Home Blog Page 4

ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಫಕೀರ ಸಿದ್ಧರಾಮ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಂಗಾರಕ್ಕೆ ಇಂದು ಹೆಚ್ಚಿನ ಬೆಲೆ ಇದೆ. ಆದರೆ ಜನರು ತಿನ್ನುವ ಅನ್ನಕ್ಕೆ ಬಂಗಾರಕ್ಕಿಂತಲೂ ಅಧಿಕ ಬೆಲೆ ಬಂದಿರುವುದು ವಾಸ್ತವ. ಅನ್ನವಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ಆದರೂ ಅನ್ನವನ್ನು ಬೆಳೆಸುವ ರೈತನಿಗೆ ಅವನ ಬೆಳೆಗೆ ಸರಿಯಾದ ಬೆಲೆ ಸಿಗದೆ ಹೀನಾಯ ಪರಿಸ್ಥಿತಿ ಎದುರಾಗಿರುವುದು ಅತ್ಯಂತ ದುಃಖದ ಸಂಗತಿ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳು ವಿಷಾದ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸಮಗ್ರ ರೈತಪರ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿದ್ದ 8ನೇ ದಿನದ ಅಹೋರಾತ್ರಿ ಹೋರಾಟ ವೇದಿಕೆಗೆ ಆಗಮಿಸಿ ಮಾತನಾಡಿದ ಅವರು, “ಬೆಳೆ ಚೆನ್ನಾಗಿ ಬಂದಾಗ ಬೆಲೆ ಇರುವುದಿಲ್ಲ, ಬೆಳೆ ಬರದಿದ್ದಾಗ ಮಾತ್ರ ಬೆಲೆ ಏರುತ್ತದೆ. ಅನ್ನವನ್ನು ಸೃಷ್ಟಿಸುವ ಶಕ್ತಿ ರೈತನಿಗೆ ಇದೆ. ಇಂತಹ ರೈತರ ಹೋರಾಟಕ್ಕೆ ನಮಗೆ ಸಂಪೂರ್ಣ ಬೆಂಬಲವಿದೆ. ಸರ್ಕಾರ ಖರೀದಿ ಕೇಂದ್ರ ಆರಂಭಿಸುವುದಾಗಿ ಹೇಳಿರುವುದು ಸ್ತುತ್ಯಾರ್ಹ, ಅದು ಆದಷ್ಟು ಬೇಗ ಜಾರಿಗೊಳ್ಳಲಿ” ಎಂದು ಆಶಿಸಿದರು.

ರಾಜ್ಯ ಸರ್ಕಾರ ಕೇಂದ್ರದೆಡೆಗೆ ಬೊಟ್ಟು ಮಾಡುವುದನ್ನು ಬಿಡಲಿ: ಸಂಸದ ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗೋವಿನಜೋಳ ಖರೀದಿ ಕೇಂದ್ರವನ್ನು ಆರಂಭಿಸುವಂತೆ ಆಗ್ರಹಿಸಿ ಕಳೆದ 8 ದಿನಗಳಿಂದ ಪಟ್ಟಣದ ಶಿಗ್ಲಿ ನಾಕಾದ ವೀರಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ನಡೆದಿರುವ ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಶನಿವಾರ ಭೇಟಿ ನೀಡಿ, ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಉಪವಾಸ ಸತ್ಯಾಗ್ರಹ ಮುಂದುವರೆಸಿರುವ ಹೋರಾಟಗಾರರ ಆರೋಗ್ಯ ವಿಚಾರಿಸಿದರು.

