Home Blog Page 465

ಭೀಕರ ದುರಂತ; ಕಾಲು ಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲು!

0

ಶಿವಮೊಗ್ಗ:- ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್​ನ ಭದ್ರಾ ನಾಲೆಯಲ್ಲಿ ಕಾಲುಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲಾದ ಘಟನೆ ಜರುಗಿದೆ.

ಮೃತರನ್ನು ನೀಲಾ ಬಾಯಿ(50), ಮಗ ರವಿ(23), ಮಗಳು ಶ್ವೇತಾ(24) ಮತ್ತು ಅಳಿಯ ಪರಶುರಾಮ(28) ಎಂದು ಗುರುತಿಸಲಾಗಿದೆ. ಮಾರಿ ಹಬ್ಬಕ್ಕೆಂದು ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್​​ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದಾರೆ. ಒಬ್ಬರು ಕಾಲು ಜಾರಿ ಭದ್ರಾ ನಾಲೆಗೆ ಬಿದ್ದಿದ್ದು, ಅವರನ್ನ ರಕ್ಷಿಸಲು ಹೋಗಿ ನಾಲ್ವರೂ ನೀರುಪಾಲಾಗಿದ್ದಾರೆ.

ಸದ್ಯ ಶವಗಳಿಗಾಗಿ ಹೊಳೆಹೊನ್ನೂರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ನಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗಿಲ್ಲಿ ನಟ ಬಿಗ್​ ಬಾಸ್​ ಟ್ರೋಫಿ ಗೆದ್ದರೆ 20 ಲಕ್ಷ ರೂಪಾಯಿ ಕೊಡ್ತೀನಿ; ಪರಿಷತ್ ಶಾಸಕ ಶರವಣ ಘೋಷಣೆ!

0

‘ಬಿಗ್ ಬಾಸ್ ಕನ್ನಡ ಸೀಸನ್ 12’ ಗ್ರ್ಯಾಂಡ್ ಫಿನಾಲೆ ಈಗಾಗಲೇ ಆರಂಭವಾಗಿದ್ದು.,ಇನ್ನೇನು ಕೆಲವೇ ಕ್ಷಣಗಳಲ್ಲಿ ವಿನ್ನರ್ ಘೋಷಣೆ ಆಗಲಿದೆ.

ಈ ನಡುವೆ ಗಿಲ್ಲಿ ಅವರೇ ಈ ಸೀಸನ್ ವಿನ್ನರ್ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ನಡುವೆ ಜೆಡಿಎಸ್‌ ಎಂಎಲ್‌ಸಿ ಟಿ.ಎ. ಶರವಣ ಮಹತ್ವದ ಘೋಷಣೆ ಮಾಡಿದ್ದಾರೆ. ಗಿಲ್ಲಿ ಬಿಗ್ ಬಾಸ್ ವಿನ್ನರ್ ಆದರೆ ತಮ್ಮ ಕಡೆಯಿಂದ ಬರೋಬ್ಬರಿ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ.

“ರೈತನ ಮಗ ಗಿಲ್ಲಿ ಈ ಬಾರಿ ಗೆಲ್ಲಲೇಬೇಕು. ಗಿಲ್ಲಿಯೇ ಈ ಸೀಸನ್‌ನ ವಿನ್ನರ್ ಆಗುತ್ತಾರೆ ಎಂಬ ವಿಶ್ವಾಸ ನನಗಿದೆ. ನಾನೂ ಪ್ರತಿದಿನ ಬಿಗ್ ಬಾಸ್ ನೋಡುತ್ತೇನೆ. ರನ್ನರ್‌ಅಪ್ ಸ್ಥಾನಕ್ಕೆ ರಕ್ಷಿತಾ ಅಥವಾ ಅಶ್ವಿನಿ ಬರಬಹುದು” ಎಂದು ಶರವಣ ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಗಿಲ್ಲಿ ಹವಾ ಜೋರಾಗಿದ್ದು, ವಿನ್ನರ್ ಬಗ್ಗೆ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.

