Home Blog Page 3154

ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಇನ್ನಿಲ್ಲ!

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಕೇಂದ್ರದ ಮಾಜಿ ಸಚಿವ ಹಾಗೂ ರೈತ ನಾಯಕ ಬಾಬಾಗೌಡ ಪಾಟೀಲ(78) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚೆಗಷ್ಟೇ ನಗರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ.

ಬಾಬಾಗೌಡ ಅವರು ರೈತ ಹೋರಾಟದ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದರು. 80-90 ದಶಕದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದು, ರೈತ ಸಂಘ ಕಟ್ಟಿದ ಪ್ರಮುಖರಲ್ಲಿ ಇವರೊಬ್ಬರು. ಆ ನಂತರ ರಾಜ್ಯದಾದ್ಯಂತ ರೈತ ಸಂಘದ ಮೂಲಕ ರೈತರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ತೊಡೆತಟ್ಟಿ ನಿಂತಿದ್ದರು. ಉತ್ತರ ಕರ್ನಾಟಕವಷ್ಟೆ ಅಲ್ಲದೇ, ದಕ್ಷಿಣ ಕರ್ನಾಟಕದಲ್ಲಿಯೂ ಇವರು ರೈತರಿಗೆ ನಾಯಕರಾಗಿದ್ದರು.

1989ರಲ್ಲಿ ರೈತ ಸಂಘದ ಮೂಲಕ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಏಕಕಾಲದಲ್ಲಿ ಸ್ಪರ್ಧಿಸಿ, ಎರಡೂ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದರು. ಆ ಸಮಯದಲ್ಲಿ ರಾಜ್ಯದ ಇನ್ನಿತರ ಕ್ಷೇತ್ರಗಳಲ್ಲಿ ರೈತ ಸಂಘದ ಸದಸ್ಯರು ತೀವ್ರ ಹೋರಾಟ ನಡೆಸಿ, ಸೋಲು ಕಂಡಿದ್ದರು. ರೈತ ಸಂಘಧ ಇನ್ನೊಬ್ಬ ನಾಯಕ ನಂಜುಂಡಸ್ವಾಮಿ ಕೂಡ ಸೋಲು ಕಂಡಿದ್ದರು. ಆಗ ಬಾಬಾಗೌಡ ಪಾಟೀಲ್ ಮಾತ್ರ ರೈತ ಸಂಘದಿಂದ ಗೆದ್ದ ಏಕೈಕ ವ್ಯಕ್ತಿಯಾಗಿದ್ದರು. ಆ ನಂತರ ಬಾಬಾಗೌಡ ಅವರು ಕಿತ್ತೂರ ಕ್ಷೇತ್ರವನ್ನು ಉಳಿಸಿಕೊಂಡು, ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರು. ನಂಜುಂಡಸ್ವಾಮಿ ಅವರನ್ನು ಧಾರವಾಡ ಗ್ರಾಮೀಣ ಅಖಾಡಕ್ಕೆ ಇಳಿಸಿ, ತಾವೇ ಸ್ವಂತ ಪ್ರಚಾರದ ಹೊಣೆ ಹೊತ್ತು ಅವರನ್ನೂ ಕೂಡ ಗೆಲ್ಲಿಸಿಕೊಂಡು ವಿಧಾನಸಭೆ ಪ್ರವೇಶಿದ್ದರು. ಅಂದು ಬಾಬಾಗೌಡ ಹಾಗೂ ನಂಜುಂಡಸ್ವಾಮಿ ಅವರು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತಿದ್ದರೆಂದರೆ, ಇಡೀ ಸದನವೇ ಮೌನ ವಹಿಸುತ್ತಿತ್ತು. ಅಷ್ಟೊಂದು ಆಳ ಅಧ್ಯಯನದ ಮೂಲಕ ಇವರು ಮಾತನಾಡುತ್ತಿದ್ದರು. ರೈತರಿಗೆ ಎಲ್ಲಿಯೇ ಅನ್ಯಾಯವಾದರೂ ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡು ಬಗೆ ಹರಿಸುತ್ತಿದ್ದರು.
ಆನಂತರ ರೈತ ಸಂಘದಲ್ಲಿ ಭಿನ್ನಾಭಿಪ್ರಾಯ ತಲೆದೋರಿ, ಬಾಬಾಗೌಡ ಅವರು ಬಿಜೆಪಿ ಸೇರಿದರು.

