ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಹೇಗಿದ್ದರೋ ಈಗಲೂ ಅದೇ ರೀತಿ ಇದ್ದಾರೆ. “ಟಗರು ಟಗರೇ” ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರು ಟಾರ್ಗೆಟ್ ಆದರೂ ಮೌನವಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸಿಎಂಗೆ ಎಲ್ಲರೂ ಆಪ್ತರೇ. ಅವರು ನಮ್ಮ ಮುಖ್ಯಮಂತ್ರಿ. ಈಗ ಮೌನವಾಗಿರಬಹುದು, ಆದರೆ ಮಾತನಾಡಿದರೆ ಬೇರೆ ರೀತಿಯಲ್ಲಿ ಪ್ರತಿಧ್ವನಿಸುತ್ತದೆ. ಈಗ ಮಾತನಾಡುವ ಅಗತ್ಯ ಇಲ್ಲ ಎಂದು ಹೇಳಿದರು.
ಮುಸ್ಲಿಂ ಗುರುಗಳು ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಲ್ಲಿ ಆ ಪತ್ರವನ್ನು ನೋಡಿದ್ದೇನೆ. ಸುಮಾರು 15–16 ಮಂದಿ ಗುರುಗಳು ರಾಹುಲ್ ಗಾಂಧಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ಸ್ಪಷ್ಟನೆ ಬೇಕಿದ್ದರೆ ಪತ್ರ ಬರೆದವರನ್ನೇ ಕೇಳಬೇಕು ಎಂದರು.
ಯಾವುದೇ ತಾರತಮ್ಯ ನಡೆಯುತ್ತಿಲ್ಲ. ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಒಬ್ಬೊಬ್ಬರು ಒಬ್ಬೊಬ್ಬರ ಪರವಾಗಿ ಮಾತನಾಡುವುದು ಸಾಮಾನ್ಯ. ಅದನ್ನೆಲ್ಲ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಜಮೀರ್ ಅಹಮದ್ ಖಾನ್ ಹೇಳಿದರು.



