ಅಪ್ರಾಪ್ತೆಯ ಅತ್ಯಾಚಾರಿ ವಿಜಯ ಹಿರೇಮಠಗೆ 28 ವರ್ಷ ಶಿಕ್ಷೆ, 1.45 ಲಕ್ಷ ರೂ. ದಂಡ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತೆ ಯುವತಿಯನ್ನು ಬಲಾತ್ಕಾರ ಮಾಡಿ, ನಂತರ ಮದುವೆಯಾಗುವದಾಗಿ ನಂಬಿಸಿ, ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಗೃಹಬಂಧನದಲ್ಲಿ ಇರಿಸಿದ ಆರೋಪದ ಮೇಲೆ ಬಂಧಿತ ಅಪರಾಧಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ. ಈ ಕುರಿತು ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದರು.

ಘಟನೆಯ ವಿವರ

ಆರೋಪಿ ವಿಜಯ ಮಹಾಲಿಂಗಯ್ಯ ಹಿರೇಮಠ ದಿ. 17-5-2016ರಂದು ಮದ್ಯಾಹ್ನ 12ರ ಸಮಯಕ್ಕೆ ಗದಗದ ಮಲ್ಲಸಮುದ್ರ ಗ್ರಾಮದ ಹೊರವಲಯದಲ್ಲಿ ಹೊಸದಾಗಿ ಕಟ್ಟಿಸುತ್ತಿದ್ದ ಅನಾಥಾಶ್ರಮ ಕಟ್ಟಡದಲ್ಲಿ ದೂರುದಾರರ ಅಪ್ರಾಪ್ತಳ ಪುತ್ರಿಯ ಮೇಲೆ ಬಲಾತ್ಕಾರ ನಡೆಸಿದ್ದ. ನಂತರ 13-09-2017ರಂದು ಸಂಜೆ 5 ಗಂಟೆಯ ಸಮಯಕ್ಕೆ ಅವಳನ್ನು ಮದುವೆಯಾಗುವದಾಗಿ ನಂಬಿಸಿ ಗದಗ ಹುಡ್ಕೋ ಕಾಲನಿಯಲ್ಲಿರುವ ನಿಸರ್ಗ ಕಿರಾಣಿ ಅಂಗಡಿಯ ಬಳಿಯಿಂದ ಅಪಹರಿಸಿ ತನ್ನ ಟಂಟಂ ರಿಕ್ಷಾದಲ್ಲಿ ಅಪಹರಿಸಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದವರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ರೈಲ್ವೇ ಹಾಗೂ ಬಸ್ ನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ತುಮಕೂರಿನ ಕ್ಯಾತಸಂದ್ರದಲ್ಲಿ ರಘು ಜುಮ್ಮಣ್ಣವರ ಎಂಬುವರ ವಾಸದ ಮನೆಯಲ್ಲಿ ಇರಿಸಿ ಅವಳು ಎಲ್ಲಿಯೂ ಹೋಗದಂತೆ ಗೃಹ ಬಂಧನದಲ್ಲಿರಿಸಿದ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿತನ ವಿರುದ್ಧ ಗದಗ ಉಪವಿಭಾಗದ ಪೊಲೀಸ್ ಅಧಿಕ್ಷಕ ವಿಜಯಕುಮಾರ್ ತಳವಾರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ.ಎಸ್. ಶೆಟ್ಟಿ, ಪ್ರಕರಣದಲ್ಲಿ ಆರೋಪ ಸಾಬೀತಾದ ಕಾರಣ, ಆರೋಪಿ ವಿಜಯ ಮಹಾಲಿಂಗಯ್ಯ ಹಿರೇಮಠನಿಗೆ ಆಗಸ್ಟ್ 8ರಂದು ಭಾ.ದಂ.ಸಂ ಕಲಂ: 365ರ ಅಡಿಯಲ್ಲಿ 3 ವರ್ಷ ಕಠಿಣ ಶಿಕ್ಷೆ,10 ಸಾವಿರ ರೂ. ದಂಡ, ಕಲಂ: 366ರ ಅನ್ವಯ 5 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, ಕಲಂ:376(2)(ಐ)(ಎನ್) ಮತ್ತು ಕಲಂ:5(1) ರೇ:ವಿ 6 ಪೋಕ್ಸೋ ಕಾಯ್ದೆಯಡಿಯಲ್ಲಿ 20 ವರ್ಷ ಕಠಿಣ ಶಿಕ್ಷೆ, 1 ಲಕ್ಷ.ರೂ ದಂಡ, ಕಲಂ: 3(2)(ವಿ.ಎ) ಪ.ಜಾ/ಪ.ಪಂ ಕಾಯ್ದೆಯ ಅನ್ವಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ.ರೂ ದಂಡ, ಕಲಂ: 3(2)(ವಿ.ಎ) ಪ.ಜಾ/ಪ.ಪಂ ಕಾಯ್ದೆಯಂತೆ 10 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸವಿತಾ.ಎಂ. ಶಿಗ್ಲಿ ಸಾಕ್ಷಿ ವಿಚಾರಣೆ ನಡೆಸಿದ್ದು, ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.


Spread the love

LEAVE A REPLY

Please enter your comment!
Please enter your name here