ಕಾರಿನಲ್ಲಿ ಕುಳಿತು ರಾಜಾರೋಷವಾಗಿ ಗನ್ ತೋರಿಸಿದ ವ್ಯಕ್ತಿ! ದೂರು ದಾಖಲು

0

ಬೆಂಗಳೂರು: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನೊಳಗೆ ಕುಳಿತು ವ್ಯಕ್ತಿಯೊಬ್ಬ ಗನ್ ಪ್ರದರ್ಶಿಸಿದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ತಾಳಕೆರೆ ಹ್ಯಾಂಡ್ ಪೋಸ್ಟ್ ಬಳಿ ನಡೆದ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸ್ವಯಂಪ್ರೇರಿತವಾಗಿ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯಲ್ಲಿ ವ್ಯಕ್ತಿ ಪ್ರದರ್ಶಿಸಿದ ಗನ್ ಅಸಲಿಯೇ ಅಥವಾ ನಕಲಿಯೇ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಗನ್ ಪ್ರದರ್ಶನ ಮಾಡಿದ ಹಿನ್ನೆಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ: ಲಕ್ನೋದಲ್ಲಿ ತುರ್ತು ಭೂಸ್ಪರ್ಶ

0

ಲಕ್ನೋ: ದೆಹಲಿಯಿಂದ ಬಾಗ್ಡೋಗ್ರಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಟಿಶ್ಯೂ ಪೇಪರ್ ಮೇಲೆ ಬರೆದ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದ್ದು, ವಿಮಾನವನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.

ಇಂಡಿಗೋ ವಿಮಾನ 6E-6650 ದೆಹಲಿಯಿಂದ ಬಾಗ್ಡೋಗ್ರಾಗೆ ಹಾರಾಟ ನಡೆಸುತ್ತಿತ್ತು. ಹಾರಾಟದ ವೇಳೆ ವಿಮಾನದ ಶೌಚಾಲಯದಲ್ಲಿರುವ ಟಿಶ್ಯೂ ಪೇಪರ್ ಮೇಲೆ “ವಿಮಾನದಲ್ಲಿ ಬಾಂಬ್ ಇದೆ” ಎಂದು ಬರೆದಿರುವುದು ಸಿಬ್ಬಂದಿಗೆ ಗಮನಕ್ಕೆ ಬಂದಿದೆ.

ತಕ್ಷಣವೇ ಪೈಲಟ್‌ಗಳು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ಮಾಹಿತಿ ನೀಡಿದ್ದು, ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೋರಿದರು. ಬೆಳಿಗ್ಗೆ 8:46ರ ಸುಮಾರಿಗೆ ಎಟಿಸಿಗೆ ಬಾಂಬ್ ಬೆದರಿಕೆ ಕುರಿತ ಸಂದೇಶ ರವಾನೆಯಾಗಿದ್ದು, ವಿಮಾನವು ಬೆಳಿಗ್ಗೆ 9:17ಕ್ಕೆ ಸುರಕ್ಷಿತವಾಗಿ ಲಕ್ನೋದಲ್ಲಿ ಇಳಿಯಿತು.

ಈ ಘಟನೆಯ ಕುರಿತು ಸಂಬಂಧಿಸಿದ ಭದ್ರತಾ ಮತ್ತು ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದ್ದು, ಸಂಪೂರ್ಣ ಭದ್ರತಾ ತಪಾಸಣೆಗೆ ಇಂಡಿಗೋ ಏರ್‌ಲೈನ್ಸ್ ಸಹಕರಿಸುತ್ತಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಆಗಿರುವ ಅನಾನುಕೂಲತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪ್ರಯಾಣಿಕರಿಗೆ ಉಪಾಹಾರ ಒದಗಿಸಲಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ ಎಂದು ಇಂಡಿಗೋ ಏರ್‌ಲೈನ್ಸ್ ಸ್ಪಷ್ಟಪಡಿಸಿದೆ.

ಲಕ್ಕುಂಡಿಯಲ್ಲಿ ಚಿನ್ನ, ಬೆಳ್ಳಿ ಅನ್ವೇಷಣೆ ನಮ್ಮ ಉದ್ದೇಶವಲ್ಲ- ಇತಿಹಾಸದ ಅನ್ವೇಷಣೆ ಮುಖ್ಯ: ಎ ದೇವರಾಜು

