Home Blog Page 33

ಸಂಬಂಧಿಕರ ಮನೆಗೆ ಸ್ನೇಹಿತರನ್ನು ಕಳುಹಿಸಿ ದರೋಡೆ! ಇಬ್ಬರು ಅರೆಸ್ಟ್

0

ಬೆಂಗಳೂರು: ಸಂಬಂಧಿಕರ ಮನೆಗೆ ಸ್ನೇಹಿತರನ್ನು ಕಳುಹಿಸಿ ದರೋಡೆ ಮಾಡಿಸಿದ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೊಹಮ್ಮದ್ ಶಬಾಜ್ ಖಾನ್ ಹಾಗೂ ಸೂರಜ್ ಬಿ.ಎನ್ ಅಕ್ಬರ್ ಬಂಧಿತರಾಗಿದ್ದು,

ಅಫ್ರೀದ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಸಮೀರ್ ಎಂಬ ಸಂಬಂಧಿಕನಿಗೆ ಆಸ್ತಿ ಸಂಬಂಧ ಹಣ ಬಂದಿರುವ ಮಾಹಿತಿ ತಿಳಿದಿದ್ದ ಅಫ್ರೀದ್, ತನ್ನ ಸ್ನೇಹಿತರನ್ನು ಕಳುಹಿಸಿ ಮನೆಗೆ ನುಗ್ಗಿಸಿ ರಾಬರಿ ಮಾಡಿಸಿದ್ದಾನೆ.

ಸಮೀರ್ ಪತ್ನಿ ಒಬ್ಬರೇ ಇದ್ದ ವೇಳೆ ಮಚ್ಚು ತೋರಿಸಿ ಬೆದರಿಸಿ ಚಿನ್ನ ಹಾಗೂ 4 ಲಕ್ಷ ನಗದು ಕದ್ದಿದ್ದಾರೆ. ಬಂಧಿತರಿಂದ 2.96 ಲಕ್ಷ ನಗದು ಮತ್ತು ಬಂಗಾರ ಸೇರಿ 7.4 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರೇಮಿಗಳ ದಿನಕ್ಕೆ ಮಹಿಳೆಯರಿಗೆ ಗಿಫ್ಟ್! ಬೆಂಗಳೂರಿನಲ್ಲಿ ‘ಸಖಿ ಆಟೋ’ ಸೇವೆ ಲಾಂಚ್

0

ಬೆಂಗಳೂರು: ಪ್ರೇಮಿಗಳ ದಿನದಂದು ಬೆಂಗಳೂರಿನ ಮಹಿಳೆಯರಿಗೆ ವಿಶೇಷ ಮತ್ತು ಅರ್ಥಪೂರ್ಣ ಉಡುಗೊರೆ ಸಿಕ್ಕಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆ ಹಾಗೂ ಮಹಿಳಾ ಸಬಲೀಕರಣದ ಉದ್ದೇಶದೊಂದಿಗೆ ವಿನೂತನವಾದ ‘ಸಖಿ ಆಟೋ’ ಸೇವೆ ಇದೇ ಫೆಬ್ರವರಿ 14, 2026ರಿಂದ ನಗರದಲ್ಲಿ ಅಧಿಕೃತವಾಗಿ ಆರಂಭವಾಗಲಿದೆ.

‘ಸಖಿ ಆಟೋ’ ಸಂಪೂರ್ಣವಾಗಿ ಮಹಿಳಾ ಪ್ರಯಾಣಿಕರಿಗಾಗಿ ರೂಪುಗೊಂಡಿರುವ ಸಾರಿಗೆ ವ್ಯವಸ್ಥೆಯಾಗಿದ್ದು, ಮಹಿಳಾ ಚಾಲಕಿಯರೇ ಮಹಿಳಾ ಪ್ರಯಾಣಿಕರನ್ನು ಸಾಗಿಸುವುದು ಈ ಸೇವೆಯ ಪ್ರಮುಖ ವೈಶಿಷ್ಟ್ಯವಾಗಿದೆ. ಆರಂಭದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಸೇವೆ ಲಭ್ಯವಿರಲಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಿದಂತೆ 24 ಗಂಟೆಗಳ ಸೇವೆ ನೀಡುವ ಯೋಜನೆಯಿದೆ.

