HomeGadag Newsಠಾಣೆಯಲ್ಲೇ ಕುಳಿತು ಟ್ರಾಫಿಕ್ ಕಂಟ್ರೋಲ್..!

ಠಾಣೆಯಲ್ಲೇ ಕುಳಿತು ಟ್ರಾಫಿಕ್ ಕಂಟ್ರೋಲ್..!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ದಿನೇದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿರುವ ನಡುವೆ, ಲಕ್ಷ್ಮೇಶ್ವರ ಪೊಲೀಸ್ ಠಾಣೆ ತಂತ್ರಜ್ಞಾನ ಆಧಾರಿತ ಹೊಸ ಮಾದರಿಯ ಸಂಚಾರ ನಿಯಂತ್ರಣ ವ್ಯವಸ್ಥೆ ಜಾರಿಗೆ ತಂದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪುರಸಭೆಯ ಸಹಕಾರದೊಂದಿಗೆ ಪೊಲೀಸ್ ಇಲಾಖೆ “ಪಬ್ಲಿಕ್ ಅಡ್ರೆಸ್ ಸಿಸ್ಟಂ” ಬಳಸಿ ಠಾಣೆಯಲ್ಲೇ ಕುಳಿತು ಟ್ರಾಫಿಕ್ ನಿಯಂತ್ರಣ ಮಾಡುವ ವ್ಯವಸ್ಥೆ ಜಾರಿಗೆ ತಂದಿದೆ. ಪಟ್ಟಣದ ಪ್ರಮುಖ ವೃತ್ತಗಳು, ಮಾರುಕಟ್ಟೆ ಪ್ರದೇಶಗಳು ಹಾಗೂ ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಮೂಲಕ ಪೊಲೀಸ್ ಸಿಬ್ಬಂದಿ ವಾಹನ ಸಂಚಾರದ ಮೇಲೆ ನಿಗಾ ವಹಿಸುತ್ತಿದ್ದಾರೆ.

ವಾಹನ ದಟ್ಟಣೆ, ಅಡ್ಡಾದಿಡ್ಡಿ ಪಾರ್ಕಿಂಗ್, ರಸ್ತೆ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕ್ಯಾಮರಾಗಳ ಮೂಲಕ ಗಮನಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತಿದೆ. ಧ್ವನಿವರ್ಧಕಗಳ ಮೂಲಕ “ವಾಹನಗಳನ್ನು ಸರಿಯಾಗಿ ನಿಲ್ಲಿಸಿ”, “ರಸ್ತೆ ಮಧ್ಯೆ ವಾಹನ ನಿಲ್ಲಿಸಬೇಡಿ”, “ಟ್ರಾಫಿಕ್ ನಿಯಮ ಪಾಲಿಸಿ” ಎಂಬ ಸೂಚನೆಗಳನ್ನು ಠಾಣೆಯಿಂದಲೇ ನೇರವಾಗಿ ನೀಡಲಾಗುತ್ತಿದೆ. ಸಂಚಾರ ದಟ್ಟಣೆ ಹೆಚ್ಚಾದಲ್ಲಿ ಸೈರನ್ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.

ವಿಶೇಷವಾಗಿ ಶಾಲಾ-ಕಾಲೇಜು ಅವಧಿ, ಮಾರುಕಟ್ಟೆ ದಿನಗಳು ಹಾಗೂ ಹಬ್ಬದ ಸಂದರ್ಭಗಳಲ್ಲಿ ಈ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವೆಡೆ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಧ್ವನಿವರ್ಧಕದ ಮೂಲಕವೇ ಎಚ್ಚರಿಕೆ ನೀಡಲಾಗುತ್ತಿದ್ದು, ಜನರು ಕೂಡ ಇದಕ್ಕೆ ಸ್ಪಂದಿಸುತ್ತಿದ್ದಾರೆ.

