Home Blog Page 3344

ಗ್ರಾಮಸ್ಥರ ಕಣ್ಣಿಗೆ ಬಿದ್ದ ನೀರಿನ ಪೈಪ್ ಕಳ್ಳರು! ಬೆನ್ನಟ್ಟಿದಾಗ ಟ್ರ್ಯಾಕ್ಟರ್ ಬಿಟ್ಟು ಪರಾರಿ

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಹಲವು ದಿನಗಳಿಂದ ಹನಿ ನೀರಾವರಿಯ ಪೈಪ್‌ಗಳು ಕಳ್ಳತನವಾಗುತ್ತಿದ್ದವು. ಮಂಗಳವಾರ ರಾತ್ರಿ ಜಿಲ್ಲೆಯ ಮುಂಡರಗಿ ತಾಲೂಕಿ‌ನ ಜಂತ್ಲಿ ಶಿರೂರು ಗ್ರಾಮದಲ್ಲಿ ಹನಿ ನೀರಾವರಿಯ ಲಕ್ಷಾಂತರ ರೂಪಾಯಿ ಮೌಲ್ಯದ ಪೈಪ್‌ಗಳನ್ನು ಕಳ್ಳತನ ಮಾಡಿದ ಖದೀಮರು, ಟ್ರ್ಯಾಕ್ಟರ್‌ನಲ್ಲಿ ತುಂಬುವಾಗ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾರೆ.

ಗ್ರಾಮಸ್ಥರು ಕಳ್ಳರನ್ನು ಬೆನ್ನಟ್ಟುತ್ತಿದ್ದಂತೆ ನೀರಿನ ಪೈಪ್ ಕಳ್ಳರು, ಪೈಪ್‌ಗಳನ್ನು ತುಂಬಿದ್ದ ಟ್ರ್ಯಾಕ್ಟರ್‌ನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ನಾಲ್ಕೈದು ಜನ ಇದ್ದರು ಎಂದು ಹೇಳಲಾಗುತ್ತಿದ್ದು, ನೀರಿನ ಪೈಪ್ ಕಳ್ಳರ ಹಾವಳಿಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಅವರನ್ನು ಹೇಗಾದರೂ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿಯಲು ರೈತರು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಆರೋಪಿಗಳ ಬಂಧನಕ್ಕೆ ರೈತರು ಒತ್ತಾಯಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗಂಡನ ಮನೆಯವರ ಕಿರುಕುಳಕ್ಕೆ ನೊಂದು ಗೃಹಿಣಿ ಆತ್ಮಹತ್ಯೆ; ಸರಕಾರಿ ನೌಕರ ಸೇರಿ ಮೂವರ ಬಂಧನ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪತಿ ಹಾಗೂ ಅತ್ತೆ, ಮಾವನ ಕಿರುಕುಳಕ್ಕೆ ಮನನೊಂದು ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಜರುಗಿದೆ. ಸುನೀತಾ ಪ್ರಮೋದ ಕಮ್ಮಾರ(30) ಎಂಬ ಗೃಹಿಣಿಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಧಾರವಾಡದ ಭಾರತಿ ಬಸವರಾಜ ಪತ್ತಾರ ಎಂಬುವವರ ಮಗಳಾದ ಸುನಿತಾಳನ್ನು ಶಿಗ್ಲಿಯ ಪ್ರಮೋದ ನಿಂಬಣ್ಣ ಕಮ್ಮಾರ ಎಂಬ ಕೆಪಿಟಿಸಿಎಲ್ ಉದ್ಯೋಗಿಗೆ ೨೦೦೮ ರಲ್ಲಿಯೇ ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಮದುವೆಯ ಕೆಲ ವರ್ಷಗಳ ನಂತರ ಗಂಡ ಪ್ರಮೋದ, ಅತ್ತೆ ಶಕುಂತಲಾ, ಮಾವ ನಿಂಬಣ್ಣ ಕಮ್ಮಾರ ಅವರು ನಿತ್ಯ ಅವಳೊಂದಿಗೆ ವಿನಾಕಾರಣ ಜಗಳ ತೆಗೆಯುವುದು, ನೀನು ನಮ್ಮ ಮನೆಗೆ ಲಾಯಕ್ಕಿಲ್ಲ, ಏನಾದರೂ ಮಾಡಿಕೊಂಡು ಸಾಯಿ. ನಾವು ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಎಂದು ಆಕೆಗೆ ನಿತ್ಯ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಗೃಹಿಣಿ ಆ.1 ರ ಸೋಮವಾರ ಸಂಜೆ ಮನೆಯ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅವರ ಸಾವಿಗೆ ಗಂಡ, ಅತ್ತೆ ಮಾವನೇ ನೇರ ಕಾರಣ ಎಂದು ಮೃತಳ ತಾಯಿ ಭಾರತಿ ಪತ್ತಾರ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ನಂತರ ಪ್ರಕರಣವನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಮಂಗಳವಾರ ಇಡೀ ದಿನ ಹೈಡ್ರಾಮಾ ನಡೆಯಿತು. ಆದರೆ ಮೃತಳ ಸಹೋದರ ಸೈನಿಕನಾಗಿದ್ದು ಅವರ ದಿಟ್ಟ ನಿಲುವಿನಿಂದ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಮೂರು ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದುಹೋದ ಮೊಬೈಲ್ ಮರಳಿ ವಾರಸುದಾರರಿಗೆ ಕೊಟ್ಟ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಸಾರ್ವಜನಿಕ ಸ್ಥಳಗಳಲ್ಲಿ, ಸಂತೆ, ಜಾತ್ರೆಯಂಥಹ ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ಕಳೆದುಕೊಂಡವರ ಗೋಳು ಹೇಳತೀರದು. ಸಾವಿರಾರು ರೂ. ಬೆಲೆಬಾಳುವ ಮೊಬೈಲ್ ಕಳೆದುಕೊಂಡ ನೋವು ಒಂದೆಡೆಯಾದರೆ, ತಮ್ಮದೇ ವಿಳಾಸ ಪುರಾವೆಗಳ ಮೂಲಕ ಪಡೆದುಕೊಂಡ ಸಿಮ್ ಕಾರ್ಡ್ ಯಾರ್ಯಾರದೋ ಕೈಗೆ ಸಿಕ್ಕು ದುರ್ಬಳಕೆಯಾಗುವ ಸಾಧ್ಯತೆಗಳ ಬಗೆಗಿನ ಭಯ ಇನ್ನೊಂದೆಡೆ. ಮೊಬೈಲ್ ಮರಳಿ ಸಿಗುವ ನಂಬಿಕೆ ಇಲ್ಲದಿದ್ದರೂ, ದುರ್ಬಳಕೆಯ ಪ್ರಕರಣಗಳಿಂದ ರಕ್ಷಿಸಿಕೊಳ್ಳುವ ಉದ್ದೇಶಕ್ಕಾಗಿಯಾದರೂ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದಿರುವ ಬಗ್ಗೆ ಪ್ರಕರಣ ದಾಖಲಿಸುವರೇ ಅಧಿಕ.

