Home Blog Page 35

ಪ್ರಯಾಗ್‌ರಾಜ್‌ನಲ್ಲಿ ಆತಂಕದ ಕ್ಷಣ: ವಾಯುಪಡೆಯ ತರಬೇತಿ ವಿಮಾನ ಪತನ

0

ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ ಇಂದು ಮಧ್ಯಾಹ್ನ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜನವರಿ 21ರಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಸಂಭವಿಸಿದ ಈ ಘಟನೆ, ಸಂಗಮದ ಸಮೀಪದ ಪ್ರದೇಶದಲ್ಲಿ ನಡೆದಿದೆ.

ಸಂಗಮದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಕೆರೆಯಲ್ಲಿ ಮೈಕ್ರೋಲೈಟ್ ತರಬೇತಿ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ. ಅಪಘಾತದ ತಕ್ಷಣವೇ ರಕ್ಷಣಾ ಪಡೆಗಳು ಕಾರ್ಯಾಚರಣೆಗೆ ಧಾವಿಸಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಪೈಲಟ್‌ಗಳಿಗೆ ಸಣ್ಣಮಟ್ಟದ ಗಾಯಗಳಾಗಿದ್ದರೂ, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಅಪಘಾತದ ಕಾರಣ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

‘200 ಡಾಲರ್ ಹೂಡಿಕೆ ಮಾಡಿ, 10 ಪಟ್ಟು ಲಾಭ’ ವಿಡಿಯೋ ಫೇಕ್: ಸಾರ್ವಜನಿಕರಿಗೆ ಸುಧಾ ಮೂರ್ತಿ ತೀವ್ರ ಎಚ್ಚರಿಕೆ

0

ಡೀಪ್‌ಫೇಕ್ ತಂತ್ರಜ್ಞಾನ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೀತಿಯ ವಂಚನೆಗೆ ದಾರಿ ಮಾಡಿಕೊಟ್ಟಿದೆ. “ಇಷ್ಟು ಹಣ ಹೂಡಿಕೆ ಮಾಡಿ, ಅಷ್ಟೇ ಲಾಭ ಗಳಿಸಿ” ಎಂಬ ಆಕರ್ಷಕ ಮಾತುಗಳೊಂದಿಗೆ ಹರಿದಾಡುತ್ತಿರುವ ಅನೇಕ ಸೆಲೆಬ್ರಿಟಿ ವಿಡಿಯೋಗಳು ನಿಜವಲ್ಲ — ಅವು ಡೀಪ್‌ಫೇಕ್ ಮೂಲಕ ತಯಾರಿಸಲಾದ ನಕಲಿ ವಿಡಿಯೋಗಳಾಗಿವೆ.

ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಬಳಸಿಕೊಂಡು ನಕಲಿ ವಿಡಿಯೋಗಳನ್ನು ಸೃಷ್ಟಿಸಲಾಗಿದೆ. ಇದರಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.

ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಈ ವಂಚನೆ ವಿರುದ್ಧ ಧ್ವನಿ ಎತ್ತಿದ್ದಾರೆ. “200 ಡಾಲರ್ ಹೂಡಿಕೆ ಮಾಡಿ ಹತ್ತು ಪಟ್ಟು ಲಾಭ ಪಡೆಯಬಹುದು” ಎಂದು ತಾನು ಹೇಳುತ್ತಿರುವಂತೆ ತೋರಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ.

“ನನ್ನ ಚಿತ್ರ ಮತ್ತು ಧ್ವನಿಯನ್ನು ಬಳಸಿ ಹಣಕಾಸು ಹೂಡಿಕೆಗಳ ಪ್ರಚಾರ ಮಾಡುತ್ತಿರುವ ವಿಡಿಯೋಗಳು ಸಂಪೂರ್ಣವಾಗಿ ನಕಲಿ. ಇವು ನನ್ನ ಅರಿವಿಲ್ಲದೆ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ” ಎಂದು ಸುಧಾ ಮೂರ್ತಿ ತಿಳಿಸಿದ್ದಾರೆ. ಇಂತಹ ವಂಚನೆಗಳಿಂದ ಕೆಲವರು ಹಣ ಕಳೆದುಕೊಂಡಿರುವುದನ್ನೂ ಅವರು ಬಹಿರಂಗಪಡಿಸಿದ್ದಾರೆ.

