ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಗುರು ಪೂರ್ಣಿಮೆಗಿಂತ ಒಳ್ಳೆಯ ಮುಹೂರ್ತ ಇನ್ನೊಂದಿಲ್ಲ. ಇಂದು ನಮ್ಮಿಂದ ಅಕ್ಷರಾಭ್ಯಾಸದ ದೀಕ್ಷೆ ಪಡೆದ ಮಕ್ಕಳೆಲ್ಲರೂ ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜಕ್ಕೆ ಉಪಯುಕ್ತವಾಗುವ ವ್ಯಕ್ತಿಗಳಾಗಲಿ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಪಟ್ಟಣದ ಹಿರೇಮಠದಲ್ಲಿ ಗುರುಪೂರ್ಣಿಮೆಯ ನಿಮಿತ್ತ ಗುರುವಾರ ಶ್ರೀಮಠಕ್ಕೆ ಆಗಮಿಸಿದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ, ನೆರೆದ ತಾಯಂದಿರನ್ನುದ್ದೇಶಿಸಿ ಶ್ರೀಗಳವರು ಆಶೀರ್ವಚನ ನೀಡಿದರು.
ಇಂದು ವೇದವ್ಯಾಸರು ಜನಿಸಿದ ದಿನ. ಅತ್ಯಂತ ಜ್ಞಾನವಂತರಾಗಿದ್ದ ವೇದವ್ಯಾಸರು ಜನಿಸಿದ ಈ ಪೂರ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಆಚರಿಸಿ, ಅವರಿಗೆ ಗೌರವವನ್ನು ಸಲ್ಲಿಸಲಾಗುತ್ತಿದೆ. ಇದರೊಂದಿಗೆ ಈ ದಿನವನ್ನು ಜನರು ತಮಗೆ ಅಕ್ಷರಾಭ್ಯಾಸ ನೀಡಿದ ಗುರುಗಳನ್ನು ನೆನಯುವ ದಿನವನ್ನಾಗಿಯೂ ಆಚರಿಸುತ್ತಾರೆ. ತಾಯಂದಿರು ನಾವು ಶ್ರೀಮಠದಲ್ಲಿದ್ದಾಗ ನಿಮ್ಮ ಮಕ್ಕಳನ್ನು ಯಾವಾಗ ಬೇಕಾದರೂ ಕರೆದುಕೊಂಡು ಬಂದು ಅಕ್ಷರಾಭ್ಯಾಸ ಮಾಡಿಸಿಕೊಂಡು ಹೋಗಬಹುದೆಂದರು.
ಈ ಸಂದರ್ಭದಲ್ಲಿ ಡಾ. ಆರ್.ಕೆ. ಗಚ್ಚಿನಮಠ, ಎಸ್.ಕೆ. ಪಾಟೀಲ, ಈಶ್ವರ ಬೆಟಗೇರಿ ಮುಂತಾದವರಿದ್ದರು.