1998ರಲ್ಲಿ ಬೆಳಗಾವಿ ಲೋಕಸಭೆಯಿಂದ ಸ್ಪರ್ಧಿಸಿ ಜಯಗಳಿಸಿ, ಸಂಸತ್ ಕೂಡ ಪ್ರವೇಶಿಸಿದರು. ಆಗ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸಾಕಷ್ಟು ಜನಸೇವೆ ಮಾಡಿದ್ದಾರೆ. ಗ್ರಾಮ ಸಡಕ್ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೊನೆಗೆ ಬಿಜೆಪಿಯಲ್ಲಿನ ಕೆಲವು ಗುಂಪುಗಾರಿಕೆಯಿಂದ ಬೇಸತ್ತ ಅವರು, ಬಿಜೆಪಿ ತೊರೆದರು.
ಆ ನಂತರ ರೈತ ಸೇವೆ ಮಾಡುತ್ತ, ರೈತರ ಅನ್ಯಾಯದ ವಿರುದ್ಧ ಧ್ವನಿ ಹಾಕುತ್ತ ರೈತ ಸೇವೆಯಲ್ಲಿಯೇ ತೊಡಗಿದ್ದರು.

ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತರಿಗೆ ಮರಣಶಾಸನವಾಗಿದೆ ಎಂದು ಮೋದಿ ವಿರುದ್ಧ ಇತ್ತೀಚೆಗಷ್ಟೇ ಗುಡುಗಿದ್ದರು.

ಸದ್ಯ ಅವರ ನಿಧನಕ್ಕೆ ರಾಜ್ಯದ ರೈತರು ಕಂಬನಿ ಮಿಡಿಯುತ್ತಿದ್ದಾರೆ. ವೀರಶೈವ ಮಹಾಸಭೆಯ ಧಾರವಾಡ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಕಾಂಗ್ರೆಸ್ ನಾಯಕ ಮಲ್ಲನಗೌಡ ಸೋ.ಪಾಟೀಲ, ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಮಂಜುನಾಥ ಮುಗ್ಗನವರ, ವೀರಶೈವ ಮಹಾಸಭೆಯ ಕಾರ್ಯದರ್ಶಿ ಸಿದ್ದಣ್ಣ ಕಂಬಾರ, ನ್ಯಾಯವಾದಿ ಸೋಮಶೇಖರ ಹೂಗಾರ ಸೇರಿದಂತೆ ಹಲವು ಗಣ್ಯರು ಬಾಬಾಗೌಡ ಅವರ ನಿಧನಕ್ಕೆ ಕಣ್ಣೀರು ಸುರಿಸಿದ್ದಾರೆ.

ಕಾರ್ಯಕರ್ತನ ಬೈಕ್ ತಡೆದ ಮಹಿಳಾ ಎಎಸ್ಐ ಸಸ್ಪೆಂಡ್; ಶಾಸಕರೇ ಇದು ಸರೀನಾ?

ವಿಜಯಸಾಕ್ಷಿ ಸುದ್ದಿ, ಗದಗ

ಲಾಕ್ ಡೌನ್ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತನ ಬೈಕ್ ಬಿಡದೇ ಇದ್ದ ಕಾರಣಕ್ಕಾಗಿ ಮಹಿಳಾ ಎಎಸ್ಐ ಒಬ್ಬರು ಸಸ್ಪೆಂಡ್ ಆದ ಘಟನೆ ಗದಗನಲ್ಲಿ ನಡೆದಿದೆ.

ಬೆಟಗೇರಿ ಠಾಣೆಯ ಮಹಿಳಾ ಎಎಸ್ಐ ಎನ್ ಸಿ ಮೂಲಿಮನಿ ಎಂಬುವವರೇ ಅಮಾನತು ಆದವರು. ಕೋವಿಡ್ ತಡೆಗಟ್ಟಲು ಸರಕಾರ, ಜಿಲ್ಲಾಡಳಿತದ ಆದೇಶ ಪಾಲಿಸಿದ ಮಹಿಳಾ ಎಎಸ್ಐ ಈಗ ಅಮಾನತು ಶಿಕ್ಷೆಗೆ ಒಳಗಾದವರು.

