Home Blog Page 63

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕ ರಂಗಣ್ಣ ಅರೆಸ್ಟ್!

0

ಚಿತ್ರದುರ್ಗ:- ಒಂದು ವರ್ಷದಿಂದ ನಿರಂತರವಾಗಿ ನಾಲ್ಕು–ಐದು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಶಿಕ್ಷಕನನ್ನು ಭರಮಸಾಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯರನ್ನು ಖಾಸಗಿ ಕೊಠಡಿಗೆ ಕರೆಸಿ ಅವರ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. 2025ರ ಜುಲೈ 25ರಂದು ಧರ್ಮಸ್ಥಳಕ್ಕೆ ನಡೆದ ಪ್ರವಾಸದ ಸಂದರ್ಭದಲ್ಲೂ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, ಈ ವಿಚಾರವನ್ನು ಒಬ್ಬ ಬಾಲಕಿ ಮನೆಗೆ ಬಂದು ಪೋಷಕರಿಗೆ ತಿಳಿಸಿದ್ದಾಳೆ.

ಬಳಿಕ ಪೋಷಕರು ವಿಷಯವನ್ನು ಮುಖ್ಯ ಶಿಕ್ಷಕರಿಗೆ ತಿಳಿಸಿದ್ದು, ಅವರು ಶಾಲಾ ಆಡಳಿತಾಧಿಕಾರಿಗೆ ದೂರು ನೀಡಿದ್ದಾರೆ. ಆಡಳಿತಾಧಿಕಾರಿ ಆರೋಪಿತ ಶಿಕ್ಷಕ ರಂಗಣ್ಣನನ್ನು ಬೇರೆಡೆಗೆ ವರ್ಗಾವಣೆ ಮಾಡಿ ತನಿಖಾ ಸಮಿತಿ ರಚಿಸಿದ್ದು, ತನಿಖೆಯಲ್ಲಿ ಆರೋಪ ಸತ್ಯವೆಂದು ದೃಢಪಟ್ಟಿದೆ. ಇದರ ಆಧಾರದಲ್ಲಿ ಕಳೆದ ಎರಡು ದಿನಗಳ ಹಿಂದೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಇಓ ಸಮೇತ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಂತರ ವರ್ಗಾವಣೆಯಾಗಿ ಹಿರಿಯೂರು ತಾಲೂಕಿನಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ರಂಗಣ್ಣನನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಾನಪದ ಕಲೆ ಅವನತಿಯ ಅಂಚಿನಲ್ಲಿದೆ: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಮ್ಮ ನಾಡಿನ ಹಬ್ಬಗಳು, ಜಾತ್ರೆ, ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೂ ಹೇಳಿಕೊಡುವ ಕಾರ್ಯವನ್ನು ಮಾಡುವುದು ಅಗತ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಸಮೀಪದ ಗೊಜನೂರ ಗ್ರಾಮದ ಬಾಲಲೀಲಾ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ತಂತ್ರಜ್ಞಾನದ ಪ್ರಭಾವದಿಂದ ಜನಪದ ಕಲೆ, ಸಂಸ್ಕೃತಿಗಳು ಅವನತಿಯ ಅಂಚಿನಲ್ಲಿವೆ. ಡೊಳ್ಳಿನ ಪದಗಳು, ಹಂತಿಯ ಪದಗಳು, ತೊಗಲು ಗೊಂಬೆಯಾಟ, ದೊಡ್ಡಾಟಗಳು, ಪೌರಾಣಿಕ ಕತೆಗಳ ನಾಟಕಗಳು ಸೇರಿದಂತೆ ವಿವಿಧ ಕಲೆ-ಸಂಸ್ಕೃತಿಗಳು ಇಂದು ಆಧುನಿಕತೆಯ ಹೊಡೆತಕ್ಕೆ ಸಿಲುಕಿ ನಶಿಸಿ ಹೋಗುತ್ತಿವೆ. ಇಂತಹ ಜಾತ್ರಾ ಮಹೋತ್ಸವಗಳಲ್ಲಿ ಕಲೆಗಳ ಪ್ರದರ್ಶನ ಏರ್ಪಡಿಸುವ ಮೂಲಕ ಪುರಾತನ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷ ಮಂಜುನಾಥ ಚಲವಾದಿ ಹಾಗೂ ಜಾನಪದ ಕಲಾವಿದ ಸಂಕ್ರಣ್ಣ ಸಂಕಣ್ಣವರ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ಮಹಾಂತಗೌಡ ಪಾಟೀಲ, ರಮೇಶ ದನದಮನಿ, ಬಸವರಾಜ ಸಂಶಿ, ಶಂಬುಲಿಂಗಪ್ಪ ಸೊರಟೂರ, ಗಂಗಾಧರ ಮೆಣಸಿನಕಾಯಿ, ಕರಿನಿಂಗಣ್ಣವರ, ಬಸವರಾಜ ದನದಮನಿ ಇದ್ದರು.

ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದೆ ಸಾವಿತ್ರಿ ಲಮಾಣಿ ಸುಗಮ ಸಂಗೀತದಲ್ಲಿ ಬಸವಣ್ಣನವರ ವಚನ ಹಾಗೂ ಸಂತ ಶಿಶುನಾಳ ಶರೀಫರ ತತ್ವಪದ ಹಾಡಿ ಮನರಂಜಿಸಿದರು. ರಾಚಯ್ಯ ಮುಧೋಳ ಅವರ ಜೋಗತಿ ನೃತ್ಯವು ಸಭೆಯಲ್ಲಿ ನೆರೆದಿದ್ದವರಲ್ಲಿ ರೋಮಾಂಚನ ಉಂಟು ಮಾಡಿತು. ವಿರೂಪಾಕ್ಷಪ್ಪ ಕ್ಷತ್ರಿಯ ಅವರು ನಡೆಸಿಕೊಟ್ಟ ತೊಗಲು ಗೊಂಬೆಯಾಟ, ಅಶೋಕ ಸುತಾರ ಅವರ ದೊಡ್ಡಾಟವು ಹಳೆಯ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿತು. ಸಮೂಹ ನೃತ್ಯ, ಗೀಗಿ ಪದ, ಲಾವಣಿ ಪದ, ಡೊಳ್ಳಿನ ಪದಗಳನ್ನು ಹಾಡುವ ಮೂಲಕ ಸಂಸ್ಕೃತಿಯ ಪರಿಚಯಿಸುವುದು ಕಾರ್ಯ ಮಾಡಿದರು.

ಸಮಾರಂಭದಲ್ಲಿ 14 ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಕುಮಾರ ಸಪಡ್ಲ, ನವೀನ ಪತ್ತಾರ ಇದ್ದರು. ಬಸವರಾಜ ಈರನವರ ಕಾರ್ಯಕ್ರಮ ನಿರ್ವಹಿಸಿದರು.

ಜಿ.ಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡರ ಮಾತನಾಡಿ, ಜಾನಪದ ಕಲೆಗಳು ನಮ್ಮ ಪ್ರಾಚೀನ ಪರಂಪರೆಯ ಕೊಂಡಿಗಳಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಮ್ಮ ಜನಪದ ಕಲೆಗಳಿಗೆ ಜೀವ ತುಂಬುವ ಕಾರ್ಯ ಮಾಡುತ್ತಿದೆ. ಇಂತಹ ಜನಪದ ಕಲೆಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಪುರಾತನ ಸಂಸ್ಕೃತಿ ಕಾಪಾಡುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಅವಿಭಕ್ತ ಕುಟುಂಬಗಳು ಒಟ್ಟಾಗಿ ಬಾಳಬೇಕಿದೆ: ಜ. ಬೂದೀಶ್ವರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ನಾನು, ನನ್ನ ಹೆಂಡತಿ, ನಮ್ಮ ಮಕ್ಕಳು ಈ ಚೌಕಟ್ಟನ್ನೇ ಅವಿಭಕ್ತ ಕುಟುಂಬ ಎನ್ನುವ ಭ್ರಮೆಯಲ್ಲಿರುವರೇ ಹೆಚ್ಚಿರುವ ಇಂದಿನ ದಿನಮಾನಗಳಲ್ಲಿ, ಗೋಡೆ ಕಟ್ಟಿಕೊಂಡು ಬೇರೆಯಾಗಿ ಬದುಕುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ನಿಜವಾದ ಅವಿಭಕ್ತ ಕುಟುಂಬಗಳು ಒಟ್ಟಾಗಿ ಬಾಳಬೇಕಾದ ಅವಶ್ಯಕತೆ ಇದೆ ಎಂದು ಹೊಸಳ್ಳಿಯ ಜ. ಬೂದೀಶ್ವರ ಸಂಸ್ಥಾನಮಠದ ಪೂಜ್ಯ ಅಭಿನವ ಜ. ಬೂದೀಶ್ವರ ಮಹಾಸ್ವಾಮಿಗಳು ಹೇಳಿದರು.

