Home Blog Page 9

ಠೇವಣಿದಾರರ ಹಣವನ್ನು ಮರಳಿ ಕೊಡಿಸಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ 8 ವರ್ಷದ ಹಿಂದೆ ಪ್ರಾರಂಭವಾಗಿರುವ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಲಕ್ಷ್ಮೇಶ್ವರ ಶಾಖೆಯಲ್ಲಿ ಕೊಟ್ಯಾಂತರ ರೂಗಳ ಠೇವಣಿ ಹಣವನ್ನು ಠೇವಣಿದಾರರಿಗೆ ನೀಡದೆ ಸತಾಯಿಸುತ್ತಿದ್ದು, ಅದರ ಕೇಂದ್ರ ಕಚೇರಿಯ ಆಡಳಿತ ಮಂಡಳಿಯವರಿಗೆ ವಂಚನೆ ಆರೋಪದಡಿಯಲ್ಲಿ ತಕ್ಕ ಶಿಕ್ಷೆ ನೀಡಬೇಕು ಮತ್ತು ಠೇವಣಿದಾರರ ಹಣ ಮರಳಿ ದೊರೆಯುವಂತೆ ಮಾಡಬೇಕೆಂದು ಆಗ್ರಹಿಸಿ ಠೇವಣಿದಾರರು ಗೋಕಾಕದ ಜೈಹೋ ಜನತಾ ವೇದಿಕೆಯ ಸಹಯೋಗದಲ್ಲಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ, ಸಹಕಾರಿ ಸಚಿವ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಿವಾನಂದ ಹಿರೇಮಠ ಮತ್ತು ಸಾಮಾಜಿಕ ಹೋರಾಟಗಾರ ರವಿ ಹೊನ್ನಿಕೊಳ್ಳ ಮಾತನಾಡಿ, ಪಟ್ಟಣದಲ್ಲಿ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿ ಅದರ ಮೂಲಕ ನೂರಾರು ಜನರಿಂದ ಠೇವಣಿ ಸಂಗ್ರಹಿಸಿ ಇದೀಗ ಜನರಿಗೆ ಹಣ ನೀಡದೇ ಸತಾಯಿಸುತ್ತಿದ್ದು, ಕೋಟ್ಯಾಂತರ ರೂ ಹಣವನ್ನು ವಂಚಿಸಿದ್ದಾರೆ. ಪಟ್ಟಣದ ಶಾಖೆಯಲ್ಲಿ ಸುಮಾರು 5.25 ಕೋಟಿಗೂ ಅಧಿಕ ಠೇವಣಿ ಹಣವಿದ್ದು, ಇದೀಗ ಹಣವನ್ನು ನೀಡದೆ ಬಡವರ ರಕ್ತ ಹೀರುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಕೂಡಲೇ ಠೇವಣಿದಾರರ ಹಣವನ್ನು ಮರಳಿ ದೊರೆಯುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ ವಾಸುದೇವ ಸ್ವಾಮಿ, ಈ ಕುರಿತಂತೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಠೇವಣಿದಾರರಾದ ಅಪ್ಪಣ್ಣ ಸೊರಟೂರ, ಸಚಿನ್ ಕರ್ಜೆಕಣ್ಣವರ, ದಿನೇಶ ಗಾಂಜಿ, ವಿ.ಸಿ. ರಬಕವಿ, ಎಸ್.ಎಸ್. ವಸ್ತçದ, ಮೃತ್ಯುಂಜಯ ಹಾವೇರಿಮಠ, ಮಹಾಂತೇಶ ಕರ್ಜೆಕಣ್ಣವರ, ಶ್ರೀಪಾಲ ಗಾಂಧಿ, ಎಸ್.ಎನ್. ಮಲ್ಲಾಡದ, ಈರಣ್ಣ ದವಡಿ, ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಮಧು ಗಾಂಧಿ, ಖುಷಿ ಗಾಂಧಿ ಮುಂತಾದವರಿದ್ದರು.

ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠ

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸಂಸ್ಕೃತಿಯು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠತೆ ಪಡೆದ ಸಂಸ್ಕೃತಿಯಾಗಿದೆ. ಇಂತಹ ಪವಿತ್ರ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಾವಿಂದು ನಮ್ಮ ಮಕ್ಕಳಿಗೆ ರೂಢಿಸಬೇಕಿದೆ ಎಂದು ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.

ಅವರು ಮಂಗಳವಾರ ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಏರ್ಪಡಿಸಿರುವ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಶ್ರೀ ಸಿದ್ಧಾಂತ ಶಿಖಾಮಣಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನೇತೃತ್ವ ವಹಿಸಿದ್ದ ಮಲ್ಲಸಮುದ್ರಗಿರಿಯ ಓಂಕಾರೇಶ್ವರಮಠದ ಪೂಜ್ಯ ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಎಂ.ಜಿ. ಸಂತೋಜಿ ಮಾತನಾಡಿದರು. ಚಳಗೇರಿ ಹಿರೇಮಠ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಉಡನಕಲ್ಲ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾದ ವೀರಭದ್ರಪ್ಪ ಹಿರೆಬೆನಕಲ್ ಅವರಿಗೆ `ದಿವ್ಯಾಂಗ ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಅಕ್ಕಮ್ಮ ಗುರುಸ್ವಾಮಿಮಠ ಅವರಿಂದ ಸಂಗೀತ ಪ್ರಾರ್ಥನೆ ಜರುಗಿತು. ಗುರುಸಿದ್ಧಯ್ಯ ಹಿರೇಮಠ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.

