Home Blog Page 3343

ಸಿದ್ಧರಾಮೋತ್ಸವ ಸ್ಟಿರಾಯ್ಡ್ ಇದ್ದಂತೆ, ಬಹಳ ಕಾಲ ಪರಿಣಾಮ ಬೀರುವದಿಲ್ಲ: ಸಿ.ಸಿ. ಪಾಟೀಲ ವ್ಯಂಗ್ಯ

ಸಿದ್ಧರಾಮೋತ್ಸವದಿಂದ ಬಿಜೆಪಿಯ ಮೇಲೆ ಯಾವ ಪರಿಣಾಮವೂ ಇಲ್ಲ

ವಿಜಯಸಾಕ್ಷಿ ಸುದ್ದಿ, ಗದಗ

ಕಾಂಗ್ರೆಸ್ ನವರು ಇಂಥದೊಂದು ಸಮಾವೇಶ ಮಾಡಿ ಸಂತಸಪಟ್ಟಿರಬಹುದು. ಇಂತಹ ಸಮಾವೇಶಗಳನ್ನು ಬಿಜೆಪಿಯಲ್ಲಿ ದಿನಕ್ಕೊಂದು ಬೇಕಿದ್ದರೂ ಮಾಡ್ತೇವೆ. ಅವರ ಅಸ್ತಿತ್ವ ಉಳಿಸಿಕೊಳ್ಳಲು ವಿರೋಧ ಪಕ್ಷದವರು ಇಂಥವುಗಳನ್ನ ಮಾಡ್ತಾರೆ. ನಾನಾ-ನೀನಾ ಎಂದು ಬಲ ಪ್ರದರ್ಶಿಸುವ ಉದ್ದೇಶಕ್ಕೆ ಸಮಾವೇಶ ಮಾಡುತ್ತಾರೆ. ಆದರೆ, ಇವರು ಸಂಘಟನೆ ಮಾಡಿ ಸಮಾವೇಶ ಆಯೋಜಿಸಿದ ಮಾತ್ರಕ್ಕೆ ಕಾಂಗ್ರೆಸ್ ನಲ್ಲಿ ಶಾಸಕರಿದ್ದವರು ಸಿ.ಎಂ ಆಗಿಬಿಡೋದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಲೇವಡಿ ಮಾಡಿದರು.

ಅವರು, ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸಿದ್ಧರಾಮೋತ್ಸವದಲ್ಲಿ ಸಿದ್ದು-ಡಿಕೆಶಿ ಆಲಿಂಗನ ಮಾಡಿದ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ಧರಾಮಯ್ಯ ಹಾಗೂ ಡಿಕೆಶಿಯವರಿಗೆ ಆಲಿಂಗನ ಮಾಡಿಸಿದ್ದು ರಾಹುಲ್ ಗಾಂಧಿ. ಕೇವಲ ಕೈಸನ್ನೆ ಮಾಡಿಯೇ ಹೀಗೆ ಕೂಡಿಸಿಬಿಟ್ರಲ್ಲ! ಎಂದು ಚಟಾಕಿ ಹಾರಿಸಿದರು.

ಸಿದ್ಧರಾಮೋತ್ಸವ ಸ್ಟಿರಾಯ್ಡ್ ಇದ್ದಂತೆ. ಸ್ಟಿರಾಯ್ಡ್ನ ಶಕ್ತಿ ಬಹಳ ಹೊತ್ತು ಇರುವದಿಲ್ಲ. ಇನ್ನೂ 8 ತಿಂಗಳವರೆಗೆ ಈ ಸ್ಟಿರಾಯ್ಡ್ ಶಕ್ತಿ ನಿಲ್ಲುವದಿಲ್ಲ. ಹಾಗೆಯೇ ಸಿದ್ಧರಾಮೋತ್ಸವವೂ ಕೂಡ ಬಹಳ ಕಾಲ ಪರಿಣಾಮ ಬೀರುವದಿಲ್ಲ. ಇವರ ಸಿದ್ಧರಾಮೋತ್ಸವ ಕಾರ್ಯಕ್ರಮ ಬಿಜೆಪಿಯ ಮೇಲೆ ಯಾವ ಪರಿಣಾಮವನ್ನೂ ಬೀರುವದಿಲ್ಲ. ಇಂಥಹ ಆಯೋಜನೆಗಳಿಂದ ಬಿಜೆಪಿ ಹೆದರುವದೂ ಇಲ್ಲ ಬಿಡಿ. ಹುಟ್ಟುಹಬ್ಬದ ಸಂಭ್ರಮವನ್ನು ನೋಡಿ ಜನ ಓಟು ಹಾಕುವುದಿಲ್ಲ ಎಂದು ಹೇಳಿದರು.

ರಾಷ್ಟ್ರಧ್ವಜದ ಬಗ್ಗೆ ಹಗುರವಾಗಿ ಮಾತನಾಡುವುದು ಯಾರಿಗೂ ಶೋಭೆ ತರುವ ವಿಚಾರವಲ್ಲ. ರಾಷ್ಟ್ರಧ್ವಜ ಬಿಜೆಪಿಯ ಸ್ವತ್ತಲ್ಲ. ಆರ್.ಎಸ್.ಎಸ್, ಪ್ರಧಾನಿ ಮೋದಿಯವರನ್ನು ತೆಗಳಿ ಬೈಯದೇ ಇದ್ದರೆ, ಇವರಿಗೆ ತಿಂದ ಊಟ ಜೀರ್ಣವಾಗುವದಿಲ್ಲವೇನೋ. ನಮ್ಮ ಗುರಿ 150+ ಸೀಟುಗಳೆಂದು ನಾವೇನೂ ಡಂಗೂರ ಬಾರಿಸುವ ಅವಶ್ಯಕತೆ ಇಲ್ಲ ಎಂದರು.

ರಾಜ್ಯಾದ್ಯಂತ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂಭವಿಸುತ್ತಿರುವ ಹಾನಿಯ ಬಗ್ಗೆ ಪ್ರತಿಕ್ರಿಯಿಸಿದ ಸಿ.ಸಿ. ಪಾಟೀಲ, ಕಳೆದ ಎರಡು-ಮೂರು ತಿಂಗಳುಗಳಿಂದ ಅತ್ಯಂತ ಭೀಕರವಾದ ಮಳೆಯನ್ನು ರಾಜ್ಯ ಎದುರಿಸುತ್ತಿದೆ. ಮಡಿಕೇರಿ, ಮೈಸೂರು, ಉಡುಪಿ, ಮಂಗಳೂರು ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದೆ. ಆ ಭೀಕರ ದೃಶ್ಯಗಳನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಗದಗ ಜಲ್ಲೆಯ ಹಲವು ಪ್ರದೇಶಗಳಲ್ಲಿಯೂ ವಿಪರೀತ ಮಳೆ ಸುರಿದಿದೆ. ಬೆಳೆ, ವಾಸದ ಮನೆಗಳಿಗೂ ಸಾಕಷ್ಟು ಹಾನಿಯಾಗಿದೆ.

