Home Blog Page 7

ಶ್ರದ್ಧಾ–ಭಕ್ತಿಯಿಂದ ನಾಗರ ಪಂಚಮಿ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬಂತೆ ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು. ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಧರಿಸಿ ನಾಗದೇವರ ಮೂರ್ತಿಗಳಿಗೆ ಹಾಲೆರೆಯುವ ಮೂಲಕ ಪೂಜೆ ಸಲ್ಲಿಸಿ, ಕುಟುಂಬದ ಸುಖ, ಆರೋಗ್ಯ, ಐಶ್ವರ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.

ಹಬ್ಬದ ಅಂಗವಾಗಿ ಬೆಳಗ್ಗೆಯಿಂದಲೇ ಮನೆಗಳ ಮುಂದೆ ನಾಗದೇವರ ರಂಗೋಲಿ ಬಿಡಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಮಹಿಳೆಯರು ಹಾಗೂ ಮಕ್ಕಳು ಓಣಿಗಳಲ್ಲಿರುವ ಕಲ್ಲಿನ ನಾಗಮೂರ್ತಿಗಳಿಗೆ ಹಾಲು, ಹೂವು ಅರ್ಪಿಸಿ ಭಕ್ತಿ ಸಮರ್ಪಿಸಿದರು. ಮನೆಗಳಲ್ಲಿ ಉಂಡೆ, ಚಕ್ಕುಲಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸಿ ನಾಗದೇವರಿಗೆ ನೈವೇದ್ಯ ಅರ್ಪಿಸಲಾಯಿತು.

ಪಟ್ಟಣದ ಬಸ್ತಿಕೇರಿ, ಹಳ್ಳದಕೇರಿ, ಸೊಪ್ಪಿನಕೇರಿ, ಅಂಬೇಡ್ಕರ್ ನಗರ, ವಿನಾಯಕನಗರ, ಈಶ್ವರನಗರ, ಇಂದಿರಾನಗರ ಹಾಗೂ ನೂತನ ಬಡಾವಣೆಗಳಲ್ಲಿ ಮನೆಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡುಬಂತು.

ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸವಣೂರು ರಸ್ತೆಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ನೂರಾರು ಮಹಿಳೆಯರು ಹಾಗೂ ಮಕ್ಕಳು ನಾಗದೇವರಿಗೆ ಹಾಲೆರೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದುಬಂದಿತ್ತು. ಹಾಲು, ಹೂವು ಹಾಗೂ ವಿವಿಧ ನೈವೇದ್ಯ ಅರ್ಪಿಸಿ ಭಕ್ತರು ಪೂಜೆ ನೆರವೇರಿಸಿದರು.

ಕೆಲವು ಕಡೆ ಮರಗಳಿಗೆ ಜೋಕಾಲಿ ಕಟ್ಟಿ ಮಹಿಳೆಯರು ಹಾಗೂ ಮಕ್ಕಳು ಸಂಭ್ರಮದಿಂದ ಜೋಕಾಲಿ ಆಡಿ ಹಬ್ಬ ಆಚರಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಆಟಗಳು ಹಾಗೂ ವಿವಿಧ ಸಾಂಪ್ರದಾಯಿಕ ಆಚರಣೆಗಳು ಗಮನ ಸೆಳೆದವು. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಓಣಿಗಳಲ್ಲಿ ಜೋಕಾಲಿ ಕಟ್ಟುವ ಸಂಪ್ರದಾಯ ಕಡಿಮೆಯಾಗುತ್ತಿರುವುದು ಕಂಡುಬಂತು.

ಮನೆಮನೆಗಳಲ್ಲಿ ಸಾಂಪ್ರದಾಯಿಕ ನೈವೇದ್ಯ

ನಾಗರ ಪಂಚಮಿ ನಿಮಿತ್ತ ಮಹಿಳೆಯರು ಮನೆಗಳಲ್ಲಿ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಅರ್ಪಿಸಿದರು. ಕುಟುಂಬದ ಬಂಧು–ಬಳಗದ ಹೆಸರನ್ನು ಸ್ಮರಿಸಿ ನಾಗಮೂರ್ತಿಗೆ ಹಾಲೆರೆಯುವ ಮೂಲಕ ಕುಟುಂಬಕ್ಕೆ ಸುಖ–ಸಂತೋಷ, ಆರೋಗ್ಯ ಹಾಗೂ ಸಮೃದ್ಧಿ ಕರುಣಿಸುವಂತೆ ಪ್ರಾರ್ಥಿಸಿದರು. ಕೆಲವೆಡೆ ಮಹಿಳೆಯರು ಮನೆಮನೆಗೆ ತೆರಳಿ ಪರಸ್ಪರ ರೊಟ್ಟಿ ಹಂಚಿಕೊಂಡು ಹಬ್ಬ ಆಚರಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಕಳೆದ ಮೂರು–ನಾಲ್ಕು ದಿನಗಳಿಂದಲೇ ಹೊಸ ಬಟ್ಟೆ, ದಿನಸಿ, ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಇದರಿಂದ ಪಟ್ಟಣದ ಮಾರುಕಟ್ಟೆ ಪ್ರದೇಶಗಳಲ್ಲಿ ಜನಜಂಗುಳಿ ಕಂಡುಬಂತು.

ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಎಚ್ಚರ: ಸುಜಾತ ಮಠಪತಿ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಕ್ಕಳಿಗೆ ಮೊಬೈಲ್ ನೀಡುವಾಗ ಪೋಷಕರು ಎಚ್ಚರಿಕೆ ವಹಿಸಿ, ಅವರ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ಸಖಿ ಒನ್ ಸ್ಟಾಪ್ ಕೇಂದ್ರದ ಆಡಳಿತಾಧಿಕಾರಿ ಸುಜಾತ ಮಠಪತಿ ಹೇಳಿದರು.

