ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮಂಗಳವಾರ ಸಂಜೆ ಮೊಹರಂ ಮೆರವಣಿಗೆ ವೇಳೆ ನಡೆದ ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಜನರ ವಿರುದ್ಧ ಕೊಲೆ ಯತ್ನ ಸೇರಿದಂತೆ ಹಲವು ಕಲಂ ಅಡಿ ಕೇಸ್ ದಾಖಲಾಗಿದ್ದು, ಅದರಲ್ಲಿ ಈಗಾಗಲೇ ಮೂರು ಜನರನ್ನು ಬಂಧಿಸಲಾಗಿದೆ.
ಸೋಮು ಗುಡಿ, ಸಲೀಂಸಾಬ್ ಅಲಿಯಾಸ್ ಸಲ್ಮಾನ್ ಇಮಾಮ್ ಸಾಬ್ ಬಡೆಖಾನ್, ಯಲ್ಲಪ್ಪ ಮಲ್ಲಾಪೂರ, ರಾಮಕೃಷ್ಣ ಎಚ್ ಹಂಡಿ, ಶಿವು ಗದಗಿನ, ದಯಾನಂದ ಗುಡಿ ಎಂಬುವವರ ಮೇಲೆ ಕೊಲೆ ಯತ್ನ ಸೇರಿದಂತೆ ಹಲವು ಕಲಂ ಅಡಿ ಪ್ರಕರಣ ದಾಖಲಾಗಿದೆ.
ಮಂಗಳವಾರ ಸಂಜೆ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮೊಹರಂ ಮೆರವಣಿಗೆ ಸಂದರ್ಭದಲ್ಲಿ ನಡೆದ ಚಾಕು ಇರಿತದ ನಂತರ ನಡೆದ ಘಟನೆಗೆ ಸಂಬಂಧಿಸಿದಂತೆ 15 ಜನರ ವಿರುದ್ಧ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಚಾಕು ಇರಿತದ ನಂತರ ಗಾಯಾಳುಗಳ ಪರವಾಗಿ ಗುಂಪು ಕಟ್ಟಿಕೊಂಡು ಸೋಮು ಗುಡಿ ಹಾಗೂ ಇನ್ನಿಬ್ಬರನ್ನು ನಮ್ಮ ತಾಬಾಕ್ಕೆ ಕೊಡಿ ಅವರನ್ನು ನಾವು ನೋಡಿಕೋತೀವಿ ಅಂತ ಕೈಯಲ್ಲಿ ಕಲ್ಲು ಹಿಡಿದುಕೊಂಡು ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡುವ ಉದ್ದೇಶದಿಂದ, ಪೊಲೀಸರು ಹೇಳಿದರೂ ಕೇಳದೇ ಮುನ್ನುಗ್ಗಲು ಪ್ರಯತ್ನ ನಡೆಸಿದ್ದ ಸುಮಾರು 15 ಜನರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ರಿಯಾಜ್ ಬುವಾಜಿ, ಅನ್ವರ್ ಬುವಾಜಿ, ಅರಿಫ್ ಬುವಾಜಿ, ಮಹಿಬೂಬಸಾಬ್ ಹರ್ಲಾಪೂರ, ಸುಬಾನ್ ಹುಸೇನ್ಸಾಬ್ ಹೊಸಮನಿ, ಸುಲೇಮಾನ್ ಹೊಸಮನಿ, ಮಾಬುಸಾಬ್ ಬುವಾಜಿ, ರಾಜೇಸಾಬ್ ಹರ್ಲಾಪೂರ, ಶರೀಫ್ ಬುವಾಜಿ, ಮೀರಸಾಬ್ ಬುವಾಜಿ, ಅಶಿಫ್ ಬುವಾಜಿ, ಹುಸೇನ್ಸಾಬ್ ಹೊಸಮನಿ, ಮೌಲಾಸಾಬ್ ಹೊಸಮನಿ, ಮುಷ್ತಾಕ್ ಡೋಲಿ ಹಾಗೂ ಚಾಂದಸಾಬ್ ಹೊಸಮನಿ ಎಂಬುವವರ ಮೇಲೆ ಪೊಲೀಸರು, ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಹಲವು ಕಲಂ ಅಡಿಯಲ್ಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಈ ಕುರಿತು ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದು, ಸೋಮು ಗುಡಿ, ಯಲ್ಲಪ್ಪ ಮಲ್ಲಾಪೂರ ಹಾಗೂ ಯಲ್ಲಪ್ಪನ ಸ್ನೇಹಿತ ಸಲ್ಮಾನ್ ಅಲಿಯಾಸ್ ಸಲೀಂ ಬಡೇಖಾನ್ ಎಂಬುವರನ್ನು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಯಲ್ಲಪ್ಪ ಮಲ್ಲಾಪೂರ ಹಾಗೂ ಸ್ನೇಹಿತ ಸಲ್ಮಾನ್ ಸೇರಿ ಮುಸ್ಲಿಂ ಯುವಕರೊಂದಿಗೆ ಜಗಳವಾಡಿದ್ದರು. ಆಗ ತೌಶೀಫ್ ಹಾಗೂ ಮುಷ್ತಾಕ್ ಸೇರಿ ಅನೇಕರು, ಸಲ್ಮಾನ್ ಹಾಗೂ ಯಲ್ಲಪ್ಪನ ಮೇಲೆ ಏರಿಹೋಗಿದ್ದರು ಎನ್ನಲಾಗಿದೆ.
