ಧಾರವಾಡ: ಬರೋಬ್ಬರಿ ಆರು ವರ್ಷಗಳ ಬಳಿಕ ಶಾಸಕ ವಿನಯ್ ಕುಲಕರ್ಣಿ ತಮ್ಮ ಸ್ವಕ್ಷೇತ್ರ ಹಾಗೂ ಸ್ವಜಿಲ್ಲೆಯಾದ ಧಾರವಾಡಕ್ಕೆ ಅಧಿಕೃತವಾಗಿ ಮರಳಿದ್ದಾರೆ. ಕೋರ್ಟ್ನಿಂದ ಜಿಲ್ಲಾ ಪ್ರವೇಶಕ್ಕೆ ಅನುಮತಿ ದೊರೆತ ಬೆನ್ನಲ್ಲೇ ಪತ್ನಿ ಹಾಗೂ ಮಕ್ಕಳೊಂದಿಗೆ ಧಾರವಾಡದ ಶಿವಗಿರಿ ಬಡಾವಣೆಯಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದರು.
ವಿನಯ್ ಕುಲಕರ್ಣಿ ಧಾರವಾಡ ಪ್ರವೇಶಿಸುತ್ತಿದ್ದಂತೆ ಬೆಂಬಲಿಗರು ಸಾಲು ಸಾಲು ಕಾರುಗಳಲ್ಲಿ ಆಗಮಿಸಿ ಅದ್ಧೂರಿ ಸ್ವಾಗತ ನೀಡಿದರು. ಮನೆಗೆ ಆಗಮಿಸಿದ ನಾಯಕನಿಗೆ ಆರತಿ ಬೆಳಗಿ, ಮನೆ ಮುಂಭಾಗ ಕುಂಬಳಕಾಯಿ ಒಡೆದು ಸಂಭ್ರಮಿಸಿದರು.
ಧಾರವಾಡಕ್ಕೆ ಆಗಮಿಸುವ ಮಾರ್ಗಮಧ್ಯೆ ಮಕ್ಕಳಾದ ಹೇಮಂತ್ ಹಾಗೂ ವೈಶಾಲಿ ಅವರೊಂದಿಗೆ ಹಾರೋಬೆಳವಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ವಿನಯ್ ಕುಲಕರ್ಣಿ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ಮುರುಘಾ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದರು.
2016ರಲ್ಲಿ ನಡೆದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ, 2020ರ ನವೆಂಬರ್ 5ರಂದು ಅವರನ್ನು ಬಂಧಿಸಿತ್ತು. ಸುಮಾರು ಒಂಬತ್ತು ತಿಂಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಅವರಿಗೆ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
ಆದರೆ ಜಾಮೀನು ನೀಡುವ ವೇಳೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತಿನಡಿ ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಕಳೆದ ಆರು ವರ್ಷಗಳಿಂದ ವಿನಯ್ ಕುಲಕರ್ಣಿ ತಮ್ಮ ಸ್ವಂತ ಜಿಲ್ಲೆಯಿಂದ ದೂರ ಉಳಿದಿದ್ದರು.
ಇತ್ತೀಚೆಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಹಾಗೂ 42ನೇ ಜೆಎಂಎಫ್ಸಿ ನ್ಯಾಯಾಲಯ ನೀಡಿದ ಅನುಮತಿಯ ಹಿನ್ನೆಲೆಯಲ್ಲಿ ಇದೀಗ ಧಾರವಾಡ ಪ್ರವೇಶಕ್ಕೆ ಅವಕಾಶ ದೊರೆತಿದೆ. ಇದರ ಬೆನ್ನಲ್ಲೇ ವಿನಯ್ ಕುಲಕರ್ಣಿ ಪತ್ನಿ ಹಾಗೂ ಮಕ್ಕಳೊಂದಿಗೆ ತವರೂರಿಗೆ ಮರಳಿದ್ದು, ಬೆಂಬಲಿಗರ ಸಂಭ್ರಮ ಜೋರಾಗಿದೆ.



