Home Blog Page 9

ಕೆ.ಎಚ್. ಪಾಟೀಲರ ರಾಜಕಾರಣ ಯುವಕರಿಗೆ ಆದರ್ಶ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ದಿ. ಕೆ.ಎಚ್. ಪಾಟೀಲ ವೃತ್ತದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲ ಅವರ ಪುಣ್ಯತಿಥಿಯನ್ನು ಸೋಮವಾರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಅಕ್ಬರಸಾಬ ಬಬರ್ಚಿ, ಜಿ.ಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ನಗರಸಭೆ ಮಾಜಿ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಸವರಾಜ ಕಡೆಮನಿ, ತಾ.ಪಂ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಉಮರಫಾರೂಖ್ ಹುಬ್ಬಳ್ಳಿ, ಗದಗ ಜಿಲ್ಲಾ ಕೆಡಿಪಿ ಸಮಿತಿ ಸಭೆಯ ಸದಸ್ಯರಾದ ಎಸ್.ಎನ್. ಬಳ್ಳಾರಿ, ಮುಖಂಡರಾದ ವೀಣಾ ಕಟ್ನಳ್ಳಿ, ಶಾರೂಖ್ ಹುಯಿಲಗೋಳ, ಶಹಬಾಜ್ ಮುಲ್ಲಾ, ಶಂಭು ಕಾಳೆ, ಮಹಮ್ಮದ್ ಶಾಲಗಾರ, ಸರ್ಫರಾಜ್ ಬಬರ್ಚಿ, ವಿನಾಯಕ ಬಳ್ಳಾರಿ, ಸೈಯದ್‌ಖಾಲಿದ ಕೊಪ್ಪಳ, ಅನ್ವರ ನದಾಫ್, ಮಹಾಂತೇಶ ಮಡಿವಾಳರ, ಪರಪ್ಪ ಕಮತರ, ಕಮಲಾಕ್ಷಿ ಹಾದಿಮನಿ, ಯಲ್ಲಮ್ಮ ಜಡಿ, ದ್ರಾಕ್ಷಾಯಣಿ ಹಾಸಿಲ್ಕರ್, ಪೂಜಾ ಬೇವೂರ, ಮರಿಯಪ್ಪ ಸಣ್ಣತಂಗಿಯವರ, ಮಹೇಶ ಪಟ್ಟಣಶೆಟ್ಟಿ, ಜಾಕೀರ ಕುನ್ನಿಬಾವಿ, ಪರಮೇಶಪ್ಪ ಜಂತ್ಲಿ, ಕರಬಸಯ್ಯ ನಾಲ್ವಾಡಮಠ, ಮಲಿಕ್ ಸಂಗಾಪೂರ, ಉಮರ್‌ಫಾರೂಖ್ ಬಾರಿಗಿಡದ, ಅಭಿಷೇಕ, ಶಿವು ಹಾದಿಮನಿ, ಸಂತೋಷ ರಾಮೇನಹಳ್ಳಿ, ಮಹಮ್ಮದ್ ಬೆಟಗೇರಿ, ಅಜ್ಜಪ್ಪ ವಗ್ಗನ್ನವರ, ವಿರುಪಾಕ್ಷ ನಂದೆಣ್ಣವರ, ಅಹ್ಮದ್ ಖಾಜಿ, ಹುಸೇನ್ ಓಲೇಕಾರ, ಅನ್ವರ ಶಿರಹಟ್ಟಿ, ಕಾಂಗ್ರೆಸ್ ಮುಖಂಡರು, ಕೆ.ಎಚ್. ಪಾಟೀಲ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಕೆ.ಎಚ್. ಪಾಟೀಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಕೆ.ಎಚ್. ಪಾಟೀಲರು ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಹಲವು ಖಾತೆಗಳನ್ನು ನಿಭಾಯಿಸಿದ್ದ ಅವರು, ನೇರ ಹಾಗೂ ನಿಷ್ಠುರತೆಯಿಂದ ಗುರುತಿಸಿಕೊಂಡಿದ್ದರು. ಪ್ರತಿಯೊಬ್ಬರೂ ಕೆ.ಎಚ್. ಪಾಟೀಲರ ಆದರ್ಶವನ್ನು ಅಳವಡಿಸಿಕೊಂಡು ಮುನ್ನಡೆದರೆ ಯಶಸ್ವಿ ಹಾಗೂ ಮಾದರಿ ರಾಜಕಾರಣಿಯಾಗಲು ಸಾಧ್ಯ ಎಂದರು.

ರಾಧಿಕಾ ಮೂಡಲಗಿಗೆ ಪಿಎಚ್‌ಡಿ ಪದವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಅನ್ವಯಿಕ ಅನುವಂಶಶಾಸ್ತ್ರ ವಿಷಯದ ಕುರಿತು ನಗರದ ರಾಧಿಕಾ ಕಿಶೋರ್ ಮೂಡಲಗಿ ಅವರು `ಮಾಲಿಕ್ಯುಲರ್ ಕ್ಯಾರಕ್ಟರೈಜೇಷನ್ ಆಂಡ್ ಅ ಪ್ರೈಮರ್ ಸೆಲೆಕ್ಷನ್ ಫಾರ್ ಐಡೆಂಟಿಫಿಕೇಶನ್ ಆಫ್ ಅಸಿನೆಟೋಬ್ಯಾಕ್ಟರ್ ಬೌಮನ್ನಿ’ ಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಧಾರವಾಡದ ಕರ್ನಾಟಕ ವಿವಿಯು ಡಾಕ್ಟರ್ ಆಫ್ ಫಿಲಾಸಾಫಿ ಪಿಎಚ್‌ಡಿ ಪದವಿ ಘೋಷಿಸಿದೆ.