ಎಸ್.ಐ. ಯಾಳಗಿ, ಮಹೇಶ್ಚಂದ್ರ ಕಬಾಡರ, ಡಾ. ಸಂತೋಷ ತೋಟಗಂಟಿಮಠ, ಎಂ.ಜಿ. ಸಂತೋಜಿ, ಗೂಳಯ್ಯ ಮಾಲಗಿತ್ತಿಮಠ, ವಿಜಯಕುಮಾರ ಗಡ್ಡಿ, ಈರಪ್ಪ ಬಲೂಚಗಿ, ಬಸವರಾಜ ಗಾಳಪ್ಪನವರ, ಎಂ.ಪಿ. ಪಾಟೀಲ, ಗೌರಮ್ಮ ಹಿರೇಮಠ, ಶರಣಪ್ಪ ಬಳಿಗಾರ ದಂಪತಿಗಳನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.

ಸನಾತನ ಸಂಸ್ಕೃತಿ ಮತ್ತು ಪರಂಪರೆಗೆ ತನ್ನದೇ ಆದ ಹಿರಿಮೆ-ಗರಿಮೆ ಇದೆ. ಋಷಿ ಮುನಿಗಳು, ದಾರ್ಶನಿಕರು ಇದಕ್ಕೆ ಭದ್ರ ಬುನಾದಿ ಒದಗಿಸಿದ್ದಾರೆ. ಮನುಕುಲದ ಒಳತಿಗಾಗಿ ಇರುವ ಈ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಪರಿಪಾಲಿಸುವದು ಅವಶ್ಯ ಎಂದು ಕಾಶೀ ಶ್ರೀಗಳು ಪ್ರತಿಪಾದಿಸಿದರು.

ವಚನ ಸಾಹಿತ್ಯದ ತತ್ವಗಳನ್ನು ಮೈಗೂಡಿಸಿಕೊಳ್ಳಿ

ವಿಜಯಸಾಕ್ಷಿ ಸುದ್ದಿ, ಗದಗ: ಯುವಜನಾಂಗ ವಚನ ಸಾಹಿತ್ಯದ ತತ್ವಗಳನ್ನು ಅರಿತು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಕಾಯಕ, ದಾಸೋಹ ಸಿದ್ಧಾಂತಗಳಡಿ ನವ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ನಿಮಿತ್ತ `ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಡೆಯೂರು ಶ್ರೀ ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಶೋಧಕ ಮತ್ತು ಸಾಹಿತ್ಯ ಪ್ರಚಾರಕರಾದ ಡಾ. ಫ.ಗು. ಹಳಕಟ್ಟಿಯವರು ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಇಡೀ ರಾಜ್ಯಾದ್ಯಂತ ಅಲೆದಾಡಿ 12ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಶ್ರಮಿಸಿದರು. ಬ್ರಿಟಿಷ್‌ರ ಕಾಲದಲ್ಲಿ ಕನ್ನಡದ ಅತ್ಯಮೂಲ್ಯ ವಚನ ಸಾಹಿತ್ಯವನ್ನು ಪ್ರಕಟಿಸುವುದು ಸುಲಭ ಕಾರ್ಯವಾಗಿದ್ದಿಲ್ಲ. ಅವರಿಗೆ ಎದುರಾದ ಅಡೆ-ತಡೆಗಳನ್ನು ಎದುರಿಸಿ ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ತಮ್ಮ ಸ್ವಂತ ಮನೆಯನ್ನು ಮಾರಿರುವುದು ಅವರ ದೃಢವಾದ ಇಚ್ಛಾಶಕ್ತಿ ಎಂತಹದು ಎಂದು ತಿಳಿಯುತ್ತದೆ ಎಂದರು.

ವಿಶ್ರಾಂತ ಪ್ರಾಧ್ಯಾಪಕ ಡಾ. ಸಂಗಮನಾಥ ಲೋಕಾಪೂರ ಉಪನ್ಯಾಸ ನೀಡಿ ಮಾತನಾಡಿ, ಡಾ. ಫ.ಗು. ಹಳಕಟ್ಟಿಯವರು ಧಾರವಾಡದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮುಗಿಸಿದ ನಂತರ ವಿಜಾಪುರದಲ್ಲಿ ತಮ್ಮ ವಕೀಲ ವೃತ್ತಿ ಪ್ರಾರಂಭಿಸಿದರು. ವಚನ ಸಾಹಿತ್ಯದ ಮೇಲಿನ ಅಪಾರ ಆಸಕ್ತಿಯಿಂದ ತಾಳೆಗರಿಯ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಲು ಪ್ರಾಂಭಿಸಿ ವಚನ ಸಾಹಿತ್ಯವನ್ನು ಉಳಿಸಲು ಪಣತೊಟ್ಟರು. 1920ರ ಸಮಾರಿಗೆ ಸಾವಿರಾರು ಗ್ರಂಥಗಳ ಸಂಪಾದನೆ ಜೊತೆಗೆ ವಚನ ಸಂಗ್ರಹವನ್ನು ಮಾಡಿ ಸರಕಾರ, ಯುಜಿಸಿ, ಸಾರ್ವಜನಿಕ ಸಂಸ್ಥೆಗಳ ನೆರವಿಲ್ಲದೆ ಹಲವಾರು ವಚನಕಾರರನ್ನು ಬೆಳಕಿಗೆ ತರುವಲ್ಲಿ ಅವರು ಮಾಡಿದ ಮಹತ್ಕಾರ್ಯ ಇತಿಹಾಸ ನೆನಪಿಡುವಂತದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟçಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಎನ್. ಬಳ್ಳಾರಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಗಣ್ಯರು ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ ಸ್ವಾಗತಿಸಿದರು. ಕಾರ್ಯಕ್ರದಲ್ಲಿ ಮೃತ್ಯುಂಜಯ ಹಿರೇಮಠ ಮತ್ತು ತಂಡದವರು ವಚನ ಸಂಗೀತ ಪ್ರಸ್ತುತಪಡಿಸಿದರು. ಪ್ರೊ. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿದರು.

