ಸ್ಥಳೀಯ ಪುರಸಭೆಯಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ಬಿಜೆಪಿ ಸದಸ್ಯರು ಅಡ್ಡಿ ಪಡಿಸಿ ಯಾವುದೇ ಕಾರಣಕ್ಕೂ ಸಾಮಾನ್ಯ ಸಭೆ ನಡೆಸುವಂತಿಲ್ಲ, ನಮ್ಮ ಬೆಂಬಲದಿಂದ ಚುನಾಯಿತರಾಗಿರುವ ಉಪಾಧ್ಯಕ್ಷರು ರಾಜೀನಾಮೆ ಕೊಡಬೇಕೆಂದು ಏರು ಧ್ವನಿಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಸೋಮವಾರ ನಡೆದಿದೆ.
ಅಧ್ಯಕ್ಷ ಮಂಜುನಾಥ ಜಾಧವ ಈಗಾಗಲೇ ರಾಜೀನಾಮೆ ನೀಡಿದ್ದು ಸಾಮಾನ್ಯ ಸಭೆ ನಡೆಸುವಂತಿಲ್ಲ. ಉಪಾಧ್ಯಕ್ಷೆ ಖೈರುನಬಿ ನಾಶಿಪುಡಿ ರಾಜೀನಾಮೆ ಕೊಡುವಂತೆ ಬಿಜೆಪಿ ಸದಸ್ಯರು ಬಿಗಿ ಪಟ್ಟು ಹಿಡಿದು ಖೈರುನಬಿ ವಿರುದ್ಧ ಹರಿಹಾಯ್ದರು.
ಸಿಟ್ಟಿಗೆದ್ದ ಖೈರುನಬಿ ನಾನು ಕಾಂಗ್ರೆಸ್ ಪಕ್ಷದಿಂದ ಉಪಾಧ್ಯಕ್ಷೆನಾಗಿದ್ದೇನೆ, ಬಿಜೆಪಿ ಸದಸ್ಯರ ಮಾತು ಕೇಳುವ ಅವಶ್ಯಕತೆಯಿಲ್ಲವೆಂದು ಬಿಜೆಪಿ ಸದಸ್ಯ ಮಹಾಂತೇಶ ಕಲಾಲ ವಿರುದ್ಧ ಏರು ಧ್ವನಿಯಲ್ಲಿಯೇ ತರಾಟೆಗೆ ತೆಗೆದುಕೊಂಡರು.
ಸಮುಜಾಯಿಸಿದ ಹಂಗಾಮಿ ಅಧ್ಯಕ್ಷ ಮಂಜು ಜಾಧವ, ನಮ್ಮನ್ನು ಬೆಂಬಲಿಸುವಂತೆ ಯಾವುದೆ ಬಿಜೆಪಿ ಸದಸ್ಯರ ಮನೆಗಾಗಲಿ, ಆ ಪಕ್ಷದ ಹಿರಿಯರ ಮನೆಗಾಗಲಿ ಹೋಗಿರಲಿಲ್ಲ, ನಿಮಗೆ ಜೆಡಿಎಸ್ ಪಕ್ಷವನ್ನು ಹೊರಗಿಡಬೇಕೆಂಬ ಕಾರಣದಿಂದ ಬಾಹ್ಯ ಬೆಂಬಲ ಕೊಟ್ಟಿದ್ದೀರಿ, ನಾವೇನು ನಿಮಗೆ ನಮ್ಮ ಪರವಾಗಿ ಮತ ಚಲಾಯಿಸುವಂತೆ ಹೇಳಿರಲಿಲ್ಲ, ಒಳ ಒಪ್ಪಂದವನ್ನು ಮಾಡಿರಲಿಲ್ಲವೆಂದು ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾಗಿ ಸಾಮಾನ್ಯ ಸಭೆ ನಡೆಸದಂತೆ ಬಿಗಿಪಟ್ಟು ಹಿಡಿದಿದ್ದಾರೆ.
17 ಸದಸ್ಯರ ಬೆಂಬಲವಿದ್ದು ಕೋರಂ ಭರ್ತಿಯಾಗಿದೆ. ನಾವು ಸಾಮಾನ್ಯ ಸಭೆಯನ್ನು ನಡೆಸಿಯೇ ತೀರುತ್ತೇವೆ, ಸಭೆಯಲ್ಲಿ ಗದ್ದಲ ಮಾಡುತ್ತಿರುವ ಬಿಜೆಪಿ ಸದಸ್ಯರನ್ನು ಹೋರಹಾಕುವಂತೆ ಕಾಂಗ್ರೆಸ್ ಸದಸ್ಯರು ಮುಖ್ಯಾಧಿಕಾರಿ ಈರಪ್ಪ ಹಸಬಿಯವರೊಂದಿಗೆ ವಾಗ್ವಾದ ಮುಂದುವರೆಸಿದ್ದಾರೆ.
ಸಾಮಾನ್ಯ ಸಭೆಯ ಹಾಜರಾತಿ ಪುಸ್ತಕಕ್ಕೆ ಬಿಜೆಪಿ ಸದಸ್ಯರು ಸಹಿ ಮಾಡದ ಕಾರಣ ಹೊರಹಾಕಬೇಕೆಂದು ಮಾತಿನ ಚಕಮಕಿಯೇ ನಡೆಯುತ್ತಿದ್ದು, ಪಟ್ಟಣದ ಅಭಿವೃದ್ಧಿ ಪರ ಚಿಂತನೆ ಮಾಡದ ಎರಡು ರಾಷ್ಟ್ರೀಯ ಪಕ್ಷದ ಸದಸ್ಯರು ಕುರಿಗಳ ಸಂತೆಯಂತೆ ಜಾತ್ರೆ ಮಾಡುತ್ತಿದ್ದಾರೆ, ಕಳೆದೊಂದು ತಿಂಗಳಿಂದ ಕಚ್ಚಾಟ ಮುಂದುವರೆಸಿರುವುದು ಸಾಮಾನ್ಯ ಪ್ರಜೆಗಳಿಗೆ ತಲೆಬಿಸಿ ಮಾಡಿದ್ದು, ಇಂತವರಿಗೆ ಮುಂದಿನ ದಿನದಲ್ಲಿ ತಕ್ಕಪಾಠ ಕಲಿಸಬೇಕೆಂಬ ಮಾತುಗಳು ಕೇಳಿಬರುತ್ತಿವೆ.
ವಿಜಯಸಾಕ್ಷಿ ಸುದ್ದಿ, ನವಲಗುಂದ: ಯುಗಾದಿ ಉತ್ಸವದ ಅಂಗವಾಗಿ ನಡೆಯುತ್ತಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜೈಭೀಮ್ ಸಂಘಟನೆಯವರ ನೀಲಿ ಭಾವುಟಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ವಿವಿಧ ದಲಿತಪರ ಸಂಘಟನೆಯವರು ಇಲ್ಲಿಯ ಅಂಬೇಡ್ಕರ್ ಪುತ್ಥಳಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಬೃಹತ್ ಶೋಭಾಯಾತ್ರೆಯಲ್ಲಿ ನಮ್ಮ ಸಂಘಟನೆಯವರು ನೀಲಿ ಭಾವುಟ ಹಿಡಿದುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡುದ್ದೇವು. ಹಿಂದೂಗಳು ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮದಾಗಿತ್ತು. ಆದರೆ ಕೆಲವರಿಗೆ ಇದನ್ನು ಸಹಿಸಲಾಗದೇ ನೀಲಿ ಬಾವುಟವನ್ನು ಹರಿದು ಹಾಕಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನಿಸಿದ್ದಾರೆ.
