Home Blog Page 39

ಅಕ್ರಮ ಸಂಬಂಧ ಪ್ರಶ್ನಿಸಲು ಬಂದಿದ್ದ ಅಕ್ಕ-ತಮ್ಮನನ್ನು, ಚಾಕುವಿನಂದ ಇರಿದು ಕೊಂದ ಅಪ್ರಾಪ್ತ ಬಾಲಕ!

0

ಬೆಂಗಳೂರು: ಪೀಣ್ಯದ ಹೆಚ್‌ಎಂಟಿ ಲೇಔಟ್‌ನ ಮನೆಯೊಂದರಲ್ಲಿ 16 ವರ್ಷದ ಅಪ್ರಾಪ್ತ ಬಾಲಕನಿಂದ ಡಬಲ್ ಮರ್ಡರ್ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧದ ವಿಚಾರವಾಗಿ ಉಂಟಾದ ಜಗಳದ ವೇಳೆ ಅಕ್ಕ ಮತ್ತು ತಮ್ಮನನ್ನು ಹತ್ಯೆ ಮಾಡಲಾಗಿದೆ.

ಯಮುನಾ (36) ಹಾಗೂ ಸುದೀಪ್ (34) ಮೃತರು ಎಂದು ಗುರುತಿಸಲಾಗಿದೆ. ಘಟನೆ ಸ್ಥಳಕ್ಕೆ ಡಿಸಿಪಿ ನಾಗೇಶ್ ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಆರೋಪಿಯ ತಾಯಿ ಛಾಯಾ ಮತ್ತು ಯಮುನಾ ಅವರ ಪತಿಯ ನಡುವೆ ಅಕ್ರಮ ಸಂಬಂಧವಿದೆ ಎಂಬ ಆರೋಪ ಹಿನ್ನೆಲೆ, ಈ ವಿಚಾರವನ್ನು ಪ್ರಶ್ನಿಸಲು ಯಮುನಾ ಮತ್ತು ತಮ್ಮ ಸುದೀಪ್ ಛಾಯಾ ಮನೆಗೆ ಬಂದಿದ್ದರು. ಈ ವೇಳೆ ಮಾತಿನ ಚಕಮಕಿಯಿಂದ ಜಗಳ ಉಂಟಾಗಿದೆ.

ಜಗಳದ ಮಧ್ಯೆ ಪ್ರವೇಶಿಸಿದ ಛಾಯಾ ಪುತ್ರ, ಚಾಕುವಿನಿಂದ ಹತ್ತಾರು ಬಾರಿ ಇರಿದು ಇಬ್ಬರನ್ನೂ ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ನಂತರ ಕೋಣೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಪೊಲೀಸರು ಬಂದರೂ ಬಾಗಿಲು ತೆಗೆದಿರಲಿಲ್ಲ. ತಂದೆ ಬಂದು ಹೇಳಿದಾಗ ಬಾಗಿಲು ತೆಗೆದು ಅಪ್ರಾಪ್ತ ಹೊರಬಂದಿದ್ದಾನೆ.

SSLC ಹಿಂದಿ ಪರೀಕ್ಷೆ ದಿನಾಂಕ ಬದಲಾವಣೆ: ಮಾ.30ರಿಂದ ಮಾ.31ಕ್ಕೆ ಮುಂದೂಡಿಕೆ

ಬೆಂಗಳೂರು: ಮಾ.30ರಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾ.31ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಮಹಾವೀರ ಜಯಂತಿ ರಜೆಯ ದಿನಾಂಕದಲ್ಲಿ ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು ಮಾ.31ರಂದು ರಜೆ ಇರುವುದರಿಂದ ಹಿಂದಿ ಪರೀಕ್ಷೆಯನ್ನು ಮಾ.30ಕ್ಕೆ ನಿಗದಿ ಮಾಡಲಾಗಿತ್ತು.

