Homecultureಶ್ರೀರಾಮ ಸರ್ವ ಸದ್ಗುಣಗಳ ಖಣಿ : ಅರುಣ ಬಿ.ಕುಲಕರ್ಣಿ

ಶ್ರೀರಾಮ ಸರ್ವ ಸದ್ಗುಣಗಳ ಖಣಿ : ಅರುಣ ಬಿ.ಕುಲಕರ್ಣಿ

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪ್ರಭು ಶ್ರೀ ರಾಮ ಸದ್ಗುಣಗಳ ಖಣಿ. ಅವನನ್ನು ಪೂಜಿಸುವದರಿಂದ ಅವನ ಸದ್ಗುಣಗಳು ನಮ್ಮಲ್ಲಿ ಕಿಂಚಿತ್ತಾದರೂ ಬರುತ್ತವೆ. ಇದೇ ಕಾರಣಕ್ಕಾಗಿ ಶ್ರೀರಾಮ ನವಮಿಯನ್ನು ದೇಶಾದ್ಯಂತ ಎಲ್ಲರೂ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸುತ್ತಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಶ್ರೀ ರಾಮ ಮಂದಿರದಲ್ಲಿ ನಡೆದ ಶ್ರೀರಾಮ ನವಮಿ ತೊಟ್ಟಿಲೋತ್ಸವದ ನಂತರ ಅವರು ಮಾತನಾಡಿದರು.

ವಿಷ್ಣುವಿನ 7ನೇ ಅವತಾರ ಶ್ರೀರಾಮಾವತಾರದಲ್ಲಿ ಮನುಷ್ಯ ಹೇಗೆ ಸದ್ಗುಣಿಯಾಗಿರಬೇಕು ಎಂಬುದನ್ನು ಶ್ರೀರಾಮ ಸ್ವತಃ ನಡೆದು ತೋರಿಸಿದ್ದಾನೆ. ತಂದೆ-ತಾಯಿಗಳ ಮಾತುಗಳನ್ನು ಹೇಗೆ ಕೇಳಬೇಕು, ಅವುಗಳನ್ನು ಹೇಗೆ ಪಾಲಿಸಬೇಕು ಎಂಬುದಕ್ಕೆ ಶ್ರೀರಾಮ ಸಾಕ್ಷಾತ್ ಉದಾಹರಣೆಯಾಗಿದ್ದಾನೆ. ಅವನ ಜೀವನ ಚರಿತ್ರೆಯನ್ನು ಓದಿ ಅದರಲ್ಲಿನ ಕೆಲವಷ್ಟು ಗುಣಗಳನ್ನಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದ ಅವರು, ನಮ್ಮ ಸಂಸ್ಕೃತಿಯ ಕಣ್ಣುಗಳಾಗಿರುವ ರಾಮಾಯಣ ಮತ್ತು ಮಹಾಭಾರತವನ್ನು ಮಕ್ಕಳಿಂದ ಓದಿಸುವ, ಓದಲು ಪ್ರೇರಣೆ ನೀಡುವ ಕಾರ್ಯಗಳಾಬೇಕೆಂದು ಹೇಳಿದರು.

ಸುಮಂಗಲೆಯರು ಶ್ರೀರಾಮನನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿ ಸಂಭ್ರಮಿಸಿದರು. ಅರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ ಶ್ರೀರಾಮನಿಗೆ ಪೂಜೆ ಮತ್ತು ಶ್ರೀರಾಮನ ತೊಟ್ಟಿಲೋತ್ಸವದ ಎಲ್ಲ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ದತ್ತ ಭಕ್ತ ಮಂಡಳಿಯ ಉಪಾಧ್ಯಕ್ಷ ಆದರ್ಶ ಕುಲಕರ್ಣಿ, ಖಜಾಂಚಿ ಮಂಜುನಾಥ ಗ್ರಾಮಪುರೋಹಿತ, ಶೇಷಗಿರಿ ಕುಲಕರ್ಣಿ, ಆರ್.ಡಿ. ಕುಲಕರ್ಣಿ, ಎಸ್.ಎಚ್. ಕುಲಕರ್ಣಿ, ಹರೀಶ ಕುಲಕರ್ಣಿ, ವಿಶ್ವನಾಥಭಟ್ಟ ಗ್ರಾಮಪುರೋಹಿತ, ದತ್ತಾತ್ರೇಯ ಕುಲಕರ್ಣಿ, ರಾಮಕೃಷ್ಣ ಸದರಜೋಷಿ ಮತ್ತಿತರರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!