ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗೊಜನೂರು ವಲಯದ ಅಕ್ಕಿಗುಂದ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ₹2 ಲಕ್ಷ ಅನುದಾನ ಮಂಜೂರಾಗಿದ್ದು, ಚೆಕ್ ವಿತರಣಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ಗದಗ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ದೇವಸ್ಥಾನ ಸಮಿತಿಗೆ ಚೆಕ್ ಹಸ್ತಾಂತರಿಸಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆ ಹೂಳೆತ್ತುವಿಕೆ, ಶುದ್ಧ ಕುಡಿಯುವ ನೀರಿನ ಯೋಜನೆ, ನಿರ್ಗತಿಕರಿಗೆ ಮನೆ ನಿರ್ಮಾಣ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಅಕ್ಕಿಗುಂದದ ದೇವಸ್ಥಾನ ಜೀರ್ಣೋದ್ಧಾರಕ್ಕೂ ನೀಡಿರುವ ಈ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಸುಂದರ ದೇವಾಲಯ ನಿರ್ಮಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಣ್ಣದಯ್ಯ ಶಂಕಿನಮಠ, ಉಪಾಧ್ಯಕ್ಷ ನೀಲಪ್ಪ ಪಣಿ, ತಾಲೂಕು ಯೋಜನಾಧಿಕಾರಿ ಪುನೀತ್ ಓಲೇಕಾರ್, ಸಮಿತಿ ಸದಸ್ಯರಾದ ಬಸಯ್ಯ ಮಲಿಮಠ, ಬಸವಣ್ಣೆಪ್ಪ ತೋಟದ, ಶಂಕ್ರಪ್ಪ ಬೆಂತೂರು, ವೀರಭದ್ರಯ್ಯ ಪೂಜಾರ, ಶೇಖಪ್ಪ ಬಟ್ಟೂರು, ವೆಂಕಪ್ಪ ಲಮಾಣಿ, ಶರಣಯ್ಯ ಹಿರೇಮಠ, ವಲಯದ ಮೇಲ್ವಿಚಾರಕಿ ಗಂಗೋತ್ರಿ ಗೌಡ, ಸೇವಾ ಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
“ದೇವಸ್ಥಾನಗಳ ಜೀರ್ಣೋದ್ಧಾರವೂ ಸಮಾಜಮುಖಿ ಸೇವೆಯ ಒಂದು ಭಾಗವಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ಕಾರ್ಯಕ್ಕೆ ನಿರಂತರ ಬೆಂಬಲ ನೀಡುತ್ತಿದೆ.”
ಕೇಶವ ದೇವಾಂಗ, ಜಿಲ್ಲಾ ನಿರ್ದೇಶಕರು



