Home Blog Page 3270

ಫೇಸ್‌ಬುಕ್‌ ತಾಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್: ಪ್ರಕರಣ ದಾಖಲು

ಅಭಿವೃದ್ಧಿ ಆಗದೇ ಇದ್ದರೂ ಪರವಾಗಿಲ್ಲ…….ನಮಗೆ ಧರ್ಮ ರಕ್ಷಣೆ ಮುಖ್ಯ, ಧರ್ಮ ಉಳಿಯಬೇಕಾದರೆ ಬರಬೇಕು ಬಿಜೆಪಿ……

ವಿಜಯಸಾಕ್ಷಿ ಸುದ್ದಿ, ರೋಣ

ಚುನಾವಣಾ ಅಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೇ ವ್ಯಕ್ತಿಯೊಬ್ಬರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪಕ್ಷವೊಂದರ ಪರವಾದ ಪೋಸ್ಟ್‌ ಹಾಕಿದ ಹಿನ್ನೆಲೆಯಲ್ಲಿ, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾರ್ಚ್.8ರಂದು ಆರೋಪಿ ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮದ ಹನಮಪ್ಪ ಹಟ್ಟಿಮನಿ ಈತನು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ‘ಅಭಿವೃದ್ಧಿ ಆಗಿದೆ ಇದ್ದರೂ ಪರವಾಗಿಲ್ಲ, ನಮಗೆ ಧರ್ಮ ರಕ್ಷಣೆ ಮುಖ್ಯ. ಧರ್ಮ ಉಳಿಯೋಕೆ ಬರಬೇಕು ಬಿಜೆಪಿʼ ಎಂದು ಪೋಸ್ಟ್‌ ಮಾಡಿದ್ದರು.

ಈ ಬಗ್ಗೆ ಫ್ಲೈಯಿಂಗ್‌ ಸ್ಕ್ವಾಡ್‌ ಆಗಿ ಕಾರ್ಯನಿವಹಿಸುತ್ತಿರುವ ಮಂಜುನಾಥ ಮೇಟಿ ಇವರು ಸದರಿಯವರ ಮೇಲೆ ಕ್ರಮ ಜರುಗಿಸುವಂತೆ ತಿಳಿಸಿದ್ದು, ರೋಣ ಪೊಲೀಸರು ಕಲಂ: 125, ಆರ್.ಪಿ. ಕಾಯ್ದೆ 1951ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಂಡಾಯ ಅಭ್ಯರ್ಥಿಯಾಗಿ ರಾಮಣ್ಣ ಲಮಾಣಿ ಕಣಕ್ಕೆ; ಹಾಲಿ-ಮಾಜಿ ಒಂದಾಗಲಿದ್ದಾರೆಯೇ ?

ಟಿಕೆಟ್ ವಂಚಿತರ ನಿಗೂಢ ನಡೆ……?