ಇತರ ಆಪ್ ಆಧಾರಿತ ಸೇವೆಗಳಂತೆ ಮಳೆ ಅಥವಾ ಟ್ರಾಫಿಕ್ ಹೆಸರಿನಲ್ಲಿ ದರ ಏರಿಕೆ ಇರುವುದಿಲ್ಲ. ಮೊದಲ 2 ಕಿಲೋಮೀಟರ್‌ಗಳಿಗೆ 50 ರೂ ಹಾಗೂ ನಂತರ ಪ್ರತಿ ಕಿಲೋಮೀಟರ್‌ಗೆ 20 ರೂ ನಿಗದಿಪಡಿಸಲಾಗಿದೆ.

ಪ್ರಸ್ತುತ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಹಂತದಲ್ಲಿದ್ದು, ಅಲ್ಲಿಯವರೆಗೆ ride.sakhiwomen.in ವೆಬ್‌ಸೈಟ್ ಅಥವಾ 63619 33364 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ.

ಭವಿಷ್ಯದಲ್ಲಿ ಟ್ರಾನ್ಸ್ ಮಹಿಳೆಯರನ್ನೂ ಚಾಲಕಿಯರಾಗಿ ನೇಮಿಸಿಕೊಳ್ಳುವ ಗುರಿ ಈ ಸಂಸ್ಥೆ ಹೊಂದಿದ್ದು, ಮಹಿಳಾ ಉದ್ಯೋಗ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗೆ ಇದು ದೊಡ್ಡ ಹೆಜ್ಜೆಯಾಗಿದೆ.

ಬೆಂಗಳೂರಿನಲ್ಲಿ ವಿದೇಶಿ ರಾಯಭಾರಿ ಕಚೇರಿಗಳಿಗೆ ಮತ್ತೆ ಬಾಂಬ್ ಬೆದರಿಕೆ! 10 ದಿನಗಳಲ್ಲಿ 2ನೇ ಇ-ಮೇಲ್ ಅಲರ್ಟ್

0

ಬೆಂಗಳೂರು: ನಗರದಲ್ಲಿರುವ ಜಪಾನ್ ಹಾಗೂ ನೆದರ್‌ಲ್ಯಾಂಡ್ (ಡಚ್) ರಾಯಭಾರಿ ಕಚೇರಿಗಳಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಹಾಕಿರುವ ಘಟನೆ ಭದ್ರತಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿದೆ. ಕಳೆದ 10 ದಿನಗಳ ಅಂತರದಲ್ಲಿ ವಿದೇಶಿ ದೂತಾವಾಸ ಕಚೇರಿಗಳಿಗೆ ಇದು ಎರಡನೇ ಬಾರಿ ಬಂದ ಬೆದರಿಕೆ ಎನ್ನುವುದು ಗಮನಾರ್ಹವಾಗಿದೆ.

ಬೆಳಗ್ಗೆ 8.40ರ ಸುಮಾರಿಗೆ ಜಪಾನ್ ರಾಯಭಾರಿ ಕಚೇರಿಯ ಅಧಿಕೃತ ಇ-ಮೇಲ್ ಐಡಿಗೆ ಅಪರಿಚಿತರಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ತಕ್ಷಣವೇ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಸಂಪೂರ್ಣ ತಪಾಸಣೆ ನಡೆಸಿದೆ. ಹಲವು ಗಂಟೆಗಳ ಪರಿಶೀಲನೆಯ ಬಳಿಕ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ದೃಢಪಡಿಸಿದ್ದಾರೆ.