ಕರ್ನಾಟಕ ವಿವಿಯ ಸ್ನಾತಕೋತ್ತರ ಅನ್ವಯಿಕ ಅನುವಂಶಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುರೇಶ ಬಿ. ಅರಕೇರಾ ಅವರು ಮಾರ್ಗದರ್ಶನ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಕ್ಕೆ ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ

0

ವಿಜಯಸಾಕ್ಷಿ ಸುದ್ದಿ, ಗದಗ: ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ಒದಗಿಸುವುದು ಸರ್ಕಾರದ ಗುರಿಯಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ತಹಸೀಲ್ದಾರ್ ಕಚೇರಿಗಳಲ್ಲಿ 10,774 ಅವಧಿ ಮೀರಿದ ಪ್ರಕರಣಗಳಿದ್ದವು. ವಿಶೇಷ ಅಭಿಯಾನ ಹಮ್ಮಿಕೊಂಡು ಅವುಗಳನ್ನು ವಿಲೇವಾರಿ ಮಾಡಲಾಗಿದ್ದು, ಸದ್ಯ 478 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಅವುಗಳನ್ನೂ ಶೀಘ್ರ ಇತ್ಯರ್ಥಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

ಎ.ಸಿ ನ್ಯಾಯಾಲಯಗಳಲ್ಲಿ 73,624 ಅವಧಿ ಮೀರಿದ ಪ್ರಕರಣಗಳಿದ್ದರೆ, ಈಗ ಅವು 11,605ಕ್ಕೆ ಇಳಿದಿವೆ. ಐದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಇದ್ದ 32,782 ಪ್ರಕರಣಗಳಲ್ಲಿ ಕೇವಲ 3,155 ಮಾತ್ರ ಉಳಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಇವುಗಳನ್ನು ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಬಗರ್ ಹುಕುಂ ರೈತರ ಜಮೀನುಗಳ ಸರ್ವೇ ಮತ್ತು ಆರ್.ಟಿ.ಸಿ ಸಮಸ್ಯೆ ನಿವಾರಣೆಗೆ `ನನ್ನ ಭೂಮಿ ಅಭಿಯಾನ’ ಆರಂಭಿಸಲಾಗಿದೆ. 2013-18ರ ಅವಧಿಯಲ್ಲಿ 5,842 ಪೋಡಿ ದುರಸ್ತಿ ಆಗಿದ್ದರೆ, 2018-23ರಲ್ಲಿ 8,500 ಪ್ರಕರಣಗಳು ವಿಲೇವಾರಿಯಾಗಿವೆ. ಜನವರಿ 2025ರಿಂದ ಆರಂಭವಾದ ಅಭಿಯಾನದಡಿ ಸದ್ಯ ರಾಜ್ಯಾದ್ಯಂತ 1,93,615 ಪ್ರಕರಣಗಳಲ್ಲಿ ಸರ್ವೇ ಮತ್ತು ಪೋಡಿ ದುರಸ್ತಿ ನಡೆಯುತ್ತಿದೆ. ಅಧಿಕಾರಿಗಳು ಮನೆಬಾಗಿಲಿಗೆ ತೆರಳಿ ಸೇವೆ ನೀಡುತ್ತಿರುವುದು ಸರ್ಕಾರದ ಬದ್ಧತೆಯ ಕಾರ್ಯ ಎಂದರು.

ತಾಂಡಾ ಹಾಗೂ ಹಟ್ಟಿಗಳ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಮದಡಿ ಹಿಂದಿನ ಆರು ವರ್ಷಗಳಲ್ಲಿ ಒಂದು ಲಕ್ಷ ಹಕ್ಕುಪತ್ರ ವಿತರಿಸಲಾಗಿತ್ತು. ನಮ್ಮ ಸರ್ಕಾರದ ಎರಡೂವರೆ ವರ್ಷದ ಅವಧಿಯಲ್ಲಿ 1.10 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಫೆ. 14ರಂದು ಹಾವೇರಿಯಲ್ಲಿ ಸಮಾವೇಶ ನಡೆಸಿ ಇದೇ ಸಂಖ್ಯೆಯ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮೃತರ ಹೆಸರಿನಲ್ಲಿ ಉಳಿದಿದ್ದ 49 ಲಕ್ಷ ಜಮೀನುಗಳನ್ನು ಗುರುತಿಸಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ 12 ಲಕ್ಷ ಮೂಲ ವಾರಸುದಾರರಿಗೆ ಜಮೀನು ಹಸ್ತಾಂತರಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಇಂತಹ 50 ಸಾವಿರ ಪ್ರಕರಣಗಳಿದ್ದು, ಸದ್ಯ 12 ಸಾವಿರ ಮಾತ್ರ ಬಾಕಿ ಉಳಿದಿವೆ. ಗ್ರಾಮ ಲೆಕ್ಕಾಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದು, ಅವರಿಗೆ ಪ್ರೋತ್ಸಾಹಧನವಾಗಿ 5 ಕೋಟಿ ರೂ. ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಉಪಸ್ಥಿತರಿದ್ದರು.

ಹಳೆ ದಾಖಲೆಗಳ ನಕಲಿ ತಡೆಗಟ್ಟಲು `ಭೂಸುರಕ್ಷಾ’ ಯೋಜನೆಯಡಿ 64 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಸಾರ್ವಜನಿಕರು ಆನ್‌ಲೈನ್‌ನಲ್ಲೇ ಕಂದಾಯ ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಭೂಮಿಯ ಮಾಲಿಕತ್ವಕ್ಕೆ ಗ್ಯಾರಂಟಿ ನೀಡುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ 5 ಸಾವಿರ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದ್ದು, ಅತ್ಯಾಧುನಿಕ ಸರ್ವೇ ಉಪಕರಣಗಳನ್ನು ಕೂಡ ಒದಗಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.

