ಬೆಂಗಳೂರು: ತವರಿನಲ್ಲಿ ಒಂದು ಗೆಲುವಿಗಾಗಿ ಕಾದು ಕುಳಿತಿದ್ದ ಆರ್ಸಿಬಿ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಐಪಿಎಲ್ 2025 ರ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಿದ್ದ ಆರ್ಸಿಬಿ ಕೊನೆಗೂ ತನ್ನ ತವರು ಮೈದಾನದಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.
ಈ ಮೊದಲು ಈ ಸೀಸನ್ನಲ್ಲಿ 3 ತವರು ಪಂದ್ಯಗಳನ್ನು ಆಡಿದ್ದ ಆರ್ಸಿಬಿ ಮೂರೂ ಪಂದ್ಯಗಳನ್ನು ಸೋತಿತ್ತು. ಆದರೆ ರಾಜಸ್ಥಾನ್ ವಿರುದ್ಧ ಸಾಂಘಿಕ ಹೋರಾಟ ನೀಡಿದ ಆರ್ಸಿಬಿ ತವರಿನಲ್ಲಿ ಆಡಿದ 4ನೇ ಪಂದ್ಯದಲ್ಲಿ 11 ರನ್ಗಳ ರೋಚಕ ಜಯ ಸಾಧಿಸಿತು.
ಇನ್ನೂ ಪಂದ್ಯ ಗೆದ್ದ ಖುಷಿಯಲ್ಲಿ ಮಾತನಾಡಿರುವ ಕ್ಯಾಪ್ಟನ್ ರಜತ್ ಪಾಟೀದಾರ್, ಈ ಗೆಲುವು ನಮಗೆ ತುಂಬಾ ಅಗತ್ಯವಾಗಿತ್ತು. ಇಂದು ವಿಕೆಟ್ ವಿಭಿನ್ನವಾಗಿತ್ತು. 10ನೇ ಓವರ್ ನಂತರ ನಮ್ಮ ಬೌಲರ್ಗಳು ಕಂಟ್ರೋಲ್ಗೆ ತಂದರು. ಗೆಲುವಿನ ಕ್ರೆಡಿಟ್ ಬೌಲರ್ಗಳಿಗೆ ಸಲ್ಲುತ್ತದೆ. ಅವರು ಧೈರ್ಯ ಅದ್ಭುತವಾಗಿತ್ತು.
ರಾಜಸ್ಥಾನ್ ರಾಯಲ್ಸ್, ಆರಂಭದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ನಾವು ವಿಕೆಟ್ಗಳನ್ನು ಹುಡುಕುತ್ತಿದ್ದೆವು. ವಿಕೆಟ್ ಬಿದ್ದಾಗ ಮಾತ್ರ ರನ್ ಓಟಕ್ಕೆ ಬ್ರೇಕ್ ಹಾಕಬಹುದು. ನಮ್ಮಲ್ಲಿ ಉತ್ತಮ ನಾಯಕರ ತಂಡವಿದೆ. ಅವರ ಇನ್ಪುಟ್ಗಳು ಬಹಳಷ್ಟು ಸಹಾಯ ಮಾಡುತ್ತವೆ ಎಂದರು.