ಈ ಅವಮಾನವನ್ನು ಖಂಡಿಸಿ ನಾವು ಲಿಂಗರಾಜ ವೃತ್ತದ ಬಳಿ ಪ್ರತಿಭಟನೆ ಮಾಡುತ್ತಿದ್ದೇವೆ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನಮ್ಮ ಮುಂದೆಯೇ ಹಾದು ಹೋದರು, ಆದರೆ ನಮಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಿಲ್ಲ.
ಶೋಭಾಯಾತ್ರೆಯ ಸಂಪೂರ್ಣ ವಿಡಿಯೋ ಚಿತ್ರೀಕರಣವನ್ನು ಪೊಲೀಸ್ ಇಲಾಖೆಯವರು ಮಾಡಿದ್ದಾರೆ. ಯಾರು ಬಾವುಟವನ್ನು ಹರಿದು ಹಾಕಿದ್ದಾರೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಂತಹ ಕಿಡಗೇಡಿಗಳನ್ನು ತಕ್ಷಣವೇ ಬಂಧಿಸಿ ನ್ಯಾಯ ಒದಗಿಸಬೇಕು. ದಲಿತರ್ಯಾರು ಇಲ್ಲಿ ಕುರಿಗಳಲ್ಲ, ನಾವೆಲ್ಲರೂ ಹುಲಿಗಳಾಗಿದ್ದು ನ್ಯಾಯ ಸಿಗುವವರೆಗೂ ಅಹೋರಾತ್ರಿ ಪ್ರತಿಭಟನೆ ಮಾಡುತ್ತೇವೆಂದು ನೇತೃತ್ವ ವಹಿಸಿದ್ದ ನಿಂಗಪ್ಪ ಕೆಳಗೇರಿ ಎಚ್ಚರಿಕೆ ನೀಡಿದರು.
ಪರಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಕಂಡ ಸಿಪಿಐ ಚಂದ್ರಶೇಖರ ಮಠಪತಿ, ಗ್ರೇಡ್ 2 ತಹಶೀಲ್ದಾರ್ ಎಂ.ಜೆ.ಹೊಕ್ರಾಣಿ, ಪಿಎಸ್ಐ ಕಲ್ಮೇಶ ಬೆನ್ನೂರ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ.
ಆದರೆ ಪ್ರತಿಭಟನಾಕಾರರು ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಕಿಡಗೇಡಿಗಳನ್ನು ಇಂದು ಬಂಧಿಸದಿದ್ದರೆ ಭಾನುವಾರದಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದು, ಆಯಕಟ್ಟಿನ ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸಿದ್ದಾರೆ.
ಗದಗನ ಹೃದಯ ಭಾಗದಲ್ಲಿರುವ ಜವಳಗಲ್ಲಿಯ ರಾಜ ಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಾಣವಾಗಿರುವ ಚಿಕನ್, ಮಟನ್, ಮೀನು ಸೇರಿದಂತೆ ಮಾಂಸದ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಬೇಕು. ಬೆಟಗೇರಿಯಲ್ಲಿ ನಗರಸಭೆ ಮೀಸಲಿಟ್ಟಿರುವ ಒಂದು ಎಕರೆ ಜಾಗಕ್ಕೆ ಮಾಂಸದ ಅಂಗಡಿಗಳನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳು ಶೀಘ್ರವೇ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಒತ್ತಾಯಿಸಿದರು.
ಶನಿವಾರ ನಗರದ ರಾಯಲ್ ವಿಲ್ಲಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಂಸ ಕತ್ತರಿಸುವುದರಿಂದ ರಕ್ತ, ರಾಜ ಕಾಲುವೆ ಸೇರುತ್ತದೆ. ಇದರಿಂದ ದುರ್ವಾಸನೆ ಬೀರುತ್ತದೆ. ಸಮೀಪದಲ್ಲಿ ಜೈನ ಮಂದಿರವಿದ್ದು, ಮಂದಿರಕ್ಕೆ ಬರುವ ಭಕ್ತರಿಗೆ ಇದರಿಂದ ತೊಂದರೆಯಾಗಲಿದೆ. ಅವರ ಭಾವನೆಗಳಿಗೆ ಧಕ್ಕೆಯಾಗಲಿದೆ. ಇನ್ನು ರಾಜಕಾಲುವೆ ಮೇಲೆ ಅನಧಿಕೃತ ಕಟ್ಟಡ ಕಟ್ಟಲು, ಮಾಂಸದ ಅಂಗಡಿ ನಿರ್ಮಿಸಲು ಬರುವುದಿಲ್ಲ. ಅಲ್ಲದೆ, ರಾಜಕಾಲುವೆ ಬಫರ್ ಜೋನ್ ನಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಅವಕಾಶವಿಲ್ಲ. ಹೀಗಾಗಿ ಬೆಟಗೇರಿ ಭಾಗದಲ್ಲಿ ಮೀಸಲಿರಿಸಿರುವ ಜಾಗಕ್ಕೆ ಸ್ಥಳಾಂತರಿಸಬೇಕು.
ಜವಳಗಲ್ಲಿ ಸುಮಾರು ಹದಿನಾರು ಎಕರೆ ವಿಸ್ತೀರ್ಣದಲ್ಲಿದ್ದು, ಆ ಜಾಗ ವೀರನಾರಾಯಣ ದೇವಸ್ಥಾನಕ್ಕೆ ಸೇರಿದೆ. ಈವೆರಲ್ಲ ಅನಧಿಕೃತವಾಗಿ ವಾಸವಾಗಿದ್ದು, ಇಲ್ಲಿ ಮುಸ್ಲಿಂ ಪುಡಾರಿಗಳ ದಬ್ಬಾಳಿಕೆ ಹಾಗೂ ಅವರ ಬೆಂಬಲವಿದೆ. ಜವಳಗಲ್ಲಿಯಲ್ಲಿ ಇರುವ ಜನರಿಗೆ ರೆಹಮತ್ ನಗರದಲ್ಲಿ ಮನೆ ಮಂಜೂರು ಆಗಿದ್ದರೂ ಅಲ್ಲಿರುವ ತಮ್ಮ ಮನೆಗಳನ್ನು ಬಾಡಿಗೆಗೆ ನೀಡಿ ಜವಳಗಲ್ಲಿಯಲ್ಲಿ ಅನಧಿಕೃತವಾಗಿ ವಾಸವಾಗಿದ್ದಾರೆ. ಈ ಪ್ರದೇಶದಲ್ಲಿ ವಾಸವಾಗಿರುವವರನ್ನು ಖಾಲಿ ಮಾಡಿಸಬೇಕು. ಅಲ್ಲದೆ, ದೇವಸ್ಥಾನದ ಒಂದಿಂಚು ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಲು ಬಿಡುವುದಿಲ್ಲ ಎಂದರು.