“ನಾನು ಎಂದಿಗೂ ಹೂಡಿಕೆ, ಹಣಕಾಸು ಲಾಭಗಳ ಬಗ್ಗೆ ಮಾತನಾಡುವುದಿಲ್ಲ. ನನ್ನ ವಿಚಾರಗಳು ಕೆಲಸ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಭಾರತೀಯ ಸಂಸ್ಕೃತಿಯ ಸುತ್ತ ಮಾತ್ರ ಇರುತ್ತವೆ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಇಂತಹ ವಿಡಿಯೋಗಳನ್ನು ನಂಬಿ ಯಾವುದೇ ಹಣಕಾಸು ನಿರ್ಧಾರ ತೆಗೆದುಕೊಳ್ಳಬೇಡಿ. ಯಾವುದೇ ಹೊಸ ಯೋಜನೆ ಕಂಡುಬಂದರೆ ಬ್ಯಾಂಕ್ ಅಥವಾ ಅಧಿಕೃತ ಮೂಲಗಳಿಂದ ಪರಿಶೀಲಿಸಿ. ಅನುಮಾನಾಸ್ಪದ ವಿಷಯ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ.

ಡೀಪ್‌ಫೇಕ್ ವಂಚನೆ ವಿರುದ್ಧ ಜಾಗೃತಿಯೇ ಅತ್ಯಂತ ದೊಡ್ಡ ರಕ್ಷಣೆ ಎಂಬ ಸಂದೇಶವನ್ನು ಸುಧಾ ಮೂರ್ತಿ ಸ್ಪಷ್ಟವಾಗಿ ನೀಡಿದ್ದಾರೆ.

15 ಅಡಿ ಜಿಗಿತದಿಂದ ಬದಲಾಗಿದೆ ಜೀವನ: ಕೂದಲು ಕಳೆದುಕೊಂಡರೂ ಜನರ ಹೃದಯ ಗೆದ್ದ ನಟ ರಾಜೇಂದ್ರನ್

‘ಮೊಟ್ಟ ರಾಜೇಂದ್ರನ್’ ಎಂದರೆ ತಕ್ಷಣ ನೆನಪಾಗುವುದು ಬೋಳು ತಲೆ, ವಿಶಿಷ್ಟ ಮುಖಭಾವ ಮತ್ತು ನಿರಂತರ ನಗು. ಹೆಸರು ಗೊತ್ತಿಲ್ಲದವರಿಗೆಲೂ ಅವರ ಮುಖ ಮಾತ್ರ ನೋಡಿದರೆ ಸಾಕು — “ಅಯ್ಯೋ, ಈ ನಟನೇ!” ಎಂದು ಹೇಳುತ್ತಾರೆ. ತಮಿಳು ನಟ ರಾಜೇಂದ್ರನ್ ಇಂದು ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಜನಪ್ರಿಯ ಹಾಸ್ಯನಟ. ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದರೂ, ಪರಭಾಷೆ ಪ್ರೇಕ್ಷಕರಿಗೆ ಅವರು ತುಂಬಾ ಪರಿಚಿತ.

ಆದರೆ ಈ ಬೋಳುತನ ಅವರ ಸ್ಟೈಲ್ ಅಲ್ಲ… ಅದು ವಿಧಿಯ ಬರೆಹ. ಒಂದು ಕಾಲದಲ್ಲಿ ದಪ್ಪ ಕೂದಲಿನೊಂದಿಗೆ ನಾಯಕನಾಗಿ ಕಾಣಿಸಿಕೊಂಡ ರಾಜೇಂದ್ರನ್, ಒಂದು ಅಪಘಾತದಿಂದ ಸಂಪೂರ್ಣ ಬದಲಾಗಬೇಕಾಯಿತು.