ನಂತರ ಸೇರಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಸಂಸದರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮನ್ವಯದಿಂದ ಕೆಲಸ ಮಾಡಿದಾಗ ರೈತರನ್ನು ಉಳಿಸಬಹುದು. ಕೇಂದ್ರದೆಡೆಗೆ ರಾಜ್ಯ ಸರ್ಕಾರ ಬೊಟ್ಟು ಮಾಡುವುದನ್ನು ಬಿಡಬೇಕು. ಲಕ್ಷ್ಮೇಶ್ವರ ಭಾಗದ ರೈತರ ಹೋರಾಟದಿಂದ ಮೆಕ್ಕೆಜೋಳ ಬೆಳೆದ ರಾಜ್ಯದ ರೈತರಿಗೆ ನ್ಯಾಯ ದೊರಕುವಂತಾಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಈಗ ಸರ್ಕಾರ ಖರೀದಿ ಕೇಂದ್ರ ತೆರೆಯುತ್ತೇವೆ ಎಂದಿದೆ. ಯಾವ ಏಜೆನ್ಸಿ ಮೂಲಕ ಖರೀದಿ ಮಾಡುತ್ತಾರೆ ಎಂಬುದನ್ನು ತಿಳಿಸಿಲ್ಲ. ಯಾವ ಏಜೆನ್ಸಿಯಿಂದ ಖರೀದಿಸುತ್ತಾರೆ ಎನ್ನುವುದು ಮುಖ್ಯ. ಮಾರುಕಟ್ಟೆಗೆ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬರುತ್ತದೆ. ಹೀಗಾಗಿ ಹೆಚ್ಚಿಗೆ ಖರೀದಿಗೆ ಆದೇಶ ಮಾಡಬೇಕು. ಕೆಎಂಎಫ್‌ನಿಂದ ನೇರ ಖರೀದಿಸಲು ಸೂಚಿಸಬೇಕು. ಎಥೆನಾಲ್ ಕಂಪನಿಗಳು ಗೋವಿನಜೋಳ ಖರೀದಿಸುತ್ತಿವೆ. ಅವರು ಏಜೆಂಟರಿಂದ ಖರೀದಿಸುತ್ತಾರೆ. ಅದನ್ನು ತಪ್ಪಿಸಿ ನೇರವಾಗಿ ರೈತರಿಂದ ಖರೀದಿಸುವ ವ್ಯವಸ್ಥೆ ಮಾಡಬೇಕು. ಸುಮಾರು 35 ಎಥೆನಾಲ್ ಫ್ಯಾಕ್ಟರಿಗಳಿವೆ. ರಾಜ್ಯ ಸರ್ಕಾರ ರೈತರ ಜೊತೆಗಿದೆಯೋ ಅಥವಾ ಕಾರ್ಖಾನೆ ಮಾಲೀಕರ ಜೊತೆ ಇದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ನಾನು ಸಿಎಂ ಆಗಿದ್ದಾಗ ಪ್ರವಾಹ ಬಂದ ಸಂದರ್ಭದಲ್ಲಿ ಇಂದಿನ ಸಿಎಂ ಸಿದ್ದರಾಮಯ್ಯನವರು ಪರಿಹಾರ ಯಾವಾಗ ಕೊಡುತ್ತೀರಿ ಎಂದು ಟೇಬಲ್ ಕುಟ್ಟಿ ಕೇಳಿದರು. ನಾನು ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಕೊಟ್ಟಿದ್ದೆ. ಯಾವುದಕ್ಕೂ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸಲಿಲ್ಲ. ರೈತರನ್ನು ಉಳಿಸಿಕೊಳ್ಳಬೇಕೆಂಬ ಮನಸ್ಸಿರಬೇಕು. ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆ ತೋರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರವಿಕಾಂತ ಅಂಗಡಿ, ಮಂಜುನಾಥ ಮಾಗಡಿ, ಬಸವರಾಜ ಬೆಂಡಿಗೇರಿ, ಪೂರ್ಣಾಜಿ ಕರಾಟೆ, ಹಿರಿಯ ಮುಖಂಡ ಸಣ್ಣೀರಪ್ಪ ಹಳ್ಳೆಪ್ಪನವರ, ನಾಗರಾಜ ಚಿಂಚಲಿ, ಮಹೇಶ್ ಹೊಗೆಸೊಪ್ಪಿನ, ಶರಣು ಗೋಡಿ, ಎಂ.ಎಸ್. ದೊಡ್ಡಗೌಡ್ರ, ಹೊನ್ನಪ್ಪ ವಡ್ಡರ, ಚಂಬಣ್ಣ ಬಾಳಿಕಾಯಿ, ನಿಂಬಣ್ಣ ಮಡಿವಾಳರ, ನೀಲಪ್ಪ ಶೆರಸೂರಿ, ಪ್ರವೀಣ ಬಾಳಿಕಾಯಿ, ಗಿರೀಶ ಅಗಡಿ, ಪ್ರಕಾಶ ಕೊಂಚಿಗೇರಿ ಮಠ, ದಾದಾಪೀರ ಮುಚ್ಚಾಲೆ, ಬಸವರಾಜ ಅರಳಿ, ಸುರೇಶ ಹಟ್ಟಿ, ಮಂಜುನಾಥ ಮುಳಗುಂದ, ಮಲ್ಲಿಕಾರ್ಜುನ ನಿರಾಲೋಟ್, ಟಾಕಪ್ಪ ಸಾತಪೂತೆ, ರಾಮಣ್ಣ ಗೌರಿ ಸೇರಿದಂತೆ ಅನೇಕ ರೈತರು ಇದ್ದರು.

ರಾಜ್ಯ ಸರ್ಕಾರ ರೈತರ ಮಾಲನ್ನು ವಾಪಸ್ ಕಳುಹಿಸದೇ ಖರೀದಿ ಮಾಡಬೇಕು. ರಾಜ್ಯ ಸರ್ಕಾರ ಬೆಲೆ ನಿಗದಿ ಮಾಡಲು ಆಯೋಗ ರಚನೆ ಮಾಡಿತ್ತು. ಆ ಆಯೋಗ ವರದಿ ನೀಡಿದೆ. ಅದರ ಆಧಾರದಲ್ಲಿ ವೈಜ್ಞಾನಿಕವಾಗಿ ದರ ನಿಗದಿ ಮಾಡಲಿ. ಈಗಾಗಲೇ ಹೆಸರೋ ಕೇಂದ್ರ ತೆರೆದಿದ್ದಾರೆ. ಅಲ್ಲಿ ಗ್ರೇಡಿಂಗ್ ಮಾಡಿ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಗೋವಿನಜೋಳದ ವಿಚಾರದಲ್ಲಿಯೂ ಹಾಗೆ ಆಗಬಾರದು. ಅದಕ್ಕಾಗಿ ಎಲ್ಲ ಖರೀದಿ ಕೇಂದ್ರದಲ್ಲೂ ರೈತ ಪ್ರತಿನಿಧಿಗಳನ್ನು ಕೂಡಿಸಬೇಕು ಎಂದು ಸಂಸದ ಬೊಮ್ಮಾಯಿ ಹೇಳಿದರು.

ಆಂಧ್ರ| ಆಘಾತಕಾರಿ ಘಟನೆ: ತಿರುಪತಿಯಲ್ಲಿ 5 ವರ್ಷದಲ್ಲಿ 20 ಕೋಟಿ ಕಲಬೆರಕೆ ಲಡ್ಡು ವಿತರಣೆ!