ಆದರೆ, ಇದೀಗ ಸರ್ಕಾರ ಮಾ.31ರ ರಜೆಯನ್ನು ಮಾ.30ಕ್ಕೆ ಮುಂದೂಡಿರುವುದರಿಂದ, ಪರೀಕ್ಷಾ ದಿನಾಂಕವನ್ನು ಪರಿಷ್ಕರಿಸಿ ಮಾ.31ರಂದು ನಡೆಸಲು ತೀರ್ಮಾನಿಸಲಾಗಿದೆ.

ಹೀಗಾಗಿ, ಮಾ.30ರಂದು ಮಹಾವೀರ ಜಯಂತಿ ರಜೆ ಇರಲಿದ್ದು, ಮಾ.31ರಂದು ಹಿಂದಿ ಪರೀಕ್ಷೆ ನಡೆಯಲಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ: ಮಧು ಬಂಗಾರಪ್ಪ ಘೋಷಣೆ

ಬೆಂಗಳೂರು: ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ವಯಸ್ಸು ಕಡ್ಡಾಯ ಎಂಬ ನಿಯಮದಲ್ಲಿ ರಾಜ್ಯ ಸರ್ಕಾರ ಈ ವರ್ಷವೂ 60 ದಿನಗಳ ವಿನಾಯಿತಿ ನೀಡಿದೆ.

ವಿಧಾನಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 2026-27ನೇ ಶೈಕ್ಷಣಿಕ ವರ್ಷದ ದಾಖಲಾತಿಗೆ ಈ ಸಡಿಲಿಕೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ನಿರ್ಧಾರದಂತೆ, 5 ವರ್ಷ 10 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ವಯಸ್ಸು ಹೊಂದಿರುವ ಮಕ್ಕಳಿಗೂ ಒಂದನೇ ತರಗತಿಗೆ ದಾಖಲಾಗಲು ಅವಕಾಶ ಸಿಗಲಿದೆ. ಈ ವಿನಾಯಿತಿ ಎಲ್‌ಕೆಜಿ, ಯುಕೆಜಿ ಮತ್ತು ಒಂದನೇ ತರಗತಿಗೂ ಅನ್ವಯವಾಗುತ್ತದೆ.

ವಯೋಮಿತಿ ಸಡಿಲಿಕೆಗೆ ಸಂಬಂಧಿಸಿ ಪೋಷಕರು ಹಲವು ಬಾರಿ ಆಗ್ರಹ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಈ ಮೂಲಕ ಪೋಷಕರಿಗೆ ಸ್ವಲ್ಪ ಮಟ್ಟಿನ ನಿರಾಳತೆ ದೊರೆತಿದೆ.

ಪ್ರತಿ ವರ್ಷ ಈ ಸಮಸ್ಯೆ ಮರುಕಳಿಸುತ್ತಿರುವ ಹಿನ್ನೆಲೆ ಶಾಶ್ವತ ಪರಿಹಾರಕ್ಕಾಗಿ ಹೊಸ ಕಾನೂನು ತರಲು ಸರ್ಕಾರ ನಿರ್ಧರಿಸಿದೆ. ಎಲ್‌ಕೆಜಿ ಮತ್ತು ಯುಕೆಜಿ ದಾಖಲಾತಿಗೆ ವಯೋಮಿತಿ ನಿಗದಿಪಡಿಸಲು ನಿಯಮಾವಳಿ ತರಲು ಉದ್ದೇಶಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಯುದ್ಧದ ಪರಿಣಾಮ ಇಂಧನ ಸಂಕಷ್ಟ:ಬಿಡದಿಯ 10 ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಕೆ

0

ರಾಮನಗರ: ಜಾಗತಿಕ ಯುದ್ಧದ ಪರಿಣಾಮ ಇಂಧನ ಪೂರೈಕೆಯಲ್ಲಿ ಆತಂಕ ಸೃಷ್ಟಿಯಾದ ಸಂದರ್ಭದಲ್ಲಿ, ಬಿಡದಿ ಭಾಗದ ಕೆಲವು ಗ್ರಾಮಗಳು ಪೈಪ್‌ಲೈನ್ ಗ್ಯಾಸ್ ವ್ಯವಸ್ಥೆಯ ಮೂಲಕ ಪರ್ಯಾಯ ಮಾದರಿಯನ್ನು ಯಶಸ್ವಿಯಾಗಿ ಅನುಸರಿಸುತ್ತಿವೆ.

ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆ ಗ್ಯಾಸ್ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿ, ರಾಜ್ಯದ ಹಲವು ಭಾಗಗಳಲ್ಲಿ ಜನರು ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಬಿಡದಿ ಪ್ರದೇಶದ ಸುಮಾರು 10 ಗ್ರಾಮಗಳು ಪೈಪ್‌ಲೈನ್ ಗ್ಯಾಸ್ ಬಳಕೆಯಿಂದ ಈ ಸಮಸ್ಯೆಯಿಂದ ದೂರ ಉಳಿದಿವೆ.

ಗೈಲ್ ಇಂಡಿಯಾ ಲಿಮಿಟೆಡ್ ಹಾಗೂ ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಮನೆಮನೆಗೆ ಪಿಎನ್‌ಜಿ ಗ್ಯಾಸ್ ಸಂಪರ್ಕ ನೀಡಲಾಗಿದ್ದು, ದಿನದ 24 ಗಂಟೆಗಳ ನಿರಂತರ ಪೂರೈಕೆ ನಡೆಯುತ್ತಿದೆ.

ಬಿಡದಿ ಭಾಗದಲ್ಲಿ 1,500 ಮನೆಗಳಿಗೆ, ರಾಮನಗರದಲ್ಲಿ 500 ಮನೆಗಳಿಗೆ ಹಾಗೂ ಚನ್ನಪಟ್ಟಣದಲ್ಲಿ 1,500 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಸಿಲಿಂಡರ್ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದೆ.

ಬೈರಮಂಗಲ ಕ್ರಾಸ್ ಸಮೀಪದ ಗ್ಯಾಸ್ ಸ್ಟೋರೇಜ್ ಘಟಕದಿಂದ ಕೈಗಾರಿಕೆಗಳಿಗೂ ಹಾಗೂ ಮನೆಮನೆಗೂ ಅನಿಲ ಪೂರೈಕೆ ಮಾಡಲಾಗುತ್ತಿದೆ. ಇದು ದೇಶೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲವಾಗಿದ್ದು, ಭವಿಷ್ಯದ ಇಂಧನ ಭದ್ರತೆಗೆ ಇದು ಮಾದರಿಯಾಗುತ್ತಿದೆ.

ಇದೇ ವೇಳೆ ಇನ್ನೂ ಸಂಪರ್ಕ ಪಡೆಯದ ಗ್ರಾಮಗಳಲ್ಲಿ ಸಿಲಿಂಡರ್ ಸಮಸ್ಯೆ ಮುಂದುವರಿದಿರುವುದರಿಂದ ಪೈಪ್‌ಲೈನ್ ಗ್ಯಾಸ್‌ಗೆ ಬೇಡಿಕೆ ಹೆಚ್ಚುತ್ತಿದೆ. ಜನರು ತ್ವರಿತವಾಗಿ ಸಂಪರ್ಕ ಕಲ್ಪಿಸುವಂತೆ ಕಂಪನಿಗೆ ಮನವಿ ಮಾಡುತ್ತಿದ್ದಾರೆ.

ಈ ಮಾದರಿ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಿದರೆ ಇಂಧನ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಬಹುದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಹಾಡಹಗಲೇ ಪತ್ನಿಯ ಕತ್ತು ಕೊಯ್ದು ಬರ್ಬರ ಹತ್ಯೆ ಮಾಡಿದ ಪತಿ: ಶವದ ಮೇಲೆ ಕಾರು ಹಾಯಿಸಿ ವಿಕೃತಿ

0

ಕಲಬುರಗಿ:ವ್ಯಕ್ತಿಯೋರ್ವ ಹಾಡುಹಗಲೇ ನಡುರಸ್ತೆಯಲ್ಲಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದ ಬಳಿ ನಡೆದಿದೆ. 

