ಕಾರವಾರ, ಮೇ 03: ನೂರಾರು ಜನರಿಗೆ ಹೊಸ ಜೀವನ ನೀಡಿದ ವೈದ್ಯನೇ ಕೊನೆಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕರ್ನಾಟಕ-ಗೋವಾ ಗಡಿಯ ಡಿಗ್ಗಿ ಗ್ರಾಮದಲ್ಲಿ ನಡೆದಿದೆ. ಡಾ. ಲೆನ್ವರ್ ಲೋಬೋ ಅವರ ಅಕಾಲಿಕ ಮರಣ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಈ ಕೂಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲದ ಪರಿಸ್ಥಿತಿಯಲ್ಲಿ ಕಳೆದ ಮೂರು ವರ್ಷಗಳಿಂದ ಡಾ. ಲೋಬೋ ಸೇವೆ ಸಲ್ಲಿಸುತ್ತಿದ್ದರು. ಶಿರಸಿಯ ಸ್ಕೋಡಾ ವೇಸ್ ಸಂಸ್ಥೆ ಕರಾರಿನಡಿ ಇಲ್ಲಿ ಆಸ್ಪತ್ರೆ ನಡೆಸಲಾಗುತ್ತಿದ್ದು, ಗೋವಾ ಗಡಿಯ ಭಾಗಗಳಿಂದಲೂ ಜನರು ಚಿಕಿತ್ಸೆಗಾಗಿ ಇಲ್ಲಿ ಆಗಮಿಸುತ್ತಿದ್ದರು.
ಅವರ ಚಿಕಿತ್ಸೆ ಮೂಲಕ ಅನೇಕರು ಗುಣಮುಖರಾಗಿದ್ದು, ಗ್ರಾಮಸ್ಥರ ನಂಬಿಕೆಯ ಆಧಾರವಾಗಿದ್ದರು. ಆದರೆ ವಿಧಿಯಾಟ ಕ್ರೂರವಾಗಿ ತಿರುಗಿತು.
ರಾತ್ರಿ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡರೂ ತಕ್ಷಣ ಆಸ್ಪತ್ರೆಗೆ ಹೋಗಲು ವಾಹನ ಇರಲಿಲ್ಲ, ಮೊಬೈಲ್ ನೆಟ್ವರ್ಕ್ ಸಹ ಲಭ್ಯವಿರಲಿಲ್ಲ. ಬೆಳಗಿನ ಜಾವ ವಾಹನ ತರಿಸಿಕೊಂಡು ಜೋಯಿಡಾ ಕಡೆಗೆ ಹೊರಟಾಗ, ಎದೆನೋವು ಮತ್ತಷ್ಟು ತೀವ್ರವಾಗಿ ದಾರಿ ಮಧ್ಯದಲ್ಲೇ ಜೀವ ಕಳೆದುಕೊಂಡರು.
ಜೀವ ಉಳಿಸುವ ವೈದ್ಯನಿಗೇ ಚಿಕಿತ್ಸೆ ಸಿಗದ ವಾಸ್ತವ. ಇದು ಕೇವಲ ದುರಂತವಲ್ಲ, ವ್ಯವಸ್ಥೆಯ ಸ್ಪಷ್ಟ ವೈಫಲ್ಯವಾಗಿದೆ.