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ವಂಚಿತ ಹಾಲಿ ಶಾಸಕ ರಾಮಣ್ಣ ಲಮಾಣಿ ಬಹುತೇಕ ಬಂಡಾಯವಾಗಿ ಕಣ್ಣಕ್ಕಿಳಿಯುವ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಬುಧವಾರ ಶಾಸಕ ರಾಮಣ್ಣ ಲಮಾಣಿ ಅವರ ಮನೆಯ ಮುಂದೆ ಜಮಾಯಿಸಿದ ಅವರ ಅಭಿಮಾನಿ ಬಳಗ ಮತ್ತು ಕಾರ್ಯಕರ್ತರು, ಶಾಸಕ ರಾಮಣ್ಣ ಲಮಾಣಿಯವರಿಗೆ ಟಿಕೆಟ್ ನೀಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಶಾಸಕರು ಯಾವುದೇ ಕಾರಣಕ್ಕೂ ಚುನಾವಣೆ ಕಣದಿಂದ ಹಿಂದೆ ಸರಿಯುವುದು ಬೇಡ, ಕಾರ್ಯಕರ್ತರು ಮತದಾರರು ನಿಮ್ಮೊಂದಿಗಿದ್ದೇವೆ. ನೀವು ಕಣಕ್ಕಿಳಿಯಿರಿ ಬಹುಮತದಿಂದ ಆಯ್ಕೆ ಮಾಡುತ್ತೇವೆ ಎಂದು ಘೋಷಣೆ ಕೂಗಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಾಮಣ್ಣ ಲಮಾಣಿ, ಪಕ್ಷಕ್ಕಾಗಿ ತನುಮನಧನ ಸಮರ್ಪಿಸಿದ್ದೇನೆ. ಪಕ್ಷದ ಎಲ್ಲ ಹಿರಿಯ ನಾಯಕರೂ ನನಗೆ ಟಿಕೆಟ್ ಕೊಡುತ್ತೇನೆ ಎಂಬ ಬಲವಾದ ಭರವಸೆ ನೀಡಿದ್ದರಿಂದ ಇತ್ತೀಚಿನ ದಿನಗಳಲ್ಲಿ ಪಕ್ಷದ ಎಲ್ಲ ಕಾರ್ಯಕ್ರಮಗಳ ಖರ್ಚುವೆಚ್ಚ ನಿಭಾಯಿಸಿದ್ದೇನೆ. ಆದರೆ ನನ್ನ ಮತ್ತು ಕ್ಷೇತ್ರದ ಇತರೆಲ್ಲ ಆಕಾಂಕ್ಷಿಗಳನ್ನು ಹೊರತುಪಡಿಸಿ ಬೇರೆ ತಾಲೂಕಿನ ಆಕಾಂಕ್ಷಿಗೆ ಮಣೆ ಹಾಕಿರುವುದು ಬಹಳಷ್ಟು ನೋವಾಗಿದೆ. ಈ ನಿಟ್ಟಿನಲ್ಲಿ ಟಿಕೆಟ್ ವಂಚಿತ ಎಲ್ಲ ಆಕಾಂಕ್ಷಿಗಳು, ಅಭಿಮಾನಿ/ಕಾರ್ಯಕರ್ತರ ಸಭೆ ಮಾಡಿ ಒಮ್ಮತದ ಪಕ್ಷೇತರ ಅಥವಾ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಟಿಕೆಟ್ ವಂಚಿತರ ನಿಗೂಢ ನಡೆ!

ಟಿಕೆಟ್ ಘೋಷಣೆಯಾಗುವ ಮೊದಲು ಲಕ್ಷ್ಮೇಶ್ವರದ ದೇವಸ್ಥಾನ(ದೇವರ ಸನ್ನಿಧಿ)ದಲ್ಲಿ ಬಿಜೆಪಿ ಪಕ್ಷದ ಎಲ್ಲ ಆಕಾಂಕ್ಷಿಗಳು ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಭಿನ್ನಾಭಿಪ್ರಾಯ ಬದಿಗೊತ್ತಿ ಒಮ್ಮತದಿಂದ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಪರಸ್ಪರ ಕಂಕಣಕಟ್ಟಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಇದೀಗ ಅದೆಲ್ಲ ಗಾಳಿಗೆ ತೂರಿ ವರ್ತಿಸುತ್ತಿರುವುದು ರಾಜಕೀಯದಲ್ಲಿ ಆಣೆ-ಪ್ರಮಾಣಕ್ಕೆ ಬೆಲೆ ಇಲ್ಲ ಎಂಬುದನ್ನು ಸಾಕ್ಷೀಕರಿಸುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಟಿಕೆಟ್ ವಂಚಿತ ಆಕಾಂಕ್ಷಿಗಳೆಲ್ಲರೂ ಸಭೆ ಸೇರಿ ನಿರ್ಣಯವೊಂದನ್ನು ಕೈಗೊಳ್ಳುತ್ತಾರೆ ಎಂಬ ಮಾತುಗಳು ತೀವ್ರ ಕತೂಹಲ ಮೂಡಿಸಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದ ಶಾಸಕ ರಾಮಣ್ಣ ಲಮಾಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಭೀಮಸಿಂಗ್ ರಾಥೋಡ, ಗುರುನಾಥ ದಾನಪ್ಪನವರ, ಎಸ್‌ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪೂರ್ಣಾಜಿ ಖರಾಟೆ, ಸಣ್ಣೀರಪ್ಪ ಹಳೆಪ್ಪನವರ ಅಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರು ಗುರುವಾರ ಸಭೆ ಸೇರಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿ ಸ್ಪಷ್ಟ ನಿರ್ಧಾರ ಪ್ರಕಟಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.

