Home Blog Page 38

ಪ್ರತಿಯೊಬ್ಬರಲ್ಲೂ ಗಾಂಧೀಜಿ ಇದ್ದಾರೆ: ಡಾ. ಬಸವರಾಜ ಬಳ್ಳಾರಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸತ್ಯ, ಅಹಿಂಸೆ, ತ್ಯಾಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಜಗತ್ತಿಗೆ ಮಾದರಿಯಾದ, ಜೀವನದ ಮೌಲ್ಯಗಳನ್ನು ತಮ್ಮ ಬದುಕಿನ ಮೂಲಕ ತೋರಿದ ಮಹಾತ್ಮ ಗಾಂಧೀಜಿಯವರು ಪ್ರತಿಯೊಬ್ಬರಲ್ಲೂ ಇದ್ದಾರೆ. ಅವರು ಬಿತ್ತಿದ ದೇಶಾಭಿಮಾನ, ದೇಶಭಕ್ತಿ ಇಂದಿಗೂ ನಮ್ಮಲ್ಲಿ ಜಾಗೃತವಾಗಿದ್ದು, ರಾಷ್ಟ್ರದ ಪ್ರಗತಿಗೆ ಕಾರಣವಾಗಿದೆ ಎಂದು ಗದಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ. ಬಸವರಾಜ ಬಳ್ಳಾರಿ ಅಭಿಪ್ರಾಯಪಟ್ಟರು.

ಅವರು ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ, ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರಯೋಗ ಉದ್ಘಾಟಿಸಿ ಮಾತನಾಡಿದರು.

ಜೀವಂತ ಅಭಿವ್ಯಕ್ತಿ ಕಲೆಯಾದ ರಂಗ ಕಲೆಗೆ ಗದಗ ಜಿಲ್ಲೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಶಿವಮೊಗ್ಗದ ರಂಗಾಯಣ ಪ್ರಸ್ತುತಪಡಿಸುವ `ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನ ಇಲ್ಲಿನ ಪ್ರೇಕ್ಷಕರಿಗೆ ಒಂದು ಉತ್ತಮ ಅವಕಾಶ ಎಂದರು.

ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗದಗ-ಬೆಟಗೇರಿ ನಗರಸಭೆಯ ಸದಸ್ಯರಾದ ಮೆಹಬೂಬಸಾಬ ಡಿ.ನದಾಫ್, ಜಿಲ್ಲೆಯ ಹಿರಿಯ ಸಾಂಸ್ಕೃತಿಕ ಚಿಂತಕರಾದ ಡಾ. ಜಿ.ಬಿ. ಪಾಟೀಲ, ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವಿ ಎಲ್. ಗುಂಜೀಕರ್, ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಮೌನೇಶ ಸಿ.ಬಡಿಗೇರ(ನರೇಗಲ್ಲ) ಮತ್ತು ಶಿವಮೊಗ್ಗ ರಂಗಾಯಣ ತಂಡದ ಶಂಕರ್ ಉಪಸ್ಥಿತರಿದ್ದರು.

ಮೌನೇಶ ಸಿ. ಬಡಿಗೇರ(ನರೇಗಲ್ಲ) ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ವಿಶ್ವನಾಥ ಯ.ಕಮ್ಮಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಅನಂತ ಶಿವಪೂರ, ಡಾ. ವಾಣಿ ಶಿವಪೂರ, ಪ್ರೊ. ಸಿದ್ದು ಯಾಪಲಪರವಿ, ಅಂದಾನೆಪ್ಪ ವಿಭೂತಿ, ರುದ್ರಣ್ಣ ಗುಳಗುಳಿ, ಡಾ. ದತ್ತಪ್ರಸನ್ನ ಲ.ಪಾಟೀಲ, ಸಿ.ವಿ. ಬಡಿಗೇರ, ವಿಶ್ವನಾಥ ಬೇಂದ್ರೆ, ಶ್ರೀನಿವಾಸ ಗುಂಜಾಳ, ಕೃಷ್ಣ ಕಡ್ಲಿಕೊಪ್ಪ, ಬಸವರಾಜ ಬಡಿಗೇರ, ಶ್ರೀಧರ ಕೊಣ್ಣೂರ, ಮಧುಸೂದನ ವಿಶ್ವಕರ್ಮ ಮುಂತಾದವರಿದ್ದರು.

ಹಿರಿಯ ರಂಗಕರ್ಮಿ ಶಶೀಲೇಂದ್ರ ಜೋಶಿ ಮಾತನಾಡಿ, ಕನ್ನಡ ರಂಗಭೂಮಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಸಕ್ಕರಿ ಬಾಳಾಚಾರ್ಯರು, ಶಿರಹಟ್ಟಿಯ ವೆಂಕೊಬರಾಯರು, ಸದಾಶಿವರಾಯ ಗರುಡರು, ಜಯತೀರ್ಥ ಜೋಶಿ ಅವರ ರಂಗ ಸೇವೆ ಸದಾ ಸ್ಮರಣೀಯ ಎಂದರು.

ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಸರ್ಕಾರದ ಬೆಂಬಲ: ಜಮೀರ ಅಹ್ಮದ್ ಖಾನ್

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 4,500 ಕೋಟಿ ರೂ. ಬಜೆಟ್ ಒದಗಿಸಲಾಗಿದೆ. ಈ ಅನುದಾನದ ಪ್ರಮುಖ ಭಾಗವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಲಾಗುತ್ತಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರಾದ ಬಿ.ಝಡ್. ಜಮೀರ ಅಹ್ಮದ್ ಖಾನ್ ಹೇಳಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಕರ್ನಾಟಕ ಮೌಲಾನಾ ಅಜಾದ ಪಬ್ಲಿಕ್ ಶಾಲೆ (ಆಂಗ್ಲ ಮಾಧ್ಯಮ)ಯ ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ಹೆಚ್ಚುವರಿ ತರಗತಿಗಳ ಕಟ್ಟಡ ಶಂಕುಸ್ಥಾಪನೆ ಸಮಾರಂಭವನ್ನು ನಗರದ ಗಂಗಿಮಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 2.38 ಲಕ್ಷಕ್ಕೂ ಅಧಿಕ ಮಕ್ಕಳು ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅನೇಕ ವಸತಿ ಶಾಲೆಗಳು ಆರಂಭವಾಗಿದ್ದು, ಇದೀಗ 100 ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. 100 ಮದರಸಾಗಳಲ್ಲಿ 9–10ನೇ ತರಗತಿ ಓದುತ್ತಿರುವ ಸುಮಾರು 5 ಸಾವಿರ ಮಕ್ಕಳು ಉತ್ತೀರ್ಣರಾಗುತ್ತಿದ್ದಾರೆ. ಮದರಸಾಗಳಲ್ಲಿಯೂ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕು ಎಂಬ ಕಳಕಳಿಯಿಂದ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಕಡಿಮೆ ಅನುದಾನದಲ್ಲೇ ಗುಣಮಟ್ಟದ ಹಾಗೂ ವಿಶಾಲ ಕಟ್ಟಡ ನಿರ್ಮಾಣವಾಗಿರುವುದು ಸಂತೋಷದ ವಿಷಯ. ಈ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ವಿಶೇಷವಾಗಿ ಸಚಿವ ಡಾ. ಎಚ್.ಕೆ. ಪಾಟೀಲ ಅವರ ಸಹಕಾರಕ್ಕೆ ಸಚಿವ ಜಮೀರ ಅಹ್ಮದ್ ಖಾನ್ ಧನ್ಯವಾದ ತಿಳಿಸಿದರು.

ವೇದಿಕೆಯಲ್ಲಿ ಗದಗ–ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಪಾಟೀಲ, ಫಾರುಕ್ ಹುಬ್ಬಳ್ಳಿ, ಎ.ಎಂ. ಹಿಂಡಸಗೇರಿ, ಬಸವರಾಜ್, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಕೆ.ಆರ್.ಐ.ಡಿ.ಎಲ್ ಕಾರ್ಯನಿರ್ವಾಹಕ ಅಭಿಯಂತರ ಅನಿಲ ಪಾಟೀಲ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಮಿತ್ ಬಿದರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ, ಶಾಲಾ ನೂತನ ಕಟ್ಟಡ ನಿರ್ಮಾಣಕ್ಕೆ 235 ಲಕ್ಷ ರೂ. ಹಾಗೂ ಹೆಚ್ಚುವರಿ ತರಗತಿಗಳ ಕಟ್ಟಡ ನಿರ್ಮಾಣಕ್ಕೆ 143 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಈ ಕಟ್ಟಡದಲ್ಲಿ ಅಭ್ಯಾಸ ಮಾಡುವ ಎಲ್ಲ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಶುಭ ಕೋರಿದರು.

ಸಾರ್ವಜನಿಕರಿಗೆ ಕಾರ್ಟೂನ್ ಚಿತ್ರಗಳ ಮೂಲಕ ಜಾಗೃತಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚಿನ ದಿನಗಳಲ್ಲಿ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಕರ್ತವ್ಯದ ಒತ್ತಡಗಳ ಮಧ್ಯೆಯೂ ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ಒತ್ತಡಗಳ ನಡುವೆಯೇ ತಮ್ಮ ಕರ್ತವ್ಯದ ಜೊತೆಗೆ ಕಾರ್ಟೂನ್‌ಗಳನ್ನು ಬಿಡಿಸಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಶಿರಹಟ್ಟಿ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ.

ತಮ್ಮ ಕರ್ತವ್ಯದ ಬಿಡುವಿನ ವೇಳೆ ನಂದಾ ಹಣಬರಟ್ಟಿ ಮತದಾನದ ಪ್ರಮಾಣವನ್ನು ಹೆಚ್ಚಳ ಮಾಡುವುದಕ್ಕೆ ವಿಶೇಷ ಕಾರ್ಟೂನ್‌ಗಳನ್ನು ರಚಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ, ಅಧಿಕಾರಿಗಳ ಗ್ರೂಪ್‌ಗಳ ಮೂಲಕ, ಹೊಸದಾಗಿ ಸೇರ್ಪಡೆಗೊಳ್ಳುವ ಮತದಾರರಲ್ಲಿ, ವಿಶೇಷವಾಗಿ ಎಸ್‌ಸಿ/ಎಸ್‌ಟಿ ಕಾಲೋನಿಗಳಿಗೆ ತೆರಳಿ ಮತದಾರರ ಮತ್ತು ಮತದಾನದ ಕುರಿತು ವಿಶೇಷ ಜಾಗೃತಿಯನ್ನು ಮೂಡಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.

