ವಿಜಯಸಾಕ್ಷಿ ಸುದ್ದಿ, ನರೇಗಲ್ : ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಕಡ್ಡಾಯವಾಗಿ ಸಂಸ್ಥೆಯ ನಿಯಮಾವಳಿಗಳನ್ನು ಪಾಲಿಸಬೇಕು. ಏಕೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಮಾಡಿಕೊಳ್ಳುವ ಅಧಿಕಾರವು ಸಂಸ್ಥೆಗಳಿಗೆ ಇರುವುದರಿಂದ ಆ ಸಂಸ್ಥೆಗಳೆ ನೌಕರರ ನೇಮಕಾತಿ ಪ್ರಾಧಿಕಾರಿಗಳಾಗಿರುತ್ತವೆ. ಆದ್ದರಿಂದ ಸಂಸ್ಥೆಗಳು ರೂಪಿಸುವ ನಿಯಮಗಳಿಗೆ ಅಲ್ಲಿನ ನೌಕರರು ನಿಷ್ಠೆಯಿಂದ ಇರುವುದು ಅವಶ್ಯಕ ಎಂದು ಪ.ಪೂ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಬಿ.ಎಸ್. ಗೌಡರ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಮೂರು ದಿನಗಳ ಪುನಶ್ಚೇತನ ತರಬೇತಿ ಶಿಬಿರದ 3ನೇ ದಿನ ಅವರು `ಅನುದಾನಿತ ಶಿಕ್ಷಣ ಸಂಸ್ಥೆಗಳ ನಿಯಮಾವಳಿಗಳು ಹಾಗೂ ನೌಕರರ ಜವಾಬ್ದಾರಿಗಳು’ ವಿಷಯದ ಕುರಿತು ಮಾತನಾಡಿದರು.
ಸಂಸ್ಥೆ ರೂಪಿಸಿದ ನಿಯಮಾವಳಿಗಳಿಗೆ ಅನುಗುಣವಾಗಿ ಅಲ್ಲಿ ಆಯ್ಕೆಯಾದ ಸಿಬ್ಬಂದಿ ತಮ್ಮ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಲ್ಲಿನ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಆ ನೌಕರನ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಂಸ್ಥೆಗೆ ಅಧಿಕಾರವಿದ್ದು, ಇಲಾಖೆಯೊಂದಿಗೆ ಸಮಾಲೋಚಿಸಿ ನೌಕರನ ಮೇಲೆ ಸಂಸ್ಥೆ ಕ್ರಮ ಜರುಗಿಸಬಹುದಾಗಿದೆ. ಆದ್ದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಗೌಡರ ಹೇಳಿದರು.
ನಾನು ಹೇಗೂ ನೌಕರಿ ಪಡೆದಿದ್ದೇನೆ. ಅದಕ್ಕೆ ಇಲಾಖೆಯ ಅನುಮತಿ ದೊರಕಿದೆ. ಇನ್ನು ನನ್ನನ್ನು ಕೇಳುವವರು ಯಾರೂ ಇಲ್ಲ ಎಂಬ ರೀತಿಯಲ್ಲಿ ನೌಕರನು ವರ್ತಿಸಬಾರದು. ಅವನ ವರ್ತನೆ ಸರಿಯಿಲ್ಲ ಎಂದು ಸಂಸ್ಥೆಗೆ ಅನ್ನಿಸಿದರೆ ಅವರು ನೋಟೀಸ್ ನೀಡಿ ಎಚ್ಚರಿಕೆ ನೀಡಬಹುದು. ಅದಕ್ಕೂ ಜಗ್ಗದಿದ್ದರೆ ಮುಂದಿನ ಕಾನೂನು ಕ್ರಮಕ್ಕೂ ಹೋಗಲು ಸಂಸ್ಥೆಗೆ ಅಧಿಕಾರವಿದೆ. ಆದ್ದರಿಂದ ನೌಕರನು ತನ್ನನ್ನು ನೇಮಕ ಮಾಡಿಕೊಂಡ ಸಂಸ್ಥೆಗೆ ಎಂದಿಗೂ ವಿಧೇಯನಾಗಿರಬೇಕು. ಖಾಸಗಿ ಸಂಸ್ಥೆಗಳ ನಿಯಮಗಳ ಜೊತೆಗೆ ನೌಕರನು ಸರಕಾರದ ಕೆಸಿಎಸ್ಆರ್ ನಿಯಮಗಳನ್ನೂ ಸಹ ಪಾಲಿಸವುದು ಅವಶ್ಯಕವಾಗಿದೆ ಎಂದು ಗೌಡರ ಹೇಳಿದರು.
ನಂತರ ಅವರು ನೌಕರನು ಮಾಡುವ ಯಾವ ಯಾವ ಅಪರಾಧಗಳಿಗೆ ಯಾವ ಯಾವ ಕಾನೂನು ಕ್ರಮಗಳಿವೆ ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸಿದರು.
ವೇದಿಕೆಯ ಮೇಲೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ವೀರಾಪೂರ, ನಿವೃತ್ತ ಪ್ರಾಚಾರ್ಯ ಬಿ.ಎಫ್. ಚೇಗರೆಡ್ಡಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ನಿರೂಪಿಸಿದರು. ಮುಖ್ಯ ಶಿಕ್ಷಕ ಸಜ್ಜನ ಪರಿಚಯಿಸಿದರು. ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ವಂದಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರ ವೇತನವನ್ನೇನೋ ಸರಕಾರ ನೀಡುತ್ತದೆ. ಅದನ್ನು ಅನುದಾನವೆಂದು ಕರೆಯಲಾಗುತ್ತದೆ. ಈ ಅನುದಾನವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರವು ನೀಡುತ್ತಿದ್ದು, ಅಲ್ಲಿನ ನೌಕರರ ನಡವಳಿಕೆಯ ನಿಯಮಾವಳಿಗಳನ್ನು ಆಯಾ ಸಂಸ್ಥೆಗಳೇ ರೂಪಿಸಬೇಕಾಗುತ್ತದೆ. ಹೀಗೆ ತಮಗೆ ಅನುಕೂಲಕರ ನಿಯಮಗಳನ್ನು ರೂಪಿಸಿ ನೌಕರರನ್ನು ದುಡಿಸಿಕೊಳ್ಳುವ ಜವಾಬ್ದಾರಿ ಆಯಾ ಸಂಸ್ಥೆಗಳದ್ದೇ ಆಗಿರುತ್ತದೆ ಎಂದು ಬಿ.ಎಸ್. ಗೌಡರ ಮಾಹಿತಿ ನೀಡಿದರು.