Home Blog Page 64

ಮೊಬೈಲ್, ಟಿವಿಯಿಂದ ಮಕ್ಕಳನ್ನು ದೂರವಿಡಿ: ಹಿರಿಯ ವೈದ್ಯೆ ಡಾ. ರಾಧಿಕಾ ಕುಲಕರ್ಣಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳು ಮೊಬೈಲ್ ಹಾಗೂ ಟಿವಿ ನೋಡುವ ರೂಢಿಯನ್ನು ತಪ್ಪಿಸದಿದ್ದಲ್ಲಿ ಮುಂದೊಂದು ದಿನ ಮಕ್ಕಳ ಭವಿಷ್ಯದ ಮೇಲೆ ಬಹು ದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಪಾಲಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು ಎಂದು ಗದಗ ಐಎಂಎ ನಿಕಟಪೂರ್ವ ಅಧ್ಯಕ್ಷೆ, ಹಿರಿಯ ವೈದ್ಯೆ ಡಾ. ರಾಧಿಕಾ ಕುಲಕರ್ಣಿ ಹೇಳಿದರು.

ಅವರು ಗದುಗಿನ ಯುರೋ ಕಿಡ್ಸ್ ಪ್ರಿ-ಸ್ಕೂಲ್‌ನ ವಾರ್ಷಿಕ ಸ್ನೇಹ ಸಮ್ಮೇಳನ, ಪಾರಿತೋಷಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪಾಲಕ ಮತ್ತು ಪೋಷಕರು ಮೊಬೈಲ್ ಮತ್ತು ಟಿವಿಯನ್ನು ಸಂಪರ್ಕ ಮತ್ತು ಜ್ಞಾನಕ್ಕಾಗಿ ಅವಶ್ಯ ಮತ್ತು ಅಗತ್ಯವಿದ್ದಾಗ ಮಾತ್ರ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಣ್ಣ ಮಕ್ಕಳಿಗೆ ಮೊಬೈಲ್ ನೋಡಲು ಕೊಡುವುದರಿಂದ ಕಾಲಕ್ರಮೇಣ ಮಕ್ಕಳು ಅದನ್ನು ಚಟವಾಗಿಸಿಕೊಳ್ಳುತ್ತಾರೆ. ಇದು ಮಕ್ಕಳ ಆರೋಗ್ಯ, ಬೆಳವಣಿಗೆ, ಭವಿಷ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಊಟ, ನಿದ್ದೆ, ಕಲಿಕೆ ಬಗ್ಗೆ ಆಸಕ್ತಿ ಇಲ್ಲದಂತಾಗುತ್ತದೆ ಎಂದರು.

ಯುರೋ ಕಿಡ್ಸ್ ಸ್ಕೂಲ್‌ನ ಅಧ್ಯಕ್ಷರಾದ ಹಿರಿಯ ವೈದ್ಯ ಡಾ. ಹನಮಂತ ಮಾಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಲ್ಪ ಅವಧಿಯಲ್ಲಿ ನಮ್ಮ ಶಾಲೆ ಪಾಲಕ-ಪೋಷಕರ ಮೆಚ್ಚುಗೆಗೆ ಪಾತ್ರವಾಗಿ ಪ್ರಗತಿಯಲ್ಲಿ ಮುನ್ನಡೆದಿದ್ದು, ಬರಲಿರುವ ದಿನಗಳಲ್ಲಿ ಇನ್ನೂ ಉತ್ತಮ ರೀತಿಯ ಸೇವೆಗೆ ಸನ್ನದ್ಧಗೊಳ್ಳಲಿದೆ ಎಂದರು.

ಮುಖ್ಯ ಅತಿಥಿ ಡಾ. ರೇಣುಕಾ ಬಿನ್ನಾಳ ಮಾತನಾಡಿದರು. ಕಾರ್ಯದರ್ಶಿ ಡಾ. ಅರುಣಾ ಮಾಳಿ ವಾರ್ಷಿಕ ವರದಿ ವಾಚಿಸಿದರು, ವಿನ್ಸಂಟ್ ಪಾಟೀಲ ನಿರೂಪಿಸಿದರು. ಶ್ರೇಯಾ ಮಾಳಿ ವಂದಿಸಿದರು.