ಮತದಾರರ ಮ್ಯಾಪಿಂಗ್ ಕಾರ್ಯ ಪರಿಶೀಲನೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸೋಮವಾರ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ವಾರ್ಡ್ ನಂ. 3 ಮತ್ತು 4ರ ಮಡ್ಡಿಗೇರಿ ಓಣಿ ಮತ್ತು ಉಳ್ಳಾಗಡ್ಡಿ ಓಣಿಯಲ್ಲಿ ಮತದಾರರ ಮ್ಯಾಪಿಂಗ್ ಕಾರ್ಯವನ್ನು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಹಾಗೂ ಶಿರಹಟ್ಟಿ ಮತದಾರರ ನೋಂದಣಿ ಅಧಿಕಾರಿ ಡಾ. ನಂದಾ ಹಣಬರಟ್ಟಿ ಮತ್ತು ತಹಸೀಲ್ದಾರ ಕೆ. ರಾಘವೇಂದ್ರ ರಾವು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಮತದಾರರ ಮ್ಯಾಪಿಂಗ್ ಹಾಗೂ ಪ್ರೋಜಿನಿ ಮ್ಯಾಪಿಂಗ್ ಮಾಡುವ ಕೆಲಸ ಪ್ರಗತಿಯಲ್ಲಿದ್ದು, ಎಲ್ಲ ಮತದಾರರು ತಮ್ಮ 2002ರ ಮತದಾರರ ಪಟ್ಟಿಯ ಸಂಖ್ಯೆ, ಕ್ರಮ ಸಂಖ್ಯೆ ಹಾಗೂ ಮದುವೆಯಾಗಿ ಬಂದ ಮಹಿಳೆಯರು ತಮ್ಮ ತಂದೆ-ತಾಯಿ 2002ರಲ್ಲಿ ಇರುವ ಭಾಗದ ಸಂಖ್ಯೆ, ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬಿಎಲ್‌ಓ ಅವರಿಗೆ ಅಥವಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಿ ತಮ್ಮ ಮ್ಯಾಪಿಂಗ್ ಆದ ಬಗ್ಗೆ ಪರಿಶೀಲನೆ ಮಾಡಬೇಕೆಂದು ಹೇಳಿದರು.

ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಗೊಳ್ಳಬೇಕು: ಸಚಿವ ಕೃಷ್ಣ ಬೈರೇಗೌಡ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಪೌತಿ ಆ್ಯಪ್ ಮೂಲಕ ಪೈಲೆಟ್ ಯೋಜನೆ ಜಾರಿಯಲ್ಲಿದ್ದು, ಇದರ ಪ್ರಗತಿ ಇನ್ನಷ್ಟು ಹೆಚ್ಚಿಸಬೇಕು. ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಗೊಳ್ಳಬೇಕು ಮತ್ತು ಈ ಪ್ರಕ್ರಿಯೆ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಅವರು ಗದಗ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಮಾತನಾಡಿದರು.

ಮುಂದಿನ ವರ್ಷದಿಂದ ಜಮಾಬಂದಿ ಕಾರ್ಯವೂ ಆನ್‌ಲೈನ್ ಮೂಲಕ ಜಾರಿಯಾಗಲಿದ್ದು, ಇದಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪೂರ್ವಸಿದ್ಧತೆ ಕೈಗೊಳ್ಳಬೇಕು. ಸರ್ವೇ ಕಾರ್ಯವನ್ನು ಸಂಪೂರ್ಣ ಕಾಗದರಹಿತಗೊಳಿಸುವುದು ಸರ್ಕಾರದ ಬದ್ಧತೆ. ಇನ್ನು ಮುಂದೆ ಸರ್ವೇ ಸ್ಕೆಚ್‌ಗಳು ಡಿಜಿಟಲ್ ರೂಪದಲ್ಲೇ ಇರಬೇಕು ಎಂದು ಸೂಚಿಸಿದರು.

ದಾಖಲೆಗಳ ಸ್ಕ್ಯಾನಿಂಗ್ ಮತ್ತು ಅಪ್ಲೋಡ್ ಕಾರ್ಯ ಶೇ.48ರಷ್ಟು ಮಾತ್ರ ಪೂರ್ಣಗೊಂಡಿರುವುದರಿಂದ ಅದನ್ನು ವೇಗಗೊಳಿಸಬೇಕು. ಪೌತಿ ಕಾರ್ಯ, ಭೂ ಸುರಕ್ಷಾ ಯೋಜನೆ, ಲ್ಯಾಂಡ್ ಬೀಟ್, ಜಮಾಬಂದಿ, ಹಿಡುವಳಿ ಜಮೀನು ಪೋಡಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉತಾರ ಸೇರಿ ಎಲ್ಲ ದಾಖಲೆಗಳು ನಾಗರಿಕರಿಗೆ ಸುಲಭವಾಗಿ ಲಭ್ಯವಾಗುವ ವ್ಯವಸ್ಥೆ ಮಾಡಬೇಕು ಎಂದು ಸಚಿವರು ತಿಳಿಸಿದರು.

ಕಂದಾಯ ಗ್ರಾಮಗಳ ಪ್ರಸ್ತಾವನೆ ಸಲ್ಲಿಕೆಗೆ ಮಾರ್ಚ್ 16 ಕೊನೆಯ ದಿನವಾಗಿದ್ದು, ಅದರೊಳಗೆ ಎಲ್ಲಾ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳು ಕಚೇರಿಯಲ್ಲಿ ಜನರಿಗೆ ಎಲ್ಲಾ ಸೇವೆಗಳು ಸರಿಯಾಗಿ ಲಭ್ಯವಾಗಬೇಕು. ಈಗಾಗಲೇ ಅವರಿಗೆ ಪ್ರತ್ಯೇಕ ಕಚೇರಿಗಳನ್ನು ಗುರುತಿಸಿ ನೀಡಲಾಗಿದೆ. ಆದರೂ ಗ್ರಾಮ ಲೆಕ್ಕಾಧಿಕಾರಿಗಳು ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಇಂತಹ ಪರಿಸ್ಥಿತಿ ಮರುಕಳಿಸದಂತೆ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರು ಮಾತನಾಡಿ, ರಾಜ್ಯದ 43 ಇಲಾಖೆಗಳಲ್ಲಿ ಕೇವಲ 3-4 ಇಲಾಖೆಗಳು ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬ ವರದಿಯಲ್ಲಿ ಕಂದಾಯ ಇಲಾಖೆಯೂ ಒಂದು ಎಂದು ಉಲ್ಲೇಖವಾಗಿದೆ. ಕಂದಾಯ ಸಚಿವರ ಕ್ರಿಯಾಶೀಲ ಕಾರ್ಯದಿಂದ ಇದು ಸಾಧ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಪೂರಕವಾಗಿ ಕಂದಾಯ ಇಲಾಖೆಯ ಡಿಜಿಟಲೀಕರಣ ಉತ್ತಮ ಹೆಜ್ಜೆಯಾಗಿದ್ದು ಅಭಿನಂದನೀಯ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಕುರಿತು ಸಭೆಗೆ ಅಂಕಿ-ಅಂಶಗಳೊಂದಿಗೆ ಪ್ರಗತಿ ವಿವರಿಸಿದರು. ಪ್ರಗತಿ ಸಾಧಿಸದಿರುವ ಯೋಜನೆಗಳಲ್ಲಿನ ಅಡಚಣೆಗಳ ಬಗ್ಗೆ ಸಚಿವರ ಗಮನ ಸೆಳೆದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಡಿಡಿಎಲ್‌ಆರ್ ರುದ್ರಣ್ಣಗೌಡ ಜಿ.ಜೆ, ಎಸಿ ಗಂಗಪ್ಪ ಎಂ, ತಾಲೂಕು ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

