Home Blog Page 92

ಮುರುಘಾಶ್ರೀಗೆ ಮತ್ತೊಂದು ಕಾನೂನು ಸಂಕಷ್ಟ: ಮಠದ 4 ನಿವೇಶನ ಅಕ್ರಮ ಮಾರಾಟ ಆರೋಪ

0

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮುರುಘಾಮಠದ ಮಾಜಿ ಪೀಠಾಧಿಪತಿ ಮುರುಘಾಶ್ರೀ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮುರುಘಾಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪದಡಿ ಮುರುಘಾಶ್ರೀ ವಿರುದ್ಧ ಹೊಸದುರ್ಗ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

ಮುರುಘಾಮಠದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರು ಈ ಸಂಬಂಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಸರ್ಕಾರದಿಂದ ನೇಮಕಗೊಂಡಿರುವ ಮಠದ ಆಡಳಿತ ಸಮಿತಿಗೆ ಪ್ರಕಾಶ್ ಎಂಬುವರಿಂದ ನಿವೇಶನ ಮಾರಾಟದ ಕುರಿತು ದೂರು ಬಂದ ಹಿನ್ನೆಲೆ ವಿಷಯವನ್ನು ಪರಿಶೀಲಿಸಲಾಗಿದ್ದು, ಬಳಿಕ ನ್ಯಾಯಾಲಯವನ್ನು ಸಂಪರ್ಕಿಸಲಾಗಿದೆ.

ಕೋರ್ಟ್‌ನಿಂದ ನಿರ್ಬಂಧ ಇದ್ದರೂ ಮುರುಘಾಶ್ರೀ ಅವರು ಹೊಸದುರ್ಗದ ಎಂ. ಮಂಜುನಾಥ್ ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ನೀಡಿದ್ದು, ಅದರ ಮೂಲಕ ಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಮಮತಾ ಮತ್ತು ನಳಿನಿ ಎಂಬವರಿಗೆ ಮಾರಾಟ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜನವರಿ 30ರಂದು ಮುರುಘಾಮಠದ ಆಡಳಿತ ಸಮಿತಿ ಅಧಿಕೃತವಾಗಿ ಹೊಸದುರ್ಗ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿಯಲಿದೆ.

ಮುರುಘಾಶ್ರೀ ವಿರುದ್ಧ ಈಗಾಗಲೇ ಫೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿದ್ದು, ಆ ಪ್ರಕರಣದಲ್ಲಿ ಅವರು ಎ1 ಆರೋಪಿಯಾಗಿದ್ದಾರೆ. ಈ ಹಿನ್ನೆಲೆ ಅವರ ಮೇಲೆ ಆಸ್ತಿ ವಹಿವಾಟಿಗೆ ಸಂಬಂಧಿಸಿದಂತೆ ಕೋರ್ಟ್ ನಿರ್ಬಂಧ ವಿಧಿಸಿತ್ತು. ಆ ನಿರ್ಬಂಧವನ್ನು ಉಲ್ಲಂಘಿಸಿ ನಿವೇಶನ ಮಾರಾಟ ಮಾಡಲಾಗಿದೆ ಎಂಬುದು ಆಡಳಿತ ಸಮಿತಿಯ ಆರೋಪವಾಗಿದೆ.

ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನ ಪಲ್ಟಿ: 8 ಕರುಗಳು ಸ್ಥಳದಲ್ಲೇ ಸಾವು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪುಟ್ಟ ಕರುಗಳ ದೇಹ

0

ಮಂಡ್ಯ: ನಾಗಮಂಗಲದಿಂದ ಮೈಸೂರಿನ ಕಸಾಯಿಖಾನೆಗೆ 34 ಎಳೆ ಕರುಗಳನ್ನು ಸಾಗಿಸುತ್ತಿದ್ದ ವಾಹನ ಪಲ್ಟಿಯಾದ ಪರಿಣಾಮ 8 ಎಳೆ ಕರುಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಾಗಮಂಗಲ ತಾಲೂಕಿನ ಬಸರಾಳು ನಾಗಮಂಗಲ ರಸ್ತೆಯ ಎಗ್ಗಟ್ಟಿ ಗೇಟ್ ಬಳಿ ನಡೆದಿದೆ.

ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ಹೆಚ್ಚಿನ ಸಂಖ್ಯೆಯ ಎಳೆ ಕರುಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ವಾಹನ ಪಲ್ಟಿಯಾದ ಪರಿಣಾಮ 34 ಕರುಗಳ ಪೈಕಿ 8 ಕರುಗಳು ಸಾವನ್ನಪ್ಪಿದ್ದು, ಹಲವು ಕರುಗಳಿಗೆ ಗಾಯಗಳಾಗಿವೆ.

ಮೃತ ಕರುಗಳ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಘಟನೆ ಸಂಭವಿಸಿದ ತಕ್ಷಣ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.

ಕೊಟ್ಟೂರಿನಲ್ಲಿ ಭೀಕರ ಟ್ರಿಪಲ್ ಮರ್ಡರ್: ಮಗನಿಂದಲೇ ತಂದೆ–ತಾಯಿ–ತಂಗಿ ಹತ್ಯೆ, ಆರೋಪಿಯನ್ನು ಸ್ಥಳಕ್ಕೆ ಕರೆತಂದ ಪೊಲೀಸರು

0

ವಿಜಯನಗರ: ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಮಗನಿಂದಲೇ ತಂದೆ, ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿದ ಭೀಕರ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಆರೋಪಿ ಅಕ್ಷಯ್‌ನನ್ನು ಬೆಂಗಳೂರಿನಿಂದ ಕೊಟ್ಟೂರಿಗೆ ಕರೆತಂದು ಪೊಲೀಸರು ಮಹತ್ವದ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ವಿಜಯನಗರ ಜಿಲ್ಲೆಯ ಕೊಟ್ಟೂರಿಗೆ ಕರೆತಂದಿದ್ದಾರೆ. ಆರೋಪಿ ಅಕ್ಷಯ್‌ನ್ನು ಕೊಟ್ಟೂರಿನ ಎಲ್.ಬಿ. ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಆತಂಕಕಾರಿ ಬೆಳವಣಿಗೆಗಳು ಕಂಡುಬಂದಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆಯ ಹಾಲ್‌ನಲ್ಲೇ ತಂದೆ–ತಾಯಿ–ತಂಗಿಯ ಮೂರು ಶವಗಳನ್ನು ಹೂತು ಹಾಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಸಹಾಯಕ ಆಯುಕ್ತ (ಎಸಿ) ಹಾಗೂ ತಹಸೀಲ್ದಾರ್ ಅವರ ಸಮ್ಮುಖದಲ್ಲಿ ಮೃತದೇಹಗಳನ್ನು ಹೊರತೆಗೆಯಲು ಸಿದ್ಧತೆ ನಡೆಸಲಾಗಿದೆ.

ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಫೊರೆನ್ಸಿಕ್ ತಂಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಈ ಭೀಕರ ಪ್ರಕರಣ ಕೊಟ್ಟೂರು ಪಟ್ಟಣದಲ್ಲಿ ಭಯ ಮತ್ತು ಆತಂಕವನ್ನು ಮೂಡಿಸಿದೆ.

ಬೆಂಗಳೂರು, ದಕ್ಷಿಣ ಕರ್ನಾಟಕದಲ್ಲಿ ವಾಯು ಗುಣಮಟ್ಟ ಸಾಧಾರಣ: ಮಧ್ಯಾಹ್ನ ಬಿಸಿಲು ಹೆಚ್ಚಳ

0

ಬೆಂಗಳೂರು: ಕರ್ನಾಟಕದಾದ್ಯಂತ ಇಂದು (ಜನವರಿ 31, 2026) ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದೆಯಾದರೂ, ಮಹಾನಗರಗಳಲ್ಲಿ ಅಲ್ಪ ಸುಧಾರಣೆ ಕಂಡುಬಂದಿದೆ. ಮುಂಜಾನೆಯ ಮಂಜಿನ ಪ್ರಮಾಣ ಕಡಿಮೆಯಾಗಿರುವುದರಿಂದ ಮಾಲಿನ್ಯಕರ ಗಾಳಿಗಳು ಹಾಗೂ ಕಣಗಳು ಹತೋಟಿಗೆ ಬಂದಿವೆ.