ಇದರಿಂದಾಗಿ ಆಕ್ರೋಶಗೊಂಡ ಸೋಮು ಗುಡಿ, ತೌಶೀಫ್ ಹಾಗೂ ಮುಷ್ತಾಕ್ ಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ಗಾಯಗೊಂಡ ತೌಶೀಫ್ ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತೌಶೀಫ್ ನ ಆರೋಗ್ಯದ ಬಗ್ಗೆ ವೈದ್ಯರ ಹಾಗೂ ಅವರ ಕುಟುಂಬ ಸದಸ್ಯರು ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಘಟನೆಯ ಮಾಹಿತಿ ಪಡೆಯುತ್ತಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.
ಈ ಘಟನೆ ಕುರಿತು ಯಾರೂ, ಯಾವುದೇ ವದಂತಿ ಹಬ್ಬಿಸಬಾರದು ಎಂದು ಎಚ್ಚರಿಕೆ ನೀಡಿರುವ ಎಸ್ಪಿ ಶಿವಪ್ರಕಾಶ್ ದೇವರಾಜು, ಈ ಬಗ್ಗೆ ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿ, ಘಟನೆಯಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗವುದು ಎಂದು ಭರವಸೆ ನೀಡಿದ್ದಾರೆ.
ಪೊಲೀಸರ ಸರ್ಪಗಾವಲು
ನಿನ್ನೆ ಸಂಜೆ ನಡೆದ ಘಟನೆಯಿಂದ ಇಡೀ ಗ್ರಾಮದಲ್ಲೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎರಡು ತುಕಡಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಗುಂಪು- ಗುಂಪಾಗಿ ಸೇರುವ ಜನರನ್ನು ಪೊಲೀಸರು ಚದುರಿಸುತ್ತಿದ್ದು, ಗುಂಪಾಗಿ ಸೇರದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಆರೋಪಿ ಮನೆ ಗಾಜು ಪುಡಿ ಪುಡಿ
ನಿನ್ನೆ ಸಂಜೆ ಸೋಮು ಗುಡಿ, ತೌಶೀಫ್ ಹಾಗೂ ಮುಷ್ತಾಕ್ ಗೆ ಚಾಕು ಇರಿದ ಘಟನೆಯ ನಂತರ ಉದ್ರಿಕ್ತ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಸೋಮು ಗುಡಿ ಮನೆಗೆ ಹೊಕ್ಕು ಕಿಡಕಿ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಹುಡುಗನಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ನಾವು ಸುಮ್ಮನಿರಲ್ಲ ಎಂದು ಆಕ್ರೋಶ ಹೊರಹಾಕಿದರು. ಅಷ್ಟರಲ್ಲೇ ಪೊಲೀಸರು ಸ್ಥಳಕ್ಕೆ ಬಂದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ.
