Home Blog Page 7

ವಿದ್ಯಾರ್ಥಿಗಳಿಗೆ ಶ್ರದ್ಧೆ, ಶಿಸ್ತು ಬೇಕು

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು ಕಲಿಕೆಯಲ್ಲಿ ಶ್ರದ್ಧೆ, ಶಿಸ್ತು, ಸಂಯಮ, ಬದ್ಧತೆಯನ್ನು ರೂಢಿಸಿಕೊಂಡು ಏಕಾಗ್ರತೆಯಿಂದ ಅಭ್ಯಾಸ ಮಾಡಿದಲ್ಲಿ ಜೀವನದಲ್ಲಿ ಉನ್ನತ ಹಂತವನ್ನು ತಲುಪಲು ಸಾಧ್ಯವಿದೆ ಎಂದು ಡಾ. ರೇಣುಕಾ ಬಿನ್ನಾಳ ಹೇಳಿದರು.

ಅವರು ಬುಧವಾರ ಗದಗ ತಾಲೂಕಿನ ಬೆಳಹೋಡ ಗ್ರಾಮದ ಪುರದಪ್ಪ ವೀರಪ್ಪ ಹೊಸಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಹಿಂದೆ ಗುರು, ಮುಂದೆ ಗುರಿಯನ್ನು ಇಟ್ಟುಕೊಂಡು ಪರಿಶ್ರಮದೊಂದಿಗೆ ಮುನ್ನಡೆದಲ್ಲಿ ಆದರ್ಶ ವ್ಯಕ್ತಿಯಾಗಿ, ಸಾಧಕರಾಗಿ ಹೊರಹೊಮ್ಮಬಲ್ಲರು. ಇಂದು ನೀವು ಪ್ರತಿಷ್ಠಾನದಿಂದ ನಗದು ಪುರಸ್ಕಾರವನ್ನು ಪಡೆದುಕೊಂಡಿದ್ದೀರಿ ಮುಂದಿನ ದಿನಗಳಲ್ಲಿ ನೀವೂ ಪುರಸ್ಕಾರ ನೀಡುವಂತಾಗಬೇಕು ಎಂದರು.

ಮುಖ್ಯ ಅತಿಥಿ, ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನು ವಿವರಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಶಾಲೆಯ ವಿದ್ಯಾರ್ಥಿಗಳಾದ ಸೌಭಾಗ್ಯ ಹೊಸಳ್ಳಿ, ದೇವಮ್ಮ ಹುಲಕೋಟಿ, ರಕ್ಷಿತಾ ಹುಬ್ಬಳ್ಳಿ, ರೋಶನ್ ನದಾಫ್, ಸಾಗರ್ ಹುಬ್ಬಳ್ಳಿ ಅವರಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣ ಪತ್ರ, ಕಾಲೇಜ್ ಬ್ಯಾಗ್ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಬಿ.ವ್ಹಿ. ಮಲ್ಲನಗೌಡ್ರ ವಹಿಸಿದ್ದರು. ಸಮಾರಂಭದಲ್ಲಿ ಜಿ.ಬಿ. ಕಮಡೊಳ್ಳಿ, ಎಸ್.ಬಿ. ಭಜಂತ್ರಿ, ಎಸ್.ಸಿ. ಲಮಾಣಿ ಸೇರಿದಂತೆ ಪ್ರತಿಷ್ಠಾನದ ಶಿವಾನಂದ ಕತ್ತಿ, ಸುಭಾಸ ಬೆಟದೂರ, ಭಾರತಿ ಪಾಟೀಲ, ರವಿ ದಂಡಿನ, ಸಿದ್ಧಣ್ಣ ಕವಲೂರ, ಎಸ್.ಜಿ. ಫಿರಂಗಿ, ನೇಹಾ ಖಟವಟೆ, ಸುಧಾರಾಣಿ, ಶಹಬಾಜ್ ಮುಂತಾದವರಿದ್ದರು.

 

ಶ್ಯಾಗೋಟಿಯಲ್ಲಿ: ಶ್ಯಾಗೋಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನಿರ್ಮಲಾ ನೀಲಿ, ಸುರೇಖಾ ಪೂಜಾರಿ, ಮೇಘಾ ನೀಲಿ, ಸುಧಾ ಆಡಕರ, ಭುವನೇಶ್ವರಿ ಹಳ್ಳಿ ಅವರಿಗೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯೆ ಸುಧಾ ಮನ್ನಾಪೂರ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಶಂಕರಗೌಡ ಪಾಟೀಲ, ಡಾ.ರೇಣುಕಾ ಬಿನ್ನಾಳ, ಶಿಕ್ಷಕರಾದ ರಾಜು ಪವಾರ, ಸಿ.ಬಿ. ಪಾಟೀಲ, ನಿವೃತ್ತ ಶಿಕ್ಷಕ ಎಂ.ಎಚ್. ಮರಿಗೌಡ್ರ, ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು.

