ಶಿಕ್ಷಕ ದಂಪತಿ ಸೇರಿ ಲೋಕ ಅದಾಲತ್ ನಲ್ಲಿ ಒಂದಾದ ಎರಡು ಜೋಡಿಗಳು

0
Spread the love

ವಿಚ್ಛೇದನಕ್ಕಾಗಿ ಕೋರ್ಟ್ ಅಲೆಯುತ್ತಿದ್ದ ದಂಪತಿಗಳ ಪ್ರಕರಣ ಸುಖಾಂತ್ಯ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪತಿ-ಪತ್ನಿಯರ ನಡುವೆ ವಿವಿಧ ಕಾರಣಗಳಿಂದ ಉಂಟಾದ ಭಿನ್ನಾಭಿಪ್ರಾಯದಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಕೋರ್ಟ್‌ ಗೆ ಅಲೆಯುತ್ತಿದ್ದ ಎರಡು ಜೋಡಿಗಳು ಶನಿವಾರ ಲಕ್ಷ್ಮೇಶ್ವರದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ನಲ್ಲಿ ಒಂದಾಗಿ ಪ್ರಕರಣ ಸುಖಾಂತ್ಯಗೊಂಡ ಘಟನೆ ನಡೆಯಿತು.

ಶಿರಹಟ್ಟಿ ತಾಲೂಕಿನ ವಡವಿ ಗ್ರಾಮದ ಸುರೇಶ ಫಕ್ಕೀರಪ್ಪ ತಂಗೋಡ(39) ಮತ್ತು ಹಾನಗಲ್ ತಾಲೂಕಿನ ಕಂಚಿನೆಗಳೂರ ಗ್ರಾಮದ ಗೀತಾ ಸುರೇಶ ತಂಗೋಡ(35) ಶಿಕ್ಷಕ ದಂಪತಿಗಳು ಕೌಟುಂಬಿಕ ಮನಸ್ತಾಪದ ಹಿನ್ನೆಲೆಯಲ್ಲಿ ದಿ.2-8-2021ರಂದು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ದಂಪತಿಗಳಿಗೆ ಒಂದು ಹೆಣ್ಣು ಮಗುವೂ ಇದ್ದು 2 ವರ್ಷದಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಇವರೀರ್ವರ ಪರವಾಗಿ ಮಧ್ಯಸ್ಥಿಕೆ ವಹಿಸಿದ್ದ ವಕೀಲರಾದ ವಿ.ಎಲ್. ಪೂಜಾರ ಮತ್ತು ಬಿ.ಎಸ್. ಪಾಟೀಲರು ದಂಪತಿಗಳ ನಡುವಿನ ಸಮಸ್ಯೆ, ಮನಸ್ತಾಪ ಬಗೆಹರಿಸಿ, ತಿಳುವಳಿಕೆ ಹೇಳಿ ಶಿಕ್ಷಕರಾದ ನೀವು ಸಮಾಜಕ್ಕೆ ಮಾದರಿಯಾಗಬೇಕು ಮತ್ತು ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಸಹಜೀವನ ನಡೆಸಬೇಕು ಎಂದು ಇಬ್ಬರನ್ನೂ ಮನಃಪೂರ್ವಕವವಾಗಿ ಒಪ್ಪಿಸಿ ಶನಿವಾರದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿಚ್ಛೇದನ ಪ್ರಕರಣದಿಂದ ಹಿಂದೆ ಸರಿಸುವಲ್ಲಿ ಯಶಸ್ವಿಯಾದರು.

ಇನ್ನೊಂದು ಜೋಡಿ ಲಕ್ಷ್ಮೇಶ್ವರದ ಭೀಮಪ್ಪ ಸೋಮಪ್ಪ ಪಶುಪತಿಹಾಳ(26) ಮತ್ತು ಸವಣೂರ ತಾಲೂಕಿನ ಕುರುಬರ ಮಲ್ಲೂರಿನ ಮಾಲಾಶ್ರೀ ಗಾಳೆಪ್ಪ ದೊಡ್ಡಪೂಜಾರ(22) ಇವರು ತಮ್ಮ ದುಡುಕಿನ ನಿರ್ಧಾರದಿಂದ ಕಳೆದ 4 ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಇವರಿಬ್ಬರ ಪರವಾಗಿ ಮಧ್ಯಸ್ಥಿಕೆ ವಹಿಸಿದ್ದ ವಕೀಲರಾದ ಬಿ.ಎನ್. ಸಂಶಿ ಮತ್ತು ಬಿ.ಎಸ್. ಪಾಟೀಲರು ಈ ಯುವ ಜೋಡಿಗೆ ಬುದ್ಧಿವಾದ ಹೇಳಿ, ಗುರು-ಹಿರಿಯರಿಗೆ ವಿಧೇಯರಾಗಿ ಹೊಂದಾಣಿಕೆಯಿಂದ ಜೀವನ ನಡೆಸಿ ಎಂದು ತಿಳಿಹೇಳಿದರು. ಹಿರಿಯ ದಿವಾಣಿ ನ್ಯಾಯಾಧೀಶರಾದ ಸರ್ವಮಂಗಳಾ ಕೆ.ಎಂ ಅವರ ಸಮ್ಮುಖ, ಮಾರ್ಗದರ್ಶನದಲ್ಲಿ ಎರಡೂ ಜೋಡಿಗಳನ್ನು ಒಗ್ಗೂಡಿಸಿ ಪರಸ್ಪರ ಹೂವಿನ ಹಾರ ಬದಲಾಯಿಸಿ ಒಂದಾಗಿಸುವಲ್ಲಿ ಯಶಸ್ವಿಯಾದರು.

ಈ ಪ್ರಕರಣಗಳ ಇತ್ಯರ್ಥದಿಂದ ಎರಡೂ ಜೋಡಿ ಮತ್ತು ಕುಟುಂಬದವರಲ್ಲಿ ಮತ್ತೆ ಹರ್ಷ ಕಂಡು ಬಂದಿತು. ಈ ವೇಳೆ ವಕೀಲರಾದ ಬಿ.ಎಸ್. ಬಾಳೇಶ್ವರಮಠ, ಬಿ.ಎಸ್. ಘೋಂಗಡಿ, ಜೆ.ಡಿ. ದೊಡ್ಡಮನಿ, ಎನ್.ಆಯ್. ಬೆಲ್ಲದ, ಎನ್.ಎಂ. ಗದಗ, ಕಮಲಾ ನಾಯಕ, ಉಮಾ ಬಳ್ಳಾರಿ ಸೇರಿ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.


Spread the love

LEAVE A REPLY

Please enter your comment!
Please enter your name here