ಅವರು ಗದುಗಿನ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದ ಆವರಣದ ವಿವೇಕಾನಂದ ಸಾಂಸ್ಕೃತಿಕ ಸಭಾ ಭವನದಲ್ಲಿ ರಾಮಪ್ಪ ರಂಗಪ್ಪ ಕಾಶಪ್ಪನವರ ಅಭಿಮಾನಿ ಬಳಗ ಗದಗ ಇವರ ಸಹಕಾರದೊಂದಿಗೆ ಗದುಗಿನ ಶ್ರೀ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಗದಗ ಇವರ ಸಹಯೋಗದಲ್ಲಿ ರಾಮಪ್ಪ ರಂಗಪ್ಪ ಕಾಶಪ್ಪನವರ ಸೇವಾ ನಿವೃತ್ತಿ ನಿಮಿತ್ತ `ಅವಿಭಕ್ತ ಕುಟುಂಬದ ಸಾರಥಿ’ ಗ್ರಂಥ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅವಿಭಕ್ತ ಕುಟುಂಬದಲ್ಲಿರುವ ಪ್ರೀತಿ, ಅಂತಃಕರಣ, ವಿಶಾಲ ಮನೋಭಾವ, ಒಗ್ಗಟ್ಟು ಇವುಗಳನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಜವಾಬ್ದಾರಿ ಪಾಲಕರ ಮೇಲಿದೆ. ಅವಿಭಕ್ತ ಕುಟುಂಬವನ್ನು ಈಗಲೂ ಮುನ್ನಡೆಸುತ್ತಿರುವ ಪ್ರೀತಿ-ಬಾಂಧವ್ಯಗಳನ್ನು ಗಟ್ಟಿಯಾಗಿ ಜೋಪಾನವಾಗಿರಿಸಿಕೊಂಡಿರುವ ರಾಮಪ್ಪ ಕಾಶಪ್ಪನವರ ಕುಟುಂಬ ವರ್ಗವನ್ನು ಅಭಿನಂದಿಸಿ ಇದೊಂದು ಮಾದರಿ ಎಂದರು.

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ ಮಾಡಿದರು.

ಅಭಿನಂದನಾ ನುಡಿಗಳನ್ನಾಡಿದ ಗದಗ ಸಾಯಿ ಮಂದಿರದ ಸಂಸ್ಥಾಪಕ ಅಧ್ಯಕ್ಷ ಡಾ. ಎಸ್.ಬಿ. ಶೆಟ್ಟರ, ಕಾಶಪ್ಪನವರ ಸಾಮಾಜಿಕ ಕಾರ್ಯಗಳನ್ನು ಹಾಗೂ ಅವಿಭಕ್ತ ಕುಟುಂಬವನ್ನು ಮುನ್ನಡೆಸಿಕೊಂಡು ಬಂದಿರುವುದನ್ನು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ರಾಮಣ್ಣ ಕಾಶಪ್ಪನವರ 40 ವರ್ಷದ ವೃತ್ತಿ ಬದುಕನ್ನು ಮೆಲುಕು ಹಾಕಿದರು. ವೇದಿಕೆಯ ಮೇಲೆ ಆರ್.ಆರ್. ಕಾಶಪ್ಪನವರ ದಂಪತಿ, ಶಕುಂತಲಾ ದಂಡಿನ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಗಣ್ಯರಾದ ವ್ಹಿ.ವೈ. ಮಕ್ಕಣ್ಣವರ, ಶಾಂತಣ್ಣ ಕಡಿವಾಲ, ಬಿ.ಎನ್. ಯರನಾಳ, ಶಂಕರ ಹಾನಗಲ್ಲ, ಎಂ.ಎನ್. ಕಾಮನಹಳ್ಳಿ, ಎ.ಕೆ. ತಮ್ಮಣ್ಣವರ, ಮಹೇಶ ತಲೇಗೌಡ್ರ, ಡಾ. ಎಸ್.ಎಫ್. ಜಕಬಾಳ, ಸಿದ್ಧಣ್ಣ ಪಟ್ಟಣಶೆಟ್ಟಿ, ಎ.ಟಿ. ನರೇಗಲ್ಲ, ಎಸ್.ಎಸ್. ಪಾಟೀಲ, ವ್ಹಿ.ಕೆ. ಗುರುಮಠ, ಎಸ್.ಕೆ. ವಂಡಕರ ಆಗಮಿಸಿದ್ದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು.

ಗ್ರಂಥಕಾರ, ಪತ್ರಕರ್ತ ಅಂದಾನೆಪ್ಪ ವಿಭೂತಿ ಅವರು ರಾಮಪ್ಪ ಕಾಶಪ್ಪನವರು ನಡೆದುಬಂದ ಬದುಕಿನ ದಾರಿ ಹಾಗೂ ಗ್ರಂಥದ ಬಗೆಗೆ ವಿವರಿಸಿದರು. ಆಶಯ ನುಡಿಗಳನ್ನಾಡಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, 18ನೇ ವಯಸ್ಸಿನಲ್ಲೇ ದುಡಿಯಲು ಪ್ರಾರಂಭಿಸಿದ ರಾಮಪ್ಪನವರ ಪರಿಶ್ರಮದ ಬದುಕನ್ನು ಬಣ್ಣಿಸಿದರು.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಬುಧವಾರ ವಿದ್ಯುತ್ ವ್ಯತ್ಯಯ; ಪವರ್ ಇಲ್ಲದ ಏರಿಯಾಗಳ ಪಟ್ಟಿ ಇಲ್ಲಿದೆ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಬುಧವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಫೆಬ್ರವರಿ 4ರ ಬುಧವಾರ ಬೆಳ್ಳಿಗೆ 11ರಿಂದ ಸಂಜೆ 4 ಗಂಟೆಗಳವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾ ತಿಳಿಸಿದೆ.