ಗದಗ ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಕಾರ್ಯ ಶೇ. 85.62ರಷ್ಟು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಶೇ.100 ಪ್ರಗತಿ ಸಾಧಿಸಲು ಕ್ರಮ ಕೈಗೊಳ್ಳಬೇಕು. ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ವಿಮೆ ಹಾಗೂ ಪರಿಹಾರ ನೀಡುವ ಸಂದರ್ಭದಲ್ಲಿ ದಾಖಲೆಗಳು ಸರಿಯಾಗಿರುವಂತೆ ಪರಿಶೀಲನೆ ನಡೆಸುವಂತೆ ಸಚಿವ ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.

ಹಕ್ಕುಪತ್ರವಿದ್ದರೂ ನಿವೇಶನವಿಲ್ಲ | ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ, ಗೋಗರೆದರೂ ಇಲ್ಲ ಸ್ಪಂದನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆಶ್ರಯ ನಿವೇಶನದ ಹಕ್ಕುಪತ್ರ ನೀಡಿ 8 ವರ್ಷ ಕಳೆದರೂ ನಿವೇಶನ ಗುರುತಿಸಿಕೊಟ್ಟಿಲ್ಲ, ನಿವೇಶನಕ್ಕೆ ಸಂಪರ್ಕ ರಸ್ತೆಯೂ ಇಲ್ಲ. ನಿವೇಶನದಲ್ಲಿ ಯಾವುದೇ ಮೂಲಭೂತ ಸೌಲಭ್ಯವೂ ಇಲ್ಲ. ಈ ಬಗ್ಗೆ ನಿತ್ಯ ಪುರಸಭೆಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ, ಗೋಗರೆದರೂ ಯಾರೊಬ್ಬರೂ ಸ್ಪಂದಿಸದ್ದರಿಂದ ಅಸಮಾಧಾನಗೊಂಡ ಫಲಾನುಭವಿಗಳು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆಯವರು ಸೋಮವಾರ ಪುರಸಭೆಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.

ಈ ವೇಳೆ ಮಾತನಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ, ರಸ್ತೆ ಸಂಪರ್ಕ ಇಲ್ಲದ ಭೂಮಿ ಖರೀದಿಸಿ 2018ರಲ್ಲಿ ಹಕ್ಕುಪತ್ರ ವಿತರಣೆ ಮಾಡಿದ್ದರೂ ಇಲ್ಲಿವರೆಗೂ ಫಲಾನುಭವಿಗಳಿಗೆ ನಿವೇಶನ ಗುರುತಿಸಿಕೊಟ್ಟಿಲ್ಲ. ಅಲ್ಲಿ ಯಾವುದೇ ಸೌಲಭ್ಯವೂ ಇಲ್ಲ. ಹಕ್ಕುಪತ್ರ ಕೊಡುವ ವೇಳೆ ಪ್ರತಿ ಫಲಾನುಭವಿಗಳಿಂದ ನಿವೇಶನದ ಅಭಿವೃದ್ಧಿಗಾಗಿ 2 ಸಾವಿರ ರೂ ಹಣ ತೆಗೆದುಕೊಂಡಿದ್ದಾರೆ. ಸಂಗ್ರಹವಾದ 9 ಲಕ್ಷದಲ್ಲಿ ಕಚ್ಚಾ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ಹೇಳುತ್ತಾರೆ. ಆದರೆ ಮೇಲ್ನೋಟಕ್ಕೆ ಇದರಲ್ಲಿಯೂ ಹಣದ ದುರುಪಯೋಗವಾಗಿದೆ ಎಂದು ಆರೋಪಿಸಿದರು.

ರಸ್ತೆ ಸಂಪರ್ಕಕ್ಕೆ 9 ಗುಂಟೆ ಭೂಮಿ ಕೊಡಲು ಸಾರ್ವಜನಿಕರ ರೊಬ್ಬರು ಸಿದ್ಧರಿದ್ದರೂ ಖರೀದಿಸಲು 2/3 ಲಕ್ಷ ರೂ ಸಾಮಾನ್ಯನಿಧಿ ಪುರಸಭೆಯಲ್ಲಿ ಇಲ್ಲವೋ ಅಥವಾ ಇವರಿಗೆ ಬಡವರ ಕಷ್ಟಕ್ಕೆ ಸ್ಪಂದಿಸುವ ಮನಸ್ಥಿತಿ ಇಲ್ಲವೋ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಡು ಬಿಸಿಲಿನಲ್ಲಿಯೇ ಫಲಾನುಭವಿಗಳು ಚಿಕ್ಕ ಮಕ್ಕಳೊಂದಿಗೆ ಧರಣಿ ನಡೆಸಿದರು. ಸಂಜೆ ವೇಳೆಗೆ ಧರಣಿ ನಿರತರನ್ನು ಸಮಾಧಾನಪಡಿಸಿದ ಪುರಸಭೆ ಮುಖ್ಯಾಧಿಕಾರಿ ಮಾಂತೇಶ ಬೀಳಗಿ, ಆಡಳಿತಾಧಿಕಾರಿಗಳ ನಿರ್ದೇಶನದಂತೆ ನಿವೇಶನಕ್ಕೆ ಸಂಪರ್ಕ ಕಲ್ಪಿಸಲು ಜಮೀನು ಖರೀದಿ, ನಿವೇಶನ ಗುರುತಿಸಿಕೊಡುವ ಕಾರ್ಯವನ್ನೂ ಕೂಡಲೇ ಮಾಡಲಾಗುವುದು. ಫೆ. 6ರಂದು ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕ ಡಾ. ಚಂದ್ರು ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಆಶ್ರಯ ನಿವೇಶನದಲ್ಲಿ ನೀರು, ವಿದ್ಯುತ್, ರಸ್ತೆ, ಚರಂಡಿ ಸೇರಿ ಮೂಲಭೂತ ಸೌಲಭ್ಯಕ್ಕಾಗಿ 5,07,65,000 ರೂ.ಗಳ ಅಂದಾಜು ಪತ್ರಿಕೆಯೊಂದಿಗೆ ಅನುದಾನಕ್ಕಾಗಿ ರಾಜೀವ ಗಾಂಧಿ ನಿಗಮಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.