ಚಿತ್ರಕಲೆಯು ಅವರ ಹವ್ಯಾಸವಾಗಿದ್ದರಿಂದ ಹಾಗೂ ಮತದಾರರ ನೋಂದಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವದರಿಂದ ಮತದಾನದ ಪ್ರಮಾಣ ಕಡಿಮೆ ಇರುವಂತಹ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಸಾರ್ವಜನಿಕರೊಂದಿಗೆ ತಾವೇ ಪರಿಶೀಲನೆ ನಡೆಸಿ ಅವರಲ್ಲಿ ಜಾಗೃತಿಯನ್ನು ಮೂಡಿಸುವುದಕ್ಕೆ ತಾವೇ ಚಿತ್ರಿಸಿದ ಕಾರ್ಟೂನ್‌ಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಿದ್ದು, ಇನ್ನೂ ಹೆಚ್ಚೆಚ್ಚು ಚಿತ್ರ ಬಿಡಿಸಿ ಅವುಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸುವಂತೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಹಾಗೂ ಶಿರಹಟ್ಟಿ ಮತಕ್ಷೇತ್ರ ಮತದಾರರ ನೋಂದಣಾಧಿಕಾರಿ ನಂದಾ ಹಣಬರಟ್ಟಿ, ಚಿತ್ರಕಲೆ ನನ್ನ ಹವ್ಯಾಸವಾಗಿದ್ದು, ಮತದಾನದ ಮತ್ತು ಮತದಾರರ ಮಹತ್ವ ಕುರಿತು ವಿಶೇಷ ಕಾರ್ಟೂನ್‌ಗಳನ್ನು ರಚಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕಡಿಮೆ ಮತದಾನ ಪ್ರಮಾಣ ಇರುವ ಸ್ಥಳಗಳಲ್ಲಿ, ಹೊಸದಾಗಿ ಸೇರ್ಪಡೆಯಾಗುವ ಮತದಾರರಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದ್ದು, ಮತದಾನದ ಪ್ರಮಾಣ ಹೆಚ್ಚಳ ಮಾಡುವುದು ಇದರ ಉದ್ದೇಶವಾಗಿದೆ ಎಂದರು.

ಮತದಾರರ ಮ್ಯಾಪಿಂಗ್ ಕಾರ್ಯದಲ್ಲಿ ಪ್ರಗತಿ ಸಾಧಿಸಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಚುನಾವಣಾ ಆಯೋಗದ ನಿರ್ದೇಶನದಂತೆ 2002ರ ಮತದಾರರ ಯಾದಿಗೆ 2025ರ ಮತದಾರರ ಯಾದಿಗಳ ಮ್ಯಾಪಿಂಗ್ ಕಾರ್ಯದಲ್ಲಿ ಶಿರಹಟ್ಟಿ ಮತಕ್ಷೇತ್ರದಲ್ಲಿ 23 ಮತಗಟ್ಟೆ ಕೇಂದ್ರಗಳು ಶೇ.50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ್ದು, ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಮತದಾರರ ಮ್ಯಾಪಿಂಗ್ ಕಾರ್ಯದಲ್ಲಿ ಪ್ರಗತಿ ಸಾಧಿಸಬೇಕೆಂದು ಶಿರಹಟ್ಟಿ-65 ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ಹೇಳಿದರು.

ಅವರು ಮಂಗಳವಾರ ಶಿರಹಟ್ಟಿಯ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿ ಚುನಾವಣಾ ಸಿಬ್ಬಂದಿಗಳೊಂದಿಗೆ ಶಿರಹಟ್ಟಿಯಲ್ಲಿ ಮತದಾರರ ಮ್ಯಾಪಿಂಗ್ ಪ್ರಗತಿಯಲ್ಲಿ ಕಡಿಮೆ ಪ್ರಗತಿ ಸಾಧಿಸಿದ ಮತಗಟ್ಟೆ ಸಂಖ್ಯೆ-14 ಹಾಗೂ 22ರಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿರಹಟ್ಟಿ ಮತಕ್ಷೇತ್ರದಲ್ಲಿ ಒಟ್ಟು 233309 ಮತದಾರರಿದ್ದು, ಇದರಲ್ಲಿ ಈಗಾಗಲೇ 90583 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ. 153173 ಮತದಾರರ ಮ್ಯಾಪಿಂಗ್ ಕಾರ್ಯ ಮತ್ತು ಪ್ರೋಜೆನಿ ಕಾರ್ಯ ಆಗಿದೆ. ಒಟ್ಟಾರೆ ಕ್ಷೇತ್ರದ ಮ್ಯಾಪಿಂಗ್ ಪ್ರಗತಿ 73.69, ಪ್ರೋಜೆನಿ ಪ್ರಗತಿ 65.65 ಆಗಿದೆ. ಬಾಕಿ ಉಳಿದ, ಶೇ.50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ ಮತಗಟ್ಟೆ ಸಿಬ್ಬಂದಿಗಳು 4 ದಿನಗಳ ಒಳಗಾಗಿ ಪ್ರಗತಿಯನ್ನು ಸಾಧಿಸಬೇಕು.