ಹಿರೇಹಂದಿಗೋಳದಲ್ಲಿ

ಹಿರೇಹಂದಿಗೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಲ್ಲನಗೌಡ ಹುಲ್ಲೂರ, ಕವಿತಾ ಕುರ್ತಕೋಟಿ, ಗೀತಾ ನವಲಗುಂದ, ಭಾಗ್ಯಶ್ರೀ ಹಲಗಿ, ಸಂಜನಾ ನರೆಣ್ಣವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ವ್ಹಿ.ಎಚ್. ಗುಡ್ಲಾನೂರ ವಹಿಸಿದ್ದರು. ಶಾಲೆಯ ಶಿಕ್ಷಕರಾದ ವ್ಹಿ.ಎಲ್. ಪೂಜಾರ, ಯು.ವ್ಹಿ. ಮಟ್ಟಿ, ಎಸ್.ಎಸ್. ಪಾಟೀಲ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು.

ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ತಾಯಿ-ಮಗಳು- ಆಗಿದ್ದೇನು?

ಮಂಡ್ಯ:- ಮಂಡ್ಯದ ನೆಹರೂ ನಗರ ಬಡಾವಣೆಯಲ್ಲಿ ಡೆತ್‌ನೋಟ್ ಬರೆದಿಟ್ಟು ತಾಯಿ, ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜರುಗಿದೆ.

ನೇಣಿಗೆ ಶರಣಾಗಿರುವ ತಾಯಿ, ಮಗಳನ್ನು 28 ವರ್ಷದ ರಶ್ಮಿ, 19 ವರ್ಷದ ದಿಶಾ ಎಂದು ಗುರುತಿಸಲಾಗಿದೆ. ಇವರು ಚನ್ನಪಟ್ಟಣ ಮೂಲದವರು ಎನ್ನಲಾಗಿದೆ. ಕಳೆದ 5 ವರ್ಷದಿಂದ ಗಂಡನಿಂದ ದೂರವಾಗಿದ್ದ ರಶ್ಮಿ ಮಂಡ್ಯದ ನೆಹರೂ ನಗರದ ಬಾಡಿಗೆ ಮನೆಯಲ್ಲಿ ಮಗಳ ಜೊತೆ ವಾಸವಿದ್ದರು. ಇದರಿಂದ ಮನನೊಂದಿದ್ದ ರಶ್ಮಿ, ಡೆತ್‌ನೋಟ್ ಬರೆದಿಟ್ಟು ಮಗಳೊಂದಿಗೆ ನೇಣಿಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಮಂಡ್ಯ ಪೂರ್ವ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಶ್ಮಿ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲೇನಿದೆ?

ನನಗೆ ಈ ಜೀವನ ಇಷ್ಟ ಇಲ್ಲ. ಮದುವೆಯಾಗಿಯೂ ಏನು ಸುಖವಿಲ್ಲ. ಒಂಟಿಯಾಗಿ ಐದು ವರ್ಷದಿಂದ ಜೀವನ ಮಾಡುತ್ತಿದ್ದೇನೆ. ಗಂಡನೂ ಬೇರೆ ಮದುವೆ ಆಗುತ್ತೇನೆ. ನನಗೂ ನಿನಗೂ ಸಂಬಂಧ ಇಲ್ಲ ಎಂದು ಬರೆದುಕೊಡು ಎಂದು ಒತ್ತಾಯಿಸುತ್ತಿದ್ದಾರೆ. ನನಗೆ ಈ ಜೀವನ ಸಾಕಾಗಿದೆ. ಅಮ್ಮನನ್ನು ಚೆನ್ನಾಗಿ ನೋಡಿಕೋ ಅಣ್ಣ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಮಾಜೋಪಯೋಗಿ ಕಾರ್ಯದಿಂದ ಪುಣ್ಯ ಪ್ರಾಪ್ತಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸುಲೇಮಾನಿಯಾ ಶಾದಿಮಹಲ್‌ನಲ್ಲಿ ಬುಧವಾರ ದೂದನಾನಾ ಮುಹಿಬ್ಬನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ, ಮಾದಕ ವಸ್ತು ವಿರೋಧಿ ಆಂದೋಲನ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.

