ವಿಜಯಸಾಕ್ಷಿ ಸುದ್ದಿ, ಗದಗ: ತಾಯಿಹಾಲೇ ನವಜಾತ ಶಿಶುಗಳಿಗೆ ಅತ್ಯುತ್ತಮ ಆಹಾರವಾಗಿದ್ದು, ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗೂ ಬುದ್ಧಿವಿಕಾಸಕ್ಕೆ ಅದಕ್ಕಿಂತ ಉತ್ತಮ ಪರ್ಯಾಯವಿಲ್ಲ ಎಂದು ಮಕ್ಕಳ ತಜ್ಞ ಡಾ. ಶಿವನಗೌಡ್ರ ಜೋಳದರಾಶಿ ಹೇಳಿದರು.
ಬೆಟಗೇರಿಯ ಸೇವಾ ಭಾರತಿ ಟ್ರಸ್ಟ್ (ರಿ) ಅಮೂಲ್ಯ (ಪಿ) ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಆಯಾಗಳಿಗೆ ನವಜಾತ ಶಿಶುಗಳ ಆರೈಕೆ ಕುರಿತು ವಿಶೇಷ ತರಬೇತಿ ನೀಡಿ ಅವರು ಮಾತನಾಡಿದರು.
ಪೌಡರ್ ಹಾಲಿನಲ್ಲಿ ಪೌಷ್ಟಿಕಾಂಶಗಳಿದ್ದರೂ ಅದು ತಾಯಿಹಾಲಿಗೆ ಸಮನಾಗುವುದಿಲ್ಲ. ತಾಯಿ ಇಲ್ಲದಿರುವುದು, ತಾಯಿಗೆ ಆರೋಗ್ಯ ಸಮಸ್ಯೆ ಇರುವುದು ಅಥವಾ ವಿಶೇಷ ವೈದ್ಯಕೀಯ ಕಾರಣಗಳಿದ್ದಾಗ ಮಾತ್ರ ವೈದ್ಯರ ಸಲಹೆಯಂತೆ ಪೌಡರ್ ಹಾಲು ಬಳಸಬೇಕು ಎಂದು ಅವರು ತಿಳಿಸಿದರು.
ವೈದ್ಯರ ಸಲಹೆ ಇಲ್ಲದೆ ಮೆಡಿಕಲ್ ಅಂಗಡಿಗಳಿಂದ ಪೌಡರ್ ಹಾಲು ಖರೀದಿಸಿ ಮಕ್ಕಳಿಗೆ ನೀಡುವುದು ಸೂಕ್ತವಲ್ಲ. ಪೌಡರ್ ಹಾಲನ್ನು ಸಾಮಾನ್ಯ ಆಹಾರವೆಂದು ಪರಿಗಣಿಸದೆ ಔಷಧಿಯಂತೆ ವೈದ್ಯರ ಸೂಚನೆಯ ಮೇರೆಗೆ ಮಾತ್ರ ಬಳಸಬೇಕು ಎಂದು ಅವರು ಸಲಹೆ ನೀಡಿದರು. ದತ್ತು ಸ್ವೀಕಾರ ಕೇಂದ್ರದ ಆಯಾಗಳು ಮಕ್ಕಳನ್ನು ತಾಯಿಯಂತೆ ಆರೈಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದತ್ತು ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಮಾತನಾಡಿ, ದತ್ತು ಕೇಂದ್ರದ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಮಾರ್ಗದರ್ಶನದಲ್ಲಿ ಡಾ. ಶಿವನಗೌಡ್ರ ಅವರ ಸೇವೆ ಅಮೂಲ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ. ಶಿವನಗೌಡ್ರ ಜೋಳದರಾಶಿ ಮತ್ತು ಶ್ವೇತಾ ಜೋಳದರಾಶಿ ದಂಪತಿ ಕೇಂದ್ರದ ಆಯಾಗಳನ್ನು ಉಡುಗೊರೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಡಾ. ತೇಜಸ್ವಿನಿ ಹಿರೇಮಠ, ರತ್ನಾ ಜೋಳದರಾಶಿ, ನಾಗವೇಣಿ ಕಟ್ಟಿಮನಿ, ಲಲಿತಾಬಾಯಿ ಮೇರವಾಡೆ, ನರಸಿಂಹ ಕಾಮಾರ್ತಿ, ಗುರುಸಿದ್ಧಪ್ಪ ಕೊಣ್ಣೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ತಾಯಿಹಾಲು ಪ್ರಕೃತಿಯ ಅಮೂಲ್ಯ ಕೊಡುಗೆ. ವೈದ್ಯರ ಸಲಹೆಯಿಲ್ಲದೆ ಪೌಡರ್ ಹಾಲು ಬಳಸಬಾರದು. ತಾಯಿಹಾಲೇ ಮಗುವಿನ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಬುದ್ಧಿವಿಕಾಸಕ್ಕೆ ಭದ್ರ ಅಡಿಪಾಯ ಹಾಕುತ್ತದೆ.”
– ಡಾ. ಶಿವನಗೌಡ್ರ ಜೋಳದರಾಶಿ, ಮಕ್ಕಳ ತಜ್ಞ