ಕಾವಲಬೈರಸಂದ್ರ, ಎಲ್.ಆರ್.ಬಂಡೆ ಮುಖ್ಯರಸ್ತೆ, ಗಾಂಧಿನಗರ, ಚಿನ್ನಣ್ಣ ಲೇಔಟ್, ಅಂಬೇಡ್ಕರ್ ಲೇಔಟ್, ಅನ್ವರ್ ಲೇಔಟ್, ಕಾವೇರಿ ನಗರ, ಅಂಬೇಡ್ಕರ್ ವೈದ್ಯಕೀಯ ಕಾಲೇಜು, ಸುಲ್ತಾನ್ ಪಾಳ್ಯ, ರಂಕಾನಗರ, ಕನಕನಗರ, ಕೆ.ಎಚ್.ಬಿ ಮುಖ್ಯರಸ್ತೆ, ಭುವನೇಶ್ವರಿ ನಗರ, ಡಿ.ಜಿ.ಎ ಹಳ್ಳಿ, ಕೆ.ಜೆ.ಹಳ್ಳಿ, ಕೆ.ಜೆ. ಕಾಲೋನಿ, ಆದರ್ಶ ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ವಿ.ನಾಗೇನಹಳ್ಳಿ, ಪೆರಿಯಾರ್ ನಗರ, ಪೆರಿಯಾರ್ ಸರ್ಕಲ್, ಶಾಂಪುರ, ಕುಶಾಲ ನಗರ, ಮೋದಿ ರಸ್ತೆ, ಮೋದಿ ಗಾರ್ಡೆನ್, ದೊಡ್ಡಣ್ಣ ನಗರ, ಮುನಿವೀರಪ್ಪ ಲೇಔಟ್, ಸುಗರ್ ಮಂಡಿ, ಸಾಲ್ಟ್ ಮಂಡಿ, ಮುನೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಮೊಬೈಲ್, ಟಿವಿಯಿಂದ ಮಕ್ಕಳನ್ನು ದೂರವಿಡಿ: ಹಿರಿಯ ವೈದ್ಯೆ ಡಾ. ರಾಧಿಕಾ ಕುಲಕರ್ಣಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳು ಮೊಬೈಲ್ ಹಾಗೂ ಟಿವಿ ನೋಡುವ ರೂಢಿಯನ್ನು ತಪ್ಪಿಸದಿದ್ದಲ್ಲಿ ಮುಂದೊಂದು ದಿನ ಮಕ್ಕಳ ಭವಿಷ್ಯದ ಮೇಲೆ ಬಹು ದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಪಾಲಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು ಎಂದು ಗದಗ ಐಎಂಎ ನಿಕಟಪೂರ್ವ ಅಧ್ಯಕ್ಷೆ, ಹಿರಿಯ ವೈದ್ಯೆ ಡಾ. ರಾಧಿಕಾ ಕುಲಕರ್ಣಿ ಹೇಳಿದರು.

ಅವರು ಗದುಗಿನ ಯುರೋ ಕಿಡ್ಸ್ ಪ್ರಿ-ಸ್ಕೂಲ್‌ನ ವಾರ್ಷಿಕ ಸ್ನೇಹ ಸಮ್ಮೇಳನ, ಪಾರಿತೋಷಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪಾಲಕ ಮತ್ತು ಪೋಷಕರು ಮೊಬೈಲ್ ಮತ್ತು ಟಿವಿಯನ್ನು ಸಂಪರ್ಕ ಮತ್ತು ಜ್ಞಾನಕ್ಕಾಗಿ ಅವಶ್ಯ ಮತ್ತು ಅಗತ್ಯವಿದ್ದಾಗ ಮಾತ್ರ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಣ್ಣ ಮಕ್ಕಳಿಗೆ ಮೊಬೈಲ್ ನೋಡಲು ಕೊಡುವುದರಿಂದ ಕಾಲಕ್ರಮೇಣ ಮಕ್ಕಳು ಅದನ್ನು ಚಟವಾಗಿಸಿಕೊಳ್ಳುತ್ತಾರೆ. ಇದು ಮಕ್ಕಳ ಆರೋಗ್ಯ, ಬೆಳವಣಿಗೆ, ಭವಿಷ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಊಟ, ನಿದ್ದೆ, ಕಲಿಕೆ ಬಗ್ಗೆ ಆಸಕ್ತಿ ಇಲ್ಲದಂತಾಗುತ್ತದೆ ಎಂದರು.