ಎನ್‌ಪಿಎಂ ಝೈನುದ್ ಅಭಿದ್ ತಂಬಳ್ ಅವರು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠರಿಗೆ ಅಂಬ್ಯುಲೆನ್ಸ್ ಚಾವಿಯನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಗಡ್ಡದೇವರಮಠ ಮಾತನಾಡಿ, ಉಚಿತ ಅಂಬ್ಯುಲೆನ್ಸ್ ಸೇವೆ ಆರಂಭಿಸಿದ್ದು ಸಮಾಜೋಪಯೋಗಿ ಕೆಲಸವಾಗಿದೆ. ತುರ್ತು ಸಮಯದಲ್ಲಿ ರೋಗಿಗಳನ್ನು ಸಾಗಿಸಲು ಅಂಬ್ಯುಲೆನ್ಸ್ ಉಪಯುಕ್ತವಾಗುತ್ತದೆ. ಕಷ್ಟಪಟ್ಟು ಗಳಿಸಿದ ಸಂಪತ್ತಿನಲ್ಲಿ ಕೆಲ ಭಾಗವನ್ನು ಸಮಾಜದ ಅಭಿವೃದ್ಧಿಗೆ ಖರ್ಚು ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ತಿಳಿಸಿದರು.

ಅಬ್ದುಲ್ ಖಾದರ್ ಮಾತನಾಡಿ, ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ಅಂಬ್ಯುಲೆನ್ಸ್ಗಳು ಬೇಕೇಬೇಕು. ಬಡ ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಂಬ್ಯುಲೆನ್ಸ್‌ ಗಳ ಸೇವೆ ಆರಂಭಿಸಲಾಗಿದೆ ಎಂದು ಹೇಳಿದರು.

ಇಕ್ಬಾಲ್ ಬಾಳಿಲ್ಲ ಮಾತನಾಡಿ, ಯುವ ಜನತೆ ಸಮಾಜ ಸೇವೆ ಮಾಡಲು ಮುಂದಾಗಬೇಕು. ಯುವಕರು ಸಮಾಜದ ಶಕ್ತಿ. ಸುಂದರ ಸಮಾಜ ನಿರ್ಮಾಣಕ್ಕೆ ಅವರು ಶ್ರಮಿಸಬೇಕು. ವಿದ್ಯಾರ್ಥಿಗಳು ಮಾದಕ ಪದಾರ್ಥಗಳ ವ್ಯಸನಿಗಳಾಗುತ್ತಿದ್ದಾರೆ. ಜಾತಿ, ಮತ, ಪಂಥ ಮರೆತು ಸಮಾಜ ಸೇವೆ ಮಾಡಿದಾಗ ದೇವರು ಮೆಚ್ಚುತ್ತಾನೆ ಎಂದರು.

ಎನ್‌ಪಿಎಂ ಝೈನುದ್ ಅಭಿದ್ ತಂಬಳ್, ಇಸ್ಮಾಯಿಲ್ ಆಡೂರ, ಸೈಯದ್ ಜಲಾಲುದ್ದೀನ್ ತಂಬಳ್, ಯು.ಟಿ. ಝುಲ್ವಿಕಾರ್, ದೂದಪೀರಾಂ ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನಸಾಬ್ ಕಣಕೆ, ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಎಂ.ಎಂ. ಗದಗ, ದಾದಾಪೀರ್ ಮುಚ್ಛಾಲೆ, ಫಿರ್ದೋಷ್ ಅಡೂರ, ಸಿಕಂದರಬಾಷಾ ಕಣಕೆ, ಕರವೇ ಸ್ವಾಭಿಮಾನಿ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಡಿ, ಎಮ್.ಐ. ಮುಳಗುಂದ, ದುರ್ಗಣ್ಣವರ, ಮುಸ್ತಾಕ್ ಅಹಮ್ಮದ್ ಶಿರಹಟ್ಟಿ, ವಿಜಯ ಕರಡಿ, ಸರೋಜಕ್ಕ ಬನ್ನೂರ, ಶೈಲಾ ಆದಿ, ಮುನೀರ್‌ಅಹಮ್ಮದ ಸಿದ್ದಾಪೂರ ಮುಂತಾದವರು ಹಾಜರಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರು ಬದಲಾವಣೆಗೆ ಅಸ್ತು ಎಂದ ಸಚಿವ ಸಂಪುಟ!

ಚಿಕ್ಕಬಳ್ಳಾಪುರ:- ರಾಮನಗರವನ್ನು ಇತ್ತೀಚೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿದೆ. ಇದಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಪ್ರತಿಪಕ್ಷಗಳ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸರ್ಕಾರ ಬದಲಾವಣೆ ಮಾಡಿತ್ತು. ಇದರ ಬಳಿಕ ತುಮಕೂರು ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರಿಸಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸೇರಿ ಕೆಲವರು ಒತ್ತಾಯಿಸಿದ್ದರು. ಆದರೆ, ಸರ್ಕಾರ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಬದಲಾಯಿಸುವ ಸಂಬಂಧ ಇಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಅಂತಿಮವಾಗಿ ಹೆಸರು ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ.

