Home Blog Page 3150

ಡಾ. ರಾಜ್ ಅವರ ಯೋಗಗುರು, ನಿವೃತ್ತ ಡಿಐಜಿ ನಿಧನ

ವಿಜಯಸಾಕ್ಷಿ ಸುದ್ದಿ, ಕುಂದಗೋಳ

ಕನ್ನಡದ ವರನಟ ಡಾ| ರಾಜ್‌ಕುಮಾರ ಅವರ ಮೆಚ್ಚಿನ ಯೋಗಗುರು, ಕೆಎಸ್‌ಆರ್‌ಪಿ ನಿವೃತ್ತ ಡಿ.ಐ.ಜಿ. ಡಾ| ಹೊನ್ನಪ್ಪ ಎಫ್. ನಾಯ್ಕರ (85) ಮೇ 20ರಂದು ಬೆಂಗಳೂರಿನ ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಡಾ| ಹೊನ್ನಪ್ಪ ಅವರು, ಐದು ದಶಕಗಳಿಂದ ಬೆಂಗಳೂರಿನ ಜೆ.ಪಿ. ನಗರದಲ್ಲಿ ನೆಲೆಸಿದ್ದರು. ಕನಕಪುರ ರಸ್ತೆಯ ಬಿ.ಎಂ. ಕಾವಲ್‌ನಲ್ಲಿ ಮಹಾಯೋಗಕ್ಷೇತ್ರ ಸ್ಥಾಪಿಸಿ, ವರನಟ ಡಾ| ರಾಜ್‌ಕುಮಾರ ಸೇರಿದಂತೆ ಅನೇಕ ರಾಜಕಾರಣಿಗಳು, ನಟರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ಹಾಗೂ ಸಹಸ್ರಾರು ಜನರಿಗೆ “ಮುತ್ತಿನ ನಡುಮನೆ” ಮಾರ್ಗದ ಮೂಲಕ ಹಠಯೋಗದ ಸಾಧನೆ ಮಾಡಿಸಿದ್ದರು.

ಆಸ್ಪತ್ರೆ ಸೇರುವ ವರೆಗೂ ಪ್ರತಿ ಭಾನುವಾರ ವಾರಾಂತ್ಯದ ಯೋಗ ತರಬೇತಿ ನೀಡುತ್ತಿದ್ದರು. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಹಠಯೋಗ ಪರಂಪರೆಯವರಾಗಿದ್ದ ಹೊನ್ನಪ್ಪ, ಅರ್ಥಪೂರ್ಣವಾದ ಯೋಗ, ತತ್ವಪದಗಳನ್ನು ರಚಿಸಿ, ಸ್ವತಃ ಹಾಡಬಲ್ಲವರಾಗಿದ್ದರು. ಅವರ ವಿದ್ಯಾಗುರುವಾಗಿದ್ದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ| ವಿ.ಕೃ. ಗೋಕಾಕರು ಮೆಚ್ಚುಗೆ ನುಡಿಗಳನ್ನಾಡಿದ್ದರು.

ಕರ್ನಾಟಕ ಸರ್ಕಾರವು 1996ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2012ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದವು.

ಅಪ್ರಾಪ್ತೆ ಜೊತೆ ಚಕ್ಕಂದ: ಎಎಸ್ಐ ಸಸ್ಪೆಂಡ್

ಸಿಕ್ಕಿಬಿದ್ದು, ತಾಂಡಾ ಮುಖ್ಯಸ್ಥರ ತೀರ್ಮಾನದಂತೆ 2 ಲಕ್ಷ ರೂ. ದಂಡ ಪಾವತಿಸಿದ್ದ

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತೆ ಜೊತೆಗೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ, ಆ ತಪ್ಪಿಗೆ ದಂಡ ಕಟ್ಟಿದ ಎಎಸ್ಐ ಸಾಹೇಬರು ಈಗ ಸಸ್ಪೆಂಡ್ ಆಗಿದ್ದಾರೆ.
ಈ ಪ್ರಕರಣದ ರೂವಾರಿ ಯಾರು ಎಂಬುದಕ್ಕೆ ಈಗ ಪುಷ್ಟಿ ಸಿಕ್ಕಿದ್ದು, ಎಎಸ್ಐ ಸಾಹೇಬರ ಮೇಲಿನ ವಿಚಾರಣೆ ಬಾಕಿ ಇರಿಸಿ ಸಸ್ಪೆಂಡ್ ಮಾಡಿ ಆದೇಶ ಮಾಡಲಾಗಿದೆ.

ಇದನ್ನೂ ಓದಿ ಅಪ್ರಾಪ್ತೆ ಜೊತೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ ಎಎಸ್ಐ; ಎರಡು ಲಕ್ಷ ದಂಡ! 