ಮೊಹರಂ ಹಬ್ಬದ ಕೊನೆಯ ದಿನವಾದ ಮಂಗಳವಾರ ನಡೆದ ಮೆರವಣಿಗೆಯಲ್ಲಿ ಕಾಲು ತುಳಿದ ಕ್ಷುಲ್ಲಕ ಕಾರಣಕ್ಕೆ ಇಬ್ಬರನ್ನು ಚಾಕುವಿನಿಂದ ಇರಿದ ಘಟನೆ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ.
ಇರಿತಕ್ಕೊಳಗಾದವರನ್ನು ತೌಸೀಫ್ ಹೊಸಮನಿ (23) ಹಾಗೂ ಮುಷ್ತಾಕ್ ಹೊಸಮನಿ (24) ಎಂದು ಗುರುತಿಸಲಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮೆರವಣಿಗೆಯಲ್ಲಿ ಕಾಲು ತುಳಿದ ಕ್ಷುಲ್ಲಕ ಕಾರಣಕ್ಕೆ ಶ್ರೀರಾಮಸೇನೆಯ ಕಾರ್ಯಕರ್ತ ಸೋಮು ಗುಡಿ ಎಂಬಾತ ಹೊಸಮನಿ ಸಹೋದರರೊಂದಿಗೆ ತಗಾದೆ ತೆಗೆದಿದ್ದರಿಂದ ಗಲಾಟೆ ನಡೆದಿದೆ. ಗ್ರಾಮಸ್ಥರು ಜಗಳ ಬಿಡಿಸಿದ್ದಾರೆ. ಮೆರವಣಿಗೆ ಬಿಟ್ಟು ಮತ್ತೊಂದು ಸ್ಥಳದಲ್ಲಿ ಕಾಯ್ದು ಇಬ್ಬರಿಗೂ ಚಾಕುವಿನಿಂದ ಇರಿದ ಸೋಮು ಗುಡಿ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಗಾಯಗೊಂಡವರ ಸಹೋದರ ಹೇಳುವ ಪ್ರಕಾರ, ಆರ್ ಎಸ್ ಎಸ್ ಗೆ ಸೇರಿದ ಸೋಮು ಗುಡಿ ಹಾಗೂ ಎಳೆಂಟು ಜನ ಚಾಕು ಇರಿದಿದ್ದಾರೆ ಎಂದು ಆರೋಪಿಸಿದ್ದಾನೆ.
ಗಾಯಾಳುಗಳಿಗೆ ಜಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ತೌಸೀಫ್ ಎಂಬಾತನ ಸ್ಥಿತಿ ಗಂಭೀರವಾಗಿದೆ. ಜಿಮ್ಸ್ಗೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಏಳು ಜನರ ತಂಡವೊಂದು ಎಪಿಎಮ್ ಸಿ ಯಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಪ್ರಕಾಶ್ ಡಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧಿತರಿಂದ ಎಂಟು ಸಾವಿರ ರೂ.ಗಳನ್ನು ಜಪ್ತಿ ಮಾಡಲಾಗಿದೆ.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಎಪಿಎಮ್ ಸಿ ಆವರಣದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮಂಜುನಾಥ್ ಬಸಪ್ಪ ಜಾಬದಿ, ರವಿ ಗದಿಗೆಪ್ಪ ಸೊಪ್ಪಿನ, ನಿಂಗಪ್ಪ ಮಲ್ಲಪ್ಪ ಗೌಡನಾಯ್ಕರ್, ಅಮರೇಶ್ ಬಸವರಾಜ್ ಮಳ್ಳೆಪ್ಪನವರ್, ಅಭಿಷೇಕ ಪರಶುರಾಮ ಸಾತಪುತೆ, ಸಂಜೀವ್ ವೀರಭದ್ರಪ್ಪ ರಾಗಿ ಹಾಗೂ ಗೂಳಪ್ಪ ಚನ್ನಪ್ಪ ಕಳಾಸೂರು ಎಂಬುವರನ್ನು ಪೊಲೀಸರು ದಾಳಿ ಬಂಧಿಸಿದ್ದಾರೆ.
ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಂಚುರಿ ಡೈರೆಕ್ಟರ್ ಓಂ ಸಾಯಿಪ್ರಕಾಶ್ ಮತ್ತೇ ಡೈರೆಕ್ಷನ್ ಕ್ಯಾಪ್ ಹಾಕಿದ್ದಾರೆ. ಈ ಸಲ ಮತ್ತೇ ಭಕ್ತಿಪ್ರಧಾನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ದಕ್ಷಿಣ ಭಾರತದಲ್ಲೇ ಪವರ್ ಫುಲ್, ಫೇಮಸ್ ಆಗಿರೊ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮದೇವಿ ಕುರಿತ ಚಿತ್ರಕ್ಕೆ ಮಂಗಳವಾರ ಹುಲಗಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು.
ಸಾಯಿಪ್ರಕಾಶ್ ನಿರ್ದೇಶನದ 105ನೇ ಚಿತ್ರವಾದ ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರದ ಚಿತ್ರೀಕರಣದ ಮೊದಲ ದೃಶ್ಯಕ್ಕೆ ಸಿನಿಮಾ ನೂರು ದಿನ ಕಾಣಲಿ, ಯಶಸ್ಸು ಗಳಿಸಲಿ ಎಂದು ಶುಭ ಕೋರಿ ಸಚಿವ ಆನಂದ್ ಸಿಂಗ್ ಅವರ ಸಂಬಂಧಿ ಬಿಜೆಪಿ ನಾಯಕಿ ಕವಿತಾ ಸಿಂಗ್ ಅವರು ಕ್ಲಾಪ್ ಮಾಡಿದರು.
ಶ್ರೀಮತಿ ಲಕ್ಷ್ಮಮ್ಮ ರಾಮೇಗೌಡರ ಆಶೀರ್ವಾದದೊಂದಿಗೆ ಭಾವನಾ ಪ್ರೊಡಕ್ಷನ್ ಅವರ ಗೌರಮ್ಮ ಪಿ.ಅವರು ನಿರ್ಮಿಸುತ್ತಿರುವ ವಿಶ್ವರೂಪಿಣಿ ಹುಲಿಗೆಮ್ಮ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಕೊಪ್ಪಳ, ಹುಲಗಿ, ಬುಕ್ಕಸಾಗರ ಸುತ್ತಮುತ್ತಲಿನ ಸ್ಥಳಗಳಲ್ಲಿ ಸುಮಾರು 15 ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್ನಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆ ಶೂಟಿಂಗ್ ನಡೆಯಲಿದ್ದು ಹೊಸ ವರ್ಷಕ್ಕೆ ಹುಲಿಗೆಮ್ಮ ದರ್ಶನ ಪಡೆಯಬಹುದು. ಸಿನಿಮಾ ಕನ್ನಡದಲ್ಲೇ ಚಿತ್ರೀಕರಣಗೊಂಡು ತೆಲುಗು, ತಮಿಳು, ಮರಾಠಿ ಮತ್ತಿತರ ಭಾಷೆಗಳಿಗೆ ಡಬ್ ಆಗಲಿದೆ ಎಂಬುದು ಸದ್ಯದ ಅಪ್ಡೇಟ್ಸ್.
ಚಿತ್ರದ ಮುಹೂರ್ತ ಸಮಾರಂಭದ ಸಾನಿಧ್ಯ ಸಿದ್ದನಕೊಳ್ಳದ ಶ್ರೀ ಶಿವಕುಮಾರ್ ಸ್ವಾಮೀಜಿ ವಹಿಸಿದ್ದರು.
ಮನೆಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ತಿಜೋರಿಯಲ್ಲಿದ್ದ 2.65 ಲಕ್ಷ ರೂ. ಮೌಲ್ಯದ ಸ್ವತ್ತು ಕಳ್ಳತನವಾಗಿದೆ.
