ಗದಗ: ತಾಲೂಕಿನ ಕದಡಿ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಗ್ರಾಮದ ಆರಾಧ್ಯ ದೇವತೆ ಶ್ರೀ ನೀಲಾಂಬಿಕಾ ದೇವಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಸೋಮವಾರ ಸಂಜೆ 6.15ಕ್ಕೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಸದ್ಭಕ್ತ ಮಂಡಳಿ ಹಾಗೂ ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದ ರಥೋತ್ಸವದಲ್ಲಿ ಡೊಳ್ಳು, ಜಾಗಟೆ ಸೇರಿದಂತೆ ವಿವಿಧ ವಾದ್ಯಗಳ ಸದ್ದಿಗೆ ಭಕ್ತರು ಜಯಘೋಷ ಮೊಳಗಿಸಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಗೆ ವಿಶೇಷ ನೈವೇದ್ಯವಾಗಿ ಹೋಳಿಗೆ ಸಮರ್ಪಿಸಿ, ದಾಸೋಹದಲ್ಲಿ ಪಾಲ್ಗೊಂಡರು.
ಜಾತ್ರೆಯ ಅಂಗವಾಗಿ ನೀಲಾಂಬಿಕಾ ನಾಟ್ಯ ಸಂಘದ ವತಿಯಿಂದ ‘ಬರ್ಕೋ ಪದ ಬರ್ಕೋ’ ಆಧ್ಯಾತ್ಮಿಕ ನಾಟಕ ಹಾಗೂ ಬುಧವಾರ ನಡೆಯುವ ಕಡುಬಿನ ಕಾಳಗದ ಸಂದರ್ಭದಲ್ಲಿ ಶ್ರೀ ಶಂಕರ ಸೇವಾ ನಾಟ್ಯ ಸಂಘದ ವತಿಯಿಂದ ‘ಗೌರಿ ಗೆದ್ದಳು’ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ನಾಟಕ, ಭಜನೆ ಹಾಗೂ ಕಲಾಮೇಳಗಳ ಮೂಲಕ ಜಾತ್ರೆಯು ಗ್ರಾಮೀಣ ಸೊಗಡು, ಕಲೆ-ಸಂಸ್ಕೃತಿ ಹಾಗೂ ಭಾವೈಕ್ಯತೆಯನ್ನು ಸಾರುವ ವೇದಿಕೆಯಾಗಿ ಗಮನ ಸೆಳೆಯುತ್ತಿದೆ.