ಅನುದಾನ ಬಿಡುಗಡೆ ಆಗುತ್ತಿದ್ದಂತೆಯೇ ಕಾಮಗಾರಿ ಕೈಗೊಳ್ಳಲಾಗುವುದು. ದಯವಿಟ್ಟು ಇನ್ನಷ್ಟು ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಫಲಾನುಭವಿಗಳು ತಾತ್ಕಾಲಿಕವಾಗಿ ಧರಣಿ ಹಿಂಪಡೆಯುವುದಾಗಿ ಹೇಳಿದರು. ಸಿಪಿಐ ಬಿ.ವಿ. ನ್ಯಾಮಗೌಡ್ರ, ಪಿಎಸ್‌ಐ ನಾಗರಾಜ ಗಡಾದ ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸಿದರು.

ಈ ವೇಳೆ ಸಂಘಟನೆಯ ಸುರೇಶ ಹಟ್ಟಿ, ಪ್ರಕಾಶ ಕೊಂಚಿಗೇರಿಮಠ, ಸುರೇಶ ಮಿಸ್ಕಿನ್, ಇಲಿಯಾಸ್ ಅಲಿ ಮೀರಾನವರ, ಮಂಜಪ್ಪ ಶಿರಹಟ್ಟಿ, ಮಹಾಂತೇ ಗುದ್ನಾಳ, ರೇವತಿ ಕಟ್ಟಿಮನಿ, ನಜೀರ ನದಾಫ್, ಸೋಮಯ್ಯ ಕಲಕೇರಿಮಠ, ಶಿವಪ್ಪ ಭಗೀರಕಾರ, ಯಾಸ್ಮಿನಭಾನು ಪೀರಜಾಧೆ, ಪಾತಿಮಾ ಕಾಗದಗಾರ, ಶೋಭಾ ಕಮತದ, ರೇಣುಕಾ ಮುದಕವಿ ಸೇರಿ ಅನೇಕ ಮಹಿಳೆಯರು ಇದ್ದರು.

ಧರಣಿ ನಿರತ ಮಹಿಳೆಯರು ಮಾತನಾಡಿ, ಕಳೆದ 8 ವರ್ಷದಿಂದ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳ ಕಾಲು ಹಿಡಿದು ಅಂಗಲಾಚಿ ಬೇಡಿಕೊಂಡಿದ್ದೇವೆ. ಪುರಸಭೆಗೆ ಅಲೆದು ಸುಸ್ತಾಗಿದ್ದೇವೆ. ನಿವೇಶನ ಜಾಗಕ್ಕೆ ಟ್ಯಾಕ್ಸ್ ಕಟ್ಟುತ್ತಾ ಬಂದಿದ್ದೇವೆ. ಸ್ವಂತ ಸೂರಿನ ಕನಸು ಹೊತ್ತ ನಮ್ಮಂತಹ ನೂರಾರು ಗುಡಿಸಲು ವಾಸಿ, ಬಾಡಿಗೆ ನಿವಾಸಿಗಳ ಗೋಳು ಕೇಳುವವರಾರೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಲದ ಬಡ್ಡಿ ಮನ್ನಾ ನಿರ್ಧಾರವು ಸಂವಿಧಾನದ ವಿರೋಧಿ ಕ್ರಮ: ಸಿ.ಟಿ. ರವಿ ಎಚ್ಚರಿಕೆ

0

ಚಿಕ್ಕಮಗಳೂರು: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲದ ಬಡ್ಡಿ ಮನ್ನಾ ಮಾಡಿರುವ ರಾಜ್ಯ ಸರ್ಕಾರದ ನೀತಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರವಿ, “ಮುಖ್ಯಮಂತ್ರಿಗಳು ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವಂತೆ ಕೆಲಸ ಮಾಡಬಾರದು. ಕೇವಲ ಒಂದು ಸಮುದಾಯವನ್ನು ಓಲೈಸುವ ರಾಜಕಾರಣ ಇತರ ಸಮುದಾಯಗಳಿಗೆ ದೊಡ್ಡ ಅನ್ಯಾಯ” ಎಂದು ಹೇಳಿದರು.

ಸಾಲದ ಬಡ್ಡಿ ಮನ್ನಾ ನೀತಿಯನ್ನು ವಿಶೇಷ ವರ್ಗದ ಮತಗಳನ್ನು ನೆಚ್ಚಿಕೊಂಡು ಕೈಗೊಳ್ಳುವುದು ಸಂವಿಧಾನ ವಿರೋಧಿ ಕ್ರಮ. ಸರ್ವ ಸಮುದಾಯಗಳ ಬಡವರ ಬಡ್ಡಿಯನ್ನೂ ತಕ್ಷಣ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ, ಸಂಸದ ತೇಜಸ್ವಿ ಸೂರ್ಯರನ್ನು ಬಂಧಿಸಿರುವ ಬಗ್ಗೆ ತಮ್ಮ ಆಕ್ರೋಶವನ್ನೂ ವ್ಯಕ್ತಪಡಿಸಿದರು. ಜನರ ಪರ ಧ್ವನಿ ಎತ್ತಿರುವವರಿಗೆ ಸರ್ಕಾರದ ಈ ಕಠಿಣ ಕ್ರಮವು ಸರ್ವಾಧಿಕಾರಿ ಧೋರಣೆ ಮತ್ತು ಜನವಿರೋಧಿ ನೀತಿಯನ್ನು ತೋರಿಸುತ್ತದೆ. ಇಂತಹ ಕ್ರಮಗಳು ಪ್ರಜಾಪ್ರಭುತ್ವದಲ್ಲಿ ದೀರ್ಘಕಾಲ ಉಳಿಯುವುದಿಲ್ಲ” ಎಂದು ಎಚ್ಚರಿಸಿದರು.