0

ಗದಗ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಕಾರ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ. ಉತ್ಖನನ ಸ್ಥಳಕ್ಕೆ ಪುರಾತತ್ವ ಇಲಾಖೆ ಮೈಸೂರು, ಹಂಪಿ ಹಾಗೂ ಧಾರವಾಡ ವಲಯದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಮಾತನಾಡಿದ ಪುರಾತತ್ವ ಇಲಾಖೆ ಮೈಸೂರು ವಲಯ ಆಯುಕ್ತ ಎ. ದೇವರಾಜು, ಉತ್ಖನನ ಕಾರ್ಯ ಪೂರ್ವನಿಗದಿತವಾಗಿದ್ದು, ಮೇ 15ರಂದು ಅನುಮತಿ ದೊರೆತಿತ್ತು. ಜೂನ್ 3ರಂದು ಮುಖ್ಯಮಂತ್ರಿ ಭೂಮಿ ಪೂಜೆ ನೆರವೇರಿಸಿದ್ದರು. ಮಳೆಗಾಲದ ಕಾರಣ ಆ ವೇಳೆ ಉತ್ಖನನ ಕಾರ್ಯ ಆರಂಭವಾಗಿರಲಿಲ್ಲ. ಕಳೆದ ಮೂರು ದಿನಗಳಿಂದ ಉತ್ಖನನ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.

ದೇವಾಲಯ ಹಾಗೂ ಮುಂದಿನ ಕೊಳದ ನಡುವೆ ಸಂಪರ್ಕವಿದ್ದ ಮಾಹಿತಿ ಲಭ್ಯವಾಗಿದೆ. ಇಲ್ಲಿ ಸಾಕಷ್ಟು ಚಿನ್ನ ಸಿಗಬಹುದು ಎಂದು ಕೆಲವರು ಹೇಳುತ್ತಿದ್ದರೂ, ಚಿನ್ನ ಅಥವಾ ಬೆಳ್ಳಿ ಅನ್ವೇಷಣೆ ನಮ್ಮ ಉದ್ದೇಶವಲ್ಲ. ಇತಿಹಾಸದ ಕುರುಹುಗಳ ಅನ್ವೇಷಣೆಯೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದರು. ನಿಧಿ ಸಿಕ್ಕಿರುವುದು ಕೇವಲ ಆಕಸ್ಮಿಕವಾಗಿದ್ದು, ನಿಧಿ ಹುಡುಕಾಟ ನಡೆಯುತ್ತಿಲ್ಲ. ಇದು ಶಿಲ್ಪಕಲೆ ಮತ್ತು ಪುರಾತತ್ವ ಅವಶೇಷಗಳ ಹುಡುಕಾಟವಾಗಿದೆ ಎಂದು ಹೇಳಿದರು.

ಲಕ್ಕುಂಡಿಯಲ್ಲಿ ಹಿಂದೆ ಟಂಕಸಾಲೆ ಇತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಅದಕ್ಕೆ ದಾಖಲೆ ರೂಪದಲ್ಲಿ ಮುತ್ತು, ರತ್ನ, ಹವಳ ಹಾಗೂ ಚಿನ್ನಾಭರಣಗಳು ಪತ್ತೆಯಾಗಿವೆ. ಇದರಿಂದ ಇಲ್ಲಿ ಟಂಕಸಾಲೆ ಇತ್ತು ಎಂಬುದು ನಿರೂಪಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೇನು ಪತ್ತೆಯಾಗಬಹುದು ಎಂಬ ಕುತೂಹಲವಿದೆ ಎಂದು ತಿಳಿಸಿದರು.

ಇಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದ್ದು, ತಾಂತ್ರಿಕ ಸಮಿತಿಯನ್ನು ರಚಿಸಿ ಪತ್ತೆಯಾದ ಅವಶೇಷಗಳ ಕಾಲಘಟ್ಟವನ್ನು ನಿರ್ಧರಿಸಲಾಗುತ್ತದೆ. ಜೊತೆಗೆ ಸಂಬಂಧಿತ ಕುಟುಂಬಗಳಿಗೆ ಪರಿಹಾರ ನಿಗದಿ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಯುಕ್ತ ಎ. ದೇವರಾಜು ತಿಳಿಸಿದ್ದಾರೆ.