ಕೋವಿಡ್ ‌ನಿಯಂತ್ರಣ ಮಾಡಲು ಸರಕಾರ ಲಾಕ್ ಡೌನ್ ಜಾರಿ ಮಾಡಿದೆ. ಅನಗತ್ಯ ಸಂಚಾರ, ಓಡಾಟ ಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಎಸ್ಪಿ ಸಾಹೇಬರು ಅನಗತ್ಯ ವಾಹನ ಓಡಾಟ ಕಂಡು ಬಂದಲ್ಲಿ ದಂಡ, ಸೀಜ್ ಮಾಡಲು ತಮ್ಮ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋವಿಡ್ ವೇಳೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದಿಷ್ಟು ಅಧಿಕಾರಿಗಳು, ಪೊಲೀಸರು, ಯಾರ ಮುಲಾಜಿಗೂ ಬಗ್ಗದೇ ಮೇಲಾಧಿಕಾರಿಗಳ, ಸರಕಾರದ ಆದೇಶ ಪಾಲನೆ ಮಾಡುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೀಗೆ ಮೊನ್ನೆ ಮೇ 17 ರಂದು ಮಧ್ಯಾಹ್ನ ಬೆಟಗೇರಿಯ ಟಿಂಗಿನಕಾಯಿ ಬಜಾರನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ‌ ಎಎಸ್ಐ ಎನ್ ಸಿ ಮೂಲಿಮನಿ‌ ಅವರು, ಬೈಕ್ ತಡೆದಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತ ಅಂತ ಹೇಳಿದ ಆತ, ಸೀದಾ‌ ಶಾಸಕ ಕಳಕಪ್ಪ ಬಂಡಿ ಅವರಿಗೆ ಕಾಲ್ ಮಾಡಿ ಕೊಟ್ಟಿದ್ದಾನೆ‌. ಆ ಕಡೆಯಿಂದ ಮಾತನಾಡುವವರು ಯಾರು ಅಂತ ಗೊತ್ತಾಗದೇ ಸಹಜವಾಗಿ ಪೊಲೀಸ್ ಭಾಷೆಯಲ್ಲಿ ಮಾತನಾಡಿದ್ದಾರೆ. ಇದರಿಂದ ಕೆರಳಿ ಕೆಂಡಮಂಡಲವಾದ ಶಾಸಕರು ಮಹಿಳಾ ಎಎಸ್ಐ ಮೇಲೆ ಎಗರಾಡಿದ್ದಾರೆ. ಮೊದಲೇ ಒರಟು ಸ್ವಭಾವದ ಶಾಸಕರು ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ‌ ಯಾರ ನೋಡ್ರೀ ಆ ಎಎಸ್ಐ ಅಂತ ಹೇಳಿದ್ದಾರೆ.

ಅಷ್ಟಕ್ಕೆ ಈಗ ಈ ಮಹಿಳಾ ಎಎಸ್ಐ ‌ಅವರು ಸಸ್ಪೆಂಡ್ ಆಗಿದ್ದಾರೆ. ಇದೀಗ ಈ ವಿಷಯ ಪೊಲೀಸ್ ವಲಯ, ಸಾರ್ವಜನಿಕ ಚರ್ಚೆಯ ವಿಷಯವಾಗಿದೆ.

ಮತ್ತೊಮ್ಮೆ ಮಾನವೀಯತೆಗೆ ಹೆಸರಾದ ಕಿಂಗ್ ಕೊಹ್ಲಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕೊರೊನಾ ತಾಂಡವಾಡುತ್ತಿರುವ ದಿನದಿಂದಲೂ ಮಾನವೀಯತೆ ಪ್ರದರ್ಶಿಸುತ್ತಿದ್ದಾರೆ. ಸದ್ಯ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿಗೆ ಸಹಾಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಶ್ರಾವಂತಿ ನಾಯ್ಡು ಅವರ ತಾಯಿಯ ಚಿಕಿತ್ಸೆಗೆ ರೂ. 6.77 ಲಕ್ಷ ನೆರವು ನೀಡಿದ್ದಾರೆ. ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದ ಅವರು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದರು. ಈ ವಿಷಯ ಕೇಲುತ್ತಿದ್ದಂತೆ ವಿರಾಟ್ ಕೊಹ್ಲಿ ಸಹಾಯ ಮಾಡಿದ್ದಾರೆ.