ಇತ್ತೀಚೆಗೆ ಜನವರಿ 29ರಂದು ಆರ್ಟಿ ನಗರದ ಗಂಗಾನಗರದಲ್ಲಿರುವ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೂ ಇದೇ ರೀತಿಯ ಇ-ಮೇಲ್ ಮೂಲಕ 5 RDX ಹಾಗೂ IED ಬಳಸಿ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಕುರಿತು ರಾಯಭಾರಿ ಕಚೇರಿ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಆರ್.ಟಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದಕ್ಕೂ ಮುನ್ನ ಹಲಸೂರಿನಲ್ಲಿರುವ ಇಟಾಲಿಯನ್ ಕಾನ್ಸುಲೇಟ್ ಕಚೇರಿಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಭದ್ರತಾ ವ್ಯವಸ್ಥಾಪಕ ಜಿಯೋಡೊಮೆನಿಕೊ ಮಿಲಾನೋ ಹಲಸೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಸತತವಾಗಿ ವಿದೇಶಿ ದೂತಾವಾಸಗಳನ್ನು ಗುರಿಯಾಗಿಸಿ ಇ-ಮೇಲ್ ಮೂಲಕ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ, ಸೈಬರ್ ಕ್ರೈಂ ವಿಭಾಗ ಹಾಗೂ ಗುಪ್ತಚರ ಇಲಾಖೆ ಪ್ರಕರಣದ ಮೂಲ ಪತ್ತೆಗೆ ತನಿಖೆ ತೀವ್ರಗೊಳಿಸಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಮ್ಮನ್ನು ಪ್ರೀತಿಸುವ ದೊಡ್ಡ ವರ್ಗ ಇದೆ: ನಿಖಿಲ್ ಕುಮಾರಸ್ವಾಮಿ

0

ಹಾಸನ: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಅಭಿಮಾನಿಗಳಿರುವ ದೊಡ್ಡ ವಲಯವಿದ್ದು, ನಮ್ಮನ್ನು ಪ್ರೀತಿಸುವ ಜನರು ಆ ಕ್ಷೇತ್ರದಲ್ಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೆಲಗಳಲೆ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಜಿ.ಟಿ.ದೇವೇಗೌಡರ ಬಗ್ಗೆ ಕುಮಾರಸ್ವಾಮಿ ನೀಡಿರುವ ಹೇಳಿಕೆ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ಸಾ.ರಾ. ಮಹೇಶ್ ಸ್ಪರ್ಧೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

“ಇವತ್ತಿನ ಕಾಲಘಟ್ಟದಲ್ಲಿ ಈ ಎಲ್ಲ ವಿಚಾರಗಳನ್ನು ಚರ್ಚೆ ಮಾಡುವುದು ಅಪ್ರಸ್ತುತ. ಏನು ಆಗಬೇಕೋ ಅದು ಕಾಲ ನಿರ್ಣಯ ಮಾಡುತ್ತದೆ. ಎಲ್ಲಕ್ಕೂ ಸಮಯ ಬರುತ್ತದೆ” ಎಂದು ನಿಖಿಲ್ ಹೇಳಿದರು.

ಸಾರ್ವಜನಿಕ ವಲಯದಲ್ಲಿ ಚುನಾಯಿತ ಪ್ರತಿನಿಧಿಗಳು ಚರ್ಚೆ ನಡೆಸಿದಾಗ ಕಾರ್ಯಕರ್ತರಲ್ಲಿ ಸ್ವಲ್ಪ ಇರುಸುಮುರುಸು ಉಂಟಾಗಿರುವುದು ಸತ್ಯ ಎಂದು ಒಪ್ಪಿಕೊಂಡ ಅವರು, “ಇಂತಹ ವಿಚಾರಗಳು ಮಾಧ್ಯಮದ ಮುಂದೆ ಮಾತನಾಡುವುದರಿಂದ ಇತ್ಯರ್ಥವಾಗುವುದಿಲ್ಲ” ಎಂದರು.