ರಾಜ್ಯದಲ್ಲಿ ಹಿಜಾಬ್ ಹಾಗೂ ಹಲಾಲ್ ವಿಚಾರ ಭಾರೀ ಚರ್ಚೆಯಲ್ಲಿದ್ದು, ಮುಸ್ಲಿಂರು ಅಲ್ಲಾನನ್ನು ನಂಬಬೇಕೇ ಹೊರತು ಮುಲ್ಲಾನನ್ನು ಅಲ್ಲ. ಏಕೆಂದರೆ, ಮುಲ್ಲಾಗಳು ಕಾಂಗ್ರೆಸ್ ಚೇಲಾಗಳಂತೆ, ಏಜೆಂಟರ್ ಅಂತೆ ವರ್ತಿಸುತ್ತಿದ್ದಾರೆ. ಹಿಜಾಬ್, ಬುರ್ಕಾ ಧರಿಸುವುದಕ್ಕಿಂತ ಮುನ್ನ ವೈಜ್ಞಾನಿಕ ಕಾರಣ ತಿಳಿದುಕೊಳ್ಳಬೇಕು. ಅರಬ್ ರಾಷ್ಟ್ರಗಳಲ್ಲಿ ಬುರ್ಕಾ, ಹಿಜಾಬ್ ಧರಿಸಿದರೂ ಕಪ್ಪು ಬಣ್ಣದ್ದು ಬಳಸುವುದಿಲ್ಲ. ಬದಲಾಗಿ ಗ್ರೇ, ಗ್ರಿನ್ ಇನ್ನಿತರ ಬಣ್ಣಗಳದ್ದು ಧರಿಸುತ್ತಾರೆ. ಅರಬ್ ದೇಶಗಳಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಬಿಸಿಲು ಕಾಯ್ದರೆ ಬೋನ್ ಕ್ಯಾನ್ಸರ್ ಹಾಗೂ ಚರ್ಮ ರೊಗ ಬರುತ್ತದೆ ಎಂಬ ಕಾರಣಕ್ಕೆ ಧರಿಸುತ್ತಾರೆ. ಹೀಗಾಗಿ ನಮ್ಮಲ್ಲಿ ಬುರ್ಕಾ ಹಾಕುವ ಅವಶ್ಯಕತೆ ಇಲ್ಲ. ಹಿಜಾಬ್ ವಿಚಾರದಲ್ಲಿ ಸಂವಿಧಾನದ ಹಕ್ಕು, ಹೈಕೋರ್ಟ್ ಆದೇಶ ಧಿಕ್ಕರಿಸಿ ನಡೆಯುತ್ತಿರುವುದು ಸರಿಯಲ್ಲ ಎಂದು ಅನಿಲ್ ಮೆಣಸಿನಕಾಯಿ ಕಿಡಿಕಾರಿದರು.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ರಾಯಲ್ ಎಲ್ ಫೀಲ್ಡ್ ಬೈಕ್ ಶೋ ರೂಂನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಗದಗನ ಮುಳಗುಂದ ನಾಕಾ ಬಳಿ ಇರುವ ಹುಬ್ಬಳ್ಳಿ ರಸ್ತೆಯಲ್ಲಿರುವ ವೀರೇಶ್ ಗುಗ್ಗರಿ ಎಂಬುವವರಿಗೆ ಸೇರಿದ ಬೈಕ್ ಶೋ ರೂಂನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಗಳು ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಶನಿವಾರ ಯುಗಾದಿ ಪಾಡ್ಯ ಇರುವುದರಿಂದ ಸಾಕಷ್ಟು ಜನ ಹೊಸ ಬೈಕ್ ಬುಕ್ ಮಾಡಿದ್ದರು. ಪಾಡ್ಯ ದಿನದಂದು ಹಲವು ಬೈಕ್ ರಿಲೀಸ್ ಆಗಬೇಕಿತ್ತು. ಪಾಡ್ಯದ ಮುನ್ನಾ ದಿನವೇ ಅಂದರೆ ಶುಕ್ರವಾರವೇ ಈ ದುರ್ಘಟನೆ ನಡೆದಿದ್ದು, ಬೈಕ್ ಬುಕ್ ಮಾಡಿರುವ ಜನರಿಗೆ ಭಾರೀ ನಿರಾಸೆ ಮೂಡಿಸಿದೆ.
ಮತ್ತೊಂದೆಡೆ ತಮ್ಮ ಕನಸಿನ ಬೈಕ್ ಖರೀದಿಸಿ ಸರ್ವಿಸ್ ಗೆ ಬಿಟ್ಟಿದ್ದ ಬೈಕ್ ಗಳು ಸಹ ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಸಂಭವಿಸಬಹುದಾದ ಭಾರೀ ಪ್ರಮಾಣದ ನಷ್ಟವನ್ನು ತಪ್ಪಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಿರ್ಮಾಪಕರು: ಎಸ್.ಪೂರ್ಣಚಂದ್ರ ನಾಯ್ಡು , ಶ್ರೀಕಾಂತ್ ವೀರಮಾಚಿನೇನಿ. ನಿರ್ದೇಶನ: ಸುಜಯ್ ಕೆ ಶ್ರೀಹರಿ ಛಾಯಾಗ್ರಹಣ: ಕುಂಜುನ್ನಿ ಎಸ್ ಕುಮಾರ್ ಸಂಗೀತ ನಿರ್ದೇಶನ: ಜಿಬ್ರಾನ್ ಸಂಕಲನ: ಆಂಟೊನಿ ಕಲಾ ನಿರ್ದೇಶನ: ಶ್ರೀನಿವಾಸ ಸಾಹಸ: ಡಿಫರೆಂಟ್ ಡ್ಯಾನಿ ಮತ್ತು ಮಾರ್ಷಲ್ ರಾಮಣ್ಣ ನೃತ್ಯ ಸಂಯೋಜನೆ: ಬಾನು ಮತ್ತು ಜಾನಿ ಮಾಸ್ಟರ್ ಸಾಹಿತ್ಯ: ನಾಗೇಂದ್ರ ಪ್ರಸಾದ್ ಸಂಭಾಷಣೆ: ಗುರು ಪ್ರಸಾದ್ ಮತ್ತು ಇ ಧರ್ಮೇಂದ್ರ ಚಿತ್ರ ಪ್ರದರ್ಶನ: ಶ್ರೀ ಶಾರದಾ ಚಿತ್ರಮಂದಿರ, ಕೊಪ್ಪಳ.