ಸಮಾರಂಭದಲ್ಲಿ ಡಾ. ಶ್ವೇತಾ ಸಂಕನೂರ, ಊರ್ಮಿಳಾ ಗುರುಪ್ರಸಾದ, ಮಾರುತಿ ಮಾಳಿ, ಶಿವಾನಂದ ಮಾಳಿ, ಮಮತಾ ಪಾಟೀಲ, ಅನಂತ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

ಹಿಂದೂ ದೇವರ ಹೆಸರಿನಲ್ಲಿ ಅನ್ಯಧರ್ಮೀಯರ ವಂಚನೆ: ರಾಜು ಖಾನಪ್ಪನವರ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ದೇವತೆಗಳ ಹೆಸರಿನಲ್ಲಿ ಅನ್ಯಧರ್ಮೀಯರು ನಡೆಸುತ್ತಿರುವ ಮೂಢನಂಬಿಕೆ ಹಾಗೂ ವಂಚನೆಯ ಕೃತ್ಯಗಳನ್ನು ತಡೆಯಲು ಹಿಂದೂ ಸಂಘಟನೆಗಳ ಒಕ್ಕೂಟ ಈ ಬಾರಿ ದೃಢ ಸಂಕಲ್ಪ ಮಾಡಿದೆ ಎಂದು ಕರ್ನಾಟಕ ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಎಚ್ಚರಿಸಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ನಗರದ ಆಶ್ರಯ ಕಾಲನಿ ಮತ್ತು ನರಸಾಪುರ ಕಾಲನಿಗಳ ಕೆಲವು ಮುಸ್ಲಿಂ ಕುಟುಂಬಗಳು ಢೋಂಗಿ ಬಾಬಾಗಳ ಅವತಾರವೆತ್ತಿ ಯಲ್ಲಮ್ಮ, ದುರ್ಗಮ್ಮದೇವಿ ಹಾಗೂ ಬೀರಲಿಂಗೇಶ್ವರ ದೇವರ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಲ್ಲಾ ಒಬ್ಬನೇ ದೇವರು ಎನ್ನುವವರು ಹಿಂದೂ ದೇವತೆಗಳನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿರುವುದು ಖಂಡನೀಯ. ಮುಸ್ಲಿಂ ಧರ್ಮಗುರುಗಳು ಇಂತಹ ಕೃತ್ಯಗಳನ್ನು ಏಕೆ ತಡೆಯುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಕಳೆದ ನಾಲ್ಕೈದು ವರ್ಷಗಳಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಉತ್ಸವ ಸಮಿತಿ ವತಿಯಿಂದ ಮತಾಂತರ ನಿಷೇಧಕ್ಕೆ ಅನೇಕ ಕೆಲಸಗಳನ್ನು ಮಾಡಲಾಯಿತು. ಈ ಬಾರಿ ಹಿಂದೂ ದೇವರನ್ನು ಬಳಸಿಕೊಂಡು ವಂಚನೆ ಮಾಡುತ್ತಿರುವ ಅನ್ಯಧರ್ಮೀಯರ ವಿರುದ್ಧ ಜನರನ್ನು ಜಾಗೃತರನ್ನಾಗಿ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸಂತ ಸೇವಾಲಾರ ಸಂದೇಶಗಳ ಭಿತ್ತಿಪತ್ರ ಅನಾವರಣಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ 2026ನೇ ಸಾಲಿನ ಜಯಂತಿ ಸಮಿತಿ ಅಧ್ಯಕ್ಷ ಪರಮೇಶ ನಾಯಕ, ಮುಖಂಡರಾದ ವಿರೂಪಾಕ್ಷಪ್ಪ ಹೆಬ್ಬಳ್ಳಿ, ಜಗದೀಶ ಪೂಜಾರ, ಮಹೇಶ, ಶಿವಯೋಗಿ ಹಿರೇಮಠ, ಪಿ.ಎಸ್. ಕಾಳೆ, ಸತೀಶ ಕುಂಬಾರ, ವೀರಣ್ಣ ಹೆಬಸೂರ, ಕಿರಣ ಹಿರೇಮಠ, ರಾಜು ಗದ್ದಿ, ಬಸವರಾಜ ಕುರ್ತಕೋಟಿ, ಸುರೇಶ ಹೆಬಸೂರ, ವೆಂಕಟೇಶ ದೊಡ್ಡಮನಿ, ವಿಶಾಲ ಗೋಕಾವಿ ಮುಂತಾದವರು ಉಪಸ್ಥಿತರಿದ್ದರು.