ರಾಮಣ್ಣ-ರಾಮಕೃಷ್ಣ ಒಂದಾಗಲಿದ್ದಾರೆಯೇ ?

ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ-ಶತ್ರುಗಳೂ ಅಲ್ಲ ಎಂಬ ಮಾತಿನಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಇಬ್ಬರೂ ಸೇರಿ ಇತರೇ ಟಿಕೆಟ್ ವಂಚಿತ ಆಕಾಂಕ್ಷಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತೃಪ್ತ/ಆಕ್ಷಾಂಕ್ಷಿಗಳ ದೊಡ್ಡ ಕೂಟವನ್ನೇ ರಚಿಸಿ ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ಕೊಡುವ ಬಗ್ಗೆ ಒಂದು ಸುತ್ತಿನ ಮಾತುಕತೆಯೂ ನಡೆದಿರುವ ಬಗ್ಗೆ ಕೇಳಿ ಬರುತ್ತಿರುವುದು ಕುತೂಹಲ ಮೂಡಿಸಿದೆ.

ವಾಟ್ಸಪ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್:‌ ಇಬ್ಬರ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ತಮ್ಮ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕರಿಂದ ವಾಟ್ಸಪ್‌ ಮೂಲಕ ಐಪಿಎಲ್‌ ಟಿ-20 ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ಇಬ್ಬರು ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ಗದಗ ಜವುಳಗಲ್ಲಿಯ ಅಮಿತ ಪರಶುರಾಮ ಪೂಜಾರಿ ಹಾಗೂ ಮಹೇಂದ್ರಕರ್‌ ಸರ್ಕಲ್‌ ಬಳಿಯ ಪ್ರಸನ್ನ ಶ್ರೀರಂಗಸಾ ಕಬಾಡಿ ಇವರು ಕೃಷ್ಣಾ ಟಾಕೀಸ್‌ ಹತ್ತಿರದ ರಾಹುಲ್‌ ಕ್ರಿಯೇಶನ್‌ ರೆಡಿಮೇಡ್‌ ಬಟ್ಟೆ ಅಂಗಡಿಯ ಬಳಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು.

ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ಆರ್‌ಸಿಬಿ-ಕೆಕೆಆರ್‌ ತಂಡಗಳ ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯದ ಫಲಿತಾಂಶದ ಮೇಲೆ ಸಾರ್ವಜನಿಕರಿಂದ ವಾಟ್ಸಪ್‌ ಮೂಲಕ ತಂಡಗಳ ಹೆಸರು ಪಡೆದು ಫೋನ್‌ಪೇ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಆರೋಪಿತರಿಂದ ಮೊಬೈಲ್‌ ಹಾಗೂ 14,500 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಗದಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಕೆಪಿ ಯಾಕ್ಟ್- 2021 (u/s-78 (1)(a) (vi) ) 0024/2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಚುನಾವಣಾ ಕರ್ತವ್ಯ ಲೋಪ; ಜೆ.ಇ. ಮಹೇಶ ರಮಾವತ್ ಅಮಾನತು

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಲ್ಲಾಪುರ ಉಪವಿಭಾಗದ ಎಂ.ಆರ್.ಬಿ.ಸಿ. ಜೆ.ಇ. ಮಹೇಶ ರಮಾವತ ಅವರು ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರಿ, ಕರ್ತವ್ಯಲೋಪ ಮಾಡಿರುವ ಹಿನ್ನಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಆದೇಶ ಹೊರಡಿಸಿದ್ದಾರೆ.