ಮಹಾರಾಷ್ಟ್ರ ಮೂಲದ ಶೈಲಾ (28) ಹತ್ಯೆಗೆ ಒಳಗಾದ ಮಹಿಳೆ. ಆರೋಪಿ ಪತಿ ಅಕ್ಷಯ್ ತನ್ನ ಕಾರಿನಲ್ಲಿ ಪತ್ನಿಯನ್ನು ಕರೆದುಕೊಂಡು ಬಂದು ಮಧ್ಯ ರಸ್ತೆಯಲ್ಲಿ ಇಳಿಸಿ, ಕತ್ತು ಕೊಯ್ದು ಹತ್ಯೆಗೈದಿದ್ದಾನೆ.

ಹತ್ಯೆಯ ಬಳಿಕ ಶವದ ಮೇಲೆ ಕಾರು ಹಾಯಿಸಿರುವುದು ಪ್ರಕರಣದ ಕ್ರೂರತೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಈ ಸಂಪೂರ್ಣ ಘಟನೆ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಈ ಘಟನೆ ಸಾರ್ವಜನಿಕ ಸುರಕ್ಷತೆ ಮತ್ತು ಕುಟುಂಬ ಸಂಬಂಧಗಳ ಹಿನ್ನಲೆಯಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದೆ.

ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್: ಉಪಚುನಾವಣೆಗೆ ಮೂವರು ನಾಯಕರಿಗೆ ಜವಾಬ್ದಾರಿ

0

ಬೆಳಗಾವಿ: ರಾಜ್ಯದ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಗಡಿಜಿಲ್ಲೆಯ ಮೂವರು ಪ್ರಮುಖ ನಾಯಕರಿಗೆ ಪ್ರತ್ಯೇಕ ಕ್ಷೇತ್ರಗಳಲ್ಲಿ ಗೆಲುವಿನ ಟಾಸ್ಕ್ ನೀಡಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ದಾವಣಗೆರೆ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಬಲಪಡಿಸಲು ಮಾಜಿ ಡಿಸಿಎಂ ಲಕ್ಷ್ಮಣ ಸವದಿಯನ್ನು ಸ್ಟಾರ್ ಪ್ರಚಾರಕರಾಗಿ ನೇಮಕ ಮಾಡಲಾಗಿದೆ.

ಈ ಮೂವರು ನಾಯಕರಿಗೆ ಸಂಘಟನಾ ಸಾಮರ್ಥ್ಯ ಹಾಗೂ ಕಠಿಣ ಚುನಾವಣಾ ಅನುಭವ ಇರುವುದರಿಂದ ಹೈಕಮಾಂಡ್ ಈ ತಂತ್ರ ರೂಪಿಸಿದೆ ಎನ್ನಲಾಗಿದೆ.

ಲಿಂಗಾಯತ ಹಾಗೂ ಅಹಿಂದ ಮತಬ್ಯಾಂಕ್‌ಗಳನ್ನು ಸಮರ್ಪಕವಾಗಿ ಬಳಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಲೆ ಸೃಷ್ಟಿಸುವ ಗುರಿ ಇಟ್ಟುಕೊಂಡು ಕಾರ್ಯತಂತ್ರ ರೂಪಿಸಲಾಗುತ್ತಿದೆ.

ಈ ನಿಯೋಜನೆ ಕಾಂಗ್ರೆಸ್ ಪಕ್ಷದ ಉಪಚುನಾವಣಾ ಕಾರ್ಯತಂತ್ರದಲ್ಲಿ ಮಹತ್ವದ ತಿರುವಾಗಿದ್ದು, ಫಲಿತಾಂಶದ ಮೇಲೆ ಈ ನಾಯಕರ ಪಾತ್ರ ನಿರ್ಣಾಯಕವಾಗಲಿದೆ.

