ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಬೇಡ ಜಂಗಮ ಸಮಾಜದ ವತಿಯಿಂದ ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಫಯಾಜ್ನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಲು ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾಧ್ಯಕ್ಷ ಶಿದ್ರಾಮಯ್ಯ ಕಟಗಿಹಳ್ಳಿಮಠ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇಂತಹ ಕೃತ್ಯಗಳು ಹೆಚ್ಚಾಗುತ್ತಿದ್ದು, ಸರ್ಕಾರ ಕಠಿಣ ಕಾನೂನು ಕ್ರಮ ತೆಗೆದುಕೊಂಡು ಆರೋಪಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಿದರೆ, ಮುಂದೆ ಇಂತಹ ಕೃತ್ಯಗಳನ್ನೆಸಗುವವರಿಗೆ ತಕ್ಕ ಪಾಠ ಕಲಿಸಿದಂತೆ ಆಗುತ್ತದೆ ಎಂದು ಹೇಳಿದರು. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ಅವರ ಪಾಲಕರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೊರಟೂರ ಓಂಕಾರೇಶ್ವರ ಮಠದ ಶ್ರೀ ಫಕೀರಸ್ವಾಮಿಗಳು, ಬೇಡ ಜಂಗಮ ಸಮಾಜದ ತಾಲೂಕಾಧ್ಯಕ್ಷ ಜಿ.ಎಫ್. ಕೆಂಭಾವಿಮಠ, ಸದಸ್ಯರಾದ ಅಜಯ ಹಿರೇಮಠ, ಸಂತೋಷ ಹಿರೇಮಠ, ಅಂದಾನಯ್ಯ ಕಾರಡಗಿಮಠ, ಕುಮಾರ ದೇವದುರ್ಗಮಠ, ಅನಿಲ ಪೂಜಾರಿ, ಸುಗೀರಯ್ಯ ಅಂಬ್ರಳಗೋಳಮಠ, ಗಂಗಾಧರ ಎನ್.ಹಿರೇಮಠ ಮುಂತಾದವರಿದ್ದರು.