ಮೇ 9ರಂದು ಗದಗ ಸಮೀಪದ ತಾಂಡಾವೊಂದರಲ್ಲಿ ಅಪ್ರಾಪ್ತೆ ಜೊತೆಗೆ ಚಕ್ಕಂದ ಆಡಲು ಹೋಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು. ತಾಂಡಾದ ಹಿರಿಯರು ಸಭೆ ಮಾಡಿ, ಎರಡು ಲಕ್ಷ ರೂ. ದಂಡ ವಿಧಿಸಿದ್ದರು.

ಮೇ 14ರಂದು ಸಮೀಪದ ಹೋಟೆಲ್ ಒಂದರಲ್ಲಿ ತಾಂಡಾದ ಹಿರಿಯರ ಕೈಗೆ ದಂಡದ ಮೊತ್ತವಾದ ಎರಡು ಲಕ್ಷ ರೂ. ಕೊಟ್ಟು ಕೈಮುಗಿದು ಬಂದಿದ್ದರು. ಈ ಇಡೀ ಪ್ರಕರಣದ ಕುರಿತು ತಾಂಡಾದ ಬಲ್ಲ ಮೂಲಗಳಿಂದ ಮಾಹಿತಿ ಪಡೆದು ವಿಜಯಸಾಕ್ಷಿ ವೆಬ್ ಪೋರ್ಟಲ್ ಹಾಗೂ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.

ಇದನ್ನೂ ಓದಿ ದಂಡ ಕೊಟ್ಟು ಕೈ ಮುಗಿದ ಎಎಸ್‌ಐ! ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದ ಪೊಲೀಸಪ್ಪನ ಮತ್ತೊಂದು ಮುಖ ಬಯಲು!

ಮೇ 16ರ ವೆಬ್ ಪೋರ್ಟಲ್ ಹಾಗೂ ಮೇ 17 ಪತ್ರಿಕೆಯಲ್ಲಿ ಬಂದ ವರದಿ ಆಧರಿಸಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್ ಅವರ ಶಿಫಾರಸು ಹಿನ್ನೆಲೆಯಲ್ಲಿ ಎಸ್ಪಿ ಯತೀಶ್ ಎನ್. ಅವರು, ಶಹರ ಠಾಣೆಯ ಎಎಸ್ಐ ಎಸ್.ಡಿ. ಚವ್ಹಾಣ ಎಂಬುವವರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಆ ಮೂಲಕ ತಾಂಡಾದ ಹೋರಿಗೆ ಮೂಗುದಾರ ಬಿದ್ದಿದೆ.

ಶಿರಹಟ್ಟಿಯಲ್ಲಿ 100 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರ ಪ್ರಾರಂಭಿಸಿದ ತಹಸೀಲ್ದಾರ್ ಮಜ್ಜಿಗಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಪಟ್ಟಣದ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 100 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ತಹಶೀಲ್ದಾರ್ ಜೆ. ಬಿ. ಮಜ್ಜಿಗಿ ಪ್ರಾರಂಭಿಸಿದರು. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಕೋವಿಡ್ -19 ರ ನೆರವಿಗೆ ಬರುವ ದೃಷ್ಟಿಯಿಂದ ಪಟ್ಟಣದ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 100 ಹಾಸಿಗೆ ಉಳ್ಳ ಬೆಡ್ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸೋಂಕಿತರಿಗೆ ಇಲ್ಲಿ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಕೊಳ್ಳಲಾಗಿದೆ. ಊಟ ಉಪಹಾರದ ವ್ಯವಸ್ಥೆಗೂ ಸಹ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ತಹಸೀಲ್ದಾರ ಮಜ್ಜಿಗಿ ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪರಮೇಶ್ವರ ಮಾತನಾಡಿ, ಕೋವಿಡ್ ಸೋಂಕಿತರ ನೆರವಿಗೆ ಜಿಲ್ಲಾಡಳಿತ ಶಿರಹಟ್ಟಿ ಪಟ್ಟಣದಲ್ಲಿ 100 ಬೆಡ್ ಗಳ ವ್ಯವಸ್ಥೆಯನ್ನು ಕಲ್ಪಿಸಿರುವುದು ಸ್ವಾಗತಾರ್ಹ ಎಂದರು.
ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಉಪಸ್ಥಿತರಿದ್ದರು.

ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ? ಒಂದೇ ದಿನದಲ್ಲಿ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ?

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದರೂ ಕೊರೊನಾ ಅಲೆ ತಗ್ಗುತ್ತಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 2,76,070 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 2,57,72,400ಕ್ಕೆ ಏರಿಕೆಯಾಗಿದೆ.