ಪಕ್ಷದ ವರಿಷ್ಠರು ಕಾರ್ಯಕರ್ತರ ಗೌರವವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಮತ್ತು ಕ್ಷೇತ್ರವನ್ನು ಉಳಿಸಿಕೊಳ್ಳಲು ಆಯಾ ಸಂದರ್ಭದಲ್ಲಿ ಸೂಕ್ತ ಹಾಗೂ ಉತ್ತಮ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಪಕ್ಷದ ಕಾರ್ಯಕರ್ತನಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಕೊಡಬೇಕು: ಇಕ್ಬಾಲ್ ಹುಸೇನ್ ಒತ್ತಾಯ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಮನವಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ. ದೇವರಾಜ ಅರಸು ಅವರ ಬಳಿಕ ದಲಿತರು ಹಾಗೂ ಶೋಷಿತರ ಪರವಾಗಿ ಸಿದ್ದರಾಮಯ್ಯ ಅವರು ಮಹತ್ವದ ಸೇವೆ ಸಲ್ಲಿಸಿದ್ದಾರೆ. ಆದರೆ ಇದೇ ಅವಧಿಯಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಎರಡೂವರೆ ವರ್ಷಗಳ ಆಡಳಿತ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಪಕ್ಷದ ನಿಷ್ಠಾವಂತ ಮತ್ತು ಶ್ರಮಪಟ್ಟು ಹೋರಾಟ ಮಾಡಿದ ನಾಯಕರಿಗೆ ಅವಕಾಶ ಸಿಗಬೇಕು ಎಂಬ ಅಭಿಪ್ರಾಯವನ್ನು ಹಲವು ಶಾಸಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

“ಒಬ್ಬ ನಿಷ್ಠಾವಂತ ಪಕ್ಷನಿಷ್ಠ ವ್ಯಕ್ತಿಯಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ನೀಡಬೇಕು ಎಂಬ ಆಶಯದಿಂದ ನಾವು ಮಾತನಾಡುತ್ತಿದ್ದೇವೆ. ಅವರ ಹೋರಾಟ ಮತ್ತು ಶ್ರಮಕ್ಕೆ ನ್ಯಾಯ ಸಿಗಬೇಕು” ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಇದಲ್ಲದೆ, ಸುಮಾರು 80ರಿಂದ 90 ಶಾಸಕರು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಆಶಯ ಹೊಂದಿದ್ದಾರೆ ಎಂದು ತಿಳಿಸಿದ ಅವರು, ಸರ್ಕಾರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿರುವುದಾದರೆ ಅದನ್ನು ಕಾರ್ಯರೂಪದಲ್ಲಿಯೂ ತೋರಿಸಬೇಕು ಎಂದು ಆಗ್ರಹಿಸಿದರು.

ತಾಯಿ, ಮಗಳ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್: ಮೂರು ದಿನಗಳ ಹಿಂದೆಯೇ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ವಿವಾಹಿತ ಪ್ರಿಯಕರ

0

ಮಂಡ್ಯ: ದಳವಾಯಿ ಕೋಡಿಹಳ್ಳಿಯಲ್ಲಿ ನಡೆದ ತಾಯಿ–ಮಗಳು ಆತ್ಮಹತ್ಯೆ ಪ್ರಕರಣದ ಹಿನ್ನಲೆಯಲ್ಲಿ 72 ಗಂಟೆಗಳೊಳಗೆ ನಡೆದ ಘಟನೆಗಳ ಸರಣಿ ಬೆಚ್ಚಿ ಬೀಳಿಸುವಂತಿದೆ. ಈ ಪ್ರಕರಣದಲ್ಲಿ ಯುವತಿ ಪ್ರಿಯಾಂಕಳ ಪ್ರಿಯಕರ ಮುತ್ತುರಾಜ್ ಈಗಾಗಲೇ ಮೂರು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಮುತ್ತುರಾಜ್ ವಿವಾಹಿತನಾಗಿದ್ದು, ಮೂರು ಮಕ್ಕಳ ತಂದೆಯೂ ಹೌದು. ಆದರೂ ಪ್ರಿಯಾಂಕಳೊಂದಿಗೆ ಪ್ರೀತಿ–ಪ್ರೇಮ ಸಂಬಂಧ ಹೊಂದಿದ್ದ. ಈ ವಿಚಾರ ಗೊತ್ತಾದ ನಂತರ ಪ್ರಿಯಾಂಕಳ ತಂದೆ–ತಾಯಿ ಇಬ್ಬರಿಗೂ ತೀವ್ರವಾಗಿ ಬುದ್ದಿ ಹೇಳಿ, ಮಗಳ ಮದುವೆಗೆ ವರ ಹುಡುಕುವ ಪ್ರಯತ್ನ ಆರಂಭಿಸಿದ್ದರು.

