದ ಮುಕ್ತಿಗೆ ಕಾನೂನಿನ ಅಡೆತಡೆಗಳಿದ್ದು, ತಜ್ಞರು ಪರಿಶೀಲಿಸುತ್ತಿದ್ದಾರೆ. ಜಗತ್ತಿನಲ್ಲಿ ದತ್ತ ಭಕ್ತರಿದ್ದು, ಚಿಕ್ಕಮಗಳೂರಿನಲ್ಲಿ ದತ್ತಪಾದುಕೆ ಇದೆ. ದತ್ತಪೀಠ ನಮ್ಮದಾಗಬೇಕೆಂಬುವುದೇ ನಮ್ಮ ಸಂಕಲ್ಪ ಎಂದು ಸಂಸದೆ ಶೋಭಾ ಕರಂದ್ಲಾಜೆ ಶಪತಗೈದರು.
ಕುರುಬ ಸಮುದಾಯ ಎಸ್ಟಿ ಪಟ್ಟಿಗೆ ಸೇರಿಸುವ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕರೆದಿದ್ದೇನೆ. ಅವರು ನಮ್ಮ ಜೊತೆಗೆ ಇದ್ದಾರೆ. ಇದಕ್ಕೆ ಅವರ ವಿರೋಧವಿಲ್ಲ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯ, ರೇವಣ್ಣ, ಈಶ್ವರಪ್ಪ, ವಿಶ್ವನಾಥ್ ಪ್ರಶ್ನೆ ಅಲ್ಲ. ಇದು ಸಮುದಾಯದ ಪ್ರಶ್ನೆ. ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವ ವಿಚಾರದಲ್ಲಿ ಎಲ್ಲಾ ಸಂಘಟನೆ, ಪಕ್ಷಗಳ ಬೆಂಬಲ ಕೇಳಿದ್ದೇವೆ. ಅದರಲ್ಲಿ ಆರ್ ಎಸ್ ಎಸ್ ಸಹವಿದೆ. ದೇಶದಲ್ಲಿರುವ ಎಲ್ಲಾ ಕುರುಬ ಅಧಿಕಾರಿಗಳಿಗೆ ಪತ್ರ. ಪತ್ರದ ಮೂಲಕ ಹೋರಾಟಕ್ಕೆ ಬೆಂಬಲ ಕೇಳುತ್ತೇವೆ. ಈ ನಿಟ್ಟಿನಲ್ಲಿ ಡಿ.29 ರಂದು ಕುರುಬ ನಾಯಕರ ಸಭೆ ನಡೆಸುವ ಮೂಲಕ ಹೋರಾಟದ ರೂಪುರೇಷೆ ಸಿದ್ಧಮಾಡಿಕೊಳ್ಳಲಾಗುವು ಎಂದು ವಿಶ್ವನಾಥ್ ತಿಳಿಸಿದರು.
ನಿರಂಜನಾನಂದಪುರಿ ಶ್ರೀಗಳ ಮೂಲಕ ಸರ್ಕಾರಕ್ಕೆ ನಾನು ಹಾಗೂ ಸೋಮಶೇಖರ್ ವರದಿ ಕೊಟ್ಟಿದ್ದೇವೆ. ಆ ಮೂಲಕ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಇಡೀ ಸಮುದಾಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ಇದರ ಬಗ್ಗೆ ಪತ್ರ ಚಳುವಳಿ ಮಾಡುತ್ತೇವೆ ಎಂದು ವಿಶ್ವನಾಥ್ ಹೇಳಿದರು
ದೇಶದಲ್ಲಿ RSS ಸಂಘಟನೆಯನ್ನು ಬ್ಯಾನ್ ಮಾಡಿದ್ದಾರಾ? RSS ಅಂದರೆ ಮೈಲಿಗೆ ಏಕೆ? ಎಲ್ಲರ ಬೆಂಬಲ ನಮಗೆ ಬೇಕಾಗಿದೆ. ಬರೀ ಇದರೊಂದರ ಬಗ್ಗೆ ಏಕೆ ಹೇಳಬೇಕು. ಎಚ್ ವಿಶ್ವನಾಥ್, ಎಮ್ ಎಲ್ ಸಿ
ಜಿಲ್ಲೆಯ ಎರಡನೇ ಹಂತದ ಗ್ರಾ. ಪಂ.ಚುನಾವಣೆಯು ತಾರಕ್ಕೇರಿದೆ. ಒಂದನೆಯ ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿತ್ತು. ಆದರೆ ಇಂದು ನಡೆಯುತ್ತಿರುವ ಚುನಾವಣೆ ಕಾಂಗ್ರೆಸ್ ಬಿಜೆಪಿ ಪಕ್ಷಗಳ ಬೆಂಬಲಿಗರ ಮಧ್ಯ ಜಟಾಪಟಿ ನಡೆದಿದ್ದು, ಮತದಾನ ಸ್ಥಗಿತಗೊಂಡಿತ್ತು. ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆಯಿಂದಾಗಿ ಮತಗಟ್ಟೆ 1ರಲ್ಲಿ ಎರಡು ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿತ್ತು.