ಈ ವರ್ಷ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಜೊತೆಗೆ ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಆಚರಿಸಬೇಕು ಎಂದು ಉತ್ಸವ ಸಮಿತಿಯ ಪ್ರಸಕ್ತ ಸಾಲಿನ ಅಧ್ಯಕ್ಷ ಪರಮೇಶ ನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದೇ ಫೆ. 19ರಂದು ಸಂಜೆ 5 ಗಂಟೆಗೆ ನಡೆಯುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ರಾಜು ಖಾನಪ್ಪನವರ ತಿಳಿಸಿದರು.

ಬೀದರ್| ಮಧ್ಯಾಹ್ನದ ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಅನ್ನದಲ್ಲಿ ಹುಳು ಪತ್ತೆ!

0

ಬೀದರ್:- ಜಿಲ್ಲೆಯ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಾಏಕಿ ಅಸ್ವಸ್ಥಗೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಶಾಲೆಯಲ್ಲಿ ಎಂದಿನಂತೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸಲಾಗಿತ್ತು. ಊಟ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಮಕ್ಕಳಿಗೆ ವಾಂತಿ ಹಾಗೂ ಬೇಧಿ ಕಾಣಿಸಿಕೊಂಡಿದ್ದು, ಕೆಲವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಇದರಿಂದ ಆತಂಕಗೊಂಡ ಶಿಕ್ಷಕರು ಹಾಗೂ ಪೋಷಕರು ತಕ್ಷಣವೇ ಎಲ್ಲಾ ಮಕ್ಕಳನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಪರಿಶೀಲನೆ ವೇಳೆ ಅನ್ನದಲ್ಲಿ ಹುಳುಗಳು ಪತ್ತೆಯಾಗಿರುವುದು ಪೋಷಕರ ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅಡುಗೆ ಪದಾರ್ಥಗಳನ್ನು ಸರಿಯಾಗಿ ಸ್ವಚ್ಛಗೊಳಿಸದ ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ತಹಶೀಲ್ದಾರ್ ಹಾಗೂ ಬಿಇಒ ಮಕ್ಕಳು ಪಡೆದಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದು ಆರೋಗ್ಯ ವಿಚಾರಿಸಿದರು. ಸದ್ಯ ಎಲ್ಲಾ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು ಮತ್ತು ಗ್ರಾಮಸ್ಥರು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ ಮಹತ್ವದ ಹೆಜ್ಜೆ: ಮಂಜುನಾಥ ಎಸ್. ರಾಠೋಡ

0

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಕ್ರೀಡಾ ಹಾಗೂ ಮೂಲಸೌಕರ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ ಎಂದು ಕ್ರಾಂತಿಸೂರ್ಯ ಜೈಭೀಮ್ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ ಎಸ್. ರಾಠೋಡ ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಟಿಸಿಎಸ್ ದರವನ್ನು ಶೇ. 5ರಿಂದ ಶೇ. 2ಕ್ಕೆ ಇಳಿಸಿರುವುದು ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಮಹತ್ವದ ನಿರ್ಣಯವಾಗಿದೆ. ವಿದೇಶ ಯಾತ್ರೆಗಳ ಮೇಲಿನ ಟಿಸಿಎಸ್ ಕಡಿತ, ಅನಿವಾಸಿ ಭಾರತೀಯರ ಸ್ಥಿರಾಸ್ತಿಗೆ ಸಂಬಂಧಿಸಿದ ಟಿಡಿಎಸ್ ಸರಳೀಕರಣ ಹೂಡಿಕೆ ಉತ್ತೇಜನಕ್ಕೆ ಸಹಕಾರಿ ಆಗಲಿದೆ.