–ಬಸವರಾಜ ಕರುಗಲ್. ಮೂರು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿರೊ ರಿಯಲ್ ಸ್ಟಾರ್ ಉಪೇಂದ್ರ, ಹೋಮ್ ಮಿನಿಸ್ಟರ್ ಸಿನಿಮಾ ಮೂಲಕ ಅವರನ್ನು ಅಭಿಮಾನಿಗಳ ಚಕ್ರವರ್ತಿಯನ್ನಾಗಿ ಮಾಡಲಾಗಿದೆ. ಐ ಲವ್ ಯು ಸಿನಿಮಾದಲ್ಲಿ ಸೋತಿದ್ದ ಉಪ್ಪಿ, ಆನಂತರ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. After long gap ಹೋಮ್ ಮಿನಿಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿರೊ ಉಪೇಂದ್ರರನ್ನ ನೋಡಲು ಬಹಳ ನಿರೀಕ್ಷೆ ಇಟ್ಟುಕೊಂಡು ಬರಬೇಕಿಲ್ಲ. ಯಾಕೆಂದರೆ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ಅನಿರೀಕ್ಷಿತವಾಗಿ ನಡೆಯುವಂಥದ್ದು, ಘಟಿಸುವಂಥದ್ದು ಏನೂ ಇಲ್ಲ. ಹಾಗಂತ ಅರ್ಧಕ್ಕೆ ಎದ್ದು ಬಂದರೆ ಒಂದೊಳ್ಳೇ ಮೇಸೇಜ್ನ್ನ ಮಿಸ್ ಮಾಡ್ಕೊತೀರಾ..
ನಿಜ ಹನ್ನೇರಡು ನಿಮಿಷಗಳ ಅತ್ಯುತ್ತಮ ಸಬ್ಜೆಕ್ಟ್ನ್ನ ಸಿನಿಮಾ ಮೂಲಕ ತೆರೆಗೆ ತರಲು ಎರಡೂವರೆ ಗಂಟೆ ಬಳಸಿಕೊಂಡದ್ದು, ಪ್ರೇಕ್ಷಕರಿಗೆ ಹೋಮ್ ಮಿನಿಸ್ಟರ್ ಮಾಡುವ ತಾಳ್ಮೆಯ ಪರೀಕ್ಷೆಯೇ ಸರಿ. ಇಂಥ ಒಳ್ಳೆಯ ವಿಷಯವನ್ನು ಅಚ್ಚುಕಟ್ಟಾಗಿ, ಇಂಟರೆಸ್ಟಿಂಗ್ ಆಗಿ ಸಿನಿಮಾ ಮಾಡುವ ಅವಕಾಶವನ್ನ ಚಿತ್ರದ ನಿರ್ದೇಶಕ ಸುಜಯ್ ಕೆ.ಶ್ರೀಹರಿ ಮಿಸ್ ಮಾಡ್ಕೊಂಡಿದ್ದಾರೆ.
ಕುಟುಂಬವನ್ನೇ ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾ ಇದು ಎಂದು ಥಟ್ಟನೇ ಹೇಳಬಹುದು. ಒಂದರ್ಧ ಸಿನಿಮಾ ಶಿವಣ್ಣ ಅಭಿನಯದ “ಅಮ್ಮಾವ್ರ ಗಂಡ” ಸಿನಿಮಾಗೆ ತಾಳೆಯಾಗುತ್ತದೆ.
ಮೊದಲೆಲ್ಲ ಮನೆ ಅಂದ್ರೆ ಅಪ್ಪ, ಅಮ್ಮ, ಗಂಡ, ಹೆಂಡತಿ ಮತ್ತು ಮಕ್ಕಳು ಇರುತ್ತಿದ್ದರು. ಗಂಡ ಹೆಂಡತಿ ಕೆಲಸಕ್ಕೆ ಹೋದರೆ ಮಕ್ಕಳನ್ನ ಅಪ್ಪ ಅಮ್ಮ ನೋಡ್ಕೊತಿದ್ರು. ಆದರೆ ಈಗ ಮನೆ ಅಂದ್ರೆ ಗಂಡ, ಹೆಂಡತಿ ಮತ್ತು ಮಗು ಎನ್ನುವ ಕಾಲವಿದು. ಗಂಡ ಹೆಂಡತಿ ಕೆಲಸಕ್ಕೆ ಹೋದ್ರೆ ಮಗುವನ್ನ ನೋಡಿಕೊಳ್ಳಲು ಆಳನ್ನು ನೇಮಿಸಬೇಕು. ಮಕ್ಕಳು ದೇವರಿದ್ದ ಹಾಗೆ ಕಾಳಜಿ ತೋರಿಸುವವರನ್ನು ಪ್ರೀತಿಸುತ್ತವೆ. ಕೆಲವರು ಕಾಳಜಿಯನ್ನು ಹಣ ಗಳಿಸುವ ಮಾರ್ಗ ಮಾಡಿಕೊಂಡು ದೇವರಿಗೆ ಮೋಸ ಮಾಡುತ್ತಾರೆ. ಅದಕ್ಕೆ ಈ ಚಿತ್ರದಲ್ಲಿ ನಾಯಕ ತಾನು ಕೆಲಸ ಬಿಟ್ಟು ಮನೆಯಲ್ಲೇ ಇರ್ತಾನೆ.
ಮನೆಯ ಎಲ್ಲ ಜವಾಬ್ದಾರಿ ನಾಯಕ ರೇಣು (ಉಪೇಂದ್ರ) ಹೆಗಲಿಗಿದ್ದು, ಮೇಲ್ನೋಟಕ್ಕೆ ಉಂಡಾಡಿ ಗುಂಡನ ಥರಾ ಕಾಣ್ತಾನೆ. ಅಕ್ಕ ಪಕ್ಕದ ಮನೆಯ ಗೃಹಿಣಿಯರೇ ಈತನ ಫ್ರೆಂಡ್ಸ್. ಸದಾ ಹೆಂಗಸರ ಜೊತೆಗಿದ್ದು ಅವರ ಮನೆಯ ಸಮಸ್ಯೆಗಳನ್ನು ಪರಿಹರಿಸುವ ಆಪತ್ಬಾಂಧವ. ಆದರೆ ಒಮ್ಮೆ ರೇಣುನೇ ಸಮಸ್ಯೆಯಲ್ಲಿ ಸಿಲುಕುತ್ತಾನೆ. ಆ ಸಮಸ್ಯೆ ಕುಟುಂಬವನ್ನೇ ಬ್ರೇಕ್ ಮಾಡುತ್ತದೆ.
ಪ್ರತಿಭೆಗೆ ಪ್ರೋತ್ಸಾಹ ನೀಡುವ ನಾಯಕನ ಗುಣವೇ ಮುಳ್ಳಾಗಿ, ಚಿತ್ರದ ಕೊನೆಯಲ್ಲಿ ಮುಳ್ಳಿನ ಮಧ್ಯೆಯೂ ಅರಳುವ ಗುಲಾಬಿಯಂತೆ ಕಂಗೊಳಿಸುತ್ತಾನೆ. ವರ್ಕ್ ಫ್ರಂ ಹೋಮ್ ಅಂದ್ರೆ ಮನೆ ಕೆಲಸ ಮಾಡ್ತಾ ಮಾಡ್ತಾನೇ ಮಕ್ಕಳ ಕೇರ್ಗೆ ಒಂದು ಆ್ಯಪ್ ಸಂಶೋಧಿಸುತ್ತಾನೆ. ಅದು ಹೇಗೆ ವರ್ಕ್ ಮಾಡುತ್ತದೆ ಅನ್ನೋದನ್ನ ಚಿತ್ರದಲ್ಲಿ ಸೂಕ್ಷ್ಮವಾಗಿ, ಸಂಕ್ಷಿಪ್ತವಾಗಿ ಹೇಳಲಾಗಿದೆ. ಇಡೀ ಚಿತ್ರದಲ್ಲಿ ಗಮನ ಸೆಳೆಯುವ ಅಂಶವೆಂದರೆ ಇದೊಂದೇ.