ನಗರದ ಸಿಲ್ಕ್ ಬೋರ್ಡ್, ಪೀಣ್ಯ ಮತ್ತು ವೈಟ್‌ಫೀಲ್ಡ್ ಭಾಗಗಳಲ್ಲಿ ಮಾಲಿನ್ಯ ಮಟ್ಟ 160–170 ರ ಹಾಸುಪಾಸಿನಲ್ಲಿದ್ದು, ಹತ್ತಿರದ ಪ್ರದೇಶಗಳಿಗಿಂತ ಗಾಳಿ ಇನ್ನೂ ಕಳಪೆಯಾಗಿದ್ದು, ಜಯನಗರ ಮತ್ತು ಪದ್ಮನಾಭನಗರದಲ್ಲಿ ಗಾಳಿ ತುಸು ಶುದ್ಧವಾಗಿದೆ. ಮಂಗಳೂರು ಮತ್ತು ಉಡುಪಿ ಭಾಗಗಳಲ್ಲಿ ವಾಯು ಗುಣಮಟ್ಟ ‘ಕಳಪೆ’ ಹಂತದಲ್ಲೇ ಮುಂದುವರಿದಿದೆ. ಉಸಿರಾಟದ ಸಮಸ್ಯೆ ಇರುವವರು ಹೊರಗಡೆ ಸಂಚರಿಸುವಾಗ ಎಚ್ಚರವಾಗಿರಬೇಕಾಗಿದೆ.

ಮಧ್ಯಾಹ್ನ ಬಿಸಿಲು ಹೆಚ್ಚಾಗುತ್ತಿದ್ದಂತೆ ಗಾಳಿಯ ವೇಗ ಕೂಡ ಹೆಚ್ಚಾಗುತ್ತಿದ್ದು, AQI ಮಟ್ಟ ಇನ್ನೂ 10–15 ಪಾಯಿಂಟ್‌ಗಳಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ವೈಟ್‌ಫೀಲ್ಡ್ ಮತ್ತು ಮಹದೇವಪುರದಲ್ಲಿ ಮೆಟ್ರೋ ಕಾಮಗಾರಿ ಮತ್ತು ವಾಹನ ದಟ್ಟಣೆಯಿಂದಾಗಿ AQI 180+ (ಕಳಪೆ) ಇದೆ.

ಪೀಣ್ಯ ಕೈಗಾರಿಕಾ ಪ್ರದೇಶದ ಪರಿಣಾಮವಾಗಿ ಇಲ್ಲಿ ಮಾಲಿನ್ಯ 195 ರಷ್ಟು ತಲುಪಿದೆ. ಜಯನಗರ ಮತ್ತು ಮಲ್ಲೇಶ್ವರ ಪ್ರದೇಶಗಳಲ್ಲಿ ಹಸಿರು ಪ್ರದೇಶಗಳಿರುವುದರಿಂದ ಗಾಳಿಯ ಗುಣಮಟ್ಟ ಉತ್ತಮವಾಗಿದ್ದು, AQI 110–125 (ಸಾಧಾರಣ)ವಾಗಿದೆ. ಮೆಜೆಸ್ಟಿಕ್ ಮತ್ತು ಸಿಲ್ಕ್ ಬೋರ್ಡ್‌ನಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ AQI 175 ದಾಟಿದೆ.

ಮಧ್ಯಾಹ್ನದ ಅವಧಿಯಲ್ಲಿ ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚುವ ಸಾಧ್ಯತೆ ಇದೆ. ಮಧ್ಯಾಹ್ನ 1:00 ರಿಂದ 3:30 ರವರೆಗೆ ತಾಪಮಾನವು 30°C–31°C ತಲುಪಲಿದೆ. ಶುಷ್ಕ ಗಾಳಿ ಬೀಸುತ್ತಿರುವುದರಿಂದ ಬಿಸಿಲಿನ ತಾಪ ಹೆಚ್ಚು ಅನಿಸುವ ಸಾಧ್ಯತೆ ಇದೆ. ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಧ್ಯಾಹ್ನ ತಾಪಮಾನವು 34°C ದಾಟಬಹುದು.