ಇದರಿಂದ ಕೋಪಗೊಂಡ ಮುತ್ತುರಾಜ್, ಪ್ರಿಯಾಂಕಳ ಮೇಲೆ ಒತ್ತಡ ತರುವ ಉದ್ದೇಶದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ಆತ ಈಗ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪ್ರಿಯಕರನ ಆತ್ಮಹತ್ಯೆ ಯತ್ನದ ಸುದ್ದಿ ಕೇಳಿ ಮಾನಸಿಕವಾಗಿ ಕುಸಿದ ಪ್ರಿಯಾಂಕ, ಆತಂಕ ಮತ್ತು ಭಯದಿಂದ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವನ್ನು ಕಂಡ ತಾಯಿ ಶಂಕುತಲಾ ದೇವಿ ಮನನೊಂದಿದ್ದು, ತಾಳಲಾರದೆ ಆಕೆಯೂ ಕೂಡ ನೇಣಿಗೆ ಶರಣಾಗಿದ್ದಾರೆ.

ಒಂದೇ ಕುಟುಂಬದಲ್ಲಿ ತಾಯಿ–ಮಗಳು ಜೀವ ಕಳೆದುಕೊಂಡ ಈ ಘಟನೆ, ಪ್ರೇಮ ಸಂಬಂಧಗಳಿಂದ ಉಂಟಾಗುವ ಮಾನಸಿಕ ಹಿಂಸೆ ಎಷ್ಟು ಭೀಕರವಾಗಬಹುದು ಎಂಬುದನ್ನು ತೋರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

19 ಲಕ್ಷ ಮೌಲ್ಯದ ಚಿನ್ನ–ನಗದು ಇರುವ ಟ್ರಾಲಿ ಬ್ಯಾಗ್ ಪತ್ತೆ: RPF ತ್ವರಿತ ಕಾರ್ಯಾಚರಣೆಗೆ ಶ್ಲಾಘನೆ

0

ಬೆಂಗಳೂರು: ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಸುಮಾರು ₹19 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹೊಂದಿದ್ದ ಟ್ರಾಲಿ ಬ್ಯಾಗ್‌ನ್ನು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಪತ್ತೆಹಚ್ಚಿ ವಾರಸುದಾರರಿಗೆ ಸುರಕ್ಷಿತವಾಗಿ ವಾಪಸ್ ನೀಡಿದ್ದಾರೆ. RPF ಸಿಬ್ಬಂದಿಯ ತ್ವರಿತ, ಪ್ರಾಮಾಣಿಕ ಮತ್ತು ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಫೆಬ್ರವರಿ 08ರಂದು ರಾತ್ರಿ 08.35ರ ಸುಮಾರಿಗೆ ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ತಮ್ಮ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಕಳೆದುಕೊಂಡಿದ್ದರು. ತಕ್ಷಣವೇ ಅವರು ‘ರೈಲ್ ಮದದ್’ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದರು.

ದೂರು ಸ್ವೀಕರಿಸಿದ ಕೂಡಲೇ RPF ಸಿಬ್ಬಂದಿ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾಗಿ, ಯಲಹಂಕ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್–1ರಲ್ಲಿ ಶೋಧ ಕಾರ್ಯ ನಡೆಸಿದರು. ಈ ವೇಳೆ ವಾರಸುದಾರರಿಲ್ಲದೆ ಇದ್ದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಯಲಹಂಕ RPF ಪೋಸ್ಟ್‌ಗೆ ಕೊಂಡೊಯ್ಯಲಾಯಿತು.

ಬ್ಯಾಗ್ ಪರಿಶೀಲನೆ ವೇಳೆ ಅದರೊಳಗೆ ಸುಮಾರು 100 ಗ್ರಾಂ ಚಿನ್ನಾಭರಣಗಳು (ಸುಮಾರು ₹17 ಲಕ್ಷ ಮೌಲ್ಯ) ಹಾಗೂ ₹2 ಲಕ್ಷ ನಗದು ಇರುವುದು ದೃಢಪಟ್ಟಿದೆ. ಬಳಿಕ ರೈಲ್ ಮದದ್ ದೂರು, ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸಿ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರನ್ನು ಸಂಪರ್ಕಿಸಲಾಗಿದೆ. ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಟ್ರಾಲಿ ಬ್ಯಾಗ್ ಅನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ.