0

ತಿರುಪತಿ: ಆಂಧ್ರಪ್ರದೇಶದ ತಿರುಪತಿ ದೇವಾಲಯದಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಕಳೆದ 5 ವರ್ಷದ ಅವಧಿಯಲ್ಲಿ ದೇವಾಲಯದಲ್ಲಿ ಕಲಬೆರಕೆ ತುಪ್ಪ ಬಳಸಿ ಅಂದಾಜು 20 ಕೋಟಿ ಲಡ್ಡುಗಳನ್ನು ಪಾಮ್ ಎಣ್ಣೆ, ಪಾಮ್ ಕರ್ನಲ್ ಎಣ್ಣೆ ಮತ್ತು ಇತರ ವಿಷಕಾರಿ ಪದಾರ್ಥಗಳೊಂದಿಗೆ ತಯಾರಿಸಿ ವಿತರಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 48.76 ಕೋಟಿ ಲಡ್ಡುಗಳು ವಿತರಣೆಗೊಂಡಿದ್ದು, ಈ ಪ್ರಕರಣ ಬೆಳಕಿಗೆ ಬಂದ ನಂತರ ಕೇಂದ್ರ ತನಿಖಾ ದಳದ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಪೂರೈಕೆದಾರರು ಉತ್ತರಾಖಂಡದ ಭೋಲೆ ಬಾಬಾ ಡೈರಿ ಮತ್ತು ಅದರ ಶೆಲ್ ಕಂಪನಿಗಳು ಎಂದು ಪತ್ತೆ ಮಾಡಲಾಗಿದೆ. ಸುಮಾರು 11 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರೂ ಪ್ರಸಾದವನ್ನು ಪ್ರತ್ಯೇಕವಾಗಿ ಲೇಬಲ್ ಮಾಡದ ಕಾರಣ, ಯಾರು ಕಲಬೆರಕೆ ಲಡ್ಡುಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿಯುವುದು ಅಸಾಧ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಗದಿಪಡಿಸಿದ ಸಮಯದಲ್ಲಿ ಗುರಿ ಸಾಧಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಹಂಚಿಕೆ ಯೋಜನೆಯಡಿ ಅನುಷ್ಠಾನಿತ ಕಾಮಗಾರಿಗಳ ಆರ್ಥಿಕ ಹಾಗೂ ಭೌತಿಕ ಗುರಿಯನ್ನು ನಿಗದಿತ ಕಾಲಮಿತಿಯಲ್ಲಿಯೇ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಯೋಜನೆಯಡಿ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಸ್‌ಸಿ ಎಸ್‌ಟಿ ಕಾಲೋನಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಗುಣಮಟ್ಟದ ಕಡೆಗೂ ನಿಗಾ ವಹಿಸಬೇಕು. ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು. ಆಯಾ ಆರ್ಥಿಕ ಸಾಲಿನಲ್ಲಿ ಅನುಷ್ಠಾನಿತ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವತ್ತ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಅವರು ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ವಿವಿಧ ಇಲಾಖೆಗಳು ಸಾಧಿಸಿದ ಪ್ರಗತಿ ವರದಿಯನ್ನು ಸಭೆಯಲ್ಲಿ ವಿವರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಮಸನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಮಾತನಾಡಿ, ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನ ಯಾವುದೇ ಕಾರಣಕ್ಕೂ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ನಿಗದಿತ ಅವಧಿಯೊಳಗೆ ಒದಗಿಸಲು ಕ್ರಮ ವಹಿಸಬೇಕು ಎಂದರು.

ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕರ್ನಾಟಕ ಸರ್ಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಜರುಗಿದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಕುರ್ತಕೋಟಿ ಗ್ರಾಮದ ಹುಲಕೋಟಿ ಶಿಕ್ಷಣ ಸಂಸ್ಥೆಯ ಮನೋಹರ ಇನಾಮತಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ವೈಷ್ಣವಿ ಕೋಳಿವಾಡ, ಶಾಹೀನ ನದಾಫ್ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಿಲ್ಪಾ ಕುಂಬಾರ 3 ಸಾವಿರ ಮೀ ಓಟದಲ್ಲಿ ದ್ವಿತೀಯ, ಸಂಜಯ ಗಣಾಚಾರಿ 110 ಮೀ ಅಡತಡೆ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಸಂಸ್ಥೆಯ ಅಧ್ಯಕ್ಷ ಆರ್.ಎಂ. ಮೂಲಿಮನಿ, ಆರ್.ಎಸ್. ಪಾಟೀಲ, ಯು.ವಿ. ಬೇಟಗೇರಿ, ಗ್ರಾ.ಪಂ ಅಧ್ಯಕ್ಷ ಅಪ್ಪಣ್ಣಾ ಇನಾಮತಿ, ದೈಹಿಕ ಶಿಕ್ಷಕ ಎಂ.ಎಚ್. ಅಂಗಡಿ, ಶಾಲಾ ಸಿಬ್ಬಂದಿಗಳು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಇಬ್ಬರ ನಡುವೆ ಕೂಸು ಬಡವಾಗದಿರಲಿ: ಸಂಸದ ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯ ಸರ್ಕಾರ ಕೇವಲ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳ ಖರೀದಿಸುವ ಭರವಸೆ ನೀಡಿ, ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸುವ ಬದಲು, ರಾಜ್ಯ ಸರ್ಕಾರದ ಆವರ್ತ ನಿಧಿಯಿಂದ ಖರೀದಿ ಮಾಡಲು ಅವಕಾಶ ಇದೆ. ಸುಮಾರು 200-300 ಕೋಟಿ ರೂ ಖರ್ಚು ಮಾಡಿ ಮೆಕ್ಕೆಜೋಳ ಖರೀದಿಸಿ ರೈತರ ರಕ್ಷಣೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಶನಿವಾರ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್‌ನಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ರೈತರು ನಡೆಸುತ್ತಿರುವ ಪ್ರತಿಭಟನಾ ನಿರತ ರೈತರ ಸ್ಥಳಕ್ಕೆ ಭೇಟಿ ನೀಡಿ, ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ವರ್ಷ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಟನ್ ಮೆಕ್ಕೆಜೋಳ ಬೆಳೆಯಲಾಗಿತ್ತು. ಈ ವರ್ಷ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದರೂ 54 ಲಕ್ಷ ಮೆಟ್ರಿಕ್ ಟನ್ ಬೆಳೆ ಬಂದಿದೆ. ಇಂತಹ ಸಂದರ್ಭದಲ್ಲಿ ಕೇವಲ 10 ಲಕ್ಷ ಟನ್ ಖರೀದಿಸುವ ಹೇಳಿಕೆ ಬಿಟ್ಟು, ಹೆಚ್ಚಿಗೆ ಖರೀದಿಸಲು ಮುಂದಾಗಬೇಕು. ಲಕ್ಷ್ಮೇಶ್ವರದಲ್ಲಿ ಗೋವಿನಜೋಳ ಖರೀದಿ ಕೇಂದ್ರಕ್ಕಾಗಿ ರೈತರು ಮಾಡಿದ ಹೋರಾಟ ಸರ್ಕಾರದ ಕಣ್ಣು ತೆರೆಯುವಂತೆ ಮಾಡಿದ್ದು, ಅದಕ್ಕಾಗಿ ರೈತರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಗಮನ ಹರಿಸಬೇಕು ಎಂದರು.