ಪೋಸ್ಟಲ್ ನಲ್ಲಿ ಕಾರ್ಯನಿರ್ವಹಿಸುವ ಪ್ರಿಯದರ್ಶಿನಿ ಡ್ಯಾನಿಯಲ್ ಕುಮಾರ್ ಎಂಬುವರ ವಿವೇಕಾನಂದ ರಸ್ತೆಯ ಬಳಿಯಿರುವ ಮನೆಯ ಬಾಗಿಲಿಗೆ ಹಾಕಿದ್ದ ಬೀಗ, ಚಿಲಕವನ್ನು ಯಾವುದೋ ವಸ್ತುವಿನಿಂದ ಮೀಟಿ ಮುರಿದು, ಮನೆಯೊಳಗೆ ಹೊಕ್ಕು ಅಲ್ಲಿದ್ದ ತಿಜೋರಿಯ ಬಾಗಿಲನ್ನು ಮೀಟಿ ತೆರೆದು ಒಳಗೆ ಇಟ್ಟಿದ್ದ 60 ಸಾವಿರ ರೂ. ಬೆಲೆಯ 36 ಗ್ರಾಂ. ತೂಕದ ಹಳೆಯ ಬಂಗಾರದ ಲಾಂಗ್ ಚೈನ್, 60 ಸಾವಿರ ರೂ. ಬೆಲೆಬಾಳುವ 40 ಗ್ರಾಂ. ತೂಕದ ಪಾಟ್ಲಿ ಬಳೆ, 42 ಗ್ರಾಂ. ತೂಕವಿರುವ 1.25 ಲಕ್ಷ ರೂ. ಬೆಲೆಬಾಳುವ ಚಿನ್ನದ ನೆಕ್ಲೆಸ್ ಹೀಗೆ ಒಟ್ಟೂ 2.45 ಲಕ್ಷ ರೂ. ಬೆಲೆಬಾಳುವ 118 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 20 ಸಾವಿರ ರೂ. ನಗದು ಹಣ ಕಳ್ಳತನವಾಗಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶಿಗ್ಲಿ ಗ್ರಾಮ ಪಂಚಾಯತಿಯ ನರೇಗಾ ಕಾಮಗಾರಿಯಲ್ಲಿನ ಅವ್ಯವಹಾರದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಗ್ರಾಪಂ ಅಧ್ಯಕ್ಷ ಅಶೋಕಯ್ಯ ಮುಳಗುಂದಮಠ ಮತ್ತು ಪಿಡಿಓ ಬಿ.ಟಿ. ಅಮ್ಮನವರ ಅವರಿಗೆ ದುರುಪಯೋಗ ಆಗಿರುವ 6,73,000 ರೂ ಹಣ ಮರುಪಾವತಿಸುವಂತೆ ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಜಿಪಂ ನರೇಗಾ ಯೋಜನೆಯ ಓಂಬುಡ್ಸ್ಮನ್ ಸಿ.ಪಿ. ಹಿರೇಮಠ ಆದೇಶಿಸಿದ್ದಾರೆ.
ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯಿತಿಯಲ್ಲಿ ಸನ್ 2021-22ನೇ ಸಾಲಿನ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ಮತ್ತು ಹಣ ದುರುಪಯೋಗ ನಡೆದಿದೆ ಎಂದು ಗ್ರಾಪಂ ಅಧ್ಯಕ್ಷರು, ಪಿಡಿಓ ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಗ್ರಾಪಂ ನೌಕರ ಮತ್ತು ನರೇಗಾ ಇಂಜಿನಿಯರ ವಿರುದ್ಧ ಜಿಲ್ಲಾ ಪಂಚಾಯಿತಿಗೆ ದೂರು ಸಲ್ಲಿಸಲಾಗಿತ್ತು.