ಜ.25ರಂದು ಜರುಗಲಿರುವ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶಿರಹಟ್ಟಿಯ ಡಿ.ದೇವರಾಜ ಅರಸು ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೂ ಮೊದಲು ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಾನೇ ಬಿಡಿಸಿರುವ ವಿಶೇಷ ಕಾರ್ಟೂನ್ ಪ್ರದರ್ಶನದೊಂದಿಗೆ ಜಾಥಾ ಮೆರವಣಿಗೆ ನಡೆಯಲಿದ್ದು, ಎಲ್ಲ ಅಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ರಾಘವೇಂದ್ರ ರಾವ್, ಶಿರಸ್ತೇದಾರ ಸಂತೋಷ ಅಸ್ಕಿ, ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಅಧ್ಯಾಪಕರು ಓದುವ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳಿ: ವಿ.ವಿ. ನಡುವಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಅನುಭವಗಳಿಗೆ ಅಕ್ಷರ ತೊಡಿಸಿ ಕಾವ್ಯವಾಗಿಸುವ ಮೂಲಕ ಸಹೃದಯರಲ್ಲಿ ವಿಶಿಷ್ಠ ಅನುಭೂತಿಯನ್ನು ಉಂಟು ಮಾಡುವ ಕವಿ ಸದಾಕಾಲ ಸ್ಮರಣೆಯಲ್ಲಿ ಉಳಿಯುತ್ತಾರೆ. ಪ್ರಚಲಿತ ಸಂಕಟಗಳನ್ನು ಕಾವ್ಯ ಒಳಗೊಂಡು ಒಳ ಮತ್ತು ಹೊರ ಬದಲಾವಣೆ ಕಾರಣವಾಗಬೇಕು. ಪ್ರವೃತ್ತಿಗಳು ಉತ್ತಮವಾಗಿದ್ದರೂ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಅಧ್ಯಾಪಕರು ಓದುವ ಪ್ರವೃತ್ತಿಯನ್ನು ಅಧಿಕಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಮನಿ ಅಭಿಪ್ರಾಯಪಟ್ಟರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಕಸಾಪ ಕಾರ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಮಮತಾ ಚ.ದೊಡ್ಡಮನಿ ಅವರ ‘ಮಾತಿಗಿಳಿದ ಹಣತೆ’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಪುಸ್ತಕ ಪರಿಚಯವನ್ನು ಮಾಡಿದ ಸಾಹಿತಿ ಶಿಲ್ಪಾ ಮ್ಯಾಗೇರಿ, ಹಣತೆ ಹೆಣ್ಣಿನ ಪ್ರತೀಕವಾಗಿ ಈ ಸಂಕಲನದಲ್ಲಿ ಮೂಡಿಬಂದಿದೆ. ನಿತ್ಯ ಜೀವನದ ಅನೇಕ ಸಂಗತಿಗಳು ಇಲ್ಲಿ ಅಕ್ಷರ ತೋರಣ ಕಟ್ಟಿವೆ. ಜೀವಪರ ವಿಚಾರಗಳನ್ನು ಕವಿತೆಗಳ ಮೂಲಕ ಹಂಚುವ ಕಾರ್ಯವನ್ನು ಕವಿ ಇಲ್ಲಿ ಮಾಡಿದ್ದಾರೆ. ಪುರುಷರಿಗಿಂತ ಮಹಿಳೆಯರ ವಿಚಾರಗಳು, ತಲ್ಲಣಗಳು ಬೇರೆಯಾಗಿರುವದರಿಂದ ಅವುಗಳನ್ನು ದಾಖಲಿಸುವ ಪ್ರಯತ್ನವನ್ನು ಈ ಸಂಕಲನದಲ್ಲಿ ಮಾಡಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹೂಗಾರ ಮಾತನಾಡಿ, ಶಿಕ್ಷಕರು ಸಾಹಿತ್ಯ, ಸಂಸ್ಕೃತಿಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಲ್ಲೂ ಆಸಕ್ತಿ ಮೂಡಿಸಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ಮಾಡಬೇಕೆಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಡಿ.ಎಸ್. ತಳವಾರ ಮಾತನಾಡಿ, ಸಾಹಿತ್ಯ, ಸಂಸ್ಕೃತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಶಿಕ್ಷಕರನ್ನು ಇಲಾಖೆ ಗುರುತಿಸಿ ಗೌರವಿಸಬೇಕು. ಮಮತಾ ದೊಡ್ಡಮನಿ ಅವರು ವೃತ್ತಿ ದೈಹಿಕ ಶಿಕ್ಷಣ ಶಿಕ್ಷಕಿಯರಾಗಿದ್ದರೂ ಅವರ ಸಾಹಿತ್ಯ ಪ್ರೀತಿ ಮಾದರಿಯಾದುದು ಎಂದು ತಿಳಿಸಿದರು.

ಕವಯಿತ್ರಿ ಮಮತಾ ದೊಡ್ಡಮನಿ ತಮ್ಮ ಸಾಹಿತ್ಯ ಪಯಣವನ್ನು ವಿವರಿಸಿ, ಸಹಾಯ ಸಹಕಾರ ನೀಡಿದ ಸರ್ವರನ್ನು ಸ್ಮರಿಸಿದರು. ಡಿ.ಕೆ. ಕಲ್ಲೊಳ್ಳಿ, ಎಂ.ಐ. ಮುಗಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕವಿ ಎ.ಎಸ್. ಮಕಾನದಾರ ಅವರ ದರ್ವೇಶಿ ಪದ್ಯಗಳು ಕೃತಿಯ ಮುಖಪುಟ ಅನಾವರಣಗೊಳಿಸಲಾಯಿತು.