ಆದರೆ, ಮುಂಡರಗಿ ಪೊಲೀಸರು ಇಂಥ ಪ್ರಕರಣಗಳನ್ನೂ ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿ, ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳುವಾದ ಮತ್ತು ತಮ್ಮ ಅಜಾಗರೂಕತೆಯಿಂದ ಬೇರೆ ಬೇರೆ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡ ಬಗ್ಗೆ ದಾಖಲಿಸಿಕೊಂಡ ಪ್ರಕರಣಗಳನ್ನು ಭೇದಿಸಿ ವಿವಿಧ ಕಂಪನಿಗಳ 8.9 ಲಕ್ಷ.ರೂ ಬೆಲೆಬಾಳುವ 68 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಪತ್ತೆಮಾಡಿ, ವಶಪಡಿಸಿಕೊಂಡು ಮಾಲಕರಿಗೆ ಮರಳಿ ನೀಡಿದ್ದಾರೆ.

ಐಎಂಇಐ ಸಂಖ್ಯೆಯ ಆಧಾರದ ಮೇಲೆ ಈ ಎಲ್ಲ ಕಳೆದುಹೋದ ಮೊಬೈಲ್ ಗಳನ್ನು ಪತ್ತೆಹಚ್ಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರ ಠಾಣಾ ಪರಿವೀಕ್ಷಣೆಯ ಸಂದರ್ಭದಲ್ಲಿ ವಾರಸುದಾರರಿಗೆ ಹಿಂದಿರುಗಿಸಿದರು.

ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಾದ ಜೆ.ಆಯ್. ಬಚೇರಿ, ಅವಿನಾಶ ಸಿಂಗ್ ಬ್ಯಾಳಿ, ಶರಣಪ್ಪ ನಾಗೇಂದ್ರಗಡ, ಮಂಜುನಾಥ ಮಾದರ ಇವರು ನೆರವು ನೀಡಿದ್ದು, ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ದೂರುದಾರರೂ ಕೂಡ, ಕಳೆದುಹೋದ ತಮ್ಮ ಮೊಬೈಲ್ ಮರಳಿ ಸಿಕ್ಕಿರುವ ಕುರಿತು ಸಂತಸ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆಯ ಜನಪರ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. ತನ್ಮೂಲಕ, ಪೊಲೀಸ್ ಇಲಾಖೆ ಸದಾ ಸಾರ್ವಜನಿಕ ಸೇವೆಗೆ ಸನ್ನದ್ಧವಾಗಿದೆ ಎಂಬ ಅಂಶ ಸಾಬೀತಾದಂತಾಗಿದೆ.

ಗದಗ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

0

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲಾದ್ಯಂತ ಇಂದು ಬೆಳಗಿನಿಂದ ವ್ಯಾಪಕ ಮಳೆ ಸುರಿಯುತ್ತಿದೆ. ಇಂಥ ಮಳೆಯಲ್ಲೂ ಅಂಗನವಾಡಿ, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಶಾಲಾ-ಕಾಲೇಜು ತಲುಪಲಾಗದೇ, ಪರದಾಡುತ್ತಿದ್ದನ್ನು ಗಣನೆಗೆ ತೆಗೆದುಕೊಂಡು ಗದಗ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಗದಗ ಜಿಪಂ ಸಿಇಓ ಸುಶೀಲಾ ಅವರು ತಿಳಿಸಿದ್ದಾರೆ.

ಮಳೆಯ ಹಿನ್ನಲೆಯಲ್ಲಿ ಯಲ್ಲೋ ಅಲರ್ಟ್‌ನಲ್ಲಿ 19 ಜಿಲ್ಲೆಗಳ ಪೈಕಿ ಕೊಪ್ಪಳ-ಗದಗ ಸೇರಿದಂತೆ ವಿವಿಧ ಜಿಲ್ಲಾಡಳಿತಗಳು ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿವೆ.

ಜಿಲ್ಲಾ ಉಪಾಧ್ಯಕ್ಷರಾಗಿ ಲಲಿತಾ ಗೊಳಗೊಳಕಿ ನೇಮಕ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲಾ ಮಹಿಳಾ‌ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರನ್ನಾಗಿ 11ನೇ ವಾರ್ಡ್‌ನ ಹಮಾಲರ ಕಾಲೋನಿಯ ಲಲಿತಾ ಶರಣಪ್ಪ ಗೊಳಗೊಳಕಿ ಇವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪಾ ಅಮರನಾಥ ಇವರು ಆದೇಶದ ಮೇರೆಗೆ ಗದಗ ಜಿಲ್ಲಾ ಮಹಿಳಾ ಕಾಂಗ್ರೆಸ ಅಧ್ಯಕ್ಷರಾದ ಶ್ರೀಮತಿ ನೀಲಮ್ಮ ಬೋಳನವರ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಲಕ್ಷ್ಮೇಶ್ವರದಲ್ಲಿ ಜೋಕಾಲಿ ಆಡಿದ ಕೋತಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನಾದ್ಯಂತ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಾಗರಪಂಚಮಿಯಲ್ಲಿ ಜೋಕಾಲಿ ಆಡುವದು ಸಂಪ್ರದಾಯವಾಗಿದ್ದು, ಪಟ್ಟಣದ ಎಪಿಎಂಸಿ ಆವರಣ ಮರವೊಂದಕ್ಕೆ ಕಟ್ಟಿದ ಜೋಕಾಲಿಯಲ್ಲಿ ಮಂಗವೊಂದು ಕುಳಿತುಕೊಂಡು ತಾನೇನು ಕಡಿಮೆ ಎನ್ನುವಂತೆ ಜೋಕಾಲಿ ಆಡಿದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಹಬ್ಬದ ವಿಶೇಷವಾಗಿತ್ತು.