ಮಹೇಶ ರಮಾವತ ಅವರನ್ನು 67-ರೋಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಜೇಂದ್ರಗಡ ತಾಲೂಕಿನ ಗಜೇಂದ್ರಗಡ-ರೋಣ ರಸ್ತೆ, ಪುರ್ತಗೇರಿ ಕ್ರಾಸ್ ಚೆಕ್ ಪೋಸ್ಟನಲ್ಲಿ ತನಿಖಾ ಕಾರ್ಯವನ್ನು ನಿರ್ವಹಿಸಲು ಆದೇಶಿಸಲಾಗಿತ್ತು.

ಸದರಿಯವರು ನಿಗದಿತ ಆದೇಶದಂತೆ ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾಗಿ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿಸಿದರ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 134ರ ಉಲ್ಲಂಘನೆ ಮಾಡಿದ ಮಹೇಶ ರಮಾವತ ಅವರನ್ನು ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

ಅಮಾನತ್ತು ಅವಧಿಯಲ್ಲಿ ತಮ್ಮ ಕಚೇರಿ ಮುಖ್ಯಸ್ಥರ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದೆಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್ ಆದೇಶದಲ್ಲಿ ತಿಳಿಸಿದ್ದಾರೆ.

ದಾಖಲೆ ಇಲ್ಲದೆ ಬಟ್ಟೆಗಳ ಸಾಗಾಟ; ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮೌಲ್ಯದ ಬಟ್ಟೆ ಜಪ್ತಿ

ಬಿಂಕದಕಟ್ಟಿ, ದುಂದೂರ ಚೆಕ್ ಪೋಸ್ಟ್ ನಲ್ಲಿ ಪತ್ತೆ……

ವಿಜಯಸಾಕ್ಷಿ ಸುದ್ದಿ, ಗದಗ

ಎರಡು ಪ್ರತ್ಯೇಕ ಪ್ರಕರಣದಲ್ಲಿ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳನ್ನು ಸೀಜ್ ಮಾಡಲಾಗಿದೆ.

ಯಾವುದೇ ದಾಖಲೆ ಇಲ್ಲದೆ ರೆಡಿಮೇಡ್ ಬಟ್ಟೆಗಳನ್ನು ಸಾಗಾಟ ಮಾಡುತ್ತಿದ್ದಾಗ ಬಿಂಕದಕಟ್ಟಿಯ ಜೀವನ ರಕ್ಷಾ ಬಳಿಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.

1ಲಕ್ಷ 75 ಸಾವಿರ ರೂ. ಮೌಲ್ಯದ ಬಟ್ಟೆಗಳನ್ನು ಸೀಜ್ ಮಾಡಿ, ಮೂರು ಜನರ ವಿರುದ್ಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಗದಗ ತಾಲೂಕಿನ ದುಂದೂರ ‌ಚೆಕ್ ಪೋಸ್ಟ್ ನಲ್ಲಿ 3ಲಕ್ಷ 72 ಸಾವಿರದ 460 ರೂ. ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ.

ಸೋಮವಾರ ಮುಂಜಾನೆ ಹುಬ್ಬಳ್ಳಿಯಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕಡೆ ಹೊರಟಾಗ ದುಂದೂರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಿದಾಗ ಈ ರೆಡಿಮೇಡ್ ಬಟ್ಟೆಗಳು ಪತ್ತೆಯಾಗಿವೆ.

ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆ; ನಗರಸಭೆ ಅಧ್ಯಕ್ಷೆ ಉಷಾ ದಾಸರ ವಿರುದ್ಧ ಕೇಸ್

ದಾರ್ಮಿಕ ಆಚರಣೆ ದುರ್ಬಳಕೆ ಆರೋಪ…..

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯ ವಿಧಾನಸಭೆಗೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ದಾರ್ಮಿಕ ಸ್ಥಳಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಗಳನ್ನು ಮಾಡದಂತೆ ಚುನಾವಣಾ ಆಯೋಗ ಕಾನೂನು ರೂಪಿಸಿದೆ.

ಮೊನ್ನೆ ನಡೆದ ಗದಗನ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದಲ್ಲಿ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ, ಬಿಜೆಪಿ ಪಕ್ಷದ ಉಷಾ ಮಹೇಶ್ ದಾಸರ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂದು ತೇರಿಗೆ ಎಸೆಯುವ ಬಾಳೆ ಹಣ್ಣಿನ ಮೇಲೆ ಶಿರಹಟ್ಟಿ ಕ್ಷೇತ್ರದ ಶಾಸಕಿ ಉಷಾ ಮಹೇಶ್ ದಾಸರ ಅಂತ ಬರೆದು, ಅದರ ಪೋಟೋ ತಗೆದು ರಾಜಕೀಯ ಪ್ರಚಾರ ಮಾಡಿ, ದಾರ್ಮಿಕ ಆಚರಣೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೋಟೋ…

ಅದಷ್ಟೆ ಅಲ್ಲದೆ ಆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಇದನ್ನು ನೋಡಿದ ಸಾರ್ವಜನಿಕರು ಲೈಕ್ ಹಾಗೂ ಕಾಮೆಂಟ್ ಮಾಡಿದ್ದರಿಂದ ಉಷಾ ಮಹೇಶ್ ದಾಸರ ಇವರು, ನನ್ನನ್ನು ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರ ಶಾಸಕಿಯನ್ನಾಗಿ ನೋಡಲು ನಿತ್ಯ ಪ್ರಾರ್ಥಿಸುತ್ತಿರುವ ಜನರ ಆತ್ಮಾಭಿಮಾನಕ್ಕೆ, ಪ್ರೀತಿಗೆ ತಲೆಬಾಗಿ ನಮಿಸುವೆ. ನಿನ್ನೆಯ ದಿವಸ ತೋಂಟದಾರ್ಯ ಮಠದ ಜಾತ್ರೆಯ ಸಂದರ್ಭದ ಈ ಸನ್ನಿವೇಶ ತಿಳಿದು/ಕಂಡು ನನಗೆ ಭಾವೋಧ್ವೇಗದಲ್ಲಿ ಪದಗಳೆ ಹೊರಡುತ್ತಿಲ್ಲಾವೆಂದು ಧನ್ಯವಾದವನ್ನು ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ವಿವರಿಸಲಾಗಿದೆ.

ಈ ಕುರಿತು ಗದಗನ ಚುನಾವಣಾ ವಿಚಕ್ಷಣ ದಳದ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸಂತೋಷ ತಂದೆ ನೀಲಕಂಠ ಹಂದಿಗನೂರ ಎಂಬುವರು ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

RELIGIOUS INSTITUTIONS (PREVENTION OF MISUSE) ACT 1988(u/s-7 ಅಡಿಯಲ್ಲಿ c/r no-0035/2023 ಪ್ರಕರಣ ದಾಖಲಾಗಿದೆ.