ಕ್ರಿಶ್ಚಿಯನ್ ಮಿಷಿನರಿಯವರು ಇವರ ಗ್ರಂಥವನ್ನು ಮುದ್ರಿಸಲು ನಿರಾಕರಿಸಿದಾಗ ಮನೆಯನ್ನೇ ಮಾರಿ ಮುದ್ರಣಾಲಯನ್ನು ಸ್ಥಾಪಿಸಿ ಹಿತಚಿಂತಕ ಮುದ್ರಣಾಲಯ ಎಂದು ನಾಮಕರಣಗೊಳಿಸಿ ಮುದ್ರಣ ಕಾರ್ಯ ಆರಂಭ ಮಾಡಿದರು. ಶಿವಾನುಭವ ಪತ್ರಿಕೆ ಪ್ರಾರಂಭಿಸಿ ವಚನ ಸಾಹಿತ್ಯ ಶಾಶ್ವತವಾಗಿ ಉಳಿಯುವಂತೆ ಮಾಡಿದರು. 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1928ರ ಜೂನ್‌ನಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ 3ನೇ ಅಧ್ಯಕ್ಷ ಪದವಿ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬ್ರಿಟಿಷ್ ಸರಕಾರದಿಂದ ರಾವ್ ಬಹದ್ದೂರ್ ಮತ್ತು ರಾವ್ ಸಾಹೇಬ ಪ್ರಶಸ್ತಿ, ವಚನ ಶಾಸ್ತ್ರ ಪ್ರವೀಣ, ವಚನ ಶಾಸ್ತ್ರ ಪಿತಾಮಹ ಮುಂತಾದ ಗೌರವಗಳಿಗೆ ಪಾತ್ರರಾದವರು ಎಂದು ಡಾ. ಸಂಗಮನಾಥ ಲೋಕಾಪೂರ ಉಪನ್ಯಾಸ ನೀಡಿದರು.

“ವಚನ ಸಾಹಿತ್ಯದ ಮೇಲಿನ ಕಾಳಜಿಯಿಂದ ಇಡೀ ರಾಜ್ಯಾದ್ಯಂತ ಅಲೆದಾಡಿ 12ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಹಳಕಟ್ಟಿಯವರ ಪಾತ್ರ ಮಹತ್ತರವಾಗಿದೆ. ಇಂತಹ ವಚನಗಳನ್ನು ಶ್ರಮವಹಿಸಿ ಸಂಗ್ರಹಿಸಿದ ಫ.ಗು. ಹಳಕಟ್ಟಿಯವರ ಕಾರ್ಯ ಶ್ಲಾಘನೀಯ. ಅರ್ಥಪೂರ್ಣ, ಅತ್ಯಮೂಲ್ಯ ವಚನಗಳನ್ನು ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ”

– ಸಿ.ಎನ್ ಶ್ರೀಧರ್.

ಜಿಲ್ಲಾಧಿಕಾರಿಗಳು, ಗದಗ.

ಕೆ.ಎಂ.ಎಫ್ ಸಾಧನೆ ಜಾಗತಿಕ ಮಟ್ಟದಲ್ಲಿದೆ

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಗದಗ ಕೆ.ಎಂ.ಎಫ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ನರಗುಂದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಹಾಲು ಪರೀಕ್ಷಕರುಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಜುಲೈ 2ರಂದು ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಂಡಳದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಮಾತನಾಡಿ, ಜಾಗತಿಕ ಆಹಾರವಾಗಿರುವ ಹಾಲು ಉತ್ಪಾದನೆ, ಶೇಖರಣೆ, ಸಂಸ್ಕರಣೆ, ಮಾರಾಟ ವ್ಯವಸ್ಥೆಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿರುವ ಹೈನೋದ್ಯಮದ ಕಾರ್ಯಚಟುವಟಿಕೆಗಳೊಂದಿಗೆ ಅದರ ಸಾಧನೆಗಳನ್ನು ವಿಶ್ವಕ್ಕೆ ತೋರಿಸುವ ಕನ್ನಡಿಯಂತೆ ಕೆ.ಎಂ.ಎಫ್ ಕಾರ್ಯನಿರ್ವಹಿಸುತ್ತಿದೆ. ಸಹಕಾರ ಸಂಘಗಳಿಗೆ, ಕಟ್ಟಡಕ್ಕಾಗಿ ಬಡ್ಡಿರಹಿತ ಸಾಲ, ಆಕಳು ಸಾಲದ ಮೊತ್ತ ಹೆಚ್ಚಿಸಿರುವುದು ಪ್ರಶಂಸಾರ್ಹವಾಗಿದೆ ಎಂದು ಹೇಳಿದರು.

ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಮಾತನಾಡುತ್ತಾ, ಗ್ರಾಮೀಣ ಪ್ರದೇಶದಲ್ಲಿಯೂ ಇಂದು ಆಧುನಿಕ ತಂತ್ರಜ್ಞಾನವನ್ನು ಎಲ್ಲಾ ಹಂತಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದು, ತಳಿ ಅಭಿವೃದ್ಧಿ, ಹಸಿರು ಮೇವು ಮತ್ತು ಸಮತೋಲಿತ ಪಶು ಆಹಾರ ಉತ್ಪಾದನೆ, ಪಶು ವೈದ್ಯಕೀಯ ಸೇವೆ, ಹಾಲು ಶೇಖರಣೆ ಹೀಗೆ ಎಲ್ಲಾ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನದ ಉಪಯೋಗವನ್ನು ವಿಸ್ತರಿಸಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವಾಯ್.ಎಫ್. ಪಾಟೀಲ ಮಾತನಾಡಿ, ವಿಶ್ವವನ್ನು ಸುಲಲಿತ ಮತ್ತು ಸುಲಭ ಕಾರ್ಯನಿರ್ವಹಣೆಯತ್ತ ಕರೆದೊಯ್ಯುತ್ತಿರುವ ಡಿಜಿಟಲ್ ತಂತ್ರಜ್ಞಾನವು ಇತರೆ ಕ್ಷೇತ್ರಗಳಂತೆಯೇ ಹೈನೋದ್ಯಮ ಕ್ಷೇತ್ರಕ್ಕೂ ವರವಾಗಿ ಪರಿಣಮಿಸಿದೆ. ರೈತರು ಉತ್ಪಾದಿಸುವ ಹಾಲಿನ ಪರೀಕ್ಷೆ, ದಾಖಲೆ ಸಂಗ್ರಹದಿAದ ಆರಂಭವಾಗಿ ರೈತರಿಗೆ ಹಣ ಪಾವತಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಂತಿಮ ಗ್ರಾಹಕರಿಗೆ ಮಾರಾಟ ಮಾಡುವ ಪ್ರಕ್ರಿಯೆವರೆಗೆ ಈ ಡಿಜಿಟಲ್ ತಂತ್ರಜ್ಞಾನದ ಕಾರ್ಯಚಟುವಟಿಕೆ ವಿಸ್ತರಿಸಿಕೊಂಡಿದೆ ಎಂದರು.

ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಪುಷ್ಪಾ ಕೆ.ಕಡಿವಾಳ, ನರಗುಂದ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಕಾಶ ನವಲಗುಂದ, ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಪ್ರಸನ್ನ ಪಟ್ಟೇದ, ನರಗುಂದ ತಾಲೂಕಿನ ವಿಸ್ತರಣಾಧಿಕಾರಿ ದಿಲೀಪ್ ಆಯ್.ನದಾಫ್ ಉಪಸ್ಥಿತರಿದ್ದರು.

ಹುಣಸಿಕಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಸ್.ಎಸ್. ಹುಚ್ಚನಗೌಡ್ರ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ವಿಸ್ತರಣಾಧಿಕಾರಿ ದಿಲೀಪ್ ಆಯ್.ನದಾಫ್ ವಂದಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ಮಾರುಕಟ್ಟೆಯ ಮೇಲೆ ಹಾಲಿನ ಗುಣಮಟ್ಟ ಪ್ರಬಾವ ಕುರಿತು ಧಾರವಾಡ ಹಾಲು ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಾ. ವೀರೇಶ ತರಲಿ, ಶುದ್ಧ ಹಾಗೂ ಅಧಿಕ ಹಾಲು ಉತ್ಪಾದನೆ ಮತ್ತು ಅಗೋಚರ ಕೆಚ್ಚಲುಬಾವು ಕುರಿತು ಕ.ಹಾ.ಮ. ತರಬೇತಿ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕ ಡಾ. ಎಂ.ಬಿ. ಮಡಿವಾಳರ, ಸಹಕಾರ ಸಂಘಗಳಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಕುರಿತು ಧಾರವಾಡ ಹಾಲು ಒಕ್ಕೂಟದ ನಿವೃತ್ತ ಸಹಾಯಕ ವ್ಯವಸ್ಥಾಪಕ ಎಂ.ಬಿ. ಪಾಟೀಲ ಉಪನ್ಯಾಸ ನಿಡಿದರು.

ವಿದ್ಯಾರ್ಥಿಗಳಿಗೆ ಶ್ರದ್ಧೆ, ಶಿಸ್ತು ಬೇಕು

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು ಕಲಿಕೆಯಲ್ಲಿ ಶ್ರದ್ಧೆ, ಶಿಸ್ತು, ಸಂಯಮ, ಬದ್ಧತೆಯನ್ನು ರೂಢಿಸಿಕೊಂಡು ಏಕಾಗ್ರತೆಯಿಂದ ಅಭ್ಯಾಸ ಮಾಡಿದಲ್ಲಿ ಜೀವನದಲ್ಲಿ ಉನ್ನತ ಹಂತವನ್ನು ತಲುಪಲು ಸಾಧ್ಯವಿದೆ ಎಂದು ಡಾ. ರೇಣುಕಾ ಬಿನ್ನಾಳ ಹೇಳಿದರು.

ಅವರು ಬುಧವಾರ ಗದಗ ತಾಲೂಕಿನ ಬೆಳಹೋಡ ಗ್ರಾಮದ ಪುರದಪ್ಪ ವೀರಪ್ಪ ಹೊಸಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಹಿಂದೆ ಗುರು, ಮುಂದೆ ಗುರಿಯನ್ನು ಇಟ್ಟುಕೊಂಡು ಪರಿಶ್ರಮದೊಂದಿಗೆ ಮುನ್ನಡೆದಲ್ಲಿ ಆದರ್ಶ ವ್ಯಕ್ತಿಯಾಗಿ, ಸಾಧಕರಾಗಿ ಹೊರಹೊಮ್ಮಬಲ್ಲರು. ಇಂದು ನೀವು ಪ್ರತಿಷ್ಠಾನದಿಂದ ನಗದು ಪುರಸ್ಕಾರವನ್ನು ಪಡೆದುಕೊಂಡಿದ್ದೀರಿ ಮುಂದಿನ ದಿನಗಳಲ್ಲಿ ನೀವೂ ಪುರಸ್ಕಾರ ನೀಡುವಂತಾಗಬೇಕು ಎಂದರು.

ಮುಖ್ಯ ಅತಿಥಿ, ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನು ವಿವರಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಶಾಲೆಯ ವಿದ್ಯಾರ್ಥಿಗಳಾದ ಸೌಭಾಗ್ಯ ಹೊಸಳ್ಳಿ, ದೇವಮ್ಮ ಹುಲಕೋಟಿ, ರಕ್ಷಿತಾ ಹುಬ್ಬಳ್ಳಿ, ರೋಶನ್ ನದಾಫ್, ಸಾಗರ್ ಹುಬ್ಬಳ್ಳಿ ಅವರಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣ ಪತ್ರ, ಕಾಲೇಜ್ ಬ್ಯಾಗ್ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಬಿ.ವ್ಹಿ. ಮಲ್ಲನಗೌಡ್ರ ವಹಿಸಿದ್ದರು. ಸಮಾರಂಭದಲ್ಲಿ ಜಿ.ಬಿ. ಕಮಡೊಳ್ಳಿ, ಎಸ್.ಬಿ. ಭಜಂತ್ರಿ, ಎಸ್.ಸಿ. ಲಮಾಣಿ ಸೇರಿದಂತೆ ಪ್ರತಿಷ್ಠಾನದ ಶಿವಾನಂದ ಕತ್ತಿ, ಸುಭಾಸ ಬೆಟದೂರ, ಭಾರತಿ ಪಾಟೀಲ, ರವಿ ದಂಡಿನ, ಸಿದ್ಧಣ್ಣ ಕವಲೂರ, ಎಸ್.ಜಿ. ಫಿರಂಗಿ, ನೇಹಾ ಖಟವಟೆ, ಸುಧಾರಾಣಿ, ಶಹಬಾಜ್ ಮುಂತಾದವರಿದ್ದರು.