ನಾಗರ ಪಂಚಮಿಯ ನಿಮಿತ್ತ ಮಕ್ಕಳು, ಮಹಿಳೆಯರು ಜೋಕಾಲಿ ಆಡಲು ಹಗ್ಗವನ್ನು ಕಟ್ಟಲಾಗಿತ್ತು. ನಾಗರ ಹಾವಿಗೆ ಹಾಲು ಎರೆಯಲು ಜನರು ಹೋಗಿದ್ದರಿಂದ ಯಾರೂ ಇಲ್ಲದ ಸಮಯ ನೋಡಿದ ಕೋತಿಯೊಂದು ಜೋಕಾಲಿಯ ಮೇಲೆ ಕುಳಿತುಕೊಂಡು ಬಿಂದಾಸ್ ಆಗಿ ಜೋಕಾಲಿ ಆಡಿದ ವಿಡಿಯೋ ಪಟ್ಟಣದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

ಜೋಕಾಲಿ ಆಡುತ್ತಿರುವ ಕೋತಿ ನೋಡಲು ಜನ ಸ್ವಲ್ಪ ಹೊತ್ತು ಮುಗಿ ಬಿದ್ದಿದ್ದರು. ಇದಾವುದರ ಪರಿವೆ ಇಲ್ಲದಂತೆ ಕೋತಿ ಜೋಕಾಲಿಯಲ್ಲಿ ಕುಳಿತು ಆಟವಾಡಿ ಬೇಸರವಾದಂತೆ ಜೋಕಾಲಿಯಿಂದ ಇಳಿದು ಹೋಗಿದ್ದು ಕಂಡು ಬಂದಿತು.

ಅಪ್ರಾಪ್ತ ಯುವತಿ ಅಪಹರಿಸಿದ ಯುವಕನಿಗೆ ಮೂರು ವರ್ಷ ಕಠಿಣ ಶಿಕ್ಷೆ, ದಂಡ; ಎಸ್ಪಿ ಶಿವಪ್ರಕಾಶ್

ವಿಜಯಸಾಕ್ಷಿ ಸುದ್ದಿ, ಗದಗ

ಪ್ರೀತಿಸಿ ಮದುವೆಯಾಗುವದಾಗಿ ನಂಬಿಸಿ, ಪುಸಲಾಯಿಸಿ ಯುವತಿಯೊಬ್ಬಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವೊಂದರ ಕುರಿತು ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಎಸ್ಸಿ ಶಿವಪ್ರಕಾಶ್ ದೇವರಾಜು ಹೇಳಿದರು.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಪ್ರಾಪ್ತ ಯುವತಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಆರೋಪಿ ಕಾರ್ತಿಕ ಶಿವಯೋಗಿ ಹೀರೇಮಠ(24ವರ್ಷ) ಎಂಬ ಯುವಕ, ಎಲ್ಲಿಯಾದರೂ ಓಡಿಹೋಗಿ ಮದುವೆಯಾಗೋಣ ಎಂದು ಫೋನಿನಲ್ಲಿ ತಿಳಿಸಿ, ನರಗುಂದದ ನೀರಾವರಿ ಕಾಲೋನಿಯಲ್ಲಿರುವ ರಾಮಣ್ಣ ದುರಗಪ್ಪ ಚಲವಾದಿ ಇವರ ಮನೆಯ ಹತ್ತಿರ ರಸ್ತೆಯ ಮೇಲೆ ಯುವತಿಯನ್ನು ಭೇಟಿ ಮಾಡಿ ನಂಬಿಸಿ, ತಾನು ಬಾಡಿಗೆಗೆ ಪಡೆದುಕೊಂಡ ಕಾರಿನಲ್ಲಿ ಹತ್ತಿಸಿಕೊಂಡು ಅಪಹರಣ ಮಾಡಿಕೊಂಡು ಹೋದ ಘಟನೆ ಡಿಸೆಂಬರ್ 2, 2017ರಂದು ಮದ್ಯಾಹ್ನ 3ಗಂಟೆ ಸುಮಾರಿಗೆ ನಡೆದಿತ್ತು. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಚಿಕ್ಕನರಗುಂದದ ಪಂಚಮಿ ಮಹಿಳಾ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕಾ ಮಹಿಳಾ ಸಾಂತ್ವನ ಕೇಂದ್ರದ ಭಾರತಿ ರವಿ ಹೊಂಗಲ ಇವರು ದಿ: 5-12-2017ರಂದು ದೂರು ನೀಡಿದ್ದರು ಎಂದು ಎಸ್ಸಿ ಶಿವಪ್ರಕಾಶ್ ಹೇಳಿದರು.