ದಾನಚಿಂತಾಮಣಿ ಅತ್ತಿಮಬ್ಬೆ ವಿವಿಧೋದ್ದೇಶಗಳ ಮಹಿಳಾ ಸಂಘದಿಂದ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಮನೆಯಲ್ಲಿ ಪೌಷ್ಟಿಕ ಆಹಾರ ನೀಡಬೇಕು. ದಾಂಪತ್ಯದಲ್ಲಿ ಮನಸ್ತಾಪ ಉಂಟಾದಾಗ ತಾಳ್ಮೆಯಿಂದ ವರ್ತಿಸಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಹಾಗೂ ಮಕ್ಕಳಿಗೆ ಸಖಿ ಒನ್ ಸ್ಟಾಪ್ ಕೇಂದ್ರದಿಂದ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಆಪ್ತ ಸಮಾಲೋಚನೆ, ಪೊಲೀಸ್ ನೆರವು ಹಾಗೂ ತಾತ್ಕಾಲಿಕ ವಸತಿ ಸೇರಿದಂತೆ ಐದು ಉಚಿತ ಸೌಲಭ್ಯಗಳು ದೊರೆಯುತ್ತವೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ವಕೀಲೆ ಮಂಜುಳಾ ಸ್ವಾಮಿ ಮಾತನಾಡಿ, ಮಹಿಳೆಯರು ಸಂವಿಧಾನ ಹಾಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು. ದೌರ್ಜನ್ಯಕ್ಕೊಳಗಾದವರು ಯಾವುದೇ ಭಯವಿಲ್ಲದೆ ಉಚಿತ ಕಾನೂನು ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷೆ ಲಲಿತಾ ಗೌಡರ, ಶಾಂತಮ್ಮ ನಂದಪ್ಪನವರ, ಮಮತಾಜ ಬೇಗಂ ನದಾಫ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕಿ ದ್ರಾಕ್ಷಾಯಿಣಿ ರಾಯಣ್ಣವರ ನಿರೂಪಿಸಿ ವಂದಿಸಿದರು.

“ಮಹಿಳೆಯರು ಮೊಬೈಲ್, ಟಿ.ವಿ.ಯಲ್ಲಿ ಹೆಚ್ಚು ಸಮಯ ಕಳೆಯದೆ ಮಕ್ಕಳಿಗೆ ಸಮಯ ನೀಡಿ, ಅವರ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು.” ಎಂದು ಸುಜಾತ ಮಠಪತಿ ಹೇಳಿದರು.

— ಸುಜಾತ ಮಠಪತಿ

ಬಸವ ಪಂಚಮಿ: ಮಕ್ಕಳಿಗೆ ಹಾಲು ವಿತರಣೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಕ್ಕಳಿಗೆ ಹಾಲು ಕುಡಿಸುವುದರಿಂದ ದೈಹಿಕ ಬೆಳವಣಿಗೆ ಹಾಗೂ ಆರೋಗ್ಯ ಉತ್ತಮವಾಗಲು ಸಹಕಾರಿಯಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಹೇಳಿದರು.

ರೋಣ ತಾಲೂಕು ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಬಸವ ಪಂಚಮಿ ಅಂಗವಾಗಿ ಪಟ್ಟಣದ ಆಶ್ರಯ ಕಾಲೊನಿ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯರಲ್ಲಿ ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು. ಜಗತ್ತಿಗೆ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮದೇ ಆದ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ವಿಚಾರಧಾರೆ ಹಾಗೂ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಕಾಲೊನಿಯ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂದರು.

ನಾವು ಎಲ್ಲೇ ವಾಸಿಸುತ್ತಿದ್ದರೂ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಬಹುದು. ಎಲ್ಲರನ್ನೂ ಸಮಾನವಾಗಿ ಕಾಣುವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸ ಮಾಡುತ್ತಿರುವ ಮಾನವ ಬಂಧುತ್ವ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಸಂಜೀವಕುಮಾರ ಕುಲಕರ್ಣಿ ಮಾತನಾಡಿ, ನಾವು ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ ಇರಬೇಕು. ಅತಿಯಾದ ಮೂಢನಂಬಿಕೆಗೆ ಒಳಗಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ನಂಬಿಕೆಯೊಂದಿಗೆ ಪರಿಶ್ರಮದಿಂದ ಕೆಲಸ ಮಾಡಬೇಕು. ಜಾತಿ, ಮತ, ಪಂಥ, ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಒಂದೆಡೆ ಸೇರಿಸುವ ಕೆಲಸವನ್ನು ಮಾನವ ಬಂಧುತ್ವ ವೇದಿಕೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ಶಾಸ್ತ್ರಿಗಳು, ಯಲ್ಲಪ್ಪ ಮಣ್ಣೊಡ್ಡರ, ಅಬ್ದುಲ್ ಖಾದರ್ ಹುಡೇದ, ಹುಚ್ಚೀರಪ್ಪ ಈಟಿ ಸೇರಿದಂತೆ ಸಮಾಜದ ಹಿರಿಯರು, ತಾಯಂದಿರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ರೋಣ ತಾಲೂಕು ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಶಿವಾನಂದ ಗೋಗೇರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಸಂಜೀವಿನಿ ಆಸರೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಮಹಿಳೆಯರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗಿರಿಜಮ್ಮ ಹಾರೋಗೇರಿ ಹೇಳಿದರು.

ತಾಲೂಕಿನ ಹುಲಕೋಟಿಯ ಸ್ವಯಂಸಿದ್ಧಿ ಭವನದಲ್ಲಿ ಶನಿವಾರ ತಾಲೂಕು ಜೀವನೋಪಾಯ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳೆಯರು ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳುವುದರ ಜತೆಗೆ ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಬೇಕು. ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ, ಉಳಿತಾಯ, ಸಾಲ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆಗೆ ಸರ್ಕಾರದ ಯೋಜನೆಗಳು ನೆರವಾಗುತ್ತಿದ್ದು, ಇವು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಿವೆ ಎಂದರು.

ತಾಲೂಕು ಪಂಚಾಯಿತಿ ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕ ಎಸ್.ಬಿ. ಸತ್ಯಣ್ಣವರ ಮಾತನಾಡಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ–ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ವತಿಯಿಂದ ಜೀವನೋಪಾಯ ಸೇವಾ ಕೇಂದ್ರ ಆರಂಭಿಸಲಾಗಿದೆ. ಗ್ರಾಮೀಣ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ, ಉದ್ಯಮಶೀಲತೆ ಹಾಗೂ ವಿವಿಧ ಜೀವನೋಪಾಯ ಚಟುವಟಿಕೆಗಳಿಗೆ ಅಗತ್ಯ ಸಲಹೆ ಮತ್ತು ಅವಕಾಶಗಳನ್ನು ಕೇಂದ್ರದ ಮೂಲಕ ಒದಗಿಸಲಾಗುವುದು ಎಂದರು.

ಸಂಜೀವಿನಿ ಯೋಜನೆ ಈಗಾಗಲೇ ಮಹಿಳೆಯರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಜೀವನೋಪಾಯ ಸೇವಾ ಕೇಂದ್ರದ ಸದುಪಯೋಗ ಪಡೆದು ಮಹಿಳೆಯರು ಮತ್ತಷ್ಟು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯದ ಚೆಕ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ. ಯುವ ವೃತ್ತಿಪರರಾದ ಸಹನಾ ಕೋಟೆಕಲ್ಲ, ಒಕ್ಕೂಟದ ಪದಾಧಿಕಾರಿಗಳಾದ ಸುಬದ್ರಾ ಪದಡಣ್ಣೆವರ, ಹೇಮಾ ರೊಳ್ಳಿ, ಅನ್ನಪೂರ್ಣ ಬಂಡಿವಡ್ಡರ, ಜಯಶ್ರೀ ಕುಂಬಾರ, ಲಕ್ಷ್ಮೀ ಬಟ್ಟೂರು, ಸಾವಿತ್ರಿ ಹೆರಕಲ್ಲ, ಅಕ್ಕಮ್ಮ ಬಿನ್ನಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮನೆ ಬಾಗಿಲಿಗೇ ಜಾಬ್ ಕಾರ್ಡ್

0
ವಿಜಯಸಾಕ್ಷಿ ಸುದ್ದಿ, ನರಗುಂದ: ತಾಲೂಕಿನ ಕೊಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಮೇಳದ ಅಂಗವಾಗಿ ಕೂಲಿಕಾರ್ಮಿಕರ ಮನೆ–ಮನೆಗೆ ತೆರಳಿ ಜಾಗೃತಿ ಹಾಗೂ ನೋಂದಣಿ ಅಭಿಯಾನ ನಡೆಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ನೇತೃತ್ವದಲ್ಲಿ ವಿವಿಧ ಮನೆಗಳಿಗೆ ಭೇಟಿ ನೀಡಿ, ವ್ಹಿಬಿಜಿರಾಮ್ ಜಿ ಯೋಜನೆಯಡಿ ದೊರೆಯುವ ಉದ್ಯೋಗಾವಕಾಶ ಹಾಗೂ ಸೌಲಭ್ಯಗಳ ಕುರಿತು ಕೂಲಿಕಾರ್ಮಿಕರಿಗೆ ಮಾಹಿತಿ ನೀಡಲಾಯಿತು.
ಜಾಬ್ ಕಾರ್ಡ್ ಹೊಂದಿರದ ಕುಟುಂಬಗಳನ್ನು ಗುರುತಿಸಿ, ಮನೆ–ಮನೆ ಭೇಟಿಯ ಸಂದರ್ಭದಲ್ಲೇ ಅರ್ಹ ಫಲಾನುಭವಿಗಳಿಗೆ ಶ್ರೀಧರ್ ಚಿನಗುಂಡಿ ಹೊಸ ಜಾಬ್ ಕಾರ್ಡ್ ವಿತರಿಸಿದರು. ಉದ್ಯೋಗದ ಅಗತ್ಯವಿರುವವರು ಅರ್ಜಿ ಸಲ್ಲಿಸಿದರೆ ಯೋಜನೆಯಡಿ ಕೆಲಸ ಒದಗಿಸಲಾಗುವುದು ಎಂದು ತಿಳಿಸಿದರು.
ಜಾಬ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಅರ್ಹ ಕೂಲಿಕಾರ್ಮಿಕನಿಗೂ ಯೋಜನೆಯಡಿ ಉದ್ಯೋಗದ ಅವಕಾಶ ದೊರೆಯಲಿದೆ. ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದು ಅಗತ್ಯವಿರುವವರು ನೋಂದಾಯಿಸಿಕೊಳ್ಳಬೇಕು ಎಂದು ಶ್ರೀಧರ್ ಚಿನಗುಂಡಿ ಮನವಿ ಮಾಡಿದರು.
ವ್ಹಿಬಿಜಿರಾಮ್ ಜಿ ಯೋಜನೆಯ ಕ್ರಿಯಾಯೋಜನೆಯಲ್ಲಿ ವೈಯಕ್ತಿಕ ಫಲಾನುಭವಿಗಳಾಗಿ ಆಯ್ಕೆಯಾಗಿರುವವರು ತಕ್ಷಣ ಕಾಮಗಾರಿ ಆದೇಶ ಪಡೆದು ಕಾಮಗಾರಿ ಆರಂಭಿಸುವಂತೆ ಇಒ ಸೂಚಿಸಿದರು.
ಕೂಲಿಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು, ಯೋಜನೆಯಡಿ ಕೈಗೊಳ್ಳಲಾಗುವ ವಿವಿಧ ಕಾಮಗಾರಿಗಳು, ಉದ್ಯೋಗಾವಕಾಶ ಹಾಗೂ ಸೌಲಭ್ಯಗಳ ಕುರಿತು ವಿವರಿಸಿದರು. ಆ.15ರಿಂದ ಸೆ.15ರವರೆಗೆ ತಾಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ ನಡೆಯುತ್ತಿದ್ದು, ಕೂಲಿಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮನೆ–ಮನೆ ಭೇಟಿ ಸಂದರ್ಭದಲ್ಲಿ ಕೊಣ್ಣೂರು ಗ್ರಾಮ ಪಂಚಾಯಿತಿ ಪಿಡಿಒ ಮಂಜುನಾಥ ಗಣಿ, ಐಇಸಿ ಸುರೇಶ್ ಬಾಳಿಕಾಯಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲಿಂಗನಗೌಡರ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ವ್ಹಿಬಿಜಿರಾಮ್ ಯೋಜನೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಯಾರು ಹೇಳಿದ್ದು? ಅವರನ್ನೇ ಕರೆದುಕೊಂಡು ಬನ್ನಿ’; ಮನಸ್ತಾಪದ ಪ್ರಶ್ನೆಗೆ ಧನ್ವೀರ್ ಖಡಕ್ ಉತ್ತರ!

0

ಬೆಂಗಳೂರು: ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇಂದು ಭೇಟಿ ಮಾಡಿ ಹೊರಬಂದ ನಟ ಧನ್ವೀರ್ ಗೌಡ, ತಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇತ್ತೀಚೆಗೆ ಹರಿದಾಡುತ್ತಿದ್ದ ಮನಸ್ತಾಪದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಧನ್ವೀರ್, “ನಮ್ಮ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಯಾರು ಹೇಳಿದ್ದು? ಅವರನ್ನೇ ಕರೆದುಕೊಂಡು ಬನ್ನಿ. ಮನಸ್ತಾಪ ಇದ್ದಿದ್ದರೆ ಅವರನ್ನು ಭೇಟಿ ಮಾಡಲು ನಾನು ಜೈಲಿಗೆ ಬರುತ್ತಿದ್ದೇನಾ?” ಎಂದು ಪ್ರಶ್ನಿಸಿದ್ದಾರೆ.

ದರ್ಶನ್ ಅವರು ಆರಾಮವಾಗಿದ್ದಾರೆ ಎಂದು ತಿಳಿಸಿದ ಧನ್ವೀರ್, ಮನಸ್ತಾಪದ ಕುರಿತು ಹರಿದಾಡುತ್ತಿದ್ದ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ.

ಇದೇ ವೇಳೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ತಾಯಿ ಮೀನಾ ತೂಗುದೀಪ ಕೂಡ ಜೈಲಿಗೆ ಭೇಟಿ ನೀಡಿದ್ದರು. ವಿಜಯಲಕ್ಷ್ಮಿ ಮತ್ತು ಧನ್ವೀರ್ ಇಬ್ಬರೂ ಒಂದೇ ಸಮಯದಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿರುವುದು ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.

ಇತ್ತೀಚೆಗೆ ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವೆ ಮನಸ್ತಾಪವಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇಬ್ಬರೂ ಪ್ರತ್ಯೇಕವಾಗಿ ದರ್ಶನ್ ಅವರನ್ನು ಭೇಟಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ರೀತಿಯ ಊಹಾಪೋಹಗಳು ಹರಿದಾಡಿದ್ದವು.

ಆದರೆ ಇದೀಗ ಇಬ್ಬರೂ ಒಂದೇ ಸಮಯದಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿರುವುದು ಹಾಗೂ ಧನ್ವೀರ್ ಬಹಿರಂಗವಾಗಿ ಯಾವುದೇ ಮನಸ್ತಾಪವಿಲ್ಲ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

ಎತ್ತಿನ ಬಂಡಿಯಲ್ಲಿ ರಾಯಣ್ಣನ ಭಾವಚಿತ್ರ; ಸಂಭ್ರಮದ ಮೆರವಣಿಗೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಜಯಂತಿ ಅಂಗವಾಗಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಲಕ್ಕುಂಡಿಯಲ್ಲಿ ಎತ್ತಿನ ಬಂಡಿಗಳೊಂದಿಗೆ ರಾಯಣ್ಣರ ಭಾವಚಿತ್ರದ ಭವ್ಯ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ಮಾರುತಿ ನಗರದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ 15ಕ್ಕೂ ಹೆಚ್ಚು ಎತ್ತಿನ ಬಂಡಿಗಳು ಪಾಲ್ಗೊಂಡಿದ್ದವು. ಬಲೂನ್ ಹಾಗೂ ವಿವಿಧ ಬಣ್ಣಗಳ ಚಿತ್ತಾರಗಳಿಂದ ಅಲಂಕರಿಸಿದ್ದ ಎತ್ತಿನ ಬಂಡಿಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.