ಯುರೋ ಕಿಡ್ಸ್ ಸ್ಕೂಲ್‌ನ ಅಧ್ಯಕ್ಷರಾದ ಹಿರಿಯ ವೈದ್ಯ ಡಾ. ಹನಮಂತ ಮಾಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಲ್ಪ ಅವಧಿಯಲ್ಲಿ ನಮ್ಮ ಶಾಲೆ ಪಾಲಕ-ಪೋಷಕರ ಮೆಚ್ಚುಗೆಗೆ ಪಾತ್ರವಾಗಿ ಪ್ರಗತಿಯಲ್ಲಿ ಮುನ್ನಡೆದಿದ್ದು, ಬರಲಿರುವ ದಿನಗಳಲ್ಲಿ ಇನ್ನೂ ಉತ್ತಮ ರೀತಿಯ ಸೇವೆಗೆ ಸನ್ನದ್ಧಗೊಳ್ಳಲಿದೆ ಎಂದರು.

ಮುಖ್ಯ ಅತಿಥಿ ಡಾ. ರೇಣುಕಾ ಬಿನ್ನಾಳ ಮಾತನಾಡಿದರು. ಕಾರ್ಯದರ್ಶಿ ಡಾ. ಅರುಣಾ ಮಾಳಿ ವಾರ್ಷಿಕ ವರದಿ ವಾಚಿಸಿದರು, ವಿನ್ಸಂಟ್ ಪಾಟೀಲ ನಿರೂಪಿಸಿದರು. ಶ್ರೇಯಾ ಮಾಳಿ ವಂದಿಸಿದರು.

ಸಮಾರಂಭದಲ್ಲಿ ಡಾ. ಶ್ವೇತಾ ಸಂಕನೂರ, ಊರ್ಮಿಳಾ ಗುರುಪ್ರಸಾದ, ಮಾರುತಿ ಮಾಳಿ, ಶಿವಾನಂದ ಮಾಳಿ, ಮಮತಾ ಪಾಟೀಲ, ಅನಂತ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

ಹಿಂದೂ ದೇವರ ಹೆಸರಿನಲ್ಲಿ ಅನ್ಯಧರ್ಮೀಯರ ವಂಚನೆ: ರಾಜು ಖಾನಪ್ಪನವರ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ದೇವತೆಗಳ ಹೆಸರಿನಲ್ಲಿ ಅನ್ಯಧರ್ಮೀಯರು ನಡೆಸುತ್ತಿರುವ ಮೂಢನಂಬಿಕೆ ಹಾಗೂ ವಂಚನೆಯ ಕೃತ್ಯಗಳನ್ನು ತಡೆಯಲು ಹಿಂದೂ ಸಂಘಟನೆಗಳ ಒಕ್ಕೂಟ ಈ ಬಾರಿ ದೃಢ ಸಂಕಲ್ಪ ಮಾಡಿದೆ ಎಂದು ಕರ್ನಾಟಕ ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಎಚ್ಚರಿಸಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ನಗರದ ಆಶ್ರಯ ಕಾಲನಿ ಮತ್ತು ನರಸಾಪುರ ಕಾಲನಿಗಳ ಕೆಲವು ಮುಸ್ಲಿಂ ಕುಟುಂಬಗಳು ಢೋಂಗಿ ಬಾಬಾಗಳ ಅವತಾರವೆತ್ತಿ ಯಲ್ಲಮ್ಮ, ದುರ್ಗಮ್ಮದೇವಿ ಹಾಗೂ ಬೀರಲಿಂಗೇಶ್ವರ ದೇವರ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಲ್ಲಾ ಒಬ್ಬನೇ ದೇವರು ಎನ್ನುವವರು ಹಿಂದೂ ದೇವತೆಗಳನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿರುವುದು ಖಂಡನೀಯ. ಮುಸ್ಲಿಂ ಧರ್ಮಗುರುಗಳು ಇಂತಹ ಕೃತ್ಯಗಳನ್ನು ಏಕೆ ತಡೆಯುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಕಳೆದ ನಾಲ್ಕೈದು ವರ್ಷಗಳಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಉತ್ಸವ ಸಮಿತಿ ವತಿಯಿಂದ ಮತಾಂತರ ನಿಷೇಧಕ್ಕೆ ಅನೇಕ ಕೆಲಸಗಳನ್ನು ಮಾಡಲಾಯಿತು. ಈ ಬಾರಿ ಹಿಂದೂ ದೇವರನ್ನು ಬಳಸಿಕೊಂಡು ವಂಚನೆ ಮಾಡುತ್ತಿರುವ ಅನ್ಯಧರ್ಮೀಯರ ವಿರುದ್ಧ ಜನರನ್ನು ಜಾಗೃತರನ್ನಾಗಿ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸಂತ ಸೇವಾಲಾರ ಸಂದೇಶಗಳ ಭಿತ್ತಿಪತ್ರ ಅನಾವರಣಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ 2026ನೇ ಸಾಲಿನ ಜಯಂತಿ ಸಮಿತಿ ಅಧ್ಯಕ್ಷ ಪರಮೇಶ ನಾಯಕ, ಮುಖಂಡರಾದ ವಿರೂಪಾಕ್ಷಪ್ಪ ಹೆಬ್ಬಳ್ಳಿ, ಜಗದೀಶ ಪೂಜಾರ, ಮಹೇಶ, ಶಿವಯೋಗಿ ಹಿರೇಮಠ, ಪಿ.ಎಸ್. ಕಾಳೆ, ಸತೀಶ ಕುಂಬಾರ, ವೀರಣ್ಣ ಹೆಬಸೂರ, ಕಿರಣ ಹಿರೇಮಠ, ರಾಜು ಗದ್ದಿ, ಬಸವರಾಜ ಕುರ್ತಕೋಟಿ, ಸುರೇಶ ಹೆಬಸೂರ, ವೆಂಕಟೇಶ ದೊಡ್ಡಮನಿ, ವಿಶಾಲ ಗೋಕಾವಿ ಮುಂತಾದವರು ಉಪಸ್ಥಿತರಿದ್ದರು.