ಮುಖ್ಯಮಂತ್ರಿಗಳು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರೂ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸುಮಾರು 200 ಕೋಟಿ.ರೂಗಳ ಮಧ್ಯಂತರ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಿದ್ದಾರೆ.

ಗದಗ ಜಿಲ್ಲೆಗೆ ಐದು ಕೋಟಿ.ರೂಗಳ ಬೆಳೆ ಪರಿಹಾರ ಮಂಜೂರಾಗಿದೆ. ಮುಖ ನೋಡಿ ಮಣೆ ಹಾಕದೇ ಯಾವ ಬೆಳೆ ಹಾನಿಯಾಗಿದೆಯೆಂದು ನಿಖರವಾಗಿ ಸಮೀಕ್ಷೆ ನಡೆಸಿ ಹಾನಿ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಧಿಕಾರಿಗಳೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದಷ್ಟು ಶೀಘ್ರವಾಗಿ ಸರ್ಕಾರ ಬೆಳೆ ಹಾನಿ ಪರಿಹಾರವನ್ನು ತಲುಪಿಸಲಿದೆ ಎಂದರು.

ಗದಗ ನಗರದಲ್ಲಿ ಸಾಕಷ್ಟು ಕಡೆ ರಸ್ತೆಗಳೂ ಹಾನಿಗೊಳಗಾಗಿವೆ. ಇವುಗಳ ದುರಸ್ತಿ ಕಾರ್ಯಕ್ಕೆ 12-13 ಕೋಟಿ ರೂ. ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಟೆಂಡರ್ ಕಾಮಗಾರಿ ಪ್ರಗತಿಯಲ್ಲಿದೆ. ಮಳೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಕೆಲಸ ಪ್ರಾರಂಭಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮುಖಂಡ‌ ಅನಿಲ‌ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಮುಖಂಡರಾದ ಭೀಮಸಿಂಗ್ ರಾಠೋಡ, ಬಾಬು ಯಲಿಗಾರ, ಪರಮೇಶ್ ನಾಯಕ್, ಶರಣಪ್ಪ ಕಮಡೊಳ್ಳಿ ಸೇರಿದಂತೆ ಅನೇಕರಿದ್ದರು.

ಮುಂಡರಗಿ ಪೊಲೀಸರ ಕಾರ್ಯಾಚರಣೆ; 6 ಜನ ಹನಿ ನೀರಾವರಿ ಪೈಪ್ ಕಳ್ಳರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಮುಂಡರಗಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ರೈತರ ಜಮೀನುಗಳಲ್ಲಿನ ನಡೆದಿದ್ದ ಹನಿ ನೀರಾವರಿ ಪೈಪ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಮುಂಡರಗಿ ಪೊಲೀಸರು ಆರು ಜನರನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಪೈಪ್ ಜಪ್ತಿ ಮಾಡಿದ್ದಾರೆ.

ಆಗಸ್ಟ್ ಮೂರರಂದು ಮುಂಡರಗಿ ತಾಲೂಕಿನ ಜಂತ್ಲಿ-ಶಿರೂರು ಗ್ರಾಮದಲ್ಲಿ ಹನಿ ನೀರಾವರಿ ಪೈಪ್ ಗಳನ್ನು ಕಳ್ಳತನ ಮಾಡಿ ಟ್ರ್ಯಾಕ್ಟರ್ ಮೂಲಕ ಸಾಗಾಟ ಮಾಡುತ್ತಿದ್ದಾಗ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದ ಖದೀಮರು, ಗ್ರಾಮಸ್ಥರು ಬೆನ್ನಟ್ಟಿದಾಗ ಟ್ರ್ಯಾಕ್ಟರ್ ಬಿಟ್ಟು ಓಡಿ ಹೋಗಿ ಪರಾರಿಯಾಗಿದ್ದರು.

ಇದನ್ನೂ ಓದಿ ಗ್ರಾಮಸ್ಥರ ಕಣ್ಣಿಗೆ ಬಿದ್ದ ನೀರಿನ ಪೈಪ್ ಕಳ್ಳರು! ಬೆನ್ನಟ್ಟಿದಾಗ ಟ್ರ್ಯಾಕ್ಟರ್ ಬಿಟ್ಟು ಪರಾರಿ

ಇದರಿಂದ ಆಕ್ರೋಶಗೊಂಡ‌ ಗ್ರಾಮಸ್ಥರು, ಕಳ್ಳರನ್ನು ಹಿಡಿದು ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದರು.

ಪ್ರಕರಣ ದಾಖಲು ಮಾಡಿಕೊಂಡ ಮುಂಡರಗಿ ಪೊಲೀಸರು ಹಿರೇವಡ್ಡಟ್ಟಿಯ ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೊಟೇಶ್ ನಿಂಗಪ್ಪ ಹಂಚಿನಾಳ, ಹನಮಂತ ಕನಕಪ್ಪ ನಿಟ್ಟಾಲಿ, ವಿಜಯಕುಮಾರ್ ಶರಣಯ್ಯ ಹಾಲಗಿಮಠ ಹಾಗೂ ದೇವೇಂದ್ರ ಅಲಿಯಾಸ್ ದೇವರಾಜ ಬಸವಣ್ಣೆಪ್ಪ ಲಕ್ಕುಂಡಿ ಎಂದು ಪೊಲೀಸ ಮೂಲಗಳು ತಿಳಿಸಿವೆ.

ಇನ್ನೊಂದು ಪ್ರಕರಣ ಆಗಸ್ಟ್ 7 ರ ಅಂದರೆ ಭಾನುವಾರ ಬೆಳಗಿನ ಜಾವ ಮುಂಡರಗಿ ಪಟ್ಟಣದಲ್ಲಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಹನಿ ನೀರಾವರಿ ಪೈಪ್ ಸಾಗಾಟ ಮಾಡುತ್ತಿದ್ದಾಗ, ಪೊಲೀಸರ ಕೈಗೆ ಇಬ್ಬರು ಸಿಕ್ಕಿ‌ ಬಿದ್ದಿದ್ದಾರೆ.