ಸಿನಿಮಾ ಜೀವನವನ್ನು ಅವರು ಸ್ಟಂಟ್ ಮ್ಯಾನ್ ಆಗಿ ಆರಂಭಿಸಿದ್ದರು. ಅನೇಕ ದೊಡ್ಡ ನಟರಿಗೆ ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿ, 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಫೈಟರ್ ಆಗಿ ಹೆಸರು ಮಾಡಿದ್ದರು. ಹಲವು ಪ್ರಶಸ್ತಿಗಳನ್ನೂ ಪಡೆದಿದ್ದರು.

ಆದರೆ ಮಲಯಾಳಂ ಚಿತ್ರದ ಚಿತ್ರೀಕರಣದ ವೇಳೆ 15 ಅಡಿ ಎತ್ತರದಿಂದ ನೀರಿಗೆ ಜಿಗಿಯಬೇಕಾದ ದೃಶ್ಯ ಅವರ ಜೀವನವನ್ನೇ ತಿರುವು ಮಾಡಿತು. “ನಾನು ಜಿಗಿದ ನೀರು ಕಾರ್ಖಾನೆಗಳಿಂದ ಹರಿದುಬರುವ ರಾಸಾಯನಿಕ ನೀರು ಎಂದು ನಂತರ ತಿಳಿಯಿತು” ಎಂದು ರಾಜೇಂದ್ರನ್ ಹೇಳಿಕೊಂಡಿದ್ದಾರೆ. ಆ ದಿನದಿಂದಲೇ ಕೂದಲು ಉದುರಲು ಆರಂಭವಾಗಿ, ಸ್ವಲ್ಪ ದಿನಗಳಲ್ಲಿ ಸಂಪೂರ್ಣ ಬೋಳಾದರು. ಹುಬ್ಬುಗಳೂ ಮಾಯವಾದವು. ಜೊತೆಗೆ ದೇಹದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಉಂಟಾದವು.

ಆದರೂ ಅವರು ಕುಗ್ಗಲಿಲ್ಲ. ಹೋರಾಟ ಮುಂದುವರಿಸಿದರು. ನಟನಾಗಿ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದರು. ಖಳನಾಯಕ ಪಾತ್ರಗಳು ಕೈ ತಪ್ಪಿದರೂ, ಹಾಸ್ಯ ಪಾತ್ರಗಳು ಅವರಿಗೆ ಹೊಸ ಜೀವನ ಕೊಟ್ಟವು. ನಿರ್ದೇಶಕರು ವಿಗ್ ಕೂಡ ಹಾಕಿಸದೇ ಅವರ ಸಹಜ ರೂಪದಲ್ಲೇ ನಟಿಸಲು ಅವಕಾಶ ನೀಡಿದರು.

“ನಾನು ಮೈನಸ್ ಎಂದುಕೊಂಡಿದ್ದೇ, ಇಂದು ನನ್ನ ಪ್ಲಸ್ ಆಗಿದೆ” ಎಂದು ರಾಜೇಂದ್ರನ್ ಹೇಳುತ್ತಾರೆ. ಇಂದು ಅವರು ಕೇವಲ ಹಾಸ್ಯನಟ ಅಲ್ಲ — ಲಕ್ಷಾಂತರ ಜನರಿಗೆ ಪ್ರೇರಣೆಯ ಸಂಕೇತ.

ಮಂಡ್ಯ| ಹಂದಿ ಮುಖದಂತಿರುವ ವಿಚಿತ್ರ ಮೇಕೆ ಮರಿ ಜನನ; ಹುಟ್ಟಿದ ಕೆಲವೇ ಕ್ಷಣದಲ್ಲಿ ಸಾವು!

0

ಮಂಡ್ಯ: ಜಿಲ್ಲೆಯ ಮಂಡ್ಯ ತಾಲ್ಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ಅಪರೂಪದ ಹಾಗೂ ವಿಚಿತ್ರ ಘಟನೆ ನಡೆದಿದೆ. ಹಂದಿ ಮುಖದಂತಿರುವ ಮೇಕೆ ಮರಿ ಜನನವಾಗಿದ್ದು, ಇದನ್ನು ಕಂಡ ರೈತರು ಹಾಗೂ ಗ್ರಾಮಸ್ಥರು ಅಚ್ಚರಿ ಹಾಗೂ ಭಯಕ್ಕೆ ಒಳಗಾಗಿದ್ದಾರೆ.

