ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಮಹಾಮಾರಿ 2ನೇ ಅಲೆ ಎಗ್ಗಿಲ್ಲದೆ ಸಾಗುತ್ತಿದೆ. ಹೀಗಾಗಿ ಸರ್ಕಾರ ಆರಂಭದಲ್ಲಿ ಕರ್ಫ್ಯೂ ಜಾರಿ ಮಾಡಿ, ತದನಂತರ ಲಾಕ್ ಡೌನ್ ಘೋಷಿಸಿದೆ. ಆದರೂ ಸೋಂಕು ತಹಬದಿಗೆ ಬರುತ್ತಿಲ್ಲ. ಗಮನಾರ್ಹ ಇಳಿಕೆ ಕಾಣುತ್ತಿಲ್ಲ. ಈ ನಡುವೆ ರಾಜ್ಯದಲ್ಲಿ ಮರಣ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕೇವಲ 17 ದಿನಗಳಲ್ಲಿಯೇ 6,790 ಜನ ಸೋಂಕಿಗೆ ಬಲಿಯಾಗಿದ್ದಾರೆ. ಮೊದಲ ಅಲೆಯಲ್ಲಿ ಹೆಚ್ಚಿನ ಸಾವು ಕಂಡಿದ್ದ ದೆಹಲಿಯನ್ನು ಸದ್ಯ ರಾಜ್ಯ ಹಿಂದಿಕ್ಕಿದೆ. ಹೀಗಾಗಿ ರಾಜ್ಯದ ಜನರಲ್ಲಿ ಆತಂಕ ಮನೆ ಮಾಡುತ್ತಿದೆ.
ಅತೀ ಹೆಚ್ಚು ಸಾವು ಸಂಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯ ಎರಡನೆಯ ಸ್ಥಾನದಲ್ಲಿದೆ. ಮೇ. 17ರ ವೇಳೆಗೆ ರಾಜ್ಯದಲ್ಲಿ ಒಟ್ಟು 22,313 ಕೋವಿಡ್ ಸಾವುಗಳು ವರದಿಯಾಗಿವೆ. ದೆಹಲಿಯಲ್ಲಿ 21,846 ಜನ ಪ್ರಾಣ ಕಳೆದುಕೊಂಡಿದ್ದಾರೆ. ಎರಡನೇ ಅಲೆಯ ಮೇ ತಿಂಗಳಲ್ಲಿಯೇ ರಾಜ್ಯದಲ್ಲಿ ಸಾವು ಹೆಚ್ಚಾಗಿವೆ.
ರಾಜ್ಯಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿದ್ದು, ಮಹಾರಾಷ್ಟ್ರದಲ್ಲಿ. ಆ ರಾಜ್ಯದಲ್ಲಿ 82 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ದೆಹಲಿ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿಯೇ ದೇಶದಲ್ಲಿ ಇಲ್ಲಿಯವರೆಗೂ 2.8 ಲಕ್ಷ ಜನ ಮಹಾಮಾರಿಗೆ ಬಲಿಯಾಗಿದ್ದಾರೆ.