ಬಂಧಿತರನ್ನು ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಶರಣಪ್ಪ ರಮೇಶ್ ಉಪ್ಪಾರ ಹಾಗೂ ಹಾಲೇಶ್‌ ನಿಂಗಪ್ಪ ಸಿಂದೋಗಿ ಎಂದು ಗುರುತಿಸಲಾಗಿದೆ. ಇನ್ಸ್‌ಪೆಕ್ಟರ್ ಸುನಿಲ್ ಸವದಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಕಸಗೂಡಿಸಿದ ನಗರಸಭೆ ಅಧ್ಯಕ್ಷೆ ಉಷಾ ದಾಸರ

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸ್ವಚ್ಚತಾ ಅಭಿಯಾನ, ಅವಳಿ ನಗರದ ಸ್ವಚ್ಚತೆಗೆ ಕೈಜೋಡಿಸಿ; ಉಷಾ ದಾಸರ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ಅವಳಿ‌ ನಗರದ ಸೌಂದರ್ಯೀಕರಣ ಕೇವಲ ಪೌರ ಕಾರ್ಮಿಕರಿಂದಷ್ಟೇ ಸಾಧ್ಯವಿಲ್ಲ. ಅವರ ಜೊತೆಗೆ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಕೈಜೋಡಿಸಿದಾಗಷ್ಟೇ ಅವಳಿ ನಗರ ಸ್ವಚ್ಚತೆಯಲ್ಲಿ ಮಾದರಿ ನಗರವಾಗಿ ಹೊರಹೊಮ್ಮಲಿದೆ ಎಂದು ನಗರಸಭೆ ಅಧ್ಯಕ್ಷೆ ಉಷ ದಾಸರ ಹೇಳಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಚ್ಚತೆ ಕಾಪಾಡುವುದರಿಂದ ಕೊಳಚೆಯಿಂದ ಹರಡಬಹುದಾದ ಅರ್ಧದಷ್ಟು ಕಾಯಿಲೆಗಳನ್ನು ನಿಯಂತ್ರಿಸಬಹುದು. ಇಂತಹ ಮಹಾತ್ಕಾರ್ಯಕ್ಕೆ ಅವಳಿ ನಗರದ ಸ್ವಚ್ಚತೆಗೆ ಪೌರ ಕಾರ್ಮಿಕರು ಪ್ರತಿನಿತ್ಯ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ ಸ್ವಚ್ಚತೆಗೆ ಸಹಕರಿಸಬೇಕು. ಕಸದ ತೊಟ್ಟಿಗಳಲ್ಲಿ ಕಸ ಹಾಕಬೇಕು. ರಾತ್ರಿ ಹೊತ್ತು ತ್ಯಾಜ್ಯವನ್ನು ರಸ್ತೆ ಬದಿ ಎಸೆದು ಹೋಗುತ್ತಿರುವುದರಿಂದ ಅವಳಿ ನಗರ ಅಂದಗೆಡುತ್ತಿದೆ. ಹೀಗಾಗಿ ಎಲ್ಲೆಂದರಲ್ಲಿ ಕಸ ಎಸೆಯುವ ರೂಢಿಯನ್ನ ಕೈಬಿಟ್ಟು
ಸ್ವಚ್ಚತೆಯ ವಿಚಾರದಲ್ಲಿ ಅವಳಿ ನಗರವನ್ನು ಸುಂದರ ನಗರವನ್ನಾಗಿಸಬೇಕು ಎಂದರು.

ಮಹಾತ್ಮಾ ಗಾಂಧಿಜಿ ಅವರು ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದರಲ್ಲದೇ, ಸ್ವಚ್ಚತೆಯಲ್ಲಷ್ಟೇ ದೇವರು ಕಾಣುತ್ತಾನೆ ಎಂದು ಹೇಳುತ್ತಿದ್ದರು. ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಆಸ್ತಿಗಳು, ರಸ್ತೆಗಳನ್ನು ಸ್ವಚ್ಚವಾಗಿಡುವ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಜಿ ಅವರು 2014ರಲ್ಲಿ ಸ್ವಚ್ಚ ಭಾರತ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಅಭಿಯಾನದಿಂದಾಗಿ ದೇಶದ ಬಹುತೇಕ ನಗರಗಳಿಂದು ಸುಂದರವಾಗಿ ಕಾಣುತ್ತಿದ್ದು, ಅಂತಹ ನಗರಗಳ ಪಟ್ಟಿಯಲ್ಲಿ ಗದಗ-ಬೆಟಗೇರಿಯೂ ಸೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಉಷಾ ದಾಸರ ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅನಿಲ್ ಅಬ್ಬಿಗೇರಿ, ಅನಿತಾ ಗಡ್ಡಿ, ಮುಖಂಡರಾದ ವಿಜಯಕುಮಾರ್ ಗಡ್ಡಿ, ಮಹೇಶ ದಾಸರ, ಶಶಿಧರ ದಿಂಡೂರ, ಅಮರನಾಥ್ ಗಡಗಿ, ವಿಜಯಲಕ್ಷ್ಮಿ ಮಾನ್ವಿ, ಪ್ರಶಾಂತ್ ದಾಸರ ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ಪೌರ ಕಾರ್ಮಿಕರು ಇದ್ದರು.

11ರೂ ಕಾಣಿಕೆ ಸಲ್ಲಿಸಿ ಹನಮನ ಮೂರ್ತಿ ಕದ್ದೊಯ್ದ ಕಳ್ಳರು!

ಮರಡಿ ಹನುಮಂತ ದೇವಸ್ಥಾನದಲ್ಲಿ ನಡೆದ ಪ್ರಕರಣ….ಹನುಮನ ಮೂರ್ತಿ ಕದ್ದೊಯ್ದ ಕಳ್ಳರು!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ಸೂರಣಗಿ ಗ್ರಾಪಂ ವ್ಯಾಪ್ತಿಯ ದೊಡ್ಡೂರ-ಸುವರ್ಣಗಿರಿ ತಾಂಡಾ- ಯಲ್ಲಾಪುರ ಮಾರ್ಗದಲ್ಲಿ ಮರಡಿ ಹನಮಂತದೇವರ ದೇವಸ್ಥಾನದಲ್ಲಿನ ಹನಮಂತದೇವರ ಕಲ್ಲಿನ ದೊಡ್ಡದಾದ ಮೂರ್ತಿಯನ್ನೇ ಖದೀಮರು ಶನಿವಾರ ಕದ್ದೊಯ್ದಿದ್ದಾರೆ.

ಮೂರ್ತಿ ಕದ್ದೊಯುವ ಮೊದಲು ಅಲ್ಲಿ ಪೂಜೆ ಸಲ್ಲಿಸಿ. 11 ರೂ. ಕಾಣಿಕೆ ಮತ್ತು ಅಲ್ಲಲ್ಲಿ ಲಿಂಬೆಹಣ್ಣು ಇಟ್ಟು ಮೂರ್ತಿ ತೆಗೆದುಕೊಂಡು ಹೋಗಿದ್ದಾರೆ.