24 ಗಂಟೆಗಳಲ್ಲಿ ದೇಶದಲ್ಲಿ 3,874 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಇಲ್ಲಿಯವರೆಗೆ 2,87,122 ಜನ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 31,29,878 ಸಕ್ರಿಯ ಪ್ರಕರಣಗಳಿವೆ. 2,23,55,440 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 18,70,09,792 ಮಂದಿ ಮುಂಜಾಗ್ರತಾ ಕ್ರಮವಾಗಿ ವಾಕ್ಸಿನ್ ಪಡೆದುಕೊಂಡಿದ್ದಾರೆ.

ಸಿಎಂ ಪುತ್ರನ ಮೇಲೆ ಎಫ್ಐಆರ್ ದಾಖಲಿಸುವಂತೆ ಕಾಂಗ್ರೆಸ್ ನಿಂದ ಮನವಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಜಿಲ್ಲೆಯ ನಂಜನಗೂಡು ದೇವಸ್ಥಾನದಲ್ಲಿ ಕೊರೊನಾ ಸಂದರ್ಭದಲ್ಲಿಯೇ ಸಿಎಂ ಅವರ ಪುತ್ರ ಬಿ.ವೈ. ವಿಜಯೇಂದ್ರ ಪೂಜೆ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.

ಬಿ.ವೈ. ವಿಜಯೇಂದ್ರ ಅವರು ಕುಟುಂಬ ಸಮೇತ ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ವಿಜಯೇಂದ್ರ ಹಾಗೂ ಕುಟುಂಬಸ್ಥರು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವಿಜಯೇಂದ್ರ ಅವರ ವಿರುದ್ಧ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ -2005, ಸೆಕ್ಷನ್ 51ರ ಸ್ಪಷ್ಟ ಉಲ್ಲಂಘನೆಯಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 2020ರ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರದ ಅಧಿಕಾರಿಗಳು ಹೊರಡಿಸಿರುವ ಆದೇಶ ಐಪಿಸಿ 188ರ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದರೊಂದಿಗೆ ದೇವಸ್ಥಾನದ ಆಡಳಿತ ಮಂಡಳಿ, ಸರ್ಕಾರಿ ಸಿಬ್ಬಂದಿ ಹಾಗೂ ಪುರೋಹಿತ ವರ್ಗವನ್ನು ಕೂಡಲೇ ಅಮಾನತು ಮಾಡಬೇಕು. ಅವರ ವಿರುದ್ಧ ಕೂಡ ಎಫ್ಐಆರ್ ದಾಖಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್, ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಕಾಲುವೆಯ ನೀರಿನಲ್ಲಿಯೇ ತೇಲಾಡುತ್ತಿವೆ ಪಿಪಿಇ ಕಿಟ್!

ವಿಜಯಸಾಕ್ಷಿ ಸುದ್ದಿ, ಮೈಸೂರು

ಸ್ಮಶಾನದಲ್ಲಿ ಸೋಂಕಿತರ ಶವ ಸಂಸ್ಕಾರದ ನಂತರ ಸಂಸ್ಕರಣೆಗೊಳಿಸದೆ ಪಿಪಿಇ ಕಿಟ್ ಗಳನ್ನು ಕಾಲುವೆಯಲ್ಲಿ ಎಸೆಯುತ್ತಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇದು ಆಸ್ಪತ್ರೆ ಸಿಬ್ಬಂದಿಯ ಪಿಪಿಇ ಕಿಟ್ ಅವಾಂತರ. ಸ್ಮಶಾನದಲ್ಲಿ ಸೋಂಕಿತರ ಶವ ಸಂಸ್ಕಾರದ ನಂತರ ಈ ಪಿಪಿಇ ಕಿಟ್ ಗಳನ್ನು ಸಂಸ್ಕರಿಸಬೇಕು. ಆದರೆ, ಕಾರ್ಯ ಇಲ್ಲಿ ನಡೆಯುತ್ತಿಲ್ಲ. ಹೀಗಾಗಿ ಇವು ಸಾರ್ವಜನಿಕರು ಬಳಸುವ ನೀರಿನ ನಾಲೆಯಲ್ಲಿ ತೇಲಾಡುತ್ತಿವೆ.