ಟಿಕೆಟ್ ಕೊಟ್ರೆ ಸರಿ…ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ; ಸ್ವಾಭಿಮಾನ ಸಮಾವೇಶದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಘೋಷಣೆ

ಅಭಿಮಾನಿಗಳಿಂದ ಕಂಬಳಿ ಹಾಗೂ ಕುರಿಗಳ ಕಾಣಿಕೆ……

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿ ಕ್ಷೇತ್ರದ ಸ್ವಾಭಿಮಾನಕ್ಕಾಗಿ ಹೋರಾಟ ಮಾಡಲಾಗುವುದು, ಕಾರ್ಯಕರ್ತರ, ಅಭಿಮಾನಿಗಳ ನಿರ್ಧಾರಕ್ಕೆ ಬದ್ದನಾಗಿದ್ದು, ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ರೆ ಸರಿ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವದಾಗಿ ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಘೋಷಿಸಿದರು.

ಅವರು, ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲೂ ತಮ್ಮ ಹೆಸರು ಪ್ರಕಟವಾಗದ ಹಿನ್ನೆಲೆಯಲ್ಲಿ
ಶಿರಹಟ್ಟಿ ಪಟ್ಟಣದ ಹೊರವಲಯದಲ್ಲಿ ಸೇರಿದ್ದ ಬೆಂಬಲಿಗರ ಹಾಗೂ ಅಭಿಮಾನಿಗಳ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದರು.

ಇದಕ್ಕೂ ಮೊದಲು ಸಮಾವೇಶದಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದನ್ನು ನೋಡಿ ಭಾವುಕರಾದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಕಣ್ಣೀರು ಹಾಕುತ್ತಾ ವೇದಿಕೆ ಏರಿದರು.

ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮಾಜಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಸಾವಿರಾರು ಅಭಿಮಾನಿಗಳು ಸೇರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರು, ಅಭಿಮಾನಿಗಳು, ಕ್ಷೇತ್ರದ ಹೊರಗಿನವರು ಅಭ್ಯರ್ಥಿಗಳಿಗೆ ಟಿಕೆಟ್ ಬೇಡ, ರಾಯಚೂರು ಮೂಲದ ಅಂಬಣ್ಣ ಹಾಗೂ ಗದಗ ತಾಲೂಕಿನ ಸುಜಾತ ದೊಡ್ಡಮನಿಗೂ ಟಿಕೆಟ್ ಕೊಡೋದು ಬೇಡ ಎಂದು ಒತ್ತಾಯಿಸಿದರು. ಅಷ್ಟೇ ಅಲ್ಲದೆ ಶಿರಹಟ್ಟಿ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಲು ರಾಮಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಟಿಕೆಟ್ ನೀಡದಿದ್ದರೆ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದರು. ಹೈ ಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಮೂಲಕ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಬಂಡಾಯ ಹೈ ಕಮಾಂಡ್ ಗೆ ನುಂಗಲಾರದ ತುತ್ತಾಗಿ ಪರಿಣಿಮಿಸಬಹುದು.

ಇದೇ ಸಂದರ್ಭದಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುಲು ಅನೇಕ ಅಭಿಮಾನಿಗಳು ಕಂಬಳಿ ನೀಡಿ, ಕುರಿಗಳನ್ನು ಹಾಗೂ ಲಕ್ಷಾಂತರ ರೂ. ಹಣಕಾಸಿನ ನೆರವು ನೀಡಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಬಿಜೆಪಿ ಮುಖಂಡರ ವಿರುದ್ಧ ಕೇಸ್

ಶಾಸಕರಾದ ರಾಮಣ್ಣ ಲಮಾಣಿ, ಪ್ರದೀಪ್ ಶೆಟ್ಟರ್, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಸೇರಿ ಹಲವರ ವಿರುದ್ಧ ಪ್ರಕರಣ…….

ಪಕ್ಷದ ಮುಖಂಡರಲ್ಲಿ ಎಚ್ಚರಿಕೆ ಮೂಡಿಸಿದ ಮೊದಲ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ಪಕ್ಷದ ಕಾರ್ಯ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ವಿಪ ಸದಸ್ಯ ಪ್ರದೀಪ ಶೆಟ್ಟರ, ಶಾಸಕ ರಾಮಣ್ಣ ಲಮಾಣಿ ಸೇರಿ ಹಲವರ ಮೇಲೆ ಕಾನೂನು ಕ್ರಮಕ್ಕಾಗಿ ದೂರು ಸಲ್ಲಿಸಲಾಗಿದೆ.