ಸುತ್ತಲಿನ ಗ್ರಾಮದ ದೇವರ ದರ್ಶನಕ್ಕೆ ಬೆಳ್ಳಬೆಳಿಗ್ಗೆ ಆಗಮಿಸಿದ್ದ ಭಕ್ತರು ಗುಡಿಯಲ್ಲಿ ದೇವರ ಮೂರ್ತಿ ಇಲ್ಲದ್ದನ್ನು ಕಂಡು ಗಾಬರಿಯಗಿದ್ದಾರೆ.

ಅತ್ಯಂತ ಪುರಾತನವಾದ ಈ ದೇವಸ್ಥಾನ ಇತ್ತೀಚೆಗೆ ಬಹಳಷ್ಟು ಪ್ರಸಿದ್ಧಿ ಮತ್ತು ಭಕ್ತರ ಗಮನ ಸೆಳೆದಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಈ ದೇವಸ್ಥಾನದ ಅಭಿವೃದ್ಧಿಗೆ ಗ್ರಾಮಸ್ಥರು, ಭಕ್ತರು ಮುಂದಾಗಿದ್ದರು. ಹೊರವಲಯದಲ್ಲಿರುವ ಈ ದೇವಸ್ಥಾನದಲ್ಲಿನ ಸಣ್ಣ ಆಭರಣಗಳು, ಘಂಟೆಗಳ ಕಳ್ಳತನ ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಖದೀಮರು ನಾಲ್ಕೈದು ಅಡಿ ಎತ್ತರದ ದೇವರ ಮೂರ್ತಿಯನ್ನೇ ಕದ್ದೊಯ್ದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ ಒಂದೇ ವಾರದಲ್ಲಿ ನಾಲ್ಕು ಕಡೆ ದಾಳಿ; ಲಕ್ಷಾಂತರ ರೂ ಮೌಲ್ಯದ ಅನ್ನಭಾಗ್ಯ ಅಕ್ಕಿ ಜಪ್ತಿ

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೋಲಿಸರು ಪರಿಶೀಲನೆ ನಡೆಸಿ ಮಾಹಿತಿ ಪಡೆದು. ಈ ವೇಳೆ ದೇವಸ್ಥಾನ ಕಮಿಟಿ ಅಧ್ಯಕ್ಷ ಶಂಕ್ರಪ್ಪ ಶೀರನಹಳ್ಳಿ, ಉಪಾಧ್ಯಕ್ಷ ಸಕ್ರಪ್ಪ ನಾಯಕ, ಪ್ರ.ಕಾರ್ಯದರ್ಶಿ ಶರಣಪ್ಪ ಇಚ್ಚಂಗಿ, ಶಶಿಕಾಂತ ಕಾರಭಾರಿ, ಆನಂದ ಪೂಜಾರ, ಚಂದ್ರಪ್ಪ ಮೂಲಿಮನಿ ಸೇರಿ ಗ್ರಾಮಸ್ಥರು ಮೂರ್ತಿ ಕಳ್ಳರ ಪತ್ತೆ ಮಾಡಿ ಮೂರ್ತಿ ಪುನರ್ ಪ್ರತಿಷ್ಠಾಪಿಸುವಂತಾಗಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡ ಲಕ್ಷ್ಮೇಶ್ವರ ಪಿಎಸ್ಐ ಪ್ರಕಾಶ್ ಡಿ, ಘಟನೆಯ ಜಾಡು ಹಿಡಿದು ತನಿಖೆ ನಡೆಸುತ್ತಿದ್ದಾರೆ.

ಒಂದೇ ವಾರದಲ್ಲಿ ನಾಲ್ಕು ಕಡೆ ದಾಳಿ; ಲಕ್ಷಾಂತರ ರೂ ಮೌಲ್ಯದ ಅನ್ನಭಾಗ್ಯ ಅಕ್ಕಿ ಜಪ್ತಿ

 

ವಿಜಯಸಾಕ್ಷಿ ಸುದ್ದಿ, ಗದಗ

ಬಡವರಿಗೆ ಅನುಕೂಲವಾಗಲಿ ಅಂತ ಸರಕಾರ ಜಾರಿಗೆ ತಂದ ಅನ್ನಭಾಗ್ಯ ಅಕ್ಕಿ ಯೋಜನೆಯಿಂದ ಕಡುಬಡವರಿಗೂ ಹೆಚ್ಚು ಅನುಕೂಲವಾಗಲಿ ಎಂಬುದೇ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಾಗಿತ್ತು.
ಸರಕಾರಿ ಯೋಜನೆಗಳು ಅದರಲ್ಲೂ ಜನಪರ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಕೆಲ ದುರುಳರು ಸಜ್ಜಾಗಿರುತ್ತಾರೆಂಬುದಕ್ಕೆ ಈ ಘಟನೆಗಳೇ ಸಾಕ್ಷಿ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಅಕ್ಕಿ ದಂಧೆಕೋರರು ಹಗಲು- ರಾತ್ರಿಯೆನ್ನದೆ ಯಾರದೂ ಭಯವಿಲ್ಲದೇ ಸಾಗಾಟ ನಡೆಸುತ್ತಿದ್ದಾರೆ.

ಒಂದೇ ವಾರದಲ್ಲಿ ಸೆರೆಸಿಕ್ಕ ಖದೀಮರು,
ಕಳೆದ ಹಲವು ದಿನಗಳಿಂದ ಈ ಅಕ್ಕಿ ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಈ ದಂಧೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಅವರು ಸೀದಾ ದಂಧೆಕೋರರಿಗೆ ಮಾಹಿತಿ ನೀಡುತ್ತಿದ್ದರು. ದಂಧೆಗೆ ಅಡ್ಡಿ ಪಡಿಸುವವರಿಗೆ, ಅಧಿಕಾರಿಗಳ ಗಮನಕ್ಕೆ ತರುವವರಿಗೆ ದುಡ್ಡಿನ ಆಸೆ ತೋರಿಸಿ ಅವರನ್ನು ಬುಕ್ ಮಾಡಿಕೊಳ್ಳುತ್ತಿದ್ದ ದಂಧೆಕೋರರು, ಇಡೀ ಅವಳಿ ನಗರದಲ್ಲಿ ಅಕ್ಕಿ ಗಮಟಿನ ವಾತಾವರಣ ನಿರ್ಮಾಣ ಮಾಡಿದ್ದಾರೆ.