ಮೆಣಸಗಿ ಗ್ರಾಮ ಪಂಚಾಯತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಜಿ.ಪಂ.ಸದಸ್ಯ ಶಿವಕುಮಾರ್ ನೀಲಗುಂದ ಮತಗಟ್ಟೆ ಒಂದರಲ್ಲಿ ಮತದಾನ ಮಾಡಲು ಹೋಗಿದ್ದ ವೇಳೆ ಮತಗಟ್ಟೆಯ ಏಜೆಂಟರ್ ಅಲ್ಲದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮತಗಟ್ಟೆಯಲ್ಲಿ ಮತದಾನ ಮಾಡಲು ಹೋದಾಗ ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಶಿವಕುಮಾರ್ ಆರೋಪ ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೂ ಕೂಡ ಗಲಾಟೆಗೆ ಕಾರಣ ಎನ್ನಲಾಗುತ್ತಿದೆ.
ನಮ್ಮ ಬೆಂಬಲಿತ ಅಭ್ಯರ್ಥಿಗೆ ಮತ ಹಾಕುವಂತೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟವಾಗಿದೆ.
ಇದರಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಸಂಖ್ಯೆಯ ಪೊಲೀಸರು ಗ್ರಾಮಕ್ಕೆ ದೌಡಾಯಿಸಿದ್ದು, ಸೂಕ್ತ ಬಂದೋಬಸ್ತ್ ಮಾಡಿದ್ದಾರೆ.
ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರಿಂದ ಮತ್ತೆ ಮತದಾನ ಆರಂಭವಾಗಿದೆ.
ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ಶನಿವಾರ ಮೈಸೂರಿಗೆ ಆಗಮಿಸಿದರು. ಈ ವೇಳೆ ಆಟೋಗ್ರಾಫ್, ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದರು.
ಈ ಸಂದರ್ಭದಲ್ಲಿ 1790ರಲ್ಲಿ ತಮಿಳುನಾಡಿನ ಶಿವಗಂಗೆಯಯಲ್ಲಿ 16 ಬಾಲೆ ಕುಯಿಲಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ ಯಶೋಗಾಥೆ ಬೆಂಕಿ ಚೆಂಡು ಕುಯಿಲಿ ಕುರಿತ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನೈಜ ಇತಿಹಾಸ ಮರೆಮಾಚುವಿಕೆಯಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಇತಿಹಾಸದ ತಿಳಿವಳಿಕೆಯಲ್ಲಿ ಹಿಂದೆ ಸಾಗಿ ಪ್ರತಿ 6 ತಿಂಗಳಿಗೊಮ್ಮೆ ದೇಶದಲ್ಲಿ ಅಶಾಂತಿ ಉಂಟಾಗುತ್ತಿದೆ ಎಂದು ತಿಳಿಸಿದರು.
CAA ಮತ್ತು ಕೃಷಿ ಕಾಯ್ದೆಗಳ ಮೂಲಕ ಅಶಾಂತಿ ಉಂಟಾಗುತ್ತಿದೆ. ಪಂಜಾಬ್ ಮತ್ತು ಹರಿಯಾಣ ಭಾಗದ ಗಡಿಯಲ್ಲಿ 7 ಲಕ್ಷ ರೈತರನ್ನು ತಂದು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಇತಿಹಾಸ ತಿಳಿಯುವವರಾಗಿ ಹಾಗೂ ನಿಜವಾದ ಭಾರತೀಯರಾಗಿ ಈ ಕಾಯ್ದೆಗಳನ್ನು ಬೆಂಬಲಿಸುವುದು ಸೂಕ್ತ ಎಂದು ಕೃಷಿ ಕಾಯ್ದೆಯ ಬಗ್ಗೆ ದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಕುರಿತು ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಭಿಪ್ರಾಯಪಟ್ಟರು.
ತಮಿಳುನಾಡು ಇತಿಹಾಸ ಪುಸ್ತಕದಲ್ಲಿ ಬ್ರಿಟಿಷರಿಗೆ ಸಹಕಾರ ನೀಡಿ ಅಧಿಕಾರ ನಡೆಸಿದ ವ್ಯಕ್ತಿಗಳ ಬಗ್ಗೆ ಶಾಲಾ ಪಠ್ಯ ಪುಸ್ತಕದಲ್ಲಿ ಉಲ್ಲೇಖಿಸಿದೆ.ಆದರೆ, ಕುಯಿಲಿ, ಮುರುದನ್ ಸಹೋದರರು ಮತ್ತು ವೇಲುನಾಚಿಯರ್, ವೀರಪಾಂಡ್ಯ, ರಾಜ ರಾಜ ಚೋಳ ಅವರಂತಹ ನಾಯಕರನ್ನ ತಮಿಳುನಾಡು ಇತಿಹಾಸ ಪುಸ್ತಕದಲ್ಲಿ ಮೆರೆಮಾಚಿದೆ ಎಂದು ಸಾಂಸ್ಕೃತಿಕ ನಗರದಲ್ಲಿ ನಿಂತು ದ್ರಾವಿಡ್ ರಾಜಕಾರಣ ಟೀಕಿಸಿದರು.
