ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿ ಜೀವನವು ವ್ಯಕ್ತಿಯ ಉತ್ತಮ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದ್ದು, ಸತ್ಯ, ಪ್ರಾಮಾಣಿಕತೆ, ಶಿಸ್ತು, ದಯೆ, ಸಹಕಾರ ಹಾಗೂ ಗೌರವದಂತಹ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳಬೇಕು ಎಂದು ಭಾರತೀಯ ಶ್ರಮಿಕ ಕಾರ್ಮಿಕ ಕರ್ಮಚಾರಿ ಮಹಾಸಂಘದ ಗದಗ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಕಟ್ಟಿಮನಿ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. ೨ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ‘ಅಮೃತ ಭೋಜನ–ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೈತಿಕ ಮೌಲ್ಯಗಳು ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುತ್ತವೆ. ಶರಣರ ವಚನಗಳು ಹಾಗೂ ಅವರ ಆದರ್ಶಗಳನ್ನು ಮಕ್ಕಳು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಆದರ್ಶಪ್ರಾಯ ವಿದ್ಯಾರ್ಥಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿ ಆಗಮಿಸಿದ್ದ ಪ್ರಶಸ್ತಿ ವಿಜೇತ ಗಾಯಕಿ ಪದ್ಮಾ ಕಬಾಡಿ ಮಾತನಾಡಿ, ವಚನಗಳು ಹಾಡಲು ಸುಲಭವಾಗಿದ್ದು, ಅತ್ಯಂತ ಅರ್ಥಗರ್ಭಿತವಾಗಿವೆ. ಮಕ್ಕಳು ವಚನಗಳ ಅರ್ಥ ತಿಳಿದುಕೊಂಡು ಹಾಡುವ ರೂಢಿ ಬೆಳೆಸಿಕೊಳ್ಳಬೇಕು. ವಚನಗಳ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ಕದಳಿಶ್ರೀ ವೇದಿಕೆ ವತಿಯಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಸರ್ಕಾರಿ ಶಾಲೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಆಹ್ವಾನಿಸಿ, ಮಕ್ಕಳಿಗೆ ಸಿಹಿಭೋಜನ ಉಣಬಡಿಸುವುದು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು. ಈ ಸೇವಾ ಕಾರ್ಯಕ್ಕೆ ಸಹಕರಿಸಿದ ಡಾ. ರಾಧಿಕಾ ಕುಲಕರ್ಣಿ, ಆಶಿಕಾ ಹಾಗೂ ಆಶಿಕ ಖತ್ರಿ, ಸುಮಾ ಪಾಟೀಲ ಮತ್ತು ವಾಣಿ ಅಬ್ಬಿಗೇರಿ (ಪಾಟೀಲ) ಅವರನ್ನು ಅಭಿನಂದಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಕಮಲಾಕ್ಷಿ ರೇಶ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕದಳಿಶ್ರೀ ವೇದಿಕೆ ವತಿಯಿಂದ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣ ಪ್ರೇಮಿಗಳು ಸಿಹಿಭೋಜನ ಹಾಗೂ ಕಲಿಕಾ ಸಾಮಗ್ರಿಗಳೊಂದಿಗೆ ಸರ್ಕಾರಿ ಶಾಲೆಗೆ ಆಗಮಿಸಿ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳಾದ ಅಮೃತಾ ಮರಾಠಿ, ಕವನಾ ಬರಡಿ ಹಾಗೂ ಸಿಂಧೂ ಹರ್ತಿ ವಚನ ಪ್ರಾರ್ಥನೆ ಸಲ್ಲಿಸಿದರು. ರೇಣುಕಾ ಪಾಟೀಲ ಹಾಗೂ ಸ್ನೇಹಾ ಜಡಿ ವಚನಗಳನ್ನು ಹಾಡಿದರು. ಎಸ್.ವಿ. ಇಂದಿರಾಬಾಯಿ ಸ್ವಾಗತಿಸಿದರು. ಪಿ.ಎಫ್. ನಾಗನೂರ ಪರಿಚಯಿಸಿದರು. ಗೌರಮ್ಮ ಕಮತರ ನಿರೂಪಿಸಿದರು. ಸಂಗಮ್ಮ ಅಲಗೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಕಲ್ಪನಾ ಅರ್ಕಸಾಲಿ, ಹೊನ್ನಮ್ಮ ಹರಿಜನ, ಶಿಲ್ಪಾ ಕಮ್ಮಾರ, ಸಂಗೀತಾ ಬದಿ, ಗೀತಾ ಮಂಗಳೂರ, ದೀಪಾ ಬೆಟಗೇರಿ, ಲಕ್ಷ್ಮೀ ಜಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