ಭಾಗ್ಯಶ್ರೀ ಹುರಕಡ್ಡಿ, ಕೊಟ್ರೇಶ ಜವಳಿ, ರಮಾ ಚಿಗಟೇರಿ, ಆನಂದ ಹಕ್ಕೆನ್ನವರ, ಸುಷ್ಮಾ ಹುಚ್ಚಣ್ಣವರ, ಕವನ ವಾಚಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ನೀಲಮ್ಮ ಅಂಗಡಿ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಕೆ.ಎಚ್. ಬೇಲೂರ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ವಿ.ಕೆ. ಗುರುಮಠ, ವಿ.ಎಸ್. ದಲಾಲಿ, ವಿದ್ಯಾಧರ ದೊಡ್ಡಮನಿ, ಎಸ್.ಎಂ. ಕಾತರಕಿ, ರತ್ನಕ್ಕ ಪಾಟೀಲ, ಪುಟ್ಟರಾಜ ಬೂದನೂರ, ರಾಜಶೇಖರ ಕರಡಿ, ಎಚ್.ಡಿ. ಕುರಿ, ಎಂ.ಎ. ಭೋಜೆದಾರ, ವಾಯ್.ಯು. ಅಣ್ಣಿಗೇರಿ, ಎಸ್.ಆರ್. ಮಟ್ಟಿ, ಎಲ್.ಎಲ್. ಚವ್ಹಾಣ, ಎಸ್.ಎಸ್. ಗಾಣಿಗೇರ, ಬಿ.ಎಸ್. ಚವಡಿ, ಎನ್.ಆರ್. ಹೂಗಾರ, ವಾಯ್.ಎಫ್. ನಾಯ್ಕರ, ಯು.ಎಸ್. ಕಣವಿ, ಶೈಲಶ್ರೀ ಕಪ್ಪರದ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಶ್ಮಿ ಅಂಗಡಿ, ರಾಜೇಶ್ವರ ಬಡ್ನಿ, ಅನಸೂಯಾ ಮಿಟ್ಟಿ, ಮಂಜುಳಾ ವೆಂಕಟೇಶಯ್ಯ, ಕಿಶೋರಬಾಬು ನಾಗರಕಟ್ಟಿ, ದತ್ತಪ್ರಸನ್ನ ಪಾಟೀಲ, ಶಶಿಕಾಂತ ಕೊರ್ಲಹಳ್ಳಿ, ಅಂದಾನೆಪ್ಪ ವಿಭೂತಿ, ಕೊಟ್ರೇಶ ಉಪ್ಪಿನ, ಎಂ.ಎಚ್. ದೊಡ್ಡಮನಿ, ಸುಮಾ ಹುಚ್ಚಮ್ಮವರ, ಮಂಜುನಾಥ ಹುಚ್ಚಮ್ಮನವರ, ಮಹಾಂತೇಶ ಹುಚ್ಚಮ್ಮನವರ, ಪುಟ್ಟಪ್ಪ ಹುಚ್ಚಮ್ಮನವರ, ಶಂಕರಮ್ಮ ಹುಚ್ಚಮ್ಮನವರ, ರಾಜಾಭಕ್ಷಿ ನದಾಫ್, ಕೋಟೆಪ್ಪ ಕೂರಗುಂದ, ಸೋಮಶೇಖರ ಕೆಂಗುಡಪ್ಪನವರ, ರಂಗಪ್ಪ ಬೂದನೂರ, ವಿನಾಯಕ ಉಪ್ಪಿನ, ಕಾರ್ತಿಕ ಉಪ್ಪಿನ, ಶಿವಕುಮಾರ ವಾಲಿ, ಅಮರೇಶ ರಾಂಪೂರ, ರಾಹುಲ ಗಿಡ್ನಂದಿ, ಸತೀಶ ಚನ್ನಪ್ಪಗೌಡ್ರ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಇಲ್ಲಿಯ ಕವಿತೆಗಳು ನೆಲಮೂಲ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ನಮ್ಮ ಬೆಳವಣಿಗೆಗೆ ಕಾರಣವಾಗಿರುವ ವ್ಯಕ್ತಿ ಮತ್ತು ವಸ್ತುಗಳ ಕುರಿತು ಕಾವ್ಯ ರಚಿಸಿದ್ದಾರೆ. ಇನ್ನಷ್ಟು ಆಳವಾದ ಅಧ್ಯಯನದ ಮೂಲಕ ಉತ್ತಮ ಕೃತಿಗಳು ರಚನೆಯಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಧರ್ಮಸ್ಥಳ ಬುರುಡೆ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರಗಳು FSLಗೆ ರವಾನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಎಸ್ಐಟಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಸೆಪ್ಟೆಂಬರ್ 17ರಂದು ಐದು, 18ರಂದು ಎರಡು — ಒಟ್ಟು ಏಳು ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವಶೇಷಗಳು ಪತ್ತೆಯಾಗಿದ್ದವು ಎನ್ನಲಾಗಿದೆ.

ಈ ಪ್ರಕರಣದಲ್ಲಿ ಅತ್ಯಂತ ಮಹತ್ವದ ಸುಳಿವು ಹೊರಬಿದ್ದಿದೆ. ಪತ್ತೆಯಾದ ಏಳು ಬುರುಡೆಗಳಲ್ಲಿ ಒಂದನ್ನು ಕೊಡಗು ಮೂಲದ ಯು.ಬಿ. ಅಯ್ಯಪ್ಪ ಅವರಿಗೆ ಸೇರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಅಸ್ಥಿಪಂಜರ ಪತ್ತೆಯಾದ ಸ್ಥಳದಲ್ಲೇ ಹಿರಿಯ ನಾಗರಿಕರ ಗುರುತಿನ ಚೀಟಿ, ತ್ರಿ ಲೆಗ್ ಬ್ಯಾಲೆನ್ಸ್ ವಾಕಿಂಗ್ ಸ್ಟಿಕ್ ಸಿಕ್ಕಿವೆ. ಈ ಗುರುತಿನ ಚೀಟಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ ಅವರದ್ದಾಗಿತ್ತು.