ಆದಾಯ ತೆರಿಗೆ ನಿಯಮಗಳ ಸರಳೀಕರಣ, ಫಾರ್ಮ್‌ಗಳ ಸುಲಭೀಕರಣ, ಸಣ್ಣ ತೆರಿಗೆ ಪಾವತಿದಾರರಿಗೆ ಹೊಸ ವ್ಯವಸ್ಥೆ, ಅಪಘಾತ ವಿಮೆ ಪರಿಹಾರಕ್ಕೆ ತೆರಿಗೆ ವಿನಾಯಿತಿ ಮತ್ತು ವಿದೇಶಿ ಆಸ್ತಿ ಘೋಷಣೆಗೆ ಆರು ತಿಂಗಳ ಸಮಯಾವಕಾಶ ನೀಡಿರುವುದು ಜನಪರ ನಿರ್ಧಾರಗಳಾಗಿವೆ.

ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ರಾಜ್ಯಗಳಿಗೆ ಯುನಿವರ್ಸಿಟಿ ಟೌನ್‌ಶಿಪ್‌ಗಳು, ಪ್ರತೀ ಜಿಲ್ಲೆಗೆ ವಿದ್ಯಾರ್ಥಿನಿ ನಿಲಯ, ಸ್ಕಿಲ್ ಸೆಂಟರ್‌ಗಳ ನಿರ್ಮಾಣ, ರಾಷ್ಟ್ರೀಯ ಹಾಸ್ಪಿಟಾಲಿಟಿ ಸಂಸ್ಥೆಯ ಸ್ಥಾಪನೆ, ಈಶಾನ್ಯ ಭಾರತದಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣ ಘೋಷಣೆಗಳು ಭವಿಷ್ಯದ ಭಾರತ ನಿರ್ಮಾಣಕ್ಕೆ ದಾರಿ ತೋರಿಸುತ್ತವೆ.

ಒಟ್ಟಾರೆ, ಈ ಘೋಷಣೆಗಳು ಸಾಮಾಜಿಕ ನ್ಯಾಯ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಅಭಿವೃದ್ಧಿಯ ಪಯಣಕ್ಕೆ ವೇಗ: ವಸಂತ ಪಡಗದ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಕೇವಲ ಆರ್ಥಿಕ ಪತ್ರವಲ್ಲ, ಅದು ದೇಶದ ಅಭಿವೃದ್ಧಿಯ ಪಯಣಕ್ಕೆ ವೇಗ ನೀಡಿದ ಬಜೆಟ್ ಆಗಿದೆ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಹೇಳಿದ್ದಾರೆ.

ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕತೆಯನ್ನು ಸದೃಢವಾಗಿ ಮುನ್ನಡೆಸುತ್ತಿರುವ ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್, ದೇಶದ ಪ್ರತಿಯೊಬ್ಬ ಪ್ರಜೆಯ ಆಶೋತ್ತರಗಳನ್ನು ಈಡೇರಿಸುವ ವಿಶ್ವಾಸ ಮೂಡಿಸಿದೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರಧಾನಿ ಮೋದಿ ಸರ್ಕಾರದ ದೂರದರ್ಶಿತ್ವದ ದಿಕ್ಸೂಚಿಯಾಗಿದೆ.

ಯುವಶಕ್ತಿ, ಮೂಲಸೌಕರ್ಯ ಮತ್ತು ಕೃಷಿಗೆ ಆದ್ಯತೆ ನೀಡಲಾಗಿದ್ದು, ಈ ಬಜೆಟ್‌ನಲ್ಲಿ ನಮ್ಮ ದೇಶದ ಬೆನ್ನೆಲುಬಾದ ಅನ್ನದಾತ ರೈತರಿಗೆ, ದೇಶದ ಶಕ್ತಿಯಾದ ಯುವಜನತೆಗೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿರುವುದು ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ, ರಾಜ್ಯದ ರೈತರಿಗೆ ಅನುಕೂಲವಾಗುವಂತೆ ತೆಂಗು, ಗೋಡಂಬಿ ಬೆಳೆಗಾರರಿಗೆ ವಿಶೇಷ ಬೆಂಬಲ ಘೋಷಣೆ ರಾಜ್ಯ ಸೇರಿದಂತೆ ರೈಲ್ವೆ, ಹೆದ್ದಾರಿ ಮತ್ತು ಡಿಜಿಟಲ್ ಮೂಲಸೌಕರ್ಯದ ಮೇಲಿನ ಹೂಡಿಕೆ, ಉತ್ಪಾದನಾ ವಲಯಕ್ಕೆ ಹೊಸ ಚೈತನ್ಯ ನೀಡುವ ವಿಶ್ವಾಸ ಮೂಡಿಸಿದೆ.

