ವಿಜಯಸಾಕ್ಷಿ ಸುದ್ದಿ, ಗದಗ
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ
ಏಪ್ರಿಲ್ 28ರಂದು ಲಕ್ಷ್ಮೇಶ್ವರದಲ್ಲಿ ಆಯೋಜಿಸಿದ್ದ ಅಮಿತ್ ಶಾ ಅವರ ಪ್ರಚಾರ ರ್ಯಾಲಿಯಲ್ಲಿ ತಂಪು ಪಾನೀಯ ವ್ಯಾಪಾರಿಯೊಬ್ಬರು ನಷ್ಟಕ್ಕೊಳಗಾಗಿದ್ದರು.
ಈ ಸಂಬಂಧ, ಏಪ್ರಿಲ್ 30ರಂದು ರಾತ್ರಿ 11.13 ಗಂಟೆಗೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಆ ನಷ್ಟಕ್ಕೆ ಪರಿಹಾರವಾಗಿ 35 ಸಾವಿರ ರೂ.ಗಳನ್ನು ತಂಪು ಪಾನೀಯ ಮಾರಾಟಗಾರನ ಖಾತೆಗೆ ಹಾಕಿ, ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದರು.

ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಚುನಾವಣಾಧಿಕಾರಿ ಶಂಕರ್ ಹುಲ್ಲಮ್ಮನವರ ಐಪಿಸಿ ಕಲಂ:171(ಬಿ)(ಎಚ್) ಅಡಿಯಲ್ಲಿ ಸರ್ಕಾರದ ಪರವಾಗಿ ದೂರು ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರಾಧ: 0057/2023, ಐಪಿಸಿ ಕಲಂ:171(ಬಿ)(ಎಚ್) ನಂತೆ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.