ಬಿಸಿಲಿನ ತೀವ್ರತೆಗೆ ಸಂಬಂಧಿಸಿದಂತೆ, ಬೆಂಗಳೂರು ಮತ್ತು ಮಂಗಳೂರಿನಲ್ಲಿ AQI 10–20 ಪಾಯಿಂಟ್‌ಗಳಷ್ಟು ಸುಧಾರಣೆ ಕಾಣಲಿದೆ. ಬೆಳಗಿನ ಸಮಯದೊಂದಿಗೆ ಹೋಲಿಸಿದರೆ ಮಧ್ಯಾಹ್ನದ ವಾತಾವರಣ ಉಸಿರಾಟಕ್ಕೆ ಹೆಚ್ಚು ಸುರಕ್ಷಿತವಾಗಿರುತ್ತದೆ. ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಮಧ್ಯಾಹ್ನದ ನಂತರ ಭಾಗಶಃ ಮೋಡ ಕವಿದ ವಾತಾವರಣವಿರಬಹುದು, ಆದರೆ ಮಳೆಯ ಸಂಭವ ಇಲ್ಲ. ತಜ್ಞರು ಮಧ್ಯಾಹ್ನ 12–3 ಗಂಟೆಯವರೆಗೆ ಹೆಚ್ಚು ಬಿಸಿಲು ಇದ್ದು, ನಿರ್ಜಲೀಕರಣ (Dehydration) ತಪ್ಪಿಸಲು ಹೆಚ್ಚು ನೀರು ಕುಡಿಯುವಂತೆ ಸೂಚಿಸಿದ್ದಾರೆ.

ಫಿನಾಯಿಲ್ ಹೇಳಿಕೆ ಸುಳ್ಳಾಯ್ತು! ಮೈಸೂರಿನಲ್ಲಿ ಎನ್ಸಿಬಿಗೆ ಸಿಕ್ಕ ಹೈಟೆಕ್ ಡ್ರಗ್ಸ್ ಲ್ಯಾಬ್ – ರಾಜ್ಯ ಸರ್ಕಾರಕ್ಕೆ ಮುಖಭಂಗ

0

ಮೈಸೂರು: ಮೈಸೂರಿನಲ್ಲಿ ಪತ್ತೆಯಾಗಿದ್ದು ಕೇವಲ ಫಿನಾಯಿಲ್ ಫ್ಯಾಕ್ಟರಿ ಎಂಬ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕೃತ ಪ್ರಕಟಣೆ ತೀವ್ರ ಹಿನ್ನಡೆಯನ್ನುಂಟುಮಾಡಿದೆ. ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಫಿನಾಯಿಲ್ ಫ್ಯಾಕ್ಟರಿ ಹೆಸರಲ್ಲಿ ಹೈಟೆಕ್ ರಹಸ್ಯ ಡ್ರಗ್ಸ್ ಲ್ಯಾಬ್ ಕಾರ್ಯನಿರ್ವಹಿಸುತ್ತಿತ್ತು ಎಂದು ಎನ್ಸಿಬಿ ಸ್ಪಷ್ಟಪಡಿಸಿದೆ.