ಇಲ್ಲಿಯ ಕೆ.ಆರ್. ಮಿಲ್ ಹತ್ತಿರದ ಕಾಲುವೆ ಬಳಿ 20ಕ್ಕೂ ಹೆಚ್ಚು ಪಿಪಿಇ ಕಿಟ್ ಪತ್ತೆಯಾಗಿವೆ. ಆಸ್ಪತ್ರೆ ಸಿಬ್ಬಂದಿಯ ಈ ಬೇಜವಾಬ್ದಾರಿಯಿಂದಾಗಿ ಸಾರ್ವಜನಿಕರು ಆತಂಕದೊಂದಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ಕೊವಿಡ್ ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಕೆಲವು ಸ್ಮಶಾನಗಳನ್ನ ಆಯ್ಕೆ ಮಾಡಿದೆ. ಈ ಕಾಲುವೆ ಹತ್ತಿರ ಕ್ರೈಸ್ತ ಧರ್ಮದ ಶವ ಸಂಸ್ಕಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಈ ಜಾಗ ಪುಟ್ಟದಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೇ ಕ್ರೈಸ್ತರು ಸಾವನ್ನಪ್ಪಿದರೆ ಅವರನ್ನು ಇಲ್ಲಿಯೇ ತಂದು ಸಂಸ್ಕಾರ ಮಾಡಲಾಗುತ್ತದೆ.

ಬೆಲವತ್ತ ಗ್ರಾಮದಲ್ಲಿಯೇ ಸಾಕಷ್ಟು ಜನ ಕ್ರೈಸ್ತರಿದ್ದಾರೆ. ಈ ಸ್ಮಶಾನವನ್ನು ನಮ್ಮ ಗ್ರಾಮದ ಸ್ಮಶಾನಕ್ಕೆ ಮೀಸಲಿಡಬೇಕು. ಕೂಡಲೇ ಸರ್ಕಾರ ನಿರ್ಧಾರ ಕೈ ಬಿಡಬೇಕು. ಕೊವಿಡ್ ನಿಂದ ಮೃತಪಟ್ಟವರನ್ನು ಇಲ್ಲಿಗೆ ತಂದು ಶವಸಂಸ್ಕಾರ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ. ಇಲ್ಲಿ ಸೂಕ್ತ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಂಡಿಲ್ಲ. ಮಕ್ಕಳು, ಜಾನುವಾರುಗಳು ಈ ನೀರಿನಲ್ಲಿ ಆಟ ಆಡುತ್ತಿದ್ದಾರೆ. ಅಂತಹ ನೀರಿಗೆ ಪಿಪಿಇ ಕಿಟ್ ಗಳನ್ನು ಬಿಸಾಡಲಾಗುತ್ತಿದೆ. ಹೀಗಾಗಿ ಮಕ್ಕಳಿಗೆ ರೋಗ ಹರಡುವ ಭೀತಿ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸ್ಥಳಕ್ಕೆ ಮೇಟಗಳ್ಳಿ ಪೊಲೀಸರು, ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನೀರಿನಲ್ಲಿ ತೇಲುತ್ತಿದ್ದ ಪಿಪಿಇ ಕಿಟ್ ತೆರವುಗೊಳಿಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ಎಸೆದ ಕಿಡಿಗೇಡಿಗಳು!

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ಕೊರೊನಾ ಸಂದರ್ಭದಲ್ಲಿ ಖಾಲಿ ಕುಳಿತುಕೊಳ್ಳಲಾರದ ಕಿಡಿಗೇಡಿಗಳು ಮಧ್ಯರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿ ವಿಕೃತಿ ಮೆರೆದಿದ್ದಾರೆ. ನಗರದ ಸಿದ್ದಯ್ಯ ರಸ್ತೆ ಹಾಗೂ ಎಂಕೆಕೆ ರಸ್ತೆಯಲ್ಲಿನ ಮನೆಗಳ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಆಟೋಗಳ ಗ್ಲಾಸ್ ಗಳನ್ನು ಒಡೆದು ಕಿಡಿಗೇಡಿಗಳು ಪುಡಿ ಪುಡಿ ಮಾಡಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿದ್ದಕ್ಕೆ ಪೊಲೀಸರಿಗೆ ತಲೆನೋವು ಉಂಟಾಗಿದೆ. ಸ್ಥಳಕ್ಕೆ ಸಚಿವ ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಕಿಡಿಗೇಡಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಈ ಘಟನೆಯಲ್ಲಿ 11 ಕಾರು ಹಾಗೂ 1 ಆಟೋ ದ್ವಿಚಕ್ರ ವಾಹನ ಜಖಂ ಆಗಿವೆ. ಅಲ್ಲದೇ, ಕಾಡಾ ಅಧ್ಯಕ್ಷರ ಕಾರು ಕೂಡ ಜಖಂ ಆಗಿದೆ. ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅನುಮಾನ ವ್ಯಕ್ತಪಡಿಸಿ ಈಗಾಗಲೇ ಇಬ್ಬರು ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ರಾಜಸ್ಥಾನದ ಮಾಜಿ ಸಿಎಂ ಮಹಾಮಾರಿಗೆ ಬಲಿ!