 

ಶ್ಯಾಗೋಟಿಯಲ್ಲಿ: ಶ್ಯಾಗೋಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನಿರ್ಮಲಾ ನೀಲಿ, ಸುರೇಖಾ ಪೂಜಾರಿ, ಮೇಘಾ ನೀಲಿ, ಸುಧಾ ಆಡಕರ, ಭುವನೇಶ್ವರಿ ಹಳ್ಳಿ ಅವರಿಗೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯೆ ಸುಧಾ ಮನ್ನಾಪೂರ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಶಂಕರಗೌಡ ಪಾಟೀಲ, ಡಾ.ರೇಣುಕಾ ಬಿನ್ನಾಳ, ಶಿಕ್ಷಕರಾದ ರಾಜು ಪವಾರ, ಸಿ.ಬಿ. ಪಾಟೀಲ, ನಿವೃತ್ತ ಶಿಕ್ಷಕ ಎಂ.ಎಚ್. ಮರಿಗೌಡ್ರ, ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು.

ಹಿರೇಹಂದಿಗೋಳದಲ್ಲಿ

ಹಿರೇಹಂದಿಗೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಲ್ಲನಗೌಡ ಹುಲ್ಲೂರ, ಕವಿತಾ ಕುರ್ತಕೋಟಿ, ಗೀತಾ ನವಲಗುಂದ, ಭಾಗ್ಯಶ್ರೀ ಹಲಗಿ, ಸಂಜನಾ ನರೆಣ್ಣವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ವ್ಹಿ.ಎಚ್. ಗುಡ್ಲಾನೂರ ವಹಿಸಿದ್ದರು. ಶಾಲೆಯ ಶಿಕ್ಷಕರಾದ ವ್ಹಿ.ಎಲ್. ಪೂಜಾರ, ಯು.ವ್ಹಿ. ಮಟ್ಟಿ, ಎಸ್.ಎಸ್. ಪಾಟೀಲ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು.

ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ತಾಯಿ-ಮಗಳು- ಆಗಿದ್ದೇನು?

ಮಂಡ್ಯ:- ಮಂಡ್ಯದ ನೆಹರೂ ನಗರ ಬಡಾವಣೆಯಲ್ಲಿ ಡೆತ್‌ನೋಟ್ ಬರೆದಿಟ್ಟು ತಾಯಿ, ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜರುಗಿದೆ.

ನೇಣಿಗೆ ಶರಣಾಗಿರುವ ತಾಯಿ, ಮಗಳನ್ನು 28 ವರ್ಷದ ರಶ್ಮಿ, 19 ವರ್ಷದ ದಿಶಾ ಎಂದು ಗುರುತಿಸಲಾಗಿದೆ. ಇವರು ಚನ್ನಪಟ್ಟಣ ಮೂಲದವರು ಎನ್ನಲಾಗಿದೆ. ಕಳೆದ 5 ವರ್ಷದಿಂದ ಗಂಡನಿಂದ ದೂರವಾಗಿದ್ದ ರಶ್ಮಿ ಮಂಡ್ಯದ ನೆಹರೂ ನಗರದ ಬಾಡಿಗೆ ಮನೆಯಲ್ಲಿ ಮಗಳ ಜೊತೆ ವಾಸವಿದ್ದರು. ಇದರಿಂದ ಮನನೊಂದಿದ್ದ ರಶ್ಮಿ, ಡೆತ್‌ನೋಟ್ ಬರೆದಿಟ್ಟು ಮಗಳೊಂದಿಗೆ ನೇಣಿಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಮಂಡ್ಯ ಪೂರ್ವ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಶ್ಮಿ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲೇನಿದೆ?

ನನಗೆ ಈ ಜೀವನ ಇಷ್ಟ ಇಲ್ಲ. ಮದುವೆಯಾಗಿಯೂ ಏನು ಸುಖವಿಲ್ಲ. ಒಂಟಿಯಾಗಿ ಐದು ವರ್ಷದಿಂದ ಜೀವನ ಮಾಡುತ್ತಿದ್ದೇನೆ. ಗಂಡನೂ ಬೇರೆ ಮದುವೆ ಆಗುತ್ತೇನೆ. ನನಗೂ ನಿನಗೂ ಸಂಬಂಧ ಇಲ್ಲ ಎಂದು ಬರೆದುಕೊಡು ಎಂದು ಒತ್ತಾಯಿಸುತ್ತಿದ್ದಾರೆ. ನನಗೆ ಈ ಜೀವನ ಸಾಕಾಗಿದೆ. ಅಮ್ಮನನ್ನು ಚೆನ್ನಾಗಿ ನೋಡಿಕೋ ಅಣ್ಣ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಮಾಜೋಪಯೋಗಿ ಕಾರ್ಯದಿಂದ ಪುಣ್ಯ ಪ್ರಾಪ್ತಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸುಲೇಮಾನಿಯಾ ಶಾದಿಮಹಲ್‌ನಲ್ಲಿ ಬುಧವಾರ ದೂದನಾನಾ ಮುಹಿಬ್ಬನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ, ಮಾದಕ ವಸ್ತು ವಿರೋಧಿ ಆಂದೋಲನ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.

