ವಿಜಯಸಾಕ್ಷಿ ಸುದ್ದಿ, ನವದೆಹಲಿ
ಭಾರತದ ಕ್ರೀಡಾಕ್ಷೇತ್ರದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ಏಕೆಂದರೆ ಜಪಾನ್ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸೇರಿ ಒಟ್ಟು 19 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.
ಕ್ರೀಡಾಕೂಟದ ಕೊನೆಯ ದಿನವಾದ ಭಾನುವಾರ ಒಂದು ಚಿನ್ನ, ಒಂದು ಬೆಳ್ಳಿ ಪದಕ ಗೆದ್ದುಕೊಂಡಿರುವ ಭಾರತ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಿತು.
ಕ್ರೀಡಾಕೂಟದ ಕೊನೆಯ ದಿನವಾದ ಇಂದು ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ಎಚ್6 ವಿಭಾಗದಲ್ಲಿ ಹಾಂಗ್ಕಾoಗ್ ಚು ಮಾನ್ ಕೈ ಅವರನ್ನು ಸೋಲಿಸಿದ ಭಾರತದ ಕೃಷ್ಣನಗರ್ ಚಿನ್ನದ ಪದಕ ಬಾಚಿಕೊಂಡರು.
ನಿನ್ನೆ ಫೈನಲ್ಸ್ ತಲುಪಿ ಪದಕದ ಭರವಸೆ ನೀಡಿದ್ದ ಕೃಷ್ಣನಗರ್ ಇಂದು ಬೆಳಿಗ್ಗೆ ನಡೆದ ಪಂದ್ಯದಲ್ಲಿ ಹಾಂಗ್ಕಾoಗ್ ಆಟಗಾರನ ವಿರುದ್ಧ ಅಧಿಕಾರಯುತ ಆಟವಾಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇದಕ್ಕೂ ಮುಂಚೆ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಲಾಳನಕೇರಿಯವರಾದ ಸುಹಾಸ ಯತಿರಾಜ್ ಸಧ್ಯ ಉತ್ತರ ಪ್ರದೇಶದ ನೋಯ್ಡಾ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ಯಾರಾಲಿಂಪಿಕ್ಸ್ ಇದು ಭಾರತದ ಅದ್ವಿತೀಯ ಸಾಧನೆಯಾಗಿದೆ. ಇಲ್ಲಿಯವರೆಗೆ ನಡೆದ ಎಲ್ಲ ಪ್ಯಾರಾಲಿಂಪಿಕ್ಸ್ ಪದಕಗಳನ್ನು ಸೇರಿಸಿದರೆ ಭಾರತದ ಖಾತೆಯಲ್ಲಿ 12 ಪದಕಗಳಿದ್ದವು. ಆದರೆ, ಈ ಬಾರಿಯ ಒಂದೇ ಕ್ರೀಡಾಕೂಟದಲ್ಲಿ 5 ಚಿನ್ನ ಸೇರಿ 19 ಪದಕ ಗೆಲ್ಲುವ ಮೂಲಕ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ.