ರಾಜ್ಯದಲ್ಲಿರೋದು ಜೆಸಿಬಿ ಸರಕಾರ: ಹೊರಟ್ಟಿ

0
Spread the love

ಜೆಡಿಎಸ್ ಸಹ ಉತ್ತರ ಕರ್ನಾಟಕವನ್ನು‌ ನಿರ್ಲಕ್ಷ್ಯ ಮಾಡಿದೆ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯದಲ್ಲಿರೋದು ಬಿಜೆಪಿ ಸರಕಾರ ಅಲ್ಲ, ಜೆಸಿಬಿ ಸರಕಾರ, ಅಂದ್ರೆ ಜನತಾ ದಳ, ಕಾಂಗ್ರೆಸ್ ಮತ್ತು ಬಿಜೆಪಿಯ ಸಮ್ಮಿಶ್ರ ಸರಕಾರ. ಈಗಿನ ಸರಕಾರದಲ್ಲಿ ಜೆಡಿಎಸ್, ಕಾಂಗ್ರೆಸ್‌ನವರೇ ಜಾಸ್ತಿ ಇದ್ದಾರೆ. ಅಧಿಕಾರ ಹೋದರೆ ಅವರೆಲ್ಲ ಮತ್ತೇ ಅವರವರ ಪಕ್ಷಗಳಿಗೆ ಮರಳುತ್ತಾರೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.

ಕೊಪ್ಪಳದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ಪಕ್ಷಗಳು ಉತ್ತರ ಕರ್ನಾಟಕವನ್ನು ಉದಾಸೀನ ಮಾಡಿವೆ. ಹಾಗಾಗಿಯೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಕೇಳುತ್ತಲೇ ಇರುತ್ತದೆ. ಶಾಸಕ‌ ಬಸನಗೌಡ ಯತ್ನಾಳ ಹೇಳಿಕೆಯನ್ನು ಸ್ವಾಗತಿಸುವುದಾಗಿ ಅವರು ತಿಳಿಸಿದರು.

ಯಡಿಯೂರಪ್ಪ ಅವರ ಬಗ್ಗೆ ಮೃದುಧೋರಣೆ ಇರುವುದು ನಿಜ. ಹೋರಾಟದ ಹಾದಿಯಿಂದ ಬಂದವರು. ಅವರಿಗೆ ಸಾಕಷ್ಟು ವಯಸ್ಸಾಗಿದೆ. ಮುಂದೆ ಸಿಎಂ ಆಗ್ತಾರೊ? ಇಲ್ವೊ? ಈಗ ಅವಕಾಶ ಇದೆ ಅವರು ಸಿಎಂ ಆಗಲಿ ಎಂದು ಹೇಳಿದ್ದು ನಿಜ. ಆದರೆ ಎಂಥ ಸಂದರ್ಭದಲ್ಲೂ ಬಿಜೆಪಿಗೆ ಸೇರಲ್ಲ. ಯಾವುದೇ ಪಕ್ಷದ ಉತ್ತರ ಕರ್ನಾಟಕದ ಶಾಸಕರು ಸಿಎಂ ಆದರೆ ಸಹಮತ ಇದೆ ಎಂದು ಹೇಳಿದರು.

ಜೆಡಿಎಸ್‌ನಲ್ಲಿ ಮೀರ್ ಸಾದಿಕ್‌ರು ಇದ್ದಾರೆ ಎಂದಿರುವ ಸಚಿವ ಸಿ.ಟಿ.ರವಿ ಬಗ್ಗೆ ಹೆಚ್ಚೇನೂ ಹೇಳಲಾರೆ. ಅವರ ಪಕ್ಷದಲ್ಲೇ ಆಂತರಿಕ ಕಲಹ ಜೋರಾಗಿದೆ‌. ಮೊದಲು ಅದನ್ನು ಸರಿಪಡಿಸಿಕೊಳ್ಳಲಿ ಎಂದರು.

ಶಿಕ್ಷಕರ, ಪದವಿಧರರ ಕ್ಷೇತ್ರದಲ್ಲಿ ಜನತಾ ದಳದ ಸಾಧನೆ ಅನನ್ಯ. ಅವರ ಹಿತ. ಬಯಸುವ ಏಕೈಕ ಪಕ್ಷ ಜೆಡಿಎಸ್. ಈಶಾನ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಶಿಕ್ಷಕರ ಪ್ರತಿನಿಧಿಯಾಗಲು ಸಮರ್ಥರಿದ್ದಾರೆ. ಪ್ರಜ್ಞಾವಂತ ಮತದಾರರು ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ತಿಮ್ಮಯ್ಯ ಪುರ್ಲೆಯವರಿಗೆ ನೀಡಬೇಕು ಎಂದು ಕೋರಿದರು.

ಈ ವೇಳೆ ಜೆಡಿಎಸ್ ಮುಖಂಡರಾದ ಶ್ರೀಕಂಠೆಗೌಡ್ರು, ವೀರೇಶ್ ಮಹಾಂತಯ್ಯನಮಠ, ಪ್ರದೀಪಗೌಡ ಮಾಲೀಪಾಟೀಲ್, ಮೌನೇಶ್ ಮತ್ತಿತರರು ಇದ್ದರು.


Spread the love

LEAVE A REPLY

Please enter your comment!
Please enter your name here