ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಕುರುಡಗಿ ಗ್ರಾಮದ ಆರಾಧ್ಯ ದೈವ ಶ್ರೀ ವರವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವವು ಸೆಪ್ಟೆಂಬರ್ ೭ ಮತ್ತು ೮ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ನಿತ್ಯ ಶ್ರೀ ವರವೀರಭದ್ರೇಶ್ವರ ದೇವರಿಗೆ ವೇದಮೂರ್ತಿ ಪಂಚಾಕ್ಷರಯ್ಯ ವೀರಾತಯ್ಯ ಹಿರೇಮಠ ಅವರಿಂದ ರುದ್ರಾಭಿಷೇಕ ನೆರವೇರಲಿದೆ.
ಸೆಪ್ಟೆಂಬರ್ ೭ರಂದು ಬೆಳಿಗ್ಗೆ ೭.೪೫ಕ್ಕೆ ಕಳಸಾರೋಹಣ ನಡೆಯಲಿದೆ. ಇದೇ ಸಂದರ್ಭದಲ್ಲಿ ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರ ಪಾದಪೂಜೆ ನೆರವೇರಲಿದೆ.
ಸಂಜೆ ೫ ಗಂಟೆಗೆ ಮಮತಾ, ವಕೀಲ ಸಿದ್ಧಲಿಂಗಪ್ಪ ಕರಬಸಪ್ಪ ಸವಡಿ ಹಾಗೂ ಧಾರವಾಡದ ಕು. ಸೃಷ್ಟಿ, ಕು. ಶ್ರೇಯಾ ಮತ್ತು ಕುಟುಂಬದವರಿಂದ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆಪ್ಟೆಂಬರ್ ೮ರಂದು ಬೆಳಿಗ್ಗೆ ೯ ಗಂಟೆಗೆ ಗಂಗಾಪೂಜೆ, ಬೆಳಿಗ್ಗೆ ೧೦ ಗಂಟೆಗೆ ಶ್ರೀ ವರವೀರಭದ್ರೇಶ್ವರ ಪುರವಂತರು ಹಾಗೂ ಸಂಗಡಿಗರಿಂದ ಅಗ್ನಿ ಪ್ರವೇಶ ಕಾರ್ಯಕ್ರಮ ಜರುಗಲಿದೆ. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಸಂಜೆ ೭ ಗಂಟೆಗೆ ಸಂಪ್ರದಾಯಬದ್ಧ ಕಡುಬಿನ ಕಾಳಗ ನಡೆಯಲಿದೆ.
ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ವರವೀರಭದ್ರೇಶ್ವರ ದೇವರ ದರ್ಶನ ಪಡೆದು, ತಮ್ಮ ತನು–ಮನ–ಧನ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕುರುಡಗಿ ಗ್ರಾಮದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.



