ಬೆಂಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಪೋಸ್ಟರ್ ಪ್ರದರ್ಶಿಸಿದ ವಿಚಾರ ರಾಜಕೀಯ ವಿವಾದಕ್ಕೆ ತಿರುಗಿದ್ದು, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2020ರ ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಪೋಸ್ಟರ್ ಪ್ರದರ್ಶಿಸಿದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿರುವ ಅವರು, ಯಾವುದೇ ಚಾರ್ಜ್ಶೀಟ್ ಸಲ್ಲಿಸದೇ ಐದು ವರ್ಷಗಳಿಂದ ಜೈಲಿನಲ್ಲಿ ಇರಿಸಿರುವುದನ್ನು ಖಂಡಿಸಿದ್ದಾರೆ.
ಶುಕ್ರವಾರ (ಜು.24) ಬೆಂಗಳೂರಿನಲ್ಲಿ ನಡೆದ ನೀಟ್ ಪ್ರತಿಭಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಕೆ ಹರಿಪ್ರಸಾದ್, “ಉಮರ್ ಖಾಲಿದ್ ಪೋಸ್ಟರ್ ಪ್ರದರ್ಶಿಸಿದರೆ ಅಪರಾಧವೇ? ಐದು ವರ್ಷಗಳಿಂದ ಅವರನ್ನು ಜೈಲಿನಲ್ಲಿ ಇಟ್ಟಿದ್ದೀರಾ, ಇನ್ನೂ ಚಾರ್ಜ್ಶೀಟ್ ಹಾಕಿಲ್ಲ. ಇದೇನು ಪ್ರಜಾಪ್ರಭುತ್ವವೇ? ಇದು ಪಾಕಿಸ್ತಾನನಾ? ಕೇಂದ್ರ ಸರ್ಕಾರ ಪಾಕಿಸ್ತಾನದ ಮಾದರಿಯಲ್ಲಿ ಆಡಳಿತ ನಡೆಸುತ್ತಿದೆ” ಎಂದು ಕಿಡಿಕಾರಿದರು.
ಪ್ರತಿಭಟನೆಯ ವೇಳೆ ಕೆಲವರು ‘Ukhad Le BLR Police’ ಎಂಬ ಬರಹವಿದ್ದ ಪೋಸ್ಟರ್ಗಳನ್ನು ಪ್ರದರ್ಶಿಸಿದರೆ, ಮತ್ತೊಂದು ಗುಂಪು ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಪರ ಘೋಷಣೆಗಳಿದ್ದ ಪೋಸ್ಟರ್ಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿತು.
ಈ ಬೆಳವಣಿಗೆ ಪೊಲೀಸರ ಗಮನ ಸೆಳೆದ ತಕ್ಷಣ ಅವರು ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡು ಪೋಸ್ಟರ್ಗಳನ್ನು ವಶಪಡಿಸಿಕೊಂಡರು. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದರೂ ಯಾವುದೇ ಅಹಿತಕರ ಘಟನೆ ಸಂಭವಿಸದೇ ಪ್ರತಿಭಟನೆ ಶಾಂತಿಯುತವಾಗಿ ಮುಂದುವರಿಯಿತು.
ಪ್ರತಿಭಟನೆಯಲ್ಲಿದ್ದ ಕೆಲ ವಿದ್ಯಾರ್ಥಿಗಳು ಉಮರ್ ಖಾಲಿದ್ ಪರ ಪೋಸ್ಟರ್ ಹಿಡಿದಿದ್ದ ಯುವತಿಗೆ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಇಂತಹ ಪೋಸ್ಟರ್ಗಳು ಪ್ರತಿಭಟನೆಯ ಮೂಲ ಉದ್ದೇಶಕ್ಕೆ ಧಕ್ಕೆ ಉಂಟುಮಾಡುತ್ತವೆ ಎಂದು ಹೇಳಿ ಸ್ಥಳ ತೊರೆಯುವಂತೆ ಒತ್ತಾಯಿಸಿದರು. ಬಳಿಕ ಯುವತಿ ಅಲ್ಲಿಂದ ತೆರಳಿದರು.
2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಆರೋಪಿಗಳಾಗಿದ್ದು, ಇದೇ ವಿಚಾರ ಮತ್ತೆ ನೀಟ್ ಪ್ರತಿಭಟನೆಯ ವೇದಿಕೆಯಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.