ಗ್ರಾಮದ ರೈತ ಹುಚ್ಚಪ್ಪ ಅವರಿಗೆ ಸೇರಿದ ಮೇಕೆಯು ಇಂದು ಬೆಳಿಗ್ಗೆ ಈ ವಿಚಿತ್ರ ಮರಿಗೆ ಜನನ ನೀಡಿದೆ. ಮೇಕೆ ಮರಿಯ ಮುಖ ಹಂದಿಯ ಮುಖವನ್ನು ಹೋಲುವ ರೀತಿಯಲ್ಲಿ ಕಂಡುಬಂದಿದ್ದು, ಜನನವಾಗುತ್ತಿದ್ದಂತೆ ಇದನ್ನು ಕಂಡ ರೈತ ಹುಚ್ಚಪ್ಪ ಗಾಬರಿಗೊಂಡಿದ್ದಾರೆ. ಆದರೆ ದುರ್ಬಾಗ್ಯವಶಾತ್, ಜನನವಾದ ಕೆಲವೇ ಹೊತ್ತಿನಲ್ಲಿ ಮೇಕೆ ಮರಿ ಸಾವನ್ನಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ರೈತ ಹುಚ್ಚಪ್ಪ ಅವರು ಊರಿನ ಜನರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ದ್ಯಾಪಸಂದ್ರ ಗ್ರಾಮದ ಜನರು ವಿಚಿತ್ರ ಮೇಕೆ ಮರಿಯನ್ನು ನೋಡಲು ಸ್ಥಳಕ್ಕೆ ಧಾವಿಸಿದ್ದು, ಅಪರೂಪದ ದೃಶ್ಯ ನೋಡಿ ಅಚ್ಚರಿಗೊಂಡಿದ್ದಾರೆ. ಕೆಲವರು ಭಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಕುತೂಹಲದಿಂದ ಮರಿ ವೀಕ್ಷಿಸಿದರು.

ವಿಚಿತ್ರ ರೂಪದ ಮೇಕೆ ಮರಿ ಜನನವು ಗ್ರಾಮದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ಕುರಿತು ಹಲವು ಊಹಾಪೋಹಗಳು ಹರಡಿವೆ. ನಂತರ ರೈತ ಹುಚ್ಚಪ್ಪ ಅವರು ಸತ್ತಿರುವ ಮೇಕೆ ಮರಿಯನ್ನು ತಮ್ಮ ಜಮೀನಿನಲ್ಲಿ ಮಣ್ಣುಮಾಡಿದ್ದಾರೆ.

ಭದ್ರಾವತಿ| ವೃದ್ಧ ದಂಪತಿ ಅನುಮಾನಾಸ್ಪದ ಸಾವು; ಕೊಲೆ ಶಂಕೆ, ತನಿಖೆ ಚುರುಕು!

0

ಭದ್ರಾವತಿ: ನಗರದ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿ ಪ್ರದೇಶದಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ವಿಐಎಸ್ಎಲ್ ನಿವೃತ್ತ ಉದ್ಯೋಗಿ ಚಂದ್ರಪ್ಪ (75) ಹಾಗೂ ಅವರ ಪತ್ನಿ ಜಯಮ್ಮ (65) ಮೃತರು. ಮೃತದೇಹಗಳು ಮನೆಯಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಪತ್ತೆಯಾಗಿದ್ದು, ದೇಹಗಳ ಮೇಲೆ ಯಾವುದೇ ಗಾಯಗಳು ಅಥವಾ ಹಲ್ಲೆ ನಡೆಸಿದ ಸ್ಪಷ್ಟ ಗುರುತುಗಳು ಕಂಡುಬಂದಿಲ್ಲ. ದಂಪತಿ ಮನೆಯಲ್ಲಿ ಇಬ್ಬರೇ ವಾಸವಾಗಿದ್ದು, ಅವರಿಗೆ ಮೂವರು ಪುತ್ರರಿದ್ದಾರೆ. ಆದರೆ ಅವರು ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ವೃದ್ಧ ದಂಪತಿಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಥೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ವರದಿ ನಿರೀಕ್ಷಿಸಲಾಗುತ್ತಿದೆ.

ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉಡುಪಿ| ಕಾಂಗ್ರೆಸ್-ಬಿಜೆಪಿ ನಡುವೆ ಧ್ವಜ ದಂಗಲ್​​: ಉಡುಪಿ ಡಿಸಿ ನಡೆ ಬಗ್ಗೆ ಜೋರಾಯ್ತು ಚರ್ಚೆ!

0

ಉಡುಪಿ: ಶೀರೂರು ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿಯ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದವರೆಗೆ ನಡೆದ ಪರ್ಯಾಯ ಮೆರವಣಿಗೆಗೆ ಕೇಸರಿ ಧ್ವಜ ತೋರಿಸಿ ಚಾಲನೆ ನೀಡಿದ ವಿಚಾರ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೇಸರಿ ಧ್ವಜ ಪ್ರದರ್ಶಿಸಿ ಮೆರವಣಿಗೆಗೆ ಚಾಲನೆ ನೀಡಿದ್ದನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಕ್ಷೇಪಿಸಿದ್ದು, ಈ ಕುರಿತು ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದೆ. ಜ.18ರ ಮುಂಜಾನೆ ಸುಮಾರು 3 ಗಂಟೆಗೆ ನಡೆದ ಪರ್ಯಾಯ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಅವರು ಭಾಗವಹಿಸಿದ್ದರು. ಮೆರವಣಿಗೆ ಆರಂಭಕ್ಕೂ ಮೊದಲು ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಅವರು ಕೇಸರಿ ಧ್ವಜವನ್ನು ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಿದ್ದು, ಅದನ್ನು ಡಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ನಡೆ ಸರ್ಕಾರಿ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್, ಈ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ತಾವು ನಗರಸಭೆಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾಗಿ ತಿಳಿಸಿದ್ದಾರೆ. ಶತಮಾನಗಳ ಇತಿಹಾಸ ಹೊಂದಿರುವ ಪರ್ಯಾಯ ಪದ್ಧತಿಯಂತೆ ಧ್ವಜ ನಿಶಾನೆ ತೋರಿಸುವುದು ಸಂಪ್ರದಾಯದ ಭಾಗವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಪ್ರೇರಿತ ಭಾಗವಹಿಸುವಿಕೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಕಾಂಗ್ರೆಸ್ ನೀಡಿರುವ ದೂರಿಗೆ ಬಿಜೆಪಿ ಹಾಗೂ ಸಂಘಟನೆಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಡುಪಿ ಪರ್ಯಾಯ ಮಹೋತ್ಸವದ ಧಾರ್ಮಿಕ ಸಂಪ್ರದಾಯವನ್ನು ಪ್ರಶ್ನಿಸುವುದು ತಪ್ಪು ಎಂದು ಬಿಜೆಪಿ ವಲಯಗಳು ಆರೋಪಿಸಿದ್ದು, ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುವುದು ಅನಾವಶ್ಯಕ ರಾಜಕೀಯ ಎಂದು ಕಿಡಿಕಾರಿವೆ. ಈ ಮೂಲಕ ಪರ್ಯಾಯ ಮಹೋತ್ಸವದ ಧ್ವಜ ವಿಚಾರ ಉಡುಪಿಯಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಎಸ್‌ಟಿಡಿ ಫೋನ್ ಕಾಲ್ ವಿಚಾರಕ್ಕೆ ಘರ್ಷಣೆ, ಓರ್ವ ಕೈದಿ ಗಾಯ

0

ಬೆಳಗಾವಿ: ಬೆಳಗಾವಿ ಜಿಲ್ಲೆಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಓರ್ವ ಕೈದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಜೈಲಿನೊಳಗೆ ನಡೆದ ಎಸ್‌ಟಿಡಿ ಫೋನ್ ಕಾಲ್ ವಿಚಾರವೇ ಈ ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿ ಬಂಧನದಲ್ಲಿರುವ ಮಂಗಳೂರು ಮೂಲದ ಫಯಾನ್ ಎಂಬಾತ, ಬೆಳಗಾವಿ ಮೂಲದ ಮತ್ತೊಬ್ಬ ಅತ್ಯಾಚಾರ ಆರೋಪಿ ಸುರೇಶ್ ಮೇಲೆ ಕಲ್ಲಿನಿಂದ ಜಜ್ಜಿ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಿಂದ ಸುರೇಶ್ ತೀವ್ರವಾಗಿ ಗಾಯಗೊಂಡಿದ್ದಾನೆ.