ಬೈಲಾ ಉಲ್ಲಂಘನೆ ಆರೋಪ: ಮಂಡ್ಯ ಕುರುಬರ ಸಂಘದಲ್ಲಿ ಗಲಾಟೆ, ಅಧ್ಯಕ್ಷನಿಗೆ ಘೇರಾವ್

0

ಮಂಡ್ಯ: ಮಂಡ್ಯ ಜಿಲ್ಲಾ ಕುರುಬರ ಸಂಘದಲ್ಲಿ ಆಡಳಿತಾತ್ಮಕ ವಿವಾದ ತೀವ್ರಗೊಂಡಿದ್ದು, ಅಧ್ಯಕ್ಷ ಸುರೇಶ್ ವಿರುದ್ಧ ಸಂಘದ ಸದಸ್ಯರು ಮತ್ತು ನಿರ್ದೇಶಕರು ತೀವ್ರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಅಧ್ಯಕ್ಷರ ಅವಧಿ ಮುಗಿದರೂ ರಾಜೀನಾಮೆ ನೀಡದೆ ಅಧಿಕಾರದಲ್ಲಿ ಮುಂದುವರಿಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಂಘದ ಕಚೇರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಅಧ್ಯಕ್ಷರು ಕಚೇರಿಗೆ ಆಗಮಿಸುತ್ತಿದ್ದಂತೆಯೇ ಪ್ರತಿಭಟನಾಕಾರರು ಘೇರಾವ್ ಹಾಕಿ ಘೋಷಣೆ ಕೂಗಿದರು. ನಂತರ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ಬೈಲಾ ಪ್ರಕಾರ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಹೊಸ ಚುನಾವಣೆ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಕಾನೂನುಬಾಹಿರವಾಗಿ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಿತಿ ತೀವ್ರಗೊಂಡ ಹಿನ್ನೆಲೆ ಅಧ್ಯಕ್ಷ ಸುರೇಶ್ ಗಲಿಬಿಲಿಗೊಂಡು, ಪೊಲೀಸ್ ರಕ್ಷಣೆಯಲ್ಲಿ ಸ್ಥಳದಿಂದ ನಿರ್ಗಮಿಸಿದರು.

ಈ ಘಟನೆ ಸಂಘದ ಒಳಗಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗಿರುವುದನ್ನು ತೋರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆಗಳಿಗೆ ವೇದಿಕೆ ಸೃಷ್ಟಿಸಿದೆ.

ಟೋಯಿಂಗ್ ಮಾಫೀಯಾ ಕೈಗೆ ಬೆಂಗಳೂರು ಜನರನ್ನ ಕೊಡೊದಕ್ಕೆ‌ ಸರ್ಕಾರ ಹೊರಟಿದೆ: ಅರಗ ಜ್ಞಾನೇಂದ್ರ ಟೀಕೆ

ಬೆಂಗಳೂರು: ನಗರದಲ್ಲಿ ಟೋಯಿಂಗ್ ವ್ಯವಸ್ಥೆಯನ್ನು ಪುನರಾರಂಭಿಸಲು ಸರ್ಕಾರ ಮುಂದಾಗಿರುವ ಬಗ್ಗೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 2022ರಲ್ಲಿ ಟೋಯಿಂಗ್ ವ್ಯವಸ್ಥೆ ವೇಳೆ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದರು ಎಂದು ಅವರು ಹೇಳಿದರು. ಟೋಯಿಂಗ್ ಮಾಫಿಯಾ ಅಮಾನುಷವಾಗಿ ವರ್ತಿಸುತ್ತಿತ್ತು ಎಂದು ಆರೋಪಿಸಿದರು.