ಒಟ್ಟಾರೆಯಾಗಿ, 2026-27ರ ಬಜೆಟ್ ವಿಕಸಿತ ಭಾರತದ ನಿರ್ಮಾಣದ ಸಂಕಲ್ಪವನ್ನು ಪುನರುಚ್ಚರಿಸಿದೆ. ದೇಶದ ಆರ್ಥಿಕತೆಯನ್ನು ವಿಶ್ವದ ಅಗ್ರಮಾನ್ಯ ಸ್ಥಾನಕ್ಕೆ ಏರಿಸುವ ಬದ್ಧತೆ, ಭಾರತೀಯರ ಆಶೋತ್ತರಗಳನ್ನು ಈ ಬಜೆಟ್ ಪ್ರತಿಬಿಂಬಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಣಿಪುರದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಮ್ ಖೇಮ್ಚಂದ್ ಸಿಂಗ್ ನೇಮಕ!

0

ಮಣಿಪುರ:- ಮಣಿಪುರದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಬಿಜೆಪಿ ಪಕ್ಷ ಆಯ್ಕೆ ಮಾಡಿದೆ.

2025ರ ಫೆಬ್ರವರಿ 9ರಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಈ ಹುದ್ದೆ ಖಾಲಿಯಾಗಿತ್ತು. ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರದ ನಡುವೆ ನಡೆದ ರಾಜಕೀಯ ಪ್ರಕ್ರಿಯೆಯ ನಂತರ, ಕೇಂದ್ರದಿಂದ ರಾಷ್ರಪತಿ ಆಳ್ವಿಕೆ ಹೇರಲಾಗಿತ್ತು. ಬಿಜೆಪಿ ಶಾಸಕರ ಗುಂಪು ದೆಹಲಿಗೆ ತೆರಳಿ ಅಮಿತ್ ಶಾ ಸೇರಿದಂತೆ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಸಭೆ ನಡೆಸಿ, ಮಣಿಪುರದಲ್ಲಿ ಸರ್ಕಾರ ರಚನೆ ಕುರಿತು ಸಮಾಲೋಚನೆ ನಡೆಸಿತು.

ನಂತರ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಪಕ್ಷದ ರಾಜ್ಯ ಶಾಸಕರ ನಾಯಕರಾಗಿ ಘೋಷಿಸಲಾಯಿತು. ಖೇಮ್ಚಂದ್ ಸಿಂಗ್ 2017 ಮತ್ತು 2022ರಲ್ಲಿ ಸಿಂಗ್ಜಮೈ ವಿಧಾನಸಭಾ ಸ್ಥಾನದಿಂದ ಎರಡು ಅವಧಿಗಳಿಗಾಗಿ ಚುನಾವಣೆಯಲ್ಲಿ ಜಯ ಸಾಧಿಸಿದ್ದರು. 2017ರಲ್ಲಿ ಅವರು ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು ಮತ್ತು ಪೂರ್ಣ 5 ವರ್ಷಗಳ ಅವಧಿ ಸೇವೆ ಸಲ್ಲಿಸಿದ್ದರು. 2022ರ ವಿಧಾನಸಭಾ ಚುನಾವಣೆಯ ನಂತರ, ಖೇಮ್ಚಂದ್ ಸಿಂಗ್ ಅವರನ್ನು ಎರಡನೇ ಬಾರಿಗೆ ಬಿರೇನ್ ಸಿಂಗ್ ಸಂಪುಟಕ್ಕೆ ಸಚಿವರನ್ನಾಗಿ ಸೇರಿಸಲಾಯಿತು. . ಗ್ರಾಮೀಣಾಭಿವೃದ್ಧಿ, ಪಂಚಾಯತಿ ರಾಜ್, ಪುರಸಭೆ ಆಡಳಿತ, ವಸತಿ ಅಭಿವೃದ್ಧಿ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಖಾತೆಗಳನ್ನು ವಹಿಸಲಾಯಿತು. ರಾಷ್ಟ್ರಪತಿ ಆಳ್ವಿಕೆ ಹೇರಲಾಗುವವರೆಗೆ ಅವರು ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಬೆಂಗಳೂರು| ಹುಳಿಮಾವು ಸೈಟ್‌ನಲ್ಲಿ ಸ್ಫೋಟಕ ವಸ್ತು ಪತ್ತೆ; ಸ್ಥಳದಲ್ಲಿ ಆತಂಕ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಆತಂಕ ವಾತಾವರಣ ಉಂಟಾಗಿದೆ.