ಗುಜರಾತ್ ಮತ್ತು ಕರ್ನಾಟಕದಲ್ಲಿ ಹರಡಿದ್ದ ಮಾದಕ ದ್ರವ್ಯ ಜಾಲವನ್ನು ಎನ್ಸಿಬಿ ಭೇದಿಸಿದ್ದು, ಸುಮಾರು 10 ಕೋಟಿ ರೂ. ಮೌಲ್ಯದ 35 ಕೆಜಿ ಮೆಫೆಡ್ರೋನ್ (MD), 1.8 ಕೆಜಿ ಅಫೀಮು ಹಾಗೂ 25.6 ಲಕ್ಷ ರೂ. ನಗದು ವಶಪಡಿಸಿಕೊಂಡಿದೆ. ರಾಜಸ್ಥಾನದ ಜಾಲೋರ್ ಜಿಲ್ಲೆಯ ಮಹೇಂದ್ರ ಕುಮಾರ್ ವಿಷ್ಣೋಯ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಎನ್ಸಿಬಿ ಮಾಹಿತಿ ಪ್ರಕಾರ, ಜೈಲಿನಲ್ಲಿದ್ದಾಗಲೇ ಡ್ರಗ್ಸ್ ತಯಾರಿಕೆ ಕಲಿತ ಮಹೇಂದ್ರ ಕುಮಾರ್, ಜಾಮೀನಿನ ಮೇಲೆ ಹೊರಬಂದ ನಂತರ ಮೈಸೂರಿನಲ್ಲಿ ಈ ರಹಸ್ಯ ಡ್ರಗ್ಸ್ ಲ್ಯಾಬ್ ಸ್ಥಾಪಿಸಿದ್ದ. ದಾಳಿ ವೇಳೆ ಅತ್ಯಾಧುನಿಕ ಉಪಕರಣಗಳು ಮತ್ತು ಡ್ರಗ್ಸ್ ತಯಾರಿಕೆಗೆ ಬೇಕಾದ ವಸ್ತುಗಳು ಪತ್ತೆಯಾಗಿವೆ.

ಈ ಹಿಂದೆ ಗೃಹ ಸಚಿವರು “ಇಲ್ಲಿ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ” ಎಂದು ಸ್ಥಳೀಯ ಪೊಲೀಸರ ವರದಿಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಕೇಂದ್ರ ಸಂಸ್ಥೆಯಾದ ಎನ್ಸಿಬಿ ಇದೀಗ ಸಂಪೂರ್ಣ ಡ್ರಗ್ಸ್ ಉತ್ಪಾದನಾ ಘಟಕ ಪತ್ತೆಯಾಗಿದೆ ಎಂದು ಬಹಿರಂಗಪಡಿಸಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದ್ದು, ರಾಜ್ಯದ ಗುಪ್ತಚರ ವ್ಯವಸ್ಥೆ ಮತ್ತು ಸ್ಥಳೀಯ ತನಿಖೆಯ ಮೇಲೂ ಪ್ರಶ್ನೆ ಎತ್ತಿದೆ.

ಬಂಧಿತ ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಲಾಗಿದ್ದು, ಮೈಸೂರಿನ ಘಟಕಕ್ಕೆ ರಾಸಾಯನಿಕ ಪೂರೈಕೆ ಮಾಡುತ್ತಿದ್ದ ಜಾಲದ ಕುರಿತು ತನಿಖೆ ಮುಂದುವರಿದಿದೆ. ‘ನಶಾ ಮುಕ್ತ ಭಾರತ’ ಅಭಿಯಾನದಡಿ ದೇಶಾದ್ಯಂತ ಇಂತಹ ರಹಸ್ಯ ಡ್ರಗ್ಸ್ ಘಟಕಗಳ ಮೇಲೆ ನಿಗಾ ಇಡಲಾಗುತ್ತದೆ ಎಂದು ಎನ್ಸಿಬಿ ತಿಳಿಸಿದೆ.

“ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ರಿ” – ಸಿಜೆ ರಾಯ್ ನೆನೆದು ಬಿಗ್‌ಬಾಸ್ ವಿನ್ನರ್ ಹನುಮಂತು ಭಾವುಕ

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ (CJ Roy) ಅವರ ನಿಧನಕ್ಕೆ ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಭಾವುಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು, ನಿಮ್ಮ ಋಣವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹನುಮಂತು ಇನ್‌ಸ್ಟಾಗ್ರಾಂನಲ್ಲಿ ನೋವಿನ ಪದಗಳಲ್ಲಿ ಬರೆದುಕೊಂಡಿದ್ದಾರೆ.

ಹನುಮಂತು ತಮ್ಮ ಪೋಸ್ಟ್‌ನಲ್ಲಿ, ಸರಿಗಮಪ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದ ವೇಳೆ ಸಿಜೆ ರಾಯ್ ಅವರು ಹಣ ನೀಡಿ ನನ್ನ ಜೀವನಕ್ಕೆ ಹೊಸ ದಾರಿ ತೋರಿಸಿದರು. ನಂತರ ಬಿಗ್‌ಬಾಸ್ ಸೀಸನ್ 11ರಲ್ಲಿ ಗೆದ್ದಾಗಲೂ ಪ್ರೀತಿಯಿಂದ ಹಣ ನೀಡಿ ಸಂಭ್ರಮಿಸಿದ್ದರು. ನಿಮ್ಮ ಈ ಉಪಕಾರವನ್ನು ನಾನು ಎಂದಿಗೂ ಮರೆತೇನು ಸಾಧ್ಯವಿಲ್ಲ ಸರ್ ಎಂದು ಹೇಳಿದ್ದಾರೆ.

ಸಿಜೆ ರಾಯ್ ಅವರ ಅಗಲಿಕೆಯ ಸುದ್ದಿ ಕೇಳಿ ಮನಸ್ಸು ತುಂಬಾ ಭಾರವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಮಿಸ್ ಯು ರಾಯ್ ಸರ್ ಎಂದು ಹನುಮಂತು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಸಿಜೆ ರಾಯ್ ಅವರು ಹನುಮಂತುಗೆ ಹಣ ನೀಡಿದ್ದ ಸಂದರ್ಭದ ವಿಡಿಯೋವನ್ನು ಹನುಮಂತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಶುಕ್ರವಾರ (ಜ.31) ಮಧ್ಯಾಹ್ನ ಸುಮಾರಿಗೆ ಐಟಿ ದಾಳಿ ವೇಳೆ ಸಿಜೆ ರಾಯ್ ಅವರು ತಮ್ಮ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಲೇಬರ್ ಶೆಡ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ 4 ಮಂದಿ ಕೂಲಿ ಕಾರ್ಮಿಕರು ಸಾವು

0

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಾಲ್ವರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಲೇಬರ್ ಶೆಡ್‌ನ ರೂಮ್‌ನಲ್ಲಿ ನಾಲ್ವರೂ ಮಲಗಿದ್ದ ಸ್ಥಿತಿಯಲ್ಲೇ ಮೃತರಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮುತ್ಸಂದ್ರ ಗ್ರಾಮದ ಛೋಟಾಸಾಬ್ ಅವರಿಗೆ ಸೇರಿದ ಲೇಬರ್ ಶೆಡ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತರು ಅಸ್ಸಾಂ ರಾಜ್ಯದ ಮೂಲದವರಾಗಿದ್ದಾರೆ. ಅವರು ಕೋಕಾಕೋಲಾ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಸೌಲಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಲ್ವರು ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದೆ.

40 ಸಾವಿರ ಕೋಟಿ ಬ್ಯಾಂಕ್ ವಂಚನೆ: RCOM ಮಾಜಿ ಅಧ್ಯಕ್ಷ ಪುನೀತ್ ಗಾರ್ಗ್‌ ಇಡಿ ಬಂಧನ

0

ನವದೆಹಲಿ: ಸುಮಾರು ₹40,000 ಕೋಟಿ ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCOM) ಮಾಜಿ ಅಧ್ಯಕ್ಷ ಪುನೀತ್ ಗಾರ್ಗ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ. ಪ್ರಕರಣದ ಆರ್ಥಿಕ ಅಂಶಗಳು ಮತ್ತು ಹಣ ವರ್ಗಾವಣೆಯ ಜಾಡು ಪತ್ತೆಹಚ್ಚುವ ಉದ್ದೇಶದಿಂದ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 21 ರಂದು ಸಿಬಿಐ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ), 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 420 (ವಂಚನೆ) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿತ್ತು. ಅದೇ ಪ್ರಕರಣದ ಆಧಾರದಲ್ಲಿ ಇಡಿ ಹಣದ ಅಕ್ರಮ ವರ್ಗಾವಣೆ ತನಿಖೆ ನಡೆಸುತ್ತಿದೆ.