ಅಬಕಾರಿ ಬ್ರಹ್ಮಾಂಡ ಭ್ರಷ್ಟಾಚಾರ: ಸಚಿವ ತಿಮ್ಮಾಪುರ ವಜಾಗೊಳಿಸಬೇಕು – ಆರ್. ಅಶೋಕ್ ಆಗ್ರಹ

0

ಬೆಂಗಳೂರು: ಇದು ಸಿದ್ದರಾಮಯ್ಯನವರ ನಿದ್ದೆ ಸರ್ಕಾರ. ಸರ್ಕಾರ ಭ್ರಷ್ಟಾಚಾರದ ಹೊಳೆಯಲ್ಲಿ ಮಿಂದು ಮೇಯುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಬಕಾರಿ ಸಚಿವ ತಿಮ್ಮಾಪುರ ಅವರನ್ನು ತಕ್ಷಣವೇ ವಜಾಗೊಳಿಸಬೇಕು. ಇಲ್ಲವಾದರೆ, ಈ ಭ್ರಷ್ಟಾಚಾರದಲ್ಲಿ ಸಿಎಂಗೆ 85% ಕಮಿಷನ್ ಹೋಗುತ್ತಿದೆ ಎಂಬುದಕ್ಕೆ ಅರ್ಥವಿದೆ ಎಂದು ಆರೋಪಿಸಿದರು.

ಅಬಕಾರಿ ಇಲಾಖೆಗೆ ವರ್ಷದಿಂದ ವರ್ಷಕ್ಕೆ ಕಲೆಕ್ಷನ್ ಟಾರ್ಗೆಟ್ ನೀಡಲಾಗುತ್ತಿದ್ದು, ಅದರ ಪರಿಣಾಮವಾಗಿ ಸನ್ನದುಗಳು ಹರಾಜಿನ ಸರಕಾಗಿವೆ ಎಂದು ಹೇಳಿದರು. ನಿನ್ನೆ ಲೋಕಾಯುಕ್ತ ಅಧಿಕಾರಿಗಳು ದೊಡ್ಡ ತಿಮಿಂಗಿಲವೊಂದನ್ನು ಬಂಧಿಸಿದ್ದಾರೆ. ಒಂದೇ ಒಂದು ಸನ್ನದಿಗೆ 2.30 ಕೋಟಿ ರೂ. ಲಂಚ ಕೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಅಶೋಕ್ ಆರೋಪಿಸಿದರು.

ಅಬಕಾರಿ ಇಲಾಖೆ ಆರ್ಥಿಕ ಇಲಾಖೆಯಡಿ ಬರುತ್ತದೆ. ಈ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಕಾರಣ ಎಂದು ಹೇಳಿದರು. ನಕಲಿ ಗಾಂಧಿಗಳು ಇವರು. ಗಾಂಧಿ ಹೆಸರು ಹೇಳಲು ಇವರಿಗೆ ನೈತಿಕತೆ ಇಲ್ಲ. ಜನರನ್ನು ಕುಡಿಸಿ ಹಾಳು ಮಾಡುತ್ತಿದ್ದಾರೆ.

ಇನ್ನೊಂದು ಕಡೆ ಬೆಂಗಳೂರನ್ನು ನಶೆಯಲ್ಲಿ ಮುಳುಗಿಸಿದ್ದಾರೆ. ಅಬಕಾರಿ ಸಚಿವ ತಿಮ್ಮಾಪುರ ಒಂದು ಕ್ಷಣವೂ ಅಧಿಕಾರದಲ್ಲಿ ಇರಬಾರದು. ಅವರು ರಾಜೀನಾಮೆ ನೀಡಬೇಕು. ಇಲ್ಲವಾದರೆ, ಸಿಎಂ ಅವರನ್ನು ಸಂಪುಟದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.

ಶಿಕ್ಷಣದಿಂದ ವ್ಯಕ್ತಿತ್ವವನ್ನು ಹಾಗೂ ಮನುಷ್ಯತ್ವವನ್ನು ರೂಪಿಸಿಕೊಳ್ಳಲು ಸಾಧ್ಯ: CM ಸಿದ್ದರಾಮಯ್ಯ

0

ಮೈಸೂರು: ಶಿಕ್ಷಣದಿಂದ ವ್ಯಕ್ತಿತ್ವವನ್ನು ಹಾಗೂ ಮನುಷ್ಯತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ಶ್ರೀ ಮುತ್ತತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗೀಗಳವರ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಕೃಷಿ ವಿಚಾರಸಂಕಿರಣ ಉದ್ಘಾಟನೆ ಕೃಷಿಯಲ್ಲಿ ಮಹಿಳೆ ಸುಸ್ಥಿರ ಅಭಿವೃದ್ಧಿ ಮತ್ತು ಆಹಾರ ಭದ್ರತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸುತ್ತೂರು ಜಾತ್ರಾ ಮಹೋತ್ಸವ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.ಒಂದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಸುತ್ತೂರು ಮಠ ಶಿಕ್ಷಣಕ್ಕೆ ಮೊದಲಿನಿಂದಲೂ ಹೆಚ್ಚು ಒತ್ತು ಕೊಡುತ್ತಾ ಬಂದಿದೆ. ಧಾರ್ಮಿಕವಾಗಿ ತೊಡಗಿಸಿಕೊಂಡಿರುವ ಜೊತೆಗೆ ಜ್ಞಾನ ಮತ್ತು ಅನ್ನದಾಸೋಹಕ್ಕೆ ಮಹತ್ವ ನೀಡಿದೆ