ಈ ವ್ಯವಸ್ಥೆಯನ್ನು ಪುರಸಭೆಯವರು ಸ್ವಚ್ಛತೆ, ಕರ ವಸೂಲಿ ಹಾಗೂ ಸಾರ್ವಜನಿಕ ಪ್ರಕಟಣೆಗಳಿಗೂ ಬಳಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

62 ಸಿಸಿ ಕ್ಯಾಮರಾಗಳ ಕಣ್ಗಾವಲು

ಪಟ್ಟಣದಲ್ಲಿ ಈಗಾಗಲೇ ಪುರಸಭೆಯ ಸಹಯೋಗದಲ್ಲಿ ಅಳವಡಿಸಿರುವ 62 ಸಿಸಿ ಕ್ಯಾಮರಾಗಳು ಸಂಚಾರದ ಚಲನವಲನಗಳನ್ನು ಸೆರೆಹಿಡಿಯುತ್ತಿವೆ. ಅಲ್ಲದೇ ಗ್ರಾಮೀಣ ಭಾಗಗಳಲ್ಲಿ 38 ಹಾಗೂ ಪಟ್ಟಣ ಸಂಪರ್ಕಿಸುವ ರಸ್ತೆಗಳಲ್ಲಿ 3 ವಿಶೇಷ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಈ ಕ್ಯಾಮರಾಗಳ ಮೂಲಕ ಟ್ರಾಫಿಕ್ ಮಾತ್ರವಲ್ಲದೆ ಕಾನೂನುಬಾಹಿರ ಚಟುವಟಿಕೆ, ಅಕ್ರಮ ಸಾಗಾಣಿಕೆ, ಕಳ್ಳತನ ಹಾಗೂ ಅಪರಾಧ ಪ್ರಕರಣಗಳ ಮೇಲೂ ನಿಗಾ ಇಡಲಾಗುತ್ತಿದೆ.

ಪ್ರಮುಖ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಲು ಪೊಲೀಸರು ಕ್ರಮ ಕೈಗೊಂಡಿದ್ದರೂ ಕೆಲವರು ನಿಯಮ ಉಲ್ಲಂಘಿಸುತ್ತಿದ್ದಾರೆ. ಇಂತಹ ವಾಹನಗಳನ್ನು ಸೀಜ್ ಮಾಡಿ ತೆರವುಗೊಳಿಸಲು ಟೋಯಿಂಗ್ ವಾಹನ ವ್ಯವಸ್ಥೆ ದೊರಕಿದರೆ ಇನ್ನಷ್ಟು ಪರಿಣಾಮಕಾರಿ ಟ್ರಾಫಿಕ್ ನಿರ್ವಹಣೆ ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪ್ರಮುಖ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಕೆ

ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನ, ಸರಾಫ್ ಬಜಾರ್, ಭಾನು ಮಾರ್ಕೆಟ್, ಸೋಮೇಶ್ವರ ಪಾದಗಟ್ಟಿ, ಪುರಸಭೆ ಮುಂಭಾಗ, ಸರ್ಕಾರಿ ಆಸ್ಪತ್ರೆ ಕ್ರಾಸ್, ಶಿಗ್ಲಿ ನಾಕಾ, ಬಸ್ ನಿಲ್ದಾಣ ಹಾಗೂ ಪಂಪ ವೃತ್ತ ಸೇರಿದಂತೆ 10 ಪ್ರಮುಖ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.

“ಕಡಿಮೆ ಸಿಬ್ಬಂದಿಯಲ್ಲಿಯೇ ಹತ್ತು ಜನರ ಕೆಲಸವನ್ನು ತಂತ್ರಜ್ಞಾನದ ಮೂಲಕ ನಿರ್ವಹಿಸಲು ಸಾಧ್ಯವಾಗುತ್ತಿದೆ.”

ನಾಗರಾಜ ಗಡದ, ಪಿಎಸ್‌ಐ, ಲಕ್ಷ್ಮೇಶ್ವರ

“ಸಿಸಿ ಕ್ಯಾಮರಾ-ಧ್ವನಿವರ್ಧಕ ಬಳಸಿ ಠಾಣೆಯಿಂದಲೇ ಟ್ರಾಫಿಕ್ ನಿಯಂತ್ರಿಸುವ ಕ್ರಮ ಇತರ ಪಟ್ಟಣಗಳಿಗೂ ಮಾದರಿಯಾಗಲಿದೆ.”

ಗಂಗಾಧರ ಮೆಣಸಿನಕಾಯಿ

ಬಿಜೆಪಿ ಪ್ರಧಾನ ಕಾರ್ಯದರ್ಶಿ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!