ಪುನೀತ್ ಗಾರ್ಗ್ ಅವರು 2006ರಿಂದ 2013ರವರೆಗೆ ಆರ್‌ಸಿಒಎಂ ಅಧ್ಯಕ್ಷರಾಗಿ ಕಂಪನಿಯ ಜಾಗತಿಕ ಉದ್ಯಮ ವ್ಯವಹಾರಗಳನ್ನು ನಿರ್ವಹಿಸಿದ್ದರು. ಬಳಿಕ 2014 ರಿಂದ 2017ರವರೆಗೆ ಅಧ್ಯಕ್ಷರಾಗಿ (ನಿಯಂತ್ರಣ ವ್ಯವಹಾರಗಳು) ಕಾರ್ಯನಿರ್ವಹಿಸಿದ್ದರು. ಅಕ್ಟೋಬರ್ 2017ರಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡ ಅವರು, 2019ರಿಂದ 2025ರವರೆಗೆ ಆರ್‌ಸಿಒಎಂನ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಬಂಧನದ ಬಳಿಕ ಪುನೀತ್ ಗಾರ್ಗ್ ಅವರನ್ನು ಶುಕ್ರವಾರ ರೌಸ್ ಅವೆನ್ಯೂ ಕೋರ್ಟ್‌ನ ಪಿಎಂಎಲ್‌ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅಪರಾಧದ ಉಳಿದ ಹಣವನ್ನು ಪತ್ತೆಹಚ್ಚಲು, ಇತರ ಆರೋಪಿಗಳನ್ನು ಗುರುತಿಸಲು ಮತ್ತು ಸಂಪೂರ್ಣ ಹಣ ವರ್ಗಾವಣೆ ಸರಪಳಿಯನ್ನು ಬಹಿರಂಗಪಡಿಸುವ ಉದ್ದೇಶದಿಂದ ನ್ಯಾಯಾಲಯವು ಅವರನ್ನು ಒಂಬತ್ತು ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಿದೆ.

ಸಿಜೆ ರಾಯ್ ಡೈರಿಯಲ್ಲಿ ನಟಿಯರು–ರಾಜಕಾರಣಿಗಳ ಹೆಸರು! ಆತ್ಮಹತ್ಯೆ ಹಿಂದಿದೆಯಾ ಬೇರೆಯದ್ದೇ ರಹಸ್ಯ?

0

ಬೆಂಗಳೂರು: ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್‌ ಮ್ಯಾನೇಜಿಂಗ್ ಡೈರೆಕ್ಟರ್ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಹೊಸ ಅನುಮಾನಗಳು ಮೂಡುತ್ತಿವೆ. ಆತ್ಮಹತ್ಯೆಗೆ ಮುನ್ನ ಅವರು ಯಾರೊಂದಿಗೆ ಮಾತನಾಡಿದ್ದರು? ಅಥವಾ ಯಾರಿಗಾದರೂ ಮೆಸೇಜ್ ಕಳುಹಿಸಿದ್ದರಾ? ಎಂಬ ಅಂಶಗಳ ಬಗ್ಗೆ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.

ಕಾನ್ಫಿಡೆಂಟ್ ಗ್ರೂಪ್ ಎಂಡಿ ನೀಡಿದ ದೂರಿನ ಪ್ರಕಾರ, ಆತ್ಮಹತ್ಯೆಗೆ ಮುನ್ನ ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಬೇಕೆಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಗನ್‌ಮ್ಯಾನ್‌ಗೆ ಯಾರನ್ನೂ ಒಳಗೆ ಬಿಡದಂತೆ ಸೂಚಿಸಿದ್ದರು. ಆದರೆ, ಆತ್ಮಹತ್ಯೆಗೆ ಮುನ್ನ ನಿಜಕ್ಕೂ ತಾಯಿಯೊಂದಿಗೆ ಮಾತನಾಡಿದರೋ ಅಥವಾ ಬೇರೆ ಯಾರೊಂದಿಗಾದರೂ ಸಂಪರ್ಕ ಹೊಂದಿದ್ದರೋ ಎಂಬುದು ಸದ್ಯ ಪೊಲೀಸರ ಪ್ರಮುಖ ಅನುಮಾನವಾಗಿದೆ.