ಯು.ಬಿ. ಅಯ್ಯಪ್ಪ ಅವರು ಸುಮಾರು ಏಳು ವರ್ಷಗಳ ಹಿಂದೆ ಮೈಸೂರಿಗೆ ಚಿಕಿತ್ಸೆಗೆ ತೆರಳಿದ ನಂತರ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರುದಲ್ಲಿ ಅವರು ವಾಕಿಂಗ್ ಸ್ಟಿಕ್ ಬಳಸುತ್ತಿದ್ದರು ಎಂಬುದೂ ದಾಖಲಾಗಿದೆ.

ಇದೇ ಕಾರಣಕ್ಕೆ ಈ ಅಸ್ಥಿಪಂಜರ ಅಯ್ಯಪ್ಪ ಅವರದ್ದೇ ಇರಬಹುದು ಎಂಬ ಶಂಕೆ ಮತ್ತಷ್ಟು ಬಲವಾಗಿದೆ.  ಇದೀಗ ಎಲ್ಲರ ಕಣ್ಣುಗಳು ಎಫ್ಎಸ್ಎಲ್ ವರದಿಯತ್ತ… ಈ ಪ್ರಕರಣ ಯಾವ ದಿಕ್ಕು ತಾಳುತ್ತದೆ ಎಂಬುದು ಈಗ ರಾಜ್ಯದಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.

ಗದಗದಲ್ಲಿ ಜಮೀರ್ ಅಹ್ಮದ್ ಖಾನ್‌ಗೆ ಭರ್ಜರಿ ಸ್ವಾಗತ: ‘ಹಣೆಬರಹದಲ್ಲಿ ಇದ್ದಂತೆ ಆಗುತ್ತದೆ’ ಎಂದ ಸಚಿವ

0

ಗದಗ: ನಗರಕ್ಕೆ ಆಗಮಿಸಿದ ವಸತಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ನಗರದಲ್ಲಿ ಭರ್ಜರಿ ಸ್ವಾಗತ ದೊರೆಯಿತು. ನಗರದ ಕೋರ್ಟ್ ಸರ್ಕಲ್ ಬಳಿ ನೂರಾರು ಅಭಿಮಾನಿಗಳು ಜಮಾಯಿಸಿ, ಹೂಮಳೆ ಸುರಿಸಿ, ‘ಶೇರ್ ಆಯಾ ಶೇರ್ ಆಯಾ’ ಎಂಬ ಘೋಷಣೆಗಳನ್ನು ಕೂಗಿದರು.

ಇತ್ತೀಚೆಗೆ ಸಂಸದ ಡಿ.ಕೆ. ಸುರೇಶ್ ನೀಡಿದ್ದ “ನಮ್ಮ ಅಣ್ಣನ ಹಣೆಬರಹದಲ್ಲಿ ಮುಖ್ಯಮಂತ್ರಿ ಆಗಬೇಕೆಂದಿದ್ದರೆ ಆಗ್ತಾರೆ” ಎಂಬ ಹೇಳಿಕೆ ಕುರಿತು ಗದಗನಲ್ಲಿ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, “ತಪ್ಪೇನಿದೆ? ನಾನು ಕೂಡ ಹಣೆಬರಹವನ್ನು ನಂಬುತ್ತೇನೆ” ಎಂದು ಸ್ಪಷ್ಟಪಡಿಸಿದರು.

ಮುಂದುವರೆದು ಮಾತನಾಡಿದ ಅವರು, “ಹಣೆಬರಹದಲ್ಲಿ ಇದ್ದಂಗೆ ಆಗೋದು. ನಾನು MLA ಆಗ್ತೀನಿ, ಮಂತ್ರಿ ಆಗ್ತೀನಿ ಅಂತಾ ಕನಸಲ್ಲೂ ಯೋಚನೆ ಮಾಡಿರಲಿಲ್ಲ. ಆದ್ರೆ ಇಂದು ನಾನು ಐದು ಬಾರಿ MLA ಆಗಿದ್ದೇನೆ, ಮೂರು ಬಾರಿ ಸಚಿವನಾಗಿದ್ದೇನೆ. ಇದು ಎಲ್ಲವೂ ನನ್ನ ಹಣೆಬರಹದಲ್ಲಿ ಬರೆಯಲ್ಪಟ್ಟಿದ್ದುದರಿಂದಲೇ ನಡೆದಿದೆ” ಎಂದು ಹೇಳಿದರು.
ಡಿ.ಕೆ. ಸುರೇಶ್ ಅವರ ಮಾತಿನಲ್ಲಿ ತಪ್ಪಿಲ್ಲ ಎಂದ ಜಮೀರ್, “ಹಣೆಬರಹದಲ್ಲಿ ಬರದಿದ್ದರೆ ಅವರೂ ಮುಖ್ಯಮಂತ್ರಿ ಆಗಬಹುದು. ಕೊನೆಗೂ ಆಗೋದು ಹಣೆಬರಹದಲ್ಲಿ ಇದ್ದಂತೆಯೇ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಲಕ್ಕುಂಡಿಯಲ್ಲಿ ಭೂಮಿ ಅಗೆದಂತೆಲ್ಲಾ ಇತಿಹಾಸ ಹೊರಬರುತ್ತಿದೆ! ದೇವಸ್ಥಾನದಲ್ಲೇ ಬದುಕಿದ ಕುಟುಂಬಕ್ಕೀಗ ಭಯ

0

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ 5ನೇ ದಿನವೂ ಉತ್ಖನನ ಕಾರ್ಯ ತೀವ್ರಗೊಂಡಿದ್ದು, ಇದೀಗ ಒಡೆದ ಪುರಾತನ ಮಡಿಕೆ ಅವಶೇಷ ಪತ್ತೆಯಾಗಿದೆ. ಈ ಮಡಿಕೆ ಹಳೆಯ ಕಾಲದ್ದು ಎನ್ನಲಾಗಿದ್ದು, ಕಾರ್ಮಿಕರು ಅದನ್ನು ಅತ್ಯಂತ ಜಾಗ್ರತೆಯಿಂದ ಸ್ವಚ್ಛಗೊಳಿಸಿ ಹೊರತೆಗೆದಿದ್ದಾರೆ.