ಹೋಮ್ ಮಿನಿಸ್ಟರ್ ಅನ್ನೋದು ಸಿನಿಮಾದಲ್ಲಿ ಬರುವ ಟಿವಿಯ ರಿಯಾಲಿಟಿ ಷೋವೊಂದರ ಹೆಸರು. ರಿಯಾಲಿಟಿ ಷೋವನ್ನೇ ಚಿತ್ರಕ್ಕೆ ಕನೆಕ್ಟ್ ಮಾಡಿ, ಕ್ಲೈಮ್ಯಾಕ್ಸ್ನಲ್ಲಿ ಕಣ್ಣೀರು ಹಾಕಿಸುತ್ತಾರೆ ನಿರ್ದೇಶಕ ಸುಜಯ್.
ಆದರೆ ಚಿತ್ರದ ಕೆಲವು ಅಂಶಗಳು ಲಾಜಿಕ್ ಇಲ್ಲದೇ ಲಗಾಮಿಲ್ಲದ ಕುದುರೆಯಂತೆ ಓಡಿ ಬಿಡುತ್ತವೆ. ಕೆಲವೊಮ್ಮೆ ಏನೊ ಹೇಳಲು ಹೋಗಿ ಏನೇನೇನೋ ಹೇಳಿಬಿಡುತ್ತಾರೆ ಎಂಬ ಭಾವ ಕಾಡುತ್ತದೆ.
ಸುಜಯ್ ಕಥೆಯ ಆಯ್ಕೆಯಲ್ಲಿ ಗೆದ್ದಿದ್ದಾರೆ. ಅದನ್ನು ತೆರೆಗೆ ತರುವಲ್ಲಿ ಸೋತಿದ್ದಾರೆ ಎಂಬುದನ್ನು ಬೇಸರ ಮಾಡಿಕೊಳ್ಳದೇ ಒಪ್ಪಿಕೊಳ್ಳಬೇಕು. ಹಣ ಹಾಕಿದ ನಿರ್ಮಾಪಕ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ಬಂಡವಾಳ ವಾಪಸ್ ತೆಗೆಯಲು ಮತ್ತೊಂದು ಉತ್ತಮ ಸಿನಿಮಾ ನಿರ್ಮಾಣಕ್ಕೆ ಅಣಿಯಾಗಬೇಕಷ್ಟೇ. ಕುಂಜುನ್ನಿ ಛಾಯಾಗ್ರಹಣ ಸಾಧಾರಣ ಬಜೆಟ್ ಸಿನಿಮಾ ಇದು ಎಂಬುದನ್ನು ಎತ್ತಿ ತೋರಿಸುತ್ತದೆ. ಜಿಬ್ರಾನ್ ಮ್ಯೂಜಿಕ್ನಲ್ಲಿ ಮ್ಯಾಜಿಕ್ ಇಲ್ಲ. ಗುರುಪ್ರಸಾದ್ ಮತ್ತು ಧರ್ಮೇಂದ್ರ ಚಿತ್ರಕ್ಕಾಗಿ ಮಾತುಗಳನ್ನು ಬರೆದಿದ್ದು, ಅಲ್ಲಲ್ಲಿ ಬರೆ ಎಳೆಯುತ್ತವೆ. ಕಣ್ಣೀರು ತರಿಸುತ್ತವೆ. ಡಿಫರೆಂಟ್ ಡ್ಯಾನಿ ಸ್ಟಂಟ್ನಲ್ಲಿ ಗಮನ ಸೆಳೆಯುವಂಥ ಎಲಿಮೆಂಟ್ಸ್ ಇಲ್ಲ.
ಒಟ್ಟಾರೆ ಹೋಮ್ ಮಿನಿಸ್ಟರ್ ಹೇಗಿದ್ದಾನೆಂದರೆ ಕೊನೆಯ ಬಾಲ್ನಲ್ಲಿ ಬೌಂಡರಿ ಹೊಡೆದಂತೆ ಕಾಣಿಸುತ್ತಾನೆ. ಆ ಬೌಂಡರಿ ಬರುವವರೆಗೆ ನೋಡುಗನಿಗೆ ಸಖತ್ ಬೋರು. ಬೌಂಡರಿ ಹೊಡೆದಾಗ ಸೌಂಡು ಸಿಕ್ಕಾಪಟ್ಟೆ ಜೋರು.
ಬಿಜೆಪಿ ಜೊತೆ ಹೊಂದಾಣಿಕೆಯೇ ಮಾಡಿಕೊಂಡಿಲ್ಲ ಎಂಬ ಕಾಂಗ್ರೆಸ್ ಸ್ಪಷ್ಟನೆಗೆ ಬಿಜೆಪಿ ಆಕ್ರೋಶ
ವಿಜಯಸಾಕ್ಷಿ ಸುದ್ದಿ, ನವಲಗುಂದ:
ಸ್ಥಳೀಯ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ನಾವು ಕೊಮುವಾದಿ ಬಿಜೆಪಿ ಜೊತೆ ಹೊಂದಾಣಿಕೆಯೇ ಮಾಡಿಕೊಂಡಿಲ್ಲ, ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ಹೊರಗಿಡಬೇಕೆಂದು ಏಕೈಕ ಉದ್ದೇಶದಿಂದ ಬಿಜೆಪಿ ಸದಸ್ಯರು ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.
ಅಳ್ನಾವರದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಕೋಮುವಾದಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಇದೇ ಕಾರಣದಿಂದ ನವಲಗುಂದ ಪುರಸಭೆಯಲ್ಲಿ ನಾವು ಜೆಡಿಎಸ್ ಪಕ್ಷದ ಬೆಂಬಲ ಪಡೆಯಬಾರದೆಂದು ನಿರ್ಧರಿಸಿದ್ದೇವು ಹೊರತು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಈಗ ಬಿಜೆಪಿಯವರು ಅನವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಪ್ಪಂದವಾಗಿದ್ದರೆ ಅಂದೇ ಧ್ವನಿ ಎತ್ತಿ ಬಹಿರಂಗವಾಗಿ ಹೇಳಬೇಕಾಗಿತ್ತು. ನಾವು ಎಂದೂ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ನಮ್ಮ ಪಕ್ಷದವರು ಯಾರಾದರೂ ಅವರೊಂದಿಗೆ ಕೈಜೊಡಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ರಾಜೀ ಮಾಡಿಕೊಳ್ಳುವ ಸಂದರ್ಭ ಎದುರಾರದರೆ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಈಗ 17 ಸದಸ್ಯರ ಬೆಂಬಲವಿದ್ದು ಸಂಪೂರ್ಣ ಬಹುಮತ ಹೊಂದಿದ್ದೇವೆ. ನಮ್ಮ ಪಕ್ಷದ ಒಮ್ಮತದ ಅಭ್ಯರ್ಥಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತೇವೆಂದು ಹೇಳಿದ್ದಾರೆ.