ಮಾಜಿ ಸ್ಪಿನ್ ಬೌಲರ್ ಶಿವಲಾಲ್ ಯಾದವ್ ಅವರ ಸಹೋದರಿ ಹಾಗೂ ಬಿಸಿಸಿಐ ದಕ್ಷಿಣ ವಲಯ ಸಂಯೋಜಕಿ ಎನ್. ವಿದ್ಯಾ ಯಾದವ್ ಅವರು ಶ್ರಾವಂತಿ ನಾಯ್ಡು ಅವರ ತಾಯಿ ಅನುಭವಿಸುತ್ತಿದ್ದ ಆರ್ಥಿಕ ತೊಂದರೆಯ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ಅಲ್ಲದೇ, ಈ ಟ್ವೀಟ್ ನ್ನು ವಿರಾಟ್ ಕೊಹ್ಲಿಗೆ ಟ್ಯಾಗ್ ಮಾಡಿದ್ದರು. ಆಟ ಟ್ವೀಟ್ ಅನ್ನು ವಿರಾಟ್ ಕೊಹ್ಲಿಗೆ ಟ್ಯಾಗ್ ಮಾಡಿದ್ದರು.

ಸುಮನ್ ಅವರ ಕೋವಿಡ್ ಚಿಕಿತ್ಸೆಗೆಂದು ಅದಾಗಲೇ ರೂ. 16 ಲಕ್ಷ ರೂಪಾಯಿ ಖರ್ಚು ಮಡಲಾಗಿದೆ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಕೊಹ್ಲಿ ಅವರು ಹಣದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಹಾಡಹಗಲೇ ಗುಂಡು, ತುಂಡಿನ ಪಾರ್ಟಿ ನಡೆಸಿದ ಕಾಂಗ್ರೆಸ್ ನಾಯಕರ ಪುತ್ರರು!

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಮಹಾಮಾರಿಯ ಅಟ್ಟಹಾಸ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದಂತೆ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಆದರೆ, ಈ ಸಂದರ್ಭದಲ್ಲಿಯೇ ದಾವಣಗೆರೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಪಾರ್ಟಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಕೊಂಡಜ್ಜಿ ಗ್ರಾಮದಲ್ಲಿರುವ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭವನದಲ್ಲಿ ಹಾಡುಹಗಲೇ ಇವರು ಮದ್ಯದ ಪಾರ್ಟಿ ನಡೆಸಿದ್ದಾರೆ. ಜಿಲ್ಲಾ ಯೂತ್ ಕಾಂಗ್ರೆಸ್ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಅವರು ವಿಧಾನಪರಿಷತ್ ಸದಸ್ಯ ಮೋಹನ ಕೊಂಡಜ್ಜಿಅವರ ಸಹೋದರನ ಪುತ್ರ. ಇವರು ಎರಡು ದಿನಗಳ ಹಿಂದೆಯೇ ಈ ಪಾರ್ಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಈ ಪಾರ್ಟಿಯ ವಿಡಿಯೋ ಬಿಡುಗಡೆಯಾಗಿದೆ. ಈ ಪಾರ್ಟಿ ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಪೊಲೀಸರು ಮಾತ್ರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೊರೊನಾ; ಗುರುವಾರವೂ 469 ಜನರಿಗೆ ಸೋಂಕು, ಸೋಂಕಿಗೆ ಐವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಇವತ್ತು 469 ಜನರಿಗೆ ಸೋಂಕು ತಗುಲಿದೆ.

ಇವತ್ತಿನ ಜಿಲ್ಲಾಡಳಿತದ ವರದಿಯಂತೆ ಐದು ಜನ ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 469 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 19785 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -209, ಮುಂಡರಗಿ-68, ನರಗುಂದ-89 ರೋಣ-89, ಶಿರಹಟ್ಟಿ-11, ಹೊರಜಿಲ್ಲೆಯ-03 ಸೇರಿದಂತೆ 469 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 202 ಕ್ಕೇರಿದೆ.