ವಿಜಯಸಾಕ್ಷಿ ಸುದ್ದಿ, ಜೈಪುರ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ರಾಜಸ್ಥಾನದ ಮಾಜಿ ಸಿಎಂ ಜಗನ್ನಾಥ್ ಪಹಾಡಿಯಾ(89) ಇಂದು ಮಹಾಮಾರಿಗೆ ಬಲಿಯಾಗಿದ್ದಾರೆ. 1980-81 ರಲ್ಲಿ ಇವರು ರಾಜಸ್ಥಾನದ ಸಿಎಂ ಆಗಿದ್ದರು. ಆನಂತರ ಹರಿಯಾಣ ಹಾಗೂ ಬಿಹಾರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು.
ಮಾಜಿ ಸಿಎಂ ಅವರ ಸಾವಿನ ಕುರಿತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‍ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಅಲ್ಲದೇ, ಸಂತಾಪ ಸೂಚಿಸಿದ್ದಾರೆ.

ರಾಜ್ಯ ಸರ್ಕಾರ ಗುರುವಾರ ಒಂದು ದಿನ ಶೋಕಾಚರಣೆಯನ್ನು ಕೂಡ ಘೋಷಿಸಿದೆ. ಅಲ್ಲದೇ ಎಲ್ಲಾ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದ್ದು, ರಾಷ್ಟ್ರಧ್ವಜವನ್ನು ಅರ್ಧದಷ್ಟು ಹಾರಿಸಲಾಗುತ್ತಿದೆ.
ಪಹಾಡಿಯಾ ಅವರಿಗೆ ಸಂತಾಪ ಸೂಚಿಸಲು ಇಂದು ಮಧ್ಯಾಹ್ನ 12ಕ್ಕೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಅಂದೇ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುತ್ತದೆ ಎನ್ನಲಾಗಿದೆ.

ಕೊರೊನಾ ತಾಂಡವ; ಮೈಮರೆತು ಓಕುಳಿ ಆಡಿದ ಜನ, ಮೌನ ವಹಿಸಿದ ಆಡಳಿತ!

ವಿಜಯಸಾಕ್ಷಿ ಸುದ್ದಿ, ಗದಗ

ಇಡೀ ದೇಶವೇ ಮಹಾಮಾರಿಗೆ ನಲುಗುತ್ತಿದೆ. ಸಾವಿನ ಸುದ್ದಿಗಳು ದೇಶಾದ್ಯಂತ ಆತಂಕ ಸೃಷ್ಟಿಸುತ್ತಿವೆ. ಹೀಗಾಗಿ ಎಲ್ಲೆಡೆ ಲಾಕ್ ಡೌನ್ ಜಾರಿಯಾಗಿದೆ. ಹೊರಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ, ಜೀವ ಉಳಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ, ಈ ಗ್ರಾಮಸ್ಥರ ಉಡಾಫೆಗೆ ಏನನ್ನಬೇಕು? ಎನ್ನುವುದೇ ತಿಳಿಯುತ್ತಿಲ್ಲ.

ಕೊರೊನಾ ತೊಲಗಿಸಲು ಸರ್ಕಾರ, ಅಧಿಕಾರಿಗಳು, ವಾರಿಯರ್ಸ್ ಸಾಕಷ್ಟು ಶ್ರಮಿಸುತ್ತಿದ್ದಾರೆ.

ಜಿಲ್ಲೆಯ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದ ಜನರು ಜವಬ್ದಾರಿ ಮರೆತು ಓಕಳಿಯಾಟ ಆಡಿದ್ದಾರೆ.

ಗ್ರಾಮದಲ್ಲಿನ ಹನುಮಂತ ದೇವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಹಿನ್ನೆಲೆಯಲ್ಲಿ ಗ್ರಾಮದ ತುಂಬೆಲ್ಲ ಜನರು ಹನುಮಂತ ದೇವರ ಓಕುಳಿ ಆಡಿದ್ದಾರೆ. ಓರ್ವ ಮಹಿಳೆ ಕೈಯಲ್ಲಿ ದೊಣ್ಣೆ ಹಿಡಿದಿರುತ್ತಾಳೆ. ನೀರು ಎರಚುವವರಿಗೆ ಅವಳು ದೊಣ್ಣೆಯಿಂದ ಹೊಡೆಯುತ್ತಾಳೆ. ಹೀಗೆ ಜನ ತಮ್ಮ ಜೀವದ ಹಂಗು ತೊರೆದು, ಕೊರೊನಾ ಭಯವಿಲ್ಲದೆ ಓಕಳಿ ಆಡಿದ್ದಾರೆ. ಈ ಓಕಳಿ ನೋಡಲು ಜನ ಸಾಗರವೇ ಇತ್ತು.

