ಬೆಂಗಳೂರು: ಆರ್ಎಸ್ಎಸ್ ಕುರಿತು ಪ್ರಶ್ನೆಗಳನ್ನು ಎತ್ತುವ ಕಾಂಗ್ರೆಸ್ ನಾಯಕರ ಸಾಲಿಗೆ ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಸೇರಿದ್ದಾರೆ ಎಂದು ವಿಧಾನ ಪರಿಷತ್ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ವಿಚಾರಕ್ಕೆ ಅವರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಪ್ರಿಯಾಂಕ್ ಖರ್ಗೆ ಕೇಳಿರುವ ಪ್ರಶ್ನೆಗಳು ಹೊಸದೇನಲ್ಲ. ಈ ಹಿಂದೆ ಕಾಂಗ್ರೆಸ್ನ ಅನೇಕ ನಾಯಕರು ಇದೇ ರೀತಿಯ ಪ್ರಶ್ನೆಗಳನ್ನು ಕೇಳಿದ್ದು, ಅವರಿಗೆ ಈಗಾಗಲೇ ಉತ್ತರ ದೊರೆತಿದೆ. ಉತ್ತರ ಸಿಕ್ಕಿದ್ದರೂ ಅದೇ ಪ್ರಶ್ನೆಯನ್ನು ಮತ್ತೆ ಮತ್ತೆ ಮುಂದಿಡಲಾಗುತ್ತಿದೆ ಎಂದು ಹೇಳಿದರು.
ಈಗ ಮೋಹನ್ ಭಾಗವತ್ ಕೂಡ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಹೀಗಾಗಿ ಅವರಿಗೆ ಬೇಕಾದ ಉತ್ತರ ದೊರೆತಿದೆ. ಈ ಹಿಂದೆ ಇದೇ ರೀತಿಯ ಪ್ರಶ್ನೆಗಳನ್ನು ಕೇಳಿದವರನ್ನು ‘ಗಾಂಪರು ದೊರೆಗಳು’ ಎಂದು ಕರೆಯಲಾಗುತ್ತಿತ್ತು. ಈಗ ಆ ಪಟ್ಟಿಗೆ ಪ್ರಿಯಾಂಕ್ ಖರ್ಗೆ ಕೂಡ ಸೇರಿದ್ದು, ಅವರು ಕರ್ನಾಟಕದ ‘ಗಾಂಪರು ದೊರೆ’ ಎಂದು ವ್ಯಂಗ್ಯವಾಡಿದರು.
ಮಾಧ್ಯಮಗಳಲ್ಲಿ ತಮ್ಮ ಹೆಸರು ಹೆಚ್ಚು ಪ್ರಚಾರವಾಗಬೇಕು ಹಾಗೂ ತಾವು ಮೇಧಾವಿಗಳೆಂದು ಬಿಂಬಿಸಿಕೊಳ್ಳುವ ಉದ್ದೇಶದಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಇದೇ ವೇಳೆ, “ನೀವು ಪರಿಶಿಷ್ಟ ಜಾತಿ ಸಮುದಾಯದವರು. ಡಾ. ಬಿ.ಆರ್. ಅಂಬೇಡ್ಕರ್ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸಿ ಮೀಸಲಾತಿಯನ್ನು ಕಲ್ಪಿಸಿಕೊಟ್ಟಿದ್ದಾರೆ. ಆದರೆ ಆರ್ಎಸ್ಎಸ್ನಿಂದ ಯಾವ ದಲಿತರಿಗೆ ಅನ್ಯಾಯವಾಗಿದೆ? ಆರ್ಎಸ್ಎಸ್ ಬಗ್ಗೆ ಪ್ರಶ್ನೆಗಳನ್ನು ಕೇಳುವುದರಿಂದ ದಲಿತ ಸಮುದಾಯಕ್ಕೆ ಯಾವ ರೀತಿಯ ಪ್ರಯೋಜನವಾಗಲಿದೆ?” ಎಂದು ಪ್ರಶ್ನಿಸಿದರು.