ಘಟನೆಯ ಬಳಿಕ ಜೈಲು ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗಾಯಗೊಂಡ ಸುರೇಶ್ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಜೈಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಭದ್ರತಾ ವ್ಯವಸ್ಥೆ ಇನ್ನಷ್ಟು ಬಿಗಿಗೊಳಿಸಲಾಗಿದೆ.

ಗೋಲ್ಡ್ ಖರೀದಿಸೋದು ಕಷ್ಟ; ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆ; ಆಭರಣ ಪ್ರಿಯರು ಕಂಗಾಲು

0

ಗೋಲ್ಡ್ ದರ ಕೇಳಿದ್ರೆ ಒಂದು ಕ್ಷಣ ಮೈ ಜುಮ್ ಅನಿಸುತ್ತೆ. ಅದರಂತೆ ಇಂದು ಒಂದೇ ದಿನ ಚಿನ್ನದ ಬೆಲೆ ಬರೋಬ್ಬರಿ 690 ರೂ ಹೆಚ್ಚಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 32,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 32,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 34,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 21ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,480 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,190 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,611 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,480 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,190 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ.

ಸಂತಾನಹರಣ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ಸಾವು; ವೈದ್ಯರ ಮೇಲೆ ಬೊಟ್ಟು ಮಾಡಿದ ಕುಟುಂಬಸ್ಥರು!

0

ಬೀದರ್: ಸಂತಾನಹರಣ ಶಸ್ತ್ರಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಬೀದರ್‌ನಲ್ಲಿ ಸಂಭವಿಸಿದೆ.

ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತಳ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಚಿಮಕೋಡ್ ಗ್ರಾಮದ 26 ವರ್ಷದ ಮೀನಾಕ್ಷಿ ಮೃತಪಟ್ಟ ಬಾಣಂತಿ. ಮಂಗಳವಾರ (ಜ.20) ಅವರು ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಬೀದರ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಶೌಚಾಲಯಕ್ಕೆ ತೆರಳುವ ವೇಳೆ ಮೀನಾಕ್ಷಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಆಸ್ಪತ್ರೆಯ ವೈದ್ಯರು ಇಂಜೆಕ್ಷನ್ ನೀಡಿದ್ದು, ಬಳಿಕ ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿದೆ ಎನ್ನಲಾಗಿದೆ.

ಸ್ಥಿತಿ ಗಂಭೀರವಾಗುತ್ತಿದ್ದಂತೆ ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಖಾಸಗಿ ಆಸ್ಪತ್ರೆಯವರು ಸೂಚಿಸಿದ್ದಾರೆ. ಆದರೆ ಬ್ರಿಮ್ಸ್ ಆಸ್ಪತ್ರೆಗೆ ತಲುಪಿದಾಗ ವೈದ್ಯರು ಪರಿಶೀಲನೆ ನಡೆಸಿ ಮೀನಾಕ್ಷಿ ಈಗಾಗಲೇ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಮೃತಳ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ಎದುರು ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮೀನಾಕ್ಷಿಯ ಸಾವು ಸಂಭವಿಸಿದೆ ಎಂದು ಆರೋಪಿಸಿ, ಪ್ರಕರಣಕ್ಕೆ ನ್ಯಾಯ ಒದಗಿಸಬೇಕು ಹಾಗೂ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಗಾಳಿ ಗುಣಮಟ್ಟ ಮತ್ತೆ ಕುಸಿತ; ಮಕ್ಕಳು, ಹಿರಿಯರ ಆರೋಗ್ಯದಲ್ಲಿ ಆತಂಕ!