ಮಾಸ್ಕ್ ಧರಿಸಿ, 6 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ, ತಜ್ಞರು ಹಾಗೂ ವೈದ್ಯರು ಜನರಿಗೆ ಕೈ ಮುಗಿದು ಇನ್ನೂ ಬೇಡಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿಯ ಜನ ಅವುಗಳಿಗೆ ಡೋಂಟ್ ಕೇರ್ ಎಂದಿದ್ದಾರೆ. ಯಾವುದೇ ಮಾಸ್ಕ್, ದೈಹಿಕ ಅಂತರ ಕಾಯ್ದುಕೊಳ್ಳದೆ ಮೈಮರೆತು ಓಕುಳಿಯಲ್ಲಿ ಮಿಂದೆದಿದ್ದಾರೆ.

ದೇಶದ ತುಂಬೆಲ್ಲ ಮಹಾಮಾರಿ ಸಿಕ್ಕ ಸಿಕ್ಕವರನ್ನೆಲ್ಲ ಬಲಿ ಪಡೆಯುತ್ತಿದೆ. ಜನರು ಭಯದಿಂದಾಗಿ ಮನೆಯಿಂದಲೇ ಹೊರಗೆ ಬರುತ್ತಿಲ್ಲ. ಆದರೆ, ಇಲ್ಲಿಯ ಜನ ಮಾತ್ರ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಆದರೆ, ಜನ ಇಷ್ಟೊಂದು ಮೈಮರೆತು ಓಕುಳಿ ಆಡಿದರೂ ಗ್ರಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮಾತ್ರ ನಿರ್ಲಕ್ಷ್ಯ ವಹಿಸಿ,ಮೌನದಿಂದ ಕುಳಿತಿದೆ.

ಈ ಘಟನೆ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಓಕುಳಿ ನೋಡಿದರೆ ಬಹುಶಃ ಕೊರೊನಾವೇ ಹೆದರಿ ಓಡಿ ಹೋಗಿರಬಹುದೇನೊ ಅನ್ನುವಷ್ಟರ ಮಟ್ಟಿಗೆ ಈ ಜನ ವರ್ತಿಸಿದ್ದಾರೆ.

ಮಹಿಳೆಯನ್ನು ಮಂಚಕ್ಕೆ ಕರೆದ ಬಿಜೆಪಿ ಮುಖಂಡನಿಗೆ ಪೊಲೀಸರ ರಾಜಾತಿಥ್ಯ!

ವಿಜಯಸಾಕ್ಷಿ ಸುದ್ದಿ, ಗದಗ

ಆತ ಗ್ರಾಮ ಪಂಚಾಯತಿ ಸದಸ್ಯೆಯ ಪತಿ, ಬಿಜೆಪಿ ಮುಖಂಡ. ಹತ್ತಾರು ಹಳ್ಳಿಗಳ ಸಂಘಟಕ ಬೇರೆ. ಸಚಿವರ ಕ್ಷೇತ್ರದ ಪ್ರಭಾವಿ ಅಂದರೆ ಕೇಳಬೇಕೇ? ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಗ್ರಾಮ ಪಂಚಾಯತಿಯ ಪಂಪ್ ಮೆಕ್ಯಾನಿಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆಡಳಿತ ಮಂಡಳಿ ಆತನನ್ನು ಸಸ್ಪೆಂಡ್ ಮಾಡಿತ್ತು.

ಮೊದಲೇ ಬಡತನ. ಕೆಲಸವಿಲ್ಲದೆ, ಸಂಬಳ ಬಾರದೆ ಸಂಸಾರ ನೌಕೆ ಸಾಗಿಸಲು ಕಷ್ಟ ಆಗಿದೆ. ಸಸ್ಪೆಂಡ್ ರದ್ದು ಮಾಡಿಸಿ ಕೆಲಸಕ್ಕೆ ತಗೊಳ್ಳಿ ಅಂತ ಕಂಡ ಕಂಡ ಸದಸ್ಯರನ್ನು ಕೇಳಿದರೂ ಒಂದಿಷ್ಟು ದಿನ ಎಲ್ಲರೂ ಸತಾಯಿಸಿದ್ದಾರೆ.

ಗ್ರಾ.ಪಂ. ಅಂಗಳದಲ್ಲೇ ಠಳಾಯಿಸುತ್ತಿದ್ದ ಈ ಮುಖಂಡ ಕಂಡಿದ್ದಾನೆ. ಪಂಪ್ ಮೆಕ್ಯಾನಿಕ್ ಹಾಗೂ ಆತನ ಪತ್ನಿ, ಪಿಡಿಒ ಅವರಿಗೆ ಹೇಳಿ ವಾಪಸ್ ಕೆಲಸಕ್ಕೆ ತಗೋರಿ' ಅಂದಾರ. ಆಗ ಬಿಜೆಪಿ ಲೀಡರ್,ಆಯಿತು, ನೋಡೋಣ’ ಎಂದು ಹೇಳಿದ್ದಾರೆ. ಅದ್ಯಾಕೋ ಸರಕಾರವೇ ಇವನ ಕೈಯಲ್ಲಿದೆ ಅಂದುಕೊಂಡ ದಂಪತಿ ಈತನ ಹಿಂದೆ ಬಿದ್ದಿದ್ದಾರೆ.