ಎನ್‌ಪಿಎಂ ಝೈನುದ್ ಅಭಿದ್ ತಂಬಳ್ ಅವರು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠರಿಗೆ ಅಂಬ್ಯುಲೆನ್ಸ್ ಚಾವಿಯನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಗಡ್ಡದೇವರಮಠ ಮಾತನಾಡಿ, ಉಚಿತ ಅಂಬ್ಯುಲೆನ್ಸ್ ಸೇವೆ ಆರಂಭಿಸಿದ್ದು ಸಮಾಜೋಪಯೋಗಿ ಕೆಲಸವಾಗಿದೆ. ತುರ್ತು ಸಮಯದಲ್ಲಿ ರೋಗಿಗಳನ್ನು ಸಾಗಿಸಲು ಅಂಬ್ಯುಲೆನ್ಸ್ ಉಪಯುಕ್ತವಾಗುತ್ತದೆ. ಕಷ್ಟಪಟ್ಟು ಗಳಿಸಿದ ಸಂಪತ್ತಿನಲ್ಲಿ ಕೆಲ ಭಾಗವನ್ನು ಸಮಾಜದ ಅಭಿವೃದ್ಧಿಗೆ ಖರ್ಚು ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ತಿಳಿಸಿದರು.

ಅಬ್ದುಲ್ ಖಾದರ್ ಮಾತನಾಡಿ, ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ಅಂಬ್ಯುಲೆನ್ಸ್ಗಳು ಬೇಕೇಬೇಕು. ಬಡ ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಂಬ್ಯುಲೆನ್ಸ್‌ ಗಳ ಸೇವೆ ಆರಂಭಿಸಲಾಗಿದೆ ಎಂದು ಹೇಳಿದರು.

ಇಕ್ಬಾಲ್ ಬಾಳಿಲ್ಲ ಮಾತನಾಡಿ, ಯುವ ಜನತೆ ಸಮಾಜ ಸೇವೆ ಮಾಡಲು ಮುಂದಾಗಬೇಕು. ಯುವಕರು ಸಮಾಜದ ಶಕ್ತಿ. ಸುಂದರ ಸಮಾಜ ನಿರ್ಮಾಣಕ್ಕೆ ಅವರು ಶ್ರಮಿಸಬೇಕು. ವಿದ್ಯಾರ್ಥಿಗಳು ಮಾದಕ ಪದಾರ್ಥಗಳ ವ್ಯಸನಿಗಳಾಗುತ್ತಿದ್ದಾರೆ. ಜಾತಿ, ಮತ, ಪಂಥ ಮರೆತು ಸಮಾಜ ಸೇವೆ ಮಾಡಿದಾಗ ದೇವರು ಮೆಚ್ಚುತ್ತಾನೆ ಎಂದರು.

ಎನ್‌ಪಿಎಂ ಝೈನುದ್ ಅಭಿದ್ ತಂಬಳ್, ಇಸ್ಮಾಯಿಲ್ ಆಡೂರ, ಸೈಯದ್ ಜಲಾಲುದ್ದೀನ್ ತಂಬಳ್, ಯು.ಟಿ. ಝುಲ್ವಿಕಾರ್, ದೂದಪೀರಾಂ ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನಸಾಬ್ ಕಣಕೆ, ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಎಂ.ಎಂ. ಗದಗ, ದಾದಾಪೀರ್ ಮುಚ್ಛಾಲೆ, ಫಿರ್ದೋಷ್ ಅಡೂರ, ಸಿಕಂದರಬಾಷಾ ಕಣಕೆ, ಕರವೇ ಸ್ವಾಭಿಮಾನಿ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಡಿ, ಎಮ್.ಐ. ಮುಳಗುಂದ, ದುರ್ಗಣ್ಣವರ, ಮುಸ್ತಾಕ್ ಅಹಮ್ಮದ್ ಶಿರಹಟ್ಟಿ, ವಿಜಯ ಕರಡಿ, ಸರೋಜಕ್ಕ ಬನ್ನೂರ, ಶೈಲಾ ಆದಿ, ಮುನೀರ್‌ಅಹಮ್ಮದ ಸಿದ್ದಾಪೂರ ಮುಂತಾದವರು ಹಾಜರಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರು ಬದಲಾವಣೆಗೆ ಅಸ್ತು ಎಂದ ಸಚಿವ ಸಂಪುಟ!

ಚಿಕ್ಕಬಳ್ಳಾಪುರ:- ರಾಮನಗರವನ್ನು ಇತ್ತೀಚೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿದೆ. ಇದಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಪ್ರತಿಪಕ್ಷಗಳ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸರ್ಕಾರ ಬದಲಾವಣೆ ಮಾಡಿತ್ತು. ಇದರ ಬಳಿಕ ತುಮಕೂರು ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರಿಸಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸೇರಿ ಕೆಲವರು ಒತ್ತಾಯಿಸಿದ್ದರು. ಆದರೆ, ಸರ್ಕಾರ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಬದಲಾಯಿಸುವ ಸಂಬಂಧ ಇಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಅಂತಿಮವಾಗಿ ಹೆಸರು ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ.

1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರಚಿಸಲಾಗಿತ್ತು. ಈ ವೇಳೆ ರಾಮನಗರ ಜಿಲ್ಲೆಯ ತಾಲೂಕುಗಳು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದವು. 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ರಾಮನಗರ ಜಿಲ್ಲೆ ರಚಿಸಲಾಗಿತ್ತು. ಇದೀಗ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ.