ಲಕ್ಷ್ಮೇಶ್ವರ ನಿವಾಸಿ 66 ವರ್ಷದ ಮಹಿಳೆ ಮೇ -08 ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 15 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ಆಶ್ರಯ ಕಾಲೋನಿ ನಿವಾಸಿ 80 ವರ್ಷದ ಮಹಿಳೆ ಮೇ -14 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 16 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಮಾಡೊಳ್ಳಿ ನಿವಾಸಿ ಯಾವಗಲ್ ನಿವಾಸಿ 75 ವರ್ಷದ ಮಹಿಳೆ ಮೇ 14 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 17 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ನರಸಾಪೂರ ನಿವಾಸಿ 65 ವರ್ಷದ ಮಹಿಳೆ ಮೇ 09 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 18 ರಂದು ಮೃತಪಟ್ಟಿದ್ದಾರೆ.

ಲಕ್ಷ್ಮೇಶ್ವರ ನಿವಾಸಿ 40 ವರ್ಷದ ಮಹಿಳೆ ಜಿಮ್ಸ್ ಆಸ್ಪತ್ರೆಗೆ ಮೇ-13 ರಂದು ದಾಖಲಾಗಿದ್ದರು. ಇವರು ಮೇ -18 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 327 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 16281 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3302 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 192 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸ್ಯಾನಿಟೈಸರ್ ಉಪಯೋಗಿ ಮದ್ಯ ತಯಾರಿಸುತ್ತಿದ್ದ ಪಾಪಿಗಳ ಬಂಧನ

ವಿಜಯಸಾಕ್ಷಿ ಸುದ್ದಿ, ಚೆನ್ನೈ

ಸ್ಯಾನಿಟೈಸರ್‌ ಬಳಸಿ ಮದ್ಯ ತಯಾರಿಸುತ್ತಿದ್ದ ಗ್ಯಾಂಗ್‍ ನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಯಾನಿಟೈಸರ್ ಬಳಸಿ ಮದ್ಯ ತಯಾರಿಸುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕಡಲೂರು ಜಿಲ್ಲೆಯ ರಾಮನಾಥನ್ ಕುಪ್ಪಮ್‍ ನಲ್ಲಿ ಈ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವೇಳೆ ಸ್ಯಾನಿಟೈಸರ್ ನಿಂದ ಮದ್ಯ ತಯಾರಿಸುತ್ತಿದ್ದ 6 ಜನರನ್ನು ಬಂಧಿಸಿದ್ದಾರೆ.

ತಮಿಳುನಾಡಿನಲ್ಲಿ ಲಾಕ್ ಡೌನ್ ಘೋಷಣೆಯಾಗಿರುವುದರಿಂದ ಸರ್ಕಾರದ ಮದ್ಯದ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸದ್ಯ ಮೇ. 24ರ ವರಗೆ ತಮಿಳುನಾಡಿನಲ್ಲಿ ಸರ್ಕಾರ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದೆ. ಹೀಗಾಗಿಯೇ ಮದ್ಯ ಪ್ರಿಯರು ಪರದಾಡುವಂತಾಗಿದೆ.

ಬನಹಟ್ಟಿ ಗ್ರಾಮ ಸಂಪೂರ್ಣ ಲಾಕ್‌ಡೌನ್; ಕೊರೊನಾ ನಿಯಮ ಗಾಳಿಗೆ ತೂರಿ ಓಕಳಿ ಆಡಿದ ಗ್ರಾಮಸ್ಥರು

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಮಧ್ಯೆಯೂ ಓಕುಳಿ ಆಡಿರುವ ಕುರಿತು ವಿಜಯಸಾಕ್ಷಿ ವೆಬ್ ಸುದ್ದಿ ಕಂಡು ಎಚ್ಚೆತ್ತ ತಹಸೀಲ್ದಾರ್ ಹಾಗೂ ಅಧಿಕಾರಿಗಳು ನರಗುಂದ ತಾಲೂಕನ ಬನಹಟ್ಟಿ ಗ್ರಾಮಕ್ಕೆ ದೌಡಾಯಿಸಿ, ಸಭೆ ನಡೆಸಿದ್ದು, ಗ್ರಾಮವನ್ನು ಸಂಪೂರ್ಣ ಲಾಕ್‌ಡೌನ್ ಮಾಡಿದ್ದಾರೆ.

ನರಗುಂದ ತಾಲೂಕಿನ ಬನಹಟ್ಟಿ ಗ್ರಾಮಸ್ಥರು ಕೋವಿಡ್ ನಿಯಮ ಉಲ್ಲಂಘಿಸಿ ಓಕಳಿ ಆಡಿದ್ದರು. ದೇವರ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಈ ಗ್ರಾಮಸ್ಥರು ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಓಕಳಿ ಆಡಿದ್ದರು.

ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್

ಈ ಕುರಿತು ವಿಜಯಸಾಕ್ಷಿ ವೆಬ್‌ನಲ್ಲಿ ಸುದ್ದಿ ಪ್ರಸಾರವಾಗಿತ್ತು. ವರದಿ ಕಂಡು ಎಚ್ಚೆತ್ತುಕೊಂಡ ನರಗುಂದ ತಹಸೀಲ್ದಾರ್ ಅಮರವಾಡಗಿ ಅವರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಆನಂತರ ತಹಸೀಲ್ದಾರ ನೇತೃತ್ವದಲ್ಲಿ ಗ್ರಾ.ಪಂ. ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಗ್ರಾಮದ ಪ್ರತಿಯೊಬ್ಬರನ್ನೂ ಕೋವಿಡ್ ಟೆಸ್ಟ್ ಗೆ ಒಳಪಡಿಸುವಂತೆ ತಹಸೀಲ್ದಾರ್ ಸೂಚಿಸಿದ್ದಾರೆ. ಹೀಗಾಗಿ ತಾಲೂಕು ಆಡಳಿತ ಗ್ರಾಮದಲ್ಲಿ ಬೀಡು ಬಿಟ್ಟಿದೆ. ಇಡೀ ಗ್ರಾಮವನ್ನು ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು, ಓಕುಳಿ ಆಡಿದ ಎಲ್ಲರ ಮೇಲೂ ಕಾನೂನು ಕ್ರಮ ಜರುಗಿಸಲಾಗಿದೆ. ಗ್ರಾಮದ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಹಾಲು, ತರಕಾರಿ ಹಾಗೂ ವೈದ್ಯಕೀಯ ಸೇವೆ ಹೊರತುಪಡಿಸಿ ಊರಲ್ಲಿ ಯಾವುದೇ ಚಟುವಟಿಕೆ ಇರುವುದಿಲ್ಲ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಕಣ್ಣು ತಪ್ಪಿಸಿ ಮೂರ್ತಿ ಪ್ರತಿಷ್ಠಾಪನೆ
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿಯೇ ಈ ಗ್ರಾಮದ ಜನರು ಅಧಿಕಾರಿಗಳ ಕಣ್ಣು ತಪ್ಪಿಸಿ ಹನುಮಂತ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲ ಸೇರಿ ಓಕುಳಿ ಆಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಗ್ರಾಮಕ್ಕೆ ಬಂದು ಟಾಸ್ಕ್ ಫೋರ್ಸ್ ಸಮಿತಿಯ ಸಭೆ ನಡೆಸಲಾಗಿದೆ. ನಾಲ್ಕು ದಿನಗಳ ಕಾಲ ಗ್ರಾಮವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ

  • ಅಮರವಾಡಗಿ, ತಹಸೀಲ್ದಾರ್, ನರಗುಂದ

ನಾಲ್ಕು ದಿನ ಲಾಕ್‌ಡೌನ್
ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡದಂತೆ ಅಧಿಕಾರಿಗಳು ಸಾಕಷ್ಟು ತಿಳುವಳಿಕೆ ಮೂಡಿಸಿದ್ದರು ಬನಹಟ್ಟಿ ಗ್ರಾಮಸ್ಥರು ಆ ಕಾರ್ಯ ಮಾಡಿದ್ದಾರೆ. ಹೀಗಾಗಿ ಇಂದು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸದ್ಯ ಇಡೀ ಗ್ರಾಮದಲ್ಲಿ ನಾಲ್ಕು ದಿನ, ಅಂದರೆ ಭಾನುವಾರ ರಾತ್ರಿ 12ರ ವರೆಗೆ ಲಾಕ್ ಡೌನ್ ಹೇರಲಾಗಿದೆ.