ಏ.೬ರಂದು ಗುರುವಾರದಂದು ಪ್ರದೀಪ ಶೆಟ್ಟರ, ಶಾಸಕ ರಾಮಣ್ಣ ಲಮಾಣಿ ನೇತೃತ್ವದಲ್ಲಿ ಸೇರಿದ್ದ ಆಕಾಂಕ್ಷಿಗಳು, ಕಾರ್ಯಕರ್ತರು ಬಿಜೆಪಿ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಅಲ್ಲದೆ, ಇದೇ ಸಂದರ್ಭದಲ್ಲಿ ಪಕ್ಷದಲ್ಲಿ ಉಂಟಾದ ಗೊಂದಲ ಬಗೆಹರಿಸಲು ಆಣೆ ಪ್ರಮಾಣ ಮಾಡಿಸಿದ್ದಾರೆ. ಈ ವಿಷಯ ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಪ್ರಸಾರಗೊಂಡ ಹಿನ್ನೆಲೆಯಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಆಗಿರುವ ಶಂಕರ ಹುಲ್ಲಮ್ಮನವರ ದೂರು ದಾಖಲಿಸಿದ್ದಾರೆ.

ಈ ವೇಳೆ ಹಾಜರಿದ್ದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಡಾ.ಚಂದ್ರು ಲಮಾಣಿ, ಗುರುನಾಥ ದಾನಪ್ಪನವರ, ಭೀಮಸಿಂಗ್ ರಾಥೋಡ, ಗದಗ ನಗರಸಭೆ ಅಧ್ಯಕ್ಷೆ ಉಷಾ ದಾಸರ ಮೇಲೆ ಲಕ್ಷ್ಮೇಶ್ವರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಇದೇ ಮೊದಲ ಬಾರಿ ಇಂಥದೊಂದು ವಿಶೇಷ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದು ಜಿಲ್ಲೆಯಲ್ಲಿ ಬೇರೆ ಬೇರೆ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಎಚ್ಚರಿಕೆಯ ಘಂಟೆ ಮೊಳಗಿಸಿದೆ.

ಅಬಕಾರಿ ಪೊಲೀಸರ ಕಾರ್ಯಾಚರಣೆ; ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ, ಕಾರು ಜಪ್ತಿ

ವಿಜಯಸಾಕ್ಷಿ ಸುದ್ದಿ, ಗದಗ

ಅಕ್ರಮವಾಗಿ ಕಾರಿನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದಾಗ ಅಬಕಾರಿ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಮದ್ಯ ಜಪ್ತಿ ‌ಮಾಡಿ‌, ಆರೋಪಿಯನ್ನು ಬಂಧಿಸಿದ ಘಟನೆ ಭಾನುವಾರ ಮುಂಜಾನೆ ಜರುಗಿದೆ.

ಗದಗ ತಾಲೂಕಿನ ಮುಳಗುಂದ ರಸ್ತೆಯ ಕಣವಿ ಕ್ರಾಸ್ ಬಳಿ ಅಬಕಾರಿ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ಆರೋಪಿ ಮುಳಗುಂದ ಪಟ್ಟಣದ ವಿದ್ಯಾನಗರ‌ ನಿವಾಸಿ ಮಹಾದೇವಪ್ಪ ಮಲ್ಲಪ್ಪ ಕಣವಿ ಎಂಬುವರು, ‌ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದಾಗ 33,724 ರೂ. ಮೌಲ್ಯದ 86.4 ಲೀಟರ್ ಮದ್ಯ ಸೀಜ್ ಮಾಡಲಾಗಿದೆ.

ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 11,14 ಹಾಗೂ 15ರ ಉಲ್ಲಂಘನೆಯಾಗಿದ್ದು, ಕಲಂ 32(1),38(ಎ) ಮತ್ತು 43 ರ ಅನ್ವಯ ಆರೋಪಿ ಮಹಾದೇವಪ್ಪ ಮಲ್ಲಪ್ಪ ಕಣವಿ ಎಂಬುವರನ್ನು ಬಂಧಿಸಿ, ಕಾರು ಕೂಡ ಸೀಜ್ ಮಾಡಲಾಗಿದೆ.

ಅಬಕಾರಿ ಡಿಸಿ ಭರತೇಶ ಮಾರ್ಗದರ್ಶನದಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಶೈನಾಜ್ ಬೇಗಂ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿದ್ದಪ್ಪ ಹಿರೇತನದ ಹಾಗೂ ಆರ್ ಕೆ.ಗೌಡರ್ ಈ ಕಾರ್ಯಾಚರಣೆ ನಡೆಸಲಾಗಿದೆ.

ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ; ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 100 ಗ್ಯಾಸ್‌ ಸ್ಟವ್‌ ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಗದಗ

ಯಾವುದೇ ಸೂಕ್ತ ದಾಖಲೆಗಳಿಲ್ಲದೇ ವಾಹನವೊಂದರಲ್ಲಿ ಸಾಗಿಸುತ್ತಿದ್ದ 100 ಗ್ಯಾಸ್‌ ಸ್ಟವ್‌ಗಳನ್ನು ಚೆಕ್‌ಪೋಸ್ಟ್‌ ಸಿಬ್ಬಂದಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.

ಆರೋಪಿತರಾದ ಉತ್ತರಪ್ರದೇಶ ಮೂಲದ, ಹಾಲಿ ಗದುಗಿನ ಮಹೇಂದ್ರಕರ್‌ ಸರ್ಕಲ್‌ ಬಳಿ ವಾಸವಿರುವ ಖುರ್ಶಿದ್‌ ಶರೀಫ್‌ ಶಹಪೂರ ಹಾಗೂ ಹುಬ್ಬಳ್ಳಿ ನಿವಾಸಿ ಬಾಬಜಾನ್‌ ಮಹ್ಮದಗೌಸ್‌ ಮಿಶ್ರಿಕೋಟಿ ಇವರಿಬ್ಬರೂ ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ತಮ್ಮ ಅಶೋಕ ಲೈಲ್ಯಾಂಡ್‌ ದೋಸ್ತ್‌ ವಾಹನದಲ್ಲಿ ಬರುತ್ತಿರುವಾಗ ಹುಲಕೋಟಿಯ ದುಂದೂರು ಕ್ರಾಸ್‌ ಚೆಕ್‌ಪೋಸ್ಟ್‌ನಲ್ಲಿ ವಾಹನ ನಿಲ್ಲಿಸಿ ಪರಿಶೀಲಿಸಿದಾಗ, 1,20,000 ಬೆಲೆಬಾಳುವ 100 ಗ್ಯಾಸ್‌ ಸ್ಟವ್‌ಗಳು ಸಿಕ್ಕಿವೆ.

ಈ ಕುರಿತು ದಾಖಲಾತಿಗಳ ಬಗ್ಗೆ ಕೇಳಿದಾಗ ಆರೋಪಿತರು ಸಮರ್ಪಕ ಉತ್ತರ ನೀಡದೇ, ಸೂಕ್ತ ದಾಖಲೆಗಳನ್ನೂ ಒದಗಿಸದೇ ಇರುವುದರಿಂದ ಸದರಿ ವಾಹನದೊಂದಿಗೆ ಗ್ಯಾಸ್‌ ಸ್ಟವ್‌ಗಳನ್ನು ವಶಪಡಿಸಿಕೊಂಡು, ಕೆ.ಪಿ. ಕಾಯ್ದೆ 98ರ ಪ್ರಕಾರ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

error: Content is protected !!