ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ
ವಾಜಪೇಯಿ-ನೆಹರೂ ಇಬ್ಬರೂ ದೇಶದ ಮೇರು ನಾಯಕರು. ಪ್ರಧಾನಿಗಳಾದವರು. ಸದ್ಯ ಅವರು ನಮ್ಮ ನಡುವೆ ಇಲ್ಲ. ಅಂತಹ ನಾಯಕರನ್ನು ರಾಜಕಾರಣದಲ್ಲಿ ಎಳೆದು ತರುವುದು ಸರಿಯಲ್ಲ ಎಂದು ಸಚಿವ ಶ್ರೀರಾಮುಲು ಕಿವಿಮಾತು ಹೇಳಿದರು.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರನ್ನ ಬೇಕಾದರೂ ಟೀಕೆ ಮಾಡಿ ರಾಜಕಾರಣ ಮಾಡುವುದು ಸರಿಯಲ್ಲ.
ರಾಜಕಾರಣದಲ್ಲಿ ಮೌಲ್ಯಗಳು ಉಳಿಯಲ್ಲ, ಎರಡೂ ಕಡೆಯವರು ಈ ವಿಚಾರ ಇಲ್ಲಿಗೆ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ವಾಜಪೇಯಿ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದರು. ವಾಜಪೇಯಿ ಅಪಾರ್ಮೆಂಟ್ ಬಳಿ ನೆಹರೂ ಪ್ರತಿಮೆ ಇತ್ತು, ಅದನ್ನ ನಿತ್ಯವೂ ಗಮನಿಸುತ್ತಿದ್ದರು. ಅಧಿಕಾರಿಗಳು ಅದನ್ನು ತೆರವುಗೊಳಿಸಿರುವುದಾಗಿ ತಿಳಿಸಿದಾಗ ಕೇಂದ್ರ ಸಚಿವರಾದ ವಾಜಪೇಯಿ ಅವರು ನೆಹರೂ ಪ್ರತಿಮೆ ಮರು ಸ್ಥಾಪಿಸಿದ್ದರು.
ಈ ವಿಚಾರ ಕಾಂಗ್ರೆಸ್- ಬಿಜೆಪಿ ನಡುವೆ ಕೈ ಮೀರುತ್ತಿದೆ. ಭಾರತದಲ್ಲಿ ಇಬ್ಬರೂ ಮೇರು ನಾಯಕರು. ನಾವೆಲ್ಲ ಒಂದು ಶಕ್ತಿಯಾಗಿ, ಅವರ ಮಾರ್ಗದರ್ಶನದಲ್ಲಿ ರಾಜಕಾರಣ ಮಾಡಬೇಕು ಎಂದು ಸಲಹೆ ನೀಡಿದರು.