0

ಬೆಂಗಳೂರು: ಬೆಂಗಳೂರಿನ ಗಾಳಿಯ ಗುಣಮಟ್ಟ ಇಂದು 171ಕ್ಕೆ ದಾಖಲಾಗಿದ್ದು, ಇದು ಅನಾರೋಗ್ಯಕಾರಿ ಹಂತದಲ್ಲೇ ಮುಂದುವರಿದಿದೆ.

ಕಳೆದ ಹಲವು ದಿನಗಳಿಂದ ನಗರದಲ್ಲಿ ಗಾಳಿಯ ಗುಣಮಟ್ಟದಲ್ಲಿ ನಿರಂತರ ಏರುಪೇರಾಗುತ್ತಿದ್ದು, ಕೆಲವೊಮ್ಮೆ AQI 200ರ ಗಡಿ ದಾಟುತ್ತಿರುವುದು ನಗರವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಹಾಗೂ ಉಸಿರಾಟ ಸಂಬಂಧಿ ಸಮಸ್ಯೆ ಹೊಂದಿರುವವರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84 ಆಗಿದ್ದು, PM10 109ಕ್ಕೆ ಏರಿಕೆಯಾಗಿದೆ. PM2.5 ಎನ್ನುವುದು ಮಾನವನ ಕೂದಲಿನ ದಪ್ಪದ ಕೇವಲ ಶೇ.3ರಷ್ಟು ಮಾತ್ರ ಇರುವ ಅತಿ ಸೂಕ್ಷ್ಮ ಕಣಗಳು. ಇವು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದೊಳಗೆ ಪ್ರವೇಶಿಸಿ ರಕ್ತವಾಹಿನಿಗಳವರೆಗೆ ತಲುಪುವ ಸಾಮರ್ಥ್ಯ ಹೊಂದಿವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಬೆಂಗಳೂರಿನಲ್ಲಿ ಈ ಸೂಕ್ಷ್ಮ ಕಣಗಳ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಿತಿಗಿಂತ ಸುಮಾರು ಐದು ಪಟ್ಟು ಹೆಚ್ಚಿರುವುದು ಗಂಭೀರ ಚಿಂತೆಯ ವಿಷಯವಾಗಿದೆ.

PM10 ಕಣಗಳು ಮಾನವನ ಕೂದಲಿಗಿಂತ ಸುಮಾರು ಏಳು ಪಟ್ಟು ತೆಳುವಾದ ಧೂಳಿನ ಕಣಗಳಾಗಿದ್ದು, ಇವು ಸಹ ಉಸಿರಾಟ ವ್ಯವಸ್ಥೆಗೆ ತೀವ್ರ ಹಾನಿ ಉಂಟುಮಾಡುತ್ತವೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕಿಗಳಲ್ಲಿ ಸಣ್ಣ ಏರುಪೇರು ಕಂಡುಬಂದರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ. ಆರೋಗ್ಯ ತಜ್ಞರು ಮಕ್ಕಳು, ವೃದ್ಧರು ಹಾಗೂ ಶ್ವಾಸಕೋಶ ಸಮಸ್ಯೆ ಇರುವವರು ಹೊರಗೆ ತೆರಳುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ. ಅಗತ್ಯವಿದ್ದರೆ ಮಾಸ್ಕ್ ಬಳಕೆ, ಅನಗತ್ಯ ವಾಹನ ಸಂಚಾರವನ್ನು ಕಡಿಮೆ ಮಾಡುವುದು ಹಾಗೂ ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ಈಗ ನಗರಕ್ಕೆ ಅತ್ಯಾವಶ್ಯಕ ಕ್ರಮಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಇತರ ನಗರಗಳ ಇಂದಿನ ಗಾಳಿಯ ಗುಣಮಟ್ಟ (AQI):
ಬೆಂಗಳೂರು – 171
ಮಂಗಳೂರು – 167
ಮೈಸೂರು – 102
ಬೆಳಗಾವಿ – 104
ಕಲಬುರ್ಗಿ – 69
ಶಿವಮೊಗ್ಗ – 167
ಬಳ್ಳಾರಿ – 170
ಹುಬ್ಬಳ್ಳಿ – 72
ಉಡುಪಿ – 144
ವಿಜಯಪುರ – 62

error: Content is protected !!