ಒಂದನೆಯ ಪ್ರಕರಣ ಜುಲೈ 27ರ ಮಧ್ಯಾಹ್ನ ಗದಗನ ಗುದಾಮವೊಂದರಲ್ಲಿ ಸ್ಟಾಕ್ ಆಗಿದ್ದ ಅಕ್ಕಿಯನ್ನು ಲೋಡ್ ಮಾಡಿಕೊಂಡು ಹೊರಟಾಗ ಹುಲಕೋಟಿ ಬಳಿ ಕೆಲ ಸಂಘಟನೆಯ ಕಾರ್ಯಕರ್ತರು ಲಾರಿ ನಿಲ್ಲಿಸಿ ವಿಚಾರಿಸಿದಾಗ ಅನ್ನಭಾಗ್ಯ ಅಕ್ಕಿ ಎಂದು ಗೊತ್ತಾಗಿದೆ. ಆಗ ಪೊಲೀಸರಿಗೆ ಮಾಹಿತಿ ನೀಡಲಾಗಿ ನಂತರ ದೊಡ್ಡ ಹೈಡ್ರಾಮಾ ನಡೆದಿದೆ. ಪೊಲೀಸರು, ಕೆಲ ಅಧಿಕಾರಿಗಳು ಕೇಸ್ ಮಾಡಿಕೊಳ್ಳಲು ತುಂಬಾ ಸತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳ ಛೇಂಬರ್ ವರೆಗೂ ಈ ಪ್ರಕರಣ ಹೋದ ನಂತರ ಪೊಲೀಸರು ರಾಜಸ್ಥಾನದ ಲಾರಿ, ಚಾಲಕ ಧರ್ಮರಾಮ ಎಂಬಾತನನ್ನು ಬಂಧಿಸಿ, ಸುಮಾರು 4ಲಕ್ಷ 31 ಸಾವಿರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡರು ಎಂದು ಹೇಳಲಾಗುತ್ತಿದೆ.

ಎರಡನೆಯದಾಗಿ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಜುಲೈ 30ರಂದು ಗೂಡ್ಸ್ ವಾಹನದಲ್ಲಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುತ್ತಿದ್ದಾಗ ಚಾಲಕ ಲಕ್ಕುಂಡಿಯ ಮಂಜುನಾಥ್ ಭೀಮಪ್ಪ ಈಟಿ ಎಂಬಾತನನ್ನು ಬಂಧಿಸಿ, 53 ಸಾವಿರ ರೂ. ಮೌಲ್ಯದ ಅಕ್ಕಿ ಜಪ್ತಿ ಮಾಡಲಾಗಿದ್ದು, ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 1 ರಂದು ಬೆಳಿಗ್ಗೆ ಹಳೆ ಡಿಸಿ ಆಫೀಸ್ ಹತ್ತಿರ ಮಿನಿಗೂಡ್ಸ್ ವಾಹನದಲ್ಲಿ 95ಸಾವಿರ ರೂ. ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಕೆಎ-26 ಬಿ3498 ವಾಹನದ ಚಾಲಕ ಪರಾರಿಯಾಗಿದ್ದಾನೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 4 ರಂದು ಮಧ್ಯಾಹ್ನ 12ಗಂಟೆಗೆ ಜಿಲ್ಲೆಯ ನರಗುಂದದ ರೋಣ ಕ್ರಾಸ್ ಬಳಿ ರಾಜಸ್ಥಾನ ಪಾಸಿಂಗ್ ಹೊಂದಿರುವ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಇಬ್ಬರು ಚಾಲಕರನ್ನು ಬಂಧಿಸಿ, ಅಂದಾಜು 50 ಕೆ.ಜಿ ತೂಕದ 400ಕ್ಕೂ ಹೆಚ್ಚು ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 5ಲಕ್ಷ 15 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಗೆ ಆಹಾರ ನಿರೀಕ್ಷಕ ಅನಿಲ ಪವಾರ ಎಂಬುವವರು ದೂರು ನೀಡಿದ್ದಾರೆ.

ಒಂದೇ ವಾರದಲ್ಲಿ ನಾಲ್ಕು ಪ್ರಕರಣಗಳು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಈ ಅನ್ನಭಾಗ್ಯ ಅಕ್ರಮದ ರೂವಾರಿಗಳು ಯಾರು ಎಂಬುದು ಪೊಲೀಸರಿಗೂ, ಆಹಾರ ಇಲಾಖೆಯ ಅಧಿಕಾರಿಗಳಿಗೂ ನಿಗೂಢವಾಗಿಲ್ಲ ಎಂಬುದು ಸಾಮಾನ್ಯ ಸಂಗತಿಯಾಗಿದೆ. ಸದ್ಯಕ್ಕೆ ಚಾಲಕರಷ್ಟೇ ಬಂಧನವಾಗಿದೆ. ಈ ಅನ್ನಭಾಗ್ಯ ಅಕ್ರಮ ಅಕ್ಕಿ ಸಾಗಾಟದ ಮೂಲ ರೂವಾರಿಗಳನ್ನು ಪತ್ತೆ ಹಚ್ಚಬೇಕಾದ ಜವಬ್ದಾರಿ ಪೊಲೀಸ್ ಇಲಾಖೆಗೆ, ಜಿಲ್ಲಾಡಳಿತದ ಮೇಲಿದೆ.

ಮಹಿಳೆ ಕೊಲೆ ಆರೋಪ ಸಾಬೀತು; ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ, ಹತ್ತು ಸಾವಿರ ರೂ.ದಂಡ

ವಿಜಯಸಾಕ್ಷಿ ಸುದ್ದಿ, ಗದಗ

ಹಳೆಯ ದ್ವೇಷದಿಂದ ಮಹಿಳೆಯೊಬ್ಬಳನ್ನು ಕೊಲೆ ಮಾಡಿ, ಪ್ರಕರಣವನ್ನು ಮುಚ್ಚಿಹಾಕಲು ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಶಿಕ್ಷೆಯನ್ನು ಪ್ರಕಟಿಸಿದೆ.

ಘಟನೆಯ ಹಿನ್ನೆಲೆ

ಪ್ರಕರಣದ ಆರೋಪಿ ಹನುಮಂತಪ್ಪ ದುರಗಪ್ಪ ಬಂಡಿವಡ್ಡರ ಇವನು ಗದಗ ಗ್ರಾಮೀಣ ಪೋಲೀಸ್ ಠಾಣಾ ಹದ್ದಿ ಪೈಕಿ ಹರ್ತಿ ಗ್ರಾಮದಲ್ಲಿ ಹಳೆಯ ಸಿಟ್ಟಿನಿಂದ ಮೃತ ಲಕ್ಷ್ಮವ್ವಳ ಮನೆಗೆ ಹೋಗಿ ದಿ. 02.10.2015ರಂದು ರಾತ್ರಿ 11.30 ಗಂಟೆಗೆ ಕುತ್ತಿಗೆಗೆ ಹಗ್ಗದಿಂದ ಉರುಳು ಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ಕೊಲೆ ಮಾಡಲು ಉಪಯೋಗಿಸಿದ ಹಗ್ಗವನ್ನು ಹರ್ತಿ ಗ್ರಾಮದ ಬಯಲು ಕಡೆಗೆ ಹೋಗಿ ಗಾಂವಠಾಣಾ ಜಾಗೆಯ ಪಾಳುಬಾವಿಯ ಹತ್ತಿರ ಕಂಟಿಯಲ್ಲಿ ಎಸೆದಿದ್ದ. ಲಕ್ಷ್ಮವ್ವ ಉಪಚಾರ ಫಲಿಸದೇ ದಿ. 24.10.2015ರಂದು ಸಂಜೆ 5.10 ಗಂಟೆಗೆ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.