ಕುಯಿಲಿ ಪುಸ್ತಕವನ್ನು ಕನ್ನಡ ಭಾಷೆಯಿಂದ ತಮಿಳಿಗೆ ಅನುವಾದ ಮಾಡುತ್ತೇನೆ. ಇದು ನನ್ನ ವೈಯಕ್ತಿಕ ಜವಾಬ್ದಾರಿ. ಕುಯಿಲಿ, ಅಮೃತಯ್ಯ ಅಂತಹ ವೀರ ಹೋರಾಟಗಾರರು ಪ್ರತಿ ಹಳ್ಳಿಗಳಲ್ಲೂ ಇದ್ದಾರೆ. ಅಂತವರನ್ನ ಗುರುತಿಸುವ ಕಾರ್ಯ ಮುಂದುವರಿಯಲಿ ಎಂದು ಅಣ್ಣಾಮಲೈ ಭರವಸೆ ನೀಡಿದರು.
ಕೆಎಸ್ ಆರ್ ಟಿಸಿ ಬಸ್ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮಹಿಳೆ ಸೇರಿ ಐವರು ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಬಿಜಿ ಕೆರೆ ಗ್ರಾಮದ ಬಳಿ ನಡೆದಿದೆ. ಬೆಳಗಿನ ಜಾವ ಜವರಾಯ ಅಟ್ಟಹಾಸ ಮೆರೆದಿದ್ದು, KSRTC ಚಾಲಕನ ನಿರ್ಲಕ್ಷಕ್ಕೆ ಐವರ ಬಲಿಯಾಗಿದ್ದಾರೆ.
ಅಪಘಾತದಲ್ಲಿ ಕ್ರೂಸರ್ ನಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಹೊಸೂರು ಗ್ರಾಮದ ತಿಮ್ಮಣ್ಣ (40), ರತ್ನಮ್ಮ (38), ಸೋಮನ ಮರಡಿ ಗ್ರಾಮದ ದುರುಗಪ್ಪ (16), ಗಜಿಲಿ ಗ್ರಾಮದ ಮಹೇಶ (19) ಹಾಗೂ 55 ವರ್ಷದ ಓರ್ವ ವ್ಯಕ್ತಿ ಮೃತ ಪಟ್ಟಿದ್ದಾನೆ.
ಇವರು ಕೂಲಿ ಕಾರ್ಮಿಕರಾಗಿದ್ದು, ರಾಯಚೂರಿನಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು.
ಘಟನೆಯಲ್ಲಿ ಗಾಯಗೊಂಡಿರುವವರನ್ನು ಚಿಕಿತ್ಸೆಗಾಗಿ ಚಳ್ಳಕೆರೆ, ಚಿತ್ರದುರ್ಗ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಮೊಳಕಾಲ್ಮೂರು ಠಾಣೆಯ ಪಿಎಸ್ಐ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಟಿಕೆಟ್ ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ಒಳ್ಳೆಯದು. ಆದರೆ, ಆ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಅವರ ತೀರ್ಮಾನಕ್ಕೆ ಬದ್ಧವಾಗಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಸವರಾಜ್ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಇಲ್ಲಾ. ಮುಂದಿನ ಎರಡೊರ್ಷ ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು, ಮಂಗಳೂರು ಸಮಸ್ಯೆಗಳೇ ಬೇರೆ, ಬೆಳಗಾವಿ ಸಮಸ್ಯೆಯೇ ಬೇರೆ ಇದೆ. ಇದರ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದ ಸಚಿವರು, ಬೆಳಗಾವಿಯಲ್ಲಿ ಕಾಂಗ್ರೆಸ್ ಮರಾಠಿಗರ ಓಲೈಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಪ್ರತಿಕ್ರಿಯೆ ಮಾಡುವುದಿಲ್ಲ ಎಂದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಸಾಹುಕಾರ ಪಡೆ ಕ್ಯಾಲೆಂಡರ್ ವಿತರಣೆ ಕುರಿತು ಪ್ರತಿಕ್ರಿಸಿದ ಅವರು, ಕ್ಯಾಲೆಂಡರ್ ವಿತರಿಸಿದರೆ ಅದೇನು ಮಹಾ ಅಪರಾಧವೇ? ಎಂದು ಪ್ರಶ್ನಿಸಿದ ಸಚಿವರು, ಮುಂಬರುವ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಬಿಜೆಪಿಗೆ ವಶಪಡಿಸಿಕೊಳ್ಳುತ್ತೇವೆ. ಅಲ್ಲಿ ಗೆಲ್ಲಲೇಬೇಕೆಂಬ ಸಂಕಲ್ಪ ಮಾಡಿದ್ದೇವೆ. ಪಕ್ಷದಲ್ಲಿನ ಅಡೆ ತಡೆಗಳನ್ನು ಸಿಎಂ ನೋಡಿಕೊಳ್ಳುತ್ತಾರೆ. ಸ್ಥಳೀಯ ಶಾಸಕರ ಜೊತೆ ಸೇರಿ ಎಲ್ಲ ಕಡೆ ಸಂಚರಿಸಿ ನೀರಾವರಿಗೆ ಒತ್ತು ಕೊಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.