ಮೆರವಣಿಗೆಯುದ್ದಕ್ಕೂ ಬಂಡಾರ ಚೆಲ್ಲಿ ಸಂಭ್ರಮಿಸಿದ ಅಭಿಮಾನಿಗಳು, ಸಂಗೊಳ್ಳಿ ರಾಯಣ್ಣರ ಶೌರ್ಯ ಹಾಗೂ ದೇಶಭಕ್ತಿಯನ್ನು ಸ್ಮರಿಸುವ ಘೋಷಣೆಗಳನ್ನು ಮೊಳಗಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ ಹಾಗೂ ಯುವ ಧುರೀಣ ಪ್ರಕಾಶ ಕರಿ ಅವರು ರಾಯಣ್ಣರ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಅರ್ಹರಿಗೆ ಗ್ಯಾರಂಟಿ ಸೌಲಭ್ಯ ತಲುಪಿಸಿ: ಮಿಥುನ್ ಜಿ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯೋಜನೆಗಳ ಲಾಭ ಪಡೆಯುತ್ತಿರುವ ಅನರ್ಹರು ಹಾಗೂ ಮೃತಪಟ್ಟ ಫಲಾನುಭವಿಗಳ ಕುರಿತು ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ವಹಿಸಬೇಕು ಎಂದು ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ರೋಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ 38,422 ಪಡಿತರ ಚೀಟಿಗಳಿದ್ದು, 38,278 ಅರ್ಜಿಗಳು ನೋಂದಣಿಯಾಗಿವೆ. ಈ ಪೈಕಿ 34,528 ಅರ್ಜಿಗಳಿಗೆ ಮಂಜೂರಾತಿ ದೊರೆತಿದ್ದು, ಶೇ.90.20ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮನೆಮನೆ ಪರಿಶೀಲನೆಯಲ್ಲಿ 945 ಫಲಾನುಭವಿಗಳು ಮೃತಪಟ್ಟಿರುವುದು ಹಾಗೂ 248 ಮಂದಿ ಜಿಎಸ್‌ಟಿಗೆ ನೋಂದಣಿಯಾಗಿರುವುದು ಪತ್ತೆಯಾಗಿದೆ. ಮನೆಯ ಯಜಮಾನಿ ಮೃತಪಟ್ಟಿದ್ದರೆ ರೇಷನ್ ಕಾರ್ಡ್‌ನಲ್ಲಿ ಅಗತ್ಯ ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಗೃಹಲಕ್ಷ್ಮೀ ಕಂತು ಜಮೆಯಾಗುವ ಮುನ್ನವೇ ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಬೇಕು. ಅರ್ಹರು ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳಲ್ಲಿ 12 ನಿಯಮಗಳ ಬ್ಯಾನರ್ ಅಳವಡಿಸುವಂತೆ ಹಿಂದಿನ ಸಭೆಯಲ್ಲಿ ಸೂಚಿಸಿದ್ದರೂ ಅನುಷ್ಠಾನವಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಲಾಯಿತು. 75 ವರ್ಷ ಮೇಲ್ಪಟ್ಟವರಿಗೆ ಹೆಬ್ಬೆಟ್ಟು ಗುರುತಿನ ತಾಂತ್ರಿಕ ಸಮಸ್ಯೆ ಎದುರಾದಲ್ಲಿ ಒಟಿಪಿ ಮೂಲಕ ಪಡಿತರ ಪಡೆಯುವ ಅವಕಾಶದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು.

ಪ್ರತಿ ತಿಂಗಳು 25ರ ನಂತರ ಪಡಿತರ ವಿತರಣೆ ಆರಂಭವಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಮಿತಿ ಸದಸ್ಯ ಬಿ.ಎಸ್. ರಡ್ಡೇರ ಗಮನ ಸೆಳೆದರು. ಗೋದಾಮಿನಿಂದ ಪಡಿತರ ಎತ್ತುವಳಿ ವಿಳಂಬವಾಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಹೆಸ್ಕಾಂ ವ್ಯಾಪ್ತಿಯಲ್ಲಿ ಫಲಾನುಭವಿಗಳ ಮರುಸಮೀಕ್ಷೆ ಶೇ.86ರಷ್ಟು ಪೂರ್ಣಗೊಂಡಿದೆ. ಉಳಿದವರ ಸಮೀಕ್ಷೆಯನ್ನು ಮನೆಮನೆಗೆ ತೆರಳಿ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಯೋಜನೆಯಿಂದ ಹೆಸರು ಹೊರಗುಳಿಯದಂತೆ ಅಗತ್ಯ ದಾಖಲೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು.

ವಿದ್ಯುತ್ ಸಲಹಾ ಸಮಿತಿ ಸಭೆಗಳ ಮಾಹಿತಿ ಸದಸ್ಯರಿಗೆ ದೊರೆಯುತ್ತಿಲ್ಲ ಎಂದು ಶಿವಪ್ಪ ಗಾಣಿಗೇರ ಆಕ್ಷೇಪ ವ್ಯಕ್ತಪಡಿಸಿದರು. ಸಾರ್ವಜನಿಕರ ವಿದ್ಯುತ್ ಸಮಸ್ಯೆಗಳನ್ನು ಇಲಾಖೆಯ ಗಮನಕ್ಕೆ ತರಲು ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.

ಶಕ್ತಿ ಯೋಜನೆಯಡಿ ರೋಣ–ಅಬ್ಬಿಗೇರಿ ಮಾರ್ಗದಲ್ಲಿ ಬೆಳಗ್ಗೆ 6 ಹಾಗೂ ಸಂಜೆ 5.30ಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಯಿತು. ರೋಣ–ಸವಡಿ ಮಾರ್ಗವಾಗಿ ಗದಗಕ್ಕೆ ತೆರಳುವ ಬಸ್‌ಗಳಲ್ಲಿ ಹೆಚ್ಚಿನ ಜನದಟ್ಟಣೆ ಇರುವುದರಿಂದ ಹೆಚ್ಚುವರಿ ಬಸ್ ಕಲ್ಪಿಸುವಂತೆ ಬಸವರಾಜ ತಳವಾರ ಮನವಿ ಮಾಡಿದರು.

ರೋಣ–ಹೊಸಳ್ಳಿ–ಇಟಗಿ ಮಾರ್ಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಶಾಲಾ ಸಮಯದಲ್ಲಿ ನಿಗದಿತ ಸ್ಥಳಗಳಲ್ಲಿ ಬಸ್ ನಿಲ್ಲಿಸುವಂತೆ ಬಿ.ಎಸ್. ರಡ್ಡೇರ ಮನವಿ ಮಾಡಿದರು. ಮಹಿಳಾ ಪ್ರಯಾಣಿಕರಿದ್ದರೂ ಕೆಲವೆಡೆ ಬಸ್ ನಿಲ್ಲಿಸದಿರುವ ಕುರಿತು ನಾಜಬೇಗಂ ಯಲಿಗಾರ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಚಾಲಕರು ಹಾಗೂ ನಿರ್ವಾಹಕರ ಸಭೆ ನಡೆಸಿ ಸೂಕ್ತ ತಿಳುವಳಿಕೆ ನೀಡುವಂತೆ ಅಧ್ಯಕ್ಷರು ಸೂಚಿಸಿದರು.

ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆಯೂ ಘಟಕ ನಿರ್ವಾಹಕರಿಗೆ ನಿರ್ದೇಶನ ನೀಡಲಾಯಿತು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

“ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ಸಕಾಲಕ್ಕೆ ತಲುಪಬೇಕು. ಅನರ್ಹರು ಹಾಗೂ ಮೃತಪಟ್ಟವರ ಹೆಸರಿನಲ್ಲಿ ಸೌಲಭ್ಯ ಮುಂದುವರಿಯದಂತೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು.” ಎಂದು ಮಿಥುನ್ ಜಿ. ಪಾಟೀಲ ಹೇಳಿದರು.

— ಮಿಥುನ್ ಜಿ. ಪಾಟೀಲ, ಅಧ್ಯಕ್ಷರು, ತಾಲೂಕು ಗ್ಯಾರಂಟಿ ಸಮಿತಿ

ಸಬ್ಸಿಡಿಗಿಂತ ಸ್ವಾವಲಂಬಿ ಪರಿಶ್ರಮದ ದುಡಿಮೆ ಮುಖ್ಯ: ಶರಣಬಸಪ್ಪ ಗುಡಿಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಾಮಾಣಿಕತೆ, ಸ್ವಾವಲಂಬನೆ ಹಾಗೂ ನಿರಂತರ ಪರಿಶ್ರಮವೇ ಉದ್ಯಮದ ಯಶಸ್ಸಿನ ಮೂಲಮಂತ್ರ. ವ್ಯಾಪಾರಸ್ಥರು ಯಾವುದೇ ಸಮಸ್ಯೆ ಎದುರಾದರೂ ಧೈರ್ಯದಿಂದ ಹೋರಾಡಬೇಕು. ಅವರ ಬೆನ್ನಿಗೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸದಾ ನಿಲ್ಲಲಿದೆ ಎಂದು ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.

ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಭಾನುವಾರ ನಡೆದ ‘ಗದಗ ಉತ್ಸವ–2026’ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉದ್ಯಮಿಗಳಿಗೆ ಸರ್ಕಾರದ ಆರ್ಥಿಕ ನೆರವು ಮತ್ತಷ್ಟು ಹೆಚ್ಚಾಗಬೇಕು. ಪ್ರಸ್ತುತ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸುವುದರ ಜತೆಗೆ, ರೈತರಿಗೆ ನೀಡುವ ಮಾದರಿಯಲ್ಲಿ ಉದ್ಯಮಿಗಳಿಗೂ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸಬೇಕು. ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಿ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

“ಸಬ್ಸಿಡಿಗಾಗಿ ಕಾಯುವುದಕ್ಕಿಂತ ಸ್ವಾವಲಂಬಿಯಾಗಿ ದುಡಿಯುವುದು ಮುಖ್ಯ. ಪ್ರಾಮಾಣಿಕವಾಗಿ ದುಡಿಯುವವರನ್ನು ಸಂಸ್ಥೆ ಸದಾ ಬೆಂಬಲಿಸುತ್ತದೆ.” ಎಂದು ಗುಡಿಮನಿ ಹೇಳಿದರು.

ಸರ್ಕಾರ ತೆರಿಗೆ ಸಂಗ್ರಹಿಸುವ ತನ್ನ ಕರ್ತವ್ಯ ನಿರ್ವಹಿಸಲಿ. ಆದರೆ ಸಣ್ಣಪುಟ್ಟ ಕಾರಣಗಳಿಗೆ ಉದ್ಯಮಿಗಳಿಗೆ ಅನಗತ್ಯ ತೊಂದರೆ ನೀಡಬಾರದು. ಒಂದು ಉದ್ಯಮಕ್ಕೆ ಧಕ್ಕೆಯಾದರೆ ಅದರೊಂದಿಗೆ ನೂರಾರು ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದರು.

ಆರ್ಥಿಕ ಸಂಕಷ್ಟ ಹಾಗೂ ಸಾಲದ ಒತ್ತಡದ ನಡುವೆಯೂ ಛಲ ಬಿಡದೆ ಪ್ರಾಮಾಣಿಕವಾಗಿ ದುಡಿದು ಯಶಸ್ಸು ಸಾಧಿಸಿರುವ ಗಜೇಂದ್ರಗಡದ ಉದ್ಯಮಿಗಳ ಸಾಧನೆ ಇತರರಿಗೆ ಮಾದರಿಯಾಗಿದೆ. ನಿರಂತರ ಪರಿಶ್ರಮದಿಂದ ಸಂಕಷ್ಟದ ದಿನಗಳನ್ನು ಮೀರಿ ಯಶಸ್ಸು ಗಳಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರಿಗಳ ನೋಟಿಸ್‌ಗೆ ಹೆದರಿ ಉದ್ಯಮಿಗಳು ಆತಂಕಕ್ಕೊಳಗಾಗಬಾರದು. ಕಾನೂನುಬದ್ಧವಾಗಿ ಉತ್ತರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ವ್ಯಾಪಾರಸ್ಥರ ಸಮಸ್ಯೆಗಳಿಗೆ ಮಾರ್ಗದರ್ಶನ ನೀಡಲು ಸಂಸ್ಥೆಯಲ್ಲಿ ಅನುಭವಿ ವಕೀಲರು ಹಾಗೂ ವಿಷಯ ತಜ್ಞರು ಲಭ್ಯವಿದ್ದು, ಯಾವುದೇ ತೊಂದರೆ ಎದುರಾದರೂ ಸಂಸ್ಥೆಯನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

ಗದಗ ಉತ್ಸವದ ಅಂಗವಾಗಿ ನಡೆದ 140 ಮಳಿಗೆಗಳ ಪ್ರದರ್ಶನ ಯಶಸ್ವಿಯಾಗಿದ್ದು, ಸಣ್ಣ ಗುಡಿ ಕೈಗಾರಿಕೆಗಳಿಂದ ಉತ್ಪನ್ನ ತಯಾರಿಸಿ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿರುವ ಉದ್ಯಮಿಗಳ ಸಾಧನೆ ಹೆಮ್ಮೆಯ ಸಂಗತಿ ಎಂದರು.

ಉತ್ಸವದ ಆಯೋಜನೆಗೆ ಸರ್ಕಾರದ ನೆರವು ಮಾತ್ರ ಸಾಕಾಗುವುದಿಲ್ಲ. ಸುಮಾರು ₹50 ಲಕ್ಷ ವೆಚ್ಚವನ್ನು ವ್ಯಾಪಾರಸ್ಥರು ತಮ್ಮ ಲಾಭದ ಹಣದಿಂದಲೇ ಭರಿಸುತ್ತಿದ್ದಾರೆ. ಉದ್ಯಮಿಗಳು ತಮ್ಮ ಕಾರ್ಮಿಕರ ಕುಟುಂಬಗಳ ಮದುವೆ, ವೈದ್ಯಕೀಯ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ನೆರವಾಗುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.

ಉತ್ಸವದ ಯಶಸ್ಸಿಗೆ ಸಹಕರಿಸಿದ ಚೇಂಬರ್ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರಿಗೆ ಗುಡಿಮನಿ ಕೃತಜ್ಞತೆ ಸಲ್ಲಿಸಿದರು.

“ಅಧಿಕಾರಿಗಳ ನೋಟಿಸ್‌ಗೆ ಹೆದರಿ ಉದ್ಯಮಿಗಳು ಆತಂಕಕ್ಕೊಳಗಾಗಬಾರದು. ಕಾನೂನುಬದ್ಧವಾಗಿ ಉತ್ತರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ವ್ಯಾಪಾರಸ್ಥರ ಯಾವುದೇ ಸಮಸ್ಯೆಗೆ ಸಂಸ್ಥೆ ಅವರ ಬೆನ್ನಿಗೆ ನಿಲ್ಲಲಿದೆ.” ಎಂದು ಶರಣಬಸಪ್ಪ ಗುಡಿಮನಿ ಹೇಳಿದರು.

— ಶರಣಬಸಪ್ಪ ಗುಡಿಮನಿ, ಅಧ್ಯಕ್ಷರು, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ

ಯುವಕರ ಕೈಗೆ ಉದ್ಯೋಗ–ಉದ್ಯಮದ ಚಾವಿ ಕೊಡಿ: ಬಸವೇಶ್ವರ ಶಿವಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ಗದಗ: ಯುವಕರು ಮುದುಕರಾಗುತ್ತಾರೆ, ಮುದುಕರು ಯುವಕರಾಗುವುದಿಲ್ಲ. ಹೀಗಾಗಿ ಹಿರಿಯರು ಜವಾಬ್ದಾರಿಗಳನ್ನು ತಮ್ಮಲ್ಲೇ ಇಟ್ಟುಕೊಳ್ಳದೆ, ಯುವಕರಿಗೆ ಉದ್ಯೋಗ, ಉದ್ಯಮದ ಅವಕಾಶ ನೀಡಿ ಸೂಕ್ತ ಮಾರ್ಗದರ್ಶನದೊಂದಿಗೆ ಮುನ್ನೆಲೆಗೆ ತರಬೇಕು ಎಂದು ಸೂಡಿ–ಗದಗ ಜುಕ್ತಿ ಹಿರೇಮಠದ ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಹೇಳಿದರು.

ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಭಾನುವಾರ ನಡೆದ ‘ಗದಗ ಉತ್ಸವ–2026’ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗದಗ ‘ಮುದ್ರಣ ಕಾಶಿ’ಯಾಗಿ ಗುರುತಿಸಿಕೊಂಡಿದ್ದು, ಇದೀಗ ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದಲ್ಲೂ ತನ್ನದೇ ಛಾಪು ಮೂಡಿಸಿದೆ. ಸರ್ಕಾರ ಅಗತ್ಯ ಮೂಲಸೌಕರ್ಯ ಕಲ್ಪಿಸಿದರೆ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ವಿಸ್ತರಿಸಲಿವೆ ಎಂದರು.

ಗದಗ ಉತ್ಸವದಲ್ಲಿ 140 ಮಳಿಗೆಗಳಿಗೆ ಉತ್ತಮ ಸ್ಪಂದನೆ ದೊರೆತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಉತ್ಸವದ ಯಶಸ್ಸಿಗೆ ಸಾಕ್ಷಿಯಾಗಿದೆ. ಇಂತಹ ಉತ್ಸವಗಳು ವರ್ಷದಲ್ಲಿ ಎರಡು–ಮೂರು ಬಾರಿ ನಡೆಯಬೇಕು ಎಂದರು.

“ಕಿಂಗ್ ಆಗುವವರು ಹಲವರಿದ್ದಾರೆ; ಆದರೆ ಕಿಂಗ್ ಮೇಕರ್ ಆಗುವವರು ವಿರಳ. ತಾವೇ ಮುನ್ನೆಲೆಗೆ ಬರಬೇಕೆಂಬ ಆಸೆಗಿಂತ ಇತರರನ್ನು ಬೆಳೆಸುವ ಗುಣವೇ ನಿಜವಾದ ನಾಯಕತ್ವ.” ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವ್ಹಿ. ಸಂಕನೂರ ಮಾತನಾಡಿ, ಕೃಷಿ ಹಾಗೂ ಜವಳಿ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಉದ್ಯಮ ಆರಂಭಿಸುವ ಮುನ್ನ ಕಚ್ಚಾ ವಸ್ತು, ಮಾರುಕಟ್ಟೆ, ನುರಿತ ಕಾರ್ಮಿಕರು ಹಾಗೂ ಸಾರಿಗೆ ವ್ಯವಸ್ಥೆ ಕುರಿತು ಅಧ್ಯಯನ ಅಗತ್ಯ ಎಂದರು.

ಕಪ್ಪತಗುಡ್ಡದ ನೈಸರ್ಗಿಕ ಸಂಪತ್ತು ರಕ್ಷಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು. ‘ಮೇಕ್ ಇನ್ ಇಂಡಿಯಾ’, ‘ಸ್ಟಾರ್ಟ್ಅಪ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’ ಹಾಗೂ ‘ಮುದ್ರಾ’ ಯೋಜನೆಗಳ ಪ್ರಯೋಜನ ಪಡೆದು ಯುವಕರು ಉದ್ಯಮಶೀಲರಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ವಹಿಸಿದ್ದರು. ಮಧುಸೂಧನ ಪುಣೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರು ಬಾಳಿಹಳ್ಳಿಮಠ ಹಾಗೂ ಮುರುಗೇಶ ಬಡ್ನಿ ನಿರೂಪಿಸಿದರು. ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ ವಂದಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಜಯದೇವ ಮೆಣಸಗಿ, ಪ್ರಕಾಶ ಉಗಲಾಟ, ಸಿದ್ರಾಮಪ್ಪ ಉಮಚಗಿ, ರಾಘವೇಂದ್ರ ಕಾಲವಾಡ, ಅಶೋಕ ಸಂಕಣ್ಣವರ, ಅರವಿಂದ ಕಾಮತ, ಮಧುಸೂಧನ ಪುಣೇಕರ, ಮಂಜುನಾಥ ವೀರಲಿಂಗಯ್ಯನಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಆನಂದ ಪೋತ್ನೀಸ್ ಹಾಗೂ ಈಶಣ್ಣ ಮುನವಳ್ಳಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೇಷ್ಠ ಉದ್ಯಮಿ ಪ್ರಶಸ್ತಿಯನ್ನು ಕುಮಾರ ಫಟ್ಟದ, ವೀರಣ್ಣ ಸೊನ್ನದ ಹಾಗೂ ಶಿಗ್ಲಿಯ ವೀರಣ್ಣ ಪವಾಡದ ಅವರಿಗೆ, ಶ್ರೇಷ್ಠ ವರ್ತಕ ಪ್ರಶಸ್ತಿಯನ್ನು ಸುರೇಶಕುಮಾರ ಓಸವಾಲ, ಬಸಪ್ಪ ಶೆಟ್ಟಿಕೇರಿ, ಸಂಗಮೇಶ ಗೌರಿಮಠ ಹಾಗೂ ಗೌತಮ್‌ಚಂದ್ ಚೋಪ್ರಾ ಅವರಿಗೆ ಪ್ರದಾನ ಮಾಡಲಾಯಿತು.

ಶ್ರೇಷ್ಠ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ನಿರ್ಮಲಾ ಕೊಳ್ಳಿ ಅವರಿಗೆ ನೀಡಲಾಯಿತು. ವಿಜಯಕುಮಾರ ಮೇಗೂರ, ಅರಷದ್ ಖಾಜಿ ಹಾಗೂ ಸುವರ್ಣಾ ಮದರಿಮಠ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಉದ್ಯಮ ಆರಂಭಿಸುವ ಮುನ್ನ ಕಚ್ಚಾ ವಸ್ತು, ಮಾರುಕಟ್ಟೆ, ನುರಿತ ಕಾರ್ಮಿಕರು ಹಾಗೂ ಸಾರಿಗೆ ವ್ಯವಸ್ಥೆ ಕುರಿತು ಅಧ್ಯಯನ ಅಗತ್ಯ. ಕೇವಲ ಸಬ್ಸಿಡಿ ನಿರೀಕ್ಷೆಯಲ್ಲಿ ಉದ್ಯಮ ಆರಂಭಿಸಿ ವಿಫಲರಾಗಬಾರದು.
– ಪ್ರೊ. ಎಸ್.ವ್ಹಿ. ಸಂಕನೂರ, ವಿಧಾನ ಪರಿಷತ್ ಸದಸ್ಯರು