ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರದ ನೂರಾರು ವಸತಿರಹಿತ ಕುಟುಂಬಗಳು ಮಾರ್ಚ್ 24ರಂದು ಸಭೆ ನಡೆಸಿ, ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಲೋಕಸಭಾ ಚುನಾಚಣೆ ಬಹಿಷ್ಕಾರ ಮಾಡಲು ಎಚ್ಚರಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಗದಗ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ವಸತಿ ರಹಿತರ ಸಭೆಯನ್ನು ನಡೆಸಿದ ಅಧಿಕಾರಿಗಳು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಮನವೂಲಿಸುವಲ್ಲಿ ಸಫಲರಾಗಿದ್ದಾರೆ.
ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಗದಗ ಜಿಲ್ಲಾ ಉಪವಿಭಾಗೀಯ ಕಚೇರಿಯ ತಹಸೀಲ್ದಾರ ವಿಜಯಲಕ್ಷ್ಮಿ ವಸ್ತ್ರದ, ಗದಗ ಉಪ-ತಹಸೀಲ್ದಾರ ಕೊಣ್ಣೂರ ಮತ್ತು ನಗರಸಭೆ ವ್ಯವಸ್ಥಾಪಕರಾದ ಪರುಶರಾಮ ಶೇರಖಾನೆ ಸಮ್ಮುಖದಲ್ಲಿ ವಸತಿರಹಿತ ಕುಟುಂಬಗಳು ಸಭೆಯನ್ನು ನಡೆಸಿ, ತಮ್ಮ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ, ಗದಗ ಜಿಲ್ಲಾ ಡಿಎಸ್ಎಸ್ ಸಂಚಾಲಕ ವೆಂಕಟೇಶಯ್ಯ, ಮುಖಂಡರಾದ ಬಸವರಾಜ ಪೂಜಾರ, ರವಿಕುಮಾರ ಬೆಳಮಕರ, ಅಶೋಕ ಕುಸಬಿ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ನಜಮುನಿಸಾ ಮುರಗೋಡ, ವಿಶಾಲಕ್ಷಿ ಹಿರೇಗೌಡ್ರ, ವಂದನಾ ಶ್ಯಾವಿ, ಸುಶೀಲಮ್ಮ ಗೋಂದಾರ, ಮರ್ದಾನಬಿ ಬಳ್ಳಾರಿ, ನಗೀನಾ ಯಲಿಗಾರ, ಇಬ್ರಾಹಿಮ ಮುಲ್ಲಾ, ಶಂಕ್ರಪ್ಪ ಮೂಲಿಮನಿ, ದುರ್ಗಪ್ಪ ಮಣ್ಣವಡ್ಡರ, ದಾವಲಬಿ ಕೌತಾಳ, ಮಕ್ತುಮಸಾಬ ಮುಲ್ಲಾನವರ, ಬಾಷಾಸಾಬ ಡಂಬಳ, ಸಲೀಮ ಬೈರಕದಾರ ಮುಂತಾದವರಿದ್ದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಮಾತನಾಡಿ, ವಸತಿ ರಹಿತರ ಹಾಗೂ ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಜಿಲ್ಲಾಡಳಿತದಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಹಂತ-ಹಂತವಾಗಿ ವಸತಿ ಸೌಲಭ್ಯ ಕಲ್ಪಿಸಲು ಹಾಗೂ ಸ್ಲಂ ನಿವಾಸಿಗಳ ಹಕ್ಕೊತ್ತಾಯಗಳಿಗೆ ಸ್ಪಂದಿಸಲಾಗುವುದು. ನಮ್ಮ ದೇಶದ ಸಂವಿಧಾನದ ಮೂಲ ಆಶಯದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿ ಸಭೆಯಲ್ಲಿ ಸೇರಿದ ಎಲ್ಲರಿಗೂ ಮತದಾನದ ಪ್ರತಿಜ್ಞಾ ವಿಧಿ ಬೋಧನೆ ಮಾಡಿಸಿದರು.