ಪರಿಶೀಲನೆ ವೇಳೆ, ಬಂಡೆ ಒಡೆಯಲು ಬಳಸುವ ಜಿಲೆಟಿನ್, ಕೇಪ್‌ಗಳು ಮತ್ತು 13 ಜೆಲ್ ಪ್ಯಾಕೆಟ್‌ಗಳು, 23 ಎಲೆಕ್ಟ್ರಿಕ್ ಡಿವೈಸುಗಳು ವಶಕ್ಕೆ ಪಡೆದಿರುವುದು ತಿಳಿದುಬಂದಿದೆ. ಒಂದು ಟ್ರ್ಯಾಕ್ಟರ್ ಮತ್ತು ಜೆಸಿಬಿಯೂ ವಶಕ್ಕೆ ತೆಗೆದುಕೊಂಡಿದ್ದಾರೆ. ಪರಿಸ್ಥಿತಿಯಿಂದ ತಿಳಿದುಬಂದಂತೆ, ಸೈಟ್‌ನಲ್ಲಿ ಕಾರ್ಮಿಕರು ಕಳೆದ ಹದಿನೈದು ದಿನಗಳಿಂದ ಡ್ರಿಲ್ ಮಾಡುತ್ತಿದ್ದವರು. ಇಂದು ಒಂದೇ ಸಾರಿ ಬ್ಲಾಸ್ಟ್ ಮಾಡಲು ಯತ್ನಿಸುತ್ತಿದ್ದು, ಅಕ್ಕಪಕ್ಕದ ಮೂರು–ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಸೈಟಿನಲ್ಲಿ ಹಿಂದೆ ಸಣ್ಣ ಪ್ರಮಾಣದ ಬ್ಲಾಸ್ಟ್ ಆಗಿರುವುದಕ್ಕೂ ಮಾಹಿತಿ ಲಭ್ಯವಿದೆ.

ಜಾಗದ ಮಾಲೀಕರು ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಸ್ಥಳದಲ್ಲಿ ಬಿಬಿಎಂಪಿ ಕೆಲಸ ನಡೆಯುತ್ತಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ. ಈ ಹಿಂದೆ ಎನ್‌ಸಿಐಆರ್‌ ದಾಖಲಿಸಿ ಕಾರ್ಮಿಕರಿಗೆ ವಾರ್ನಿಂಗ್ ನೀಡಲಾಗಿತ್ತು, “ಇನ್ಮುಂದೆ ಮಾಡೊದಿಲ್ಲ” ಎಂದು ಹೇಳಿದರು. ಆದರೆ, ಇಂದು ಅವರು ಜೆಸಿಬಿ ಮತ್ತು ಇಟಾಚಿ ಉಪಕರಣಗಳನ್ನು ಬಳಸಿಕೊಂಡು ಕೆಲಸ ಮುಂದುವರಿಸಿದ್ದನ್ನು ಪೊಲೀಸರು ಕಂಡಿದ್ದಾರೆ. ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ತಂಡಗಳು ಪರಿಶೀಲನೆ ನಡೆಸಿವೆ. ಪೊಲೀಸರು ಬರ್ತಿದ್ದಂತೆ ಕಾರ್ಮಿಕರು ಸ್ಥಳವನ್ನು ತೊರೆದು ಓಡಿದ್ದಾರೆ. ಸದ್ಯ, ಹುಳಿಮಾವು ಪೊಲೀಸರು ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು, ಸಂಪೂರ್ಣ ತನಿಖೆ ಕೈಗೊಂಡಿದ್ದಾರೆ.