ಅಮೃತ ಯೋಜನೆಯಿಂದ ನೀರಿನ ಸಮಸ್ಯೆ ನಿವಾರಣೆ: ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದಲ್ಲಿ ಅತಿ ಶೀಘ್ರದಲ್ಲೇ 38 ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ನಿಲಯದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಬಳಿ 15ನೇ ಹಣಕಾಸು ಯೋಜನೆಯಡಿ 50.40 ಲಕ್ಷ ರೂ.ಗಳ ವೆಚ್ಚದಲ್ಲಿ ಆರ್‌ಸಿಸಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಪಟ್ಟಣದ ನಾಗರಿಕ ಸಮುದಾಯದ ಹಿತದೃಷ್ಟಿಯಿಂದ ಅಮೃತ ಯೋಜನೆಯನ್ನು ತರಲಾಗಿದ್ದು, ಕಾಮಗಾರಿ ಕೂಡ ಭರದಿಂದ ಸಾಗಿದೆ. ಅಮೃತ ಯೋಜನೆಯಿಂದ ನೀರಿನ ಸಮಸ್ಯೆ ತಗ್ಗಲಿದೆ. ಅಲ್ಪಸಂಖ್ಯಾತರ ವಸತಿ ಶಾಲೆಗೆ 10 ಕೋಟಿ ರೂ.ಗಳ ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುವುದು. ಪಟ್ಟಣದ ಹೃದಯ ಭಾಗದಲ್ಲಿರುವ ಶಾನಭೋಗರ ಕೆರೆ ಅಭಿವೃದ್ಧಿಗಾಗಿ 1 ಕೋಟಿ ರೂ.ಗಳ ಅನುದಾನವನ್ನು ತರಲಾಗಿದೆ ಎಂದರು.

ಪಟ್ಟಣ ಪ್ರದೇಶಗಳು ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗಿವೆ. ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಅನುದಾನವನ್ನು ಒದಗಿಸುತ್ತಿದೆ ಎಂಬುದನ್ನು ನಾಗರಿಕ ಸಮಾಜ ಮರೆಯಬಾರದು ಎಂದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ವಿ.ಆರ್. ಗುಡಿಸಾಗರ, ಮುತ್ತಣ್ಣ ಸಂಗಳದ, ತೋಟಪ್ಪ ನವಲಗುಂದ, ಬಾವಾಸಾಬ ಬೆಟಗೇರಿ, ಬಸವರಾಜ ನವಲಗುಂದ, ವಿ.ಬಿ. ಸೋಮನಕಟ್ಟಿಮಠ, ಯೂಸುಪ್ ಇಟಗಿ, ಪರಶುರಾಮ ಅಳಗವಾಡಿ, ದುರ್ಗಪ್ಪ ಹಿರೇಮನಿ, ದಾವಲಸಾಬ ಬಾಡಿನ, ಸಂಜಯ ದೊಡ್ಡಮನಿ, ಮಲಿಕ ಯಲಿಗಾರ, ಅಸ್ಲಂ ಕೊಪ್ಪಳ, ರಂಗವ್ವ ಭಜಂತ್ರಿ, ಮುಖ್ಯಾಧಿಕಾರಿ ರಮೇಶ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.

ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೋಲ್ಡ್ ಸ್ಟೋರೇಜ್‌ನ್ನು ಪಟ್ಟಣಕ್ಕೆ ತರಲಾಗಿದ್ದು, ಈ ಯೋಜನೆಯಿಂದ ರೈತರಿಗೆ ಲಾಭವಾಗಲಿದೆ. ಪಟ್ಟಣದ ಎಲ್ಲ ವಾರ್ಡ್ಗಳ ಪ್ರಗತಿಗಾಗಿ ಸಾಕಷ್ಟು ಅನುದಾನವನ್ನು ಒದಗಿಸಲಾಗಿದ್ದು, ಸಿಸಿ ರಸ್ತೆ ಕಾಮಗಾರಿಗಳು ಸಹ ನಡೆಯುತ್ತಿವೆ. ಮುಖ್ಯವಾಗಿ 20 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ಸಹ ಪ್ರಗತಿಯತ್ತ ಸಾಗಿದ್ದು, ಇನ್ನೂ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳು ರೋಣ ಪಟ್ಟಣಕ್ಕೆ ಬರಲಿವೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಗ್ರಾಹಕರ ಕೈ ಸುಡುತ್ತಿದೆ ವೀಳ್ಯದೆಲೆ ಬೆಲೆ!

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಇದೀಗ ಮಾರುಕಟ್ಟೆಗಳಲ್ಲಿ ವೀಳ್ಯದೆಲೆಯ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು, ಗ್ರಾಹಕರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಪ್ರಸ್ತುತ ಒಂದು ಕಟ್ಟು ವೀಳ್ಯದೆಲೆ ಬೆಲೆ 170ರಿಂದ 200 ರೂ. ಗಡಿ ದಾಟಿದ್ದು, ಕಳೆದ ದಶಕದಲ್ಲೇ ಅಪರೂಪದ ದಾಖಲೆ ಏರಿಕೆಯಾಗಿ ಪರಿಣಮಿಸಿದೆ. ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದ್ದರೆ, ಗ್ರಾಹಕರಿಗೆ ಬಾಯಿ ಸುಡುವಂತೆ ಮಾಡಿದೆ.

ಕಳೆದ ಮೂರು ತಿಂಗಳಿಂದ ವೀಳ್ಯದೆಲೆ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇತ್ತೀಚಿನ ಒಂದು ವಾರದಲ್ಲೇ ಒಂದು ಕಟ್ಟಿನ ಬೆಲೆ 50ರಿಂದ 60 ರೂ.ವರೆಗೆ ಹೆಚ್ಚಳವಾಗಿರುವುದು ಗ್ರಾಹಕರ ಮೇಲೆ ಭಾರೀ ಹೊರೆಯಾಗುತ್ತಿದೆ. ಒಂದು ಕಟ್ಟಿನಲ್ಲಿ ಸಾಮಾನ್ಯವಾಗಿ 100 ವೀಳ್ಯದೆಲೆಗಳು ಇರುತ್ತವೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ವೀಳ್ಯದೆಲೆ ಸರಾಸರಿ 2 ರೂ ದರದಲ್ಲಿ ಮಾರಾಟವಾಗುತ್ತಿದೆ.

ಮದುವೆ, ಗೃಹಪ್ರವೇಶ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಶುಭ ಕಾರ್ಯಗಳಿಗೆ ಅತ್ಯವಶ್ಯವಾಗಿ ಬೇಕಾಗಿರುವ ವೀಳ್ಯದೆಲೆಯ ಬೆಲೆಯು ಬಂಗಾರದ ಬೆಲೆಯಂತೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಖರೀದಿಸುವ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ತಾಲೂಕಿನಾದ್ಯಂತ ಅಂದಾಜು 55 ಹೆಕ್ಟೇರ್ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತಿದ್ದು, ಶಾಂತಗೇರಿ, ಮುಸಿಗೇರಿ, ರುದ್ರಾಪೂರ, ಅಮರಗಟ್ಟಿ, ಗೋಗೇರಿ, ಮಾಟರಂಗಿ, ಜಿಗೇರಿ, ರಾಜೂರ, ಗುಳಗುಳಿ, ಕಲ್ಲಿಗನೂರು ಸೇರಿದಂತೆ ಹತ್ತಾರು ಗ್ರಾಮಗಳ ರೈತರು ವೀಳ್ಯದೆಲೆಯ ಕೃಷಿಯಿಂದ ಜೀವನ ನಡೆಸುತ್ತಿದ್ದಾರೆ.

ವೀಳ್ಯದೆಲೆ ದರ ಹೆಚ್ಚಾಗಲು ಹವಾಮಾನ ವೈಪರೀತ್ಯ ಕಾರಣ ಎನ್ನಲಾಗಿದೆ. ವೀಳ್ಯದೆಲೆ ತೋಟಗಳಲ್ಲಿ ಚಳಿಗೆ ಬಳ್ಳಿಗಳು ಎಲೆ ಕಟ್ಟುತ್ತಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ವೀಳ್ಯದೆಲೆ ದರ ಹೆಚ್ಚಾಗಿದೆ. ಯುಗಾದಿ ನಂತರದಲ್ಲಿ ಹೊಸ ಚಿಗುರು ಬರಲು ಪ್ರಾರಂಭವಾಗಿ ಇಳುವರಿ ಹೆಚ್ಚಾಗುತ್ತದೆ. ನಂತರವಷ್ಟೇ ದರ ಇಳಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ರೈತರು ಹೆಚ್ಚಿನ ಪ್ರಮಾಣದಲ್ಲಿ ವೀಳ್ಯದೆಲೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ವೀಳ್ಯದೆಲೆ ಬಳ್ಳಿ ನಾಟಿ ಮಾಡಿದ ನಂತರ ಎಲೆ ಕಟಾವಿಗೆ ಸಿಗಲು ಕನಿಷ್ಠ 2 ವರ್ಷವಾದರೂ ಬೇಕಾಗುತ್ತದೆ. ಬೆಲೆ ಏರಿಕೆಯಾಗುತ್ತಿರುವುದು ರೈತರಿಗೆ ಸಂತಸ ತಂದಿದೆ. ಆದರೆ ದೊಡ್ಡ ವ್ಯಾಪಾರಸ್ಥರಿಗೆ ಒಂದೆರಡು ಬಂಡಲ್‌ಗೂ ಸಾವಿರಾರು ಬಂಡವಾಳ ಹಾಕುವ ಅನಿವಾರ್ಯತೆ ಎದುರಾಗಿದ್ದು, ಸಣ್ಣ ವ್ಯಾಪಾರಸ್ಥರು ಖರೀದಿಸಿ ಅವುಗಳನ್ನು ಬಿಡಿ ಬಿಡಿಯಾಗಿ ಗ್ರಾಹಕರಿಗೆ ಮಾರಾಟ ಮಾಡಿ ಹಾಕಿದ ಬಂಡವಾಳ ಹಿಂತೆಗೆಯುವ ಸವಾಲು ಎದುರಾಗಿದೆ.

ವೀಳ್ಯದೆಲೆಯು ಶುಭ ಸಮಾರಂಭಗಳಿಗೆ ಅಗತ್ಯವಾಗಿ ಬೇಕಾಗಿರುವ ವಸ್ತು. ಇದರೊಂದಿಗೆ ದೈನಂದಿನ ಬದುಕಿನಲ್ಲಿ ವೀಳ್ಯದೆಲೆ ಅವಶ್ಯಕವಾಗಿದೆ. ಬೇಸಿಗೆ ಕಾಲ ಬಂದಿರುವುದರಿಂದ ಇಳುವರಿ ಕುಂಠಿತವಾಗಿದ್ದು, ದರ ಏರಿಕೆಯಾದರೂ ಖರೀದಿಸುವುದು ಅನಿವಾರ್ಯವಾಗಿದೆ ಎಂದು ಕೊಡಗಾನೂರ ಗ್ರಾಮದ ರಮೇಶ ರಾಮಜಿ ಅಭಿಪ್ರಾಯಪಟ್ಟಿದ್ದಾರೆ.

ಕೋಟ್

ಕಳೆದ ಒಂದು ತಿಂಗಳ ಹಿಂದೆ ವೀಳ್ಯದೆಲೆ ಬೆಳೆಗೆ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವೀಳ್ಯದೆಲೆಯ ಇಳುವರಿ ಕುಂಠಿತವಾಗಿದ್ದು, ಅನಿವಾರ್ಯವಾಗಿ ದರ ಏರಿಕೆ ಕಂಡಿದೆ.

  • ಹನಮಂತ ಕರಿ.
    ಪ್ರಗತಿಪರ ರೈತ, ರುದ್ರಾಪೂರ.

ಕೋಟ್

ಚಳಿಗಾಲದ ಸಮಯ ಮತ್ತು ಈ ಸಮಯದಲ್ಲಿ ಗುಣಮಟ್ಟದ ಇಳುವರಿ ಬಾರದಿರುವುದು, ಜತೆಗೆ ಮಂಗಳ ಕಾರ್ಯಗಳು ಹೆಚ್ಚಾಗಿರುವುದರಿಂದ ಬೆಲೆ ಏರಿಕೆಯಾಗಿದೆ. ಇದು ಇನ್ನೂ 3-4 ತಿಂಗಳು ಹೀಗೆ ಇರುವ ಸಾಧ್ಯತೆ ಇದೆ.

  • ಮಹಾಂತೇಶ್ ಆಂಟಿನ.
    ಸಹಾಯಕ ತೋಟಗಾರಿಕೆ ಅಧಿಕಾರಿ-ನರೇಗಲ್.

