HomeGadag Newsಸರಸ್ವತಿ ಮೂರ್ತಿ ಭಗ್ನ ಪ್ರಕರಣ ಭೇದಿಸಿದ ಪೊಲೀಸರು: ಮಂತ್ರಸಿದ್ಧಿ' ಪುಸ್ತಕ ಓದಿ ನಿಧಿ ಆಸೆಗೆ ಕೃತ್ಯ;...

ಸರಸ್ವತಿ ಮೂರ್ತಿ ಭಗ್ನ ಪ್ರಕರಣ ಭೇದಿಸಿದ ಪೊಲೀಸರು: ಮಂತ್ರಸಿದ್ಧಿ’ ಪುಸ್ತಕ ಓದಿ ನಿಧಿ ಆಸೆಗೆ ಕೃತ್ಯ; ನಾಲ್ವರು ಆರೋಪಿಗಳ ಬಂಧನ

ಗದಗ: ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತತ್ವ ಇಲಾಖೆಯ ಅಧೀನದ ಶ್ರೀ ಸರಸ್ವತಿ ಮೂರ್ತಿಯೊಳಗೆ ನಿಧಿ ಹುದುಗಿದೆ ಎಂಬ ಮೂಢನಂಬಿಕೆಗೆ ಬಿದ್ದು, ಕಬ್ಬಿಣದ ಚಾಣದಿಂದ ಮೂರ್ತಿಗೆ ಹಾನಿ ಮಾಡಿದ್ದ ಪ್ರಕರಣವನ್ನು ಗದಗ ನಗರ ಪೊಲೀಸರು ಭೇದಿಸಿದ್ದಾರೆ.

ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಜುಲೈ 10ರಂದು ಮಧ್ಯಾಹ್ನ ನಡೆದ ಈ ಕೃತ್ಯ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಮೂರ್ತಿಯ ಎದೆ ಭಾಗಕ್ಕೆ ಕಬ್ಬಿಣದ ವಸ್ತುವಿನಿಂದ ಹೊಡೆದು ಹಾನಿಗೊಳಿಸಿದ ಹಿನ್ನೆಲೆಯಲ್ಲಿ ಗದಗ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

‘ಮಂತ್ರಸಿದ್ಧಿ’ ಪುಸ್ತಕವೇ ಕೃತ್ಯಕ್ಕೆ ಪ್ರೇರಣೆ!

ಪೊಲೀಸ್ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಬಾಲೇಶ ಕಳಸಣ್ಣವರ ಈ ಹಿಂದೆ ಗದಗಕ್ಕೆ ಬಂದಿದ್ದ ವೇಳೆ ಶಾಬಾದಿಮಠ ಎಂಬುವವರ ಪುಸ್ತಕ ಮಳಿಗೆಯಲ್ಲಿ ‘ಮಂತ್ರಸಿದ್ಧಿ’ ಎಂಬ ಪುಸ್ತಕ ಖರೀದಿಸಿ ಓದಿದ್ದ. ಅದರಲ್ಲಿ ಉಲ್ಲೇಖಿಸಿದ್ದ ವಿಚಾರಗಳನ್ನು ನಂಬಿ, ಶ್ರೀ ಸರಸ್ವತಿ ಮೂರ್ತಿಯೊಳಗೆ ನಿಧಿ ಇದೆ ಎಂದು ಭಾವಿಸಿ ತನ್ನ ಸಹಚರರೊಂದಿಗೆ ಸಂಚು ರೂಪಿಸಿದ್ದಾನೆ. ಬಳಿಕ ಜುಲೈ 10ರಂದು ಗದಗಕ್ಕೆ ಬಂದು ಕಬ್ಬಿಣದ ಚಾಣದಿಂದ ಮೂರ್ತಿಗೆ ಹೊಡೆದು ಹಾನಿ ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.

ಬಂಧಿತ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಿಂದಿಕುರಬೇಟನ ನಿವಾಸಿಗಳಾದ ಬಾಲೇಶ ತಂದೆ ಯಲ್ಲಪ್ಪ ಕಳಸಣ್ಣವರ (30), ಘಟಪ್ರಭಾದ ಆಸೀಫ್ ತಂದೆ ಮಂಜೂರಅಹಮದ್ ಭಾಗವಾನ್ (40), ಹಾಗೂ ಸಿಂದಿಕುರಬೇಟ್‌ನ ಬಸು ತಂದೆ ಸಿದ್ದರಾಮ ಸೆಂಡೂರ (25) ಹಾಗೂ ರಾಜೇಸಾಬ್ ಹಸನಸಾಬ್ ನದಾಫ್ (63) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ವಿಠ್ಠಲ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಉಪಕರಣಗಳು ಹಾಗೂ ಎರ್ಟಿಗಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ಮುಂದುವರಿದಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಬಂಧನದ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಐಪಿಎಸ್ ಹಾಗೂ ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಸಂಗಮೇಶ ಶಿವಯೋಗಿ, ಪಿಎಸ್‌ಐಗಳಾದ ಬಿ.ಟಿ. ರಿತ್ತಿ ಹಾಗೂ ರೇಣುಕಾ ಮುಂಡೇವಾಡಗಿ ನೇತೃತ್ವದ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿತು. ತಂಡದಲ್ಲಿ ಗುರು ಬೂದಿಹಾಳ (ಎಆರ್‌ಎಸ್‌ಐ–ತಾಂತ್ರಿಕ ವಿಭಾಗ), ವಿ.ಎಸ್. ಶೆಟ್ಟೆಣ್ಣವರ, ಎಸ್‌.ಎಸ್‌. ಮಾವಿನಕಾಯಿ, ಉಮೇಶ ಸುಣಗಾರ, ಶರಣಪ್ಪ ನಾಗೇಂದ್ರಗಡ, ಕುಮಾರ ತಿಗರಿ, ಗಣೇಶ ತಳವಾರ, ಕಾರ್ತಿಕ್ ಮಂಗಳಿ, ಹನುಮಂತ ಯಾಡಿಯಾಪೂರ, ವೀರಪ್ಪ ಗೌಡನಾಯ್ಕರ, ಪ್ರಕಾಶ ಉಮಚಗಿ, ಸಂಜೀವ ಕೊರಡೂರ (ಟೆಕ್ನಿಕಲ್ ಸೆಲ್), ‘ಥರ್ಡ್ ಐ’ ವಿಭಾಗದ ಸಿಬ್ಬಂದಿ ಹಾಗೂ ಘಟಪ್ರಭಾ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವಿಠ್ಠಲ್ ಎಸ್‌.ಕೆ. ಮತ್ತು ಬಿ.ಎಸ್. ನಾಯ್ಕ ಸೇರಿದಂತೆ ಗದಗ ನಗರ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಎಸ್‌ಪಿ ರೋಹನ್ ಜಗದೀಶ್ ಪ್ರಶಂಸಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img