1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರಚಿಸಲಾಗಿತ್ತು. ಈ ವೇಳೆ ರಾಮನಗರ ಜಿಲ್ಲೆಯ ತಾಲೂಕುಗಳು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದವು. 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ರಾಮನಗರ ಜಿಲ್ಲೆ ರಚಿಸಲಾಗಿತ್ತು. ಇದೀಗ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ.

ಜುಲೈ 3ರಿಂದ ಫುಟ್‌ಬಾಲ್ ತರಬೇತಿ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲೂ ಫುಟ್‌ಬಾಲ್ ಆಟಗಾರರ ಸಂಖ್ಯೆ ಹೆಚ್ಚುತ್ತಿದ್ದು, ಆಸಕ್ತರಿಗೆ ಗುಣಮಟ್ಟದ ತರಬೇತಿ ನೀಡಲು ಹಾಗೂ ಅರ್ಹ ತರಬೇತುದಾರರಿಂದ ತರಬೇತಿ ಸಿಗಲಿ ಎಂಬ ಉದ್ದೇಶದಿಂದ ‘ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್’ನ ‘ಡಿ’ ಲೈಸೆನ್ಸ್ ಕೋರ್ಸ್ಗೆ ಜುಲೈ 3ರಿಂದ 8ರವರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಸರ್ಫರಾಜ ಶೇಖ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಫುಟ್‌ಬಾಲ್ ಆಟಗಾರರಿದ್ದರು. ಆದರೆ, ಇದೀಗ ಯುವಕರು, ವಿದ್ಯಾರ್ಥಿಗಳು ಫುಟ್‌ಬಾಲ್ ಕ್ರೀಡೆಯತ್ತ ಆಸಕ್ತಿ ವಹಿಸುತ್ತಿದ್ದಾರೆ. ಆದರೆ, ಅವರೆಲ್ಲರಿಗೂ ತರಬೇತಿ ನೀಡಲು ಅರ್ಹ ತರಬೇತುದಾರರ ಕೊರತೆಯಿದ್ದು, ಈ ತರಬೇತಿಯಿಂದ ಕೊರತೆ ನೀಗಲಿದೆ. ಈ ಉದ್ದೇಶದಿಂದ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ ಎಂದರು.

ತರಬೇತಿ ವೇಳೆ 24 ಸ್ಲಾಟ್‌ಗಳಿದ್ದು, ಈಗಾಗಲೇ ಎಲ್ಲವೂ ನೋಂದಣಿಯಾಗಿವೆ. ಇದರಲ್ಲಿ ಗದಗನಿಂದ 18, ಜತೆಗೆ ಮೈಸೂರು, ಬೆಳಗಾವಿ, ಧಾರವಾಡ ಜಿಲ್ಲೆಗಳಿಂದಲೂ ಹೆಸರು ನೋಂದಣಿಯಾಗಿದೆ. ಈ ತರಬೇತಿಗೆ ಕರ್ನಾಟಕ ಸ್ಟೇಟ್ ಫುಟ್‌ಬಾಲ್ ಅಸೋಸೀಯೇಶನ್ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರೂ ಸಹ ಸಹಕಾರ ನೀಡಿದ್ದು, ಅವರಿಗೂ ಸಹ ಗದಗ ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಭಿನಂದಿಸಲಿದೆ ಎಂದು ತಿಳಿಸಿದರು.

ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್‌ನ ‘ಡಿ’ ಲೈಸೆನ್ಸ್ ಕೋರ್ಸ್ ಪೂರ್ಣಗೊಳಿಸಿರುವ ಫುಟ್‌ಬಾಲ್ ತರಬೇತುದಾರ ಶಶಿಕುಮಾರ ಮುಂಡರಗಿ ಮಾತನಾಡಿ, ಗದಗ ಜಿಲ್ಲೆ ಪ್ರತಿ ತಾಲೂಕು, ಹೋಬಳಿ ಮಟ್ಟದಲ್ಲೂ ಫುಟ್‌ಬಾಲ್ ಕ್ರೀಡಾಪಟುಗಳು ಇರಬೇಕು. ಆ ಮೂಲಕ ಗದಗ ಫುಟ್‌ಬಾಲ್ ಸಿಟಿಯಾಗಬೇಕು ಎಂಬ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಆಸಕ್ತಿಯಿಂದಾಗಿ ‘ಎಲೆವನ್ ಸೈಡ್’ ಅಂತಾರಾಷ್ಟ್ರೀಯ ಗುಣಮಟ್ಟದ ಫುಟ್‌ಬಾಲ್ ಕ್ರೀಡಾಂಗಣ ಬರಲಿದೆ. ಇದಕ್ಕೆ ಪೂರಕವಾಗಿ ತರಬೇತುದಾರರ ಸಂಖ್ಯೆ ಹೆಚ್ಚಿ, ಫುಟ್‌ಬಾಲ್ ಕ್ರೀಡಾಪಟುಗಳು ಹೆಚ್ಚಾಗಿ, ಭಾರತ ತಂಡವೂ ಸೇರಿ ರಾಷ್ಟ್ರ ಹಾಗೂ ಅಂತಾ ರಾಷ್ಟ್ರ ಮಟ್ಟದಲ್ಲಿ ಗದಗ ಜಿಲ್ಲೆ ಪ್ರತಿನಿಧಿಸುವವರನ್ನು ಸಿದ್ಧಗೊಳಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ‘ಡಿ’ ಲೈಸೆನ್ಸ್ ಕೋರ್ಸ್ ಪೂರ್ಣಗೊಳಿಸಿರುವ ಫುಟ್‌ಬಾಲ್ ತರಬೇತುದಾರ ಚಂದ್ರಶೇಖರ ಅಣ್ಣಿಗೇರಿ, ಓಂಕಾರ ಓದುಗೌಡರ, ರಮೇಶ ಕರಿಕಟ್ಟಿ, ಪೃಥ್ವಿ ಪರಾಪೂರ ಇದ್ದರು.

ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್‌ನ ‘ಎ’ ಲೈಸೆನ್ಸ್ ಡಿಪ್ಲೋಮಾ ಕೋಚ್ ಹಾಗೂ ಕರ್ನಾಟಕ ಸ್ಟೇಟ್ ಫುಟ್‌ಬಾಲ್ ಅಸೋಸಿಯೇಶನ್‌ನ ಕೋಚ್ ಎಜ್ಯುಕೇಟರ್ ಶಿವಕುಮಾರ ವರದರಾಜ ಮಾತನಾಡಿ, ಫುಟ್‌ಬಾಲ್ ತರಬೇತಿ ಪಡೆಯುವ ಆಸಕ್ತರಿಗೆ ಗುಣಮಟ್ಟದ ತರಬೇತಿ ಸಿಕ್ಕರೆ ಗುಣಮಟ್ಟದ ಕ್ರೀಡಾಪಟುಗಳು ಹೊರಹೊಮ್ಮುತ್ತಾರೆ. ಈ ನಿಟ್ಟಿನಲ್ಲಿ ಕೋರ್ಸ್ ನೆರವಾಗಲಿದೆ ಎಂದು ಹೇಳಿದರು.

ರಾಷ್ಟ್ರ ಮಟ್ಟದ ಆಯುರ್ವೇದ ಸಮ್ಮೇಳನ ಜು.5ಕ್ಕೆ

ವಿಜಯಸಾಕ್ಷಿ ಸುದ್ದು, ಗದಗ: ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಜುಲೈ 5ರಂದು ಬೆಳಗ್ಗೆ 10.30ಕ್ಕೆ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರದಿಂದ ರಾಷ್ಟ್ರ ಮಟ್ಟದ ಆಯುರ್ವೇದ ಸಮ್ಮೇಳನ `ಚೈತನ್ಯ’ ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ ಬೆಳವಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನರ ದೌರ್ಬಲ್ಯ ರೋಗಗಳ ಕುರಿತು ಸಮಗ್ರ ಅಧ್ಯಯನ ವಿಷಯದ ಬಗ್ಗೆ ರಾಷ್ಟ್ರ ಮಟ್ಟದ ಆಯುರ್ವೇದ ಮಹಾ ಸಮ್ಮೇಳನ ಆಯೋಜಿಸಲಾಗಿದೆ. ದೆಹಲಿಯ ರಾಷ್ಟ್ರೀಯ ಆಯುಷ್ ವಿಜ್ಞಾನ ಆಯೋಗ ಆಯುರ್ವೇದ ಮಂಡಳಿಯ ಮಾಜಿ ಅಧ್ಯಕ್ಷ ಡಾ. ಬಿ.ಎಸ್. ಪ್ರಸಾದ ಕಾರ್ಯಕ್ರಮ ಉದ್ಘಾಟಿಸುವರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ ಬೆಳದಡಿ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್. ಪಾಟೀಲ, ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಭಾಗವಹಿಸುವರು ಎಂದರು.