ಈ ವರ್ಷ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಜೊತೆಗೆ ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಆಚರಿಸಬೇಕು ಎಂದು ಉತ್ಸವ ಸಮಿತಿಯ ಪ್ರಸಕ್ತ ಸಾಲಿನ ಅಧ್ಯಕ್ಷ ಪರಮೇಶ ನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದೇ ಫೆ. 19ರಂದು ಸಂಜೆ 5 ಗಂಟೆಗೆ ನಡೆಯುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ರಾಜು ಖಾನಪ್ಪನವರ ತಿಳಿಸಿದರು.

ಬೀದರ್| ಮಧ್ಯಾಹ್ನದ ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಅನ್ನದಲ್ಲಿ ಹುಳು ಪತ್ತೆ!

0

ಬೀದರ್:- ಜಿಲ್ಲೆಯ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಾಏಕಿ ಅಸ್ವಸ್ಥಗೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಶಾಲೆಯಲ್ಲಿ ಎಂದಿನಂತೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸಲಾಗಿತ್ತು. ಊಟ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಮಕ್ಕಳಿಗೆ ವಾಂತಿ ಹಾಗೂ ಬೇಧಿ ಕಾಣಿಸಿಕೊಂಡಿದ್ದು, ಕೆಲವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಇದರಿಂದ ಆತಂಕಗೊಂಡ ಶಿಕ್ಷಕರು ಹಾಗೂ ಪೋಷಕರು ತಕ್ಷಣವೇ ಎಲ್ಲಾ ಮಕ್ಕಳನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಪರಿಶೀಲನೆ ವೇಳೆ ಅನ್ನದಲ್ಲಿ ಹುಳುಗಳು ಪತ್ತೆಯಾಗಿರುವುದು ಪೋಷಕರ ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅಡುಗೆ ಪದಾರ್ಥಗಳನ್ನು ಸರಿಯಾಗಿ ಸ್ವಚ್ಛಗೊಳಿಸದ ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ತಹಶೀಲ್ದಾರ್ ಹಾಗೂ ಬಿಇಒ ಮಕ್ಕಳು ಪಡೆದಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದು ಆರೋಗ್ಯ ವಿಚಾರಿಸಿದರು. ಸದ್ಯ ಎಲ್ಲಾ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು ಮತ್ತು ಗ್ರಾಮಸ್ಥರು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ ಮಹತ್ವದ ಹೆಜ್ಜೆ: ಮಂಜುನಾಥ ಎಸ್. ರಾಠೋಡ

0

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಕ್ರೀಡಾ ಹಾಗೂ ಮೂಲಸೌಕರ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ ಎಂದು ಕ್ರಾಂತಿಸೂರ್ಯ ಜೈಭೀಮ್ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ ಎಸ್. ರಾಠೋಡ ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಟಿಸಿಎಸ್ ದರವನ್ನು ಶೇ. 5ರಿಂದ ಶೇ. 2ಕ್ಕೆ ಇಳಿಸಿರುವುದು ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಮಹತ್ವದ ನಿರ್ಣಯವಾಗಿದೆ. ವಿದೇಶ ಯಾತ್ರೆಗಳ ಮೇಲಿನ ಟಿಸಿಎಸ್ ಕಡಿತ, ಅನಿವಾಸಿ ಭಾರತೀಯರ ಸ್ಥಿರಾಸ್ತಿಗೆ ಸಂಬಂಧಿಸಿದ ಟಿಡಿಎಸ್ ಸರಳೀಕರಣ ಹೂಡಿಕೆ ಉತ್ತೇಜನಕ್ಕೆ ಸಹಕಾರಿ ಆಗಲಿದೆ.