ಗದಗ| ಮನೆಗೋಡೆ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು! ಇನ್ನಿಬ್ಬರಿಗೆ ಗಾಯ

0

ಗದಗ :-ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಮಂಗಳವಾರ ‌ಮಧ್ಯಾಹ್ನ ನಡೆದಿದೆ.

ಯಲ್ಲಪ್ಪ ಕೆಳಗೇರಿ ಅವರಿಗೆ ಸೇರಿರುವ ಹಳೆಯ ಮನೆಯ ಗೋಡೆಯನ್ನು ಕೆಡುವು ಸಂದರ್ಭದಲ್ಲಿ, ಗೋಡೆ ಏಕಾಏಕಿ ಕಾರ್ಮಿಕರ ಮೇಲೆ ಕುಸಿದಿದೆ. ಇದರಿಂದಾಗಿ ಮಣ್ಣಿನ ಅವಶೇಷದಡಿ ಸಿಲುಕಿದ ಪರಿಣಾಮ ನಾಗಪ್ಪ ದೊಡ್ಡಮನಿ (60) ಮತ್ತು ಶೇಖಪ್ಪ ಪರಸಪ್ಪನವರ್ (55) ಮೃತಪಟ್ಟಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿದ್ದ ಇಬ್ಬರನ್ನೂ ತಕ್ಷಣ ನರಗುಂದ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಶೇಗಜಿ ವಿರುದ್ಧ ಗಂಭೀರ ಆರೋಪ: ಹುದ್ದೆಯಿಂದ ಅಮಾನತು

0

ಬೆಂಗಳೂರು: ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಜಗನ್ನಾಥ್ ಶೇಗಜಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಆಡಿಯೋ ಲೀಕ್ ಪ್ರಕರಣದ ಹಿನ್ನೆಲೆಯಲ್ಲಿ ಅವರನ್ನು ಗೌರವಾಧ್ಯಕ್ಷ ಸ್ಥಾನದಿಂದ ಅಮಾನತು ಮಾಡಲಾಗಿದೆ.

ಜಗನ್ನಾಥ್ ಶೇಗಜಿ ಅವರು ಬೇರೆ ಗುತ್ತಿಗೆದಾರರೊಂದಿಗೆ ಮಾತನಾಡಿರುವ ಆಡಿಯೋ ಒಂದು ಲೀಕ್ ಆಗಿದ್ದು, ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷರಾಗಿರುವುದರಲ್ಲೇ ಸಣ್ಣ ಗುತ್ತಿಗೆದಾರರಿಗೆ ಬಿಡ್ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆಡಿಯೋದಲ್ಲಿ ಸಣ್ಣ ಗುತ್ತಿಗೆದಾರರಿಂದ ಶೇ.3 ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ಈ ಪ್ರಕರಣದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಜಗನ್ನಾಥ್ ಶೇಗಜಿ ಅವರನ್ನು ಗೌರವಾಧ್ಯಕ್ಷ ಸ್ಥಾನದಿಂದ ಅಮಾನತು ಮಾಡಿದ್ದಾರೆ. ಗೌರವಾಧ್ಯಕ್ಷ ಸ್ಥಾನದಲ್ಲಿದ್ದುಕೊಂಡೇ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಘ ತಿಳಿಸಿದೆ.

ಆದರೆ, ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಜಗನ್ನಾಥ್ ಶೇಗಜಿ ಅವರು, “ಬಿಡ್ ವಿತ್‌ಡ್ರಾ ಮಾಡಲು ನಾನು ಯಾರ ಮೇಲೂ ಒತ್ತಾಯ ಮಾಡಿಲ್ಲ. ಇಂಜಿನಿಯರ್‌ಗಳೇ ಗುತ್ತಿಗೆದಾರರ ನಡುವೆ ಕಾಂಪ್ರೋಮೈಸ್ ಮಾಡಿಸಿದ್ದಾರೆ. ವಿತ್‌ಡ್ರಾ ಮಾಡುವವರಿಗೆ ಶೇ.3 ರಷ್ಟು ಹಣ ನೀಡುವಂತೆ ಸ್ವತಃ ಮುಖ್ಯ ಇಂಜಿನಿಯರ್ ಹೇಳಿದ್ದಾರೆ” ಎಂದು ಸ್ಪಷ್ಟನೆ ನೀಡಿದ್ದಾರೆ.