ಸದರಿ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ಆರೋಪಿ ಕಾರ್ತಿಕ್ ಈತ ಅಪ್ರಾಪ್ತಳ ಮೇಲೆ ಲೈಂಗಿಕ ಹಲ್ಲೆ ನಡೆಸಿರುವ ಬಗ್ಗೆ ಕಾನೂನು ಕ್ರಮ ಕೈಗೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನರಗುಂದ ಪೊಲೀಸ್ ಠಾಣೆಯ ತನಿಖಾಧಿಕಾರಿ ಪಿಐ ಗಿರೀಶ.ಪಿ. ರೋಡಕರ್ ತನಿಖೆ ಮುಂದುವರೆಸಿ, ಪ್ರಕರಣ ಪೂರ್ತಿಗೊಳಿಸಿ ದಿ: 30-3-2018ರಂದು ನ್ಯಾಯಾಲಯಕ್ಕೆ ಆರೋಪಿತನ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಸದರಿ ಪ್ರಕರಣದಲ್ಲಿ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗದಗದಲ್ಲಿ ಎಸ್.ಸಿ ನಂ: 47/2018ನೇದರಲ್ಲಿ ವಿಚಾರಣೆ ನಡೆಸಿ, ಆರೋಪಿತನಿಗೆ 30.07.2022ರಂದು ಮೂರು ವರ್ಷಗಳ ಕಠಿಣ ಶಿಕ್ಷೆ ಹಾಗೂ 35,000ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸದರಿ ಪ್ರಕರಣದಲ್ಲಿ ಎಲ್ಲ ಸಾಕ್ಷಿದಾರರು ಸಂತ್ರಸ್ತ ಯುವತಿಯ ಪರವಾಗಿ ಸಾಕ್ಷಿ ನುಡಿದಿದ್ದರಿಂದ ಹಾಗೂ ಜಿಲ್ಲಾ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ(ಪೋಕ್ಸೋ) ಅಮರೇಶ ಹಿರೇಮಠ ಸರ್ಕಾರದ ಪರವಾಗಿ ವಾದ ನಡೆಸಿ ಆರೋಪಿತನಿಗೆ ಶಿಕ್ಷೆಯಾಗುವಂತೆ ಮಾಡಿದ್ದಾರೆ.

ಸಾರ್ವಜನಿಕರು ಕೂಡ ಹೆಚ್ಚಿನ ರೀತಿಯಲ್ಲಿ ನೊಂದವರ ಪರವಾಗಿ ಸಾಕ್ಷಿ ನುಡಿದಲ್ಲಿ ಆರೋಪಿಗಳಿಗೆ ಹೆಚ್ಚಿನ ಹಾಗೂ ಶೀಘ್ರವಾಗಿ ಶಿಕ್ಷೆ ವಿಧಿಸಲು ಅನುಕೂಲವಾಗುತ್ತದೆ. ನಿಯಮಾನುಸಾರ ಕ್ರಮ ಜರುಗಿಸಿದ ತನಿಖಾಧಿಕಾರಿಗಳಿಗೆ ಹಾಗೂ ನರಗುಂದ ಪೊಲೀಸ್ ಠಾಣೆಯ ಸಿಬ್ಬಂದಿಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವೈಜ್ಞಾನಿಕ ಕಾಮಗಾರಿಯಿಂದ ಜನ ಸಂಕಷ್ಟಕ್ಕೆ, ಶಾಸಕರೇ ಇದಕ್ಕೆಲ್ಲ ಹೊಣೆ; ಅನಿಲ ಮೆಣಸಿನಕಾಯಿ ಕಿಡಿ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ಅವಳಿ‌ ನಗರದ ಬಹುತೇಕ ಕಡೆಗಳಲ್ಲಿ ಅವೈಜ್ಞಾನಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದರಿಂದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಮನೆಯ ಬಾಗಿಲಿಗಿಂತ ಎತ್ತರದಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಿರುವುದರಿಂದ ಮನೆಯೊಳಗೆ ಮಳೆ ನೀರು ನುಗ್ಗುತ್ತಿದೆ. ಶಾಸಕರ ದೂರದೃಷ್ಟಿಯ ಕೊರತೆ ಹಾಗೂ ನಿಷ್ಕಾಳಜಿಯಿಂದಾಗಿ ಗದಗ-ಬೆಟಗೇರಿಯ ಜನರು ಇಂದಿಗೂ ಪರಿತಪಿಸುವಂತಾಗಿದೆ. ಆದರೆ, ಈ ಪರಿಸ್ಥಿತಿ ಹುಲಕೋಟಿ ಗ್ರಾಮದಲ್ಲಿಲ್ಲ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.