ಈ ವೇಳೆ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಬಸವರಾಜ ಬೆಂಡಿಗೇರಿ, ಪೂರ್ಣಾಜಿ ಖರಾಟೆ, ಮಹೇಶ ಹೊಗೆಸೊಪ್ಪಿನ್, ಎಂ.ಎಸ್. ದೊಡ್ಡಗೌಡ್ರ ಸೇರಿದಂತೆ ನೂರಾರು ರೈತರು ಹಾಜರಿದ್ದರು.

ರೈತನ ಬದುಕು ಅನಿಶ್ಚಿತತೆಯಿಂದ ಕೂಡಿದೆ. ರೈತನ ಬದುಕು ಬಯಲ ಬದುಕು. ಒಳ್ಳೆ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡುವುದು, ಮಳೆ ಬಂದರೆ ಬೆಳೆ, ಬೆಳೆ ಬಂದರೆ ಬೆಲೆ ಸಿಗದು. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನೀತಿ ಇಟ್ಟುಕೊಂಡು ಕೆಲಸ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಬೆಂಬಲ ಬೆಲೆ ಯೋಜನೆಯ ಪರಿಣಾಮ ರೈತರಿಗೂ ಅನುಕೂಲವಾಗುತ್ತದೆ. ಖರೀದಿ ಮಾಡಿದ ಸರ್ಕಾರಕ್ಕೂ ನಷ್ಟವಾಗುವುದಿಲ್ಲ. ಕೇಂದ್ರ-ರಾಜ್ಯ ಸರ್ಕಾರ ಸಂಘರ್ಷ ಮಾಡಿದರೆ ಇಬ್ಬರ ನಡುವೆ ಕೂಸು ಬಡವಾದಂತೆ ಆಗುತ್ತದೆ. ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ಎಲ್ಲ ಪಕ್ಷಗಳು ರೈತನಿಗೆ ಸೇರಿವೆ ಎಂದು ಸಂಸದ ಬೊಮ್ಮಾಯಿ ಹೇಳಿದರು.

ಸರ್ದಾರ್ ಪಟೇಲರು ಏಕೀಕರಣದ ರೂವಾರಿ: ಎಸ್.ವಿ. ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ದೇಶದ ಐಕ್ಯತೆ ಹಾಗೂ ಏಕೀಕರಣಕ್ಕೆ ಹೋರಾಟ ಮಾಡಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲರು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಗದಗ ನಗರದ ವಿಠಲಾರೂಢ ಕಲ್ಯಾಣ ಮಂಟಪದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಏಕತಾ ಪಾದಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1947ರ ಸ್ವಾತಂತ್ರ್ಯದ ನಂತರ ದೇಶಾದಲ್ಲಿ ಹರಿದು ಹಂಚಿ ಹೋಗಿದ್ದ 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಂದೇ ಒಕ್ಕೂಟದ ವ್ಯವಸ್ಥೆಗೆ ತರಲು ಸರ್ದಾರ್ ವಲ್ಲಭಬಾಯಿ ಪಟೇಲರು ಶ್ರಮಿಸಿದರು. ಅವರ ನಿರಂತರ ಶ್ರಮದ ಫಲವಾಗಿ ದೇಶವು ಒಕ್ಕೂಟ ವ್ಯವಸ್ಥೆಯಡಿ ಬರಲು ಸಾಧ್ಯವಾಯಿತು. ದೇಶಾದ್ಯಂತ 3 ಸಾವಿರಕ್ಕೂ ಹೆಚ್ಚು ಜಾತಿಗಳು, 25 ಸಾವಿರಕ್ಕೂ ಹೆಚ್ಚು ಉಪಜಾತಿಗಳಿದ್ದರೂ ಎಲ್ಲರಲ್ಲಿಯೂ ಒಗ್ಗಟ್ಟಿನ ಮನೋಭಾವನೆ ಬೆಳೆಸಬೇಕು, ಅದಕ್ಕೆ ಉತ್ತೇಜನ ಕೊಡಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸಿದ ವಲ್ಲಭಬಾಯಿ ಪಟೇಲರಿಗೆ ಮಹಾತ್ಮ ಗಾಂಧೀಜಿ ಅವರು ಸರ್ದಾರ್ ಎಂದು ಬಿರುದನ್ನು ನೀಡಿದರು ಎಂದು ಸ್ಮರಿಸಿದರು.