ವಚನಭ್ರಷ್ಟರಾದರೆ ನಿರಂತರ ಹೋರಾಟ – ಎಸ್.ಬಿ.ದಾನಪ್ಪಗೌಡರ
ಒಳ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅನೀಲಕುಮಾರ ಪಾಟೀಲ ಅವರು ಇರಲಿಲ್ಲ. ಸ್ಥಳೀಯ ನಾಯಕರಾದ ಮಾಜಿ ಸಚಿವ ಕೆ.ಎನ್.ಗಡ್ಡಿ, ವಿನೋದ ಅಸೂಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧನಗೌಡ ಹಿರೇಗೌಡರ ಹಾಗೂ ಹಿರಿಯ ಮುಖಂಡ ವಿ.ಪಿ.ಪಾಟೀಲ ಅವರಿದ್ದರು. ಕೊಟ್ಟ ಮಾತಿನಂತೆಯೇ ಅಧ್ಯಕ್ಷ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದವರಿಗೆ, ಸ್ಥಾಯಿ ಕಮೀಟಿ ಚೇರಮನ್ ಬಿಜೆಪಿಯವರಿಗೆ ಕೊಡಬೇಕೆಂದು ಕರಾರು ಇದ್ದ ಕಾರಣ ಬಿಜೆಪಿ ಸದಸ್ಯ ಬಸವರಾಜ ಕಟ್ಟಿಮನಿ ಅವರನ್ನು ಸ್ಥಾಯಿ ಕಮೀಟಿ ಚೇರಮನ್ರಾಗಿ ಆಯ್ಕೆ ಮಾಡಿ ಅಧಿಕಾರ ಹಂಚಿಕೆ ಮಾಡಿದ್ದು ಸುಳ್ಳಾಗುವುದಿಲ್ಲ. ಸಾರ್ವಜನಿಕ ವಲಯದಲ್ಲಿ ಇದು ತೆರೆದಿಟ್ಟ ಪುಸ್ತಕದಂತಿದೆ.
ಹಿಂದೆ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಜೊತೆ ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸಿದ್ದೇವೆ. ಆದರೆ ಈಗ ಹಿರಿತನದಲ್ಲಿಯೇ ಇಲ್ಲದವರ ಹೇಳಿಕೆಯನ್ನು ನಾವು ನಂಬುವುದಿಲ್ಲ. ಸ್ಥಳೀಯ ನಾಯಕರ ಮೇಲೆ ನಮಗೆ ವಿಶ್ವಾಸವಿದೆ. ಕೊಟ್ಟ ಮಾತಿನಂತೆಯೇ ಅವರು ನಡೆದುಕೊಳ್ಳುತ್ತಾರೆಂಬ ನಂಬುಗೆ ಇದೆ. ಒಂದು ವೇಳೆ ಸ್ಥಳೀಯ ನಾಯಕರು ವಚನಭ್ರಷ್ಟರಾದರೆ ನಿರಂತರ ಹೋರಾಟ ಮಾಡುತ್ತೇವೆಂದು ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಬಿ.ದಾನಪ್ಪಗೌಡರ ಎಚ್ಚರಿಕೆ ನೀಡಿದ್ದಾರೆ.
–ಬಸವರಾಜ ಕರುಗಲ್ ವಿಜಯಸಾಕ್ಷಿ ವಿಶೇಷ ಸುದ್ದಿ, ಕೊಪ್ಪಳ: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ 2023ರ ವಿಧಾನಸಭಾ ಚುನಾವಣಾ ಅಖಾಡ ಸಾಕ್ಷಿಯಾಗಲಿದೆ. ಸಿದ್ದರಾಮಯ್ಯ ಅವರ ಮಾನಸ ಪುತ್ರ ಎಂದೇ ಬಿಂಬಿತಗೊಂಡಿರುವ ರಾಘವೇಂದ್ರ ಹಿಟ್ನಾಳ ಈ ತಮ್ಮ ರಾಜಕೀಯ ಗುರು ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಲಿದ್ದಾರೆ!
ಈಗಾಗಲೇ ರಾಜ್ಯದಲ್ಲಿ ಚುನಾವಣೆಯ ಗಾಳಿ ಬೀಸತೊಡಗಿದೆ. ವರ್ಷಾಂತ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ವಿಶೇಷವೆಂದರೆ ಕನ್ನಡ ನೆಲದ ದೊಡ್ಮನೆ ಎನಿಸಿರುವ ರಾಜ್ಕುಮಾರ್ ಕುಟುಂಬ, ಸಮಾಜ ಸೇವೆಯಲ್ಲಿ ವಿಶ್ವದಲ್ಲೇ ದೊಡ್ಡ ಹೆಸರು ಗಳಿಸಿರುವ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಪಿಆರ್ಕೆ ಎಂಬ ಹೊಸ ಪಕ್ಷ ಸ್ಥಾಪಿಸಲಿದ್ದು, ಕೊಪ್ಪಳ ಕಣದಿಂದ ರಾಘವೇಂದ್ರ ಹಿಟ್ನಾಳ ಪಿಆರ್ಕೆ ಪಕ್ಷ ಪ್ರತಿನಿಧಿಸಿ ಸ್ಪರ್ಧಿಸಲು ಒಂದು ಸುತ್ತಿನ ಮಾತು ಕತೆ ಮುಗಿದಿದೆ ಎಂದು ಪಿಆರ್ಕೆ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಇನ್ನು ಬಿಜೆಪಿಯಿಂದ ಸಿ.ವಿ.ಚಂದ್ರಶೇಖರ ಹೆಸರು ಅಂತಿಮಗೊಂಡಿದ್ದು, ಕಾಂಗ್ರೆಸ್ ಮುಖಂಡ ಸುರೇಶ ಭೂಮರಡ್ಡಿ ಬಿಜೆಪಿ ಸೇರುವ ಮೂಲಕ ಬೀಗರಾದ ಸಿ.ವಿ.ಸಿ.ಯವರ ಪರ ಮತಯಾಚಿಸಲಿದ್ದಾರೆ.
ಈಗಾಗಲೇ ಕೊಪ್ಪಳ ವಿಧಾನಸಭಾ ಕ್ಷೇತ್ರ ಸೇರಿದಂತೆ ಲೋಕಸಭಾ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪ್ರಭಾವ ಹೊಂದಿರುವ ಕರಡಿ ಫ್ಯಾಮಿಲಿ ಕಮಲವನ್ನು ಕೈಬಿಡಲಿದ್ದು, ಮತ್ತೇ ತೆನೆ ಹೊರುವ ಮುನ್ಸೂಚನೆ ಸಿಕ್ಕಿದ್ದು, ಸಂಸದ ಕರಡಿ ಸಂಗಣ್ಣ ಅವರಿಗೆ ಜೆಡಿಎಸ್ ಟಿಕೆಟ್ ಬಹುತೇಕ ಫೈನಲ್ ಆಗಿದೆ.