ಅವರು, ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಗದಗ-ಬೆಟಗೇರಿ ಅವಳಿ ನಗರದ ಮಂಜುನಾಥ ನಗರ ಹಾಗೂ ಭಜಂತ್ರಿ ಓಣಿಗೆ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಅವರ ಜೊತೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರ ವಿರುದ್ಧ ಹರಿಹಾಯ್ದರು.

ರಾಜಕಾಲುವೆಗಳ ಪಕ್ಕ ಮನೆ, ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡಬಾರದೆಂಬ ಸುಪ್ರೀಂಕೋರ್ಟ್, ಹೈಕೋರ್ಟ್ ಹಾಗೂ ಎನ್ ಜಿಟಿ ಆದೇಶವಿದ್ದರೂ ಇಂದಿನ ಶಾಸಕರು ಅಂದು ಬಡವರಿಗೆ ರಾಜ ಕಾಲುವೆಗಳ ಪಕ್ಕ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಸ್ಲಂ ಬೋರ್ಡ್ ನಿಂದ ನಿರ್ಮಿಸಿ ಕೊಟ್ಟಿರುವ ಕಳಪೆ ಮಟ್ಟದ ಭಾಗಶಃ ಮನೆಗಳ ಮೇಲ್ಛಾವಣಿ ಕುಸಿದು ಬಿದ್ದಿವೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಬದುಕುವಂತಹ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಪದೇ ಪದೇ ಮಳೆಯಿಂದಾಗಿ ಹಾನಿಗೊಳಗಾಗುತ್ತಿರುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಲೋಕೋಪಯೋಗಿ ಸಚಿವರಾದ ಸಿಸಿ ಪಾಟೀಲ್ ಅವರೊಂದಿಗೆ ಚರ್ಚಿಸಲಾಗಿದೆ.

ರಾಜಕಾಲುವೆಗಳನ್ನು ಶೀಘ್ರವೇ ಸ್ವಚ್ಚಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸ್ವಚ್ಚತಾ ಕಾರ್ಯ ನಡೆಸಿದ್ದಾರೆ. ಅವಳಿ ನಗರದಲ್ಲಿ ಮುಂಬರುವ ದಿನಗಳಲ್ಲಿ ವೈಜ್ಞಾನಿಕ ರಸ್ತೆ, ಚರಂಡಿ ಹಾಗೂ ಬಡವರಿಗೆ ಸುಸಜ್ಜಿತ ‌ಮನೆಗಳನ್ನು ನಿರ್ಮಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅನಿಲ್ ಮೆಣಸಿನಕಾಯಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯೆ ಲಕ್ಷ್ಮೀ ಕಾಕಿ, ಮಾಧುಸಾ ಮೇರವಾಡೆ, ಮುಖಂಡರಾದ ದೇವೇಂದ್ರಪ್ಪ ಗೋಟೂರ, ಮಂಜುನಾಥ ತಳವಾರ, ಅಮರೇಶ ಹಿರೇಮಠ, ಶಂಕರ್‌ ಕಾಕಿ, ನಿಂಗಪ್ಪ ದೊಡ್ಡಮನಿ, ಚಿನ್ನಪ್ಪ‌ ನೆಗಳೂರ, ಶಿವು ಗೋಟೂರ, ಲಕ್ಷ್ಮಣ ವಾಲ್ಮೀಕಿ, ಮಂಜುನಾಥ ಮಾದಗುಂಡಿ, ಮಾರುತಿ ಅಮರದ, ರಾಮಣ್ಣ ವಾಲ್ಮೀಕಿ, ರಮೇಶ್ ಕಾತರಕಿ, ಪ್ರಕಾಶ್ ತಳವಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಗದಗ ಜಿಲ್ಲೆಯಲ್ಲಿ ಸಂಭ್ರಮದ ರೊಟ್ಟಿ ಪಂಚಮಿ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ

ಉತ್ತರ ಕರ್ನಾಟಕದ ವಿಶೇಷ ಹಬ್ಬವಾದ ರೊಟ್ಟಿ ಪಂಚಮಿ ನಿಮಿತ್ತವಾಗಿ ಇಲ್ಲಿನ ಮಹಿಳೆಯರು ಮನೆ ಮನೆಗೆ ತೆರಳಿ ರೊಟ್ಟಿ ವಿತರಿಸುವ ಮೂಲಕ ಸಂಭ್ರಮಿಸಿದರು.

