ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿ ಶಿಕ್ಷಕ ಅಬ್ದುಲ್ ರೆಹಮಾನ್ ನಮಾಜಿ ಮಾತನಾಡಿ, ವಿದ್ಯಾರ್ಥಿಗಳು ಪಾಲಕರು ಒದಗಿಸುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸತತ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಜ್ಞಾನ ಸಂಪಾದಿಸಬೇಕು. ಗುರುಗಳು ವಿದ್ಯಾರ್ಥಿಗಳಿಂದ ಬಯಸುವ ಅತ್ಯುತ್ತಮ ಉಡುಗೊರೆ ಎಂದರೆ ಉತ್ತಮ ಫಲಿತಾಂಶದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಎಂದರು.
ಶಾಲೆಯ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ಪಾತ್ರವನ್ನು ವಹಿಸಿಕೊಂಡು ಅರ್ಧ ದಿನದ ತರಗತಿಗಳನ್ನು ನಡೆಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ಶಿಕ್ಷಕರ ಕುರಿತ ಹಾಡು, ಕಿರು ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜೀಯಾ ನಮಾಜಿ ಅತಿಥಿಗಳ ಪರಿಚಯ ಮಾಡಿದರು. ನವಿಶಾರದೆ ಗಣಾಚಾರಿ ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು.
10ನೇ ತರಗತಿಯ ಯಾಹ್ವಿ ಪೇರೆರಾ ಹಾಗೂ ಸಂಗಡಿಗರು ನೃತ್ಯ ಪ್ರದರ್ಶಿಸಿದರು. ರಾಕೇಶ ಆನೆಗುಂದಿ ಹಾಗೂ ಸಂಗಡಿಗರು ಶಿಕ್ಷಕರ ಕುರಿತು ಹಾಡು ಹಾಡಿದರು. ಅರ್ಪಿತಾ ಕುಲಕರ್ಣಿ ಹಾಗೂ ಸಂಗಡಿಗರು ಕಿರು ನಾಟಕ ಪ್ರದರ್ಶಿಸಿದರು. ಶಾಲೆಯ ಪುಟ್ಟರಾಜ ಗವಾಯಿ ತಂಡದ ದೀಪಾ ಬೆಂತೂರ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
ಗುರುಮಾತೆ ಸವಿತಾ ತುಕೋಳ ಉಡುಗೊರೆ ವಿತರಣೆ ನೆರವೇರಿಸಿದರು. ಮಾಹೀನ್ ನೀಲಿ ಸ್ವಾಗತಿಸಿದರು. ಶ್ರೇಯಾ ಬಳ್ಳಾರಿ ವಂದಿಸಿದರು. ವೆಂಕಟೇಶ ಕಲ್ಮನಿ ಹಾಗೂ ಪ್ರತೀಕ್ಷಾ ರಂಗಾರೆಡ್ಡಿ ನಿರೂಪಿಸಿದರು. ಪಾರ್ಥ ದಬಾಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.
ಶಾಲೆಯ ನಿರ್ದೇಶಕ ವಿನಾಯಕ ಆರ್., ಉಪನಿರ್ದೇಶಕಿ ಗಾಯತ್ರಿ ವಿ., ಪ್ಲೇಹೋಮ್ ಮುಖ್ಯಸ್ಥೆ ಗಂಗಾ, ಇ.ಎಲ್.ಸಿ. ಮುಖ್ಯಸ್ಥೆ ಮಲ್ಲಿಕಾ ಆರ್., ಪ್ರಾಚಾರ್ಯ ವಿ.ಎಂ. ಅಡ್ನೂರ್, ಉಪಪ್ರಾಚಾರ್ಯ ಪಿ.ಜಿ. ಬ್ಯಾಳಿ ಸೇರಿದಂತೆ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