ಈ ಮಡಿಕೆ ಧಾನ್ಯ ಸಂಗ್ರಹಕ್ಕೆ ಬಳಸಿದ ಪಾತ್ರೆಯೇ? ಅಥವಾ ಚಿನ್ನ-ಆಭರಣ ಇರಿಸುವುದಕ್ಕೆ ಉಪಯೋಗವಾಗಿತ್ತೇ? ಎಂಬ ಪ್ರಶ್ನೆಗಳು ಇದೀಗ ಕುತೂಹಲ ಹುಟ್ಟುಹಾಕಿವೆ. ಮಡಿಕೆಯ ಒಳಭಾಗದ ಮಣ್ಣಿನ ಪರಿಶೀಲನೆಯೂ ನಡೆಯುತ್ತಿದೆ.

ಇನ್ನೊಂದು ಕಡೆ, ಲಕ್ಕುಂಡಿಯಲ್ಲಿ ಹೊರಗೆ ಮನೆ, ಒಳಗೆ ದೇವಸ್ಥಾನ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಚಾಲುಕ್ಯರ ಕಾಲದ ಪುರಾತನ ಈಶ್ವರ ದೇವಸ್ಥಾನವೊಂದರಲ್ಲಿ ನಾಲ್ಕೈದು ತಲೆಮಾರುಗಳಿಂದ ಐದು ಕುಟುಂಬಗಳು ವಾಸಿಸುತ್ತಿವೆ.

ಸರ್ಕಾರ ದೇವಸ್ಥಾನವನ್ನು ವಶಕ್ಕೆ ಪಡೆದು ಜೀರ್ಣೋದ್ಧಾರ ಮಾಡಲು ಮುಂದಾಗಿದೆ ಎನ್ನಲಾಗಿದ್ದು, ಇದರಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. “ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಬಿಟ್ಟು ಹೋಗಲು ಸಿದ್ಧ” ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

ಉತ್ಖನನದ ಎರಡನೇ ದಿನವೇ ಗೋಜರವಾಗಿದ್ದ ಶಿವಲಿಂಗದ ಪಾನಿಪೀಠ ಇದೀಗ ಸಂಪೂರ್ಣವಾಗಿ ಹೊರಗೆತ್ತಲಾಗಿದೆ. ಪುರಾತತ್ವ ಇಲಾಖೆಯ ಸಿಬ್ಬಂದಿಗಳು ಪಾನಿಪೀಠವನ್ನು ಬಹಳ ನಾಜೂಕಿನಿಂದ ಎರಡು ಭಾಗಗಳಲ್ಲಿ ಹೊರತೆಗೆದು ದಾಖಲಾತಿ ಕಾರ್ಯ ನಡೆಸಿದ್ದಾರೆ.

ಪತ್ತೆಯಾದ ಪಾನಿಪೀಠವು ಪುರಾತನ ಕಾಲದದ್ದು ಎಂದು ಅಂದಾಜಿಸಲಾಗಿದ್ದು, ಅದರ ಮೇಲ್ಭಾಗದಲ್ಲಿ ಶಿವಲಿಂಗ ಇದ್ದಿರಬಹುದಾದ ಲಕ್ಷಣಗಳು ಕಂಡುಬಂದಿವೆ. ಇದು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ದೃಢಪಡಿಸಿದೆ.

ಇನ್ನೂ ಮುಂಜಾನೆ ವೇಳೆ ಪುರಾತನ ಮಡಿಕೆ ಹಾಗೂ ಕವಡೆಗಳು ಪತ್ತೆಯಾಗಿದ್ದರೆ, ಸಂಜೆ ವೇಳೆಗೆ ಎರಡು ಭಾಗಗಳಲ್ಲಿ ಪಾನಿಪೀಠ ಪತ್ತೆಯಾಗಿದೆ. ಪ್ರತಿಯೊಂದು ಅವಶೇಷವನ್ನು ಪುರಾತತ್ವ ಇಲಾಖೆಯ ಸಿಬ್ಬಂದಿಗಳು ಫೋಟೋಗ್ರಫಿ ಮೂಲಕ ದಾಖಲಿಸಿ, ಪಿನ್-ಟು-ಪಿನ್ ದಾಖಲೆ ಸಂಗ್ರಹಿಸುತ್ತಿದ್ದಾರೆ.