ಶಿಕ್ಷಣದಿಂದ ಮಾತ್ರ ಸ್ವಾಭಿಮಾನ ಬರಲು ಸಾಧ್ಯವಾಗುವುದರಿಂದ ಶಿಕ್ಷಣವೇ ಬಹಳ ಮುಖ್ಯ. ನೂರಕ್ಕೆ ಶೇ.75% ಜನ ಶಿಕ್ಷಣ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಅದನ್ನು ಮನಗಂಡ ಮಠ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿದೆ ಎಂದರು.

ಎಲ್ಲ ಧರ್ಮಕ್ಕಿಂತ ಮಾನವ ಧರ್ಮ ಮೇಲು

ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ ಎಂದು ಬಸವಣ್ಣ ಧರ್ಮದ ಕುರಿತು ವ್ಯಾಖ್ಯಾನ ಮಾಡಿದ್ದಾರೆ. ಎಲ್ಲ ಧರ್ಮಕ್ಕಿಂತ ಮಾನವ ಧರ್ಮ ಮೇಲು ಎಂದು ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲರೂ ಮೂಲತಃ ಮನುಷ್ಯರು. ಯಾವುದೇ ಧರ್ಮವಿದ್ದರೂ ಮನುಷ್ಯರು ಪರಸ್ಪರ ಪ್ರೀತಿಸಬೇಕು ಎಂದು ಹೇಳುತ್ತದೆಯೇ ವಿನ: ದ್ವೇಷ ಮಾಡಿ ಎಂದು ಹೇಳಿಕೊಡುವುದಿಲ್ಲ. ಇದೇ ಸಮಾಜಕ್ಕೆ ನಾವು ಕೊಡುವ ಕೊಡುಗೆ ಎಂದರು.

ಉತ್ಖನನದ ವೇಳೆ ಲಕ್ಕುಂಡಿಯಲ್ಲಿ ಪತ್ತೆಯಾಯ್ತು ಪುರಾತನ ಶಿವಲಿಂಗ!

0

ಗದಗ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಕಾರ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ. ಉತ್ಖನನ ಸ್ಥಳಕ್ಕೆ ಪುರಾತತ್ವ ಇಲಾಖೆ ಮೈಸೂರು, ಹಂಪಿ ಹಾಗೂ ಧಾರವಾಡ ವಲಯದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ನಾಗರ ಹೆಡೆ ಕೆತ್ತನೆಯ ಮತ್ತೊಂದು ಅಪರೂಪದ ಶಿಲ್ಪಕಲಾಕೃತಿ ಪತ್ತೆಯಾಗಿದೆ. ಹೌದು ನಿನ್ನೆ ಉತ್ಖನನ ವೇಳೆ ಪತ್ತೆಯಾದ ಶಿವಲಿಂಗ ಮತ್ತು ಪಾನಿ ಪೀಠದ ಶಿಲಾನ್ಯಾಸವನ್ನು ಅಧಿಕಾರಿಗಳು ವೀಕ್ಷಿಸಿದರು. ಇದೇ ವೇಳೆ ಉತ್ಖನನದ ಸಂದರ್ಭದಲ್ಲಿ ನಾಗರ ಹೆಡೆ ಕೆತ್ತನೆಯ ಮತ್ತೊಂದು ಅಪರೂಪದ ಶಿಲ್ಪಕಲಾಕೃತಿ ಪತ್ತೆಯಾಗಿದೆ.