ಜುಲೈ 3ರಿಂದ ಫುಟ್‌ಬಾಲ್ ತರಬೇತಿ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲೂ ಫುಟ್‌ಬಾಲ್ ಆಟಗಾರರ ಸಂಖ್ಯೆ ಹೆಚ್ಚುತ್ತಿದ್ದು, ಆಸಕ್ತರಿಗೆ ಗುಣಮಟ್ಟದ ತರಬೇತಿ ನೀಡಲು ಹಾಗೂ ಅರ್ಹ ತರಬೇತುದಾರರಿಂದ ತರಬೇತಿ ಸಿಗಲಿ ಎಂಬ ಉದ್ದೇಶದಿಂದ ‘ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್’ನ ‘ಡಿ’ ಲೈಸೆನ್ಸ್ ಕೋರ್ಸ್ಗೆ ಜುಲೈ 3ರಿಂದ 8ರವರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಸರ್ಫರಾಜ ಶೇಖ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಫುಟ್‌ಬಾಲ್ ಆಟಗಾರರಿದ್ದರು. ಆದರೆ, ಇದೀಗ ಯುವಕರು, ವಿದ್ಯಾರ್ಥಿಗಳು ಫುಟ್‌ಬಾಲ್ ಕ್ರೀಡೆಯತ್ತ ಆಸಕ್ತಿ ವಹಿಸುತ್ತಿದ್ದಾರೆ. ಆದರೆ, ಅವರೆಲ್ಲರಿಗೂ ತರಬೇತಿ ನೀಡಲು ಅರ್ಹ ತರಬೇತುದಾರರ ಕೊರತೆಯಿದ್ದು, ಈ ತರಬೇತಿಯಿಂದ ಕೊರತೆ ನೀಗಲಿದೆ. ಈ ಉದ್ದೇಶದಿಂದ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ ಎಂದರು.

ತರಬೇತಿ ವೇಳೆ 24 ಸ್ಲಾಟ್‌ಗಳಿದ್ದು, ಈಗಾಗಲೇ ಎಲ್ಲವೂ ನೋಂದಣಿಯಾಗಿವೆ. ಇದರಲ್ಲಿ ಗದಗನಿಂದ 18, ಜತೆಗೆ ಮೈಸೂರು, ಬೆಳಗಾವಿ, ಧಾರವಾಡ ಜಿಲ್ಲೆಗಳಿಂದಲೂ ಹೆಸರು ನೋಂದಣಿಯಾಗಿದೆ. ಈ ತರಬೇತಿಗೆ ಕರ್ನಾಟಕ ಸ್ಟೇಟ್ ಫುಟ್‌ಬಾಲ್ ಅಸೋಸೀಯೇಶನ್ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರೂ ಸಹ ಸಹಕಾರ ನೀಡಿದ್ದು, ಅವರಿಗೂ ಸಹ ಗದಗ ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಭಿನಂದಿಸಲಿದೆ ಎಂದು ತಿಳಿಸಿದರು.

ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್‌ನ ‘ಡಿ’ ಲೈಸೆನ್ಸ್ ಕೋರ್ಸ್ ಪೂರ್ಣಗೊಳಿಸಿರುವ ಫುಟ್‌ಬಾಲ್ ತರಬೇತುದಾರ ಶಶಿಕುಮಾರ ಮುಂಡರಗಿ ಮಾತನಾಡಿ, ಗದಗ ಜಿಲ್ಲೆ ಪ್ರತಿ ತಾಲೂಕು, ಹೋಬಳಿ ಮಟ್ಟದಲ್ಲೂ ಫುಟ್‌ಬಾಲ್ ಕ್ರೀಡಾಪಟುಗಳು ಇರಬೇಕು. ಆ ಮೂಲಕ ಗದಗ ಫುಟ್‌ಬಾಲ್ ಸಿಟಿಯಾಗಬೇಕು ಎಂಬ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಆಸಕ್ತಿಯಿಂದಾಗಿ ‘ಎಲೆವನ್ ಸೈಡ್’ ಅಂತಾರಾಷ್ಟ್ರೀಯ ಗುಣಮಟ್ಟದ ಫುಟ್‌ಬಾಲ್ ಕ್ರೀಡಾಂಗಣ ಬರಲಿದೆ. ಇದಕ್ಕೆ ಪೂರಕವಾಗಿ ತರಬೇತುದಾರರ ಸಂಖ್ಯೆ ಹೆಚ್ಚಿ, ಫುಟ್‌ಬಾಲ್ ಕ್ರೀಡಾಪಟುಗಳು ಹೆಚ್ಚಾಗಿ, ಭಾರತ ತಂಡವೂ ಸೇರಿ ರಾಷ್ಟ್ರ ಹಾಗೂ ಅಂತಾ ರಾಷ್ಟ್ರ ಮಟ್ಟದಲ್ಲಿ ಗದಗ ಜಿಲ್ಲೆ ಪ್ರತಿನಿಧಿಸುವವರನ್ನು ಸಿದ್ಧಗೊಳಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ‘ಡಿ’ ಲೈಸೆನ್ಸ್ ಕೋರ್ಸ್ ಪೂರ್ಣಗೊಳಿಸಿರುವ ಫುಟ್‌ಬಾಲ್ ತರಬೇತುದಾರ ಚಂದ್ರಶೇಖರ ಅಣ್ಣಿಗೇರಿ, ಓಂಕಾರ ಓದುಗೌಡರ, ರಮೇಶ ಕರಿಕಟ್ಟಿ, ಪೃಥ್ವಿ ಪರಾಪೂರ ಇದ್ದರು.

ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್‌ನ ‘ಎ’ ಲೈಸೆನ್ಸ್ ಡಿಪ್ಲೋಮಾ ಕೋಚ್ ಹಾಗೂ ಕರ್ನಾಟಕ ಸ್ಟೇಟ್ ಫುಟ್‌ಬಾಲ್ ಅಸೋಸಿಯೇಶನ್‌ನ ಕೋಚ್ ಎಜ್ಯುಕೇಟರ್ ಶಿವಕುಮಾರ ವರದರಾಜ ಮಾತನಾಡಿ, ಫುಟ್‌ಬಾಲ್ ತರಬೇತಿ ಪಡೆಯುವ ಆಸಕ್ತರಿಗೆ ಗುಣಮಟ್ಟದ ತರಬೇತಿ ಸಿಕ್ಕರೆ ಗುಣಮಟ್ಟದ ಕ್ರೀಡಾಪಟುಗಳು ಹೊರಹೊಮ್ಮುತ್ತಾರೆ. ಈ ನಿಟ್ಟಿನಲ್ಲಿ ಕೋರ್ಸ್ ನೆರವಾಗಲಿದೆ ಎಂದು ಹೇಳಿದರು.