ಕಳೆದುಕೊಂಡ ಅಮೂಲ್ಯ ವಸ್ತು ಮರಳಿ ಸಿಕ್ಕ ಬೆನ್ನಲ್ಲೇ ಪ್ರಯಾಣಿಕ ನಿಟ್ಟುಸಿರು ಬಿಟ್ಟಿದ್ದು, RPF ಸಿಬ್ಬಂದಿಯ ಕಾರ್ಯವನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ.

ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ತಕ್ಷಣ FIR ಇಲ್ಲ! ಡಿಜಿ–ಐಜಿಪಿ ಎಂಎ ಸಲೀಂ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿ

0

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು ಯಾಂತ್ರಿಕವಾಗಿ ಎಫ್‌ಐಆರ್ ದಾಖಲಿಸುವುದು ಹಾಗೂ ಬಂಧನ ನಡೆಸುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಎಂಎ ಸಲೀಂ ಅವರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ಪೊಲೀಸರ ವಿರುದ್ಧ ಹೆಚ್ಚುತ್ತಿರುವ ಆರೋಪಗಳ ಹಿನ್ನೆಲೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ನೀಡಿದ ಎರಡು ಪ್ರಮುಖ ತೀರ್ಪುಗಳ ಆಧಾರದಲ್ಲಿ ಈ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದ್ದು, ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸದೇ ನೇರವಾಗಿ ಪ್ರಕರಣ ದಾಖಲಿಸುವ ಪ್ರವೃತ್ತಿ ಕಂಡುಬಂದಿದ್ದರಿಂದ, ಅದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಡಿಜಿ–ಐಜಿಪಿ ಮಾರ್ಗಸೂಚಿಯ 8 ಪ್ರಮುಖ ಅಂಶಗಳು:

  • ದೂರುದಾರರ ಅರ್ಹತೆ ಪರಿಶೀಲನೆ: ಮಾನಹಾನಿ ಪ್ರಕರಣಗಳಲ್ಲಿ ದೂರುದಾರರು ‘ನೊಂದ ವ್ಯಕ್ತಿ’ ಆಗಿರಬೇಕು. ಸಂಬಂಧವಿಲ್ಲದ ಮೂರನೇ ವ್ಯಕ್ತಿಗಳ ದೂರುಗಳನ್ನು (ಗಂಭೀರ ಅಪರಾಧ ಹೊರತುಪಡಿಸಿ) ಸ್ವೀಕರಿಸಬಾರದು.

  • ಪ್ರಾಥಮಿಕ ವಿಚಾರಣೆ ಕಡ್ಡಾಯ: ಎಫ್‌ಐಆರ್ ಮೊದಲು ಆರೋಪ ಮೇಲ್ನೋಟಕ್ಕೆ ಅಪರಾಧವೇ ಎಂಬುದನ್ನು ಪರಿಶೀಲಿಸಬೇಕು.

  • ಹಿಂಸೆಗೆ ಪ್ರಚೋದನೆ ಇದ್ದರೆ ಮಾತ್ರ ಕೇಸ್: ದ್ವೇಷ, ದೇಶದ್ರೋಹ ಅಥವಾ ಸಾರ್ವಜನಿಕ ಅಶಾಂತಿ ಪ್ರಕರಣಗಳಲ್ಲಿ ಹಿಂಸೆಗೆ ಸ್ಪಷ್ಟ ಪ್ರಚೋದನೆ ಇದ್ದಾಗ ಮಾತ್ರ ಪ್ರಕರಣ ದಾಖಲಿಸಬೇಕು.

  • ರಾಜಕೀಯ ಟೀಕೆಗಳಿಗೆ ರಕ್ಷಣೆ: ಕಟುವಾದ ರಾಜಕೀಯ ಟೀಕೆಗಳಿಗೆ ಯಾಂತ್ರಿಕವಾಗಿ ಕೇಸ್ ಹಾಕಬಾರದು. ಸಂವಿಧಾನದ 19(1)(ಎ) ಅಡಿ ವಾಕ್ ಸ್ವಾತಂತ್ರ್ಯವನ್ನು ಗೌರವಿಸಬೇಕು.