ಈ ಕುರಿತು ಮಾತನಾಡಿದ ಪುರಾತತ್ವ ಇಲಾಖೆ ಮೈಸೂರು ವಲಯ ಆಯುಕ್ತ ಎ. ದೇವರಾಜು, ಉತ್ಖನನ ಕಾರ್ಯ ಪೂರ್ವನಿಗದಿತವಾಗಿದ್ದು, ಮೇ 15ರಂದು ಅನುಮತಿ ದೊರೆತಿತ್ತು. ಜೂನ್ 3ರಂದು ಮುಖ್ಯಮಂತ್ರಿ ಭೂಮಿ ಪೂಜೆ ನೆರವೇರಿಸಿದ್ದರು. ಮಳೆಗಾಲದ ಕಾರಣ ಆ ವೇಳೆ ಉತ್ಖನನ ಕಾರ್ಯ ಆರಂಭವಾಗಿರಲಿಲ್ಲ. ಕಳೆದ ಮೂರು ದಿನಗಳಿಂದ ಉತ್ಖನನ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.

ದೇವಾಲಯ ಹಾಗೂ ಮುಂದಿನ ಕೊಳದ ನಡುವೆ ಸಂಪರ್ಕವಿದ್ದ ಮಾಹಿತಿ ಲಭ್ಯವಾಗಿದೆ. ಇಲ್ಲಿ ಸಾಕಷ್ಟು ಚಿನ್ನ ಸಿಗಬಹುದು ಎಂದು ಕೆಲವರು ಹೇಳುತ್ತಿದ್ದರೂ, ಚಿನ್ನ ಅಥವಾ ಬೆಳ್ಳಿ ಅನ್ವೇಷಣೆ ನಮ್ಮ ಉದ್ದೇಶವಲ್ಲ. ಇತಿಹಾಸದ ಕುರುಹುಗಳ ಅನ್ವೇಷಣೆಯೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದರು. ನಿಧಿ ಸಿಕ್ಕಿರುವುದು ಕೇವಲ ಆಕಸ್ಮಿಕವಾಗಿದ್ದು, ನಿಧಿ ಹುಡುಕಾಟ ನಡೆಯುತ್ತಿಲ್ಲ. ಇದು ಶಿಲ್ಪಕಲೆ ಮತ್ತು ಪುರಾತತ್ವ ಅವಶೇಷಗಳ ಹುಡುಕಾಟವಾಗಿದೆ ಎಂದು ಹೇಳಿದರು.

ಲಕ್ಕುಂಡಿಯಲ್ಲಿ ಹಿಂದೆ ಟಂಕಸಾಲೆ ಇತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಅದಕ್ಕೆ ದಾಖಲೆ ರೂಪದಲ್ಲಿ ಮುತ್ತು, ರತ್ನ, ಹವಳ ಹಾಗೂ ಚಿನ್ನಾಭರಣಗಳು ಪತ್ತೆಯಾಗಿವೆ. ಇದರಿಂದ ಇಲ್ಲಿ ಟಂಕಸಾಲೆ ಇತ್ತು ಎಂಬುದು ನಿರೂಪಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೇನು ಪತ್ತೆಯಾಗಬಹುದು ಎಂಬ ಕುತೂಹಲವಿದೆ ಎಂದು ತಿಳಿಸಿದರು.

ಇಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದ್ದು, ತಾಂತ್ರಿಕ ಸಮಿತಿಯನ್ನು ರಚಿಸಿ ಪತ್ತೆಯಾದ ಅವಶೇಷಗಳ ಕಾಲಘಟ್ಟವನ್ನು ನಿರ್ಧರಿಸಲಾಗುತ್ತದೆ. ಜೊತೆಗೆ ಸಂಬಂಧಿತ ಕುಟುಂಬಗಳಿಗೆ ಪರಿಹಾರ ನಿಗದಿ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಯುಕ್ತ ಎ. ದೇವರಾಜು ತಿಳಿಸಿದ್ದಾರೆ.

ಭೀಕರ ರಸ್ತೆ ಅಪಘಾತ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು

0

ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿದ ದುರ್ಘಟನೆ ಭಟ್ಕಳ ತಾಲ್ಲೂಕಿನ ವೆಂಕಟಾಪುರದ ಬಳಿ ನಡೆದಿದೆ.

ಮೃತರನ್ನು ಭಟ್ಕಳದ ಆಜಾದ್ ನಗರ ನಿವಾಸಿ ಮೊಹಮ್ಮದ್ ಅಶ್ರಫ್ ರುಕ್ನುದ್ದೀನ್ ಶಿಪಾಯಿ ಅವರ ಪುತ್ರರಾದ ಬಿಲಾಲ್ (15) ಹಾಗೂ ಆಯಾನ್ (20) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಬಿಲಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಕಾರು ಚಾಲನೆ ಮಾಡುತ್ತಿದ್ದ ಆಯಾನ್ ಗಂಭೀರವಾಗಿ ಗಾಯಗೊಂಡಿದ್ದರು.