ಒಟ್ಟಾರೆ ಈ ಬಾರಿ ಚುನಾವಣಾ ಅಖಾಡ ಭಾರಿ ಸಂಚಲನ ಸೃಷ್ಟಿಸಿದ್ದು ಮಿತ್ರರು ವಿರೋಧಿಗಳಾದರೆ, ಶತ್ರುಗಳು ಆಪ್ತರಾಗುವ ಕಾಲ ಸನ್ನೀಹಿತ.
ಏಪ್ರಿಲ್ 24ಕ್ಕೆ ಪಿಆರ್ಕೆ ಪಕ್ಷ ಅಸ್ತಿತ್ವಕ್ಕೆ: ಕರುನಾಡ ಚಕ್ರವರ್ತಿ ಎನಿಸಿರುವ ಡಾ.ಶಿವರಾಜ್ಕುಮಾರ್ ರಾಜಕೀಯದಿಂದ ನಮ್ಮ ಕುಟುಂಬ ದೂರ ಎಂದು ಹೇಳುತ್ತಲೇ ಬಂದವರು. ಈ ಹಿಂದೆ ಅವರ ಪತ್ನಿ ಗೀತಾ ಅವರು ಜೆಡಿಎಸ್ನಿಂದ ಸ್ಪರ್ಧಿಸಿದಾಗ ಪತ್ನಿ ಪರವಾಗಿ ಮತಯಾಚಿಸಿದ್ದರು. ಆನಂತರ ರಾಜಕೀಯದಿಂದ ದೂರವೇ ಉಳಿದಿದ್ದರು. ಇದೀಗ ಪುನೀತ್ ಅವರ ಸೋಷಿಯಲ್ ವರ್ಕ್ ಎಲ್ಲೆಡೆ ಪ್ರಶಂಸೆಗೊಳಗಾಗಿದ್ದು, ಅಭಿಮಾನಿಗಳು ಪುನೀತ್ ಮತ್ತು ಪುನೀತ್ ಕೆಲಸಗಳ ಸ್ಮರಣಾರ್ಥ ಪುನೀತ್ ಹೆಸರಿನಲ್ಲಿ ಪಕ್ಷ ಸ್ಥಾಪಿಸುವಂತೆ ಒತ್ತಾಯಿಸಿದ್ದರು. ಫಲವಾಗಿ ಪಿಆರ್ಕೆ ಪಕ್ಷ ಏಪ್ರಿಲ್ 24ರಂದು ರಾಜ್ ಜನ್ಮದಿನದಂದು ಅಸ್ತಿತ್ವಕ್ಕೆ ಬರಲಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಡಾ.ಶಿವರಾಜ್ಕುಮಾರ್ ಕಾರ್ಯನಿರ್ವಹಿಸಲಿದ್ದು, ವಿವಿಧ ಪಕ್ಷಗಳ ಪ್ರಭಾವಿ ಮುಖಂಡರು, ಚಿತ್ರ ತಾರೆಯರು ಶಿವಣ್ಣ ಸಂಪರ್ಕದಲ್ಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಾವಿಲ್ಲಿ ತಿಳಿಸಿರೋದು ಟ್ರೈಲರ್ ಮಾತ್ರ. ಪೂರ್ತಿ ವಿವರ ಗೊತ್ತಾಗಬೇಕಾದರೆ ಇಂದಿನ ವಿಜಯಸಾಕ್ಷಿ ಪತ್ರಿಕೆ ಓದಿ….
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಎರಡು ವರ್ಷಗಳ ನಂತರ ಕೊಪ್ಪಳ ನಗರಸಭೆಯಲ್ಲಿ ಬುಧವಾರ ಸದಸ್ಯರೆದುರು 2022-23ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಲಾಯಿತು. 16.85 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಮಂಡಿಸಲಾಗಿದ್ದು, ನಗರಸಭೆ ಸದಸ್ಯರು ಕೆಲ ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ಕಂಡು ಬಂತು.
ಸುಮಾರು ಅರ್ಧ ಗಂಟೆ ವಿಳಂಬವಾಗಿ ಆರಂಭಗೊಂಡ ಸಭೆ ಸುಸೂತ್ರವಾಗಿ ನಡೆಯಿತು. ರಾಜಶೇಖರ ಆಡೂರು ಸೇರಿದಂತೆ ಕೆಲ ಸದಸ್ಯರು ಬಜೆಟ್ ಮಂಡನೆ ಮುಗಿದ ಮೇಲೆ ಸಭೆಗೆ ಪ್ರವೇಶಿಸಿದರು.
ಬಜೆಟ್ನ ಸಂಕ್ಷಿಪ್ತ ವಿವರ: ನಗರಸಭೆಗೆ 23.87 ಕೋಟಿ ರೂಪಾಯಿ ರಾಜತ್ವ ಸ್ವೀಕೃತಿಯಾಗಿದ್ದು, 8.31 ಕೋಟಿ ರೂಪಾಯಿ ಬಂಡವಾಳ ಸ್ವೀಕೃತಿ ಮತ್ತು 4.15 ಕೋಟಿ ರೂಪಾಯಿ ಅಸಾಧಾರಣ ಸ್ವೀಕೃತಿಯಾಗಿದ್ದು ಒಟ್ಟಾರೆ ನಗರಸಭೆಗೆ ಬಂದ ಸ್ವೀಕೃತಿ 36.34 ಕೋಟಿ ರೂಪಾಯಿ.
ಹಾಗೆಯೇ ಈ ಸಾಲಿನಲ್ಲಿ ಪಾವತಿಯಾದ ರಾಜಸ್ವ 22.75 ಕೋಟಿ ರೂಪಾಯಿ. 9.26 ಕೋಟಿ ರೂಪಾಯಿ ಬಂಡವಾಳ ಪಾವತಿ ಹಾಗೂ 4.15 ಕೋಟಿ ರೂಪಾಯಿ ಅಸಾಧಾರಣ ಪಾವತಿಯಾಗಿದ್ದು, ಒಟ್ಟಾರೆ ನಗರಸಭೆಯಿಂದ ಪಾವತಿಯಾಗಿದ್ದು 36.17 ಕೋಟಿ ರೂಪಾಯಿ.