  • ಚಂದ್ರಶೇಖರ ಕುರ್ತಕೋಟಿ, ತಾ.ಪಂ. ಇಓ, ನರಗುಂದ

ಡಾ. ರಾಜ್ ಅವರ ಯೋಗಗುರು, ನಿವೃತ್ತ ಡಿಐಜಿ ನಿಧನ

ವಿಜಯಸಾಕ್ಷಿ ಸುದ್ದಿ, ಕುಂದಗೋಳ

ಕನ್ನಡದ ವರನಟ ಡಾ| ರಾಜ್‌ಕುಮಾರ ಅವರ ಮೆಚ್ಚಿನ ಯೋಗಗುರು, ಕೆಎಸ್‌ಆರ್‌ಪಿ ನಿವೃತ್ತ ಡಿ.ಐ.ಜಿ. ಡಾ| ಹೊನ್ನಪ್ಪ ಎಫ್. ನಾಯ್ಕರ (85) ಮೇ 20ರಂದು ಬೆಂಗಳೂರಿನ ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಡಾ| ಹೊನ್ನಪ್ಪ ಅವರು, ಐದು ದಶಕಗಳಿಂದ ಬೆಂಗಳೂರಿನ ಜೆ.ಪಿ. ನಗರದಲ್ಲಿ ನೆಲೆಸಿದ್ದರು. ಕನಕಪುರ ರಸ್ತೆಯ ಬಿ.ಎಂ. ಕಾವಲ್‌ನಲ್ಲಿ ಮಹಾಯೋಗಕ್ಷೇತ್ರ ಸ್ಥಾಪಿಸಿ, ವರನಟ ಡಾ| ರಾಜ್‌ಕುಮಾರ ಸೇರಿದಂತೆ ಅನೇಕ ರಾಜಕಾರಣಿಗಳು, ನಟರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ಹಾಗೂ ಸಹಸ್ರಾರು ಜನರಿಗೆ “ಮುತ್ತಿನ ನಡುಮನೆ” ಮಾರ್ಗದ ಮೂಲಕ ಹಠಯೋಗದ ಸಾಧನೆ ಮಾಡಿಸಿದ್ದರು.

ಆಸ್ಪತ್ರೆ ಸೇರುವ ವರೆಗೂ ಪ್ರತಿ ಭಾನುವಾರ ವಾರಾಂತ್ಯದ ಯೋಗ ತರಬೇತಿ ನೀಡುತ್ತಿದ್ದರು. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಹಠಯೋಗ ಪರಂಪರೆಯವರಾಗಿದ್ದ ಹೊನ್ನಪ್ಪ, ಅರ್ಥಪೂರ್ಣವಾದ ಯೋಗ, ತತ್ವಪದಗಳನ್ನು ರಚಿಸಿ, ಸ್ವತಃ ಹಾಡಬಲ್ಲವರಾಗಿದ್ದರು. ಅವರ ವಿದ್ಯಾಗುರುವಾಗಿದ್ದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ| ವಿ.ಕೃ. ಗೋಕಾಕರು ಮೆಚ್ಚುಗೆ ನುಡಿಗಳನ್ನಾಡಿದ್ದರು.

ಕರ್ನಾಟಕ ಸರ್ಕಾರವು 1996ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2012ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದವು.

ಅಪ್ರಾಪ್ತೆ ಜೊತೆ ಚಕ್ಕಂದ: ಎಎಸ್ಐ ಸಸ್ಪೆಂಡ್

ಸಿಕ್ಕಿಬಿದ್ದು, ತಾಂಡಾ ಮುಖ್ಯಸ್ಥರ ತೀರ್ಮಾನದಂತೆ 2 ಲಕ್ಷ ರೂ. ದಂಡ ಪಾವತಿಸಿದ್ದ

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತೆ ಜೊತೆಗೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ, ಆ ತಪ್ಪಿಗೆ ದಂಡ ಕಟ್ಟಿದ ಎಎಸ್ಐ ಸಾಹೇಬರು ಈಗ ಸಸ್ಪೆಂಡ್ ಆಗಿದ್ದಾರೆ.
ಈ ಪ್ರಕರಣದ ರೂವಾರಿ ಯಾರು ಎಂಬುದಕ್ಕೆ ಈಗ ಪುಷ್ಟಿ ಸಿಕ್ಕಿದ್ದು, ಎಎಸ್ಐ ಸಾಹೇಬರ ಮೇಲಿನ ವಿಚಾರಣೆ ಬಾಕಿ ಇರಿಸಿ ಸಸ್ಪೆಂಡ್ ಮಾಡಿ ಆದೇಶ ಮಾಡಲಾಗಿದೆ.

ಇದನ್ನೂ ಓದಿ ಅಪ್ರಾಪ್ತೆ ಜೊತೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ ಎಎಸ್ಐ; ಎರಡು ಲಕ್ಷ ದಂಡ! 