ತಾವು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಟೋಯಿಂಗ್ ವ್ಯವಸ್ಥೆ ವಿರುದ್ಧ ಸಾಕಷ್ಟು ಒತ್ತಡವಿತ್ತು. ಕೆಲವು ಪೊಲೀಸ್ ಅಧಿಕಾರಿಗಳೇ ಅಪ್ರತ್ಯಕ್ಷವಾಗಿ ಟೋಯಿಂಗ್ ಟೆಂಡರ್ ಪಡೆದಿದ್ದರು ಎಂಬ ಆರೋಪಗಳಿದ್ದವು. ಸಿಬ್ಬಂದಿಯ ವರ್ತನೆ ಸೇರಿದಂತೆ ಅನೇಕ ಅಂಶಗಳನ್ನು ಪರಿಗಣಿಸಿ ಆ ವ್ಯವಸ್ಥೆಯನ್ನು ರದ್ದು ಮಾಡಲಾಗಿತ್ತು ಎಂದು ತಿಳಿಸಿದರು.

ಇದೀಗ ಮತ್ತೆ ಟೋಯಿಂಗ್ ವ್ಯವಸ್ಥೆ ತರಲು ಸರ್ಕಾರ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ. ಹಿಂದಿನಂತೆ ಕಂಟ್ರಾಕ್ಟರ್‌ಗಳು ಪೊಲೀಸ್ ಠಾಣೆಗಳಿಗೆ ಹಣ ನೀಡಬೇಕಾಗಿತ್ತು ಎಂಬ ವರದಿಗಳು ಇದ್ದವು. ಲಕ್ಷಾಂತರ ರೂಪಾಯಿ ವಹಿವಾಟು ನಡೆದಿತ್ತು ಎಂದು ಹೇಳಿದರು. ಈಗ ಮತ್ತೆ ಆ ರೀತಿಯ ಮಾಫಿಯಾ ಕೈಗೆ ಬೆಂಗಳೂರು ಜನರನ್ನು ಒಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದರು.

ದಂಡ ವಸೂಲಿ ಹೆಸರಿನಲ್ಲಿ 112 ವಾಹನಗಳು ರಸ್ತೆಯಲ್ಲಿ ದರೋಡೆ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಟೀಕಿಸಿದ ಅವರು, ಸರ್ಕಾರ ತನ್ನ ಆರ್ಥಿಕ ದುಸ್ಥಿತಿಯನ್ನು ಸರಿಪಡಿಸಲು ದಂಡವನ್ನು ಆದಾಯ ಮೂಲವಾಗಿ ಬಳಸುತ್ತಿದೆ ಎಂದು ಹೇಳಿದರು.

ಇದು ನಾಗರಿಕರಿಗೆ ಅನಗತ್ಯ ಕಿರಿಕಿರಿ ಉಂಟುಮಾಡುತ್ತಿದೆ. ಸರ್ಕಾರವು ತನ್ನ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲು ಬೇರೆ ಮಾರ್ಗಗಳನ್ನು ಹುಡುಕಬೇಕು. ಜನರಿಗೆ ಹಿಂಸೆ ಮತ್ತು ಅವಮಾನ ಉಂಟುಮಾಡುವ ನೀತಿಗಳನ್ನು ಅನುಸರಿಸಬಾರದು ಎಂದು ಅವರು ಒತ್ತಾಯಿಸಿದರು. ಈ ರೀತಿಯ ಕ್ರಮವನ್ನು ತಾವು ಖಂಡಿಸುತ್ತೇನೆ ಎಂದು ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಕೊಪ್ಪಳ ನಗರಸಭೆಯಲ್ಲಿ 10 ಕೋಟಿ ರೂ. ಭ್ರಷ್ಟಾಚಾರ ಪ್ರಕರಣ: ಜೆಇ ಸೋಮಲಿಂಗಪ್ಪ ಸಸ್ಪೆಂಡ್!