ನಾಳೆ ಹೇಳ್ತೀನಿ… ನಾಡಿದ್ದು ಹೇಳಿ ಮಾಡಿಸ್ತೀನಿ ಅಂತ ಹೇಳುತ್ತಿದ್ದ ಬಿಜೆಪಿ ಮುಖಂಡ ಈ ದಂಪತಿಯ ಅಸಹಾಯಕತೆ ಬಳಸಿಕೊಳ್ಳುವ ಆಲೋಚನೆ ಮಾಡಿದ್ದಾನೆ.

ಆಮೇಲಾ?

ಮಹಿಳೆ ಪೋನ್ ಮಾಡಿ ಕೇಳೋದು…ಇಂವ ಹೇಳ್ತೀನಿ… ಮಾಡ್ತೀನಿ… ಮಾಡಿಸ್ತೀನಿ ಅಂತ ಹೇಳೋದು… ಹೀಗೆ ಒಂದಿಷ್ಟು ದಿನಗಳು ಕಳೆದಿವೆ. ಈ ಮುಖಂಡ ಮನಸ್ಸಿನಲ್ಲಿ ಮಂಡಿಗೆ ಮೆಲ್ಲಲು ಆರಂಭಿಸಿದ್ದ. ಮತ್ತೊಮ್ಮೆ ಕರೆ ಮಾಡಿದ ಮಹಿಳೆಗೆ ನೇರವಾಗಿ ಮಂಚ ಏರಲು ಆಫರ್ ನೀಡಿದ್ದಾನೆ. ಏನ್ರೀ… ಅಂತ ಗಾಬರಿಬಿದ್ದ ಮಹಿಳೆ ಕೊಂಚ ಸುಧಾರಿಸಿಕೊಂಡು, ಕೆಲಸ ಮಾಡಿಸಿಕೊಡಿ, ಆಮೇಲೆ ನೋಡೋಣ' ಅಂದಿದ್ದಾಳೆ. ಆಮೇಲಾ?’ ಅಂತ ಉದ್ಘಾರ ತಗೆದಿದ್ದಾನೆ ಮಹಾಶಯ.

ಬಿಜೆಪಿ ಭೂಪನ ಬೇಡಿಕೆಯಿಂದ ಮಹಿಳೆಗೆ ಕಸಿವಿಸಿಯಾಗಿದೆ. ಗಂಡನಿಗೆ ಹೇಳಿದಾಗ ಆತನೂ ದಿಗಿಲುಗೊಂಡ. ನಾಲ್ಕು ಮಂದಿ ಮುಂದ ಹೇಳಬೇಕು, ಆತನೊಂದಿಗೆ ಜಗಳ ಮಾಡಬೇಕು ಎಂದರೆ, ಆ ವ್ಯಕ್ತಿ ಪ್ರಭಾವಿ. ಸರಕಾರ, ಪೊಲೀಸರು ಆತನ ತಾಳಕ್ಕೆ ಕುಣಿದರೆ ಏನು ಗತಿ ಎಂದು ಚಿಂತಿಸಿದ ದಂಪತಿಗೆ ದಿಕ್ಕೇ ತೋಚಲಿಲ್ಲ. ಆದರೆ, ಬಿಜೆಪಿ ಮುಖಂಡ ಅಷ್ಟಕ್ಕೆ ಸುಮ್ಮನಾಗದೆ, ಪಂಪ್ ಮೆಕ್ಯಾನಿಕ್‌ಗೂ ಇದನ್ನೇ ಹೇಳಿದ್ದಾನೆ.

ಮುಖಂಡನ ಆಫರ್ ಕುರಿತು ಸಮಾಜದ ಮುಖಂಡರ ಮುಂದೆ ಈ ಪಂಪ್ ಮೆಕ್ಯಾನಿಕ್ ಅಳುಕುತ್ತಲೇ ವಿವರಿಸಿದ್ದಾನೆ. ಮುಂದಾಗಬಹುದಾದ ಅನಾಹುತದ ಕುರಿತು ವಿಚಾರಿಸಿದ ಆತನ ಹಿತೈಷಿಗಳು ಮಂಗಳವಾರ ಗ್ರಾಮೀಣ ಠಾಣೆಗೆ ಆ ಮುಖಂಡನ ವಿರುದ್ಧ ದೂರು ನೀಡಲು ಬಂದಿದ್ದಾರೆ.