ಗ್ರಾಮದ ಅಮಾತಪ್ಪ ಹರವಿ, ಸುರೇಶ ಸ್ವಾದಿ, ಸಂತೋಷ ಮಾದನಹಳ್ಳಿ ಅವರು ದಾಖಲೆಗಳ ಸಮೇತ ದೂರು ಸಲ್ಲಿಸಿದರು. ದೂರಿನಲ್ಲಿ 2021-22ನೇ ಸಾಲಿನಲ್ಲಿ ಕೈಗೊಂಡ ಬದು ನಿರ್ಮಾಣ ಕಾರ್ಯದಲ್ಲಿ ಎನ್ಆರ್ಇಜಿ ಜಾಬ್ ಕಾರ್ಡ್ ಇದ್ದರೂ ಇಲ್ಲದವರ ಹೆಸರಿನಲ್ಲಿ ಎನ್ಎಂಆರ್ ಹಾಕಿ ಲಕ್ಷಾಂತರ ರೂ ಅವ್ಯವಹಾರ ಮಾಡಿದ್ದಾರೆ. ಇದರಲ್ಲಿ ಪಿಡಿಓ, ಅಧ್ಯಕ್ಷರು, ಪಂಚಾಯತಿ ಸಿಬ್ಬಂದಿ ಹಾಗೂ ಕೃಷಿ ಇಲಾಖೆ ಅಧಿಕಾರಿ ಸೇರಿ ಒಟ್ಟು 253 ಕೂಲಿಕಾರರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಹಣ ದುರುಪಯೋಗ ಮತ್ತು ಅವ್ಯವಾರ ಮಾಡಲಾಗಿದೆ.
ಇದರಲ್ಲಿ ಪಿಡಿಓ ಬಿ.ಟಿ. ಅಮ್ಮನವರ ಮತ್ತು ಗ್ರಾಪಂ ಅಧ್ಯಕ್ಷ ಅಶೋಕಯ್ಯ ಮುಳುಗುಂದಮಠ ಸೇರಿಕೊಂಡು ಕೆಲಸಕ್ಕೆ ಹೋಗಲಾರದವರ ಹೆಸರಿನಲ್ಲಿ ಹಣ ತೆಗೆದಿದ್ದಾರೆ ಎಂದು ಜಿಲ್ಲಾ ಪಂಚಾಯಿತಿಗೆ 2022ರ ಫೆಬ್ರವರಿ 16ರಂದು ದೂರು ಸಲ್ಲಿಸಲಾಗಿತ್ತು.
ಆದಾಗ್ಯೂ ಸಹಿತ ಹಾರಿಕೆ ಉತ್ತರ ಕೊಟ್ಟು ಸಂಬಂಧಪಟ್ಟ ದಾಖಲೆಗಳನ್ನು ಸಹ ಸರಿಯಾಗಿ ನೀಡಲು ಹಿಂದೇಟು ಹಾಕಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದರು ಎಂದು ಹೇಳಲಾಗುತ್ತದೆ.
ಆದರೆ ಜಿಲ್ಲಾ ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಇಲಾಖೆಯು ದೂರಿನ ಹಿನ್ನೆಲೆಯಲ್ಲಿ ಓಂಬಡ್ಸಮನ್ ನೇಮಕವಾಗಿ ಅವ್ಯವಹಾರದ ತನಿಖೆಯನ್ನು ಬೆನ್ನು ಹತ್ತಿದಾಗ ಒಟ್ಟು 6,73,000 ರೂ ದುರುಪಯೋಗವಾಗಿರುವ ಸತ್ಯ ಹೊರಬಿದ್ದಿದೆ.
ಅದಕ್ಕೆ ಪಿಡಿಒ ಬಿ.ಟಿ.ಅಮ್ಮನವರ ಮತ್ತು ಗ್ರಾಪಂ ಅಧ್ಯಕ್ಷ ಅಶೋಕಯ್ಯ ಮುಳುಗುಂದಮಠ ಮೇಲೆ ಕರ್ತವ್ಯ ಲೋಪ ಮತ್ತು ಹಣ ದುರುಪಯೋಗ ಹೊಣೆಗಾರನಾಗಿಸಲಾಗಿದೆ. ಗ್ರಾಪಂ ಸಿಬ್ಬಂದಿ ಶಂಕರ ನಡುವಿನಮನಿ ಅವರ ಮೇಲೆ ಕೆಸಿಎಸ್ಆರ್ ಮತ್ತು ಸಿಸಿಎ ಕಾನೂನಿನಡಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ.
ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಬಾಬು ಮತ್ತು ಗ್ರಾಪಂ ಸಿಬ್ಬಂದಿ ತಿರಕಪ್ಪ ಬಾಲೆಹೊಸೂರ ಇವರಿಗೆ ಎಚ್ಚರಿಕೆ ನೀಡಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕಯ್ಯ ಮುಳಗುಂದಮಠಗೆ ಹಣ ಮರುಪಾವತಿ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೇ ಕೆರೆ ನಿರ್ಮಾಣ, ಸಾಮೂಹಿಕ ಬದು ನಿರ್ಮಾಣದಲ್ಲಿ ಮಾಡಿದ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಇವರಿಬ್ಬರ ಮೇಲೆ ಲೋಕಾಯುಕ್ತ ತನಿಖೆಯೂ ನಡೆದಿದೆ ಎನ್ನಲಾಗಿದೆ.
ಸಿದ್ಧರಾಮಯ್ಯನವರಿಗೆ ವಯಸ್ಸು ಎಷ್ಟಾದರೂ ಆಗಿರಲಿ ಬಿಡಿ. ಅದರ ಬಗ್ಗೆ ತಕರಾರು ಯಾಕೆ? ಸ್ವತಃ ಸಿದ್ಧರಾಮಯ್ಯನವರೇ ತನಗೆ 75 ವರ್ಷ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹುಟ್ಟಿದ ತಾರೀಖು ನನ್ನ ಅಪ್ಪ-ಅಮ್ಮನಿಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ. ಟೀಚರ್ ದಾಖಲಿಸಿದ್ದು ಎಂದು ಅವರೇ ಹೇಳಿಕೊಂಡಿದ್ದಾರೆ. ಅವರ ಮನೆಯಲ್ಲಿಯೂ ಒಪ್ಪಿಕೊಂಡಿದ್ದಾರೆ. ನಾವೂ ಒಪ್ಪಿಕೊಂಡಿದ್ದೇವೆ. ಅವರ ಅಭಿಮಾನಿಗಳೂ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಯಾರೂ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಶಾಸಕ ಎಚ್.ಕೆ. ಪಾಟೀಲ ಪ್ರತಿಕ್ರಿಯಿಸಿದರು.
ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ಸಿದ್ದರಾಮಯ್ಯನವರ ವಯಸ್ಸಿನ ವಿಚಾರವಾಗಿ ಹೇಳಿದರು.
ರಾಷ್ಟ್ರಮಟ್ಟದಲ್ಲಿ ಅಭೂತಪೂರ್ವವಾದ ಕಾರ್ಯಕ್ರಮ ಅದಾಗಿತ್ತು. ನಮ್ಮ ಪಕ್ಷಕ್ಕೆ ಸಿದ್ಧರಾಮೋತ್ಸವದಿಂದ ಹೊಸದೊಂದು ಶಕ್ತಿ ಬಂದಂತಾಗಿದೆ. ಈ ಕಾರಣಕ್ಕಾಗಿಯೇ ಬಹಳ ಜನ ಕಸಿವಿಸಿಗೊಂಡಿದ್ದಾರೆ, ಗಾಬರಿಯಾಗಿದ್ದಾರೆ. ಅದಕ್ಕೇನೂ ಮಾಡಲಾಗುವುದಿಲ್ಲ. ಜನರ ಪ್ರೀತಿಯಿಂದಾಗಿ ಅಷ್ಟು ದೊಡ್ಡ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಅವರಿಗೆ 75 ವರ್ಷ ಪೂರ್ಣಗೊಂಡಿಲ್ಲ ಎಂದು ಹುಡುಕಿ ತಗಾದೆ ತೆಗೆಯುವದರಿಂದ ಏನೂ ಲಾಭವಿಲ್ಲ ಎಂದರು.
ಮಳೆಯಿಂದ ಉಂಟಾಗುತ್ತಿರುವ ಹಾನಿಗಳ ಬಗ್ಗೆ ಮಾತನಾಡಿದ ಶಾಸಕರು, ಅತಿಯಾದ ಮಳೆಯಿಂದ ತೀವ್ರ ಸಂಕಷ್ಟ ಎದುರಾಗಿದೆ. ಪರಿಹಾರ ಕೊಡಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಬೆಳೆದು ನಿಂತ ಹೆಸರು ಬೆಳೆ ನೆಲಕಚ್ಚಿದೆ, ಫಸಲು ಕೈಸೇರುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಮಳೆ ನಿಲ್ಲುವ ಲಕ್ಷಣವೂ ಇಲ್ಲ. ಇದರಿಂದ ಕೃಷಿಕ ಮತ್ತೊಮ್ಮೆ ಬಹಳ ತೊಂದರೆ ಅನುಭವಿಸುತ್ತಿದ್ದಾನೆ.