ಕೊಪ್ಪಳ: ಲೋಕಾಯುಕ್ತ ದಾಳಿಯಲ್ಲಿ ಬಹಿರಂಗವಾದ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕೊಪ್ಪಳ ನಗರಸಭೆಯ ಜೂನಿಯರ್ ಎಂಜಿನಿಯರ್ (ಜೆಇ) ಸೋಮಲಿಂಗಪ್ಪ ಅವರನ್ನು ಅಮಾನತು ಮಾಡಲಾಗಿದೆ.

2023-24 ಹಾಗೂ 2024-25ನೇ ಸಾಲಿನ ವಿವಿಧ ಕಾಮಗಾರಿಗಳಲ್ಲಿ ಸುಳ್ಳು ಬಿಲ್ ಹಾಕಿ ಅಕ್ರಮ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಒಟ್ಟು 366 ಕಾಮಗಾರಿಗಳಲ್ಲಿ ಸುಮಾರು 10 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಪತ್ತೆಯಾಗಿದೆ.

ಈ ಹಿಂದೆ ಲೋಕಾಯುಕ್ತ ದಾಳಿ ನಡೆಸಿದ ವೇಳೆ ಈ ಅಕ್ರಮಗಳ ಕುರಿತು ಮಾಹಿತಿ ಬಹಿರಂಗವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೌರಾಡಳಿತ ಇಲಾಖೆ, ಜೆಇ ಸೋಮಲಿಂಗಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಆಲಿಕಲ್ಲು ಮಳೆ ಏಪ್ರಿಲ್ 1ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಳಗಾವಿ ಜಿಲ್ಲೆಯ ಹಲವು ಭಾಗಗಳಲ್ಲಿ ಬುಧವಾರ ಅರ್ಧ ಗಂಟೆಯಿಂತ ಹೆಚ್ಚುಕಾಲ ಧಾರಾಕಾರ ಮಳೆ ಸುರಿದಿದ್ದು, ಕೆಲವೆಡೆ ಗುಡುಗಿನ ಅಬ್ಬರದ ಜೊತೆಗೆ ಆಲಿಕಲ್ಲುಗಳೂ ಬಿದ್ದಿವೆ. ಖಾನಾಪುರ, ಬೆಳಗಾವಿ, ಹುಕ್ಕೇರಿ, ಸವದತ್ತಿ, ರಾಮದುರ್ಗ, ಯರಗಟ್ಟಿ, ಬೈಲಹೊಂಗಲ, ಮೂಡಲಗಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ದಾಖಲಾಗಿತ್ತು.

ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕಿನ ಅಂಡಾರು, ಕಾಡುಹೊಳೆ, ಮುನಿಯಾಲು, ಮುಟ್ಲುಪಾಡಿ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿಮಳೆಯಿಂದ ಹಾನಿ ಸಂಭವಿಸಿದ್ದು, ಅಜೆಕಾರು ಹಾಗೂ ಅಂಡಾರು ಪ್ರದೇಶದಲ್ಲಿ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.

ಆರೆಂಜ್ ಅಲರ್ಟ್: ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಮಾರ್ಚ್ 26ರಿಂದ ಏಪ್ರಿಲ್ 1ರವರೆಗೆ ಆಲಿಕಲ್ಲು ಮಳೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಶಿವಮೊಗ್ಗ, ವಿಜಯನಗರದಲ್ಲಿ ಮಾರ್ಚ್ 26ರಂದು ಬಿರುಗಾಳಿ, ಗುಡುಗು ಮತ್ತು ಮಿಂಚಿನ ತೀವ್ರತೆಯು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ರೈತರು, ಕುರಿಗಾಹಿಗಳು ಎಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ.

ಇದೊಂದಿಗೆ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಕೊಪ್ಪಳ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಾರ್ಚ್ 26ರಂದು ಸಾಧಾರಣ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

error: Content is protected !!