ಆದಾಯ ತೆರಿಗೆ ನಿಯಮಗಳ ಸರಳೀಕರಣ, ಫಾರ್ಮ್‌ಗಳ ಸುಲಭೀಕರಣ, ಸಣ್ಣ ತೆರಿಗೆ ಪಾವತಿದಾರರಿಗೆ ಹೊಸ ವ್ಯವಸ್ಥೆ, ಅಪಘಾತ ವಿಮೆ ಪರಿಹಾರಕ್ಕೆ ತೆರಿಗೆ ವಿನಾಯಿತಿ ಮತ್ತು ವಿದೇಶಿ ಆಸ್ತಿ ಘೋಷಣೆಗೆ ಆರು ತಿಂಗಳ ಸಮಯಾವಕಾಶ ನೀಡಿರುವುದು ಜನಪರ ನಿರ್ಧಾರಗಳಾಗಿವೆ.

ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ರಾಜ್ಯಗಳಿಗೆ ಯುನಿವರ್ಸಿಟಿ ಟೌನ್‌ಶಿಪ್‌ಗಳು, ಪ್ರತೀ ಜಿಲ್ಲೆಗೆ ವಿದ್ಯಾರ್ಥಿನಿ ನಿಲಯ, ಸ್ಕಿಲ್ ಸೆಂಟರ್‌ಗಳ ನಿರ್ಮಾಣ, ರಾಷ್ಟ್ರೀಯ ಹಾಸ್ಪಿಟಾಲಿಟಿ ಸಂಸ್ಥೆಯ ಸ್ಥಾಪನೆ, ಈಶಾನ್ಯ ಭಾರತದಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣ ಘೋಷಣೆಗಳು ಭವಿಷ್ಯದ ಭಾರತ ನಿರ್ಮಾಣಕ್ಕೆ ದಾರಿ ತೋರಿಸುತ್ತವೆ.

ಒಟ್ಟಾರೆ, ಈ ಘೋಷಣೆಗಳು ಸಾಮಾಜಿಕ ನ್ಯಾಯ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಅಭಿವೃದ್ಧಿಯ ಪಯಣಕ್ಕೆ ವೇಗ: ವಸಂತ ಪಡಗದ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಕೇವಲ ಆರ್ಥಿಕ ಪತ್ರವಲ್ಲ, ಅದು ದೇಶದ ಅಭಿವೃದ್ಧಿಯ ಪಯಣಕ್ಕೆ ವೇಗ ನೀಡಿದ ಬಜೆಟ್ ಆಗಿದೆ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಹೇಳಿದ್ದಾರೆ.

ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕತೆಯನ್ನು ಸದೃಢವಾಗಿ ಮುನ್ನಡೆಸುತ್ತಿರುವ ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್, ದೇಶದ ಪ್ರತಿಯೊಬ್ಬ ಪ್ರಜೆಯ ಆಶೋತ್ತರಗಳನ್ನು ಈಡೇರಿಸುವ ವಿಶ್ವಾಸ ಮೂಡಿಸಿದೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರಧಾನಿ ಮೋದಿ ಸರ್ಕಾರದ ದೂರದರ್ಶಿತ್ವದ ದಿಕ್ಸೂಚಿಯಾಗಿದೆ.

ಯುವಶಕ್ತಿ, ಮೂಲಸೌಕರ್ಯ ಮತ್ತು ಕೃಷಿಗೆ ಆದ್ಯತೆ ನೀಡಲಾಗಿದ್ದು, ಈ ಬಜೆಟ್‌ನಲ್ಲಿ ನಮ್ಮ ದೇಶದ ಬೆನ್ನೆಲುಬಾದ ಅನ್ನದಾತ ರೈತರಿಗೆ, ದೇಶದ ಶಕ್ತಿಯಾದ ಯುವಜನತೆಗೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿರುವುದು ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ, ರಾಜ್ಯದ ರೈತರಿಗೆ ಅನುಕೂಲವಾಗುವಂತೆ ತೆಂಗು, ಗೋಡಂಬಿ ಬೆಳೆಗಾರರಿಗೆ ವಿಶೇಷ ಬೆಂಬಲ ಘೋಷಣೆ ರಾಜ್ಯ ಸೇರಿದಂತೆ ರೈಲ್ವೆ, ಹೆದ್ದಾರಿ ಮತ್ತು ಡಿಜಿಟಲ್ ಮೂಲಸೌಕರ್ಯದ ಮೇಲಿನ ಹೂಡಿಕೆ, ಉತ್ಪಾದನಾ ವಲಯಕ್ಕೆ ಹೊಸ ಚೈತನ್ಯ ನೀಡುವ ವಿಶ್ವಾಸ ಮೂಡಿಸಿದೆ.