ಪರಿಸರದ ಉಳಿವಿಗೆ ಜನತೆಯ ಸಹಕಾರವಿರಲಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: 33 ಸಾವಿರ ಹೆಕ್ಟೇರ್ ವ್ಯಾಪ್ತಿಯ ವಿಸ್ತಾರದಲ್ಲಿ ಹಬ್ಬಿರುವ ಸಸ್ಯ ಕಾಶಿ ಕಪ್ಪತ್ತಗುಡ್ಡ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ 132ಕ್ಕೂ ಹೆಚ್ಚು ಭಾಗಗಳಲ್ಲಿ ಫೈರ್‌ಲೈನ್ (ಬೆಂಕಿ ತಡೆ ರೇಖೆ) ನಿರ್ಮಿಸುವ ಮೂಲಕ ಬೆಂಕಿ ತಡೆಗೆ ಅರಣ್ಯ ಇಲಾಖೆ ಸನ್ನದ್ಧವಾಗಿದೆ.

ಹಿರೇವಡ್ಡಟ್ಟಿ, ಡೋಣಿ, ಬಾಗೇವಾಡಿ, ಕಲಕೇರಿ, ಡಂಬಳ ಭಾಗದ ಸಂರಕ್ಷಿತ ಪ್ರದೇಶ, ಸೂಕ್ಷ್ಮ ಪ್ರದೇಶಗಳಲ್ಲಿ ವಾಟರ್ ರಸ್ತೆಗಳಲ್ಲಿ ಬೆಂಕಿ ತಡೆಗೆ ಕಪ್ಪತ್ತಗುಡ್ಡದ 5 ಶಾಖೆಗಳಲ್ಲಿ ಫೈರ್ ಲೈನ್ ನಿರ್ಮಿಸಲಾಗುತ್ತಿದೆ. ಪ್ರಾಣಿಗಳು ವಾಸವಿರುವ ಜಾಗಗಳನ್ನು ಗುರುತಿಸಿ ಪ್ರಾಣಿಗಳ ಸಂರಕ್ಷಿತ ಪ್ರದೇಶಗಳಲ್ಲಿ, ಕಪ್ಪತ್ತಗುಡ್ಡ ಫ್ಯಾನ್‌ಗಳ ನಿರ್ವಹಣೆಗಾಗಿ ನಿರ್ಮಾಣವಾಗಿರುವ ರಸ್ತೆ ಪಕ್ಕದ ಅರಣ್ಯ ವಲಯದಲ್ಲಿ ವಾಹನಗಳು ಸಂಚರಿಸುವ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಬೆಂಕಿ ತಡೆಯುವ ರೇಖೆ ನಿರ್ಮಿಸಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು.

ಗದಗ ಜಿಲ್ಲಾ ಹಿರಿಯ ಅರಣ್ಯ ಅಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಮತ್ತು ಮುಂಡರಗಿಯ ಆರ್‌ಎಫ್‌ಓ ಮಂಜುನಾಥ ಮೇಗಲಮನಿ ವಿಶೇಷ ಅಭಿಯಾನದ ಮೂಲಕ ಜಾಗೃತಿ ಮೂಡಿಸಿ ಪರಿಸರವೇ ಮನುಷ್ಯನ ಶಕ್ತಿಯಾಗಿದೆ ಎಂದು ಸಾರಿದ್ದರಿಂದ ಅಪಾರ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಬಾಕ್ಸ್

ಕೆಲ ಕಿಡಿಗೇಡಿಗಳು ಹರಕೆಯನ್ನು ಈಡೇರಿಸಿಕೊಳ್ಳುವ ಹಿನ್ನೆಲೆಯಲ್ಲಿ ಬೆಂಕಿ ಹಚ್ಚುವ ಮೌಢ್ಯ ಆಚರಣೆಯಷ್ಟೇ ಅಲ್ಲದೆ, ವಿವಿಧ ಕಂಪನಿಗಳು ನಿರ್ಮಿಸಿರುವ ವಿಂಡ್ ಫ್ಯಾನ್‌ಗಳಲ್ಲಿ ಕೆಲ ಬಾರಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗುವ ಬೆಂಕಿ ತಡೆಯಲು ನಿಗಾ ಇಡಲಾಗಿದ್ದು, ಕಪ್ಪತ್ತಗುಡ್ಡದ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಪರಿಸರವಾದಿಗಳಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಇಲಾಖೆ ಮುಂದಾಗುವುದರ ಮೂಲಕ ಪರಿಸರ ಉಳಿವಿಗಾಗಿ ಅರಣ್ಯ ಸಿಬ್ಬಂದಿ ಮತ್ತು ಗುತ್ತಿಗೆ ವಾಚರ್‌ಗಳ ಮೂಲಕ ಮತ್ತು 2 ಡ್ರೋನ್ ಕಣ್ಗಾವಲು, ಗುಡ್ಡದ ಪ್ರಮುಖ ಭಾಗಗಳಲ್ಲಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ ಎಂದು ಆರ್.ಎಫ್.ಒ ಮಂಜುನಾಥ ಮೇಗಲಮನನಿ ಮಾಹಿತಿ ನೀಡಿದರು.

ಕಪ್ಪತ್ತಗುಡ್ಡದ ಉಳಿವಿಗಾಗಿ ಅರಣ್ಯ ಇಲಾಖೆ ಮಾತ್ರ ಶ್ರಮಿಸಿದರೆ ಸಾಲದು. ಪರಿಸರದ ಉಳಿವಿಗಾಗಿ ಜನತೆಯ ಸಹಕಾರ, ಪರಿಸರವಾದಿಗಳ ಕಾಳಜಿಯೊಂದಿಗೆ ಆಮ್ಲಜನಕ ಸೃಷ್ಟಿಯ ಫ್ಯಾಕ್ಟರಿ, ಜನರ ಹೃದಯದಂತಿರುವ ಸಸ್ಯಗಳ ತಾಣ ಕಪ್ಪತ್ತಗುಡ್ಡದ ಸಸ್ಯ ಸಂಪತ್ತಿನ ಉಳಿವಿಗಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ.

  • ಸಂತೋಷಕುಮಾರ ಕೆಂಚಪ್ಪನವರ.
    ಉಪ ಅರಣ್ಯ ಸಂರಕ್ಷಣಾಧಿಕಾರಿ, ಗದಗ.

error: Content is protected !!