ರಾಷ್ಟ್ರ ಮಟ್ಟದ ಆಯುರ್ವೇದ ಸಮ್ಮೇಳನ ಜು.5ಕ್ಕೆ

ವಿಜಯಸಾಕ್ಷಿ ಸುದ್ದು, ಗದಗ: ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಜುಲೈ 5ರಂದು ಬೆಳಗ್ಗೆ 10.30ಕ್ಕೆ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರದಿಂದ ರಾಷ್ಟ್ರ ಮಟ್ಟದ ಆಯುರ್ವೇದ ಸಮ್ಮೇಳನ `ಚೈತನ್ಯ’ ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ ಬೆಳವಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನರ ದೌರ್ಬಲ್ಯ ರೋಗಗಳ ಕುರಿತು ಸಮಗ್ರ ಅಧ್ಯಯನ ವಿಷಯದ ಬಗ್ಗೆ ರಾಷ್ಟ್ರ ಮಟ್ಟದ ಆಯುರ್ವೇದ ಮಹಾ ಸಮ್ಮೇಳನ ಆಯೋಜಿಸಲಾಗಿದೆ. ದೆಹಲಿಯ ರಾಷ್ಟ್ರೀಯ ಆಯುಷ್ ವಿಜ್ಞಾನ ಆಯೋಗ ಆಯುರ್ವೇದ ಮಂಡಳಿಯ ಮಾಜಿ ಅಧ್ಯಕ್ಷ ಡಾ. ಬಿ.ಎಸ್. ಪ್ರಸಾದ ಕಾರ್ಯಕ್ರಮ ಉದ್ಘಾಟಿಸುವರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ ಬೆಳದಡಿ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್. ಪಾಟೀಲ, ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಭಾಗವಹಿಸುವರು ಎಂದರು.

ಸಮ್ಮೇಳನದಲ್ಲಿ ನುರಿತ ಪ್ರಾಧ್ಯಾಪಕರು, ಚಿಕಿತ್ಸಕರು ಹಾಗೂ ನರ ದೌರ್ಬಲ್ಯ ರೋಗಗಳಿಗೆ ಸಂಬಂಧಪಟ್ಟ ವಿವಿಧ ವಿಷಯಗಳ ಮೇಲೆ ಉಪನ್ಯಾಸಗಳನ್ನು ಮತ್ತು ಪ್ರಬಂಧಗಳನ್ನು ಮಂಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಜ್ಞಾನದ ಹರಿವನ್ನು ಹಂಚಲಿದ್ದಾರೆ. ಡಾ. ಮುರಳಿಕೃಷ್ಣ, ಡಾ. ಅಶ್ವಿನಿಕುಮಾರ, ಡಾ. ವೀರಣ್ಣ ಜತ್ತಿ, ವಿನಾಯಕ ಅವರಿಂದ ಉಪನ್ಯಾಸ ಜರುಗಲಿದೆ ಎಂದರು.

ರಾಷ್ಟ್ರ ಮಟ್ಟದ ಆಯುರ್ವೇದ ಮಹಾ ಸಮ್ಮೇಳನಕ್ಕೆ ಕರ್ನಾಟಕ ಹಾಗೂ ಅಂತರ ರಾಜ್ಯಗಳಿಂದ ಸುಮಾರು 50ಕ್ಕೂ ಅಧಿಕ ವಿವಿಧ ಆಯುರ್ವೇದ ಮಹಾವಿದ್ಯಾಲಯಗಳು, ಸಂಘ-ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳಿಂದ ಪ್ರಾಧ್ಯಾಪಕರು, ಸಂಶೋಧಕರು, ವಿಜ್ಞಾನಿಗಳು, ಪಿಎಚ್‌ಡಿ ಮತ್ತು ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ನರ ದೌರ್ಬಲ್ಯ ರೋಗಗಳ ವಿವಿಧ ವಿಷಯಗಳಿಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಂಶೋಧಕರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ದುಗ್ಗಪ್ಪ ಕೊಲ್ಮೆ, ಡಾ. ಬೂದೇಶ ಕನಾಜ, ಡಾ. ಮಲ್ಲಿಕಾರ್ಜುನ, ಡಾ. ಕುಮಾರ ಚೌಡಪ್ಪನವರ ಇದ್ದರು.

ನರ ದೌರ್ಬಲ್ಯ ರೋಗಗಳು ಕೇವಲ ರೋಗಗಳಲ್ಲಿ ಬದಲಾಗಿ, ಮನುಷ್ಯನ ಮೆದುಳಿನಲ್ಲಿರುವ ನರ ಕೋಶಗಳ ಮೇಲೆ ಪರಿಣಾಮ ಬೀರುವ ನರ ಕೋಶಗಳ ಪ್ರಗತಿಶೀಲ ಕ್ಷೀಣತೆ ಅಥವಾ ಸಾವಿಗೆ ಕಾರಣವಾಗುವ ಹಲವಾರು ಪರಸ್ಥಿತಿಗಳಿಗೆ ಪ್ರಮುಖ ಪದವಾಗಿದೆ. ಇದು ಪ್ರಪಂಚಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ನರ ದೌರ್ಬಲ್ಯ ಕಾಯಿಲೆಗಳ ಆತ್ಮಹತ್ಯೆ ದೈಹಿಕ ಅಸ್ವಸ್ಥತೆ ಹೆಚ್ಚಿನ ವೆಚ್ಚಗಳು ಮತ್ತು ಕಳಪೆ ಗುಣಮಟ್ಟದ ಜೀವನದೊಂದಿಗೆ ಗಣನಿಯವಾಗಿ ಜಾಗತಿಕ ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತಿದೆ ಎಂದು ಡಾ. ಸಂತೋಷ ಬೆಳವಡಿ ತಿಳಿಸಿದರು.

error: Content is protected !!