ಆರೋಪಿತನ ವಿರುದ್ಧ ಗದಗ ಗ್ರಾಮೀಣ ವೃತ್ತದ ಅಂದಿನ ವೃತ್ತ ಆರಕ್ಷಕ ಅಧಿಕ್ಷಕ ಸೋಮಶೇಖರ.ಜಿ. ಜುಟ್ಟಲ್ ಅವರು ತನಿಖೆಯನ್ನು ಪೂರೈಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ.ಎಸ್. ಶೆಟ್ಟಿ ಅವರು, ಸದರಿ ಪ್ರಕರಣದಲ್ಲಿ ಆರೋಪ ರುಜುವಾತು ಆಗಿದ್ದರಿಂದ ಆರೋಪಿತನಾದ ಹನುಮಂತಪ್ಪ ದುರಗಪ್ಪ ಬಂಡಿವಡ್ಡರ ಇವನಿಗೆ ಆಗಸ್ಟ್ 03ರಂದು ಭಾ.ದಂ.ಸಂ ಕಲಂ: 304(2) ಭಾದಂಸಂ.ರಡಿ 10 ವರ್ಷ ಕಠಿಣ ಶಿಕ್ಷೆ ಹಾಗೂ ರೂ. 10,000 ದಂಡ, ದಂಡ ತುಂಬಲು ತಪ್ಪಿದಲ್ಲಿ 6 ತಿಂಗಳ ಸಾದಾ ಸಜೆ ಮತ್ತು 201 ಭಾದಂಸಂ.ರಡಿ 1 ವರ್ಷ ಸಾದಾ ಶಿಕ್ಷೆ ಹಾಗೂ ರೂ. 2,000 ದಂಡ, ದಂಡ ತುಂಬಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸವಿತಾ.ಎಂ. ಶಿಗ್ಲಿ ಇವರು ಸಾಕ್ಷಿ ವಿಚಾರಣೆ ಮಾಡಿಸಿದ್ದು, ಸರ್ಕಾರಿ ಅಭಿಯೋಜಕರಾದ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.

ಶಿಕ್ಷಕಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು: ನಗರಸಭೆ ಬಿಜೆಪಿ ಸದಸ್ಯೆ ಸೇರಿ ನಾಲ್ವರ ಬಂಧನ

ವಿಜಯಸಾಕ್ಷಿ ಸುದ್ದಿ, ಮೈಸೂರು

ಐದು ತಿಂಗಳ ಹಿಂದೆ ನಂಜನಗೂಡಿನಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಂಜನಗೂಡು ನಗರಸಭೆಯ ಬಿಜೆಪಿ ಸದಸ್ಯೆ ಗಾಯಿತ್ರಿ ಮುರುಗೇಶ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ: ಮಾರ್ಚ್ 9ರಂದು ನಂಜನಗೂಡಿನ ಮೊರಾರ್ಜಿ ದೇಸಾಯಿ ಶಾಲೆಯ ಹಿಂದಿ ಶಿಕ್ಷಕಿ ಸುಲೋಚನಾ(45 ವರ್ಷ) ಮಹದೇಶ್ವರ ಬಡಾವಣೆಯ ಬಾಡಿಗೆ ಮನೆಯಲ್ಲಿ ನಿಗೂಢ ರೀತಿಯಲ್ಲಿ ಕೊಲೆಯಾಗಿದ್ದರು. ಏಳು ವರ್ಷಗಳ ಹಿಂದೆ ಪತಿ ಡಿ.ಕೆ.ಸುರೇಶ್ರನ್ನು ಕಳೆದುಕೊಂಡಿದ್ದ ಸುಲೋಚನಾ ಇಬ್ಬರು ಮಕ್ಕಳನ್ನೂ ಹೊಂದಿದ್ದರು. ಮಗಳಿಗೆ ಮದುವೆಯಾಗಿದ್ದು, ಮಗ ದಯಾನಂದ ಬೆಂಗಳೂರಿನಲ್ಲಿದ್ದರು. ಹೀಗಾಗಿ ಸುಲೋಚನಾ ನಂಜನಗೂಡಿನಲ್ಲಿ ಒಬ್ಬರೇ ಇದ್ದು, ಕೆಲಸ ಮಾಡುತ್ತಿದ್ದರು.

ಇನ್ನು ಇತ್ತ, ಆರೋಪಿ ಗಾಯಿತ್ರಿ ಅವರ ಪತಿ ಮುರುಗೇಶ್ ಸ್ಥಳೀಯ ದೇವಸ್ಥಾನವೊಂದರಲ್ಲಿ `ಡಿ’ ದರ್ಜೆಯ ನೌಕರರಾಗಿದ್ದು, ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು. ತನ್ನ ಪತಿಯ ಜೊತೆ ಶಿಕ್ಷಕಿ ಸುಲೋಚನಾ ಸಲುಗೆಯಿಂದಿದ್ದು, ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಗಾಯಿತ್ರಿ ಬಲವಾದ ಸಂಶಯ ಹೊಂದಿದ್ದರು ಎನ್ನಲಾಗಿದೆ.

ಈ ವಿಷಯಕ್ಕಾಗಿ ಸಾಕಷ್ಟು ಬಾರಿ ಮನೆಯಲ್ಲಿ ಗಲಾಟೆಗಳೂ ನಡೆದಿದ್ದವು. ತನ್ನ ಕುಟುಂಬದ ನೆಮ್ಮದಿಗೆ ಅಡ್ಡಿಯಾಗುತ್ತಿರುವ ಕಾರಣಕ್ಕಾಗಿ ಸುಪಾರಿ ಕೊಟ್ಟು ಸುಲೋಚನಾರನ್ನು ಕೊಲೆ ಮಾಡಿಸಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದು, ನಗರಸಭೆ ಸದಸ್ಯೆ ಗಾಯಿತ್ರಿ ಮುರುಗೇಶ್ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಸಂಬಂಧಿಕರಾದ ಭಾಗ್ಯ, ನಾಗಮ್ಮ ಮತ್ತು ಕುಮಾರ್ ಎಂಬ ಮೂವರು ಸಂಬಂಧಿಕರನ್ನೂ ಮೈಸೂರು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರಕಾರಿ ನೌಕರಿ; ಮಹಿಳೆ, ತಹಶೀಲ್ದಾರ, ಆರ್ ಐ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ತಹಶೀಲ್ದಾರ ಎದುರು ಸುಳ್ಳು ಮಾಹಿತಿ ನೀಡಿ, ಅರ್ಹತೆ ಇಲ್ಲದಿದ್ದರೂ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದು ಸರಕಾರದ ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿ ಹುದ್ದೆಯ ಕೆಲಸ ಪಡೆದುಕೊಂಡ ಮಹಿಳೆ ಹಾಗೂ ಅಂದಿನ ತಹಶೀಲ್ದಾರ, ಕಂದಾಯ‌ ನಿರೀಕ್ಷಕ ಹಾಗೂ ತಲಾಠಿ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ಇಂಜಿನಿಯರ್ ಮನೆಯ ಬೀಗ ಮುರಿದು 9.42 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