ಸಮ್ಮೇಳನದಲ್ಲಿ ನುರಿತ ಪ್ರಾಧ್ಯಾಪಕರು, ಚಿಕಿತ್ಸಕರು ಹಾಗೂ ನರ ದೌರ್ಬಲ್ಯ ರೋಗಗಳಿಗೆ ಸಂಬಂಧಪಟ್ಟ ವಿವಿಧ ವಿಷಯಗಳ ಮೇಲೆ ಉಪನ್ಯಾಸಗಳನ್ನು ಮತ್ತು ಪ್ರಬಂಧಗಳನ್ನು ಮಂಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಜ್ಞಾನದ ಹರಿವನ್ನು ಹಂಚಲಿದ್ದಾರೆ. ಡಾ. ಮುರಳಿಕೃಷ್ಣ, ಡಾ. ಅಶ್ವಿನಿಕುಮಾರ, ಡಾ. ವೀರಣ್ಣ ಜತ್ತಿ, ವಿನಾಯಕ ಅವರಿಂದ ಉಪನ್ಯಾಸ ಜರುಗಲಿದೆ ಎಂದರು.

ರಾಷ್ಟ್ರ ಮಟ್ಟದ ಆಯುರ್ವೇದ ಮಹಾ ಸಮ್ಮೇಳನಕ್ಕೆ ಕರ್ನಾಟಕ ಹಾಗೂ ಅಂತರ ರಾಜ್ಯಗಳಿಂದ ಸುಮಾರು 50ಕ್ಕೂ ಅಧಿಕ ವಿವಿಧ ಆಯುರ್ವೇದ ಮಹಾವಿದ್ಯಾಲಯಗಳು, ಸಂಘ-ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳಿಂದ ಪ್ರಾಧ್ಯಾಪಕರು, ಸಂಶೋಧಕರು, ವಿಜ್ಞಾನಿಗಳು, ಪಿಎಚ್‌ಡಿ ಮತ್ತು ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ನರ ದೌರ್ಬಲ್ಯ ರೋಗಗಳ ವಿವಿಧ ವಿಷಯಗಳಿಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಂಶೋಧಕರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ದುಗ್ಗಪ್ಪ ಕೊಲ್ಮೆ, ಡಾ. ಬೂದೇಶ ಕನಾಜ, ಡಾ. ಮಲ್ಲಿಕಾರ್ಜುನ, ಡಾ. ಕುಮಾರ ಚೌಡಪ್ಪನವರ ಇದ್ದರು.

ನರ ದೌರ್ಬಲ್ಯ ರೋಗಗಳು ಕೇವಲ ರೋಗಗಳಲ್ಲಿ ಬದಲಾಗಿ, ಮನುಷ್ಯನ ಮೆದುಳಿನಲ್ಲಿರುವ ನರ ಕೋಶಗಳ ಮೇಲೆ ಪರಿಣಾಮ ಬೀರುವ ನರ ಕೋಶಗಳ ಪ್ರಗತಿಶೀಲ ಕ್ಷೀಣತೆ ಅಥವಾ ಸಾವಿಗೆ ಕಾರಣವಾಗುವ ಹಲವಾರು ಪರಸ್ಥಿತಿಗಳಿಗೆ ಪ್ರಮುಖ ಪದವಾಗಿದೆ. ಇದು ಪ್ರಪಂಚಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ನರ ದೌರ್ಬಲ್ಯ ಕಾಯಿಲೆಗಳ ಆತ್ಮಹತ್ಯೆ ದೈಹಿಕ ಅಸ್ವಸ್ಥತೆ ಹೆಚ್ಚಿನ ವೆಚ್ಚಗಳು ಮತ್ತು ಕಳಪೆ ಗುಣಮಟ್ಟದ ಜೀವನದೊಂದಿಗೆ ಗಣನಿಯವಾಗಿ ಜಾಗತಿಕ ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತಿದೆ ಎಂದು ಡಾ. ಸಂತೋಷ ಬೆಳವಡಿ ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷರ ಆಯ್ಕೆಗೆ ನ್ಯಾಯಾಲಯದ ತಡೆ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಿಗದಿಯಾಗಿತ್ತು. ವಿರೋಧಿ ಸದಸ್ಯರು ಸದ್ಯದ ಅಧ್ಯಕ್ಷೆ ಗಂಗವ್ವ ದ್ಯಾಮಣ್ಣ ಜಂಗಣ್ಣವರ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದರಿಂದ ಅಧ್ಯಕ್ಷರ ಆಯ್ಕೆಗೆ ಮುಹೂರ್ತ ನಿಗದಿಯಾಗಿತ್ತು.