ಯುವಕರಲ್ಲಿ ದೇಶಪ್ರೇಮ, ದೇಶಭಕ್ತಿ ಹೆಚ್ಚಿಸಬೇಕು, ಸ್ವಾವಲಂಬನೆಯ ಮನೋಭಾವನೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಯ ತಿಳಿವಳಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಬಾಯಿ ಪಟೇಲರ 150ನೇ ಜನ್ಮದಿನದ ಅಂಗವಾಗಿ ದೇಶಾದ್ಯಂತ `ಒಂದೇ ಭಾರತ, ಆತ್ಮನಿರ್ಭರ ಭಾರತ’ ಏಕತಾ ನಡಿಗೆಯನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.

ನಗರದ ಮುಳಗುಂದ ನಾಕಾ ಬಳಿಯ ವಿಠಲಾರೂಢ ಕಲ್ಯಾಣ ಮಂಟಪದಿಂದ ಆರಂಭವಾದ ಜಿಲ್ಲಾ ಮಟ್ಟದ ಏಕತಾ ನಡಿಗೆಯು ಮುಳಗುಂದ ನಾಕಾ, ಜೋಡ ಮಾರುತಿ ದೇವಸ್ಥಾನ, ಹತ್ತಿಕಾಳ ಕೂಟ, ಬಸವೇಶ್ವರ ವೃತ್ತ, ಮಹೇಂದ್ರಕರ್ ವೃತ್ತ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದಲ್ಲಿ ಸಮಾರೋಪಗೊಂಡಿತು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಏಕತಾ ನಡಿಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಮೈ ಭಾರತ ಕೇಂದ್ರದ ಉಪನಿರ್ದೇಶಕ ಲೋಕೇಶ ಕುಮಾರ, ರಾಷ್ಟ್ರೀಯ ಸೇವಾ ಯೋಜನೆಯ ನೋಡೆಲ್ ಅಧಿಕಾರಿ ವಿ.ಎಚ್. ಕೊಳ್ಳಿ, ಶ್ರೀನಿವಾಸ ಬಡಿಗೇರ, ರಾಜು ಕುರಡಗಿ, ಅಭಿಯಾನದ ಜಿಲ್ಲಾ ಸಂಚಾಲಕ ಆರ್.ಕೆ. ಚವ್ಹಾಣ, ಸಂತೋಷ ಅಕ್ಕಿ, ಲಿಂಗರಾಜ ಪಾಟೀಲ, ಫಕೀರೇಶ ರಟ್ಟಿಹಳ್ಳಿ, ರಮೇಶ ಸಜ್ಜಗಾರ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ವಿಜಯಲಕ್ಷ್ಮಿ ಮಾನ್ವಿ, ಸ್ವಾತಿ ಅಕ್ಕಿ ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲರು ಇಂಗ್ಲೆಂಡ್‌ಕ್ಕೆ ಹೋಗಿ ಕಾನೂನು ಪದವಿ ಪಡೆದು, ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ಧುಮುಕಿದರು. ರೈತರ ಹೋರಾಟದ ನೇತೃತ್ವ ವಹಿಸಿ ಯಶಸ್ಸು ಕಂಡ ವಲ್ಲಭಾಯಿ ಪಟೇಲರು ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧಿ ಹೊಂದಿದರು ಎಂದು ಹೇಳಿದರು.

ಶರಣ ಸಂದೇಶ ಪಾಲನೆಯಿಂದ ಜೀವನ ಪಾವನ: ಎಂ.ಕೆ. ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಗದಗ: ಶರಣರ ಜೀವನವು ಒಂದು ದಿವ್ಯ ಸಂದೇಶ ಸಾರುವ ಜ್ಞಾನ ದೀವಿಗೆಯಾಗಿದೆ. ಅದನ್ನು ಸದಾಕಾಲ ಬೆಳಗಿಸಿ ನಮ್ಮ ಜೀವನದ ಕತ್ತಲೆಯನ್ನು ಹೊಡೆದೋಡಿಸಿ, ಶರಣರ ತತ್ವ ಮತ್ತು ಚಿಂತನೆಗಳ ಪ್ರಕಾರ ಜೀವನ ನಡೆಸುವುದರೊಂದಿಗೆ ಸಮಾಜಕ್ಕೆ ಮಾದರಿ ಪ್ರಜೆಗಳಾಗಬೇಕೆಂದು ಶರಣರು ದಿವ್ಯ ಜ್ಞಾನದ ನುಡಿಯನ್ನು ದಯಪಾಲಿಸಿದ್ದಾರೆ. ಅವರ ನುಡಿಯಂತೆ, ಅವರ ತತ್ವದಂತೆ ನಾವು ಜೀವನ ನಡೆಸಿದರೆ ಸುಖಿಗಳಾಗಿರಬಹುದು ಎಂದು ಎಂ.ಕೆ. ಲಮಾಣಿ ಹೇಳಿದರು.