“ಕೆಲವು ಗುತ್ತಿಗೆದಾರರು ನನ್ನ ಬಳಿ ಬಂದು ಶೇ.3 ಬೇಡ, ಶೇ.2.5 ಮಾಡಿ ಎಂದು ಕೇಳಿದ್ದರು. ನೀವು ಕಾಂಪ್ರೋಮೈಸ್ ಮಾಡಿಕೊಂಡಿದ್ದೀರಿ, ಮಾಡಿಕೊಂಡ ಮೇಲೆ ಮಾತಾಡಿದಷ್ಟು ಕೊಡಿ ಎಂದು ಮಾತ್ರ ಹೇಳಿದ್ದೇನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ” ಎಂದು ಅವರು ತಿಳಿಸಿದ್ದಾರೆ.ಇದಲ್ಲದೆ, “ಟೆಂಡರ್ ಬಾಕ್ಸ್ ಓಪನ್ ಮಾಡಲು ಮಾತ್ರ ನಾನು ಒತ್ತಾಯಿಸಿದ್ದೇನೆ. ನನ್ನ ಮುಖಕ್ಕೆ ಮಸಿ ಬಳಿಯುವ ಉದ್ದೇಶದಿಂದ ಈ ಕುತಂತ್ರ ನಡೆಸಲಾಗಿದೆ. ಹಣ ಕೊಡುವ ಈ ಪದ್ದತಿ ಹಿಂದಿನಿಂದಲೂ ಇದೆ. ಈ ಪದ್ದತಿ ಬಂದ್ ಆಗಬೇಕು ಎಂದು ನಾನು ಹೇಳುತ್ತಿದ್ದೇನೆ” ಎಂದು ಜಗನ್ನಾಥ್ ಶೇಗಜಿ ಹೇಳಿದರು.

ಚಿತ್ರದುರ್ಗ ಜಿಲ್ಲೆಯ 7,880 ರೈತರಿಗೆ 12.40 ಕೋಟಿ ರೂ. ಬೆಳೆ ವಿಮಾ ಪರಿಹಾರ ಬಿಡುಗಡೆ

0

ನವದೆಹಲಿ: ಚಿತ್ರದುರ್ಗ ಜಿಲ್ಲೆಯ ರೈತರು 2025ರ ಖರೀಫ್ ಹಂಗಾಮಿನಲ್ಲಿ ಎದುರಿಸಿದ ಪ್ರಕೃತಿ ವಿಕೋಪಗಳಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಸುಮಾರು 7,880 ರೈತರಿಗೆ ಒಟ್ಟು 12.40 ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ.

ಲೋಕಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಕೇಳಿದ ಚುಕ್ಕೆರಹಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಆರ್.ಎನ್.ಕೆ. ಠಾಕೂರ್ ಅವರು ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ 2016ರಿಂದ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದು, ಇದುವರೆಗೆ ರಾಜ್ಯದಲ್ಲಿ 1.34 ಕೋಟಿ ಅರ್ಜಿಗಳಿಗೆ ಒಟ್ಟು 18,783 ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಗೆ ಬಿಡುಗಡೆಗೊಂಡಿರುವ 12.40 ಕೋಟಿ ರೂ. ಪರಿಹಾರವು ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಒಳಗಾಗಿದ್ದ ರೈತ ಕುಟುಂಬಗಳಿಗೆ ಮಹತ್ವದ ಆರ್ಥಿಕ ನೆರವಾಗಿದ್ದು, ಅವರ ಜೀವನೋಪಾಯಕ್ಕೆ ಹೊಸ ಭರವಸೆಯನ್ನು ನೀಡಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಮೂಲಕ ರೈತರಿಗೆ ಸಂಕಷ್ಟದ ಸಮಯದಲ್ಲಿ ರಕ್ಷಾಕವಚ ಒದಗಿಸಲಾಗುತ್ತಿದ್ದು, ಬೆಳೆ ನಷ್ಟದ ಭಾರವನ್ನು ತಗ್ಗಿಸಲು ಈ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

error: Content is protected !!