ಕರ್ನಾಟಕದ ಉಚ್ಛ ನ್ಯಾಯಾಲಯವು ಈ ಆಯ್ಕೆಗೆ ತಡೆಯಾಜ್ಞೆ ನೀಡಿರುವುದರಿಂದ ಸಭೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆಯೆಂದು ಉಪವಿಭಾಗಾಧಿಕಾರಿಗಳು ಆದೇಶ ಕಳಿಸಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಭೆಯನ್ನು ರದ್ದುಪಡಿಸಲಾಯಿತು.

ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಯಾರೇ ಅಧ್ಯಕ್ಷರಾದರೂ ಅವರ ಅಧಿಕಾರದ ಅವಧಿ ಕೇವಲ ಆರೇ ತಿಂಗಳು. ಏಕೆಂದರೆ ಅಲ್ಲಿ ಯಾವುದಾದರೊಂದು ನೆಪದಿಂದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗುತ್ತದೆ. ಇದು ಗ್ರಾಮದ ಅಭಿವೃದ್ಧಿಗೆ ಹೊಡೆತ ನೀಡುತ್ತಿದೆ ಎಂಬುದು ಜಕ್ಕಲಿಯ ಸಾರ್ವಜನಿಕರ ಅಳಲು.

ಉಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಯ್ಕೆ ಸಭೆ ರದ್ದಾಗಿ ಪ್ರಸ್ತುತ ಅಧ್ಯಕ್ಷರೇ ಮುಂದಿನ ಆದೇಶದವರೆಗೂ ಮುಂದುವರೆಯುತ್ತಾರೆ ಎಂದು ತಿಳಿಯುತ್ತಿದ್ದಂತೆ ಅಧ್ಯಕ್ಷೆ ಗಂಗವ್ವ ಜಂಗಣ್ಣವರ ಅವರ ಅಭಿಮಾನಿಗಳು, ಮುತಣ್ಣ ಕಡಗದ ಮತ್ತಿತರರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಚುನಾವಣಾ ಕೆಲಸ ನೀಡದಂತೆ ಮನವಿ

ವಿಜಯಸಾಕ್ಷಿ ಸುದ್ದಿ, ಗದಗ: ಮತಗಟ್ಟೆ ಮಟ್ಟದ (ಬಿ.ಎಲ್.ಓ) ಚುನಾವಣಾ ಭಾಗದ ಕೆಲಸ ನೀಡದಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿ ಗದಗ ವತಿಯಿಂದ ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಮೂಲಕ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಿಐಟಿಯು ಮುಖಂಡ ಮಹೇಶ ಹಿರೇಮಠ ಮಾತನಾಡಿ, ಅಂಗನವಾಡಿ ನೌಕರರು ಬಿ.ಎಲ್.ಓ. ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಈಗ ನಮ್ಮ ಇಲಾಖೆಯ ಕೆಲಸವನ್ನು ಹೊರತುಪಡಿಸಿ ಬೇರೆ ಇಲಾಖೆಯ ಕೆಲಸ ಮಾಡಬಾರದೆಂದು ಆದೇಶವಿದೆಯಲ್ಲದೆ, ಅಂಗನವಾಡಿ ಕೆಲಸಗಳೇ ಸಾಕಷ್ಟಿರುತ್ತವೆ. ಇದರ ನಡುವೆ ಬಿ.ಎಲ್.ಓ ಕೆಲಸ ಮಾಡಲು ಹೋದರೆ ಅಂಗನವಾಡಿ ಮಕ್ಕಳ ಶಾಲಾ ಪೂರ್ವ ಶಿಕ್ಷಣ ಕುಂಠಿತಗೊಳ್ಳುತ್ತದೆ ಎಂದು ಮನವಿ ಸಲ್ಲಿಸಿ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಮಾರುತಿ ಚಿಟಗಿ, ಪೀರು ರಾಠೋಡ, ಅಧ್ಯಕ್ಷರಾದ ಸಾವಿತ್ರಿ ಸಬ್ನಿಸ್, ಶಾರದಾ ರೋಣದ, ಗಂಗಮ್ಮ ದೇವರಡ್ಡಿ, ಸುಶೀಲಾ ಚಲವಾದಿ, ಗಿರಿಜಾ ಮಾಚಕ್ಕನವರ, ಕವಿತಾ ಬಡಿಗೇರ, ನೀಲಮ್ಮ ಹಿರೇಮಠ, ಅನ್ನಪೂರ್ಣ ಸಾಲಿಮಠ, ಶಾರದಾ ಹಳೇಮನಿ, ಮಂಗಲಾ ಪಟ್ಟಣಶೆಟ್ಟಿ, ಕಮಲಾಕ್ಷಿ ಬೀಳಗಿ, ಗಂಗಮ್ಮ ಮಾದರ, ಜ್ಯೋತಿ, ಶರಣಮ್ಮ ವಾಲಿ ಉಪಸ್ಥಿತರಿದ್ದರು.