ಪ್ರಕರಣದ ಆರೋಪಿ ಮುಂಡರಗಿ ತಾಲೂಕಿನ ಬಿದರಳ್ಳಿಯ ರೇಣುಕಾ ಸತ್ಯಪ್ಪ ಕುರಗೋಡಿ ಎಂಬುವವರು ಮಡ್ಡರ ಜಾತಿಗೆ ಸೇರಿದ್ದರೂ ಕೂಡ ದಿ. 14.01.2015ರಂದು ಮುಂಡರಗಿಯ ತಹಶೀಲ್ದಾರ ಎದುರು ಸುಳ್ಳು ಮಾಹಿತಿ ಹಾಗೂ ಸುಳ್ಳು ಘೋಷಣೆಗಳನ್ನು ಮಾಡಿ, ಅವರಿಂದ ಹಿಂದೂ ಭೋವಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದು ಅದರ ಆಧಾರದ ಮೇಲೆ ಕಿರಿಯ ಆರೋಗ್ಯ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿ, ನೇಮಕಾತಿ ಪಡೆದು ದಿ. 31.01.2015 ರಂದು ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸಕ್ಕೆ ಹಾಜರಾಗಿದ್ದರು.

ಇದನ್ನೂ ಓದಿ ಶಿಕ್ಷಕಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು: ನಗರಸಭೆ ಬಿಜೆಪಿ ಸದಸ್ಯೆ ಸೇರಿ ನಾಲ್ವರ ಬಂಧನ 

ಈ ಮೂಲಕ ಸರ್ಕಾರಕ್ಕೆ ಮತ್ತು ನಿಜವಾದ ಪರಿಶಿಷ್ಟ ಜಾತಿಯ ಜನರಿಗೆ ಮೋಸ ಮಾಡಿ ಅಪರಾಧವೆಸಗಿರುವ ಬಗ್ಗೆ ರೇಣುಕಾ, ಸದರಿ ಜಾತಿ ಪ್ರಮಾಣಪತ್ರ ವಿತರಿಸಿದ ಅಂದಿನ ತಹಶೀಲ್ದಾರ, ಅಂದು ಕರ್ತವ್ಯದಲ್ಲಿದ್ದ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ

ಕಲಂ: 177,182,198,199,420,109
ಐಪಿಸಿ ಮತ್ತು U/S 3[1][q] sc/st[PA] amendment act-2015 ಮತ್ತು ಕಲಂ: 5(ಎ), 5(ಬಿ), 6(ಎ) ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಅಧಿನಿಯಮ 2011ರ ಅನ್ವಯ ಮೊಕದ್ದಮೆ ದಾಖಲಿಸುವಂತೆ ಎಸ್ಸಿ, ಎಸ್ಟಿ ರಕ್ಷಣಾ ಕೋಶದ
Directorate of civil rights enforcement ನ ಬಾಗಲಕೋಟೆಯ ಪೊಲೀಸ್ ಅಧಿಕಾರಿಗಳಾದ ವೆಂಕಟೇಶ ಎಸ್ ಮುರ್ನಾಳ ಎಂಬುವರು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇಂಜಿನಿಯರ್ ಮನೆಯ ಬೀಗ ಮುರಿದು 9.42 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಒಳಗಿದ್ದ ಲಕ್ಷಾಂತರ ರೂ. ಮೌಲ್ಯದ ಆಭರಣಗಳನ್ನು ದೋಚಿರುವ ಬಗ್ಗೆ ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 22ರಿಂದ ಜು.31ರೊಳಗಿನ ನಡುವಿನ ಅವಧಿಯಲ್ಲಿ ಹುಬ್ಬಳ್ಳಿ ರಸ್ತೆಯ ಕೇಶವ ನಗರದ ನಾಲ್ಕನೇ ಕ್ರಾಸ್ ನಲ್ಲಿ ಇರುವ ಇಂಜಿನಿಯರ್ ಸಮೀವುಲ್ಲಾ ಮಹಮ್ಮದಾಸ್ ಅಂಖನ್ ಲೋಹಾನಿ ಅವರ ವಾಸದ ಮನೆಯ ಗ್ರಿಲ್ಗೇಟಿಗೆ ಅಳವಡಿಸಿದ್ದ ಕೀಲಿಯನ್ನು ಹಾಗೂ ಬಾಗಿಲಿಗೆ ಹಾಕಿದ್ದ ಇಂಟರ್ಲಾಕನ್ನು ಮುರಿದ ಕಳ್ಳರು ಮನೆಯೊಳಗೆ ಹೋಗಿ ಬೆಡ್ರೂಮಿನ ಟ್ರೆಝರಿಯ ಬಾಗಿಲನ್ನು ಮೀಟಿ ತೆಗೆದು,

ಟ್ರೆಝರಿಯೊಳಗಿದ್ದ 6 ಲಕ್ಷ ರೂ. ಬೆಲೆಬಾಳುವ 200 ಗ್ರಾಂ. ತೂಕದ ನಾಲ್ಕು ಬಂಗಾರದ ನೆಕ್ಲೆಸ್, 2.7 ಲಕ್ಷ ರೂ. ಬೆಲೆಬಾಳುವ ಸುಮಾರು 90 ಗ್ರಾಂ. ತೂಕದ ನಾಲ್ಕು ಬಂಗಾರದ ಬಳೆಗಳು, 12 ಸಾವಿರ ರೂ. ಬೆಲೆಬಾಳುವ 4 ಗ್ರಾಂ. ತೂಕದ ಬಂಗಾರದ ಉಂಗುರ, 60 ಸಾವಿರ ರೂ. ಬೆಲೆಯ 20 ಗ್ರಾಂ. ತೂಕದ ಬಂಗಾರದ ಕಿವಿಯೋಲೆ ಸೇರಿದಂತೆ ಒಟ್ಟೂ 9,42,000 ರೂ. ಬೆಲೆಬಾಳುವ 314 ಗ್ರಾಂ. ತೂಕವಿರುವ ಬಂಗಾರದ ಆಭರಣಗಳು ಕಳ್ಳತನವಾಗಿದೆ.