ಶಿರಹಟ್ಟಿ ನಗರದ ಸಿಸಿಎನ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಶಿರಹಟ್ಟಿ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಬಸವರಾಜ್ ಗಿರಿತಮ್ಮಣ್ಣನವರ್ ಮಾತನಾಡಿ, ಬಸವಾದಿ ಶರಣರ ಸಂದೇಶವು ಪ್ರತಿಯೊಬ್ಬ ಸಮಾಜದ ಜೀವಿಗಳಿಗೆ ದಿವ್ಯ ಅಮೃತ ಔಷಧಿಗಳಾಗಿವೆ. 12ನೇ ಶತಮಾನದ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು ಜೀವನವನ್ನು ಪಾವನ ಮಾಡಿಕೊಳ್ಳುವ ಒಂದು ಸುವರ್ಣ ಅವಕಾಶ ನಮಗೆ ನೀಡಿದ್ದಾರೆ. ಮಾನವನು ತನ್ನ ಸ್ವಾರ್ಥವನ್ನು ಬಿಟ್ಟು ಪರೋಪಕಾರ ಜೀವಿಯಾಗಿ ಬದುಕಲು ಸಾಕಷ್ಟು ಅವಕಾಶಗಳಿದ್ದರೂ ತನ್ನ ಸ್ವಾರ್ಥಕ್ಕೆ ಸಮಾಜವನ್ನು, ಪರಿಸರವನ್ನು ಹಾಳು ಮಾಡುವುದರೊಂದಿಗೆ ತನ್ನ ಜೀವನವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾನೆ. ಶರಣರು ಹೇಳಿದ ಸಂದೇಶ ಪಾಲಿಸಿದರೆ ನಮ್ಮೆಲ್ಲರ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಗಣ್ಯ ವ್ಯಾಪಾರಸ್ಥರು, ಶಿಕ್ಷಣ ಪ್ರೇಮಿಗಳಾದ ಚಂದ್ರಣ್ಣ ನೂರಶೆಟ್ಟರ ಮಾತನಾಡಿ, ವಿದ್ಯಾರ್ಥಿಗಳ ಜೀವನ ಅಮೂಲ್ಯ ರತ್ನವಿದ್ದಂತೆ. ಈ ಸಮಯದಲ್ಲಿ ಸರಿಯಾಗಿ ಅಭ್ಯಾಸ, ಅಧ್ಯಯನ ಮಾಡುವುದರ ಮೂಲಕ ಸಮಾಜದಲ್ಲಿ ಗೌರವ ಪಡೆಯುವುದಕ್ಕೆ ಶರಣರ ಸಂದೇಶ ಸಹಾಯಕಾರಿಯಾಗಿದೆ ಎಂದು ಹೇಳಿದರು.

ದತ್ತಿ ದಾನಿಗಳಾದ ಎಚ್.ಎಂ. ದೇವಗಿರಿ ಮಾತನಾಡಿ, ನಮಗೆ ಲಭ್ಯವಾದ ಸಂಪತ್ತನ್ನು ಒಳ್ಳೆಯ ಕೆಲಸಕ್ಕೆ, ಉತ್ತಮ ಸಮಾಜ ನಿರ್ಮಾಣಕ್ಕೆ ವಿನಿಯೋಗಿಸಿದಾಗ ಶರಣರ ತತ್ವಕ್ಕೆ ನಡೆದುಕೊಂಡಂತೆ ಆಗುತ್ತದೆ ಎಂದು ನಮ್ಮ ತಂದೆಯವರ ಹೆಸರಿನಲ್ಲಿ ದತ್ತಿ ನೀಡಿ ಅವರ ಹೆಸರನ್ನು ಅಜರಾಮರವಾಗಿ ಶರಣರ ವಿಚಾರದಲ್ಲಿ ಉಳಿಯುವಂತೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಪೊಲೀಸ್‌ಪಾಟೀಲ್ ಸ್ವಾಗತಿಸಿದರು. ಚಂಪಾ ಗುರುಮಾತೆಯರು ಕಾರ್ಯಕ್ರಮ ನಿರೂಪಿಸಿದರು. ಚೇಪಾಟಿ ಗುರುಗಳು ವಂದಿಸಿದರು. ರಾಮಣ್ಣ ಕಂಬಳಿ, ವಿ.ಸಿ. ಪೊಲೀಸ್‌ಪಾಟೀಲ್, ನಂದಕ್ಕ ಕಪ್ಪತನವರ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಅತಿಥಿಗಳಾಗಿ ಭಾಗವಹಿಸಿದ ಗದಗ ಜಿಲ್ಲಾ ಶ.ಸಾ.ಪ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಬಸವಣ್ಣವರ ಒಂದೇ ಒಂದು ವಚನವನ್ನು ನಾವು ಪಠಣ ಮಾಡಿಕೊಂಡರೆ ಈ ಜೀವನವೇ ಸಾರ್ಥಕ ಜೀವನವಾಗುತ್ತದೆ. ವಿದ್ಯಾರ್ಥಿಗಳಾದವರು ಎಲ್ಲಾ ಶರಣರ ಅಮೃತವಚನಗಳನ್ನು ಅಭ್ಯಾಸ ಮಾಡುವುದರೊಂದಿಗೆ ಅದರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಇವತ್ತು ಅಧಿಕಾರದಲ್ಲಿರುವ ಸಿಎಂ ಅವ್ರನ್ನ ಅಂದು ಮಂತ್ರಿ ಮಾಡಿದ್ದು ನಾನು: ಹೆಚ್‌ಡಿ ದೇವೇಗೌಡ