ನಗರಸಭೆಯ ಸ್ವೀಕೃತಿ ಮತ್ತು ಪಾವತಿಯನ್ನು ತಾಳೆ ಮಾಡಿದಾಗ 16.85 ಲಕ್ಷ ರೂಪಾಯಿ ಉಳಿತಾಯವಾಗಿದೆ. ಇದರಲ್ಲಿ ಸರಕಾರದ ಅನುದಾನ ಹೊರತುಪಡಿಸಿ ನಗರಸಭೆ ನಿಧಿಗೆ 8.93 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಒಳಒಪ್ಪಂದದಂತೆ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದಿದ್ದು ರಾಜೀನಾಮೆ ಕೊಡುವಂತೆ ಬಿಜೆಪಿ ಪಕ್ಷದವರು ಪುರಸಭೆ ಎದುರು ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಂಡಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಪಿ.ದಾನಪ್ಪಗೌಡರ, ಒಳ ಒಪ್ಪಂದದಂತೆ ಎರಡೂ ಪಕ್ಷದವರಿಗೆ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದಿರುವ ಕಾರಣ ರಾಜೀನಾಮೆ ಕೊಡುವಂತೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಗೆ ಮಣಿದ ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಉಪಾಧ್ಯಕ್ಷರಾದ ಖೈರುನಬಿ ನಾಶಿಪುಡಿ ಇನ್ನು ರಾಜೀನಾಮೆ ಕೊಡದ ಕಾರಣ ಪ್ರತಿಭಟನೆಯನ್ನು ಮುಂದುವರೆಸಿದ್ದೇವು. ಆದರೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳು ಇರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಕಾರಣದಿಂದ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ ಎಂದರು.
ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆಂಬ ವಿಶ್ವಾಸದಲ್ಲಿದ್ದೇವೆ. ಒಂದು ವೇಳೆ ರಾಜೀನಾಮೆ ಕೊಡದಿದ್ದರೆ ಮುಂದೆ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡದ ಕಾರಣ ಖೈರುನಬಿ ನಾಶಿಪುಡಿ ಅವರ ಪುತ್ರ ಸುಲೇಮಾನ ನಾಶಿಪುಡಿ ಅವರನ್ನು ಸಂಪರ್ಕಿಸಿದಾಗ, ನಮ್ಮ ತಾಯಿಯವರು ಊರಲ್ಲಿರದ ಕಾರಣ ರಾಜೀನಾಮೆ ಕೊಟ್ಟಿಲ್ಲ, ಅವರು ಬಂದ ತಕ್ಷಣ ರಾಜೀನಾಮೆ ಕೊಡಿಸುತ್ತೇವೆಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿತುಪ್ಪ
ಬಹುಮತ ಇಲ್ಲದ ಸಂದರ್ಭದಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಧಿಕಾರ ಹಂಚಿಕೆ ಮಾಡಿಕೊಂಡಿದ್ದವು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಈಗ ಕಾಂಗ್ರೆಸ್ ಪಕ್ಷದ ಬಲ 17 ಸ್ಥಾನಕ್ಕೇರಿದ್ದು ಸ್ಪಷ್ಟ ಬಹುಮತದಲ್ಲಿದ್ದಾರೆ. ಪಕ್ಷದ ಹಿರಿಯರ ಸಲಹೆಯಂತೆ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದಾರೆ, ಉಪಾಧ್ಯಕ್ಷರು ಸಲ್ಲಿಸಬಹುದು. ಆದರೆ ಅಧಿಕಾರವನ್ನು ಈಗ ಬಿಜೆಪಿಗೆ ಬಿಟ್ಟುಕೊಡುವುದಾದರೂ ಹೇಗೆಂಬ ಪ್ರಶ್ನೆ ಉದ್ಭವಿಸಿದ್ದು ನುಂಗಲಾರದ ಬಿಸಿತುಪ್ಪವಾಗಿದೆ. ಅಧಿಕಾರ ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರು ಯಾರು ಸ್ಪಷ್ಟನೆ ಕೊಡುತ್ತಿಲ್ಲ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಕೈಜೋಡಿಸಿದರೆ ಸಾರ್ವಜನಿಕ ವಲಯದಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆಂಬ ಉದ್ದೇಶದಿಂದಲೇ ಜೆಡಿಎಸ್ ಪಕ್ಷದ 9 ಸದಸ್ಯರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಈಗ ಬಿಜೆಪಿಯೊಂದಿಗೆ ಈ ಹಿಂದೆ ನುಡಿದಂತೆ ನಡೆದುಕೊಳ್ಳಬೇಕೆ ಅಥವಾ ಸಂಪೂರ್ಣ ಬಹುಮತ ಇರುವ ಕಾರಣ ನಾವೇ ಅಧಿಕಾರದ ಗದ್ದುಗೆ ಏರಬೇಕೆಂಬ ಪ್ರಶ್ನೆ ಕಾಂಗ್ರೆಸ್ ಪಕ್ಷದಲ್ಲಿ ಕಗ್ಗಾಂಟಾಗಿರುವ ಕಾರಣ ಸ್ಥಳೀಯ ನಾಯಕರು ಚೆಂಡನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಳಿ ತೆಗೆದುಕೊಂಡು ಹೋಗಿದ್ದು ಅವರು ಕೊಡುವ ಸೂಚನೆಯಂತೆಯೇ ನಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ವಲಯದಿಂದ ತಿಳಿದುಬಂದಿದೆ.
ಬಿಜೆಪಿಗೆ ಅಧಿಕಾರ ಸಿಕ್ಕರೆ ನಮ್ಮವರೆ ಸಚಿವರಿದ್ದಾರೆ, ನಮ್ಮದೇ ಡಬಲ್ ಎಂಜಿನ್ ಸರ್ಕಾರವಿದ್ದು ಹೆಚ್ಚು ಅನುದಾನ ತಂದು ಪಟ್ಟಣದ ಅಭಿವೃದ್ಧಿ ಮಾಡುವುದಾಗಿ ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿಯವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಕಗ್ಗಂಟನ್ನು ಬಗೆಹರಿಸುವಲ್ಲಿ ನಿಸ್ಸಿಮರಾಗಿರುವ ಬಿಜೆಪಿಯ ಮುಖಂಡ ರಾಯನಗೌಡ ಪಾಟೀಲ ಯಾವ ನಡೆ ಇಡುತ್ತಾರೆಂಬುದು ಬಹು ಚರ್ಚಿತ ವಿಷಯವಾಗಿದೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ(ಪೋಕ್ಸೋ) ಶಂಕರ ಎಂ. ಜಾಲವಾದಿ ಅವರು ತೀರ್ಪು ಪ್ರಕಟಿಸಿದ್ದಾರೆ.
ಕೊಪ್ಪಳದ ಬಸವರಾಜ ಸತ್ಯಪ್ಪ ದೊಡ್ಡಮನಿ ಎಂಬ ವ್ಯಕ್ತಿಯು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಣ ಮಾಡಿ, ಬೇರೆ ಊರಿಗೆ ಕರೆದೊಯ್ದು ಗೃಹ ಬಂಧನದಲ್ಲಿಟ್ಟು ಅತ್ಯಾಚಾರ ಮಾಡಿದ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಮಹಿಳಾ ಠಾಣೆ ಪಿ.ಐ ಮೌನೇಶ್ವರ ಮಾಲಿಪಾಟೀಲ್ ಅವರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.20 ಸಾವಿರಗಳ ದಂಡವನ್ನು ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ರೂ.10 ಸಾವಿರಗಳನ್ನು ಬಾಧಿತಳಿಗೆ ಪರಿಹಾರ ರೂಪದಲ್ಲಿ ವಿತರಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.