  • ಮಾನಹಾನಿ ಅಸಂಜ್ಞೇಯ ಅಪರಾಧ: ಮಾನಹಾನಿಗೆ ಪೊಲೀಸರು ನೇರವಾಗಿ ಎಫ್‌ಐಆರ್ ದಾಖಲಿಸಬಾರದು. ದೂರುದಾರರನ್ನು ಮ್ಯಾಜಿಸ್ಟ್ರೇಟ್ ಬಳಿ ಹೋಗುವಂತೆ ಸೂಚಿಸಬೇಕು.

  • ಬಂಧನಕ್ಕೆ ನಿಯಂತ್ರಣ: ಅರ್ನೇಶ್ ಕುಮಾರ್ ತೀರ್ಪಿನಂತೆ ಅನಗತ್ಯ ಬಂಧನಕ್ಕೆ ಅವಕಾಶವಿಲ್ಲ.

  • ಕಾನೂನು ಸಲಹೆ ಕಡ್ಡಾಯ: ಸೂಕ್ಷ್ಮ ಮತ್ತು ರಾಜಕೀಯ ವಿಚಾರಗಳಲ್ಲಿ ಎಫ್‌ಐಆರ್ ಮೊದಲು ಸರ್ಕಾರಿ ಅಭಿಯೋಜಕರ ಸಲಹೆ ಪಡೆಯಬೇಕು.

  • ಸುಳ್ಳು/ರಾಜಕೀಯ ಪ್ರೇರಿತ ದೂರುಗಳ ಮುಕ್ತಾಯ: ದೂರು ದುರುದ್ದೇಶಪೂರಿತವೆಂದು ಕಂಡುಬಂದರೆ BNSS ಸೆಕ್ಷನ್ 176(1) ಅಡಿ ಪ್ರಕರಣ ಮುಕ್ತಾಯಗೊಳಿಸಬೇಕು.

ಈ ಮೂಲಕ ಪ್ರತಿಯೊಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೂ ಎಫ್‌ಐಆರ್ ದಾಖಲಿಸುವ ಪ್ರವೃತ್ತಿಗೆ ಡಿಜಿ–ಐಜಿಪಿ ಬ್ರೇಕ್ ಹಾಕಿದಂತಾಗಿದೆ.

ಗಂಟಲು ಸೋಂಕು, ಜ್ವರ–ಕೆಮ್ಮಿನಿಂದ ಅನಾರೋಗ್ಯ: ಎನ್‌ಸಿಪಿ ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು:

0

ಪುಣೆ: ಎನ್‌ಸಿಪಿ ನಾಯಕ ಹಾಗೂ ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ಅನಾರೋಗ್ಯದ ಕಾರಣದಿಂದ ಇಂದು ಮಧ್ಯಾಹ್ನ ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಟಲು ಸಂಬಂಧಿತ ಸೋಂಕು, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಶರದ್ ಪವಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಬಾರಾಮತಿಯಲ್ಲಿರುವ ತಮ್ಮ ನಿವಾಸದಲ್ಲಿದ್ದಾಗಲೇ ಶರದ್ ಪವಾರ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಅವರನ್ನು ಪುಣೆಗೆ ಸ್ಥಳಾಂತರಿಸಲಾಯಿತು.

ಪ್ರಸ್ತುತ ಶರದ್ ಪವಾರ್ ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ತಂಡವು ಸಂಪೂರ್ಣ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದು, ಅವರ ಪ್ರತಿಕ್ರಿಯೆ ಆಧರಿಸಿ ಮುಂದಿನ ಚಿಕಿತ್ಸಾ ಕ್ರಮ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಯಲ್ಲಿ ಶರದ್ ಪವಾರ್ ಅವರ ಪುತ್ರಿ, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹಾಗೂ ಅಳಿಯ ಸದಾನಂದ ಸುಳೆ ಅವರು ಹಾಜರಿದ್ದು, ಕುಟುಂಬದವರು ನಿರಂತರವಾಗಿ ವೈದ್ಯರ ಸಂಪರ್ಕದಲ್ಲಿದ್ದಾರೆ.