ವೇತನವೇ ಇಲ್ಲದೆ ನಲುಗಿದ ಗ್ರಾಮ ಆಡಳಿತಾಧಿಕಾರಿ: ರಾಷ್ಟ್ರಪತಿಗೆ ದಯಾಮರಣಕ್ಕೆ ಪತ್ರ ಬರೆದ ಯೋಗೇಶ ಕುರಹಟ್ಟಿ

0

ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಯೋಗೇಶ ದ್ಯಾಮಪ್ಪ ಕುರಹಟ್ಟಿ ಅವರು ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಮನವಿ ಸಲ್ಲಿಸಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಯೋಗೇಶ ಕುರಹಟ್ಟಿ ಅವರು ಹಿಂದಿ ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ, ಕಂದಾಯ ಇಲಾಖೆಯ ಇತರ ಎಲ್ಲಾ ಸಿಬ್ಬಂದಿಗೆ ವೇತನ ಪಾವತಿಯಾಗಿದ್ದರೂ, ತಮಗೆ ಮಾತ್ರ ಎರಡು ತಿಂಗಳಿಂದ ವೇತನ ನೀಡಿಲ್ಲ ಎಂದು ಉಲ್ಲೇಖಿಸಿದ್ದಾರೆ. ವೇತನ ಇಲ್ಲದ ಕಾರಣ ತಮ್ಮ ವೃದ್ಧ ತಾಯಿಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ಹೇಳಿದ್ದಾರೆ.

ಮುಂಡರಗಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಬಾಡಿಗೆಯನ್ನೂ ಕಟ್ಟಲು ಸಾಧ್ಯವಾಗಿಲ್ಲ. ದಿನಚರಿ ಸಲ್ಲಿಕೆ ಹಾಗೂ ಕಂದಾಯ ನಿರೀಕ್ಷಕರಿಗೆ ವರದಿ ನೀಡಿದ್ದರೂ ಸಹ ವೇತನ ತಡೆಹಿಡಿಯಲಾಗಿದೆ ಎಂದು ಆರೋಪಿಸಿದ್ದಾರೆ.

ನನ್ನ ಜವಾಬ್ದಾರಿ ನಿಭಾಯಿಸಲು ಆಗುತ್ತಿಲ್ಲ”

ಪತ್ರದಲ್ಲಿ ಅವರು, “ತಾಯಿಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲ. ವೇತನ ಇಲ್ಲದೆ ಬದುಕು ಬಹಳ ಕಷ್ಟಕರವಾಗಿದೆ. ನನ್ನ ಜವಾಬ್ದಾರಿಗಳನ್ನು ನಿಭಾಯಿಸಲು ಆಗದ ಸ್ಥಿತಿಗೆ ತಲುಪಿದ್ದೇನೆ” ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಇಲಾಖೆಯ ಎಲ್ಲ ಉದ್ಯೋಗಿಗಳ ವೇತನ ಪಾವತಿಯಾಗಿದ್ದರೂ ತಮಗೆ ಮಾತ್ರ ವೇತನ ತಡೆಹಿಡಿಯಲಾಗಿದೆ ಎಂಬುದು ಅನುಮಾನಗಳಿಗೆ ಕಾರಣವಾಗಿದ್ದು, ಇದೀಗ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ನಿತಿನ್ ನಬಿನ್ ನನ್ನ ಬಾಸ್ ಎಂದ ಪ್ರಧಾನಿ ಮೋದಿ! ಬಿಜೆಪಿ ಹೊಸ ಯುಗಕ್ಕೆ ಎಂಟ್ರಿ?

0

ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಿತಿನ್ ನಬಿನ್ ಅವರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಅವರು ಪಕ್ಷದ ಪರಂಪರೆಯನ್ನು ಮುಂದುವರಿಸುವ ಮಿಲೇನಿಯಲ್ ನಾಯಕ ಎಂದು ಬಣ್ಣಿಸಿದ್ದಾರೆ.

“ಪಕ್ಷದ ವಿಚಾರ ಬಂದರೆ ನಿತಿನ್ ನಬಿನ್ ಅವರೇ ಬಾಸ್. ನಾನು ಕೇವಲ ಬಿಜೆಪಿ ಕಾರ್ಯಕರ್ತ” ಎಂದು ಹೇಳಿದ ಮೋದಿ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಜೆಪಿ ಹೊಸಬರಿಗೆ ಅವಕಾಶ ನೀಡುವ ಪಕ್ಷ. ಅಧ್ಯಕ್ಷರ ಹೊಣೆಗಾರಿಕೆ ಪಕ್ಷಕ್ಕೆ ಮಾತ್ರ ಸೀಮಿತವಲ್ಲ, ಎನ್‌ಡಿಎ ಒಕ್ಕೂಟದಲ್ಲಿ ಸಮನ್ವಯ ಸಾಧಿಸುವುದೂ ಅವರ ಕರ್ತವ್ಯ ಎಂದು ಮೋದಿ ಸ್ಪಷ್ಟಪಡಿಸಿದರು.

ನಿತಿನ್ ನಬಿನ್ ಬಗ್ಗೆ ಮಾತನಾಡಿದ ಮೋದಿ, “ಅವರು ರೇಡಿಯೋ ಯುಗದಿಂದ ಎಐ ಯುಗದವರೆಗೆ ಬದಲಾವಣೆಗಳನ್ನು ಕಂಡ ಪೀಳಿಗೆಯವರು. ಯುವ ಉತ್ಸಾಹವೂ ಇದೆ, ಸಂಘಟನಾ ಅನುಭವವೂ ಇದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಲ್ಲದೇ, “ಬಿಜೆಪಿ ಒಂದು ಕುಟುಂಬ. ಇಲ್ಲಿ ಮೆಂಬರ್‌ಶಿಪ್‌ಗಿಂತ ರಿಲೇಷನ್‌ಶಿಪ್ ಮುಖ್ಯ. ನಾಯಕತ್ವ ಬದಲಾಗಬಹುದು, ಆದರೆ ನಮ್ಮ ದಿಕ್ಕು ಮತ್ತು ಆದರ್ಶಗಳು ಒಂದೇ” ಎಂದು ಮೋದಿ ಹೇಳಿದರು.

error: Content is protected !!