ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ: ನಗರಸಭೆ ಸಾಮಾನ್ಯ ಸಭೆಯಲ್ಲಿ ಒತ್ತಾಯ

0
Special General Meeting of Municipal Council
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಯ ಸಭಾಭವನದಲ್ಲಿ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆ ಕೋಲಾಹಲಕ್ಕೆ ಕಾರಣವಾಗಿತ್ತು. ಗದಗ-ಬೆಟಗೇರಿ ನಗರಸಭೆಯ ಸ್ವತ್ತಾಗಿರುವ ಕ್ಲಾಥ್ ಮಾರ್ಕೆಟ್ ಹಾಗೂ ಗ್ರೇನ್ ಗ್ರಾಸರಿ ಮಾರುಕಟ್ಟೆಯಲ್ಲಿನ ಮಳಿಗೆಗಳಿಗೆ ನಗರಸಭೆಯ ಗಮನಕ್ಕೆ ತಾರದೇ 5 ವರ್ಷದ ಬಾಡಿಗೆಯನ್ನು ಮುಂಗಡವಾಗಿ ಭರಿಸಿರುವುದು ಗಂಭೀರ ಲೋಪವಾಗಿದ್ದು, ತಕ್ಷಣವೇ ಹಣ ಭರಿಸಿದ ಎಲ್ಲರಿಗೂ ಹಣ ಹಿಂದಿರುಗಿಸಿ, ಈ ಅಕ್ರಮದಲ್ಲಿ ಭಾಗಿಯಾಗಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ನಗರಸಭೆ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

Advertisement

ಸಭೆ ಪ್ರಾರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ಮಾತನಾಡಿ, ಮುಂಗಡ ಬಾಡಿಗೆ ತುಂಬಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ವಿಷಯವಾಗಿ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿಲ್ಲ. ಠರಾವು ಮಾಡಿಲ್ಲ. ಅಲ್ಲದೆ, ಈ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೂ ಅವರು ಬಾಡಿಗೆ ತುಂಬಿದ್ದು ಅಪರಾಧವಾಗಿದೆ. ಈ ರೀತಿಯ ಗಂಭೀರ ಅಪರಾಧ ಎಸೆಗಿದವರ ಮೇಲೆ ಪೌರಾಯುಕ್ತರು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು. ಇದು ಇಂದಿನ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರ ಅಭಿಪ್ರಾಯವಾಗಿದ್ದು, ತಪ್ಪಿತಸ್ಥರಿಗೆ ಬಿಸಿ ಮುಟ್ಟಿಸಿ ಎಂದು ಆಕ್ರೋಶ ಹೊರಹಾಕಿದರು.

Special General Meeting of Municipal Council

ವಾಣಿಜ್ಯ ಮಳಿಗೆಗಳ ಮುಂಗಡ ಬಾಡಿಗೆ ಹಣ ಸುಮಾರು 26 ಲಕ್ಷ ರೂ ಚಲನ್ ಮೂಲಕ ಸರ್ಕಾರಕ್ಕೆ ಜಮೆಯಾಗಿದೆ. ಅದನ್ನು ಅವರಿಗೆ ಮರಳಿಸುತ್ತೀರಾದರೂ, ಈ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿದ್ದು, ಅವರು ಕ್ಲಾಥ್ ಮಾರ್ಕೆಟ್, ಗ್ರೇನ್ ಗ್ರೋಸರಿ ಅಂಗಡಿಕಾರರಿಂದ ಕೋಟ್ಯಾಂತರ ರೂಪಾಯಿ ಲಂಚ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಅಲ್ಲದೇ ಸದ್ಯ ಬಾಡಿಗೆ ತುಂಬಿದ ಜನರಲ್ಲಿ ಶೇ. 40ರಷ್ಟು ಜನ ಮೃತಪಟ್ಟಿದ್ದಾರೆ. ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಚಂದಾವರಿ ಒತ್ತಾಯಿಸಿದರು.

ಸಭೆಯಲ್ಲಿ ಅವಳಿ ನಗರದ ಬೀದಿ ದೀಪಗಳ ನಿರ್ವಹಣೆಯಲ್ಲಿ ಆಗುತ್ತಿರುವ ವಿಳಂಬ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ, ಟೆಂಡರ್ ಕರೆಯದೇ ಸತಾಯಿಸುತ್ತಿರುವ ಅಧಿಕಾರಿಗಳ ಅಮಾನತ್ತಿಗೆ ಒತ್ತಾಯ ಸೇರಿದಂತೆ ಹಲವಾರು ಪ್ರಮುಖ ವಿಷಯಗಳಿಗೆ ಸಭೆಯಲ್ಲಿ ಚರ್ಚೆಯಾದವು.

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಸಭೆಯ ಪ್ರಭಾರ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಸೇರಿದಂತೆ ಹಿರಿಯ ಅಧಿಕಾರಿಗಳು, ಸದಸ್ಯರು ಹಾಜರಿದ್ದರು.

ನಗರಸಭೆಯ ಆಡಳಿತ ಪಕ್ಷದ ಸದಸ್ಯ ರಾಘವೇಂದ್ರ ಯಳವತ್ತಿ ಮಾತನಾಡಿ, ವಾಣಿಜ್ಯ ಮಳಿಗೆಗಳ ಮುಂಗಡ ಬಾಡಿಗೆ ವಿಷಯವಾಗಿ ಬಿಜೆಪಿ ಕೂಡಾ ಈಗಾಗಲೇ ಉಪಲೋಕಾಯುಕ್ತರಿಗೆ, ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ದಾಖಲೆ ಸಮೇತ ದೂರ ಸಲ್ಲಿಸಲಾಗಿದೆ. ಕಾಂಗ್ರೆಸ್ ಸದಸ್ಯರು ವಾಣಿಜ್ಯ ಮಳಿಗೆಗಳ ಬಗ್ಗೆ ಮಾತ್ರ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಅವಳಿ ನಗರದ 54 ವಕಾರ ಸಾಲುಗಳ ನೂರಾರು ಕೋಟಿ ಬೆಲೆಬಾಳುವ ಆಸ್ತಿಯನ್ನು ಕಬಳಿಸುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಾಧಿಕಾರ ರಚನೆ ಮಾಡಿದ್ದಾರೆ ಎಂದಾಗ ಸಭೆಯಲ್ಲಿ ಗದ್ದಲ, ಆರೋಪ-ಪ್ರತ್ಯಾರೋಪಗಳು ಮುಗಿಲು ಮುಟ್ಟಿತು.


Spread the love

LEAVE A REPLY

Please enter your comment!
Please enter your name here