ಕರವೇ ಮಹಿಳಾ ತಾಲೂಕಾಧ್ಯಕ್ಷರ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಕ್ಷಣಾ ವೇದಿಕೆ ಶಿರಹಟ್ಟಿ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ಯಶೋಧ ದೇವಪ್ಪ ಬಾಳೋಜಿ ಇವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಶಿರಹಟ್ಟಿ ವಿಭಾಗದಲ್ಲಿ ಹಲವು ವರ್ಷಗಳಿಂದ ಸೇವೆ ಮಾಡಿರುವ ಇವರನ್ನು ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್.ಅಬ್ಬಿಗೇರಿ ಶಿರಹಟ್ಟಿ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.

ಮಾಧ್ಯಮ ಹಬ್ಬದಲ್ಲಿ `ಸಮಗ್ರ ಚಾಂಪಿಯನ್’

ವಿಜಯಸಾಕ್ಷಿ ಸುದ್ದಿ, ವಿಜಯಪುರ: ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿ.ವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಇಂಪ್ರೆಶನ್-2025’ ಮಾಧ್ಯಮ ಹಬ್ಬದಲ್ಲಿ ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು `ಸಮಗ್ರ ಚಾಂಪಿಯನ್‌ಶಿಪ್’ ಗಳಿಸಿದ್ದಾರೆ.

ತುಮಕೂರಿನಲ್ಲಿ ಎರಡು ದಿನಗಳ ಕಾಲ ನಡೆದ ‘ಇಂಪ್ರೆಶನ್-2025’ ಮಾಧ್ಯಮ ಹಬ್ಬದಲ್ಲಿ ಮಾಧ್ಯಮಕ್ಕೆ ಸಂಬಂಧಿಸಿದ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ 30ಕ್ಕೂ ಹೆಚ್ಚು ತಂಡಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.

ಜ್ಯೋತಿ ಎಸ್- ಟಿವಿ ಸುದ್ದಿ ನಿರೂಪಣೆ (ಪ್ರಥಮ), ಶಿಲ್ಪಾ ಪವಾರ- ಪುಟ್ಟಕತೆ (ಪ್ರಥಮ), ಅಸ್ಮಾ ಪಲ್ಠನ್- ರೀಲ್ಸ್ ನಿರ್ಮಾಣ (ಪ್ರಥಮ), ಜ್ಯೋತಿ ಎಸ್-ಪಿಟಿಸಿ (ತೃತೀಯ), ಭಸಮ್ಮಾ ಹಾಗೂ ಜ್ಯೋತಿ ಎಸ್ ಚರ್ಚಾ ಸ್ಪರ್ಧೆ (ದ್ವಿತೀಯ), ಮೇಘಪುಷ್ಪಾ, ವಿದ್ಯಾಶ್ರೀ, ಅನ್ನಪೂರ್ಣಾ, ರಾಜೇಶ್ವರಿ ಹಾಗೂ ರತ್ನಾಂಜಲಿ ಜಾಹೀರಾತು ನಿರ್ಮಾಣದಲ್ಲಿ (ತೃತೀಯ) ಸ್ಥಾನ ಪಡೆದಿದ್ದಾರೆ.

ಸಮಗ್ರ ಚಾಂಪಿಯನ್ ಗಳಿಸಿರುವ ವಿದ್ಯಾರ್ಥಿನಿಯರನ್ನು ಹಂಗಾಮಿ ಕುಲಪತಿ ಪ್ರೊ. ನಾಮದೇವಗೌಡ, ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ. ಚಂದ್ರಶೇಖರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಅಭಿನಂದಿಸಿದ್ದಾರೆ.

ಈ ವಿದ್ಯಾರ್ಥಿನಿಯರ ತಂಡದೊಂದಿಗೆ ಸಹಾಯಕ ಪ್ರಾಧ್ಯಾಪಕರಾದ ಡಾ. ತಹಮೀನಾ ನಿಗಾರ ಸುಲ್ತಾನಾ, ಸಂದೀಪ್, ಅತಿಥಿ ಉಪನ್ಯಾಸಕರಾದ ಸುಷ್ಮಾ ಪವಾರ, ಫಿಲೋಮಿನಾ ಮತ್ತು ಪವಿತ್ರಾ ಕಂಬಾರ ಇದ್ದರು.

error: Content is protected !!