ಈ ಕುರಿತು ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗದಗದಲ್ಲಿ ಹೀಗೊಂದು ಸಗಣಿ ಫೈಟ್!!

0

ವಿಜಯಸಾಕ್ಷಿ ಸುದ್ದಿ, ಗದಗ

ರಸ್ತೆಯಲ್ಲಿ ಫೈಟ್ ನಡಿತಿದ್ರೆ ಯಾರು ತಾನೇ ಮೋಜು ನೋಡಲ್ಲ ಹೇಳಿ? ಸುಮ್ಮನೆ ನಿಂತು ನೋಡುವವರು, ನಗುವವರು, ಮೊಬೈಲ್‌ನಲ್ಲಿ ಫೋಟೋ, ವಿಡಿಯೊ ತೆಗೆಯುವವರು… ಹೀಗೇ ಥರಾವರಿಯಾಗಿ ಜಗಳವನ್ನ ರಂಜನೀಯವಾಗಿ ಕಾಣುತ್ತಾರೆ.

ಗದಗನ ಗಂಗಾಪೂರಪೇಟೆಯಲ್ಲೂ ಮಂಗಳವಾರ ಸಂಜೆ ಇಂಥದ್ದೇ ರೋಚಕ ಕಾಳಗ ನಡೆಯಿತು. ಎರಡು ಗುಂಪುಗಳ ಸುಮಾರು 20 ಜನ, ಅದರಲ್ಲಿ ಅರ್ಧಕ್ಕರ್ಧ ಜನರಿಗೆ ಹೆಣ್ಣಿನ ವೇಷ, ಕೊರಳಲ್ಲಿ ತರಕಾರಿ ಸರ.. ದುರ್ಗಾದೇವಿ ಪೂಜೆ ಮುಗಿದಿದ್ದೇ ತಡ ಶುರುವಾಯ್ತು ನೋಡಿ ಫೈಟ್..?

ಫೈಟ್ ಆರಂಭವಾಗಿ ಅರ್ಧ, ಮುಕ್ಕಾಲು ಗಂಟೆಯಾದರೂ ಪೊಲೀಸರು ಬರಲೇ ಇಲ್ಲ. ನೆರೆದಿದ್ದ ಜನ ಮಾತ್ರ ನಗನಗ್ತಾ ಜಗಳ ಎಂಜಾಯ್ ಮಾಡುತ್ತಿದ್ದರು. ವ್ಯತ್ಯಾಸ ಇಷ್ಟೇ; ಸಾಮಾನ್ಯವಾಗಿ ನಡೆಯುವ ಕದನಗಳಲ್ಲಿ ಮಾರಕಾಸ್ತ್ರಗಳಿರುತ್ತವೆ. ಇಲ್ಲಿನ ಕದನದಲ್ಲಿ ಇದ್ದಿದ್ದು ಒಂದೇ ಅಸ್ತ್ರ, ಅದು “ಸಗಣಿ”!!

ಕೆರೆ ಕಟಾಂಬ್ಲಿ ಶ್ರಾವಣದ ಹಬ್ಬ

ಇಡೀ ರಾಜ್ಯದಲ್ಲಿ ಪರಸ್ಪರ ಸಗಣಿ ಎರಚಾಟ ನಡೆಯುವುದು ಗದಗನ ಗಂಗಾಪೂರಪೇಟೆಯಲ್ಲಿ ಮಾತ್ರ. ಶ್ರಾವಣದ ವೇಳೆ ನಾಗರ ಪಂಚಮಿ ಮರುದಿನ ನಡೆಯುವ ಈ ಹಬ್ಬಕ್ಕೆ ಕೆರೆ ಕಟಾಂಬ್ಲಿ ಎನ್ನುವ ಹೆಸರು ರೂಢಿಗತವಾಗಿ ಬಂದಿದೆ.

ಸ್ಥಳೀಯರ ಪ್ರಕಾರ ಸಗಣಿ ಕದನದ ಹಿನ್ನೆಲೆ ಇಷ್ಟೇ; ಸಗಣಿಗೆ ಔಷಧೀಯ ಗುಣವಿದ್ದು ಚರ್ಮರೋಗ ಸೇರಿದಂತೆ ಹಲವು ಕಾಯಿಲೆಗಳು ವಾಸಿಯಾಗುತ್ತವೆ. ವರ್ಷಕ್ಕೊಮ್ಮೆಯಾದರೂ ಸೆಗಣಿಯೋಕುಳಿ ಆಡಿ ದೇಹ, ಮನಸು ಆರೋಗ್ಯವಾಗಿರಬೇಕು. ಜೊತೆಗೆ ಸಗಣಿ ಎಂದರೆ ತಾತ್ಸಾರವಲ್ಲ, ಅದೊಂದು ಔಷಧಿ ಎಂಬುದನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಉದ್ದೇಶ ಈ ಹಬ್ಬಕ್ಕಿದೆ.

ಸಗಣಿ ಫೈಟ್ ಗಂಭೀರವಾಗಿ ನಡೆದು ಮನಸು ಕೆಡಿಸುವಂಥದ್ದಲ್ಲ, ಆರೋಗ್ಯ ಜಾಗೃತಿ, ಮನರಂಜನೆಯ ಜೊತೆಗೆ ಮನಸುಗಳನ್ನು ಬೆಸೆಯುವ ಹಬ್ಬ.

” ಸಗಣಿ ಎಂದರೆ ಮೂಗು ಮುಚ್ಚಿಕೊಳ್ಳುವವರೇ ಜಾಸ್ತಿ ಇರುವ ಕಾಲವಿದು. ಉತ್ತರ ಕರ್ನಾಟಕದಲ್ಲಿ ಗೋಮಾತೆ ಬಗ್ಗೆ ಪೂಜ್ಯಭಾವ ಇರುವಂತೆ ಗೋಮಾತೆಯ ಸಗಣಿಗೂ ಬೇಡಿಕೆ, ಪೂಜ್ಯತಾ ಭಾವ ಇದೆ. ಸಗಣಿಯಿಂದ ಕುಳ್ಳು, ಕುಳ್ಳಿನಿಂದ ಕೂಳು ಎನ್ನುತ್ತಿದ್ದ ಕಾಲವಿತ್ತು. ಆಧುನಿಕತೆಯ ಭರಾಟೆಯಲ್ಲಿ ಮರೆಯಾದ ಸಗಣಿಯ ಮಹತ್ವವನ್ನು ಸಾರುವ ಹಬ್ಬವಿದು.”

ಅನ್ನಪೂರ್ಣ, ಸ್ಥಳೀಯರು