0

ಬೆಂಗಳೂರು:- ಇವತ್ತು ಅಧಿಕಾರದಲ್ಲಿರುವ ಸಿಎಂ ಅವ್ರನ್ನ ಅಂದು ಮಂತ್ರಿ ಮಾಡಿದ್ದು ನಾನು ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಉದಯವಾಗಿ 25 ವರ್ಷ ತುಂಬಿದ ಹಿನ್ನೆಲೆ ಆಯೋಜಿಸಲಾಗಿದ್ದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಾತನಾಡಿದ ಅವರು, ಯಾವ ಸಿಎಂ ಇವತ್ತು ಅಧಿಕಾರಿದಲ್ಲಿದ್ದಾರೋ ಅವರನ್ನು ಅಂದು ಡಿಸಿಎಂ, ಹಣಕಾಸು ಮಂತ್ರಿಯನ್ನಾಗಿ ಮಾಡಿದ್ದೆ ನಾನು. ಜೊತೆಗೆ ಸಿದ್ದರಾಮಯ್ಯರನ್ನು ಸಿಎಂ ಮಾಡೋಕೆ ಮೂರು ಬಾರಿ ಸೋನಿಯಾ ಗಾಂಧಿ ಮನೆಗೆ ಹೋಗಿದ್ದೆ ಎಂದರು.

ಈಗಲೂ ಸೋನಿಯಾಗಾಂಧಿ ಅವರ ಬಳಿ ಕೇಳಲಿ. ಜೆಡಿಎಸ್‌ನಲ್ಲಿ ಇದ್ದಿದ್ರೆ ಅಪ್ಪ, ಮಗ ಸಿಎಂ ಆಗಲು ಬಿಡ್ತಿರಲಿಲ್ಲ ಎನ್ನುತ್ತಾರೆ. ಆದರೆ ಆಗ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ಗೆ ಸಿಎಂ ಪಟ್ಟ ಕೊಡದಿದ್ರೆ ಚುನಾವಣೆಗೆ ಹೋಗ್ತೆವೆ ಎಂದಿದ್ರು. 2 ಕೋಟಿ ರೂ. ಸಾಲ ತಂದು ನಾನು ಚುನಾವಣೆಗೆ ಹೋಗಿದ್ದೆ. ಆನಂತರ ಶ್ರೀಮಾನ್ ಸಿದ್ದರಾಮಯ್ಯನವರನ್ನ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೆ. ಅವರೇನು ಆಕ್ಟ್‌ಫರ್ಡ್‌ ಯುನಿವರ್ಸಿಟಿಯಿಂದ ಅಧ್ಯಯನ ಮಾಡಿ ಬಂದಿದ್ರಾ? ಸುಪ್ರಿಂಕೋರ್ಟ್ ಲಾಯರ್ ಆಗಿದ್ರಾ? ಮೈಸೂರಲ್ಲಿ ಒಂದೆರಡು ಕೇಸ್ ಮಾಡಿದ್ರೊ ಇಲ್ವೋ ಗೊತ್ತಿಲ್ಲ.

ಸಾಲ ತಂದು ನೌಕರರಿಗೆ ಸಂಬಳ ಕೊಡ್ತಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರನ್ನಾಗಿ ಮಾಡಿದ್ದೆ. ಆಗ ಇವರ ಕೊಡುಗೆ ಏನಿತ್ತು ಎಂದು ಕಿಡಿಕಾರಿದ್ದಾರೆ. ಇಷ್ಟೆಲ್ಲ ಮಾಡಿ ಬಳಿಕ ಡೆಲ್ಲಿಗೆ ನೀರಾವರಿ ಯೋಜನೆ ರೂಪಿಸಿದೆ. ಆದರೆ ಅಂದು ಚಂದ್ರಬಾಬು ನಾಯ್ಡು ವಿರೋಧ ಮಾಡಿದ್ದರು. ಅವರ ಜೊತೆ ಮಾತಾಡಿ, ಸ್ಕೀಂಗೆ ಹಣ ಹೊಂದಿಸಲು ಯೋಜನೆ ಮಾಡಿದ್ವಿ. ಬಳಿಕ ಜೆಡಿಎಸ್ ಪಕ್ಷದ ಹಳೆ ಕಚೇರಿ ಬಗ್ಗೆ ಕೇಸ್ ಹಾಕಿಸಿ, ರಾತ್ರೋರಾತ್ರಿ ನಾವು ಹಳೆ ಕಚೇರಿ ಬಿಡುವಂತೆ ಮಾಡಿದ್ರು. ಈ ಜಾಗ ಕೊಡೋಕು ಕಿರಿಕ್ ಮಾಡಿದ್ರು. ಕೋರ್ಟ್ನಲ್ಲಿ ನಮ್ಮ ಪರ ಆಯ್ತು. ಆಗ ಕುರುಬರ ಹೆಣ್ಣು ಮಗಳು ಮೇಯರ್ ಆಗಿದ್ದಾಗ ಈ ಜಾಗ ಕೊಟ್ಟರು.