ಕಳೆದ ಒಂದು ವಾರದಿಂದಲೇ ವಿವಿಧ ಬಗೆಯ ರೊಟ್ಟಿಯನ್ನು ತಯಾರಿಸಿಕೊಂಡಿರುವ ಮಹಿಳೆಯರು ಭಾನುವಾರ ತಮ್ಮ ಓಣಿಯಲ್ಲಿಯ ಪರಿಚಯ ಇರುವ ಮನೆಗಳಿಗೆ ತೆರಳಿ ರೊಟ್ಟಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಸಜ್ಜೆ, ಜೋಳ, ರಾಗಿ, ಅಕ್ಕಿ ರೊಟ್ಟಿಯ ಜೊತೆಗೆ ಮಡಿಕೆ, ಹೆಸರು, ಕಡಲೆ ಕಾಳು ಪಲ್ಯೆ, ಅಗಸೆ, ಶೇಂಗಾ ಚಟ್ನಿ, ಕಡಲೆ ಚಟ್ನಿ, ಮೆಂತೆ, ಮೂಲಂಗಿ, ಸೇರಿದಂತೆ ಇತರೆ ತರಕಾರಿ ಪಚಡಿಯನ್ನು ವಿನಿಮಯ ಮಾಡಿಕೊಂಡರು.

ನಂತರ ಮನೆ ಮಂದಿ, ಸ್ನೇಹಿತರು ಸೇರಿ ಸಾಮೂಹಿಕವಾಗಿ ಈ ಎಲ್ಲ ಬಗೆಯ ಸವಿ ರುಚಿಯನ್ನು ಸವಿದು ಪ್ರೀತಿ ಭ್ರಾತೃತ್ವವನ್ನು ಮೆರೆದರು.

ಪ್ಲಾಟ್ ಕೊಡ್ತೀವಿ ಅಂತ ಹಣ ಪಡೆದು ಹಲವರಿಗೆ ಮೋಸ; ಹಣ ವಾಪಾಸು ಕೇಳಿದರೆ ಜೀವ ಬೆದರಿಕೆ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಪ್ಲಾಟ್ ಕೊಡುತ್ತೇನೆಂದು ಹೇಳಿ ಹಣವನ್ನು ಪಡೆದು, ಸಂಚಗಾರಿಕೆ ಪತ್ರವನ್ನು ಬರೆಯಿಸಿಕೊಂಡು ಆಸ್ತಿಯನ್ನೂ ಹೆಸರಿಗೆ ಮಾಡಿಕೊಡದೇ, ದುಡ್ಡನ್ನೂ ಹಿಂದಿರುಗಿಸದೇ ಮೋಸವೆಸಗಿದ್ದಲ್ಲದೇ, ಹಣವನ್ನು ವಾಪಸ್ ಕೇಳಿದ್ದಕ್ಕೆ ಕೀಳು ಶಬ್ಧಗಳಿಂದ ಬೈದು ಜೀವಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಿರ್ಯಾದಿ ನೀಲವ್ವ ಅಮರಪ್ಪ ರಾಂಪೂರ ಅವಳ ಪತಿ ದಿ. ಅಮರಪ್ಪ ದುರಗಪ್ಪ ರಾಂಪೂರ ಹಾಗೂ ಯಲ್ಲಪ್ಪ ದುರಗಪ್ಪ ಮಾದರ, ನಾಗೇಶ ಈರಪ್ಪ ಮಾಳೋತ್ತರ, ಕೃಷ್ಣಾ ರಾಮಪ್ಪ ಹುಳ್ಳಿಕೇರಿ, ಶಾರದಾ ಕೋ ಸುರೇಶ ರಾಠೋಡ, ಶಿವಕುಮಾರ ಸಂಗಪ್ಪ ಪೂಜಾರ ಇವರೆಲ್ಲರೂ ಕೂಡಿಕೊಂಡು 4-5 ವರ್ಷಗಳ ಹಿಂದೆ ಆರೋಪಿತರಾದ ಪ್ರಭು ಲೋಕನಾಥಸಾ ಬಾಂಡಗೆ, ಲೋನಾಥಸಾ ವೆಂಕೂಸಾ ಬಾಂಡಗೆ ಇವರಿಗೆ ಸಂಬಂಧಿಸಿದ ಉಣಚಗೇರಿ ಗ್ರಾಮದ ಹದ್ದಿಯಲ್ಲಿ ಸ.ನಂ 25/1ರಲ್ಲಿ 3.2 ಎಕರೆ ಹಾಗೂ ಸ.ನಂ.271/1ರಲ್ಲಿ 6.33 ಎಕರೆ ಜಮೀನುಗಳಲ್ಲಿ ಪ್ಲಾಟ್ ಗಳನ್ನು ಮಾಡಿದ್ದು, ಸದರಿ ಪ್ಲಾಟ್ ಗಳಲ್ಲಿ ಫಿರ್ಯಾದಿಯ ಗಂಡನ ಹೆಸರಿನಲ್ಲಿ ಒಂದು ಪ್ಲಾಟನ್ನು 2.25ಲಕ್ಷ.ರೂ ಆರೋಪಿತರಿಗೆ ನೀಡಿ ಸಂಚಗಾರ ಪತ್ರವನ್ನು ಬರೆಸಿಕೊಂಡು ಪೂರ್ತಿ ದುಡ್ಡನ್ನು ಕೊಟ್ಟಿದ್ದಾರೆ.