ಕೆಲಸ ಮೇಲೆ ಹೊರ ಹೋಗಿದ್ದ ಪಿಎಸ್ಐ:
ಮುಂಜಾನೆ 11 ಗಂಟೆಗೆ ದೂರು ನೀಡಲು ಬಂದವರು ಮಧ್ಯಾಹ್ನ ಎರಡು ಗಂಟೆಯ ವರೆಗೆ ಕಾದ ಮೇಲೆ ಪಿಎಸ್ಐ ಸಾಹೇಬರು ಬಂದಿದ್ದಾರೆ. ಬಿಜೆಪಿ ಮುಖಂಡನ ಪೋನ್ ಸಂಭಾಷಣೆ ಸಮೇತ ಸಾಹೇಬರ ಗಮನಕ್ಕೆ ತಂದು, `ಕಂಪ್ಲೇಂಟ್ ತಗೋರಿ’ ಅಂತ ದಂಪತಿ ಮನವಿ ಮಾಡಿದ್ದಾರೆ.

ದಂಪತಿಯ ಮಾತು ಕೇಳಿ‌ದ ಪಿಎಸ್ಐ, ತಮ್ಮ ಮೇಲಧಿಕಾರಿಗೆ ಮಾಹಿತಿ ನೀಡಿದ್ದಾರೆ. ಮೇಲಧಿಕಾರಿ ಮಾಹಿತಿ ಪಡೆದು ಠಾಣೆಗೆ ಬಂದವರೇ ಸಾಕಷ್ಟು ವಿಚಾರಣೆ ನಡೆಸಿದ್ದಾರೆ. ನೀವು ಕಂಪ್ಲೇಂಟ್ ಕೊಟ್ರ ನಿಮಗ ಮುಂದ ತೊಂದರೆ ಆಗುತ್ತ ನೋಡ್ರೀ ಅಂದಾರ. ಆದರೆ, ದಂಪತಿ ಬಗ್ಗಿಲ್ಲ. ಮೊದಲೇ ಸಚಿವರ ಕ್ಷೇತ್ರದ ಮುಖಂಡ. ಈ ರೀತಿ ಪ್ರಕರಣ ದಾಖಲಾದರೆ ನೌಕರಿ ಮಾಡೋದು ಕಷ್ಟ ಎಂದುಕೊಂಡ ಪೊಲೀಸ್ ಅಧಿಕಾರಿ ರಾಜೀ ಪಂಚಾಯತಿ ಮಾಡ್ಕೊರೀ ಅಂತ ದುಂಬಾಲು ಬಿದ್ದಾರೆ. ಸಾಕಷ್ಟು ಹೆದರಿಸಿದ್ದಾರೆ. ಆದರೂ ದಂಪತಿ ಜಗ್ಗಿಲ್ಲ.

ಆರೋಪಿಗೆ ಆತಿಥ್ಯ

ಆಮೇಲೆ ಆರೋಪಿಯಾಗಿರುವ ಬಿಜೆಪಿ ಮುಖಂಡನನ್ನು ಕರೆಸಿ, ಕುರ್ಚಿ ಮೇಲೆ ಕೂರಿಸಿ, ರಾಜಾತಿಥ್ಯ ನೀಡಿದ್ದಾರೆ. ಹೇಗಾದರೂ ಮಾಡಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ಪಡೆಯಬಾರದು ಅಂತ ನಿರ್ಧರಿಸಿದ ಪೊಲೀಸರೇ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬರೋಬ್ಬರಿ 11 ಗಂಟೆಗಳು

ಈ ದಂಪತಿ ದೂರು ನೀಡಲು ಠಾಣೆಗೆ ಬಂದಿದ್ದು ಮುಂಜಾನೆ 11 ಗಂಟೆಗೆ. ದೂರು ದಾಖಲಾಗಿದ್ದು ರಾತ್ರಿ 10 ಗಂಟೆಗೆ. ಸತತ 11 ಗಂಟೆ ಕಾಲ ಈ ದಂಪತಿ ಠಾಣೆಯಲ್ಲಿ ಕಾದು ಸುಸ್ತಾಗಿದ್ದಾರೆ, ಮುಜುಗರ ಅನುಭವಿಸಿದ್ದಾರೆ. ಆದರೆ, ಸಾಮಾನ್ಯ ದೂರೊಂದನ್ನು ದಾಖಲಿಸಿ, ಪ್ರಪಂಚ ಗೆದ್ದವರಂತೆ ಪೊಲೀಸರು ಬೀಗಿದ್ದಾರೆ, ಬಿಜೆಪಿ ಮುಖಂಡನೂ ಮೀಸೆ ಮೇಲೆ ಕೈಯಾಡಿಸಿದ್ದಾನೆ.

error: Content is protected !!