ದುರ್ದೈವವೆಂದರೆ, ರಾಜ್ಯ ಸರ್ಕಾರ ಬೆಳೆಹಾನಿ ಪರಿಹಾರ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿಯೇ ಇಲ್ಲ. ಬೆಳೆ ಪರಿಹಾರವನ್ನ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ ಎಂದ ಅವರು, ಮನೆ ಬಿದ್ದು ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕಾದ ಸರ್ಕಾರ ಗಪ್ಚುಪ್ ಕುಳಿತುಬಿಟ್ಟಿದೆ. ಹತ್ತು ದಿನದ ಹಿಂದೆ ಮಳೆಯಿಂದಾಗಿ ಹಾನಿಗೊಳಗಾದವರಿಗೆ ಇನ್ನೂ ಹಣ ತಲುಪಿಲ್ಲ. ತಕ್ಷಣವೇ ಪರಿಹಾರ ಹಣ ಬಿಡುಗಡೆ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಾಳಾಗಿರುವ ರಸ್ತೆಗಳನ್ನು ರಿಪೇರಿ ಮಾಡಿಸುವಂತೆ ಮುಖ್ಯಮಂತ್ರಿಗಳನ್ನು ವಿನಂತಿಸುತ್ತೇನೆ ಎಂದ ಶಾಸಕ ಪಾಟೀಲ, ಗುಂಡಿಯಿಂದಾಗಿ ರಸ್ತೆ ಮೇಲೆ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ ರಸ್ತೆ ರಿಪೇರಿ ಕೆಲಸವನ್ನ ಎಲ್ಲ ಕಡೆಗಳಲ್ಲೂ ಮಾಡಿಸಬೇಕಿದೆ. ಹದಗೆಟ್ಟ ರಸ್ತೆಗಳ ಬಗ್ಗೆ ಜನ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಗದಗ ನಗರದಲ್ಲೂ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಕಾರ್ಯಪ್ಪ ಸರ್ಕಲ್ ನಿಂದ ಮುಂದೆ ಬೆಟಗೇರಿಯವರೆಗೂ ಸಮಸ್ಯೆ ಉಂಟಾಗಿದೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ, ಈಗಾಗಲೇ ಹಣ ಮಂಜೂರಿಯಾಗಿರಬಹುದು. ಸೋಮವಾರದಿಂದಲೇ ಕೆಲಸ ಆರಂಭಿಸುವಂತೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಸರ್ಕಾರದ ಆಡಳಿತ ಕುಸಿದು ಬೀಳುತ್ತಿದೆ. ಇದಕ್ಕೆ ಕಾರಣ ತಿಳಿಯುತ್ತಿಲ್ಲ. ಸರ್ಕಾರದ ವಿರುದ್ಧ ಕಾರ್ಯಕರ್ತರು ಬಂಡೆದ್ದಿರುವದೇ ಕಾರಣವಾ ಎಂಬುದು ತಿಳಿಯುತ್ತಿಲ್ಲ. ರಾಜಕೀಯವಾಗಿ ಬಡದಾಡಿಕೊಳ್ಳಿ. ಆದರೆ, ಜನರ ಕಷ್ಟಕಾಲದಲ್ಲಿ ತಕ್ಷಣ ಸ್ಪಂದಿಸಿ ಎಂದು ಶಾಸಕರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಸಿದ್ಧಲಿಂಗೇಶ್ವರ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಮಂದಾಲಿ, ಕಿಸಾನ್ ಸೆಲ್ ನ ಮಾಜಿ ಅಧ್ಯಕ್ಷ ಪರಮೇಶ್ವರ ಜಂತ್ಲಿ ಇದ್ದರು.