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಮುಂಬೈಯನ್ನು ಮಣಿಸಿದ ಕರ್ನಾಟಕ! ಸೆಮಿಫೈನಲ್‌ʼಗೆ ಲಗ್ಗೆ

0

ಮುಂಬೈ: ಮುಂಬೈನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ 2025–26ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿದ ಕರ್ನಾಟಕ, ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಮುಂಬೈ ನೀಡಿದ್ದ 326 ರನ್‌ಗಳ ಗುರಿಯನ್ನು ಕರ್ನಾಟಕ ನಾಲ್ಕನೇ ದಿನದಾಟದ ಎರಡನೇ ಸೆಷನ್‌ನಲ್ಲಿ 6 ವಿಕೆಟ್ ನಷ್ಟಕ್ಕೆ ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಮಹತ್ವದ ಗೆಲುವು ದಾಖಲಿಸಿದೆ.

ಕರ್ನಾಟಕದ ಈ ಐತಿಹಾಸಿಕ ಜಯದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಪ್ರಮುಖ ಪಾತ್ರ ವಹಿಸಿದರು. ರಾಹುಲ್ 130 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅವರಿಗೆ ಸಾಥ್ ನೀಡಿದ ಆರ್. ಸ್ಮರಣ್ ಅಜೇಯ 83 ರನ್‌ಗಳನ್ನು ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ಕರ್ನಾಟಕದ ಕಟ್ಟುನಿಟ್ಟಿನ ಬೌಲಿಂಗ್ ದಾಳಿಗೆ ತತ್ತರಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 120 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಅಖಿಲ್ ಹೆರ್ವಾಡ್ಕರ್ 60 ರನ್ ಗಳಿಸಿದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಗಮನಾರ್ಹ ಕೊಡುಗೆ ನೀಡಲಿಲ್ಲ. ಕರ್ನಾಟಕ ಪರ ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ ಹಾಗೂ ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕವೂ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಯಿತು. ತಂಡದ ಪರ ಮಯಾಂಕ್ ಅಗರ್ವಾಲ್ 92 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿ ತಂಡಕ್ಕೆ ಆಧಾರ ಒದಗಿಸಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಕರ್ನಾಟಕ 173 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕಕ್ಕೆ 53 ರನ್‌ಗಳ ಮುನ್ನಡೆ ಲಭಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಮುಂಬೈ ಭರ್ಜರಿ ಪ್ರದರ್ಶನ ತೋರಿ 377 ರನ್‌ಗಳನ್ನು ಕಲೆಹಾಕಿತು. ಆಕಾಶ್ ಆನಂದ್ 70 ರನ್‌ಗಳ ಇನ್ನಿಂಗ್ಸ್ ಆಡಿದರೆ, ಇತರ ಆಟಗಾರರು ಸಹ ಉಪಯುಕ್ತ ಕೊಡುಗೆ ನೀಡಿದರು. ಇದರಿಂದ ಕರ್ನಾಟಕದ ಮುಂದಿಟ್ಟ ಗುರಿ 325 ರನ್‌ಗಳಾಗಿತ್ತು.

ನಾಲ್ಕನೇ ದಿನ ಗುರಿ ಬೆನ್ನಟ್ಟಿದ ಕರ್ನಾಟಕ, ಕೆಎಲ್ ರಾಹುಲ್ ಅವರ ಪ್ರಥಮ ದರ್ಜೆ ವೃತ್ತಿಜೀವನದ 25ನೇ ಶತಕದ ನೆರವಿನಿಂದ ಆತ್ಮವಿಶ್ವಾಸದ ಆಟವಾಡಿತು. 147 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ ಶತಕ ಪೂರೈಸಿದ ರಾಹುಲ್, ನಂತರವೂ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ತಂಡವನ್ನು 250 ರನ್‌ಗಳ ಗಡಿ ದಾಟಿಸಿದರು. ಸ್ಮರಣ್ 123 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅಜೇಯ 83 ರನ್‌ಗಳ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ವಿದ್ಯಾದರ್ ಪಾಟೀಲ್ ಅಜೇಯ 31 ರನ್‌ಗಳ ಸಹಾಯದಿಂದ ಕರ್ನಾಟಕವನ್ನು ಸೆಮಿಫೈನಲ್‌ಗೆ ಕರೆದೊಯ್ದರು.

error: Content is protected !!