ಅವರನ್ನು ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಆಯಾನ್ ಸಾವನ್ನಪ್ಪಿದ್ದಾರೆ.ಶಿರಾಲಿಯಿಂದ ಭಟ್ಕಳದ ಕಡೆಗೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ಕುರಿತು ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ದೇಶದಲ್ಲಿ ವಿಶ್ವಾಸ ಕಳೆದುಕೊಂಡಿದೆ: ಪ್ರಧಾನಿ ಮೋದಿ

0

ಅಸ್ಸಾಂ: ಬಿಜೆಪಿ ದೇಶದ ಜನರ ಮೊದಲ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷವು ತನ್ನ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಸ್ಸಾಂನ ಕಲಿಯಾಬೋರ್‌ನಲ್ಲಿ 6,957 ಕೋಟಿ ರೂ. ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ಎರಡು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ನಕಾರಾತ್ಮಕ ರಾಜಕೀಯವನ್ನು ದೇಶದ ಜನರು ಸಂಪೂರ್ಣವಾಗಿ ತಿರಸ್ಕರಿಸುತ್ತಿದ್ದಾರೆ ಎಂದರು. ಮುಂಬೈನಲ್ಲಿ ಕಾಂಗ್ರೆಸ್ ಈಗ ನಾಲ್ಕನೇ ಅಥವಾ ಐದನೇ ಸ್ಥಾನಕ್ಕೆ ಕುಸಿದಿದೆ. ವರ್ಷಗಳ ಆಡಳಿತದ ನಂತರವೂ ಮಹಾರಾಷ್ಟ್ರವನ್ನು ಕಾಂಗ್ರೆಸ್ ಹಾಳು ಮಾಡಿದೆ. ಯಾವುದೇ ಅಭಿವೃದ್ಧಿ ದೃಷ್ಟಿಕೋನವಿಲ್ಲದ ಕಾಂಗ್ರೆಸ್ ಅಸ್ಸಾಂಗೆ ಅಥವಾ ಕಾಜಿರಂಗಕ್ಕೆ ಒಳಿತನ್ನು ತರಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಕಳೆದ ಒಂದೂವರೆ ವರ್ಷಗಳಲ್ಲಿ ಬಿಜೆಪಿಯ ಮೇಲಿನ ಜನರ ವಿಶ್ವಾಸ ನಿರಂತರವಾಗಿ ಹೆಚ್ಚಾಗಿದೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಚುನಾವಣೆಯಲ್ಲಿ, 20 ವರ್ಷಗಳ ನಂತರವೂ ಜನರು ಬಿಜೆಪಿಗೆ ದಾಖಲೆಯ ಮತಗಳನ್ನು ನೀಡಿದ್ದು, ಪಕ್ಷ ದಾಖಲೆಯ ಸ್ಥಾನಗಳನ್ನು ಗಳಿಸಿದೆ ಎಂದು ಮೋದಿ ಹೇಳಿದರು.

ಕಾಜಿರಂಗ ಅಸ್ಸಾಂನ ಆತ್ಮವಾಗಿದ್ದು, ಕೇವಲ ರಾಷ್ಟ್ರೀಯ ಉದ್ಯಾನವಲ್ಲ ಎಂದು ಪ್ರಧಾನಿ ಹೇಳಿದರು. ಇದು ಭಾರತದ ಜೀವವೈವಿಧ್ಯದ ಅಮೂಲ್ಯ ಸಂಪತ್ತಾಗಿದ್ದು, ಯುನೆಸ್ಕೋ ವಿಶ್ವ ಪರಂಪರಾ ತಾಣವಾಗಿ ಗುರುತಿಸಿದೆ. ಬೋಡೋ ಸಮುದಾಯದ ಯುವತಿಯರು ಬಾಗೂರುಂಬಾ ನೃತ್ಯದ ಮೂಲಕ ಹೊಸ ದಾಖಲೆ ನಿರ್ಮಿಸಿದ್ದು, 10,000ಕ್ಕೂ ಹೆಚ್ಚು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

error: Content is protected !!