ಈ ಹಿನ್ನೆಲೆಯಲ್ಲಿ ರಾಯ್ ಬಳಿಯಿದ್ದ ಐಫೋನ್ ಹಾಗೂ ಆ್ಯಂಡ್ರಾಯ್ಡ್ ಸೇರಿ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಸಿಐಡಿ ಸೈಬರ್ ಸೆಲ್‌ಗೆ ರವಾನಿಸಿದ್ದಾರೆ. ಎರಡೂ ಮೊಬೈಲ್‌ಗಳಿಗೆ ಪಾಸ್‌ವರ್ಡ್ ಇರುವುದರಿಂದ ಕೋರ್ಟ್ ಅನುಮತಿ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸುವ ಅಗತ್ಯವಿದೆ. ಸದ್ಯ ಸೈಬರ್ ಸೆಲ್ ಮೂಲಕ ಮೊಬೈಲ್ ಡೇಟಾ ರಿಕವರಿ ಪ್ರಕ್ರಿಯೆ ಆರಂಭಿಸಲಾಗಿದೆ.

ಇನ್ನೂ ನಿನ್ನೆ (ಜ.31) ರಾತ್ರಿ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಪತ್ತೆಯಾದ ಸಿಜೆ ರಾಯ್ ಅವರ ಡೈರಿಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡೈರಿಯಲ್ಲಿ ಕೆಲ ನಟಿಯರು, ಮಾಡೆಲ್‌ಗಳು ಹಾಗೂ ರಾಜಕಾರಣಿಗಳ ಹೆಸರುಗಳು ದಾಖಲಾಗಿರುವುದು ಪತ್ತೆಯಾಗಿದೆ. ಈ ಹೆಸರುಗಳು ಕೇವಲ ಈವೆಂಟ್ ಅಥವಾ ವೃತ್ತಿಪರ ವಿಚಾರಕ್ಕೆ ಸಂಬಂಧಿಸಿದ್ದೇ? ಅಥವಾ ಬೇರೆ ಹಿನ್ನೆಲೆ ಇದೆಯೇ? ಎಂಬುದರ ಬಗ್ಗೆ ಪೊಲೀಸರು ಇಂಚಿಂಚೂ ಪರಿಶೀಲನೆ ನಡೆಸುತ್ತಿದ್ದಾರೆ.

CJ Roy: ಡಾ. ಸಿ.ಜೆ. ರಾಯ್ ಇಚ್ಛೆಯಂತೆ ಬನ್ನೇರುಘಟ್ಟದಲ್ಲಿ ಅಂತ್ಯಸಂಸ್ಕಾರ!

0

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಡಾ. ಸಿ.ಜೆ. ರಾಯ್ ಅವರ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿಂದೆ ತಮ್ಮ ಆಪ್ತರ ಬಳಿ ವ್ಯಕ್ತಪಡಿಸಿದ್ದ ಆಶಯದಂತೆ, ಡಾ. ಸಿ.ಜೆ. ರಾಯ್ ಅವರ ಅಂತ್ಯಸಂಸ್ಕಾರವನ್ನು ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲಿ ನೆರವೇರಿಸಲಾಗುತ್ತದೆ. ಮೃತ ರಾಯ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಕೋರಮಂಗಲದಲ್ಲಿರುವ ವೈಟ್ ಹೌಸ್ನಲ್ಲಿ ಇಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ವೈಟ್ ಗೋಲ್ಡ್ ಸಂಸ್ಥೆಯ ಮಾಲೀಕ ಹಾಗೂ ರಾಯ್ ಅವರ ಸಹೋದರ ಬಾಬು ಜೋಸೆಫ  ಒಡೆತನದ  ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಡಾ. ಸಿ.ಜೆ. ರಾಯ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲಿ ನಡೆಯುವ ಸಾಧ್ಯತೆ ಇದ್ದು, ನಾಡಿನ ಪ್ರಮುಖ ಉದ್ಯಮಿಗಳು, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

error: Content is protected !!