ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಗದಗ ನಗರ ಮಂಡಲ ವತಿಯಿಂದ ರಕ್ಷಾಬಂಧನ ಹಬ್ಬವನ್ನು ಪೌರಕಾರ್ಮಿಕರು ಹಾಗೂ ಶಿಕ್ಷಕರೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮೋರ್ಚಾ ಗದಗ ನಗರ ಮಂಡಲ ಅಧ್ಯಕ್ಷೆ ಸ್ವಾತಿ ಅಕ್ಕಿ ವಹಿಸಿ ಮಾತನಾಡಿ, ಊರು ಹಾಗೂ ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಂಡು ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರು ಸಮಾಜದ ನಿಜವಾದ ರಕ್ಷಕರಾಗಿದ್ದಾರೆ ಎಂದು ಹೇಳಿದರು.
ಸಮಾಜಕ್ಕಾಗಿ ಹಗಲಿರುಳು ಶ್ರಮಿಸುವ ಪೌರಕಾರ್ಮಿಕ ಬಂಧುಗಳಿಗೆ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಾರ್ಗದರ್ಶನ ನೀಡುವ ಶಿಕ್ಷಕರಿಗೆ ಗೌರವದ ರಾಖಿ ಕಟ್ಟಿ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ರಕ್ಷಾಬಂಧನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಶಿಕ್ಷಕರು ಹಾಗೂ ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಛತೆಗಾಗಿ ನಿರಂತರ ಸೇವೆ ಸಲ್ಲಿಸುವ ಪೌರಕಾರ್ಮಿಕರೊಂದಿಗೆ ರಕ್ಷಾಬಂಧನ ಆಚರಿಸುತ್ತಿರುವುದು ವಿಶೇಷ ಹಾಗೂ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ ಹಾಗೂ ವಿದ್ಯಾವತಿ ಗಡಗಿ ಮಾತನಾಡಿ, ಉತ್ತಮ ಶಿಕ್ಷಕರು ಕೇವಲ ಪಾಠ ಕಲಿಸುವುದಲ್ಲದೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರ ಜೀವನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇಂತಹ ಶಿಕ್ಷಕರೊಂದಿಗೆ ರಕ್ಷಾಬಂಧನ ಆಚರಿಸುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ಎಸ್. ಕರಿಗೌಡ್ರ, ಶ್ರೀಪತಿ ಉಡುಪಿ, ನಗರ ಮಂಡಲ ಅಧ್ಯಕ್ಷ ಸುರೇಶ್ ಮರಳಪ್ಪನವರ, ಅನಿಲ ಅಬ್ಬಿಗೇರಿ, ಚೆನ್ನಮ್ಮ ಹುಳಕಣ್ಣವರ, ಅಮರನಾಥ ಗಡಗಿ, ಪ್ರೀತಿ ಶಿವಪ್ಪನಮಠ, ವಂದನಾ ವರ್ಣೆಕರ್, ಅಶ್ವಿನಿ ಜಗತಾಪ, ಮೇಘನಾ ಕೊಟ್ಟೂರ, ಗೀತಾ ಅಣ್ಣಿಗೇರಿ, ಶೈಲಾ ಜೋಸೆಫ್, ಮಹಾಲಕ್ಷ್ಮಿ ಶಿರಸಿಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಗರ ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ಪೂಜಾರ ಕಾರ್ಯಕ್ರಮ ನಿರೂಪಿಸಿದರು. ರೇಖಾ ಗವಳಿ ವಂದಿಸಿದರು.