ಒಟ್ಟಾರೆಯಾಗಿ, 2026-27ರ ಬಜೆಟ್ ವಿಕಸಿತ ಭಾರತದ ನಿರ್ಮಾಣದ ಸಂಕಲ್ಪವನ್ನು ಪುನರುಚ್ಚರಿಸಿದೆ. ದೇಶದ ಆರ್ಥಿಕತೆಯನ್ನು ವಿಶ್ವದ ಅಗ್ರಮಾನ್ಯ ಸ್ಥಾನಕ್ಕೆ ಏರಿಸುವ ಬದ್ಧತೆ, ಭಾರತೀಯರ ಆಶೋತ್ತರಗಳನ್ನು ಈ ಬಜೆಟ್ ಪ್ರತಿಬಿಂಬಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಣಿಪುರದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಮ್ ಖೇಮ್ಚಂದ್ ಸಿಂಗ್ ನೇಮಕ!

0

ಮಣಿಪುರ:- ಮಣಿಪುರದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಬಿಜೆಪಿ ಪಕ್ಷ ಆಯ್ಕೆ ಮಾಡಿದೆ.

2025ರ ಫೆಬ್ರವರಿ 9ರಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಈ ಹುದ್ದೆ ಖಾಲಿಯಾಗಿತ್ತು. ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರದ ನಡುವೆ ನಡೆದ ರಾಜಕೀಯ ಪ್ರಕ್ರಿಯೆಯ ನಂತರ, ಕೇಂದ್ರದಿಂದ ರಾಷ್ರಪತಿ ಆಳ್ವಿಕೆ ಹೇರಲಾಗಿತ್ತು. ಬಿಜೆಪಿ ಶಾಸಕರ ಗುಂಪು ದೆಹಲಿಗೆ ತೆರಳಿ ಅಮಿತ್ ಶಾ ಸೇರಿದಂತೆ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಸಭೆ ನಡೆಸಿ, ಮಣಿಪುರದಲ್ಲಿ ಸರ್ಕಾರ ರಚನೆ ಕುರಿತು ಸಮಾಲೋಚನೆ ನಡೆಸಿತು.

ನಂತರ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಪಕ್ಷದ ರಾಜ್ಯ ಶಾಸಕರ ನಾಯಕರಾಗಿ ಘೋಷಿಸಲಾಯಿತು. ಖೇಮ್ಚಂದ್ ಸಿಂಗ್ 2017 ಮತ್ತು 2022ರಲ್ಲಿ ಸಿಂಗ್ಜಮೈ ವಿಧಾನಸಭಾ ಸ್ಥಾನದಿಂದ ಎರಡು ಅವಧಿಗಳಿಗಾಗಿ ಚುನಾವಣೆಯಲ್ಲಿ ಜಯ ಸಾಧಿಸಿದ್ದರು. 2017ರಲ್ಲಿ ಅವರು ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು ಮತ್ತು ಪೂರ್ಣ 5 ವರ್ಷಗಳ ಅವಧಿ ಸೇವೆ ಸಲ್ಲಿಸಿದ್ದರು. 2022ರ ವಿಧಾನಸಭಾ ಚುನಾವಣೆಯ ನಂತರ, ಖೇಮ್ಚಂದ್ ಸಿಂಗ್ ಅವರನ್ನು ಎರಡನೇ ಬಾರಿಗೆ ಬಿರೇನ್ ಸಿಂಗ್ ಸಂಪುಟಕ್ಕೆ ಸಚಿವರನ್ನಾಗಿ ಸೇರಿಸಲಾಯಿತು. . ಗ್ರಾಮೀಣಾಭಿವೃದ್ಧಿ, ಪಂಚಾಯತಿ ರಾಜ್, ಪುರಸಭೆ ಆಡಳಿತ, ವಸತಿ ಅಭಿವೃದ್ಧಿ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಖಾತೆಗಳನ್ನು ವಹಿಸಲಾಯಿತು. ರಾಷ್ಟ್ರಪತಿ ಆಳ್ವಿಕೆ ಹೇರಲಾಗುವವರೆಗೆ ಅವರು ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದರು.

error: Content is protected !!