ನಂತರ ಫಿರ್ಯಾದಿ ನೀಲವ್ವ ಹಾಗೂ ಉಳಿದವರೂ ಕೂಡಿ ಆರೋಪಿತರಿಗೆ ನಮಗೆ ಪ್ಲಾಟ್ ಕೊಡಿ ಎಂದು ಕೇಳಿದಾಗ, ಇಂದು ಕೊಡ್ತೇವೆ, ನಾಳೆ ಕೊಡ್ತೇವೆ ಎಂದು ದಿನ ಕಳೆಯತೊಡಗಿದ್ದರು.

ಕೊಟ್ಟ ಹಣವನ್ನೂ ವಾಪಸ್ ನೀಡದಿದ್ದಾಗ, ಜು.23ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಗಜೇಂದ್ರಗಡ ಪಟ್ಟಣದ ದುರ್ಗಾ ಸರ್ಕಲ್ ಬಳಿಯಿರುವ ಆರೋಪಿತರ ಜೈಮಾತಾ ಅಂಗಡಿಗೆ ಹೋಗಿ, ನಮಗೆ ಪ್ಲಾಟನ್ನು ಕೊಡಿ. ಇಲ್ಲವಾದರೆ ನಾವು ಕೊಟ್ಟ ದುಡ್ಡನ್ನಾದರೂ ವಾಪಸ್ ಕೊಡಿ ಎಂದು ಫಿರ್ಯಾದಿ ನೀಲವ್ವ ಹಾಗೂ ಉಳಿದವರು ಕೇಳಿದ್ದಾರೆ. ಆಗ ಆರೋಪಿತರು ನಾವು ದುಡ್ಡನ್ನೂ ಕೊಡುವದಿಲ್ಲ, ಪ್ಲಾಟನ್ನೂ ಕೊಡುವದಿಲ್ಲ, ನೀವೆಲ್ಲ ಏನು ಮಾಡ್ತೀರೋ ಮಾಡ್ಕೊಳ್ಳಿ. ನಿಮ್ಮ ಸೊಕ್ಕು ಬಹಳವಾಯ್ತು. ನೀವೀಗ ಇಲ್ಲಿಂದ ಹೊದರೆ ಸರಿ. ಇಲ್ಲಾಂದ್ರೆ ಒಂದು ಗತಿ ಕಾಣಿಸ್ತೀವಿ ಎಂದು ಜಾತಿನಿಂದನೆ ಮಾಡಿದ್ದಲ್ಲದೇ ಜೀವಬೆದರಿಕೆಯನ್ನು ಹಾಕಿ ಮೋಸ ಮಾಡಿದ ಬಗ್ಗೆ ದೂರಿನಲ್ಲಿ ಆರೋಪಿಸಿಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಗಜೇಂದ್ರಗಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.