ಆದರೆ ಅದು ಸಿದ್ದರಾಮಯ್ಯಗೆ ಗೊತ್ತಾಗಿ ಹೇಗೆ ಕೊಟ್ರಿ ಅಂತ ಪ್ರಶ್ನೆ ಮಾಡಿ, ಅದಕ್ಕೂ ವಿರೋಧ ಮಾಡಿದ್ರು. ಅದಾದ ಬಳಿಕ ಧರಣಿ ಮಾಡ್ತಾರೆ ಅಂದ ಮೇಲೆ ಆರ್ಡರ್ ಪಾಸ್ ಮಾಡಿದ್ರು. ಅಷ್ಟೇ ಅಲ್ಲದೇ ಹೊಸ ಜೆಡಿಎಸ್ ಪಕ್ಷದ ಕಚೇರಿ ಮಾಡೋಕು ಸಿದ್ದರಾಮಯ್ಯ ಕಾಟ ಕೊಟ್ಟಿದ್ದರು. ನಾನು ಅಂದು ಕಣ್ಣೀರು ಹಾಕಿದ್ದೇನೆ. ಇವರನ್ನ ಡಿಸಿಎಂ, ಹಣಕಾಸು ಮಂತ್ರಿ ಮಾಡಿದೆ. ನಡೆದು ಬಂದ ದಾರಿ ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಲಿ. ಈ ಬಿಲ್ಡಿಂಗ್ ಕಟ್ಟೋವಾಗ ಕಷ್ಟಪಟ್ಟಿದ್ದೇವೆ. ರೇವಣ್ಣ ಬೆಳಗ್ಗೆ, ಸಂಜೆ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಲು ಆಗ್ರಹ: ಮೈಮೇಲೆ ಡೀಸಲ್ ಸುರಿದುಕೊಂಡು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕಾಂಗ್ರೆಸ್ ಹೈಕಮಾಂಡ್ ರೋಣ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡದೇ ಹೋದರೆ ಸಾಮೂಹಿಕವಾಗಿ ನೀಡಿರುವ ರಾಜೀನಾಮೆ ಪತ್ರಗಳನ್ನು ಅಂಗೀಕರಿಸಬೇಕು ಎಂದು ರೋಣ ಹಾಗೂ ನರೇಗಲ್ ಬ್ಲಾಕ್ ಕಾಂಗ್ರೆಸ್ ಘಟಕಗಳ ಮುಂಚೂಣಿ ಪದಾಧಿಕಾರಿಗಳು ಸ್ಥಳೀಯ ಕೆಕೆ ವೃತ್ತದಲ್ಲಿ ಶನಿವಾರ ಹಕ್ಕೊತ್ತಾಯ ಮಂಡಿಸಿದರು.

ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮತಕ್ಷೇತ್ರದಲ್ಲಿ ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಸರ್ಕಾರದ ಆಶಯಗಳನ್ನು ಈಡೇರಿಸಿದ ಹಾಗೂ ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಹಗಲಿರುಳು ಶ್ರಮಿಸಿದ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಒತ್ತಾಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ರೋಣ ಮತಕ್ಷೇತ್ರದದಿಂದ ಶಾಸಕ ಜಿ.ಎಸ್. ಪಾಟೀಲರನ್ನು 5 ಬಾರಿ ಪ್ರಚಂಡ ಬಹುಮತದಿಂದ ವಿಧಾನಸಭೆಗೆ ಕಳುಹಿಸಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡುವಾಗ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರನ್ನು ಕಡೆಗಣಿಸಿದೆ. ರೋಣ ಮತಕ್ಷೇತ್ರದ ಮತದಾರರ ಬೇಡಿಕೆಯನ್ನು ನಿರ್ಲಕ್ಷಿಸುವ ಯತ್ನ ಇದಾಗಿದೆ ಎಂದು ಕಾಂಗ್ರೆಸ್ ಘಟಕದ ಮಹಿಳಾ ಪದಾಧಿಕಾರಿಗಳು ಆರೋಪಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾಗಿರುವ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಪ್ರಸ್ತುತ ಘಟನೆಗಳನ್ನು ಗಮನಿಸಿದರೆ ಅಂತಹ ಆಶಾದಾಯಕ ಬೆಳವಣಿಗೆ ಕಾಣದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಹೀಗಾಗಿ ಈ ಬಾರಿ ಸಚಿವ ಸಂಪುಟದಲ್ಲಿ ಶಾಸಕ ಜಿ.ಎಸ್. ಪಾಟೀಲರಿಗೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ರೋಣ, ನರೇಗಲ್ ಬ್ಲಾಕ್ ಕಾಂಗ್ರೆಸ್ ಮುಂಚೂಣಿ ಘಟಕದ ಪದಾಧಿಕಾರಿಗಳು ನೀಡಿರುವ ಸಾಮೂಹಿಕ ರಾಜೀನಾಮೆ ಪತ್ರಗಳನ್ನು ಅಂಗೀಕರಿಸಬೇಕು. ಮುಂದಿನ ದಿನಗಳಲ್ಲಿ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ನಡೆಸುತ್ತಿರುವ ಹೋರಾಟವನ್ನು ರಾಷ್ಟç ರಾಜಧಾನಿ ದೆಹಲಿವರೆಗೆ ಹಬ್ಬಿಸುತ್ತೇವೆ ಎಂದು ಎಚ್ಚರಿಸಿದರು.

ಈ ವೇಳೆ ರೋಣ, ನರೇಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕದ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ನೈತಿಕ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ನಡೆಯುತ್ತಿದ್ದ ಹಕ್ಕೊತ್ತಾಯದ ವೇಳೆ ತಾಲೂಕಿನ ಮಾರನಬಸರಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ರವಿ ಗಡಾದ ಹಾಗೂ ದಿಂಡೂರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಸಂಗಪ್ಪ ತೇಜಿ ಮೈಮೇಲೆ ಡೀಸಲ್ ಸುರಿದುಕೊಂಡಾಗ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಕೆಲ ಕಾಂಗ್ರೆಸ್ ಕಾರ್ಯಕರ್ತರು ತಡೆದರು. ಕೆಲ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

error: Content is protected !!