ಮೇ 9ರಂದು ಗದಗ ಸಮೀಪದ ತಾಂಡಾವೊಂದರಲ್ಲಿ ಅಪ್ರಾಪ್ತೆ ಜೊತೆಗೆ ಚಕ್ಕಂದ ಆಡಲು ಹೋಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು. ತಾಂಡಾದ ಹಿರಿಯರು ಸಭೆ ಮಾಡಿ, ಎರಡು ಲಕ್ಷ ರೂ. ದಂಡ ವಿಧಿಸಿದ್ದರು.

ಮೇ 14ರಂದು ಸಮೀಪದ ಹೋಟೆಲ್ ಒಂದರಲ್ಲಿ ತಾಂಡಾದ ಹಿರಿಯರ ಕೈಗೆ ದಂಡದ ಮೊತ್ತವಾದ ಎರಡು ಲಕ್ಷ ರೂ. ಕೊಟ್ಟು ಕೈಮುಗಿದು ಬಂದಿದ್ದರು. ಈ ಇಡೀ ಪ್ರಕರಣದ ಕುರಿತು ತಾಂಡಾದ ಬಲ್ಲ ಮೂಲಗಳಿಂದ ಮಾಹಿತಿ ಪಡೆದು ವಿಜಯಸಾಕ್ಷಿ ವೆಬ್ ಪೋರ್ಟಲ್ ಹಾಗೂ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.

ಇದನ್ನೂ ಓದಿ ದಂಡ ಕೊಟ್ಟು ಕೈ ಮುಗಿದ ಎಎಸ್‌ಐ! ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದ ಪೊಲೀಸಪ್ಪನ ಮತ್ತೊಂದು ಮುಖ ಬಯಲು!

ಮೇ 16ರ ವೆಬ್ ಪೋರ್ಟಲ್ ಹಾಗೂ ಮೇ 17 ಪತ್ರಿಕೆಯಲ್ಲಿ ಬಂದ ವರದಿ ಆಧರಿಸಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್ ಅವರ ಶಿಫಾರಸು ಹಿನ್ನೆಲೆಯಲ್ಲಿ ಎಸ್ಪಿ ಯತೀಶ್ ಎನ್. ಅವರು, ಶಹರ ಠಾಣೆಯ ಎಎಸ್ಐ ಎಸ್.ಡಿ. ಚವ್ಹಾಣ ಎಂಬುವವರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಆ ಮೂಲಕ ತಾಂಡಾದ ಹೋರಿಗೆ ಮೂಗುದಾರ ಬಿದ್ದಿದೆ.

ಶಿರಹಟ್ಟಿಯಲ್ಲಿ 100 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರ ಪ್ರಾರಂಭಿಸಿದ ತಹಸೀಲ್ದಾರ್ ಮಜ್ಜಿಗಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಪಟ್ಟಣದ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 100 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ತಹಶೀಲ್ದಾರ್ ಜೆ. ಬಿ. ಮಜ್ಜಿಗಿ ಪ್ರಾರಂಭಿಸಿದರು. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಕೋವಿಡ್ -19 ರ ನೆರವಿಗೆ ಬರುವ ದೃಷ್ಟಿಯಿಂದ ಪಟ್ಟಣದ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 100 ಹಾಸಿಗೆ ಉಳ್ಳ ಬೆಡ್ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸೋಂಕಿತರಿಗೆ ಇಲ್ಲಿ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಕೊಳ್ಳಲಾಗಿದೆ. ಊಟ ಉಪಹಾರದ ವ್ಯವಸ್ಥೆಗೂ ಸಹ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ತಹಸೀಲ್ದಾರ ಮಜ್ಜಿಗಿ ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪರಮೇಶ್ವರ ಮಾತನಾಡಿ, ಕೋವಿಡ್ ಸೋಂಕಿತರ ನೆರವಿಗೆ ಜಿಲ್ಲಾಡಳಿತ ಶಿರಹಟ್ಟಿ ಪಟ್ಟಣದಲ್ಲಿ 100 ಬೆಡ್ ಗಳ ವ್ಯವಸ್ಥೆಯನ್ನು ಕಲ್ಪಿಸಿರುವುದು ಸ್ವಾಗತಾರ್ಹ ಎಂದರು.
ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಉಪಸ್ಥಿತರಿದ್ದರು.

error: Content is protected !!