ವಿಜಯಸಾಕ್ಷಿ ಸುದ್ದಿ, ರೋಣ : ಹೊಳೆಆಲೂರ ಪಟ್ಟಣದಿಂದ ಸೋಮನಕಟ್ಟಿ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಕೂಡಲೇ ಗ್ರಾಮಕ್ಕೆ ಬಸ್ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಎಂ.ಎಚ್. ನದಾಫ್ ವಿನಂತಿಸಿದರು.
ಅವರು ಮಂಗಳವಾರ ರೋಣ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಸೋಮನಕಟ್ಟಿ ಗ್ರಾಮದಿಂದ ಹೊಳೆಆಲೂರ ಪಟ್ಟಣಕ್ಕೆ ನಿತ್ಯ ನೂರಾರು ಜನರು ಸಂಚರಿಸುತ್ತಾರೆ. ಆದರೂ ಸಹ ಇಲ್ಲಿಯವರೆಗೆ ಸಾರಿಗೆ ಘಟಕ ಬಸ್ ಸೌಲಭ್ಯವನ್ನು ಕಲ್ಪಿಸಿಲ್ಲ. ತಾಲೂಕಿನ ಸೋಮನಕಟ್ಟಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಲು ಹಾಗೂ ಹೊಳೆಆಲೂರ ಗ್ರಾಮದಿಂದ ಸೋಮನಕಟ್ಟಿ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸುವಂತೆ ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಇನ್ನಾದರೂ ಸಾರ್ವಜನಿಕರ ಅನುಕೂಲ ಹಾಗೂ ಸಾರಿಗೆ ಘಟಕದ ಆದಾಯಕ್ಕಾಗಿ ಸಂಚಾರ ಆರಂಭಿಸಿ ಎಂದರು.
ಗ್ರಾಮ ಘಟಕದ ಅಧ್ಯಕ್ಷ ರಾಜು ಮುಲ್ಲಾ, ಸಂಕೇತ ದಾನರೆಡ್ಡಿ, ಸಂಜು ಮಾದರ್, ಕಾರ್ತಿಕ ಬಡಿಗೇರ, ಶರೀಪ್ ನದಾಫ್, ಪ್ರವೀಣ ಪ್ರಸನ್ನವರ, ರಮೇಶ ನಡುವಿನಮನಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.